My Blog List

Wednesday, September 3, 2008

ಇಂದಿನ ಇತಿಹಾಸ History Today ಸೆಪ್ಟೆಂಬರ್ 2

ಇಂದಿನ ಇತಿಹಾಸ

ಸೆಪ್ಟೆಂಬರ್ 2

ಭಾರತೀಯ ಈಜುಗಾರ್ತಿ ಬುಲಾ ಚೌಧುರಿ ಅವರು ಇಂಗ್ಲಿಷ್ ಕಡಲ್ಗಾಲುವೆಯನ್ನು ಎರಡು ಬಾರಿ ಈಜಿದ ಮೊದಲ ಏಷ್ಯನ್ ಮಹಿಳೆ ಎಂಬ ಕೀರ್ತಿಗೆ ಭಾಜನರಾದರು.

2007: ಭಾರತದ ಅತ್ಯಾಧುನಿಕ `ಇನ್ಸಾಟ್- 4ಸಿಆರ್' ಸಂಪರ್ಕ ಉಪಗ್ರಹವನ್ನು ಹೊತ್ತ `ಜಿಎಸ್ಎಲ್ವಿ- ಎಫ್04' ಉಡಾವಣಾ ನೌಕೆ ನಿಗದಿತ ಸಮಯಕ್ಕಿಂತ ಎರಡು ತಾಸು ವಿಳಂಬದ ನಂತರ ಸಂಜೆ 6.21ಕ್ಕೆ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಚಿಮ್ಮಿತು. ದಟ್ಟ ಹೊಗೆಯ ಮೋಡವನ್ನು ಉಗುಳಿ ಆಕಾಶಕ್ಕೆ ನೆಗೆದ 49 ಮೀಟರ್ ಉದ್ದದ ನೌಕೆ ಉಡಾವಣೆಗೊಂಡ 16 ನಿಮಿಷ 40 ಸೆಕೆಂಡುಗಳ ನಂತರ ಈ ಮೊದಲೇ ನಿಗದಿಪಡಿಸಲಾದ 248 ಕಿ.ಮೀ. ಎತ್ತರದಲ್ಲಿನ ಭೂ ಸಮಾನಾಂತರ ಕಕ್ಷೆಗೆ ಉಪಗ್ರಹವನ್ನು ಕೂರಿಸಿತು. 2130 ಕೆಜಿ ತೂಕದ ಇನ್ಸಾಟ್ ಉಪಗ್ರಹದಲ್ಲಿ 12 ಶಕ್ತಿಯುತ ಕ್ಯು-ಬ್ಯಾಂಡ್ ಟ್ರಾನ್ಸ್ಪಾಂಡರುಗಳಿದ್ದು ಇವು ಡಿಟಿಎಚ್ ಸೇವೆ, ವಿಡಿಯೋ ಚಿತ್ರಗಳ ರವಾನೆ ಹಾಗೂ ಡಿಜಿಟಲ್ ಸುದ್ದಿ ಸಂಗ್ರಹಕ್ಕೆ ನೆರವಾಗುವುವು. ಇದರ ಆಯಸ್ಸು 10 ವರ್ಷ. ಇದು ಕಳೆದ 9 ತಿಂಗಳಲ್ಲಿ ಯಶಸ್ವಿಯಾಗಿ ಉಡಾವಣೆಗೊಂಡ ಮೂರನೇ ಉಪಗ್ರಹ. 2006ರ ಡಿಸೆಂಬರ್ 22ರಂದು ಇನ್ಸಾಟ್-4ಎ ಹಾಗೂ 2007ರ ಮಾರ್ಚ್ 12ರಂದು ಇನ್ಸಾಟ್-4ಬಿ ಯನ್ನು ಯಶಸ್ವಿಯಾಗಿ ಹಾರಿಸಲಾಗಿತ್ತು. ಜಿಎಸ್ಎಲ್ವಿ-ಎಫ್ 04 ಈ ಸರಣಿಯಲ್ಲಿ ಐದನೇ ಉಡಾವಣಾ ನೌಕೆ. 2006ರ ಜುಲೈ 10ರಂದು ಕೈಗೊಂಡ ಉಡಾವಣೆ ವಿಫಲವಾಗಿ 56 ಸೆಕೆಂದುಗಳಲ್ಲೇ ಅದು ಹೊತ್ತೊಯ್ದಿದ್ದ ಇನ್ಸಾಟ್-4 ಸಿ ಉಪಗ್ರಹ ಸ್ಫೋಟಗೊಂಡು ಕಡಲ ಪಾಲಾಗಿತ್ತು.

2007: ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಮಾಜಿ ಸಚಿವರೂ ಆದ ಶಾಸಕ ಮೆರಾಜುದ್ದೀನ್ ಪಟೇಲ್ ಅವರನ್ನು ಜೆಡಿ (ಎಸ್) ರಾಜ್ಯ ಘಟಕದ ನೂತನ ಅಧ್ಯಕ್ಷರನ್ನಾಗಿ ದಿಢೀರ್ ನೇಮಕ ಮಾಡಲಾಯಿತು. ಬೆಂಗಳೂರಿನಲ್ಲಿ ಜೆಡಿ (ಎಸ್) ಕಚೇರಿಯಲ್ಲಿ ನಡೆದ ಅಲ್ಪಸಂಖ್ಯಾತರ ಸಮಾವೇಶ ಉದ್ಘಾಟಿಸಿದ ಬಳಿಕ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಈ ವಿಷಯ ಪ್ರಕಟಿಸಿದರು.

2007: ಕೀನ್ಯಾದ ಅಲ್ ಫ್ರೆಡ್ ಕಿರ್ವಾ ಯೆಗೊ ಅವರಿಗೆ ಈದಿನ ಸದಾ ನೆನಪಿಸಿಕೊಳ್ಳುವ ದಿನ. ಒಸಾಕಾದಲ್ಲಿ ನಡೆದ 11ನೇ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ 800 ಮೀಟರ್ ಓಟದಲ್ಲಿ ಅವರು ಬಂಗಾರದ ಪದಕ ಗೆದ್ದರು. ಕೂದಲೆಳೆ ಅಂತರದಲ್ಲಿ ಅಲ್ ಫ್ರೆಡ್ ಈ ಸಾಧನೆ ಮಾಡಿದರು. ಕೆನಡಾದ ಗ್ಯಾರಿ ರೀಡ್ ಮೊದಲ ಸ್ಥಾನ ಪಡೆದ ಕೀನ್ಯಾದ ಸ್ಪರ್ಧಿಗೆ ತೀವ್ರ ಪೈಪೋಟಿ ನೀಡಿದರು.
2007: ಡೆಹರಾಡೂನ್ (ಯುಎನ್ಐ): ಉತ್ತರಖಂಡ ಮುಖ್ಯಮಂತ್ರಿ ಮತ್ತು ಬಿಜೆಪಿ ಅಭ್ಯರ್ಥಿ ಮೇಜರ್ ಜನರಲ್ (ನಿವೃತ್ತ) ಭುವನಚಂದ್ರ ಖಂಡೂರಿ ಅವರು ಧುಮಕೊಟ್ ವಿಧಾನಸಭೆ ಉಪಚುನಾವಣೆಯಲ್ಲಿ ಜಯಗಳಿಸಿದರು. ಕಾಂಗ್ರೆಸ್ ಅಭ್ಯರ್ಥಿ ಸುರೇಂದ್ರ ಸಿಂಗ್ ನೇಗಿ ಅವರನ್ನು ಖಂಡೂರಿ 14,171 ಮತಗಳ ಅಂತರದಲ್ಲಿ ಸೋಲಿಸಿದರು. ಈ ವಿಜಯದೊಂದಿಗೆ ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿಗೆ ನಿಚ್ಚಳ ಬಹುಮತ ದೊರೆತಂತಾಯಿತು.

2007: ಅಂಗವಿಕಲರು ಮತ್ತು ಮಹಿಳೆಯರನ್ನು ಜಾತಿ ಆಧಾರಿತ ಮೀಸಲಾತಿ ಅಡಿ ತರುವಂತಿಲ್ಲ ಎಂದು ಭಾರತದ ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ಆದರೆ ಮಹಿಳೆಯರು, ಅಂಗವಿಕಲರು, ಅಂಧರು ಮತ್ತಿತರ ವಿಶೇಷ ವರ್ಗಗಳಿಗೆ ಮೀಸಲು ಸೌಲಭ್ಯ ಕಲ್ಪಿಸುವುದಕ್ಕಾಗಿ ಶೇ 50ರ ಗರಿಷ್ಠ ಮಿತಿಯನ್ನೂ ಮೀರಬಹುದು ಎಂದು ಅದು ಹೇಳಿತು. 1992ರ ಮಂಡಲ್ ಆಯೋಗ ಪ್ರಕರಣದಲ್ಲಿ (ಇಂದಿರಾ ಸಾಹ್ನಿ ಪ್ರಕರಣ), ಯಾವುದೇ ಸಂದರ್ಭದಲ್ಲಿಯೂ ಮೀಸಲಾತಿ ಪ್ರಮಾಣ ಶೇ 50ನ್ನು ಮೀರಬಾರದು ಎಂದು ಕೋರ್ಟ್ ನಿರ್ಬಂಧ ಹೇರಿತ್ತು. ಆದರೆ ಈಗ ಅದನ್ನು ಸಡಿಲಿಸಿದಂತಾಯಿತು.

2007: `ಜೆಡಿಎಸ್ ಜತೆ ಸಮ್ಮಿಶ್ರ ಸರ್ಕಾರ ಮುಂದುವರಿಸುವುದಕ್ಕಿಂತ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಸುವುದೇ ಒಳ್ಳೆಯದು' ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಸಭೆ ಮೈಸೂರಿನಲ್ಲಿ ಅಭಿಪ್ರಾಯಪಡುವ ಮೂಲಕ ತನ್ನ ರಾಜಕೀಯ ದಾಳವನ್ನು ಉರುಳಿಸಿತು.

2006: ಸತ್ಯಾಗ್ರಹ ಶತಮಾನೋತ್ಸವದ ಅಂಗವಾಗಿ ಏರ್ಪಡಿಸಲಾದ `ಸತ್ಯಾಗ್ರಹ ಶತಮಾನೋತ್ಸವ ಪ್ರದರ್ಶವನ್ನು ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಉದ್ಘಾಟಿಸಿದರು.

2006: ಮಾಹಿತಿ ತಂತ್ರಜ್ಞಾನ ಕುರಿತ ವಿಶೇಷ ಚಿಂತನಾ ತಂಡದ ಅಧ್ಯಕ್ಷರಾಗುವಂತೆ ರಾಜ್ಯ ಸರ್ಕಾರ ನೀಡಿದ್ದ ಆಹ್ವಾನವನ್ನು ಇನ್ಫೋಸಿಸ್ ಮುಖ್ಯಸ್ಥ ಎನ್. ಆರ್. ನಾರಾಯಣಮೂರ್ತಿ ಒಪ್ಪಿಕೊಂಡರು. ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆ (ಬಿಐಎಎಲ್) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ನಾರಾಯಣಮೂರ್ತಿ ಧರ್ಮಸಿಂಗ್ ಸರ್ಕಾರದ ಅವದಿಯಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರೊಂದಿಗೆ ಮುನಿಸಿಕೊಂಡು ಬಿಐಎಎಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

2006: ಕೇಂದ್ರ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳನ್ನು ಪರಿಸ್ಕರಿಸಲಿರುವ 6ನೇ ವೇತನ ಆಯೋಗದ ಅಧ್ಯಕ್ಷರಾಗಿ ಮೂಲತಃ ಕರ್ನಾಟಕದವರಾದ ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ಅವರನ್ನು ನೇಮಿಸಲಾಯಿತು. ಐಐಎಂ ಪ್ರಾಚಾರ್ಯ ರವೀಂದ್ರ ಧೋಲಾಕಿಯ, ಮಾಜಿ ಹೆಚ್ಚುವರಿ ಕಾರ್ಯದರ್ಶಿ (ಬಜೆಟ್) ಜೆ.ಎಸ್. ಮಾಹುರ್ ಮತ್ತು ವೆಚ್ಚ ಸುಧಾರಣೆ ಆಯೋಗದ ಎಸ್. ನಾಥ್ ಆಯೋಗದ ಇತರ ಸದಸ್ಯರಾಗಿ ನೇಮಕಗೊಂಡರು.

2006: ಭಾರತೀಯ ನೌಕಾಪಡೆಯ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ಸುರೇಶ ಮೆಹ್ತಾ ಅವರು ಅಡ್ಮಿರಲ್ ಅರುಣ್ ಪ್ರಕಾಶ್ ಸ್ಥಾನಕ್ಕೆ ನೇಮಕಗೊಂಡರು.

2006: ಖಂಡಾಂತರ ಕ್ಷಿಪಣಿಗಳನ್ನು ಮಾರ್ಗ ಮಧ್ಯದಲ್ಲೇ ಹೊಡೆದು ಉರುಳಿಸುವ ಪ್ರಯೋಗ ಯಶಸ್ವಿಯಾಗಿದೆ ಎಂದು ಅಮೆರಿಕ ಪ್ರಕಟಿಸಿತು. ಅಲಾಸ್ಕಾದ ಕೊಡಿಯಾಕಿನಿಂದ ಗುರಿಯತ್ತ ಹಾರಿಬಿಡಲಾದ ದೂರಗಾಮೀ ಖಂಡಾಂತರ ಕ್ಷಿಪಣಿ ಮಾದರಿಯನ್ನು ಕ್ಯಾಲಿಫೋರ್ನಿಯಾದಿಂದ ಉಡಾಯಿಸಲಾದ ಸಾಧನವು ಕರಾರುವಾಕ್ಕಾಗಿ ಹೊಡೆದು ಉರುಳಿಸಿತು ಎಂದು ಅಮೆರಿಕದ ಕ್ಷಿಪಣಿ ರಕ್ಷಣಾ ಸಂಸ್ಥೆಯ ಮೂಲಗಳು ಪ್ರಕಟಿಸಿದವು.

2001: ಡಾ. ಕ್ರಿಸ್ಟಿಯನ್ ಬರ್ನಾರ್ಡ್ ಅವರು ಸೈಪ್ರಸ್ಸಿನಲ್ಲಿ ರಜಾದಿನಗಳನ್ನು ಕಳೆಯುತ್ತಿದ್ದಾಗ ತಮ್ಮ 78ನೇ ವಯಸ್ಸಿನಲ್ಲಿ ಅಸ್ತಮಾ ಕಾಯಿಲೆಯಿಂದಾಗಿ ನಿಧನರಾದರು. ಮೊತ್ತ ಮೊದಲ `ಹೃದಯ ಕಸಿ' ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಅವರು ಖ್ಯಾತಿ ಪಡೆದಿದ್ದರು.

1999: ಭಾರತೀಯ ಈಜುಗಾರ್ತಿ ಬುಲಾ ಚೌಧುರಿ ಅವರು ಇಂಗ್ಲಿಷ್ ಕಡಲ್ಗಾಲುವೆಯನ್ನು ಎರಡು ಬಾರಿ ಈಜಿದ ಮೊದಲ ಏಷ್ಯನ್ ಮಹಿಳೆ ಎಂಬ ಕೀರ್ತಿಗೆ ಭಾಜನರಾದರು.

1984: ಪಂಜಾಬಿನ ಅಮೃತಸರದ ಸರ್ಣಮಂದಿರದಲ್ಲಿ ಸರ್ಕಾರಿ ಪಡೆಗಳು ಬೀಡು ಬಿಟ್ಟ್ದದ್ದನ್ನು ಪ್ರತಿಭಟಿಸಿ ಸಹಸ್ರಾರು ಸಿಖ್ಖರು ಮಂದಿರದ ಬಳಿ ಬೃಹತ್ ರ್ಯಾಲಿ ನಡೆಸಿದರು.

1946: ಅವಿಭಜಿತ ಭಾರತದ ಮಧ್ಯಂತರ ಸರ್ಕಾರದ ಪ್ರಧಾನ ಮಂತ್ರಿಯಾಗಿ ಜವಾಹರಲಾಲ್ ನೆಹರೂ ಅಧಿಕಾರ ಸ್ವೀಕಾರ.

1945: ಯುಎಸ್ಎಸ್ ಮಿಸ್ಸೌರಿ ನೌಕೆಯಲ್ಲಿ ನಡೆದ ಸಮಾರಂಭದ್ಲಲಿ ಜಪಾನ್ ಔಪಚಾರಿಕವಾಗಿ ತನ್ನ ಶರಣಾಗತಿಯನ್ನು ಪ್ರಕಟಿಸಿತು. ಇದರೊಂದಿಗೆ ಎರಡನೇ ಜಾಗತಿಕ ಸಮರ ಅಂತ್ಯಗೊಂಡಿತು. ಈ ದಿನವನ್ನು ಜಪಾನ್ ಮೇಲಿನ ವಿಜಯ ದಿನವಾಗಿ ಆಚರಿಸಲಾಯಿತು.

1945: ಹನೋಯಿಯ ಬಾ ದಿನ್ಹ್ ಚೌಕದಲ್ಲಿ ಸಮಾವೇಶಗೊಂಡಿದ್ದ ಬೃಹತ್ ಜನಸಮುದಾಯದ ಮುಂದೆ ಹೊ ಚಿ ಮಿನ್ಹ್ ಅವರು ವಿಯೆಟ್ನಾಂ ಒಂದು ಸ್ವತಂತ್ರ ಗಣರಾಜ್ಯ ಎಂದು ಘೋಷಿಸಿದರು. 25 ವರ್ಷಗಳ ಬಳಿಕ ಇದೇ ದಿನ ಅವರು ಹನೋಯಿಯಲ್ಲಿ ತಮ್ಮ 79ನೇ ವಯಸ್ಸಿನಲ್ಲಿ ಮೃತರಾದರು. ವಿಯೆಟ್ನಾಮಿನ ರಾಷ್ಟ್ರೀಯ ಚಳವಳಿಯ ಧುರೀಣರಾಗಿ ಅಷ್ಟೇ ಅಲ್ಲ, ಎರಡನೇ ಜಾಗತಿಕ ಸಮರದ ಬಳಿಕ ಏಷ್ಯಾದಲ್ಲಿ ಸಾಮ್ರಾಜ್ಯಶಾಹಿ ವಿರೋಧಿ ಚಳವಳಿಗೆ ಚಾಲನೆ ನೀಡಿದ ನಾಯಕರಲ್ಲಿ ಒಬ್ಬರಾಗಿಯೂ ಅವರು ಖ್ಯಾತಿ ಪಡೆದರು.

1930: ಯುರೋಪಿನಿಂದ ಮೊದಲ ತಡೆರಹಿತ ವಿಮಾನ (37) ಗಂಟೆ ಹಾರಾಟ.

1923: ಸಾಹಿತಿ ಜಿ. ನಾರಾಯಣ ಜನನ.

1917: ಸಾಹಿತಿ ನಾಗಾನಂದ ಜನನ.

1911: ನಟ, ನಿರ್ದೇಶಕ, ನಾಟಕಕಾರ, `ಪರ್ವತವಾಣಿ' ಎಂದೇ ಹೆಸರಾದ ಪಿ. ನರಸಿಂಗರಾವ್ (2-9-1911ರಿಂದ 17-3-1994) ಅವರು ಗೋಪಾಲರಾಯ- ರುಕ್ಮಣಮ್ಮ ದಂಪತಿಯ ಮಗನಾಗಿ ತಮಿಳುನಾಡಿನ ಹೊಸೂರು ಸಮೀಪದ ಮಾರಂಡ ಪಟ್ಟಿ ಹತ್ತಿರದ ಪರ್ವತವಾಡಿಯಲ್ಲಿ ಜನಿಸಿದರು. ಎಂಬತ್ತಕ್ಕೂ ಹೆಚ್ಚು ನಾಟಕ ಕೃತಿಗಳನ್ನು ರಚಿಸಿದ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ.

1862: ಸಾಹಿತಿ ತಮ್ಮಣ್ಣಪ್ಪ ಚಿಕ್ಕೋಡಿ ಜನನ.

1666: ಲಂಡನ್ನಿನಲ್ಲಿ ಭಾರೀ ಅಗ್ನಿ ಅನಾಹುತ ಸಂಭವಿಸಿತು. ಈ ದುರಂತದಲ್ಲಿ ಸಹಸ್ರಾರು ಮನೆಗಳು ಅಗ್ನಿಗೆ ಆಹುತಿಯಾದವು ಆದರೆ ಅತಿ ಸ್ವಲ್ಪ ಪ್ರಮಾಣದಲ್ಲಿ ಸಾವು ಸಂಭವಿಸಿತು. ಲಂಡನ್ನಿನ ಇತಿಹಾಸದಲ್ಲೇ ಅತಿ ಭೀಕರ ಎಂದು ಪರಿಗಣಿಸಲಾದ ಈ ಅಗ್ನಿ ಅನಾಹುತದಲ್ಲಿ ನಾಗರಿಕ ಕಟ್ಟಡಗಳು, ಸೇಂಟ್ ಪೌಲ್ಸ್ ಕೆಥೆಡ್ರಲ್, 87 ಇಗರ್ಜಿಗಳು (ಚರ್ಚ್ಗಳು), 13,000 ಮನೆಗಳು ಸೇರಿದಂತೆ ಲಂಡನ್ ನಗರದ ಬಹುತೇಕ ಭಾಗ ಭಸ್ಮವಾಯಿತು. ಲಂಡನ್ ಸೇತುವೆ ಸಮೀಪದ ಪಡ್ಡಿಂಗ್ ಲೇನಿನ ಕಿಂಗ್ಸ್ ಬೇಕರ್ ಮನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿತು. ನಾಲ್ಕುದಿನಗಳ ಕಾಲ ಬೆಂಕಿ ಅವ್ಯಾಹತವಾಗಿ ಉರಿಯಿತು. ಕೊನೆಗೆ ಬೆಂಕಿ ಹರಡದಂತೆ ತಡೆಯಲು ಹಲವು ಮನೆಗಳನ್ನು ಸ್ಫೋಟಿಸಬೇಕಾಯಿತು.

No comments:

Advertisement