Consumer Cases ಗ್ರಾಹಕರ ಸುಖ-ದುಃಖ

ಉಭಯರಿಗೂ ಚುಚ್ಚಿದ 'ಸೊಳ್ಳೆ ನಿವಾರಕ'..!

ಉಭಯರಿಗೂ ಚುಚ್ಚಿದ 'ಸೊಳ್ಳೆ ನಿವಾರಕ'..!

ಮರ್ಪಕ ಪುರಾವೆ ಒದಗಿಸದ ಅರ್ಜಿದಾರರಿಗೆ 1.75 ಲಕ್ಷ ರೂಪಾಯಿ ಮೊತ್ತದ ಪರಿಹಾರ ನೀಡಲು ಜಿಲ್ಲಾ ಗ್ರಾಹಕ ನ್ಯಾಯಾಲಯ ಆಜ್ಞಾಪಿಸಿದ್ದೂ ತಪ್ಪು, ಅಕ್ರಮ ವ್ಯಾಪಾರದಂತಹ ಗಂಭೀರ ಆರೋಪ ಬಂದಾಗಲೂ ನಿರ್ಲಕ್ಷಿಸಿ ಕುಳಿತ ಪ್ರತಿವಾದಿಯ ವರ್ತನೆಯೂ ತಪ್ಪು ಎಂಬ ತೀರ್ಮಾನಕ್ಕೆ ರಾಜ್ಯ ಗ್ರಾಹಕ ನ್ಯಾಯಾಲಯ ಬಂದಿತು.

 ದೂರು ನೀಡಿದ ವ್ಯಕ್ತಿ ತನ್ನ ಪ್ರತಿಪಾದನೆಗೆ ಸಮರ್ಪಕ ಸಾಕ್ಷ್ಯಾಧಾರ ಒದಗಿಸದೇ ಇದ್ದರೂ, ಪ್ರತಿವಾದಿ ಹಾಜರಾಗಲಿಲ್ಲ ಎಂಬ ಕಾರಣಕ್ಕಾಗಿ  ಗ್ರಾಹಕ ನ್ಯಾಯಾಲಯ ಭಾರಿ ಮೊತ್ತದ ದಂಡ ವಿಧಿಸಬಹುದೇ? ಹಾಗೆಯೇ ತನ್ನ ವಿರುದ್ಧ ಗಂಭೀರ ಆಪಾದನೆ ಇದ್ದಾಗ, ಆಪಾದನೆಗೆ ಒಳಗಾದ ವ್ಯಕ್ತಿ ಗ್ರಾಹಕ ನ್ಯಾಯಾಲಯದ ನೋಟಿಸ್ನ್ನು ನಿರ್ಲಕ್ಷಿಸಿ ಸುಮ್ಮನೇ ಕುಳಿತುಕೊಳ್ಳಬಹುದೇ?


ಎರಡೂ ಪ್ರಶ್ನೆಗಳಿಗೆ 'ಇಲ್ಲ' ಎಂಬುದೇ ಉತ್ತರ. ತನ್ನ ಮುಂದೆ ಬಂದ ಇಂತಹ ಪ್ರಕರಣ ಒಂದರ ಮೇಲ್ಮನವಿಯ ವಿಚಾರಣೆ ನಡೆಸಿದ ರಾಜ್ಯ ಗ್ರಾಹಕ ನ್ಯಾಯಾಲಯ ಗ್ರಾಹಕನಿಗೆ ಬೃಹತ್ ಮೊತ್ತದ ಪರಿಹಾರ ಒದಗಿಸಿದ ಜಿಲ್ಲಾ ಗ್ರಾಹಕ ನ್ಯಾಯಾಲಯದ ಆದೇಶವನ್ನು ತಳ್ಳಿ ಹಾಕಿದ್ದಲ್ಲದೆ, ಮೇಲ್ಮನವಿ ಸಲ್ಲಿಸಿದ ಪ್ರತಿವಾದಿಗೂ ದಂಡ ವಿಧಿಸಿದೆ.

ಈ ಕುತೂಹಲಕರ ಪ್ರಕರಣದ ಅರ್ಜಿದಾರರು: ವಿಜಾಪುರದ ನಿವಾಸಿ ಡಾ. ವಿಶ್ವನಾಥನ್ ನಾಗಥಾಣ ಅವರ ಪುತ್ರಿ ಕುಮಾರಿ ಜಯಲಕ್ಷ್ಮಿ. ಪ್ರತಿವಾದಿಗಳು: 1) ಮೆ. ಗೋದ್ರೆಜ್ ಸಾರಾ ಲೀ ಲಿಮಿಟೆಡ್, ವಿಕ್ರೋಲಿ, ಮುಂಬೈ ಮತ್ತು 2) ಮಾಲೀಕರು, ರಾಜಸ್ಥಾನ ಎಂಪೋರಿಯಂ ವಿಜಾಪುರ.

ಅರ್ಜಿದಾರರಾದ ಜಯಲಕ್ಷ್ಮಿ ಅವರು ವಿದ್ಯಾರ್ಥಿನಿಯಾಗಿದ್ದು ಮೊದಲ ಪ್ರತಿವಾದಿಯಾದ ಗೋದ್ರೆಜ್ ಸಾರಾ ಲೀ ಲಿಮಿಟೆಡ್ ಸಂಸ್ಥೆಯು ಉತ್ಪಾದಿಸಿದ್ದ ಎರಡು ಸೊಳ್ಳೆ ನಿವಾರಕಗಳನ್ನು 2005ರ ಅಕ್ಟೋಬರ್ 26ರಂದು ಮತ್ತು ಅಕ್ಟೋಬರ್ 28ರಂದು ಪ್ರತ್ಯೇಕವಾಗಿ 63 ರೂಪಾಯಿ ಮತ್ತು 50 ರೂಪಾಯಿ ನೀಡಿ ಖರೀದಿಸಿದ್ದರು. ಅರ್ಜಿದಾರರ ಪ್ರಕಾರ ಈ ಎರಡೂ ಸೊಳ್ಳೆ ನಿವಾರಕಗಳಲ್ಲೂ ಒಂದೇ ಪ್ರಮಾಣ ಹಾಗೂ ಗುಣಮಟ್ಟದ ಔಷಧ ಬಳಸಲಾಗಿದ್ದು, ಒಂದು 90 ದಿನಗಳಿಗೂ ಇನ್ನೊಂದು 60 ದಿನಗಳಿಗೂ ಬರುವುದು ಎಂದು ಅವುಗಳಿಗೆ ಅಂಟಿಸಲಾಗಿದ್ದ ಚೀಟಿಯಲ್ಲಿ ಭರವಸೆ ನೀಡಲಾಗಿತ್ತು.

ಜಯಲಕ್ಷ್ಮಿ ಅವರು ಈ ಎರಡೂ ಸೊಳ್ಳೆ ನಿವಾರಕಗಳನ್ನು ಎರಡು ಪ್ರತ್ಯೇಕ ಕೊಠಡಿಗಳಲ್ಲಿ ಬಳಸಿದರು. ಎರಡೂ ಸೊಳ್ಳೆ ನಿವಾರಕಗಳು ನಿರಂತರವಾಗಿ ತಲಾ 50 ದಿನಗಳು ಮಾತ್ರ ಕೆಲಸ ಮಾಡಿದವು. ಇದು ಪ್ರತಿವಾದಿಗಳ ವಂಚನೆಯ ವ್ಯಾಪಾರ ಎಂದು ಭಾವಿಸಿದ ಅರ್ಜಿದಾರರು ಪರಿಹಾರ ನೀಡುವಂತೆ ಆಗ್ರಹಿಸಿ 2006ರ ಫೆಬ್ರುವರಿ 16ರಂದು ಲೀಗಲ್ ನೋಟಿಸ್ ಕಳುಹಿಸಿದರು. ಒಂದನೇ ಪ್ರತಿವಾದಿ ನೋಟಿಸಿಗೆ ಉತ್ತರಿಸಲಿಲ್ಲ. ಎರಡನೇ ಪ್ರತಿವಾದಿ ನೋಟಿಸ್ ಪಡೆಯುವುದಕ್ಕೇ ನಿರಾಕರಿಸಿದರು.

ಜಿಲ್ಲಾ ಗ್ರಾಹಕ ನ್ಯಾಯಾಲಯದ ಮೆಟ್ಟಲೇರಿದ ಜಯಲಕ್ಷ್ಮಿ ಅವರು 226 ರೂಪಾಯಿಗಳ ಆರ್ಥಿಕ ನಷ್ಟ ಪರಿಹಾರ, ಮಾನಸಿಕ ಕಿರುಕುಳಕ್ಕೆ 24,744 ರೂಪಾಯಿ ಪರಿಹಾರ ಮತ್ತು ತಮಗಾದ ನೋವು ಮತ್ತಿತರ ತೊಂದರೆಗಳಿಗೆ 1,50,000 ರೂಪಾಯಿ ಪರಿಹಾರ - ಒಟ್ಟು 1.75 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಮನವಿ ಮಾಡಿದರು. 

ಜಿಲ್ಲಾ ಗ್ರಾಹಕ ನ್ಯಾಯಾಲಯ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿತು. ಆದರೆ ಉಭಯ ಪ್ರತಿವಾದಿಗಳೂ ಗೈರುಹಾಜರಾದರು. ಅವರ ಗೈರು ಹಾಜರಿಯಲ್ಲೇ ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕ ನ್ಯಾಯಾಲಯ 1.75 ಲಕ್ಷ ರೂಪಾಯಿ ಪರಿಹಾರವನ್ನು ಅರ್ಜಿದಾರಿಗೆ ಆರು ವಾರಗಳ ಒಳಗಾಗಿ ಪಾವತಿ ಮಾಡುವಂತೆ ಪ್ರತಿವಾದಿಗಳಿಗೆ ಆಜ್ಞಾಪಿಸಿ ತೀರ್ಪು ನೀಡಿತು.

ಈ ಆದೇಶ ಕೈಸೇರಿದಾಗ ಎಚ್ಚತ್ತ ಒಂದನೇ ಪ್ರತಿವಾದಿ ಗೋದ್ರೆಜ್ ಸಂಸ್ಥೆಯು ಜಿಲ್ಲಾ ಗ್ರಾಹಕ ನ್ಯಾಯಾಲಯದ ತೀರ್ಪಿನ ವಿರುದ್ಧ ರಾಜ್ಯ ಗ್ರಾಹಕ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿತು. ಅಧ್ಯಕ್ಷರಾದ ನ್ಯಾಯಮೂರ್ತಿ ಚಂದ್ರಶೇಖರಯ್ಯ ಮತ್ತು ಸದಸ್ಯರಾದ ಶ್ರೀಮತಿ ರಮಾ ಅನಂತ್ ಹಾಗೂ ಟಿ. ಹರಿಯಪ್ಪ ಗೌಡ ಅವರನ್ನು ಒಳಗೊಂಡ ಪೀಠವು ಅರ್ಜಿದಾರರ ಪರ ವಕೀಲ ಎಸ್.ಐ. ಕಡಿ ಹಾಗೂ  ಪ್ರತಿವಾದಿ ಮೇಲ್ಮನವಿದಾರರ ಪರ ವಕೀಲರಾದ ಮೆ. ಕಿಂಗ್ ಅಂಡ್ ಪ್ಯಾಟ್ರಿಜ್ ಅವರ ಅಹವಾಲುಗಳನ್ನು ಅಲಿಸಿ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿತು.

ಪ್ರಕರಣದಲ್ಲಿ ಅರ್ಜಿದಾರರು ಎರಡು ಸೊಳ್ಳೆ ನಿವಾರಕಗಳನ್ನು ಖರೀದಿಸಿದ ವಿಚಾರದಲ್ಲಿ ವಿವಾದ ಇರಲಿಲ್ಲ. ನಮೂದಿತ ಬೆಲೆಗಿಂತ ಹೆಚ್ಚಿನ ದರ ಪಡೆಯಲಾಯಿತೆಂಬುದೂ ಅರ್ಜಿದಾರರ ದೂರಾಗಿರಲಿಲ್ಲ. ಒಂದೇ ಗುಣಮಟ್ಟ, ಒಂದೇ ಪ್ರಮಾಣದ ಸೊಳ್ಳೆ ನಾಶಕಗಳು 90 ಹಾಗೂ 60 ದಿನಗಳಿಗೆ ಬರುವುದೆಂಬ ಭರವಸೆ ನೀಡಿದ್ದು (ಅವು ಕೇವಲ 50 ದಿನಗಳಿಗೆ ಬಂದದ್ದು) ವಂಚನೆ ಹಾಗೂ ಮೋಸದ ವ್ಯಾಪಾರ ಎಂಬುದು ಅರ್ಜಿದಾರರ ವಾದವಾಗಿತ್ತು.  ತನ್ನ ವಾದದ ಸಮರ್ಥನೆಗೆ ಅರ್ಜಿದಾರರು ಎರಡೂ ಸೊಳ್ಳೆ ನಿವಾರಕ ಬಾಟಲಿಗಳಿಗೆ ಅಂಟಿಸಿದ್ದ ಚೀಟಿಗಳನ್ನೂ ಹಾಜರುಪಡಿಸಿದ್ದರು ಹಾಗೂ ಅವುಗಳಲ್ಲಿ 90 ಹಾಗೂ 60 ರಾತ್ರಿಗಳು ಹಾಗೂ ಬೆಲೆ 63 ಮತ್ತು 50 ರೂಪಾಯಿಗಳು ಎಂದು ನಮೂದಿಸಿದ್ದುದರತ್ತ ಗಮನ ಸೆಳೆದಿದ್ದರು. ಅರ್ಜಿದಾರರ ಪರ ವಕೀಲರು ವಿಚಾರಣೆ ಕಾಲದಲ್ಲಿ ಇಂತಹುದೇ ಬರಹಗಳಿದ್ದ ಇನ್ನೆರಡು ಸೊಳ್ಳೆ ನಿವಾರಕ ಔಷಧ ಬಾಟಲಿಗಳಿಗೆ ಅಂಟಿಸಲಾಗಿದ್ದ ಚೀಟಿ ಪ್ರದರ್ಶಿಸಿದರು.

ಆದರೆ ಅರ್ಜಿದಾರರು 'ದಿನ'ಗಳು ಎಂಬುದಾಗಿ ವಾದಿಸಿದ್ದರೂ ಈ ಚೀಟಿಗಳಲ್ಲಿ 'ರಾತ್ರಿ'ಗಳು ಎಂಬುದಾಗಿ ಇದ್ದುದನ್ನು ಜಿಲ್ಲಾ ಗ್ರಾಹಕ ನ್ಯಾಯಾಲಯ ಗಮನಿಸಿಲ್ಲ ಎಂಬುದನ್ನು ರಾಜ್ಯ ಗ್ರಾಹಕ ನ್ಯಾಯಾಲಯ ತನ್ನ ಗಮನಕ್ಕೆ ತೆಗೆದುಕೊಂಡಿತು. ಅದೇ ರೀತಿ ಬಾಟಲಿಗಳ ಒಳಗಿನ ಔಷಧ ಪ್ರಮಾಣ ಒಂದೇ ಆಗಿದ್ದರೂ ಸೊಳ್ಳೆ ನಿವಾರಕ ರಾಸಾಯನಿಕಗಳ ಅಂಶಗಳಲ್ಲಿ ವ್ಯತ್ಯಾಸವಿದ್ದುದನ್ನೂ ನ್ಯಾಯಾಲಯ ಗಮನಿಸಿತು. ಜಿಲ್ಲಾ ಗ್ರಾಹಕ ನ್ಯಾಯಾಲಯ ಇದನ್ನೂ ಗಮನಕ್ಕೆ ತೆಗೆದುಕೊಂಡಿರಲಿಲ್ಲ. ಈ ಎರಡು ಅಂಶಗಳನ್ನು ಗಮನಿಸಿದ್ದರೆ ಜಿಲ್ಲಾ ಗ್ರಾಹಕ ನ್ಯಾಯಾಲಯ ಅರ್ಜಿಯನ್ನು ಪುರಸ್ಕರಿಸುವ ತೀರ್ಪು ನೀಡುತ್ತಿರಲಿಲ್ಲ ಎಂದು ರಾಜ್ಯ ಗ್ರಾಹಕ ನ್ಯಾಯಾಲಯ ಭಾವಿಸಿತು.

ಪ್ರತಿವಾದಿಗಳು ನ್ಯಾಯಾಲಯಕ್ಕೆ ಹಾಜರಾಗದೇ ಇದ್ದರೂ ತನ್ನ ಮುಂದಿದ್ದ ಸಾಕ್ಷ್ಯಾಧಾರಗಳನ್ನು ಸಮರ್ಪಕವಾಗಿ ಪರಿಶೀಲಿಸಿ ಜಿಲ್ಲಾ ಗ್ರಾಹಕ ನ್ಯಾಯಾಲಯ ತೀರ್ಪು ನೀಡಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರತಿವಾದಿಗಳು ವ್ಯಾಪಾರದಲ್ಲಿ ಅಕ್ರಮ ನಡೆಸಿದ್ದಾರೆಂಬ ತೀರ್ಮಾನಕ್ಕೆ ಜಿಲ್ಲಾ ಗ್ರಾಹಕ ನ್ಯಾಯಾಲಯ ಬಂದದ್ದು ಸರಿಯಲ್ಲ ಎಂಬ ನಿಲುವಿಗೆ ರಾಜ್ಯ ಗ್ರಾಹಕ ನ್ಯಾಯಾಲಯ ಬಂದಿತು.

ಅರ್ಜಿದಾರರು ತಮಗಾದ ನಷ್ಟ, ಕಿರಿಕಿರಿ ಬಗ್ಗೆ ಯಾವುದೇ ಸಮರ್ಪಕ ಪುರಾವೆಯನ್ನೂ ನೀಡದೇ ಇದ್ದರೂ ಅವರ ಪರವಾಗಿ 1.75 ಲಕ್ಷ ರೂಪಾಯಿಗಳ ಪರಿಹಾರ ನೀಡಿದ ಜಿಲ್ಲಾ ಗ್ರಾಹಕ ನ್ಯಾಯಾಲಯದ ಕ್ರಮವೂ ಸರಿಯಲ್ಲ. ವಾಸ್ತವವಾಗಿ ಸೊಳ್ಳೆ ನಿವಾರಕಗಳಿಂದ ಆದ ಹಾನಿ ವಿವರಿಸುವ ಬದಲು ಅವುಗಳಿಂದ 50 ದಿನಗಳ ಉಪಯೋಗ ಪಡೆದಿರುವುದಾಗಿಯೇ ಅರ್ಜಿದಾರರು ಸ್ವತಃ ಒಪ್ಪಿಕೊಂಡಿದ್ದಾರೆ. ಗ್ರಾಹಕ ಕಾಯ್ದೆಯ ನಿಯಮಗಳಿಗೆ ಅನುಗುಣವಾಗಿ ಸೊಳ್ಳಿ ನಿವಾರಕಗಳನ್ನು ಪ್ರಯೋಗಾಲಯ ಪರೀಕ್ಷೆಗೆ ಒಳಪಡಿಸಿಯೂ ಇಲ್ಲ ಎಂದೂ ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಪ್ರಕರಣದಲ್ಲಿ ಅಕ್ರಮ ವ್ಯಾಪಾರದಂತಹ ಗಂಭೀರ ಆಪಾದನೆ ಬಂದಾಗಲೂ ಗ್ರಾಹಕ ನ್ಯಾಯಾಲಯದ ನೋಟಿಸಿಗೆ ಉತ್ತರ ಕೊಡದ ಹಾಗೂ ಆಪಾದನೆ ನಿರಾಕರಿಸಲು ಕ್ರಮ ಕೈಗೊಳ್ಳದ ಪ್ರತಿವಾದಿಗಳ ವರ್ತನೆ ಕೂಡಾ ಅಸಮರ್ಥನೀಯ ಎಂದು ನ್ಯಾಯಾಲಯ ಭಾವಿಸಿತು.

ಈ ಹಿನ್ನೆಲೆಯಲ್ಲಿ ಜಿಲ್ಲಾ ಗ್ರಾಹಕ ನ್ಯಾಯಾಲಯದ ತೀರ್ಪನ್ನು ವಜಾ ಮಾಡಿದ ರಾಜ್ಯ ಗ್ರಾಹಕ ನ್ಯಾಯಾಲಯವು ಪ್ರತಿವಾದಿಗೂ (ಪ್ರಕರಣದಲ್ಲಿ ಮೇಲ್ಮನವಿದಾರ) 10,000 ರೂಪಾಯಿಗಳ ಖಟ್ಲೆ ಶುಲ್ಕ ವಿಧಿಸಿ ಆ ಹಣವನ್ನು ಗ್ರಾಹಕರ ಕಲ್ಯಾಣ ನಿಧಿಗೆ ಪಾವತಿ ಮಾಡುವಂತೆ ಆಜ್ಞಾಪಿಸಿತು.
&&&&&

When Company evade

to return your deposit
Financial companies adopt several methods to attract deposits from customers. But they try to evade consumers when the time comes to return such deposits. What consumers can do in such case? Mr. Krishnegowda of Bangalore who knocked the doors of Consumer Court shows the way, writes Nethrakere Udaya Shankara.

ಹೂಡಿಕೆ ಹಣ ಹಿಂದಿರುಗಿಸದ

ಕಂಪೆನಿ..!


ಬಂಡವಾಳ ಆಕರ್ಷಿಸಲು ವಿವಿಧ ಕಂಪೆನಿಗಳು ಇನ್ನಿಲ್ಲದ ಪ್ರಚಾರ ಮಾಡುತ್ತವೆ. ಆದರೆ ಹಾಗೆ ಕ್ರೋಡೀಕರಿಸಿದ ಹಣ ಹಿಂದಿರುಗಿಸಬೇಕಾದ ಸಮಯ ಬಂದಾಗ ಮನಸ್ಸು ಇಲ್ಲದವರಂತೆ ವ್ಯವಹರಿಸುತ್ತವೆ. ಇದರಿಂದ ಗ್ರಾಹಕರು ಪಡುವ ಕಷ್ಟ ಅಷ್ಟಿಷ್ಟಲ್ಲ. ಇದು ಅಂತಹ ಒಂದು ಪ್ರಕರಣ.

ನೆತ್ರಕೆರೆ ಉದಯಶಂಕರ
ಕಂಪೆನಿಗಳಲ್ಲಿ ನಿರ್ದಿಷ್ಟ ಅವಧಿಗೆ ಹಣ ಠೇವಣಿ ಇಟ್ಟು ಅವಧಿ ಪೂರೈಸಿದ ಬಳಿಕ ಬಡ್ಡಿ ಸಹಿತವಾಗಿ ಹಿಂದಕ್ಕೆ ಪಡೆಯುವುದು ಕ್ರಮ. ಆದರೆ ಅಗತ್ಯ ಬಿದ್ದಾಗ ನಿಯಮಗಳಿಗೆ ಅನುಸಾರವಾಗಿ ಅದನ್ನು ಅವಧಿಗೆ ಮುನ್ನವೇ ಹಿಂದಕ್ಕೆ ಪಡೆಯಲೂ ಅವಕಾಶ ಇರುತ್ತದೆ. ಈ ರೀತಿ ಇಟ್ಟ ಠೇವಣಿ ಹಣವನ್ನು ಅವಧಿಗೆ ಮುನ್ನ ಕೇಳಿದಾಗ ಹಿಂದಿರುಗಿಸದೇ ಇದ್ದರೆ?

ಠೇವಣಿದಾರ ಗ್ರಾಹಕ ಸಂರಕ್ಷಣಾ ಕಾಯ್ದೆಯ ನೆರವು ಪಡೆಯಬಹುದು. ತನ್ನ ಮುಂದೆ ಬಂದ ಇಂತಹ ಪ್ರಕರಣ ಒಂದರ ವಿಚಾರಣೆ ನಡೆಸಿದ ಬೆಂಗಳೂರು ನಗರ ಜಿಲ್ಲಾ ಗ್ರಾಹಕ ನ್ಯಾಯಾಲಯವು ಠೇವಣಿದಾರರಿಗೆ ನ್ಯಾಯ ಒದಗಿಸಿದ ಪ್ರಕರಣ ಇದು.

ಈ ಪ್ರಕರಣದ ಅರ್ಜಿದಾರರು: ಬೆಂಗಳೂರು ಜೆಪಿ ನಗರದ ಕಾಳೆ ಗೌಡರ ಮಗ ಕೃಷ್ಣೇಗೌಡ. ಪ್ರತಿವಾದಿ: ಗುರುಟೀಕ್ ಇನ್ ವೆಸ್ಟ್ ಮೆಂಟ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್, ಬೆಂಗಳೂರು.
ಅರ್ಜಿದಾರ ಕೃಷ್ಣೇಗೌಡ ಅವರು 24-12-2002ರಂದು ಪ್ರತಿವಾದಿ ಗುರುಟೀಕ್ ಇನ್ ವೆಸ್ಟ್ ಮೆಂಟ್ಸ್ ಸಂಸ್ಥೆಯ ಜಾಹೀರಾತಿನಿಂದ ಆಕರ್ಷಿತರಾಗಿ ಅಲ್ಲಿ 20,000 ರೂಪಾಯಿಗಳನ್ನು ಠೇವಣಿ ಇಟ್ಟರು. ನಿಯಮಾನುಸಾರವಾಗಿ ಈ ಹಣ 24-12-2011ರ ವೇಳೆಗೆ ಬಡ್ಡಿ ಸೇರಿಸಿ 50,000 ರೂಪಾಯಿ ಮೊತ್ತಕ್ಕೆ ಬೆಳೆಯುತ್ತಿತ್ತು.

ಸಂಸ್ಥೆಯ ನಿಯಮಾವಳಿ, ಷರತ್ತುಗಳ ಪ್ರಕಾರ ಅಗತ್ಯ ಬಿದ್ದರೆ ಹೂಡಿಕೆದಾರ ನಾಲ್ಕು ವರ್ಷಗಳು ಪೂರೈಸಿದ ಬಳಿಕ ಈ ಠೇವಣಿಯನ್ನು ಹಿಂದಕ್ಕೆ ಪಡೆಯಬಹುದಾಗಿತ್ತು.

ಅರ್ಜಿದಾರರು ನೀಡಿದ ಈ 20,000 ರೂಪಾಯಿ ಠೇವಣಿ ಹಣಕ್ಕೆ ಪ್ರತಿವಾದಿ ಸಂಸ್ಥೆಯು ಬಾಂಡ್ ವಿತರಿಸಿತ್ತು.

ನಾಲ್ಕು ವರ್ಷಗಳ ಬಳಿಕ ಹಣದ ಅಗತ್ಯ ಇದ್ದುದರಿಂದ ಅರ್ಜಿದಾರ ಕೃಷ್ಣೇಗೌಡ ಅವರು ಠೇವಣಿ ಹಣ ಹಿಂದಿರುಗಿಸುವಂತೆ ಕೋರಿ ಪ್ರತಿವಾದಿ ಸಂಸ್ಥೆಗೆ 1-3-2007ರಂದು ಅರ್ಜಿ ಸಲ್ಲಿಸಿದರು.

ನಾಲ್ಕು ವರ್ಷ ಪೂರೈಸಿದ ಪ್ರಕಾರ 26,400 ರೂಪಾಯಿಗಳನ್ನು ಪಡೆಯಲು ಅರ್ಜಿದಾರರು ಅರ್ಹರಾಗಿದ್ದರು.

ಆದರೆ ಪ್ರತಿವಾದಿ ಸಂಸ್ಥೆಯು ಹಣ ವಾಪಸಾತಿಯ ತನ್ನ ಆಶ್ವಾಸನೆ ಈಡೇರಿಸುವಲ್ಲಿ ವಿಫಲವಾಯಿತು.

ಇದರಿಂದ ಚಿಂತಿತರಾದ ಅರ್ಜಿದಾರ ಕೃಷ್ಣೇಗೌಡ ಗ್ರಾಹಕ ನ್ಯಾಯಾಲಯದ ಕದ ತಟ್ಟಿದರು. ಪ್ರತಿವಾದಿಯು ಹಣವನ್ನು ಹಿಂದಿರುಗಿಸುವಲ್ಲಿ ವಿಫಲರಾಗುವ ಮೂಲಕ ಸೇವಾ ಲೋಪ ಎಸಗಿದ್ದಾರೆ ಎಂದು ಆಪಾದಿಸಿದ ಅರ್ಜಿದಾರರು ತಮ್ಮ ಹಣ ಹಿಂದಿರುಗಿಸಲು ಸೂಚಿಸುವುದರ ಜೊತೆಗೆ ಪರಿಹಾರ ಒದಗಿಸುವಂತೆಯೂ ಮನವಿ ಮಾಡಿದರು.

ಅಧ್ಯಕ್ಷ ಎ.ಎಂ. ಬೆನ್ನೂರು, ಸದಸ್ಯರಾದ ಸೈಯದ್ ಉಸ್ಮಾನ್ ರಜ್ವಿ ಮತ್ತು ಎಂ. ಯಶೋದಮ್ಮ ಅವರನ್ನು ಒಳಗೊಂಡ ಪೀಠವು ಅರ್ಜಿದಾರರ ಪರ ವಕೀಲ ಕೆ. ನಾಗರಾಜ ಅವರ ಅಹವಾಲುಗಳನ್ನು ಆಲಿಸಿ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿತು.

ನ್ಯಾಯಾಲಯವು ನೋಟಿಸ್ ಕಳುಹಿಸಿದರೂ ಪ್ರತಿವಾದಿ ಸಂಸ್ಥೆ ಅದಕ್ಕೆ ಸ್ಪಂದಿಸಲಿಲ್ಲ. ತಮ್ಮ ಗೈರುಹಾಜರಿ ಸಮರ್ಥಿಸುವಂತಹ ಯಾವುದೇ ಕಾರಣಗಳನ್ನು ನ್ಯಾಯಾಲಯಕ್ಕೆ ಒದಗಿಸಲಿಲ್ಲ. ಹೀಗಾಗಿ ಪ್ರತಿವಾದಿಯ ಗೈರುಹಾಜರಿಯಲ್ಲೇ ನ್ಯಾಯಾಲಯ ಪ್ರಕರಣದ ವಿಚಾರಣೆ ಮುಂದುವರೆಸಿತು.

ವಿಚಾರಣೆ ಕಾಲದಲ್ಲಿ ಅರ್ಜಿದಾರರು ತಮ್ಮ ದೂರಿಗೆ ಪೂರಕವಾಗಿ ದಾಖಲೆಗಳನ್ನು ಹಾಗೂ ಪ್ರಮಾಣಪತ್ರ ಸಲ್ಲಿಸಿದರು.

ಅರ್ಜಿದಾರರು 1-3-2007ರಂದೇ ಠೇವಣಿ ಸಂಬಂಧ ನೀಡಲಾಗಿದ್ದ ಬಾಂಡನ್ನು ಸಲ್ಲಿಸಿ ಜೊತೆಗೇ ಹಣ ಹಿಂದಿರುಗಿಸುವಂತೆ ಕೋರಿಕೆ ಪತ್ರ ಬರೆದಿದ್ದರು. ಆದರೆ ಪ್ರತಿವಾದಿ ಸಂಸ್ಥೆಯು ಒಂದಲ್ಲ ಒಂದು ನೆಪ ನೀಡಿ ಹಣ ಹಿಂದಿರುಗಿಸುವುದನ್ನು ಮುಂದೂಡುತ್ತಾ ಬಂದುದರ ಜೊತೆಗೆ ಅದರ ಸಲುವಾಗಿ ಅರ್ಜಿದಾರರು ಸಂಸ್ಥೆಯ ಕಂಬ, ಕಂಬಗಳನ್ನು ಸುತ್ತುವಂತೆ ಮಾಡಿದುದನ್ನು ನ್ಯಾಯಾಲಯ ಗಮನಿಸಿತು.

ಅರ್ಜಿದಾರರು ನೀಡಿದ ಸಾಕ್ಷ್ಯಾಧಾರಗಳು, ವಾರ್ಷಿಕ ಡಿವಿಡೆಂಡ್ ವಾರಂಟಿ, 20,000 ರೂಪಾಯಿ ಸ್ವೀಕರಿಸಿದ್ದಕ್ಕೆ ಸಂಬಂಧಿಸಿದ ರಶೀದಿ, ಬಾಂಡ್ ಸರ್ಟಿಫಿಕೇಟ್ ಇತ್ಯಾದಿಗಳು ಅರ್ಜಿದಾರರ ಋಜುತ್ವವನ್ನು ಸಾಬೀತುಪಡಿಸುತ್ತವೆ ಎಂಬ ಅಭಿಪ್ರಾಯಕ್ಕೆ ನ್ಯಾಯಾಲಯ ಬಂತು.

ತಮ್ಮ ವಿರುದ್ಧ ಅರ್ಜಿದಾರರು ಮಾಡಿದ ಸೇವಾಲೋಪ ಆರೋಪ ಸಂಬಂಧ ನ್ಯಾಯಾಲಯ ಕಳುಹಿಸಿದ ನೋಟಿಸಿಗೆ ಉತ್ತರ ನೀಡುವಲ್ಲಿ ಮತ್ತು ನ್ಯಾಯಾಲಯಕ್ಕೆ ಹಾಜರಾಗುವಲ್ಲಿನ ವೈಫಲ್ಯವು, ಪ್ರತಿವಾದಿಯು ತಮ್ಮ ವಿರುದ್ಧದ ಎಲ್ಲ ಆರೋಪಗಳನ್ನು ಕೂಡಾ ಸಂಪೂರ್ಣವಾಗಿ ಒಪ್ಪಿಕೊಂಡಿರುವುದನ್ನೇ ತೋರಿಸುತ್ತದೆ. ಈ ಪ್ರಕರಣದಲ್ಲಿ ನಿಚ್ಚಳವಾಗಿ ಸೇವಾಲೋಪ ಆಗಿರುವುದು ನಮ್ಮ ಗಮನಕ್ಕೆ ಬರುತ್ತಿದೆ ಎಂದು ನ್ಯಾಯಾಲಯ ಹೇಳಿತು.

ತಾವು ಕಷ್ಟ ಪಟ್ಟು ಸಂಪಾದಿಸಿದ ಹಣವನ್ನು ಪ್ರತಿವಾದಿ ಸಂಸ್ಥೆಯಲ್ಲಿ ತೊಡಗಿಸಿದ ಅರ್ಜಿದಾರರಿಗೆ ಈ ಹೂಡಿಕೆಯ ಲಾಭ ಸಿಗಲಿಲ್ಲ. ಸಹಜವಾಗಿಯೇ ಅವರಿಗೆ ಆರ್ಥಿಕ ನಷ್ಟದ ಜೊತೆಗೆ ಮಾನಸಿಕ ಕಿರಿಕಿರಿ ಆಗಿದೆ. ಈ ಹಿನ್ನೆಲೆಯಲ್ಲಿ ಅವರು ಪರಿಹಾರ ಪಡೆಯಲು ಅರ್ಹರು ಎಂದು ಹೇಳಿದ ನ್ಯಾಯಾಲಯ 26,400 ರೂಪಾಯಿಗಳನ್ನು 600 ರೂಪಾಯಿ ಖಟ್ಲೆ ವೆಚ್ಚ ಸೇರಿಸಿ ನಾಲ್ಕು ವಾರಗಳ ಒಳಗಾಗಿ ಅರ್ಜಿದಾರರಿಗೆ ಪಾವತಿ ಮಾಡುವಂತೆ ಪ್ರತಿವಾದಿ ಸಂಸ್ಥೆಗೆ ಆಜ್ಞಾಪಿಸಿತು.

ತಪ್ಪಿದಲ್ಲಿ 26,400 ರೂಪಾಯಿಗಳನ್ನು 5-6-2007ರಿಂದ ಪಾವತಿ ಆಗುವವರೆಗೂ ಶೇಕಡಾ 12ರ ಬಡ್ಡಿ ಮತ್ತು ಖಟ್ಲೆ ವೆಚ್ಚ ಸಹಿತವಾಗಿ ಪಾವತಿ ಮಾಡಬೇಕು ಎಂದೂ ನ್ಯಾಯಾಲಯ ಆದೇಶ ನೀಡಿತು.

No comments:

Advertisement