My Blog List

Friday, December 12, 2008

ಇಂದಿನ ಇತಿಹಾಸ History Today ಡಿಸೆಂಬರ್ 12

ಇಂದಿನ ಇತಿಹಾಸ

ಡಿಸೆಂಬರ್ 12

ಮಹಾತ್ಮ ಗಾಂಧಿ ಜೀವನ ಚರಿತ್ರೆ ಆಧಾರಿತ ಮೈನೆ ಗಾಂಧಿ ಕೋ ನಹೀ ಮಾರಾ ಚಿತ್ರದಲ್ಲಿ ಮನೋಜ್ಞ ಅಭಿನಯ ನೀಡಿದ್ದ ಹಿಂದಿ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ಮಾಪಕ ಅನುಪಮ್ ಖೇರ್ ಅವರು ಅತ್ಯುತ್ತಮ ನಟ ಪ್ರಶಸ್ತಿಗೆ ಆಯ್ಕೆಯಾದರು. ಕರಾಚಿಯಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಿತಿ ಚಿತ್ರೋತ್ಸವ ಸಂದರ್ಭದಲ್ಲಿ ಈ ಪ್ರಶಸ್ತಿಯನ್ನು ಪ್ರಕಟಿಸಿತು.

2007:  `ಕನ್ನಡ ನಾಡಿನ ಜನತೆ ಯಾವುದೇ ಕಾರಣಕ್ಕೂ ಎರಡನೇ ದರ್ಜೆಯ ಪ್ರಜೆಗಳಾಗಬಾರದು. ಅಂತಹ ಸ್ಥಿತಿಗೆ ಅವಕಾಶ ಕೊಡಬಾರದು' ಎಂದು ಉಡುಪಿಯಲ್ಲಿ  (ಶಿವರಾಮ ಕಾರಂತ ಮಂಟಪ; ಗೋಪಾಲಕೃಷ್ಣ ಅಡಿಗ ವೇದಿಕೆ) ಆರಂಭವಾದ 74ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಪ್ರೊ. ಎಲ್.ಎಸ್. ಶೇಷಗಿರಿರಾವ್ ಸಮಸ್ತ ಕನ್ನಡಿಗರಿಗೆ ಕರೆ ನೀಡಿದರು. ಎಂಜಿಎಂ ಕಾಲೇಜಿನ ಎ.ಎಲ್.ಎನ್ ರಾವ್ ಕ್ರೀಡಾಂಗಣದಲ್ಲಿ ಆರಂಭಗೊಂಡ ಸಮ್ಮೇಳನದಲ್ಲಿ ಅವರು ಅಧ್ಯಕ್ಷೀಯ ಭಾಷಣ ಮಾಡಿದರು.

2007: ಮಹಾತ್ಮಾ ಗಾಂಧಿ ಆರಂಭಿಸಿದ್ದ ಅಹಮದಾಬಾದಿನ ಸಬರಮತಿ ಆಶ್ರಮಕ್ಕೆ ಧಕ್ಕೆಯಾಗದಂತೆ ನಗರ ಯೋಜನಾ ಕಾರ್ಯ ಕೈಗೊಳ್ಳುವಂತೆ ಸುಪ್ರೀಂಕೋರ್ಟ್ ಗುಜರಾತ್ ಸರ್ಕಾರಕ್ಕೆ ನಿರ್ದೇಶನ ನೀಡಿತು. ಅಹಮದಾಬಾದ್ ನಗರ ಯೋಜನಾ ಕಾರ್ಯಕ್ರಮ ಅನುಷ್ಠಾನಗೊಳಿಸುವಾಗ ಸಬರಮತಿ ಆಶ್ರಮದ ಭಾಗವನ್ನು ಕೆಡವದಂತೆ ನೋಡಿಕೊಳ್ಳಬೇಕು. ಈ ಜಾಗದ ಬದಲು ರಸ್ತೆ ನಿರ್ಮಿಸಲು ಪರ್ಯಾಯ ನಿವೇಶನ ಹುಡುಕಿಕೊಳ್ಳಬೇಕು ಎಂದು ನ್ಯಾಯಪೀಠ ಸರ್ಕಾರಕ್ಕೆ ಸೂಚಿಸಿತು. 2006ರ ಫೆಬ್ರುವರಿಯಲ್ಲಿ ಗುಜರಾತ್ ಸರ್ಕಾರದ ವಿರುದ್ಧ ಟ್ರಸ್ಟ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿತ್ತು. ಟ್ರಸ್ಟಿಗೆ 10,000 ರೂಪಾಯಿ ದಂಡವನ್ನೂ ವಿಧಿಸಿತ್ತು. ಸಬರಮತಿ ಹರಿಜನ ಆಶ್ರಮ ಟ್ರಸ್ಟ್, 57,000 ಚದರ ಮೀಟರ್ ಪ್ರದೇಶದಲ್ಲಿ ಹರಡಿಕೊಂಡಿದೆ. ರಸ್ತೆ  ನಿರ್ಮಾಣಕ್ಕಾಗಿ 1,000 ಚದರ ಮೀಟರ್ ನಿವೇಶನದಲ್ಲಿ ನಿರ್ಮಿಸಲಾದ ಕಟ್ಟಡಗಳನ್ನು ಕೆಡವಲು ಸರ್ಕಾರ ನಿರ್ಧರಿಸಿದೆ ಎಂದು ಟ್ರಸ್ಟ್  ಸುಪ್ರೀಂ ಕೋರ್ಟಿಗೆ ದೂರು ನೀಡಿತ್ತು. 1916ರಲ್ಲಿ ಸಬರಮತಿ ಆಶ್ರಮವನ್ನು ಗಾಂಧೀಜಿ ಸ್ಥಾಪಿಸಿದ್ದರು. 1917ರಿಂದ 1930ರವರೆಗೆ 13 ವರ್ಷಗಳ ಕಾಲ ಆಶ್ರಮದಲ್ಲಿ ತಂಗಿದ್ದ ಅವರು ಅಲ್ಲಿಂದಲೇ ಸ್ವಾತಂತ್ರ್ಯ ಹೋರಾಟ ಆರಂಭಿಸಿದ್ದರು. ಈ ಆಶ್ರಮ ರಾಷ್ಟ್ರೀಯ ಸ್ಮಾರಕವಾಗಿರುವುದರಿಂದ ಅದನ್ನು ಕೆಡವಬಾರದು ಎಂದು ಟ್ರಸ್ಟ್ ಅರ್ಜಿಯಲ್ಲಿ ಮನವಿ ಮಾಡಿಕೊಂಡಿತ್ತು. ಕೇಂದ್ರ ಸಂಸ್ಕೃತಿ ಸಚಿವಾಲಯ ಸುಪ್ರೀಂಕೋರ್ಟಿಗೆ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲೂ ಸಬರಮತಿ ಆಶ್ರಮದ ಭಾಗವನ್ನು ಕೆಡವುದನ್ನು ವಿರೋಧಿಸಿತ್ತು. ಹಿರಿಯ ಗಾಂಧೀವಾದಿಗಳಾದ ನಿರ್ಮಲಾ ದೇಶಪಾಂಡೆ ಹಾಗೂ ಬಿ. ಆರ್. ನಂದಾ ಆಶ್ರಮಕ್ಕೆ ಧಕ್ಕೆಯಾಗುವುದನ್ನು ವಿರೋದಿಸಿದ್ದಾರೆ ಎಂದು ಪ್ರಮಾಣಪತ್ರದಲ್ಲಿ ಕೇಂದ್ರ ಹೇಳಿತ್ತು.

2007: ವಿಶ್ವದ ಬೃಹತ್ ಹಣಕಾಸು ಸೇವಾ ಸಂಸ್ಥೆ  `ಸಿಟಿ ಗ್ರೂಪ್'ನ  ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಭಾರತೀಯ ಮೂಲದ ವಿಕ್ರಂ ಪಂಡಿತ್ ಅವರನ್ನು  ನೇಮಕ ಮಾಡಲಾಯಿತು. 50 ವರ್ಷ ವಯಸ್ಸಿನ ವಿಕ್ರಮ್ ಪಂಡಿತ್ ಸಿಟಿ ಗ್ರೂಪಿನ ಆಡಳಿತ ಮಂಡಳಿ ನಿರ್ದೇಶಕರಾಗಿದ್ದರು. ಅಲ್ಲದೆ ಸಿಟಿ ಗ್ರೂಪಿನ ಬಂಡವಾಳ ಹೂಡಿಕೆ ವಿಭಾಗದ ಮುಖ್ಯಸ್ಥರಾಗಿದ್ದರು. ಬ್ಯಾಂಕ್ ಭಾರಿ ನಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಾರ್ಲ್ಸ್ ಪ್ರಿನ್ಸ್ ರಾಜೀನಾಮೆ ನೀಡಿದ್ದರಿಂದ ವಿಕ್ರಮ್ ಅವರನ್ನು ಈ ಸ್ಥಾನಕ್ಕೆ ನೇಮಿಸಲಾಯಿತು.

2007: ಜೀವಿಗಳಿರುವ ಭೂಮಿಯ ಮೇಲಿರುವಂತೆ ಇಂಗಾಲ ಮತ್ತು ಜಲಜನಕದ ಅಂಶಗಳು ಮಂಗಳ ಗ್ರಹದಲ್ಲಿಯೂ ಇರುವುದನ್ನು ಪತ್ತೆ ಮಾಡಿರುವುದಾಗಿ ವಿಜ್ಞಾನಿಗಳು ಬಹಿರಂಗಪಡಿಸಿದರು. ಮಂಗಳ ಗ್ರಹ ವೀಕ್ಷಣೆಗಾಗಿ ಅಮೆರಿಕದ ನಾಸಾ ಉಡ್ಡಯನ ಮಾಡಿರುವ ಉಪಗ್ರಹ ಆರ್ಬಿಟರ್ ಕಳುಹಿಸಿದ ಚಿತ್ರಗಳ ಆಧಾರದ ಮೇಲೆ ಅಮೆರಿಕ ಮೂಲದ ಕಾರ್ ನೆಜಿ ಇನ್ಸ್ಟಿಟ್ಯೂಟ್ ಆಫ್ ಜಿಯೋಫಿಸಿಕಲ್ ಲ್ಯಾಬೊರೇಟರಿ ವಿಜ್ಞಾನಿಗಳು ನಡೆಸಿದ ಸಂಶೋಧನೆಯಿಂದ ಈ ಅಂಶ ಬೆಳಕಿಗೆ ಬಂದಿತು. ಮಂಗಳ ಗ್ರಹದಲ್ಲಿ ಇಂಗಾಲ ಹಾಗೂ ಜಲಜನಕದ ಅಂಶಗಳು ಪತ್ತೆಯಾಗಿರುವುದು ಇದೇ ಮೊದಲು ಎಂದು `ಸೈನ್ಸ್ ಡೈಲಿ' ಪತ್ರಿಕೆ ವರದಿ ಮಾಡಿತು. `ಮಂಗಳ ಗ್ರಹ ಸಾವಯವ ಅಂಶಗಳನ್ನು ಸೃಷ್ಟಿಸಬಲ್ಲುದು ಎಂಬುದು ಇದೀಗ ನಮಗೆ ಗೊತ್ತಾಗಿದೆ. ಬೇಸಿಗೆಯಲ್ಲಿ ಮಂಗಳದ ಗ್ರಹದಲ್ಲಿ ಜ್ವಾಲಾಮುಖಿಗಳು ಕೆಲವು ವೇಳೆ ಇಂಗಾಲದ ಡೈಆಕ್ಸೈಡ್ ಬಿಡುಗಡೆ ಮಾಡುತ್ತವೆ. ಈ ಪ್ರಕ್ರಿಯೆ ನಡೆಯುವಾಗ ಅತಿ ಎತ್ತರದ ತನಕ ದೂಳು ಚಿಮ್ಮುತ್ತದೆ.  ಇದು ಭೂಮಿಯ ಮೇಲೂ ನಡೆಯುವ ವಿದ್ಯಮಾನ ಎಂದು ವಿಜ್ಞಾನಿಗಳು ವಿಶ್ಲೇಷಿಸಿದರು. ಚಳಿಗಾಲದ ಅವಧಿಯಲ್ಲಿ ಮಂಗಳ ಗ್ರಹದ ದಕ್ಷಿಣ ಧ್ರುವದ ತಾಪಮಾನ ಮೈನಸ್ 129 ಡಿಗ್ರಿ ಸೆಲ್ಷಿಯಸ್ ನಷ್ಟು ಇರುತ್ತದೆ. ಆಗ ಅದರ ಮೇಲೆ 50 ಸೆಂಟಿ ಮೀಟರಿನಷ್ಟು ದಪ್ಪ ಮಂಜು ಹೆಪ್ಪುಗಟ್ಟಿರುತ್ತದೆ. ಬೇಸಿಗೆಯಲ್ಲಿ ಈ ಮಂಜು ಕರಗಿ ಇದರಿಂದ ಅನಿಲ ಉತ್ಪತ್ತಿಯಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಕಾರ್ಬನ್ ಡೈಆಕ್ಸೈಡ್ ಬಿಡುಗಡೆಯಾಗುತ್ತದೆ ಎಂದು ನಾಸಾದ ವಿಜ್ಞಾನಿ ಕ್ಯಾಂಡಿಕ್ ಹ್ಯಾನ್ಸನ್ ವಿಶ್ಲೇಷಿಸಿದರು. ಮಂಗಳ ಗ್ರಹದಲ್ಲಿ ಕಾರ್ಬನ್ ಡೈಆಕ್ಸೈಡ್ ಬಿಡುಗಡೆಯಾಗುವಾಗ ಕಾಣಿಸಿಕೊಳ್ಳುವ ದೂಳಿನ ಸ್ವರೂಪವನ್ನು ನಾಸಾ ಉಪಗ್ರಹ ಸೆರೆ ಹಿಡಿದಿದೆ.

2007: 1985ರ `ಕನಿಷ್ಕ' ಏರ್ ಇಂಡಿಯಾ ವಿಮಾನ ಸ್ಫೋಟ ಪ್ರಕರಣದಲ್ಲಿ ಮೃತರಾದ ಕೆನಡಾದಲ್ಲಿನ ಭಾರತೀಯ ಮೂಲದ ಕುಟುಂಬದವರಿಗೆ ಪರಿಹಾರ ನೀಡುವಲ್ಲಿ ಕೆನಡ ಸರ್ಕಾರ ತಾರತಮ್ಯ ತೋರುತ್ತಿದೆ. ಅಲ್ಲದೆ ಅವರನ್ನು ಎರಡನೇ ದರ್ಜೆಯ ನಾಗರಿಕರಂತೆ ನಡೆಸಿಕೊಳ್ಳುತ್ತಿದೆ ಎಂದು ಪ್ರಕರಣದ ತನಿಖೆ ನಡೆಸಿದ ಆಯೋಗ ತನ್ನ ಮಧ್ಯಂತರ ವರದಿಯಲ್ಲಿ ಹೇಳಿದೆ. 211 ಪುಟದ ಮಧ್ಯಂತರ ವರದಿ ನೀಡಿರುವ ಆಯೋಗ ಮೃತಪಟ್ಟ ಕುಟುಂಬಗಳು ಪರಿಹಾರ ಪಡೆಯುವಲ್ಲಿ ಅನುಭವಿಸುತ್ತಿರುವ ವೇದನೆಯನ್ನು ವಿವರಿಸಿದೆ. `ದುರಂತದ ಅಗಾಧತೆಯನ್ನು ಅರ್ಥಮಾಡಿಕೊಳ್ಳುವಲ್ಲಿ ಕೆನಡಾ ಸರ್ಕಾರ ವಿಫಲವಾಗಿದೆ. 1985ರಲ್ಲಿ ಹಠಾತ್ತಾಗಿ ಈ ದುರ್ಘಟನೆ ಸಂಭವಿಸಿದಾಗ ಅದನ್ನು ಜವಾಬ್ದಾರಿಯುತವಾಗಿ ನಿಭಾಯಿಸುವಂಥವರು ಅಂದು ಕೆನಡಾ ಸರ್ಕಾರದಲ್ಲಿ ಇರಲಿಲ್ಲ' ಎಂದು ಸಮಿತಿಯ ಮುಖ್ಯಸ್ಥ ಜಾನ್ ಮೇಜರ್ ಹೇಳಿದರು.

2007: ಸೊಹ್ರಾಬ್ದುದೀನ್ ಶೇಖ್ ನಕಲಿ ಎನ್ಕೌಂಟರನ್ನು ಬಹಿರಂಗವಾಗಿ ಸಮರ್ಥಿಸಿಕೊಂಡ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ವಿವರಣೆ ನೀಡುವಂತೆ ನೋಟಿಸ್ ನೀಡಿತು. ನಕಲಿ ಎನ್ಕೌಂಟರ್ ಕುರಿತ ಪ್ರಕರಣದ ವಿಚಾರಣೆ ಗುಜರಾತಿನ ಕೆಳ ನ್ಯಾಯಾಲಯದಲ್ಲಿ ನಡೆಯುತ್ತಿರುವುದರಿಂದ ಮೋದಿ ಹೇಳಿಕೆ ನ್ಯಾಯಾಂಗ ನಿಂದನೆಗೆ ಸಮ. ಅಲ್ಲದೇ ಮೋದಿ ಅವರನ್ನು ಈ ಪ್ರಕರಣದಲ್ಲಿ ಸಹ ಆರೋಪಿಯಾಗಿಸಲು ಸೂಚನೆ ನೀಡಬೇಕು ಎಂದು ಸೊಹ್ರಾಬ್ದುದೀನ್ ಸಹೋದರ ರುಬಾಬುದ್ದೀನ್ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.

2007: ಶಾಲೆಯಲ್ಲಿ ತನ್ನ ಸಹಪಾಠಿಯನ್ನೇ ಗುಂಡಿಕ್ಕಿ ಕೊಲೆಗೈದ ಆರೋಪ ಎದುರಿಸುತ್ತಿರುವ ಗುಡಗಾಂವಿನ ಯೂರೊ ಇಂಟರ್ ನ್ಯಾಷನಲ್ ಸ್ಕೂಲಿನ ಇಬ್ಬರು ವಿದ್ಯಾರ್ಥಿಗಳಾದ ಆಕಾಶ್ ಯಾದವ್ ಮತ್ತು ವಿಕಾಸನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಇವರಿಬ್ಬರ ಪಾಲಕರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು. ಆರೋಪಿ ವಿದ್ಯಾರ್ಥಿಗಳನ್ನು ಹರಿಯಾಣದ ಸೋನೆಪತ್ ಬಾಲಾಪರಾಧಿಗಳ ಕಾರಾಗೃಹದಲ್ಲಿ ಇರಿಸಲಾಯಿತು.

2007: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಾಕಿಸ್ಥಾನ ತಂಡದ ವಿರುದ್ಧದ ಮೂರು ಪಂದ್ಯಗಳ ಸರಣಿಯ ಅಂತಿಮ ಪಂದ್ಯ ಡ್ರಾದಲ್ಲಿ ಕೊನೆಗೊಂಡರೂ ಸರಣಿಯನ್ನು ಭಾರತ 1-0ರಲ್ಲಿ ತನ್ನದಾಗಿಸಿಕೊಂಡಿತು. ದೆಹಲಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕುಂಬ್ಳೆ ಬಳಗ 6 ವಿಕೆಟುಗಳ ಗೆಲುವು ಪಡೆದಿತ್ತು. ಈ ಮೂಲಕ ಭಾರತ 27 ವರ್ಷಗಳ ಬಿಡುವಿನ ಬಳಿಕ ಪಾಕ್ ವಿರುದ್ಧ ತವರು ನೆಲದಲ್ಲಿ ಸರಣಿ ಗೆದ್ದ ಸಾಧನೆ ಮಾಡಿತು.

2007: ಹಿರಿಯ ಮುಖಂಡ ಎಂ.ಪಿ.ಪ್ರಕಾಶ್ ಬಣ ಜೆ.ಡಿ (ಎಸ್) ಸಂಬಂಧ ಕಡಿದುಕೊಳ್ಳುವ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿತು. ಆದರೆ ಮುಂದೆ ಯಾವ ಪಕ್ಷ ಸೇರಬೇಕೆಂಬ ಬಗ್ಗೆ ಒಮ್ಮತದ ತೀರ್ಮಾನ ತೆಗೆದುಕೊಳ್ಳಲು ಅದಕ್ಕೆ ಸಾಧ್ಯವಾಗಲಿಲ್ಲ. ಪ್ರಕಾಶ್ ಅವರ ಜೊತೆಗೆ ಹನ್ನೊಂದು ಮಂದಿ ಮಾಜಿ ಶಾಸಕರು ಮತ್ತು ಇಬ್ಬರು ವಿಧಾನಪರಿಷತ್ ಸದಸ್ಯರು ಜನತಾದಳ (ಎಸ್) ತೊರೆದರು.

2007: ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದ ಪಶುಸಂಗೋಪನಾ ಇಲಾಖೆಯ ಮಾಜಿ ಸಚಿವ ಅದಿತ್ಯ ಸಿಂಗ್ ಸೇರಿದಂತೆ ನಾಲ್ವರಿಗೆ ನೆವಾಡಾದ ತ್ವರಿತ ನ್ಯಾಯಾಲಯ  ಜೀವಾವಧಿ ಶಿಕ್ಷೆ ವಿಧಿಸಿತು. ಜೀವಾವಧಿ ಶಿಕ್ಷೆ ಪಡೆದ ಇತರ ಮೂವರು: ನರಸಿಂಗ್ ಸಿಂಗ್, ತರುಣ್ ಸಿಂಗ್ ಮತ್ತು ಮುಖೇಶ್ ಸಿಂಗ್. 2006ರ ಜನವರಿ 6 ರಂದು ಅಕ್ಬರ್ ಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಲಲನಸಿಂಗ್ ಮುಖಿಯಾ ಎಂಬಾತನನ್ನು ಆರೋಪಿಗಳು ಗುಂಡಿಕ್ಕಿ ಕೊಲೆ ಮಾಡಿದ್ದರು. ಸಾಕ್ಷಿಗಳ ಅಭಾವದಿಂದಾಗಿ ಅರ್ಜುನ್ ಸಿಂಗ್ ಮತ್ತು ನಿರಂಜನ ಸಿಂಗ್ ಎಂಬುವವರನ್ನು ಈ ಹಿಂದೆಯೇ ನ್ಯಾಯಮೂರ್ತಿ ವಿಜಯ್ ಪಾಠಕ್ ಅವರ  ತ್ವರಿತ ನ್ಯಾಯಾಲಯ ಆರೋಪ ಮುಕ್ತಗೊಳಿಸಿತ್ತು.

2006: ಪ್ರಭಾವಶಾಲಿ ಗುರ್ಜರ್ ಸಮುದಾಯ ವಿಧಿಸಿದ್ದ ದೀರ್ಘ ಕಾಲದ ನಿಷೇಧವನ್ನು ಉಲ್ಲಂಘಿಸಿ ಸುಮಾರು 400ಕ್ಕೂ ಹೆಚ್ಚು ಮಂದಿ ದಲಿತರು ಅರ್ಚಕ ಭೂಪ ಹಝಾರಿ ಬಲಾಯಿ ನೇತೃತ್ವದಲ್ಲಿ ರಾಜಸ್ಥಾನದ ಭಿಲ್ವಾರ ಜಿಲ್ಲೆಯ ಸುಲಿಯಾ ಗ್ರಾಮದ ಚಾಮುಂಡಿ ದೇವಾಲಯದ ಗರ್ಭಗುಡಿಯನ್ನು ಸಾಮೂಹಿಕವಾಗಿ ಪ್ರವೇಶಿಸಿ ಅಲ್ಲೇ ದೇವಿಗೆ ಪೂಜೆ ಸಲ್ಲಿಸಿದರು. ಸಾಮಾಜಿಕ ಕಾರ್ಯಕರ್ತೆ ಅರುಣಾ ರಾಯ್, ಮಮತಾ ಜೈಟ್ಲಿ ಮತ್ತಿತರರು ದಲಿತರ ದೇಗುಲ ಪ್ರವೇಶ ಸಂದರ್ಭದಲ್ಲಿ ಹಾಜರಿದ್ದು ಬೆಂಬಲ ವ್ಯಕ್ತಪಡಿಸಿದರು. `ದಲಿತ ಆದಿವಾಸಿ ಅಧಿಕಾರ ಅಭಿಯಾನ' ಬ್ಯಾನರ್ ಅಡಿಯಲ್ಲಿ ನವೆಂಬರ್ 18ರಂದು ನಡೆದ ಸಭೆಯಲ್ಲಿ ದಲಿತರು ದೇವಾಲಯ ಪ್ರವೇಶದ ಯೋಜನೆ ರೂಪಿಸಿದ್ದರು. ಪ್ರತಿಭಟಿಸುವ ಸಲುವಾಗಿ ಸ್ಥಳದಲ್ಲಿ ಜಮಾಯಿಸಿದ್ದ ಗುರ್ಜರ್ ಸಮುದಾಯದ ಮಂದಿಯನ್ನು ಚದುರಿಸಿದ ಪೊಲೀಸರು ಅವರ ನಾಯಕ ರಮ್ತಾ ಗುರ್ಜರ್ ಅವರಿಗೆ ಮಾತ್ರ ದೇವಾಲಯದಲ್ಲಿ ಹಾಜರಿರಲು ಅವಕಾಶ ನೀಡಿದರು. ಪಂಚಾಯತಿ ರಾಜ್ ಸಚಿವ ಕಲು ಲಾಲ್ ಗುರ್ಜರ್ ಮತ್ತು ಸ್ಥಳೀಯ ಶಾಸಕರು ನವೆಂಬರ್ 26ರಂದು ದಲಿತರಿಗೆ ದೇವಾಲಯ ಪ್ರವೇಶಕ್ಕೆ ಸಹಕರಿಸಲು ಯತ್ನಿಸಿದ್ದರು. ಆದರೆ ಆ ದಿನ ತಮ್ಮ ಜೊತೆಗೆ ದೇಗುಲ ಪ್ರವೇಶ ಮಾಡುವಂತೆ ಸಚಿವರು ಮಾಡಿದ್ದ ಮನವಿಯನ್ನು ಸುಲಿಯಾ ಗ್ರಾಮದ 40 ದಲಿತ ಕುಟುಂಬಗಳು ತಿರಸ್ಕರಿಸಿದ್ದವು. ಬದಲಾಗಿ ಆ ದಿನವನ್ನು `ಕರಾಳ ದಿನ' ಎಂದು ಆಚರಿಸಿದ್ದವು. ಡಿಸೆಂಬರ್ 12ರಂದು ತಾವು ಸ್ವತಂತ್ರವಾಗಿಯೇ ದೇವಾಲಯ ಪ್ರವೇಶಿಸುವುದಾಗಿ ದಲಿತರು ಪ್ರಕಟಿಸಿದ್ದರು.

2006: ಕರ್ನಾಟಕದ ಕೊಪ್ಪಳ ಜಿಲ್ಲೆಯ ಅವಕಾಶ ವಂಚಿತರಿಗಾಗಿ ಸಮುದಾಯ ಸಂಪನ್ಮೂಲ ಕೇಂದ್ರ ನಿರ್ಮಿಸುವ ಯೋಜನೆಗಾಗಿ ಬೆಂಗಳೂರು ಮೂಲದ `ಸಮೂಹ' ಸರ್ಕಾರೇತರ ಸಂಘಟನೆಗೆ ಜಪಾನ್ ಸರ್ಕಾರದಿಂದ 88,433 ಅಮೆರಿಕನ್ ಡಾಲರುಗಳ ಅನುದಾನ ಮಂಜೂರಾಯಿತು. ಇದಕ್ಕೆ ಸಂಬಂಧಿಸಿದ ಒಪ್ಪಂದಪತ್ರಕ್ಕೆ ಜಪಾನಿ ರಾಜತಂತ್ರಜ್ಞ ಯೊಶಿಯಾಕಿ ಕೊಡಕಿ ಮತ್ತು `ಸಮೂಹ'ದ ಟಿ. ಪ್ರದೀಪ ಅವರು  ತಮಿಳುನಾಡಿನ ಚೆನ್ನೈಯಲ್ಲಿ ಸಹಿ ಹಾಕಿದರು. `ಸಮೂಹ'ದ ನೂತನ ಕೇಂದ್ರವು ಅಂಗವಿಕಲರಿಗಾಗಿ ಚಿಕಿತ್ಸಾಲಯ, ನೆರವು ಮತ್ತು ಉಪಕರಣಗಳ ಕಾರ್ಯಾಗಾರ ಮತ್ತು ಕಿವುಡರಿಗಾಗಿ ಶ್ರವಣ ತಪಾಸಣಾ ಕೊಠಡಿ ಹಾಗೂ ಆಪ್ತ ಸಲಹಾ ಕೇಂದ್ರಗಳನ್ನು ಹೊಂದಿರುತ್ತದೆ. ಕೇಂದ್ರವು ರೈತರಿಗೆ ಜಲಾನಯನ ನಿರ್ವಹಣೆ ಬಗೆಗೂ ತರಬೇತಿ ನೀಡುವುದು. 

2006: ಕೇಂದ್ರದ ಯುಪಿಎ ಸರ್ಕಾರದ `ಅಲ್ಪಸಂಖ್ಯಾತರ ಓಲೈಕೆ' ನೀತಿಗಳ ವಿರುದ್ಧ ಡಿಸೆಂಬರ್ 15ರಿಂದ ರಾಷ್ಟ್ರವ್ಯಾಪಿ `ಪ್ರತಿಭಟನಾ ಸಪ್ತಾಹ' ಸಂಘಟಿಸಲು ಬಿಜೆಪಿ ನಿರ್ಧರಿಸಿತು. ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸಭಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ರಾಷ್ಟ್ರದ ಸಂಪನ್ಮೂಲದಲ್ಲಿ ಮುಸ್ಲಿಮರಿಗೆ ಆದ್ಯತೆ ಸಿಗಬೇಕು ಎಂಬುದಾಗಿ ನೀಡಿರುವ ಹೇಳಿಕೆಯನ್ನು  ಬಲವಾಗಿ ಖಂಡಿಸಿ, ಪ್ರತಿಭಟನಾ ಸಪ್ತಾಹ ಸಂಘಟಿಸುವ ನಿಧರ್ಾರವನ್ನು ಪಕ್ಷ ಕೈಗೊಂಡಿತು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಧ್ಯಕ್ಷತೆಯಲ್ಲಿ ನಡೆದ ಪಕ್ಷದ ಸಂಸದೀಯ ಸಭಯಲ್ಲಿ ಈ ನಿಟ್ಟಿನ ನಿರ್ಣಯ ಕೈಗೊಳ್ಳಲಾಯಿತು.

2006: ಹುಬ್ಬಳ್ಳಿಯ ಹಾನಗಲ್ ಸಂಗೀತ ಪ್ರತಿಷ್ಠಾನದ ವತಿಯಿಂದ ಖ್ಯಾತ ಹಿಂದುಸ್ಥಾನೀ ಗಾಯಕಿ ದಿವಂಗತ ಕೃಷ್ಣಾ ಹಾನಗಲ್ ಸ್ಮರಣಾರ್ಥ ನೀಡಲಾಗುವ ಪ್ರಸಕ್ತ ಸಾಲಿನ ರಾಷ್ಟ್ರೀಯ ಪುರಸ್ಕಾರಕ್ಕೆ ಕರ್ನಾಟಕ ಮೂಲದ ಮುಂಬೈಯ ಖ್ಯಾತ ಗಾಯಕ ಪಂಡಿತ ಶಿವಾನಂದ ಪಾಟೀಲ ಅವರನ್ನು ಆರಿಸಲಾಗಿದೆ ಎಂದು ಗಾನವಿದುಷಿ ಡಾ. ಗಂಗೂಬಾಯಿ ಹಾನಗಲ್ ಪ್ರಕಟಿಸಿದರು.

2006: ಎರಡು ದಿನಗಳ ಹಿಂದೆ ಫ್ಲೋರಿಡಾದಿಂದ ಅಂತರಿಕ್ಷಕ್ಕೆ ಜಿಗಿದಿದ್ದ `ಡಿಸ್ಕವರಿ ನೌಕೆ' ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಯಶಸ್ವಿಯಾಗಿ ಇಳಿಯಿತು. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಸ್ಟೇಷನ್ ಕಮಾಂಡರ್ ಮೈಕಲ್ ಲೊಪೆಜ್ ಅಲೆಗ್ರಿಯಾ ಅವರು ಗಗನಯಾತ್ರಿಗಳನ್ನು ಸ್ವಾಗತಿಸಿದರು.

2005: ಮಹಾತ್ಮ ಗಾಂಧಿ ಜೀವನ ಚರಿತ್ರೆ ಆಧಾರಿತ ಮೈನೆ ಗಾಂಧಿ ಕೋ ನಹೀ ಮಾರಾ ಚಿತ್ರದಲ್ಲಿ ಮನೋಜ್ಞ ಅಭಿನಯ ನೀಡಿದ್ದ ಹಿಂದಿ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ಮಾಪಕ ಅನುಪಮ್ ಖೇರ್ ಅವರು ಅತ್ಯುತ್ತಮ ನಟ ಪ್ರಶಸ್ತಿಗೆ ಆಯ್ಕೆಯಾದರು. ಕರಾಚಿಯಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಿತಿ ಚಿತ್ರೋತ್ಸವ ಸಂದರ್ಭದಲ್ಲಿ ಈ ಪ್ರಶಸ್ತಿಯನ್ನು ಪ್ರಕಟಿಸಿತು.

2005: ಖ್ಯಾತ ನಿರ್ದೇಶಕ, ನಿರ್ಮಾಪಕ ರಮಾನಂದ ಸಾಗರ್ ಈದಿನ ಮಧ್ಯರಾತ್ರಿ ನಿಧನರಾದರು. ಕಿರುತೆರೆಯಲ್ಲಿ ಇತಿಹಾಸ ನಿರ್ಮಿಸಿದ ರಾಮಾಯಣ ಸೇರಿದಂತೆ ಅನೇಕ ಜನಪ್ರಿಯ ಧಾರಾವಾಹಿ ಮತ್ತು ಚಲನಚಿತ್ರಗಳನ್ನು ಅವರು ನಿರ್ಮಿಸಿ ನಿರ್ದೇಶಿಸಿದ್ದರು. 

2005: ಬಿಜೆಪಿ ಆಡಳಿತ ಇರುವ ಐದು ರಾಜ್ಯಗಳಲ್ಲಿ ಮೌಲ್ಯ ವರ್ಧಿತ ತೆರಿಗೆ ಪದ್ಧತಿಯನ್ನು (ವ್ಯಾಟ್) ಜಾರಿಗೊಳಿಸಲು ಈ ಐದು ರಾಜ್ಯಗಳ ಬಿಜೆಪಿ ಮುಖ್ಯಮಂತ್ರಿಗಳ ಸಭೆಯಲ್ಲಿ ನಿರ್ಧರಿಸಲಾಯಿತು.

2005: ಶ್ರಿಲಂಕಾ ತಂಡದ ಚಮಿಂದಾದಾಸ್ ಅವರು ದೆಹಲಿಯಲ್ಲಿ ನಡೆದ ಟೆಸ್ಟ್ ಕ್ರಿಕೆಟಿನಲ್ಲಿ 300 ವಿಕೆಟ್ ಪಡೆದ ಶ್ರೀಲಂಕಾದ ಎರಡನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2005: ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಹಣ ಪಡೆಯುವ ಮೂಲಕ ಕೋಬ್ರಾಪೋಸ್ಟ್ ಡಾಟ್ ಕಾಮ್ ಸಂಸ್ಥೆ ರಚಿಸಿದ ವ್ಯೂಹದಲ್ಲಿ 11 ಮಂದಿ ಸಂಸದರು ಪಕ್ಷಾತೀತವಾಗಿ ಸಿಕ್ಕಿ ಬಿದ್ದ ವಿಚಾರವನ್ನು ಆಜ್ ತಕ್  ಟಿವಿ ವಾಹಿನಿ ಪ್ರಸಾರ ಮಾಡಿತು. ಆಪರೇಷನ್ ದುರ್ಯೋಧನ್ ಹೆಸರಿನಲ್ಲಿ ನಡೆಸಿದ ಈ ಕಾರ್ಯಾಚರಣೆಯಲ್ಲಿ ಬಿಜೆಪಿ (6), ಕಾಂಗ್ರೆಸ್(1), ಬಿಎಸ್ಪಿ (3) ಆರ್ ಜೆ ಡಿ (1) ಸದಸ್ಯರು ಸಿಕ್ಕಿ ಬಿದ್ದರು. ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿ ಅವರು ಈ ಲಂಚ ಹಗರಣದ ತನಿಖೆಗೆ ಆದೇಶಿಸಿದರೆ, ಮೇಲ್ಮನೆ ಸಂಸದರೊಬ್ಬರ  ವಿರುದ್ಧದ ಪ್ರಕರಣವನ್ನು ರಾಜ್ಯಸಭಾ ಅಧ್ಯಕ್ಷ ಭೈರೋನ್ಸಿಂಗ್ ಶೆಖಾವತ್ ಸಂಹಿತಾ ಸಮಿತಿಗೆ ಒಪ್ಪಿಸಿದರು.

2005: ಶ್ರೀಲಂಕಾ ವಿರುದ್ಧ ನಡೆದ ಎರಡನೇ ಟೆಸ್ಟ್ ಕ್ರಿಕೆಟಿನ ಎರಡನೇ ಇನ್ನಿಂಗ್ಸಿನಲ್ಲಿ 50 ರನ್ ಗಳಿಸುವ ಮೂಲಕ 8000 ರನ್ ಗಡಿ ದಾಟಿದ ಭಾರತದ ಮೂರನೇ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆಗೆ ನಾಯಕ ರಾಹುಲ್ ದ್ರಾವಿಡ್ ಪಾತ್ರರಾದರು.   
2000: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಬೆಂಗಳೂರಿನಲ್ಲಿ ನಿಧನರಾದರು.

1999: ಅಮೆರಿಕದ ಖ್ಯಾತ ಸಾಹಿತಿ ಜೋಸೆಫ್ ಹೆಲ್ಲರ್ ನ್ಯೂಯಾರ್ಕಿನ ಈಸ್ಟ್ ಹ್ಯಾಂಪ್ಟನ್ನಿನಲ್ಲಿ ತಮ್ಮ 76ನೇ ವಯಸ್ಸಿನಲ್ಲಿ ನಿಧನರಾದರು. `ಕ್ಯಾಚ್-22' ಕಾದಂಬರಿ ಇವರಿಗೆ ಅಪಾರ ಖ್ಯಾತಿ ತಂದು ಕೊಟ್ಟಿತು.

1965: ವಿದೇಶೀ ಸಹಯೋಗದೊಂದಿಗೆ ನಿರ್ಮಿಸಲಾದ ಭಾರತದ ಮೊತ್ತ ಮೊದಲ ಸೇನಾ ಟ್ಯಾಂಕ್ `ವೈಜಯಂತ' ತಮಿಳುನಾಡಿನ ಆವಡಿಯಲ್ಲಿನ ಹೆವಿ ವೆಹಿಕಲ್ಸ್ ಫ್ಯಾಕ್ಟರಿಯಿಂದ ಬಿಡುಗಡೆಯಾಯಿತು. ಭಾರತದ ಪೂರ್ಣ ಸ್ವದೇಶೀ ಟ್ಯಾಂಕ್ `ಅರ್ಜುನ್' 1993ರಲ್ಲಿ ಸೇನೆಗೆ ಸೇರ್ಪಡೆಗೊಂಡಿತು.

1963: ಕೀನ್ಯಾ ಸ್ವಾತಂತ್ರ್ಯ ಗಳಿಸಿತು. ಜೊಮೊ ಕೆನ್ಯಾಟಾ ಮೊದಲ ಪ್ರಧಾನಿಯಾದರು. ಒಂದು ವರ್ಷದ ಬಳಿಕ ಕೀನ್ಯ ಗಣರಾಜ್ಯವಾಯಿತು. ಆಗ ಜೊಮೊ ಕೆನ್ಯಾಟಾ ರಾಷ್ಟ್ರದ ಅಧ್ಯಕ್ಷರಾದರು.

1952: ಸಾಹಿತಿ ಜಿ.ಎಂ. ಹೆಗಡೆ ಜನನ.

1950: ತಮಿಳು ಹಾಗೂ ಹಿಂದಿ ಚಿತ್ರನಟ ರಜನಿಕಾಂತ್ ಎಂದೇ ಖ್ಯಾತರಾದ ಶಿವಾಜಿರಾವ್ ಗಾಯಕ್ ವಾಡ್ ಹುಟ್ಟಿದ ದಿನ.

1948: ಸಾಹಿತಿ, ಮನಃಶಾಸ್ತ್ರಜ್ಞ ಡಾ. ಸಿ.ಆರ್. ಚಂದ್ರಶೇಖರ್ ಜನನ.

1940: ಭಾರತೀಯ ರಾಜಕಾರಣಿ ಶರದ್ ಪವಾರ್ ಹುಟ್ಟಿದ ದಿನ.

1934: ಸಾಹಿತಿ ನ. ರತ್ನ ಜನನ.

1911: ಸಾಹಿತಿ ಜಯಲಕ್ಷ್ಮಿ ಶ್ರೀನಿವಾಸ್ ಜನನ.

1911: ಐದನೇ ದೊರೆ ಜಾರ್ಜ್ ಸಮ್ಮುಖದಲ್ಲಿ ನಡೆದ ದೆಹಲಿ ದರ್ಬಾರ್ ಬಂಗಾಳದ ವಿಭಜನೆಯನ್ನು ರದ್ದುಪಡಿಸಿತು. ಮತ್ತು ದೆಹಲಿಯನ್ನು ಹೊಸ ರಾಜಧಾನಿ ಎಂಬುದಾಗಿ ಪ್ರಕಟಿಸಿತು.

1905: ಭಾರತೀಯ ಕಾದಂಬರಿಕಾರ ಹಾಗೂ ಸಣ್ಣ ಕಥೆಗಾರ ಮುಲ್ಕ್ ರಾಜ್ ಆನಂದ್ ಹುಟ್ಟಿದ ದಿನ.

1901: ಸೇಂಟ್ ಜಾನ್ಸ್ ನ್ಯೂಫೌಂಡ್ ಲ್ಯಾಂಡಿನಲ್ಲಿ ಗುಗ್ಲೀಯೆಲ್ಮೊ ಮಾರ್ಕೊನಿ ಅವರು ಇಂಗ್ಲೆಂಡಿನ ಕೋರ್ನವಾಲಿನಿಂದ ಪೋಲ್ದು ಅವರು ಕಳುಹಿಸಿದ ಮೊತ್ತ ಮೊದಲ `ಟ್ರಾನ್ಸ್ ಅಟ್ಲಾಂಟಿಕ್ ರೇಡಿಯೋ ಟ್ರಾನ್ಸ್ ಮಿಷನ್' ಸ್ವೀಕರಿಸಿದರು. ಅಟ್ಲಾಂಟಿಕ್ ಸಾಗರ ದಾಟಿ ಬಂದ `ಸಂಕೇತ' ಸ್ವೀಕರಿಸುವಲ್ಲಿ ಮಾರ್ಕೊನಿ ಯಶಸ್ವಿಯಾದದು ಮುಂದಿನ ವರ್ಷಗಳಲ್ಲಿ ರೇಡಿಯೊ ಸಂಪರ್ಕ, ಪ್ರಸಾರಗಳ ವ್ಯಾಪಕ ಅಭಿವೃದ್ಧಿಯ ಆರಂಭವಾಯಿತು. ಈ ರೀತಿ ಸಂದೇಶ ರವಾನೆ ಅಸಾಧ್ಯವೆಂಬ ಅಭಿಪ್ರಾಯವನ್ನು ಗಣಿತ ತಜ್ಞರು ವ್ಯಕ್ತಪಡಿಸಿದ್ದರು.

1900: ಶಿಕ್ಷಣ ತಜ್ಞ, ವಿದ್ವಾಂಸ ಎಸ್. ಸಿ. ನಂದೀಮಠ (12-12-1900ರಿಂದ 21-11-1975) ಅವರು ಚೆನ್ನಬಸವಯ್ಯ ಅವರ ಮಗನಾಗಿ ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಚಿಕ್ಕನಂದಿ ಹಳ್ಳಿಯಲ್ಲಿ ಜನಿಸಿದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement