Friday, July 11, 2008

ಇಂದಿನ ಇತಿಹಾಸ History Today ಜುಲೈ 11

ಇಂದಿನ ಇತಿಹಾಸ

ಜುಲೈ 11

ಭಾರತದ ವಾಣಿಜ್ಯ ರಾಜಧಾನಿ ಮುಂಬೈಯ ಉಪನಗರ ರೈಲುಗಳಲ್ಲಿ ಈದಿನ ಸಂಜೆ ಸರಣಿ ಬಾಂಬ್ ಸ್ಫೋಟ ಸಂಭವಿಸಿ 200ಕ್ಕೂ ಹೆಚ್ಚು ಜನ ಮೃತರಾಗಿ 500ಕ್ಕೂ ಹೆಚ್ಚು ಜನ ಗಾಯಗೊಂಡರು.

2006ರ ಜುಲೈ 11ರಂದು ನಡೆದ ಸರಣಿ ರೈಲು ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನಡೆಸಿದ ತನಿಖೆ ಕಾಲದಲ್ಲಿ ಚಿತ್ರೀಕರಿಸಿಕೊಳ್ಳಲಾಗಿದ್ದ ಆರೋಪಿಯ ಹೇಳಿಕೆಯ ವಿಡಿಯೊ `ಸಿಡಿ' ಬಹಿರಂಗಗೊಂಡ ಬಗ್ಗೆ ತನಿಖೆಗೆ ಮಹಾರಾಷ್ಟ್ರ ಸರ್ಕಾರ ಆದೇಶಿಸಿತು. ವರ್ಷದ ಹಿಂದೆ ಇದೇ ದಿನ ಲಷ್ಕರ್- ಎ- ತೊಯ್ಬಾ ಸಂಘಟನೆಗೆ ಸೇರಿದ ಉಗ್ರರು ಮುಂಬೈ ಮಹಾನಗರದ ರೈಲುಗಳ ಏಳು ಬೋಗಿಗಳಲ್ಲಿ ಶಕ್ತಿಶಾಲಿ ಬಾಂಬುಗಳನ್ನು ಸ್ಫೋಟಿಸಿದಾಗ 200ಕ್ಕೂ ಹೆಚ್ಚು ಪ್ರಯಾಣಿಕರು ಮೃತರಾಗಿ 812 ಮಂದಿ ತೀವ್ರವಾಗಿ ಗಾಯಗೊಂಡರು.

2007: ಬೆಂಗಳೂರು ಮೂಲದ ಐ.ಟಿ. ಸಂಸ್ಥೆ ಇನ್ಫೋಸಿಸ್, 2007ರ ಸಾಲಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅವದಿಯಲ್ಲಿ ಒಟ್ಟು ರೂ 3773 ಕೋಟಿ ವಹಿವಾಟು ನಡೆಸಿ ರೂ 1,079 ಕೋಟಿ ನಿವ್ವಳ ಲಾಭ ಗಳಿಸಿ, ಶೇ 34.5ರಷ್ಟು ಏರಿಕೆ ದಾಖಲಿಸಿತು.

2007: ಪುಣೆಯಲ್ಲಿ ಮುಕ್ತಾಯವಾದ 104ನೇ ಆಗಾಖಾನ್ ಟ್ರೋಫಿ ಹಾಕಿ ಟೂರ್ನಿಯ ಹಿರಿಯರ ವಿಭಾಗದಲ್ಲಿ ವಿಕ್ರಮ್ ಪಿಳ್ಳೈ ಅಕಾಡೆಮಿ (ವಿಪಿಎ) ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತು. ವಿಪಿಎ ತಂಡವು 5-2 ಗೋಲುಗಳ ಅಂತರದಿಂದ ಫೈನಲ್ ಪಂದ್ಯದಲ್ಲಿ ಪುಣೆಯ ಕೇಂದ್ರ ರೈಲ್ವೆ ತಂಡವನ್ನು ಸೋಲಿಸಿತು.

2007: ಟೆನಿಸ್ ತಾರೆ, ಗ್ಲೋಬೋಸ್ಪೋರ್ಟ್ ಮುಖ್ಯಸ್ಥ ಮಹೇಶ್ ಭೂಪತಿ ಹಾಗೂ ಅನ್ಸಾಲ್ ಪ್ರಾಪರ್ಟೀಸ್ ಅಂಡ್ ಇನ್ ಫ್ರಾಸ್ಟ್ರಕ್ಚರ್ (ಎಪಿಐ) ನಿರ್ದೇಶಕ ಅನ್ಸಾಲ್ ನೇತೃತ್ವದ ಅನ್ಸಾಲ್ ಪ್ರಾಪರ್ಟೀಸ್ ಅಂಡ್ ಇನ್ಫ್ರಾಸ್ಟ್ರಕ್ಚರ್ (ಎಪಿಐ) ಭಾರತದ ವಿವಿಧೆಡೆ 16 ಟೆನಿಸ್ ಅಕಾಡೆಮಿಗಳನ್ನು ತೆರೆಯುವ ಮಹತ್ವದ ತಿಳಿವಳಿಕೆ ಒಪ್ಪಂದಕ್ಕೆ ಈದಿನ ನವದೆಹಲಿಯಲ್ಲಿ ಸಹಿ ಹಾಕಿದರು. `ಮಹೇಶ್ ಭೂಪತಿ ಟೆನಿಸ್ ಅಕಾಡೆಮೀಸ್' (ಎಂಬಿಟಿಎ) ಹೆಸರಿನಲ್ಲಿ 16 ಅಕಾಡೆಮಿಗಳು ತಲೆಎತ್ತಲು ಈ ಒಪ್ಪಂದ ಅನುವು ಮಾಡಿಕೊಡುವುದು.

2006: ಭಾರತದ ವಾಣಿಜ್ಯ ರಾಜಧಾನಿ ಮುಂಬೈಯ ಉಪನಗರ ರೈಲುಗಳಲ್ಲಿ ಈದಿನ ಸಂಜೆ ಸರಣಿ ಬಾಂಬ್ ಸ್ಫೋಟ ಸಂಭವಿಸಿ 200ಕ್ಕೂ ಹೆಚ್ಚು ಜನ ಮೃತರಾಗಿ 500ಕ್ಕೂ ಹೆಚ್ಚು ಜನ ಗಾಯಗೊಂಡರು. ಸಂಜೆ 6ರಿಂದ 6.30ರ ಅವಧಿಯ್ಲಲಿ ಮಾತುಂಗ, ಖಾರ್, ಸಾಂತಾಕ್ರೂಜ್, ಜೋಗೇಶ್ವರಿ, ಬೊರಿವಿಲಿ, ಭಯಂದರಿನಲ್ಲಿ ರೈಲುಗಳ ಮೊದಲ ದರ್ಜೆ ಬೋಗಿಗಳಲ್ಲಿ ಈ ಬಾಂಬ್ ಸ್ಫೋಟಗಳು ಸಂಭವಿಸಿದವು.

2006: ಇರಾಕಿನಾದ್ಯಂತ ನಡೆದ ಬಾಂಬ್ ಮತ್ತು ಬಂದೂಕು ದಾಳಿಗಳಲ್ಲಿ 10 ಮಂದಿ ಶಿಯಾಗಳು ಸೇರಿ ಒಟ್ಟು 36 ಮಂದಿ ಮೃತರಾದರು.

2006: ಬಾಂಗ್ಲಾದೇಶದ ವಾಯವ್ಯ ಭಾಗದಲ್ಲಿ ರೈಲು- ಬಸ್ ಅಪಘಾತದಲ್ಲಿ ಬಸಿನಲ್ಲಿದ್ದ ಕನಿಷ್ಠ 33 ಪ್ರಯಾಣಿಕರು ಮೃತರಾಗಿ ಇತರ 35 ಮಂದಿ ಗಾಯಗೊಂಡರು.

1994: ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರಿಗೆ ಮ್ಯಾಗ್ಸೆಸೆ ಪ್ರಶಸ್ತಿ ಲಭಿಸಿತು. ಈಕೆ ಭಾರತದ ಮೊದಲ ಮಹಿಳಾ ಐಪಿಎಸ್ ಅಧಿಕಾರಿಯಾಗಿ 1972ರಲ್ಲಿ ಸೇವೆಗೆ ಸೇರಿದವರು. 1949ರ ಜೂನ್ 9ರಂದು ಜನಿಸಿದ ಕಿರಣ್ ಅಮೃತಸರ, ಪಂಜಾಬ್ ಮತ್ತು ಭಾರತದ ಇತರ ಕಡೆಗಳಲ್ಲಿ ಪೊಲೀಸ್ ಇಲಾಖೆಗಳಲ್ಲಿ ಸೇವೆ ಮಾಡಿದ್ದಾರೆ. 2005ರಲ್ಲಿ ನ್ಯೂಯಾರ್ಕ್ ವಿಶ್ವವಿದ್ಯಾಲಯವು ಇವರಿಗೆ ಡಾಕ್ಟರ್ ಆಫ್ ಲಾ ಪದವಿ ನೀಡಿ ಗೌರವಿಸಿತು.

1948: ಮಿತ್ರಾ ವೆಂಕಟರಾಜ್ ಜನನ.

1937: ಕಥೆ , ಕಾದಂಬರಿಗಾರ್ತಿ, ಸಂಘಟಕಿ ಸುನೀತಿ ಉದ್ಯಾವರ ಅವರು ಶಾಂತಾ ರಾಮರಾವ್- ಸೀತಾಬಾಯಿ ದಂಪತಿಯ ಪುತ್ರಿಯಾಗಿ ಮಂಗಳೂರಿನ ಸ್ವಾತಂತ್ರ್ಯ ಹೋರಾಟಗಾರರ ಮನೆತನದಲ್ಲಿ ಜನಿಸಿದರು. ಮುಂಬೈ ವಿಶ್ವವಿದ್ಯಾಲಯಕ್ಕೆ `ಕಡೆಂಗೋಡ್ಲು ಶಂಕರ ಭಟ್ಟರ ಸೃಜನಶೀಲ ಪ್ರಕಟಿತ ಕೃತಿಗಳು' ಮಹಾಪ್ರಬಂಧ ಮಂಡಿಸಿ ಪಿಎಚ್ ಡಿ ಪಡೆದ ಅವರು ಕನ್ನಡ ವಿಭಾಗದಿಂದ ಡಾಕ್ಟರೇಟ್ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದವರು.

1932: ಎಚ್. ಎ. ರಾಮಕೃಷ್ಣ ಜನನ.

1897: ಸಮಾಜ ಸುಧಾರಕ, ಸ್ವಾತಂತ್ರ್ಯ ಸೇನಾನಿ ಸಿಖ್ ನಾಥ್ ಬ್ಯಾನರ್ಜಿ ಜನನ.

1882: ಸಮಾಜ ಸುಧಾರಕ, ಸ್ವಾತಂತ್ರ್ಯ ಹೋರಾಟಗಾರ ಬಾಬಾ ಕಾನ್ಷಿರಾಮ್ ಜನನ.

No comments:

Advertisement