My Blog List

Tuesday, April 13, 2010

ಇಂದಿನ ಇತಿಹಾಸ History Today ಏಪ್ರಿಲ್ 08

ಇಂದಿನ ಇತಿಹಾಸ

ಏಪ್ರಿಲ್ 08

ಜವಹರಲಾಲ್ ನೆಹರು ಆಧುನಿಕ ವಿಜ್ಞಾನ ಸಂಶೋಧನಾ ಕೇಂದ್ರದ (ಜೆಎನ್‌ಸಿಎಎಸ್‌ಆರ್) ಅಧ್ಯಕ್ಷ ಪ್ರೊ. ಸಿ.ಎನ್.ಆರ್.ರಾವ್ ಅವರು ರಷ್ಯಾದ ಪ್ರತಿಷ್ಠಿತ 'ಆರ್ಡರ್ ಆಫ್ ಫ್ರೆಂಡ್‌ಶಿಪ್' ಗೌರವಕ್ಕೆ ಪಾತ್ರರಾದರು. ರಷ್ಯಾ ಮತ್ತು ಭಾರತದ ನಡುವಿನ ಸಂಬಂಧವನ್ನು ಬಲಗೊಳಿಸುವ ನಿಟ್ಟಿನಲ್ಲಿ ಶ್ರಮಿಸಿದ ವ್ಯಕ್ತಿಗಳಿಗೆ ಈ ಗೌರವವನ್ನು ನೀಡಲಾಗುತ್ತದೆ. 2007ರ ಸಾಲಿನ ಗೌರವವನ್ನು ಸಿ.ಎನ್.ಆರ್.ರಾವ್ ಅವರಿಗೆ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿತು.

2009: ಗೃಹಸಚಿವ ಪಿ.ಚಿದಂಬರಮ್ ಅವರತ್ತ ಬೂಟು ಎಸೆದ ಪತ್ರಕರ್ತ ಜರ್ನೈಲ್ ಸಿಂಗ್ ಅವರು ಹಿಂದಿ ದಿನಪತ್ರಿಕೆ 'ದೈನಿಕ್ ಜಾಗರಣ್' ವಿಶೇಷ ಪ್ರತಿನಿಧಿಯಾಗಿದ್ದು, ಪತ್ರಿಕೆಯು ಈದಿನ ತನ್ನ ಮೊದಲ ಪುಟದಲ್ಲಿ ಜರ್ನೈಲ್ ವರ್ತನೆಗೆ ಕ್ಷಮೆಯಾಚಿಸಿತು. ಜರ್ನೈಲ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಭರವಸೆಯನ್ನೂ ಪತ್ರಿಕೆ ನೀಡಿತು. ಈದಿನದ ಸಂಚಿಕೆಯ ಮೊದಲ ಪುಟದಲ್ಲಿ ಪತ್ರಿಕೆಯು 'ಜರ್ನೈಲ್ ಸಿಂಗ್ ಬೇಜವಾಬ್ದಾರಿ ವರ್ತನೆಗೆ ಪತ್ರಿಕೆಯು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ. ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ಜರ್ನೈಲ್ ವರ್ತನೆ ದೈನಿಕ್ ಜಾಗರಣ್ ಪತ್ರಿಕೆಯ ನೀತಿ, ನಿಯಮ, ಸಂಪ್ರದಾಯ ಹಾಗೂ ಮೌಲ್ಯಕ್ಕೆ ವಿರುದ್ಧವಾದುದು. ಈ ವರ್ತನೆ ಸರ್ಕಾರ, ಗೃಹಸಚಿವರ ಭಾವನೆಗಳನ್ನು ಘಾಸಿಗೊಳಿಸಿದೆ. ಅದಕ್ಕಾಗಿ ನಾವು ಕ್ಷಮೆ ಯಾಚಿಸುತ್ತೇವೆ' ಎಂದು ಬರೆಯಿತು.

2009: ಇಟಲಿಯ ಲಕ್ವಿಲಾ ನಗರದಲ್ಲಿ ಹಿಂದಿನ ದಿನ ಸಂಭವಿಸಿದ ಭೂಕಂಪದಲ್ಲಿ ಮೃತರಾದವರ ಸಂಖ್ಯೆ 250ಕ್ಕೆ ಏರಿತು. ಭೂಕಂಪ ಸಂಭವಿಸಿದ 30 ಗಂಟೆಗಳ ನಂತರ ಅವಶೇಷಗಳಡಿ ಕಸೂತಿ ಕೆಲಸ ಮಾಡುತ್ತಾ ಕಾಲ ಕಳೆಯುತ್ತಿದ್ದ ಮರಿಯಾ ಡಿ-ಅಂಟೋನ್ ಎಂಬ 98 ವರ್ಷದ ಅಜ್ಜಿಯನ್ನು ರಕ್ಷಣಾ ಯೋಧರು ಸುರಕ್ಷಿತವಾಗಿ ಹೊರತೆಗೆದರು.

2009: ಜವಹರಲಾಲ್ ನೆಹರು ಆಧುನಿಕ ವಿಜ್ಞಾನ ಸಂಶೋಧನಾ ಕೇಂದ್ರದ (ಜೆಎನ್‌ಸಿಎಎಸ್‌ಆರ್) ಅಧ್ಯಕ್ಷ ಪ್ರೊ. ಸಿ.ಎನ್.ಆರ್.ರಾವ್ ಅವರು ರಷ್ಯಾದ ಪ್ರತಿಷ್ಠಿತ 'ಆರ್ಡರ್ ಆಫ್ ಫ್ರೆಂಡ್‌ಶಿಪ್' ಗೌರವಕ್ಕೆ ಪಾತ್ರರಾದರು. ರಷ್ಯಾ ಮತ್ತು ಭಾರತದ ನಡುವಿನ ಸಂಬಂಧವನ್ನು ಬಲಗೊಳಿಸುವ ನಿಟ್ಟಿನಲ್ಲಿ ಶ್ರಮಿಸಿದ ವ್ಯಕ್ತಿಗಳಿಗೆ ಈ ಗೌರವವನ್ನು ನೀಡಲಾಗುತ್ತದೆ. 2007ರ ಸಾಲಿನ ಗೌರವವನ್ನು ಸಿ.ಎನ್.ಆರ್.ರಾವ್ ಅವರಿಗೆ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿತು.

2009: ಇತಿಹಾಸ ಪ್ರಸಿದ್ಧ ಶ್ರೀಕ್ಷೇತ್ರ ಶ್ರವಣಬೆಳಗೊಳದಲ್ಲಿ ಈದಿನ ರಾತ್ರಿ ನಡೆದ ಸಮಾರಂಭದಲ್ಲಿ ಜೈನ ಧರ್ಮ, ಸಾಹಿತ್ಯ, ಕಲಾಸೇವೆ ಪರಿಗಣಿಸಿ 2009 ನೇ ಸಾಲಿಗೆ 9 ಮಂದಿಗೆ ಗೋಮಟೇಶ್ವರ ವಿದ್ಯಾಪೀಠ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು. ಚಾವುಂಡರಾಯ ಮಂಟಪದಲ್ಲಿ ನಡೆದ ಸಮಾರಂಭದಲ್ಲಿ ಕವಿ ಜಿನದತ್ತ ದೇಸಾಯಿ, ಮೈಸೂರು ವಿಶ್ವವಿದ್ಯಾನಿಲಯದ ಗಣಿತ ಶಾಸ್ತ್ರ ಪ್ರಾಧ್ಯಾಪಕಿ ಡಾ. ಪದ್ಮಾವತಮ್ಮ, ಡಾ. ಸರೋಜ ಪ್ರೇಮಸುಮನ್ ಜೈನ್, ಸಂಶೋಧಕ ಡಾ.ವೈ. ಉಮಾನಾಥ ಶೆಣೈ, ಡಾ. ಬಾಹುಬಲಿ ಹಂದೂರ ಅವರಿಗೆ ಗೋಮಟೇಶ್ವರ ವಿದ್ಯಾಪೀಠ ಪ್ರಶಸ್ತಿ, ಹಿರಿಯ ಪತ್ರಕರ್ತ ಆರ್.ಪಿ. ವೆಂಕಟೇಶ್ ಮೂರ್ತಿ, ಶಾಂತಿ ನಾಥ ಕೆ. ಹೋತಪೇಟ ಅವರಿಗೆ ಗೋಮಟೇಶ್ವರ ವಿದ್ಯಾಪೀಠ ಮಾಧ್ಯಮ ಪ್ರಶಸ್ತಿ, ನೃತ್ಯ ಕಲಾವಿದ ಶ್ರೀಧರ್ ಜೈನ್ ಅವರಿಗೆ ಗೋಮಟೇಶ್ವರ ವಿದ್ಯಾಪೀಠ ಸಾಂಸ್ಕೃತಿಕ ಪ್ರಶಸ್ತಿ ಹಾಗೂ ಎಂ.ವಿ. ಶೇಷಾಚಲ ಅವರಿಗೆ ಎ.ಆರ್. ನಾಗರಾಜು ಪ್ರಶಸ್ತಿ ನೀಡಿ ಗೌರವಿಸಲಾಯಿತು.

2009: ಕೋಲಾರದ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್ ಹಾಗೂ ಬೆಂಗಳೂರಿನ ಮಾಸ್ತಿ ಪ್ರಶಸ್ತಿ ಸಮಿತಿ ಜಂಟಿಯಾಗಿ ನಡೆಸಿದ 'ಮಾಸ್ತಿ ಕಾದಂಬರಿ ಪುರಸ್ಕಾರ-2008' ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡದ ಸುಳ್ಯದ ಲೇಖಕ ಡಾ. ಬಿ.ಪ್ರಭಾಕರ ಶಿಶಿಲ ಅವರ 'ನದಿ ಎರಡರ ನಡುವೆ' ಕಾದಂಬರಿಗೆ ಪ್ರಥಮ ಬಹುಮಾನ, ಧಾರವಾಡದ ಲೇಖಕಿ ಪ್ರೊ. ದಮಯಂತಿ ನರೇಗಲ್ಲ ಅವರ 'ತೇರನೆಳೆಯ ಬಾರ ತಂಗಿ' ಕಾದಂಬರಿಗೆ ದ್ವಿತೀಯ ಬಹುಮಾನ, ಶಿವಮೊಗ್ಗದ ಲೇಖಕ ರವಿ ಸಸಿತೋಟ ಅವರ 'ಸ್ಥಿತ್ಯಂತರ' ಕಾದಂಬರಿಗೆ ತೃತೀಯ ಬಹುಮಾನ ಬಂದಿತು. ಮಂಡ್ಯದ ಪಾಂಡವಪುರದ ಲೇಖಕ ಪಿ.ಅಬ್ದುಲ್ ಸತ್ತಾರ್ ಅವರ 'ರಾಜ ಒಡೆಯರ್' ಕಾದಂಬರಿಗೆ ವಿಶೇಷ ಪುರಸ್ಕಾರ ಬಂದಿತು ಎಂದು ಕೋಲಾರದ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್ ಅಧ್ಯಕ್ಷ ಮಾವಿನಕೆರೆ ರಂಗನಾಥನ್ ಪ್ರಕಟಿಸಿದರು.

2008: ವರ್ಜೀನಿಯಾ ತಂತ್ರಜ್ಞಾನ ಸಂಸ್ಥೆಯಲ್ಲಿ ನಡೆದ ಗುಂಡು ಹಾರಾಟ ಪ್ರಕರಣದ ವರದಿಗೆ ಲಭಿಸಿದ ಪ್ರಶಸ್ತಿಯೂ ಸೇರಿದಂತೆ ಒಟ್ಟು 14 ಪ್ರಶಸ್ತಿಗಳ ಪೈಕಿ 6 ಪ್ರಶಸ್ತಿಗಳನ್ನು ತನ್ನ ಬಗಲಿಗೆ ಹಾಕಿಕೊಳ್ಳುವ ಮೂಲಕ `ದಿ ವಾಷಿಂಗ್ಟನ್ ಪೋಸ್ಟ್' ಪ್ರಸಕ್ತ ಸಾಲಿನ ಪ್ರತಿಷ್ಠಿತ `ಪುಲಿಟ್ಜರ್ ಪ್ರಶಸ್ತಿ' ವಿಜೇತರಲ್ಲಿ ಅಗ್ರಸ್ಥಾನಕ್ಕೆ ಏರಿತು. ಸುದ್ದಿ ಸ್ಫೋಟ ವರ್ಗಕ್ಕೆ (ಬ್ರೇಕಿಂಗ್ ನ್ಯೂಸ್) ನೀಡಲಾಗುವ ಪ್ರಶಸ್ತಿಯು ವರ್ಜೀನಿಯಾ ತಂತ್ರಜ್ಞಾನ ಸಂಸ್ಥೆಯಲ್ಲಿ ನಡೆದ ಭೀಕರ ಗುಂಡು ಹಾರಾಟ ಪ್ರಕರಣದ ವರದಿಗಳಿಗಾಗಿ `ಪೋಸ್ಟ್' ಸಿಬ್ಬಂದಿಗೆ ಲಭಿಸಿತು. ಅಂತಾರಾಷ್ಟ್ರೀಯ ವರದಿಗಳ ವರ್ಗದಲ್ಲಿಪೋಸ್ಟ್ ನ ಸ್ಟೀವ್ ಫೈನಾರು ಅವರು ಇರಾಕಿನ ಖಾಸಗಿ ಭದ್ರತಾ ಕಾಂಟ್ರಾಕ್ಟರುಗಳಿಗೆ ಸಂಬಂಧಿಸಿದಂತೆ ಬರೆದ ವರದಿಗೆ ಲಭಿಸಿತು. ವಿವರಣಾತ್ಮಕ ವರದಿಗೆ ನೀಡಲಾಗುವ ಪ್ರಶಸ್ತಿಯನ್ನು ಗೆದ್ದುಕೊಂಡ ನ್ಯೂಯಾರ್ಕ್ ಟೈಮ್ಸ್, ತನಿಖಾ ವರದಿಗಾಗಿ ನೀಡಲಾಗುವ ಪ್ರಶಸ್ತಿಯನ್ನು ಚಿಕಾಗೋ ಟ್ರಿಬ್ಯೂನ್ ಜೊತೆಗೆ ಹಂಚಿಕೊಂಡಿತು. ಪಾಕಿಸ್ಥಾನದಲ್ಲಿ ಜನಿಸಿ, ಬ್ಯಾಂಕಾಕಿನಲ್ಲಿ ನೆಲೆಸಿದ ಛಾಯಾಗ್ರಾಹಕ ಆಡ್ರೀಸ್ ಲತೀಫ್ ಅವರು ಸುದ್ದಿ ಸ್ಫೋಟ ವರ್ಗದಲ್ಲಿ ಛಾಯಾಗ್ರಹಣಕ್ಕೆ ನೀಡಲಾಗುವ ಪ್ರಶಸ್ತಿಯನ್ನು `ರಾಯಿಟರ್ಸ್'ಗೆ ದಕ್ಕಿಸಿಕೊಟ್ಟರು. ಬಾಡಿಗೆ ವಿಡಿಯೋಗ್ರಾಫರನಾಗಿ ಹೋಗಿ ಮ್ಯಾನ್ಮಾರಿನಲ್ಲಿ ಪ್ರದರ್ಶನ ಕಾಲದಲ್ಲಿ ತೀವ್ರವಾಗಿ ಗಾಯಗೊಂಡ ಜಪಾನಿನ ವಿಡಿಯೋಗ್ರಾಫರನನ್ನು ಸೆರೆಹಿಡಿದ ಛಾಯಾಚಿತ್ರಕ್ಕೆ ಈ ಪ್ರಶಸ್ತಿ ಲಭಿಸಿತು. ಇನ್ವೆಸ್ಟರ್ಸ್ ಬಿಸಿನೆಸ್ ಡೈಲಿಯ ಮೈಕೆಲ್ ರಮೀರೆಝ್ ಅವರು ಸಂಪಾದಕೀಯ ಕಾರ್ಟೂನಿಗಾಗಿ ಪುಲಿಟ್ಜರ್ ಪ್ರಶಸ್ತಿ ಗೆದ್ದುಕೊಂಡರು. ಅತ್ಯುತ್ತಮ ಟೀಕೆಗೆ ನೀಡಲಾಗುವ ಪುಲಿಟ್ಜರ್ ಪ್ರಶಸ್ತಿಯು ಬೋಸ್ಟನ್ ಗ್ಲೋಬಿನ ಮಾರ್ಕ್ ಫೀನೀ ಅವರಿಗೆ ಮತ್ತು ಫೀಚರ್ ಫೋಟೋಗ್ರಫಿಗಾಗಿ ನೀಡಲಾಗುವ ಪ್ರಶಸ್ತಿಯು ಕಾಂಕಾರ್ಡ್ ಮಾನಿಟರಿನ ಪ್ರೆಸ್ಟನ್ ಗನ್ನಾವೇ ಅವರಿಗೆ ಲಭಿಸಿತು.

2008: ದೇವನಹಳ್ಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಬಿಐಎಎಲ್) ಟ್ಯಾಕ್ಸಿ ಸೇವೆ ಒದಗಿಸುವ `ವಿ-ಲಿಂಕ್' ಟ್ಯಾಕ್ಸಿ ಸಂಸ್ಥೆಯು ರಾತ್ರಿ ನಗರದ ಖಾಸಗಿ ಹೋಟೆಲಿನಲ್ಲಿ ಆಯೋಜಿಸ್ದಿದ ಟ್ಯಾಕ್ಸಿ ಸೇವೆ ಉದ್ಘಾಟನಾ ಸಮಾರಂಭಕ್ಕೆ ನುಗ್ಗಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪೀಠೋಪಕರಣಗಳನ್ನು ಒಡೆದು ಹಾಕಿ ದಾಂಧಲೆ ನಡೆಸಿದರು. ಸುಮಾರು 40 ಮಂದಿ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ ಒಮ್ಮೆಲೆ ನುಗ್ಗಿದ ಪರಿಣಾಮ ಕಾರ್ಯಕ್ರಮ ಆಯೋಜಕರು ಮತ್ತು ಸಭಿಕರು ಆತಂಕಕ್ಕೆ ಒಳಗಾದರು. ಇದರಿಂದ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಯಿತು. ಟ್ಯಾಕ್ಸಿ ಸೇವೆಯನ್ನು ಮುಂಬೈ ಮೂಲದ `ವಿ-ಲಿಂಕ್' ಸಂಸ್ಥೆಗೆ ನೀಡಿದ್ದರಿಂದ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಡಿ (ಕೆಎಸ್ಟಿಡಿಸಿ) ಕಾರ್ಯ ನಿರ್ವಹಿಸುತ್ತಿರುವ ಕನ್ನಡಿಗರಿಗೆ ಭಾರಿ ಅನ್ಯಾಯವಾಗುತ್ತದೆ. ಸಾವಿರಾರು ಚಾಲಕರು ಉದ್ಯೋಗ ಕಳೆದುಕೊಳ್ಳುತ್ತಾರೆ ಎಂದು ಕಾರ್ಯಕರ್ತರು ಆರೋಪಿಸಿದರು.

2008: ಆಗಸ್ಟ್ ತಿಂಗಳಲ್ಲಿ ನಡೆಯುವ ಬೀಜಿಂಗ್ ಒಲಿಂಪಿಕ್ ಕೂಟದ ಜ್ಯೋತಿಯ ಮೆರವಣಿಗೆಗೆ ವಿಶ್ವದ ವಿವಿಧ ಭಾಗಗಳಲ್ಲಿ ವ್ಯಕ್ತವಾದ ವಿರೋಧವು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ನಿದ್ದೆಗೆಡಿಸಿತು. ಪ್ರತಿಭಟನಕಾರರಿಂದ ರಕ್ಷಿಸಲು ಪ್ಯಾರಿಸ್ಸಿನ ಬೀದಿಯ ಕೆಲವು ಕಡೆಗಳಲ್ಲಿ ಜ್ಯೋತಿಯನ್ನು ಬಸ್ಸಿನಲ್ಲಿ ಕೊಂಡೊಯ್ಯಲಾಯಿತು.

2008: ಬೀಜಿಂಗ್ ಒಲಿಂಪಿಕ್ ಕೂಟದ ಜ್ಯೋತಿಯ ಮೆರವಣಿಗೆ ವೇಳೆ ಸೂಕ್ತ ಭದ್ರತೆಯನ್ನು ಖಾತರಿಪಡಿಸಲು `ರೆಡ್ ಗಾರ್ಡ್' ಕಮಾಂಡೊಗಳಿಗೆ ಅವಕಾಶ ಮಾಡಿಕೊಡಬೇಕೆಂಬ ಚೀನಾದ ಕೋರಿಕೆಯನ್ನು ಭಾರತ ತಳ್ಳಿಹಾಕಿತು.

2008: ಪಕ್ಷದ ಮುಖ ವಾಣಿ `ಸಾಮ್ನಾ'ದ ಸಂಪಾದಕೀಯದಲ್ಲಿ 2 ದಿನಗಳ ಹಿಂದಷ್ಟೇ ನಟ ಅಮಿತಾಭ್ ಬಚ್ಚನ್ ಅವರನ್ನು ಟೀಕಿಸಿದ್ದ ಶಿವಸೇನೆ ಮುಖ್ಯಸ್ಥ ಬಾಳ್ ಠಾಕ್ರೆ, ದಿಢೀರ್ ತಮ್ಮ ನಿಲುವು ಬದಲಿಸಿ, ಬಚ್ಚನ್ ಅವರನ್ನು `ದೇಶದ ಸೂಪರ್ ಸ್ಟಾರ್' ಎಂದು ಕೊಂಡಾಡಿದರು. `ಅಮಿತಾಬ್ ಕೇವಲ ಒಂದು ರಾಜ್ಯದ ತಾರೆ ಅಲ್ಲ. ಅವರು ಇಡೀ ರಾಷ್ಟ್ರದ ಸೂಪರ್ ಸ್ಟಾರ್. ಆದ್ದರಿಂದ ಅವರನ್ನು ಪ್ರಾದೇಶಿಕ ವಿವಾದದಲ್ಲಿ ಸಿಕ್ಕಿಸುವುದು ಸರಿಯಲ್ಲ' ಎಂದು ಠಾಕ್ರೆ ಈದಿನ ಸಂಪಾದಕೀಯದಲ್ಲಿ ಬರೆದರು.

2008: ತಿರುಮಲ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳಿದ್ದ ತಮಿಳು ನಟಿ ಹಾಗೂ `ಶಿವಾಜಿ' ಚಲನಚಿತ್ರ ಖ್ಯಾತಿಯ ಶ್ರೇಯಾ ಶರಣ್ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯೊಬ್ಬನಿಗೆ ಶ್ರೇಯಾ ಅವರು ಕಪಾಳಕ್ಕೆ ಬಾರಿಸಿದ ಘಟನೆ ನಡೆಯಿತು. ಇದರಿಂದ ಉತ್ತೇಜಿತರಾದ ಅಭಿಮಾನಿಗಳೂ ಆ ವ್ಯಕ್ತಿಗೆ ಧರ್ಮದೇಟುಗಳನ್ನು ನೀಡಿದರು.

2008: `ಯಾವುದೇ ದೃಷ್ಟಿಯಿಂದ ನೋಡಿದರೂ ನಾನು ಮುಂಬೈಗೆ ಹೊರಗಿನವನಲ್ಲ. ಮುಂಬೈ ಬಿಟ್ಟು ನಾನು ಕದಲುವುದೂ ಇಲ್ಲ. ಬೇರೆಲ್ಲಿಗಾದರೂ ಹೋಗುವ ಪ್ರಶ್ನೆಯೂ ಇಲ್ಲ' ಎಂದು ರಾಜ್ ಠಾಕ್ರೆ ಅವರ ಎಂ ಎನ್ ಎಸ್ ತಮ್ಮ ವಿರುದ್ಧ ಹೂಡಿದ ಚಳವಳಿಯಿಂದ ನೊಂದ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಮುಂಬೈಯಲ್ಲಿ ಘೋಷಿಸಿದರು.

2008: ಬಹುಸಂಖ್ಯೆಯಲ್ಲಿರುವ ವೈದ್ಯರು ಸೇರಿದಂತೆ ಬ್ರಿಟನ್ನಿಗೆ ವಲಸೆ ಹೋದ ಸಾವಿರಾರು ಭಾರತೀಯ ವೃತ್ತಿಪರರ ಪರವಾಗಿ ಬ್ರಿಟನ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿತು. `ಅತ್ಯಂತ ಕೌಶಲ್ಯ ಹೊಂದಿರುವವರ ವಲಸೆ ಯೋಜನೆ'ಯ (ಎಚ್ ಎಸ್ ಎಂ ಪಿ) ನಿಯಮಾವಳಿ ಹಾಗೂ ಷರತ್ತುಗಳನ್ನು ಸರ್ಕಾರ ಬದಲಿಸುವಂತಿಲ್ಲ ಎಂದು ಕೋರ್ಟ್ ಹೇಳಿತು. ಬ್ರಿಟನ್ ಸರ್ಕಾರ ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ 2002ರ ಜನವರಿಯಲ್ಲಿ `ಎಚ್ ಎಸ್ ಎಂ ಪಿ' ಜಾರಿಗೊಳಿಸಿತ್ತು. ವೈದ್ಯರು, ಎಂಜನಿಯರರು, ತಂತ್ರಜ್ಞರು ಸೇರಿದಂತೆ ಉನ್ನತ ಶಿಕ್ಷಣ ಪಡೆದವರಿಗೆ ವೀಸಾ ನೀಡಲು ಆರಂಭಿಸಿತು. ಈ ಯೋಜನೆಯಡಿ ಬ್ರಿಟನ್ನಿಗೆ ವಲಸೆ ಹೋದವರಲ್ಲಿ ಭಾರತೀಯರ ಸಂಖ್ಯೆಯೇ ಅಧಿಕ. ಆದರೆ, 2006ರ ನವೆಂಬರಿನಲ್ಲಿ ಬ್ರಿಟನ್ ಸರ್ಕಾರ ಈ ಯೋಜನೆಗೆ ಏಕಾಏಕಿ ತಿದ್ದುಪಡಿ ತಂದಿತು. ಇದನ್ನು ಪ್ರಶ್ನಿಸಿ `ಎಚ್ ಎಸ್ ಎಂ ಪಿ' ವೇದಿಕೆ ಸಲ್ಲಿಸಿದ್ದ ಅರ್ಜಿಯನ್ನು ಎತ್ತಿ ಹಿಡಿದ ಬ್ರಿಟನ್ ಹೈಕೋರ್ಟ್, ಈ ಯೋಜನೆಯಡಿ ಸಾವಿರಾರು ವೃತ್ತಿಪರರು ಬ್ರಿಟನ್ನಿಗೆ ವಲಸೆ ಬಂದಿರುವುದರಿಂದ ಸರ್ಕಾರ ಈಗ ಅದನ್ನು ಬದಲಿಸುವಂತಿಲ್ಲ ಎಂದು ಅಭಿಪ್ರಾಯ ಪಟ್ಟಿತು.

2007: ಅಮೆರಿಕದ ಕೋಟ್ಯಧೀಶ ಚಾರ್ಲ್ಸ್ ಸಿಮೋನಿಯೀ ಅವರು ರಷ್ಯದ ಇಬ್ಬರು ಗಗನಯಾನಿಗಳೊಂದಿಗೆ ಬಾಹ್ಯಾಕಾಶಕ್ಕೆ ಏರಿದರು. ಅವರನ್ನು ಹೊತ್ತ ಸೋಯುಜ್ ಟಿಎಂಎ-10 ಗಗನನೌಕೆಯು ಕಝಕಸ್ತಾನದ ಬೈಕನೂರ್ ಬಾಹ್ಯಾಕಾಶ ನಿಲ್ದಾಣದಿಂದ ಉಡಾವಣೆಗೊಂಡಿತು.

2007: ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಕಾಯಕಯೋಗಿ ಡಾ. ಶಿವಕುಮಾರ ಸ್ವಾಮೀಜಿ ಅವರ ನೂರನೇ ಜನ್ಮ ಶತಮಾನೋತ್ಸವಕ್ಕೆ ಚಾಲನೆ ನೀಡಿದರು. ವಿದ್ಯುನ್ಮಾನ ಗುಂಡಿಯನ್ನು ಒತ್ತಿ ವೇದಿಕೆಯ ಮೇಲೆ ಏಕ ಕಾಲದಲ್ಲಿ 100 ದೀಪಗಳನ್ನು ಬೆಳಗುವ ಮೂಲಕ ಸ್ವಾಮೀಜಿಗೆ ಶುಭ ಕೋರಿದರು.

2007: ಮುಂಬೈ ಮಹಾನಗರದ ರೂಪದರ್ಶಿ ಸರಾಹ್ ಜೇನ್ ಅವರು ಮುಂಬೈಯಲ್ಲಿ ನಡೆದ ಸಮಾರಂಭದಲ್ಲಿ `ಭಾರತ ಸುಂದರಿ' ಆಗಿಯೂ, ಪೂಜಾ ಚಿಟ್ಗೋಪಕರ್ ಅವರು `ಭಾರತ ಭೂ ಸುಂದರಿ' ಆಗಿಯೂ ಆಯ್ಕೆಯಾದರು.

2007: ಭಾರತ ಮೂಲದ ಗಗನಯಾನಿ ಸುನೀತಾ ವಿಲಿಯಮ್ಸ್ ಅವರು ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಅಂತರಿಕ್ಷ ಕೇಂದ್ರದ ಜೈವಿಕ ವಿಜ್ಞಾನ ಪ್ರಯೋಗಾಲಯದಲ್ಲಿ ತಪಾಸಣೆಯ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಿದರು. ಬಾಹ್ಯಾಕಾಶ ನೌಕೆಯಲ್ಲಿ ಬ್ಯಾಕ್ಟೀರಿಯಾ, ಬೂಷ್ಟು ಮತ್ತಿತರ ಸೂಕ್ಷ್ಮಾಣು ಜೀವಿಗಳನ್ನು ಸಾಮಾನ್ಯ ತಪಾಸಣಾ ಕ್ರಮಕ್ಕಿಂತ ಬೇಗ ಗುರುತಿಸಬಹುದು. ಇದಕ್ಕೆ `ಲೊಕಾರ್ಡ್ ಪಿಟಿಎಸ್' ಎಂದು ಹೆಸರಿಸಲಾಗಿದೆ. ಇದು `ಲ್ಯಾಬ್ ಆನ್ ಚಿಪ್ ಅಪ್ಲಿಕೇಷನ್ ಡೆವಲಪ್ಮೆಂಟ್- ಸಣ್ಣ ತಪಾಸಣಾ ವ್ಯವಸ್ಥೆ' ಎಂಬುದರ ಸಂಕ್ಷಿಪ್ತ ರೂಪ. ನಾಸಾದ ಅಂತರಿಕ್ಷ ನೌಕೆ `ಡಿಸ್ಕವರಿ'ಯಲ್ಲಿ 2006ರ ಡಿಸೆಂಬರ್ 9ರಂದು ಈ ವ್ಯವಸ್ಥೆಯ ಬಳಕೆಗೆ ಚಾಲನೆ ನೀಡಿದ್ದರೂ ಆ ನಂತರ ಇದರ ಬಳಕೆ ಆಗಿರಲಿಲ್ಲ. ಸುನೀತಾ ಅವರೇ ಅ ಸಂದರ್ಭದಲ್ಲಿ ಲೊಕಾರ್ಡ್ ಪಿಟಿಎಸ್ ಉಪಕರಣ ವ್ಯವಸ್ಥೆ ರೂಪಿಸಿದ್ದರು.

2007: ರಸ್ತೆ ಅಪಘಾತದಲ್ಲಿ ಮೃತನಾದ ವ್ಯಕ್ತಿಯ ಪರಿಹಾರ ಧನ ಪಡೆಯಲು ಯಾರೂ ವಾರಸುದಾರರಿಲ್ಲದೇ ಹೋದಲ್ಲಿ, ಆ ವ್ಯಕ್ತಿಯ ವಿವಾಹಿತ ಪುತ್ರಿಗೆ ಅದನ್ನು ಪಡೆಯುವ ಹಕ್ಕಿದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು. ಮೋಟಾರು ವಾಹನ ಕಾಯ್ದೆ 1988ರ ಪ್ರಕಾರ ವಿವಾಹಿತ ಪುತ್ರಿಯೂ ಪರಿಹಾರ ಧನ ಪಡೆಯಬಹುದು ಎಂದು ನ್ಯಾಯಮೂರ್ತಿ ಅರಿಜಿತ್ ಪಸಾಯತ್ ಮತ್ತು ಎಸ್. ಎಚ್. ಕಪಾಡಿಯಾ ಅವರನ್ನು ಒಳಗೊಂಡ ಪೀಠವು ಹೇಳಿತು.

2007: ಒರಿಸ್ಸಾದ ಪುರಿಯ ಗಜಪತಿ ಮಹಾರಾಜ ದಿವ್ಯಸಿಂಹ ದೇವ ಅವರನ್ನು ಮದುವೆಯಾದ ಮೂರು ವರ್ಷಗಳ ಬಳಿಕ ಮಹಾರಾಣಿ ಲೀಲಾವತಿ ಪಟ್ಟ ಮಹಾದೇವಿ ಅವರು ಇದೇ ಮೊದಲ ಬಾರಿಗೆ ಬಿಗಿ ಬಂದೋಬಸ್ತಿನ ಮಧ್ಯೆ ಪುರಿ ಜಗನ್ನಾಥ ದೇವಾಲಯಕ್ಕೆ ಭೇಟಿ ನೀಡಿದರು. ಈ ಪುಣ್ಯಕ್ಷೇತ್ರದಲ್ಲಿ 12ನೇ ಶತಮಾನದಲ್ಲಿ ನಡೆಯುತ್ತಿದ್ದ ರಾಜಮನೆತನದ ಈ ಧಾರ್ಮಿಕ ಕಾರ್ಯಕ್ರಮ 40 ವರ್ಷಗಳ ಬಳಿಕ ನಡೆಯಿತು.

2006: ನಾಲ್ಕು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯುತ್ತಿರುವಾಗ ಕೇಂದ್ರೀಯ ಶಿಕ್ಷಣ ಸಂಸ್ಥೆಗಳು, ಐಐಎಂಗಳು ಮತ್ತು ಐಐಟಿಗಳಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ಪ್ರಸ್ತಾವ ಮುಂದಿಟ್ಟದ್ದಕ್ಕೆ ವಿವರಣೆ ನೀಡುವಂತೆ ಚುನಾವಣಾ ಆಯೋಗವು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಅರ್ಜುನ್ ಸಿಂಗ್ ಅವರಿಗೆ ನೋಟಿಸ್ ನೀಡಿತು.

2006: ಲಾಭದ ಹುದ್ದೆ ವಿವಾದದ ಹಿನ್ನೆಲೆಯಲ್ಲಿ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ರಾಜೀವ್ ಗಾಂಧಿ ಪ್ರತಿಷ್ಠಾನ, ಇಂದಿರಾಗಾಂಧಿ ಸ್ಮಾರಕ ಪ್ರತಿಷ್ಠಾನ ಮತ್ತು ಜವಾಹರ ಭವನ ಪ್ರತಿಷ್ಠಾನಗಳ ಅಧ್ಯಕ್ಷ ಸ್ಥಾನಗಳಿಗೂ ರಾಜೀನಾಮೆ ಸಲ್ಲಿಸಿದರು.

2006: ಮಂಡಲ್ ಆಯೋಗ ಪ್ರಕರಣದ ತನ್ನ ತೀರ್ಪನ್ನು ದೃಢಪಡಿಸಿದ ಸುಪ್ರೀಂಕೋರ್ಟ್ ಸಾಮಾನ್ಯ ವರ್ಗದಿಂದ ಆಯ್ಕೆಯಾದ ಇತರೆ ಹಿಂದುಳಿದ ವರ್ಗಕ್ಕೆ ಸೇರಿದ ಅಭ್ಯರ್ಥಿಯನ್ನು ಇತರೆ ಹಿಂದುಳಿದ ವರ್ಗಗಳ ಕೋಟಾದ ಅಡಿ (ಒಬಿಸಿ ಕೋಟಾ) ನೇಮಕಗೊಂಡವರು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟ ಪಡಿಸಿತು.

2001: ಜಾರ್ಜಿಯಾದ ಆಗಸ್ಟಾದಲ್ಲಿ `ಆಗಸ್ಟಾ ಮಾಸ್ಟರ್ಸ್' ಗೆಲ್ಲುವ ಮೂಲಕ ಟೈಗರ್ ವುಡ್ಸ್ ಅವರು ಏಕ ಕಾಲಕ್ಕೆೆ ಎಲ್ಲ ನಾಲ್ಕು ಪ್ರಮುಖ ಚಾಂಪಿಯನ್ ಶಿಪ್ಪುಗಳನ್ನು ಗೆದ್ದ ಮೊದಲ ಗಾಲ್ಫ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1973: ಜಗತ್ತಿನ ಖ್ಯಾತ ಕಲಾವಿದರಲ್ಲಿ ಒಬ್ಬರಾದ ಪಾಬ್ಲೋ ಪಿಕಾಸೋ ಫ್ರಾನ್ಸಿನ ಮೌಗಿನ್ಸಿನಲ್ಲಿ ತಮ್ಮ 91ನೇ ವಯಸ್ಸಿನಲ್ಲಿ ನಿಧನರಾದರು. 20ನೇ ಶತಮಾನದ ಆಧುನಿಕ ಕಲೆಗೆ ಇವರು ಮಹತ್ವದ ಕಾಣಿಕೆ ಸಲ್ಲಿಸಿದರು.

1968: ಕಲಾವಿದ ಚಂದ್ರಶೇಖರ ಎ.ಪಿ. ಜನನ.

1965: ಕಲಾವಿದೆ ನಂದಿನಿ ಕೆ. ಮೆಹ್ತಾ ಜನನ.

1955: ಕಲಾವಿದ ಅಪ್ಪಗೆರೆ ತಿಮ್ಮರಾಜು ಜನನ.

1950: ಪಂಡಿತ್ ಜವಾಹರಲಾಲ್ ನೆಹರೂ ಮತ್ತು ಪಾಕಿಸ್ತಾನದ ಲಿಯಾಖತ್ ಅಲಿ ಖಾನ್ ಭಾರತ ಮತ್ತು ಪಾಕಿಸ್ಥಾನದ ನಿರಾಶ್ರಿತರ ವಾಪಸಾತಿಗೆ ಸಂಬಂಧಿಸಿದ `ದೆಹಲಿ ಒಪ್ಪಂದ'ಕ್ಕೆ ಸಹಿ ಹಾಕಿದರು.

1939: ಸಿಪಿಕೆ ಎಂದೇ ಖ್ಯಾತರಾಗಿರುವ ಪ್ರೊ.ಸಿ.ಪಿ. ಕೃಷ್ಣಕುಮಾರ್ ಈದಿನ ಹುಟ್ಟಿದರು. ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕ ಸಿಪಿಕೆ ಕಾವ್ಯ, ವಿಮರ್ಶೆ, ಅನುವಾದ, ವಿಡಂಬನೆ ಇತ್ಯಾದಿ ಸಾಹಿತ್ಯ ಪ್ರಕಾರಗಳಲ್ಲಿ 250ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆೆ. ರಾಜ್ಯ ಸಾಹಿತ್ಯ ಅಕಾಡೆಮಿ, ಜಾನಪದ, ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಅವರಿಗೆ ಲಭಿಸಿವೆ.

1929: ಭಾರತೀಯ ಕ್ರಾಂತಿಕಾರಿಗಳಾದ ಭಗತ್ ಸಿಂಗ್ ಮತ್ತು ಬಟುಕೇಶ್ವರ ದತ್ ದೆಹಲಿಯ ಕೇಂದ್ರೀಯ ಶಾಸನಸಭೆಯಲ್ಲಿ ಬಾಂಬ್ ಸ್ಫೋಟಿಸಿದರು. ಭಾರತೀಯ ಪ್ರಜೆಗಳ ಮುಖ್ಯವಾಗಿ ಕಾರ್ಮಿಕರ ನಾಗರಿಕ ಹಕ್ಕುಗಳನ್ನು ಮೊಟಕುಗೊಳಿಸುವ ಸಾರ್ವಜನಿಕ ಸುರಕ್ಷತೆ ಮತ್ತು ಕಾರ್ಮಿಕ ವಿವಾದಗಳ ಮಸೂದೆಯನ್ನು ಪ್ರತಿಭಟಿಸಿ ಅವರು ಈ ಕೃತ್ಯ ಎಸಗಿದರು.

1924: ಹಿಂದೂಸ್ಥಾನಿ ಸಂಗೀತದ ಅದ್ಭುತ ತಾರೆ ಎನಿಸಿದ್ದ ಕುಮಾರ ಗಂಧರ್ವ (8-4-1924ರಿಂದ 12-1-1992) ಅವರು ಸಂಗೀತಗಾರ ಸಿದ್ದರಾಮಯ್ಯ- ಗುರುಸಿದ್ದವ್ವ ದಂಪತಿಯ ಮಗನಾಗಿ ಬೆಳಗಾವಿ ಜಿಲ್ಲೆಯ ಸೂಳೆಭಾವಿಯಲ್ಲಿ ಜನಿಸಿದರು. ಜನ್ಮಜಾತ ಪ್ರತಿಭೆಯಾಗಿದ್ದ ಕುಮಾರ ಗಂಧರ್ವ ಅವರು ಐದು ವರ್ಷದವನಿದ್ದಾಗಲೇ ದಾವಣಗೆರೆಯಲ್ಲಿ ಪ್ರಥಮ ಸಂಗೀತ ಕಚೇರಿ ನೀಡಿದರು. ಹನ್ನೊಂದನೆಯ ವಯಸ್ಸಿನಲ್ಲಿ ಅಲಹಾಬಾದಿನಲ್ಲಿ ಸಂಗೀತ ಸಮ್ಮೇಳನದಲ್ಲಿ ಕಾಫಿ ರಾಗವನ್ನು ಅರ್ಧ ಗಂಟೆ ಹಾಡಿ ಶ್ರೋತೃಗಳನ್ನು ಮಂತ್ರಮುಗ್ಧಗೊಳಿಸಿದರು. ಗೀತವರ್ಷ (ಮಳೆಗಾಲ), ಗೀತ ಹೇಮಂತ (ಚಳಿಗಾಲ), ಗೀತ ವಸಂತ (ವಸಂತ ಕಾಲ) ಇವು ಋತುಮಾನಗಳಿಗೆ ಅನುಗುಣವಾಗಿ ಹಾಡಲು ಕುಮಾರ ಗಂಧರ್ವ ನೀಡಿದ ವಿಶಿಷ್ಟ ಹೊಸ ರಾಗಗಳು. ಸೂರದಾಸ, ಕಬೀರದಾಸ, ಮೀರಾ ಭಜನೆಗಳ ಗುಚ್ಛ, ಅನೂಪರಾಗ ವಿಲಾಸ ಇವೆಲ್ಲ ಅವರ ಹತ್ತು ವರ್ಷಗಳ ಸಂಶೋಧನೆಯ ಫಲವಾಗಿ ಮೂಡಿದ ಹೊಸ ರಾಗಗಳು. ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ, ಕಾಳಿದಾಸ ಸಮ್ಮಾನ, ಉಜ್ಜಯನಿ ವಿಕ್ರಮ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಇತ್ಯಾದಿ ಸೇರಿದಂತೆ ಅವರಿಗೆ ಲಭಿಸಿದ ಪ್ರಶಸ್ತಿಗಳಿಗೆ ಲೆಕ್ಕ ಇಲ್ಲ.

1894: ಭಾರತದ ಖ್ಯಾತ ಕಾದಂಬರಿಕಾರ ಬಂಕಿಮ್ ಚಂದ್ರ ಚಟರ್ಜಿ (1838-1894) ಅವರು ಕೊಲ್ಕತಾ (ಕೋಲ್ಕತ್ತಾ) (ಆಗಿನ ಕಲಕತ್ತಾ)ದಲ್ಲಿ ತಮ್ಮ 55ನೇ ವಯಸ್ಸಿನಲ್ಲಿ ನಿಧನರಾದರು. ಅವರ `ಆನಂದಮಠ' ಕೃತಿಯ `ವಂದೇ ಮಾತರಂ' ಭಾರತೀಯ ಸ್ವಾತಂತ್ರ್ಯ ಸಮರದಲ್ಲಿ ಮುಖ್ಯ ಸ್ಫೂರ್ತಿ ಮಂತ್ರವಾಯಿತು. ಮುಂದೆ ಭಾರತದ ರಾಷ್ಟ್ರೀಯ ಗೀತೆ ಕೂಡಾ ಆಯಿತು.

No comments:

Advertisement