Tuesday, December 16, 2025

ವಿಬಿ-ಜಿ ರಾಮ್‌ ಜಿ ಮಸೂದೆ ಮಂಡನೆ

 ವಿಬಿ-ಜಿ ರಾಮ್‌ ಜಿ ಮಸೂದೆ ಮಂಡನೆ

ವಿಪಕ್ಷಗಳ ತೀವ್ರ ವಿರೋಧದ ಮಧ್ಯೆ ವಿಕಸಿತ ಭಾರತ-ಗ್ಯಾರಂಟಿ ಉದ್ಯೋಗ ಮತ್ತು ಜೀವನೋಪಾಯ ಮಿಷನ್‌ (ಗ್ರಾಮೀಣ)- ʼವಿಬಿ-ಜಿ ರಾಮ್‌ ಜಿʼ ಮಸೂದೆ ೨೦೨೫ನ್ನು ಕೇಂದ್ರ ಸರ್ಕಾರವು ೨೦೨೫ ಡಿಸೆಂಬರ್‌ ೧೬ರ ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿತು.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಹೆಸರಿನಲ್ಲಿ ಮಹಾತ್ಮ ಗಾಂಧಿ ಹೆಸರು ಕೈಬಿಟ್ಟದ್ದು, ರಾಜ್ಯಗಳ ಮೇಲೆ ಶೇಕಡಾ ೪೦ರಷ್ಟು ಹೊರೆ ಹಾಕಿರುವುದು ಸೇರಿದಂತೆ ಹಲವಾರು ವಿಷಯಗಳಿಗೆ ವಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತ ಪಡಿಸಿದವು.

ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಮಸೂದೆಯನ್ನು ಮಂಡಿಸಿದರು. ವಿಪಕ್ಷಗಳು ನೂತನ ಮಸೂದೆ ವಿರುದ್ಧ ಮಹಾತ್ಮ ಗಾಂಧಿಯವರ ಚಿತ್ರಗಳನ್ನು ಹಿಡಿದು ಮಹಾತ್ಮ ಗಾಂಧಿ ಪ್ರತಿಮೆಯ ಮುಂದೆ ಪ್ರದರ್ಶನ ನಡೆಸಿದವು.

ಈ ಹಿಂದೆ ನರೇಗಾ ಕಾಯ್ದೆಯ ಹೆಸರನ್ನು ʼಪೂಜ್ಯ ಬಾಪು ಗ್ರಾಮೀಣ ರೋಜಗಾರ್‌ ಯೋಜನೆʼ ಎಂಬುದಾಗಿ ಬದಲಿಸಲು ಕೇಂದ್ರ ನಿರ್ಧರಿಸಿತ್ತು. ಆದರೆ ಕೊನೆಗೆ ನರೇಗಾ ಕಾಯಿದೆಯನ್ನೇ ಹಿಂಪಡೆದು ಹೊಸ ಮಸೂದೆಯನ್ನು ಮಂಡಿಸಿದೆ.

ಮಸೂದೆ ಮಂಡನೆ ಆಗುತ್ತಿದ್ದಂತೆಯೇ ಕಾಂಗ್ರೆಸ್ಸಿನ ಪ್ರಿಯಾಂಕಾ ಗಾಂಧಿ ವಾದ್ರಾ, ಸಮಾಜವಾದಿ ಪಕ್ಷದ ಅಖಿಲೇಶ್‌ ಯಾದವರ್‌, ಡಿಎಂಕೆಯ ಟಿ.ಆರ್.‌ ಬಾಲು, ಆರ್‌ ಎಸ್‌ ಪಿಯ ಎನ್.‌ ಜೆ. ಪ್ರೇಮಚಂದ್ರನ್‌ ಸೇರಿದಂತೆ ಹಲವಾರು ವಿಪಕ್ಷ ಸದಸ್ಯರು ಎದ್ದು ನಿಂತು ಆಕ್ಷೇಪಿಸಿ, ಮಸೂದೆಯನ್ನು ಸ್ಥಾಯಿ ಸಮಿತಿಗೆ ಕಳುಹಿಸುವಂತೆ ಆಗ್ರಹಿಸಿದರು.
 ಏನಿದು ವಿಬಿ-ಜಿ ರಾಮ್‌ ಜಿ? ಕೆಳಗಿನ ಚಿತ್ರ ಕ್ಲಿಕ್‌ ಮಾಡಿ ವಿಡಿಯೋ ನೋಡಿರಿ.


No comments:

Advertisement