My Blog List

Monday, December 8, 2008

ಇಂದಿನ ಇತಿಹಾಸ History Today ಡಿಸೆಂಬರ್ 08

ಇಂದಿನ ಇತಿಹಾಸ 

ಡಿಸೆಂಬರ್ 8


ದಶಕದ ನಂತರ ಕೊನೆಗೂ ಮಂಗಳೂರು - ಬೆಂಗಳೂರು ಮಧ್ಯೆ ರೈಲು ಸಂಚಾರ ಆರಂಭಗೊಂಡಿತು. ಮಂಗಳೂರು ರೈಲು ನಿಲ್ದಾಣದಲ್ಲಿ ನಡೆದ ಸಮಾರಂಭದಲ್ಲಿ ಮಂಗಳೂರು- ಬೆಂಗಳೂರು ಪ್ರಯಾಣಿಕ ರೈಲು ಆರಂಭಕ್ಕೆ ರೈಲ್ವೇ ಸಚಿವ ಲಾಲೂ ಪ್ರಸಾದ್ ಹಸಿರು ನಿಶಾನೆ ತೋರಿಸಿದರು. ಇದೇ ಸಂದರ್ಭದಲ್ಲಿ ಸುಬ್ರಹ್ಮಣ್ಯ- ಸಕಲೇಶಪುರ ನಡುವಣ ಬ್ರಾಡ್ ಗೇಜ್ ಹಳಿಯನ್ನೂ ಅವರು ಉದ್ಘಾಟಿಸಿದರು.

2007: ದಶಕದ ನಂತರ ಕೊನೆಗೂ ಮಂಗಳೂರು - ಬೆಂಗಳೂರು ಮಧ್ಯೆ ರೈಲು ಸಂಚಾರ ಆರಂಭಗೊಂಡಿತು. ಮಂಗಳೂರು ರೈಲು ನಿಲ್ದಾಣದಲ್ಲಿ ನಡೆದ ಸಮಾರಂಭದಲ್ಲಿ ಮಂಗಳೂರು- ಬೆಂಗಳೂರು ಪ್ರಯಾಣಿಕ ರೈಲು ಆರಂಭಕ್ಕೆ ರೈಲ್ವೇ ಸಚಿವ ಲಾಲೂ ಪ್ರಸಾದ್ ಹಸಿರು ನಿಶಾನೆ ತೋರಿಸಿದರು. ಇದೇ ಸಂದರ್ಭದಲ್ಲಿ ಸುಬ್ರಹ್ಮಣ್ಯ- ಸಕಲೇಶಪುರ ನಡುವಣ ಬ್ರಾಡ್ ಗೇಜ್ ಹಳಿಯನ್ನೂ ಅವರು ಉದ್ಘಾಟಿಸಿದರು. ಸಚಿವ ಲಾಲು ಪ್ರಸಾದ್ ರಿಮೋಟ್ ಮೂಲಕ ಉದ್ಘಾಟನಾ ಫಲಕದ ಪರದೆ ಸರಿಸಿ, ಸಿಗ್ನಲ್ಲಿನ ಗೇರ್ ಅದುಮಿ, ಮಂಗಳೂರು-ಬೆಂಗಳೂರು ರೈಲಿಗೆ ಹಸಿರು ನಿಶಾನೆ ತೋರಿಸುತ್ತಿದ್ದಂತೆಯೇ 6517 ನಂಬರಿನ ರೈಲು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಮುಂದಡಿಯಿಟ್ಟಿತು. ರಾಷ್ಟ್ರಗೀತೆಯ ನಾದಕ್ಕನುಗುಣವಾಗಿ ಹಾರ್ನ್ ಹಾಕುತ್ತಾ ಚುಕು ಪುಕು ಸದ್ದು ಮಾಡುತ್ತಾ ಹೊರಟ ರೈಲಿನ ದೃಶ್ಯವನ್ನು ವೇದಿಕೆ ಪಕ್ಕದಲ್ಲಿ ನಿರ್ಮಿಸಿದ್ದ ಬೃಹತ್ ಡಿಜಿಟಲ್ ಪರದೆಯಲ್ಲಿ ಕಂಡ ಕರಾವಳಿಯ ಜನೆ ಪುಳಕಗೊಂಡರು. ಸಕಲೇಶಪುರ- ಸುಬ್ರಹ್ಮಣ್ಯದ ನಡುವೆ ಸುಮಾರು 128 ಸೇತುವೆ ಹಾಗೂ 58 ಸುರಂಗ ಮಾರ್ಗಗಳನ್ನು ಹೊಂದಿರುವ ಘಾಟ್ ಮಾರ್ಗದಲ್ಲಿ ಕರಾವಳಿ ಜನತೆಯ ದಶಕಗಳ ಕನಸು, ರಾಜಧಾನಿಯ ಸಂಪರ್ಕ, ನಿಸರ್ಗ ಸಿರಿ ದರ್ಶನದ ಬ್ರಾಡ್ ಗೇಜ್ ಮಂಗಳೂರು- ಬೆಂಗಳೂರು ಪ್ರಯಾಣಿಕ ರೈಲನ್ನು ಅಪ್ಪಟ ಕನ್ನಡಿಗ ಮೈಸೂರಿನ ರಾಮಸ್ವಾಮಿ ಮೊದಲ ಬಾರಿ ಚಲಾಯಿಸಿದರು. ರೈಲ್ವೆ ವಿಭಾಗದಲ್ಲಿ ಒಟ್ಟು 33 ವರ್ಷಗಳ ರೈಲು ಚಾಲನೆ ಅನುಭವ ಇರುವ ಕ್ಲಾಸ್-1 ಚಾಲಕರಾದ ರಾಮಸ್ವಾಮಿ, ಮಂಗಳೂರು- ಬೆಂಗಳೂರು ಮಧ್ಯೆ ಮೀಟರ್ ಗೇಜ್ ರೈಲನ್ನೂ ಚಲಾಯಿಸಿದ್ದರು. ದೇಶದ ಇತರ ಕಡೆಗಳಲ್ಲಿ 1843ರಲ್ಲೇ ರೈಲು ಸಂಚಾರ ಆರಂಭಗೊಂಡರೂ ಮಂಗಳೂರಿಗೆ ಮೊದಲ ರೈಲು ಬಂದದ್ದೇ 1907ರಲ್ಲಿ. ಮಂಗಳೂರಿಗೆ ಸಮೀಪದ ಉಳ್ಳಾಲದಲ್ಲಿ ರೈಲ್ವೆ ಸೇತುವೆ ನಿರ್ಮಾಣಗೊಂಡ ಬಳಿಕ 1907ರಲ್ಲಿ ಮೊತ್ತಮೊದಲು ಕೇರಳ ಕಡೆಯಿಂದ ಮಂಗಳೂರಿಗೆ ರೈಲು ಬಂದಿತ್ತು. ಇದಾದ 100 ವರ್ಷಗಳ ಬಳಿಕ ಮಂಗಳೂರು-ಬೆಂಗಳೂರು ಮಧ್ಯೆ ಬ್ರಾಡ್ ಗೇಜ್ ಮೇಲೆ ರೈಲು ಸಂಚಾರ ಈದಿನ ಆರಂಭಗೊಂಡಿತು. ಕೊಂಕಣ ರೈಲು ಬಳಿಕ ಕರಾವಳಿಗೆ ಇದು ಮಹತ್ತರ ಕೊಡುಗೆ. ಶಿರಾಡಿ ಘಾಟ್ ರಸ್ತೆ ಹದಗೆಟ್ಟು ಸಂಪರ್ಕ ಸ್ಥಗಿತಗೊಂಡಾಗ ಇಲ್ಲಿ ರೈಲು ಸಂಚಾರದ ಕೂಗು ಬಲವಾಯಿತು. 2006ರ ಮೇ ತಿಂಗಳಲ್ಲೇ ಗೂಡ್ಸ್ ರೈಲು ಓಡಾಟ ಪ್ರಾರಂಭ ಆದರೂ ಪ್ರಯಾಣಿಕ ರೈಲು ಮಾತ್ರ ಓಡಲಿಲ್ಲ. ಕಬ್ಬಿಣದ ಅದಿರು ಸಾಗಾಟ ಮೂಲಕ ಭಾರಿ ಲಾಭ ತಂದುಕೊಂಡುವ ಮಾರ್ಗವಾಗಿ ಇದು ಪರಿವರ್ತಿತವಾಯಿತಾದರೂ ಪ್ರಯಾಣಿಕ ರೈಲು ಸಂಚಾರಕ್ಕೆ ಮುಹೂರ್ತ ಕೂಡಿ ಬಂದಿರಲೇ ಇಲ್ಲ. ಕೊನೆಗೆ ಜನರ ಚಳವಳಿಯ ಬಳಿಕ ಈದಿನ ಬ್ರಾಡ್ ಗೇಜ್ ಆಗಿ ಪರಿವರ್ತನೆಗೊಂಡ ಮಾರ್ಗದಲ್ಲಿ ರೈಲು ಸಂಚಾರ ಪುನರಾರಂಭಗೊಂಡಿತು. ದೀರ್ಘ ಹೋರಾಟದ ಬಳಿಕ ಮೀಟರ್ ಗೇಜ್ ಮಾರ್ಗದಲ್ಲಿ ಕೆಲವು ವರ್ಷಗಳ ಹಿಂದೆ ಆರಂಭವಾಗಿದ್ದ ರೈಲುಸಂಚಾರ ಬ್ರಾಡ್ ಗೇಜ್ ಮಾರ್ಗ ಪರಿವರ್ತನೆ ಸಲುವಾಗಿ ನಿಂತು ಹೋಗಿತ್ತು. ಮಂಗಳೂರು- ಬೆಂಗಳೂರು ಬ್ರಾಡ್ ಗೇಜ್ ರೈಲು ಸಂಚಾರ ಉದ್ಘಾಟನಾ ಸಮಾರಂಭದಲ್ಲಿ ರಾಜ್ಯಪಾಲ ರಾಮೇಶ್ವರ ಠಾಕೂರ್ ಮುಖ್ಯ ಅತಿಥಿಯಾಗಿದ್ದರು.

2007:  ಅನಿಲ ಸ್ಫೋಟದಿಂದ ಅಪಾಯದಲ್ಲಿ ಸಿಲುಕಿಕೊಂಡಿದ್ದ ಸಹೋದ್ಯೋಗಿಗಳನ್ನು ರಕ್ಷಿಸಲು ಗಣಿಯೊಳಗೆ ಧಾವಿಸಿದವರೂ ಸೇರಿದಂತೆ ಸುಮಾರು 104 ಮಂದಿ ಕಲ್ಲಿದ್ದಲು ಗಣಿ ಕಾರ್ಮಿಕರು ಅಸು ನೀಗಿದ ದಾರುಣ ಘಟನೆ ಚೀನಾದ ಶಾಂಗ್ ಶಿ ಪ್ರಾಂತ್ಯದ ಹಾಂಗ್ ಟಾಗ್ ಕೌಂಟಿಯಲ್ಲಿ ಸಂಭವಿಸಿತು.

2007: ದಕ್ಷಿಣ ಫೆಸಿಫಿಕ್ ನ ಫಿಜಿಯಲ್ಲಿ ತೀವ್ರವಾದ ಬಿರುಗಾಳಿಯಿಂದ ಕೂಡಿದ ಸಿಕೋಬಿಯಾ ಚಂಡಮಾರುತ ಬೀಸಿದ ಪರಿಣಾಮವಾಗಿ ಎರಡು ಸಣ್ಣಹಳ್ಳಿಗಳು ನೆಲಸಮವಾದವು. ನಿರಾಶ್ರಿತರಾದ 69 ಮಂದಿ ಗುಹೆಗಳಲ್ಲಿ ಆಶ್ರಯ ಪಡೆದರು.

2006: ಕೊಯಮತ್ತೂರಿನ ವಕೀಲ ಎಂ. ರಾಜಾ ಷರೀಫ್ ಅವರು 7 ಅಡಿ ಎತ್ತರ, 4 ಅಡಿ ಅಗಲ ಮತ್ತು 250 ಕಿಲೋ ಗ್ರಾಂ ತೂಕದ ಬೃಹತ್ ಕುರಾನ್ ಗ್ರಂಥವನ್ನು ತಮಿಳುನಾಡಿನ ಚೆನ್ನೈಯಲ್ಲಿ  ಪ್ರದರ್ಶಿಸಿದರು. ಅರಬ್ಬೀ ಭಾಷೆಯಲ್ಲಿ ಬರೆಯಲಾಗಿರುವ ಈ ಗ್ರಂಥ 610 ಪುಟಗಳನ್ನು ಹೊಂದಿದೆ. ಷರೀಫ್ ಕುಟುಂಬದ ಎಲ್ಲ ಸದಸ್ಯರೂ ಈ ಗ್ರಂಥ ರಚನೆಗೆ ಒಂದು ವರ್ಷಕಾಲ ಶ್ರಮಿಸಿದ್ದಾರೆ. ಷರೀಫ್ ಅವರು ಈ ಹಿಂದೆ ತಾಳೆಗರಿಯಲ್ಲಿ  ತಮಿಳು ಭಾಷೆಯ `ತಿರುಕ್ಕುರಳ್' ಗ್ರಂಥದ 1330 ಪದ್ಯಗಳನ್ನು ಬರೆದು ದಾಖಲೆ ನಿರ್ಮಿಸಿದ್ದರು. 2003ರಲ್ಲಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಕೊಯಮತ್ತೂರಿಗೆ ಭೇಟಿ  ನೀಡಿದ್ದಾಗ ಷರೀಫ್ ಅವರು ಈ ತಾಳೆಗರಿ ಹಾಳೆಯನ್ನು ರಾಷ್ಟ್ರಪತಿಗಳಿಗೆ ಅರ್ಪಿಸಿದ್ದರು. 

2006: ಪ್ರತಿಕೂಲ ಹವಾಮಾನದಿಂದಾಗಿ ಫ್ಲೋರಿಡಾದ ಕೇಪ್ ಕೆನವರಾಲಿನಲ್ಲಿ ನಡೆಯಬೇಕಾಗಿದ್ದ ಅಮೆರಿಕದ ಗಗನನೌಕೆ `ಡಿಸ್ಕವರಿ'ಯ ಉಡಾವಣೆಯನ್ನು ಮುಂದೂಡಲಾಯಿತು. ರಾತ್ರಿ ನಡೆಯಬೇಕಾಗಿದ್ದ ಉಡಾವಣೆಗೆ ಕೆಲವೇ ನಿಮಿಷಗಳ ಮೊದಲು ಹವಾಮಾನದಲ್ಲಿ ವೈಪರೀತ್ಯ ಕಂಡುಬಂದದ್ದರಿಂದ ನಾಸಾ ವಿಜ್ಞಾನಿಗಳು ಇದನ್ನು ಮುಂದೂಡುವ ನಿರ್ಧಾರ ಕೈಗೊಂಡರು. ಭಾರತದ ಸುನಿತಾ ವಿಲಿಯಮ್ಸ್ ಸೇರಿದಂತೆ ಏಳು ಮಂದಿ ಗಗನಯಾತ್ರಿಗಳು ಡಿಸ್ಕವರಿ ಮೂಲಕ ಗಗನಕ್ಕೆ ನೆಗೆದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ದುರಸ್ತಿ ಮಾಡಬೇಕಾಗಿತ್ತು. ಮೂಲ ಯೋಜನೆಯಂತೆ ಅಮೆರಿಕದ ಕಾಲಮಾನ ರಾತ್ರಿ 9.35 ನಿಮಿಷಕ್ಕೆ ಡಿಸ್ಕವರಿ ಗಗನಕ್ಕೆ ಚಿಮ್ಮಲು ಸಿದ್ಧವಾಗಿತ್ತು. ಗಗನಯಾತ್ರಿಗಳೂ ಆಸನದಲ್ಲಿ ಕುಳಿತು ಕ್ಷಣಗಣನೆ ಆರಂಭಿಸಿದ್ದರು. ಆದರೆ 8.05 ಗಂಟೆ ಹೊತ್ತಿಗೆ ದಟ್ಟ ಮೋಡಗಳು ಕಾಣಿಸಿಕೊಂಡವು. 2002ರ ನವೆಂಬರ್ 23ರಂದು ಉಡಾವಣೆಗೊಂಡ ಎಂಡೀವರ್ ಗಗನನೌಕೆಯ ಬಳಿಕ ರಾತ್ರಿವೇಳೆ ಉಡಾವಣೆಗೆ ಸಜ್ಜಾದ ಮೊದಲ ಗಗನನೌಕೆ ಡಿಸ್ಕವರಿ. `ಕೊಲಂಬಿಯ' ದುರಂತದ ಬಳಿಕ ಮೂರು ನೌಕೆಗಳನ್ನು ಹಗಲು ಹೊತ್ತಿನಲ್ಲೇ ಉಡಾವಣೆ ಮಾಡಲಾಗಿತ್ತು. 

2006: ನೇಪಾಳದ ದೊರೆ ಜ್ಞಾನೇಂದ್ರ ಹಾಗೂ ರಾಜಕುಮಾರ ಪಾರಸ್ ಕಠ್ಮಂಡು ವಿಮಾನ ನಿಲ್ದಾಣದಲ್ಲಿ 53,739 ರೂ. ತೆರಿಗೆ ಪಾವತಿಸಿ ಅಮೆರಿಕದಿಂದ ತಮ್ಮ ವಿಳಾಸಕ್ಕೆ ಬಂದಿದ್ದ ಪಾರ್ಸೆಲ್ ಪಡೆದುಕೊಂಡರು. ಏಕನಾಯಕ ಚಕ್ರಾಧಿಪತ್ಯವಿರುವ ಈ ಹಿಮಾಲಯ ರಾಷ್ಟ್ರದಲ್ಲಿ 238 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ `ದೊರೆ ತೆರಿಗೆ ಪಾವತಿ ಮಾಡಿದ' ಈ ಪ್ರಕರಣ ನಡೆಯಿತು. ದೊರೆ ಜ್ಞಾನೇಂದ್ರ ಅವರ ವಿಳಾಸಕ್ಕೆ ಬಂದ ಪಾರ್ಸೆಲ್ ಪೆಟ್ಟಿಗೆಯಲ್ಲಿ ಇದ್ದದ್ದು 50 ಟಾರ್ಚ್ ಲೈಟುಗಳು.

2006: `ಹೆನ್ರಿ ಜೆ. ಹೈಡ್ ಅಮೆರಿಕ- ಭಾರತ ಶಾಂತಿಯು ಪರಮಾಣು ಶಕ್ತಿ ಸಹಕಾರ ಕಾಯ್ದೆ 2006' ಎಂದು ಕರೆಯಲಾಗುವ ಭಾರತ- ಅಮೆರಿಕ ನಡುವಣ ನಾಗರಿಕ ಬಳಕೆಯ ಪರಮಾಣು ಒಪ್ಪಂದಕ್ಕೆ ಅವಕಾಶ ಒದಗಿಸುವ 74 ಪುಟಗಳ ಮಸೂದೆಗೆ ಅಮೆರಿಕದ ಕಾಂಗ್ರೆಸ್ ಈ ರಾತ್ರಿ ಒಪ್ಪಿಗೆ ನೀಡಿತು.  ಭಾರತ ವ್ಯಕ್ತಪಡಿಸಿದ ಆಕ್ಷೇಪಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಅಮೆರಿಕದ ಸೆನೆಟ್ ಮತ್ತು ಕಾಂಗ್ರೆಸ್ ಸದಸ್ಯರ ಸಮಿತಿ ಮಸೂದೆಯಲ್ಲಿ ಬಳಸಿದ ಭಾಷೆಗೆ ತಿದ್ದುಪಡಿಗಳನ್ನು ತಂದಿದೆ. ಒಪ್ಪಂದದಿಂದಾಗಿ ಕಳೆದ 32 ವರ್ಷಗಳಲ್ಲಿ ಮೊದಲ ಬಾರಿಗೆ ಪರಮಾಣು ತಂತ್ರಜ್ಞಾನ ನೆರವನ್ನು ಅಮೆರಿಕ ಭಾರತಕ್ಕೆ ನೀಡಲಿದ್ದು, ಭಾರತ ತನ್ನ ಬಹುತೇಕ ಪರಮಾಣು ಸ್ಥಾವರಗಳನ್ನು ಮುಕ್ತ ವೀಕ್ಷಣೆಗೆ ತೆರೆದಿಡಲಿದೆ.

2005: ಖಾಸಗಿ ವೃತ್ತಿ ಶಿಕ್ಷಣ ಸಂಸ್ಥೆಗಳಲ್ಲೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಮೀಸಲು ನೀಡುವ ಸಂಬಂಧ ಸಂವಿಧಾನ ತಿದ್ದುಪಡಿ ಮಸೂದೆ ಮಂಡಿಸಲು ಭಾರತದ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತು. ಅನುದಾನರಹಿತ ಕಾಲೇಜುಗಳಲ್ಲಿ ಮೀಸಲು ನೀಡಬೇಕಾದ ಅಗತ್ಯ ಇಲ್ಲ ಎಂಬುದಾಗಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿಗೆ ಪ್ರತಿಯಾಗಿ ಸರ್ಕಾರ ಈ ಕ್ರಮ ಕೈಗೊಂಡಿದ್ದು, ಮಸೂದೆಯನ್ನು ಅಲ್ಪಸಂಖ್ಯಾತ ಸಂಸ್ಥೆಗಳಿಗೆ ಅನ್ವಯಿಸದಿರಲು ನಿರ್ಧರಿಸಿತು.

2005: ಲೈಂಗಿಕ ಕಿರುಕುಳ ಸಂಬಂಧ ಮೇಲಧಿಕಾರಿಗಳ ವಿರುದ್ಧ ದೂರು ನೀಡಿದ್ದ ಭಾರತೀಯ ವಾಯುಪಡೆಯ ಫ್ಲೈಯಿಂಗ್ ಅಧಿಕಾರಿ ಅಂಜಲಿ ಗುಪ್ತಾ ಅವರ ವಿಚಾರಣೆ ನಡೆಸಿದ ಮಿಲಿಟರಿ ನ್ಯಾಯಾಲಯ ಆಕೆಯನ್ನು ತಪ್ಪಿತಸ್ಥೆ ಎಂದು ತೀರ್ಮಾನಿಸಿ ಅವರನ್ನು ಸೇವೆಯಿಂದ ವಜಾಗೊಳಿಸಲು ಆದೇಶಿಸಿತು.

2005: ಹಿರಿಯ ಪತ್ರಕರ್ತ, ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ನಿವೃತ್ತ ಮುಖ್ಯ ವರದಿಗಾರ ಎಸ್. ಜಿ. ಮೈಸೂರುಮಠ ಅವರು ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾದರು. ವಿಶ್ವ ಕರ್ನಾಟಕ ಮೂಲಕ ಪತ್ರಿಕಾ ರಂಗ ಪ್ರವೇಶಿಸಿದ ಅವರು ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ 25 ವರ್ಷ ಸೇವೆ ಸಲ್ಲಿಸಿದ್ದೂ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ನಾಲ್ಕು ದಶಕಗಳ ಸೇವೆ ಸಲ್ಲಿಸಿದ್ದರು.

2001: ಭಾರತದ ಖ್ಯಾತ ಕ್ಯಾಮರಾಮ್ಯಾನ್ ಸುಬ್ರತೊ ಮಿತ್ರ (1930-2001) ನಿಧನರಾದರು. ಸತ್ಯಜಿತ್ ರೇ ಅವರ ಎರಡನೇ ಚಿತ್ರ `ಅಪರಾಜಿತೊ'ದಲ್ಲಿ ಅವರು `ಬೌನ್ಸ್ ಲೈಟ್ನಿಂಗ್' ನ್ನು ಅಳವಡಿಸಿದ್ದರು. ರೇ ಅವರ ಖ್ಯಾತ ಚಿತ್ರಗಳಾದ `ಪಥೇರ್ ಪಾಂಚಾಲಿ', `ಅಪುರ್ ಸಂಸಾರ್' ಇತ್ಯಾದಿ ಚಿತ್ರಗಳ ಚಿತ್ರೀಕರಣವನ್ನೂ ಅವರು ಮಾಡಿದ್ದರು. 1992 ರಲ್ಲಿ ಸಿನಿಮಾಟೋಗ್ರಪಿಯಲ್ಲಿ ಜೀವಮಾನದ ಸಾಧನೆಗಾಗಿ ನೀಡಲಾಗುವ `ಈಸ್ಟ್ಮನ್ ಕೊಡಕ್' ಪ್ರಶಸ್ತಿಯನ್ನು ಗೆದ್ದ ಮೊತ್ತ ಮೊದಲ ಭಾರತೀಯನೆಂಬ ಹೆಗ್ಗಳಕೆಗೆ ಸುಬ್ರತೊ ಮಿತ್ರ ಭಾಜನರಾಗಿದ್ದರು.

1991: ರಷ್ಯ, ಉಕ್ರೇನ್ ಮತ್ತು ಬೆಲಾರಸ್ ರಾಷ್ಟ್ರಗಳು ಬೆಲಾರಸ್ನಲ್ಲಿ ಒಪ್ಪಂದವೊಂದಕ್ಕೆ ಸಹಿ ಹಾಕಿ ಕಮ್ಯೂನಿಸ್ಟ್ ಯುಗದ ಒಕ್ಕೂಟವನ್ನು ವಿಸರ್ಜಿಸಿದವು ಮತ್ತು ಸ್ವತಂತ್ರ ರಾಷ್ಟ್ರಗಳ ಕಾಮನ್ವೆಲ್ತನ್ನು ಸ್ಥಾಪಿಸಿದವು.

1980: ರಾಕ್ ಸಂಗೀತಗಾರ ಜಾನ್ ಲೆನ್ನನ್ ಅವರನ್ನು ನ್ಯೂಯಾರ್ಕ್ ನಗರದ ಹೊರವಲಯದ ಅಪಾರ್ಟ್ಮೆಂಟ್ ಕಟ್ಟಡವೊಂದರಲ್ಲಿ ಗುಂಡಿಟ್ಟು ಕೊಲೆಗೈಯಲಾಯಿತು. ಹುಚ್ಚೆದ್ದ ಅಭಿಮಾನಿ ಮಾರ್ಕ್ ಚಾಪ್ ಮ್ಯಾನ್ ಎಂಬ ವ್ಯಕ್ತಿ ಈ ಕೃತ್ಯ ಎಸಗಿದ.

1978: ಇಸ್ರೇಲಿನ ಪ್ರಧಾನಿ ಗೋಲ್ಡಾ ಮೀರ್ ಅವರು ಜೆರುಸಲೇಮಿನಲ್ಲಿ ತಮ್ಮ 80ನೇ ವಯಸ್ಸಿನಲ್ಲಿ ನಿಧನರಾದರು. 1969ರಿಂದ
1974ರವರೆಗೆ ಅವರು ಇಸ್ರೇಲ್ ಪ್ರಧಾನಿಯಾಗಿ ಆಡಳಿತ ನಡೆಸಿದ್ದರು.

1941: ಎರಡನೇ ಜಾಗತಿಕ ಯುದ್ಧ ಕಾಲದಲ್ಲಿ ಈದಿನ ಗ್ರೇಟ್ ಬ್ರಿಟನ್, ಆಸ್ಟ್ರೇಲಿಯಾ ಮತ್ತು ಅಮೆರಿಕಾ ಒಟ್ಟಾಗಿ ಜಪಾನ್ ವಿರುದ್ಧ ಸಮರ ಸಾರಿದವು.

 1937: ಭಾರತದ ಮೊತ್ತ ಮೊದಲ ಡಬಲ್ ಡೆಕರ್ ಬಸ್ಸು ಬಾಂಬೆಯಲ್ಲಿ (ಈಗಿನ ಮುಂಬೈ) ಸೇವೆಗೆ ಇಳಿಯಿತು. ಈ ಬಸ್ಸಿನಲ್ಲಿ 58 ಮಂದಿ ಪ್ರಯಾಣಿಸಬಹುದಾಗಿತ್ತು.

1935: ಬಾಲಿವುಡ್ಡಿನ ಖ್ಯಾತ ನಟ ಹಾಗೂ ಚಿತ್ರ ನಿರ್ಮಾಪಕ ಧರ್ಮೇಂದ್ರ ಡಿಯೋಲ್ ಜನಿಸಿದರು.

1900: ಭಾರತದ ಖ್ಯಾತ ನೃತ್ಯಪಟು ಹಾಗೂ ನೃತ್ಯ ನಿರ್ದೇಶಕ ಉದಯ ಶಂಕರ್ (1900-1977) ಹುಟ್ಟಿದ ದಿನ. ಇವರು ಸಾಂಪ್ರದಾಯಿಕ ಹಿಂದೂ ನೃತ್ಯಗಳಿಗೆ ಪಾಶ್ಚಾತ್ಯ ತಂತ್ರಗಳನ್ನು ಅಳವಡಿಸಿ ಭಾರತದ ಪುರಾತನ ಕಲಾ ಪ್ರಕಾರವನ್ನು ಭಾರತ ಹಾಗೂ ಹೊರ ದೇಶಗಳಲ್ಲಿ ಜನಪ್ರಿಯಗೊಳಿಸಿದರು.

1875: ಭಾರತೀಯ ನ್ಯಾಯವಾದಿ ಹಾಗೂ ಮುತ್ಸದ್ದಿ ಸರ್ ತೇಗ್ ಬಹಾದುರ್ ಸಪ್ರು (1875-1949) ಹುಟ್ಟಿದ ದಿನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement