My Blog List

Friday, September 4, 2009

ಇಂದಿನ ಇತಿಹಾಸ History Today ಆಗಸ್ಟ್ 31

ಇಂದಿನ ಇತಿಹಾಸ

ಆಗಸ್ಟ್ 31

ವೇಲ್ಸ್ ರಾಜಕುಮಾರಿ ಡಯಾನಾ ಪ್ಯಾರಿಸ್ಸಿನಲ್ಲಿ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಮೃತರಾದರು. ಆಕೆಯ ಗೆಳೆಯ ಎಮಾಡ್ ಮಹಮ್ಮದ್ `ಡೋಡಿ'ಅಲ್ ಫಯಾಜ್ ಕೂಡಾ ಅಪಘಾತದಲ್ಲಿ ಸಾವನ್ನಪ್ಪಿದರು. ಬ್ರಿಟನ್ ರಾಜಕುಮಾರ ಚಾರ್ಲ್ಸ್ ಜೊತೆ ವಿವಾಹವಾಗಿದ್ದ ರಾಜಕುಮಾರಿ ಡಯಾನಾ 15 ವರ್ಷ ದಾಂಪತ್ಯ ಜೀವನ ನಡೆಸಿದ್ದರು. ದುರಂತ ಸಾವಿಗೆ ಒಂದು ವರ್ಷ ಮೊದಲು (1996ರ ಆಗಸ್ಟ್ 28) ವಿವಾಹ ವಿಚ್ಛೇದನ ಪಡೆದಿದ್ದರು.

2008: ಎರಡು ತಿಂಗಳ ಕಾಲ ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರ ತಾಂಡವವಾಡಲು ಕಾರಣವಾದ ಅಮರನಾಥ ಭೂವಿವಾದ ಬಗೆಹರಿಸುವ ಸಂಬಂಧ ಒಪ್ಪಂದ ಏರ್ಪಟ್ಟಿತು. ಅಮರನಾಥ ಯಾತ್ರೆಯ ಎರಡು ತಿಂಗಳ ಅವಧಿಯಲ್ಲಿ ಮಾತ್ರ ಬಲ್ಟಾಲಿನಲ್ಲಿನ 40 ಹೆಕ್ಟೇರ್ ಪ್ರದೇಶವನ್ನು ಶ್ರೀ ಅಮರನಾಥ ದೇವಸ್ಥಾನ ಮಂಡಳಿ ಬಳಸಿಕೊಳ್ಳಬಹುದು. ಈ ಸ್ಥಳ ಮುಂದೆಯೂ ರಾಜ್ಯ ಅರಣ್ಯ ಇಲಾಖೆಯ ವಶದ್ಲಲೇ ಇರುತ್ತದೆ ಎಂಬ ಬಗ್ಗೆ ಶ್ರೀ ಅಮರನಾಥ ಸಂಘರ್ಷ ಸಮಿತಿ ಮತ್ತು ರಾಜ್ಯಪಾಲರಿಂದ ನೇಮಕಗೊಂಡ 4 ಸದಸ್ಯರ ಸಮಿತಿಯ ನಡುವೆ ಒಪ್ಪಂದ ಮಾಡಿಕೊಳ್ಳಲಾಯಿತು.

2008: ವೃದ್ಧಾಪ್ಯದಿಂದ ಬಳಲುತ್ತಿದ್ದ ಮಲಯಾಳಂ ಸಿನಿಮಾ ನಿರ್ದೇಶಕ ಹಾಗೂ ಕಾದಂಬರಿಕಾರ ಎನ್. ಎನ್. ಪಿಶಾರ್ದಿ (82) ಕೋಚಿಯಲ್ಲಿ ನಿಧನರಾದರು. ಬ್ರಹ್ಮಚಾರಿಯಾಗಿದ್ದ ಅವರು 6 ಸಿನಿಮಾ ನಿರ್ದೇಶಿಸಿದ್ದರು. ಅವುಗಳಲ್ಲಿ `ನಿನಮಣಿಜ ಕಲ್ ಪ್ಪದುಗಲ್' ಅತ್ಯುತ್ತಮ ಸಿನಿಮಾ ಎಂದು 1962ರಲ್ಲಿ ಬೆಳ್ಳಿ ಪದಕ ಪಡೆದಿತ್ತು. ಅಲ್ಲದೆ ರಾಜ್ಯ ಪ್ರಶಸ್ತಿಯೂ ಇದಕ್ಕೆ ಲಭಿಸಿತ್ತು.

2007: ರಾಮೇಶ್ವರದ ಬಳಿ ಸಮುದ್ರದಲ್ಲಿನ ಐತಿಹಾಸಿಕ ರಾಮರ್ ಸೇತುವೆಯನ್ನು (ರಾಮಸೇತು) ಒಡೆಯದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತು. ಕಡಲುಗಾಲುವೆ ನಿರ್ಮಾಣಕ್ಕಾಗಿ ಭಾರತ ಹಾಗೂ ಶ್ರೀಲಂಕಾ ಮಧ್ಯೆ ಸಮುದ್ರದ ಪಾಕ್ ಮತ್ತು ಮನ್ನಾರ್ ಜಲಸಂಧಿಯಲ್ಲಿ ಹೂಳೆತ್ತುವ ಕೆಲಸಕ್ಕೆ ಕೋರ್ಟ್ ಕೆಲವು ನಿರ್ಬಂಧ ಹೇರಿತು. ಇದರೊಂದಿಗೆ ಸೇತುಸಮುದ್ರಂ ಕಾಲುವೆ ಯೋಜನೆ ವಿವಾದ ಹೊಸ ತಿರುವು ಪಡೆದುಕೊಂಡಿತು. `ರಾಮಸೇತು'ಗೆ ಯಾವುದೇ ಅಪಾಯವಾಗದಂತೆ ಸೇತುಸಮುದ್ರಂ ಕಾಮಗಾರಿ ಮುಂದುವರಿಸಬಹುದು ಎಂದು ನ್ಯಾಯಮೂರ್ತಿ ಬಿ. ಎನ್. ಅಗರವಾಲ್ ನೇತೃತ್ವದ ನ್ಯಾಯಪೀಠ ಕೇಂದ್ರಕ್ಕೆ ಸೂಚಿಸಿತು. ವಿಚಾರಣೆ ವೇಳೆಗೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಹ್ಮಣ್ಯಂ ಅವರು ಈ ಆದೇಶದ ಬಗ್ಗೆ ವಿವರಣೆ ಕೋರಿದಾಗ, `ರಾಮಸೇತುವಿಗೆ ಧಕ್ಕೆಯಾಗದ ರೀತಿಯಲ್ಲಿ ಹೂಳೆತ್ತುವ (ಡ್ರೆಜ್ಜಿಂಗ್) ಕೆಲಸವನ್ನು ನಡೆಸಬಹುದು. ಸೆಪ್ಟೆಂಬರ್ 14ರಂದು ನಡೆಯುವ ವಿಚಾರಣೆಯ ವೇಳೆಗೆ ಸರ್ಕಾರ ತನ್ನ ಹೇಳಿಕೆಯನ್ನು ದಾಖಲಿಸಬೇಕು' ಎಂದು ನ್ಯಾಯಪೀಠ ತಿಳಿಸಿತು. ಸೇತುಸಮುದ್ರಂ ಕಾಲುವೆ ಯೋಜನೆ ಜಾರಿ ಮಾಡುವಾಗ ಡೈನಮೈಟ್ ಸ್ಫೋಟ ಅಥವಾ ಇನ್ನಾವುದೇ ಕಾಮಗಾರಿಯಿಂದ 40 ಕಿ. ಮೀ. ಉದ್ದದ ರಾಮಸೇತುವಿಗೆ (ಆಡಮ್ ಸೇತುವೆ) ಯಾವುದೇ ರೀತಿಯ ಧಕ್ಕೆ ಉಂಟು ಮಾಡದಂತೆ ಕೇಂದ್ರ ಸರ್ಕಾರ ಮತ್ತು ಸೇತುಸಮುದ್ರಂ ಕಾರ್ಪೊರೇಷನ್ನಿಗೆ ನಿರ್ದೇಶನ ನೀಡುವಂತೆ ಕೇಂದ್ರದ ಮಾಜಿ ಸಚಿವ ಡಾ. ಸುಬ್ರಮಣಿಯನ್ ಸ್ವಾಮಿ ಅವರು ಅರ್ಜಿಯಲ್ಲಿ ಕೋರಿದ್ದರು. ಆಗಸ್ಟ್ 26ರಂದು ರಾಮೇಶ್ವರಕ್ಕೆ ಭೇಟಿ ನೀಡಿದ್ದಾಗ ಆರ್ ಡಿ ಎಕ್ಸ್ ತುಂಬಿ ಸ್ಫೋಟಿಸಲು ರಾಮಸೇತುಗೆ ರಂಧ್ರ ಕೊರೆಯಲಾಗುತ್ತಿತ್ತು. ಒಮ್ಮೆ ಈ ಸೇತುವೆಯನ್ನು ಹಾಳು ಮಾಡಿದರೆ ನಮ್ಮ ಪರಂಪರೆ ಮತ್ತು ಸಂಸ್ಕೃತಿಗೆ ಧಕ್ಕೆಯಾಗುವುದರ ಜತೆಗೆ ಅಸಂಖ್ಯಾತ ಜನರ ಧಾರ್ಮಿಕ ಭಾವನೆಯನ್ನು ಕೆರಳಿಸಿದಂತಾಗುತ್ತದೆ ಎಂದು ಸ್ವಾಮಿ ಅವರು ತಮ್ಮ ಅರ್ಜಿಯಲ್ಲಿ ಪ್ರತಿಪಾದಿಸಿದ್ದರು.

2007: ಹನ್ನೊಂದು ವರ್ಷಗಳ ಹಿಂದೆ ಸಿವಾನ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೇಲೆ ಹಲ್ಲೆ ನಡೆಸಿದ್ದು ಸಾಬೀತಾಗಿರುವುದರಿಂದ ಆರೋಪಿ ಆರ್ ಜೆಡಿ ಸಂಸದ ಮೊಹಮ್ಮದ್ ಶಹಾಬುದ್ದೀನ್ ಗೆ ಹತ್ತು ವರ್ಷಗಳ ಕಠಿಣ ಸಜೆ ಮತ್ತು ಎರಡು ಸಾವಿರ ರೂಪಾಯಿ ದಂಡ ವಿಧಿಸಲಾಯಿತು. ಭಾರತೀಯ ದಂಡ ಸಂಹಿತೆಯ 307 ಕಲಂನನ್ವಯ ಶಹಾಬ್ದುದೀನ್ ಅವರನ್ನು ತಪ್ಪಿತಸ್ಥರೆಂದು ಸಿವಾನಿನ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ನ್ಯಾಯಮೂರ್ತಿ ಜ್ಞಾನೇಶ್ವರ ಪ್ರಸಾದ್ ಶ್ರೀವಾಸ್ತವ್ ತೀರ್ಪು ನೀಡಿದರು. ಇದಲ್ಲದೆ ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣದಲ್ಲಿ 353ನೇ ಕಲಂ ಪ್ರಕಾರ ಎರಡು ವರ್ಷ ಶಿಕ್ಷೆ, 500 ರೂಪಾಯಿ ದಂಡ ಹಾಗೂ ಶಸ್ತ್ರಾಸ್ತ್ರ ಕಾಯಿದೆಯಡಿ ಏಳು ವರ್ಷ ಶಿಕ್ಷೆ ಮತ್ತು ಒಂದು ಸಾವಿರ ರೂಪಾಯಿ ದಂಡವನ್ನು ಸಹ ಶಹಾಬ್ದುದೀನ್ ಗೆ ವಿಧಿಸಲಾಯಿತು. ಶಹಾಬ್ದುದೀನ್ ಅವರ ಪೊಲೀಸ್ ಅಂಗ ರಕ್ಷಕರಾದ ಜಹಾಂಗೀರ್ ಮತ್ತು ಖಾಲಿಕ್ ಅವರನ್ನು ಸಹ ಈ ಪ್ರಕರಣಗಳಲ್ಲಿ ತಪ್ಪಿತಸ್ಥರೆಂದು ತೀರ್ಪು ನೀಡಿ ಅಷ್ಟೇ ಪ್ರಮಾಣದ ಶಿಕ್ಷೆ ನೀಡಲಾಯಿತು. ಹನ್ನೊಂದು ವರ್ಷಗಳ ಹಿಂದೆ ಶಹಾಬ್ದುದೀನ್ ಅವರು ಜೀರಾದಿ ಕ್ಷೇತ್ರದ ಶಾಸಕರಾಗಿದ್ದಾಗ ಈ ಪ್ರಕರಣ ನಡೆದಿತ್ತು.

2007: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಭಾರತದಲ್ಲಿ ಮಾತ್ರವಲ್ಲ, ವಿಶ್ವದಲ್ಲೂ ಅತ್ಯಂತ ಪ್ರಭಾವ ಬೀರುತ್ತಿರುವ ಮಹಿಳೆ ಎಂದು ಗುರುತಿಸಿದ್ದಲ್ಲದೆ ಪೆಪ್ಸಿ ಅಧ್ಯಕ್ಷೆ, ಕರ್ನಾಟಕದ ಸೊಸೆ ಇಂದ್ರಾ ನೂಯಿ ಅವರನ್ನು ವಿಶ್ವದ 10 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸೇರಿಸಲಾಯಿತು. ಅಮೆರಿಕದ `ಫೋಬ್ಸ್' ನಿಯತಕಾಲಿಕ ಪ್ರಕಟಿಸಿರುವ ಈ ಪಟ್ಟಿಯಲ್ಲಿ ಸೋನಿಯಾ 6ನೇ ಸ್ಥಾನ ಪಡೆದರು. ಕಳೆದ ವರ್ಷ ಅವರು 13ನೇ ಸ್ಥಾನದಲ್ಲಿದ್ದರು. ಸೋನಿಯಾ ಕಣಕ್ಕಿಳಿಸಿದ ಅಭ್ಯರ್ಥಿ ಪ್ರತಿಭಾ ಪಾಟೀಲ್ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವುದು ಅವರ ಹೆಚ್ಚುತ್ತಿರುವ ಪ್ರಭಾವಕ್ಕೆ ಸಾಕ್ಷಿ ಎಂದು ಪತ್ರಿಕೆ ಹೇಳಿತು. ಆದರೆ 2006ರಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಇಂದ್ರಾ ನೂಯಿ ಐದನೇ ಸ್ಥಾನಕ್ಕೆ ಇಳಿದರು. ಜಗತ್ತಿನ ಒಂದು ನೂರು ಪ್ರಭಾವಿ ಮಹಿಳೆಯರಿರುವ ಈ ಪಟ್ಟಿಯಲ್ಲಿ ಜರ್ಮನಿಯ ಚಾನ್ಸಲರ್ ಏಂಜೆಲಾ ಮರ್ಕೆಲ್ ಸತತ ಎರಡನೇ ವರ್ಷವೂ ಪ್ರಥಮ ಸ್ಥಾನ ಉಳಿಸಿಕೊಂಡರು.
ಇನ್ನೊಬ್ಬ ಭಾರತೀಯ ಮಹಿಳೆ ಅಮೆರಿಕದ ಜಂಬೋ ಗ್ರೂಪ್ ಅಧ್ಯಕ್ಷೆ ವಿದ್ಯಾ ಛಾಬ್ರಿಯಾ 97ನೇ ಸ್ಥಾನದಲ್ಲಿದ್ದರೆ, ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು `ಪ್ರಭಾವಿ ಮಹಿಳೆಯ ಹಿಂದಿರುವ ಇನ್ನೊಬ್ಬಳು ಪ್ರಭಾವಿ ಮಹಿಳೆ' ಎಂದು ಪತ್ರಿಕೆ ಹೇಳಿತು.

2006: ದಕ್ಷಿಣ ಆಫ್ರಿಕಾದ ಡರ್ಬಾನಿನ ಬಡ ಕರಿಯರ ವಸತಿ ಪ್ರದೇಶದ ಪ್ರೌಢಶಾಲೆಯೊಂದಕ್ಕೆ ಅಬ್ದುಲ್ ಕಲಾಂ ಅವರು ಕಳುಹಿಸಿರುವ 2 ಲಕ್ಷ ಅಮೆರಿಕನ್ ಡಾಲರ್ ಮೌಲ್ಯದ ಪ್ರಯೋಗಾಲಯ ಉಪಕರಣ ತಲುಪಿತು. 2004ರಲ್ಲಿ ದಕ್ಷಿಣ ಆಫ್ರಿಕಕ್ಕೆ ಭೇಟಿ ನೀಡಿದ್ದ ಕಾಲದಲ್ಲಿ ಕಲಾಂ ಅವರು ಉಮ್ಲಾಝಿ ಪಟ್ಟಣದ ಮೆಂಝಿ ಹೈಸ್ಕೂಲಿಗೆ ವಿಜ್ಞಾನ ಉಪಕರಣ ಒದಗಿಸುವ ಭರವಸೆ ನೀಡಿದ್ದರು. ಭಾರತೀಯ ರಾಜತಾಂತ್ರಿಕ ಅಜಯ್ ಸ್ವರೂಪ್ ಅವರು ಅಧಿಕೃತ ಸಮಾರಂಭದಲ್ಲಿ ಉಪಕರಣವನ್ನು ಶಾಲೆಯ ಪ್ರಾಂಶುಪಾಲರಾದ ಫೆಲಿಕ್ಸ್ ಶೊಲೋಲೊ ಮತ್ತು ಕ್ವಾಝುಲು-ನೇಟಾಲ್ ಪ್ರಾಂತದ ಶಿಕ್ಷಣ ಸಚಿವೆ ಇನಾ ಕ್ರೋನೆ ಅವರಿಗೆ ಹಸ್ತಾಂತರಿಸಿದರು.

2006: ಜಾಗತಿಕ ಐಟಿ ಸಂಸ್ಥೆಯಾಗಿರುವ ಇನ್ಫೋಸಿಸ್ ಟೆಕ್ನಾಲಜೀಸ್ ಒಂದು ಲಕ್ಷ ಕೋಟಿ ರೂಪಾಯಿ ಮಾರುಕಟ್ಟೆ ಬಂಡವಾಳ ಹೊಂದಿರುವ ಕಂಪೆನಿಗಳ ಸಾಲಿಗೆ ಸೇರ್ಪಡೆಗೊಂಡಿತು. ಈ ಪ್ರಮಾಣದ ಬಂಡವಾಳ ಹೊಂದಿರುವ ಎಲೈಟ್ ಕ್ಲಬ್ಬಿನಲ್ಲಿ ಈಗಾಗಲೇ ಒಎನ್ ಜಿಸಿ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎನ್ ಟಿಪಿಸಿ ಸೇರ್ಪಡೆಯಾಗಿದ್ದು, ಇನ್ಫೋಸಿಸ್ ಈ ಸಾಲಿಗೆ ಸೇರಿದ ನಾಲ್ಕನೆ ಕಂಪೆನಿಯಾಯಿತು.

2006: ವಿಶ್ವದ ಮೊತ್ತ ಮೊದಲ ಸಂಗೀತಮಯ ರೊಬೋಟ್ `ಮಿಯುರೊ'ವನ್ನು ರೂಪದರ್ಶಿಯೊಬ್ಬಳು ಟೋಕಿಯೋದಲ್ಲಿ ಪ್ರದರ್ಶಿಸಿದಳು. ಮೊಟ್ಟೆ ಆಕಾರದಲ್ಲಿರುವ ಈ ರೊಬೋಟ್ ಸ್ವಯಂಚಾಲಿತವಾಗಿ ಚಲಿಸುವುದಲ್ಲದೆ ಸಂಗೀತಕ್ಕೆ ನೃತ್ಯವನ್ನೂ ಮಾಡುತ್ತದೆ.

2006: ವಿವಿಧ ಕ್ಷೇತ್ರಗಳಿಗೆ ಸಲ್ಲಿಸಿದ ಸೇವೆಗಳಿಗಾಗಿ ನೀಡಲಾಗುವ `ಪ್ರಿಯದರ್ಶಿನಿ' ಪ್ರಶಸ್ತಿಗೆ ಇನ್ಫೋಸಿಸ್ ಟೆಕ್ನಾಲಜೀಸ್ ಸ್ಥಾಪಕ ಎನ್. ಆರ್. ನಾರಾಯಣಮೂರ್ತಿ ಮತ್ತು ಬಾಲಿವುಡ್ ತಾರೆ ಕರೀನಾ ಕಪೂರ್ ಆಯ್ಕೆಯಾದರು.

1997: ವೇಲ್ಸ್ ರಾಜಕುಮಾರಿ ಡಯಾನಾ ಪ್ಯಾರಿಸ್ಸಿನಲ್ಲಿ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಮೃತರಾದರು. ಆಕೆಯ ಗೆಳೆಯ ಎಮಾಡ್ ಮಹಮ್ಮದ್ `ಡೋಡಿ'ಅಲ್ ಫಯಾಜ್ ಕೂಡಾ ಅಪಘಾತದಲ್ಲಿ ಸಾವನ್ನಪ್ಪಿದರು. ಬ್ರಿಟನ್ ರಾಜಕುಮಾರ ಚಾರ್ಲ್ಸ್ ಜೊತೆ ವಿವಾಹವಾಗಿದ್ದ ರಾಜಕುಮಾರಿ ಡಯಾನಾ 15 ವರ್ಷ ದಾಂಪತ್ಯ ಜೀವನ ನಡೆಸಿದ್ದರು. ದುರಂತ ಸಾವಿಗೆ ಒಂದು ವರ್ಷ ಮೊದಲು (1996ರ ಆಗಸ್ಟ್ 28) ವಿವಾಹ ವಿಚ್ಛೇದನ ಪಡೆದಿದ್ದರು.

1995: ಪಂಜಾಬಿನ ಮುಖ್ಯಮಂತ್ರಿ ಬೇ ಆಂತ್ ಸಿಂಗ್ ಅವರು ಚಂಡೀಗಢದಲ್ಲಿ ನಡೆದ ಬಾಂಬ್ ದಾಳಿಯ್ಲಲಿ ಅಸುನೀಗಿದರು.

1993: ಕೇಂದ್ರ ವಾಣಿಜ್ಯ ಸಚಿವರಾಗಿ ಪ್ರಣವ್ ಮುಖರ್ಜಿ ಅಧಿಕಾರ ಸ್ವೀಕಾರ.

1982: ಭಾರತದ ಮಾಜಿ ಉಪರಾಷ್ಟ್ರಪತಿ ಜಿ.ಎಸ್. ಪಾಠಕ್ ನಿಧನ.

1981: ಒಂದು ದಿನ ಹಿಂದೆ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಗಾಯಗೊಂಡಿದ್ದ ಇರಾನಿನ ನೂತನ ಅಧ್ಯಕ್ಷ ಮಹಮ್ಮದ್ ಅಲ್ ಹಜಾಯಿ (48) ಮತ್ತು ಪ್ರಧಾನಿ ಮಹಮ್ಮದ್ ಜಾನದ್ ಅವರು ಈದಿನ ಬೆಳಗ್ಗೆ ಅಸು ನೀಗಿದರು. ಇದೇ ದಿನ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು.

1981: ಮದ್ರಾಸಿನಿಂದ (ಈಗಿನ ಚೆನ್ನೈ) ದೆಹಲಿಗೆ ಹೋಗುತ್ತಿದ್ದ ತಮಿಳುನಾಡು ಎಕ್ಸ್ ಪ್ರೆಸ್ ರೈಲು ಕಾಜಿಪೇಟ್-ಬಲದ್ ಷಾ ವಿಭಾಗದ ಮಧ್ಯೆ ಹಳಿ ತಪ್ಪಿ ಮಗುಚಿದ ಪರಿಣಾಮವಾಗಿ 25ಜನ ಮೃತರಾಗಿ 40ಕ್ಕೂ ಹೆಚ್ಚು ಮಂದಿ ಗಾಯಗೊಂಡರು.

1979: ಭಾರತದ ಉಪರಾಷ್ಟ್ರಪತಿಯಾಗಿ ಎಂ. ಹಿದಾಯತುಲ್ಲಾ (1979-84) ನೇಮಕ.

1969: ಭಾರತದ ವೇಗದ ಬೌಲರ್ ಜಾವಗಲ್ ಶ್ರೀನಾಥ್ ಜನ್ಮದಿನ.

1969: ಬಾಕ್ಸರ್ ರಾಕಿ ಮರ್ಸಿಯಾನೋ ಅವರು ಅಯೋವಾದಲ್ಲಿ ಸಂಭವಿಸಿದ ಹಗುರ ವಿಮಾನ ಅಪಘಾತದಲ್ಲಿ ತಮ್ಮ ಹುಟ್ಟು ಹಬ್ಬಕ್ಕಿಂತ ಒಂದು ದಿನ ಮೊದಲು ಮೃತರಾದರು.

1963: ವಾಷಿಂಗ್ಟನ್ ಡಿ.ಸಿ. ಮತ್ತು ಮಾಸ್ಕೊ ಮಧ್ಯೆ ಹಾಟ್ ಲೈನ್ ಸಂವಹನ (ಕಮ್ಯೂನಿಕೇಷನ್ಸ್) ಸಂಪರ್ಕ ಆರಂಭವಾಯಿತು.

1956: ಪ್ರಾಂತ್ಯಗಳ ಪುನರ್ ವಿಂಗಡಣಾ ಮಸೂದೆಗೆ ರಾಷ್ಟ್ರಾಧ್ಯಕ್ಷರು ಸಮ್ಮತಿ ಮುದ್ರೆ ಒತ್ತಿದರು. ವಾರದ ಹಿಂದೆ ಸಂಸತ್ತು ಈ ಮಸೂದೆಯನ್ನು ಅಂಗೀಕರಿಸಿತ್ತು.

1956: ಪದ್ಮಶ್ರೀ ನೇತ್ರದಾನಿ ಡಾ. ಎಂ.ಸಿ. ಮೋದಿ ಅವರು ಕರ್ನಾಟಕದ ಹೊಸಪೇಟೆಯಲ್ಲಿನಡೆಸಿದ ತಮ್ಮ ಉಚಿತ ನೇತ್ರ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಕುರುಡನೊಬ್ಬನಿಗೆ ಕೋಳಿಮರಿಯ ಕಣ್ಣುಗುಡ್ಡೆಗಳನ್ನು ಹಾಕಿ ನೇತ್ರ ಶಸ್ತ್ರಚಿಕಿತ್ಸೆ ನಡೆಸಿ ದೃಷ್ಟಿ ತಂದುಕೊಡುವಲ್ಲಿ ಯಶಸ್ವಿಯಾದರು.

1952: ಸಾಹಿತಿ ಕೆ. ಜಯಪ್ರಕಾಶ ರಾವ್ ಜನನ.

1938: ಸಾಹಿತಿ, ಪ್ರವಚನಕಾರ, ಕೀರ್ತನಕಾರ ದಾನಪ್ಪ ಜತ್ತಿ ಅವರು ಸಿದ್ರಾಮಪ್ಪ ಜತ್ತಿ- ದೊಡ್ಡಮ್ಮ ದಂಪತಿಯ ಮಗನಾಗಿ ವಿಜಾಪುರ ಜಿಲ್ಲೆಯ ತಿಕೋಟದಲ್ಲಿ ಜನಿಸಿದರು. ಹಲವಾರು ಸಾಹಿತ್ಯ ಕೃತಿಗಳನ್ನು ರಚಿಸಿದ ಅವರಿಗೆ ಕರ್ನಾಟಕ ರಾಜ್ಯ ಸಂಗೀತ ಮತ್ತು ನೃತ್ಯ ಅಕಾಡೆಮಿಯಿಂದ `ಕರ್ನಾಟಕ ಕಲಾ ತಿಲಕ' ಬಿರುದು ಹಾಗೂ ಪ್ರಶಸ್ತಿ ಲಭಿಸಿದೆ.

1919: ಭಾರತದ ಖ್ಯಾತ ಬರಹಗಾರ್ತಿ, ಕವಯಿತ್ರಿ, ಕಾದಂಬರಿಗಾರ್ತಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತೆ ಅಮೃತಾ ಪ್ರೀತಮ್ ಜನ್ಮದಿನ.

1907: ರಾಮೋನ್ ಮ್ಯಾಗ್ಸೇಸೆ (1907-57) ಜನ್ಮದಿನ. ಫಿಲಿಪ್ಪೀನ್ಸ್ ಅಧ್ಯಕ್ಷರಾಗಿದ್ದ ಇವರು ಕಮ್ಯೂನಿಸ್ಟ್ ನೇತೃತ್ವದ (ಹಕ್) ಚಳವಳಿಯನ್ನು ಯಶಸ್ವಿಯಾಗಿ ಸೋಲಿಸಿದ ವ್ಯಕ್ತಿ. ಅವರ ನೆನಪಿಗಾಗಿ ಪ್ರತಿವರ್ಷ ಮ್ಯಾಗ್ಸೇಸೆ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.

1887: ಥಾಮಸ್ ಆಲ್ವ ಎಡಿಸನ್ ಕಂಡು ಹಿಡಿದ `ಕೈನೆಟೋಸ್ಕೋಪ್' ಗೆ ಹಕ್ಕು ಸ್ವಾಮ್ಯ ನೀಡಲಾಯಿತು. ಈ ಯಂತ್ರವನ್ನು ಚಲಿಸುವ ಚಿತ್ರಗಳ ನಿರ್ಮಾಣಕ್ಕೆ ಬಳಸಲಾಗುತ್ತಿತ್ತು.

1881: ಅಮೆರಿಕದ ಮೊದಲ ಟೆನಿಸ್ ಚಾಂಪಿಯನ್ ಶಿಪ್ ರೋಡ್ ಐಲ್ಯಾಂಡಿನ ನ್ಯೂಪೋರ್ಟ್ ಕ್ಯಾಸಿನೋದಲ್ಲಿ ಆರಂಭವಾಯಿತು. ರಿಚರ್ಡ್ ಸಿಯರ್ಸ್ ಅವರು ವಿಲಿಯಂ ಗ್ಲೈನ್ ಅವರನ್ನು ಪರಾಭವಗೊಳಿಸಿ ಮೊದಲ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡರು. 1887ರಲ್ಲಿ ಮಹಿಳೆಯರ ಆಟವನ್ನು ಆರಂಭಿಸಲಾಯಿತು.

No comments:

Advertisement