My Blog List

Sunday, June 28, 2009

ಇಂದಿನ ಇತಿಹಾಸ History Today ಜೂನ್ 27

ಇಂದಿನ ಇತಿಹಾಸ

ಜೂನ್ 27

ಹೆಸರಾಂತ ವಿಜ್ಞಾನ ಲೇಖಕ ಗುಡ್ಡೆಹಿತ್ಲು ತಿಮ್ಮಪ್ಪಯ್ಯ (ಜಿ.ಟಿ.) ನಾರಾಯಣರಾವ್ (83) ಬೆಳಿಗ್ಗೆ ಏಳು ಗಂಟೆಗೆ ಮೈಸೂರು ನಗರದ ವಿಕ್ರಂ ಆಸ್ಪತ್ರೆಯಲ್ಲಿ ನಿಧನರಾದರು. ಜಿಟಿಎನ್ ಅವರ ಮೃತದೇಹಕ್ಕೆ ಅಂತ್ಯಕ್ರಿಯೆ ಮಾಡದೆ ಅವರ ಇಚ್ಛೆಯಂತೆ ಜೆಎಸ್ಎಸ್ ಆಸ್ಪತ್ರೆಗೆ ದಾನ ಮಾಡಲಾಯಿತು. 1926ರ ಜನವರಿ ಒಂದರಂದು ಮಡಿಕೇರಿಯಲ್ಲಿ ಜನಿಸಿದ ಜಿಟಿಎನ್ ಮದ್ರಾಸು ವಿಶ್ವವಿದ್ಯಾಲಯದಿಂದ ಗಣಿತದಲ್ಲಿ ಎಂ.ಎ. ಪದವಿ ಪಡೆದವರು.

2008: ಹೆಸರಾಂತ ವಿಜ್ಞಾನ ಲೇಖಕ ಗುಡ್ಡೆಹಿತ್ಲು ತಿಮ್ಮಪ್ಪಯ್ಯ (ಜಿ.ಟಿ.) ನಾರಾಯಣರಾವ್ (83) ಬೆಳಿಗ್ಗೆ ಏಳು ಗಂಟೆಗೆ ಮೈಸೂರು ನಗರದ ವಿಕ್ರಂ ಆಸ್ಪತ್ರೆಯಲ್ಲಿ ನಿಧನರಾದರು. ಜಿಟಿಎನ್ ಅವರ ಮೃತದೇಹಕ್ಕೆ ಅಂತ್ಯಕ್ರಿಯೆ ಮಾಡದೆ ಅವರ ಇಚ್ಛೆಯಂತೆ ಜೆಎಸ್ಎಸ್
ಆಸ್ಪತ್ರೆಗೆ ದಾನ ಮಾಡಲಾಯಿತು. ಪತ್ನಿ ಲಕ್ಷ್ಮಿದೇವಿ, ಪುತ್ರರಾದ ಅಶೋಕವರ್ಧನ, ಅನಂತವರ್ಧನ, ಆನಂದವರ್ಧನ, ಅಪಾರ ಬಂಧು-ಬಳಗ ಹಾಗೂ ಶಿಷ್ಯವರ್ಗವನ್ನು ಅವರು ಅಗಲಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಕೂಡ ಜಿಟಿಎನ್ ಶಿಷ್ಯರಲ್ಲಿ ಒಬ್ಬರು. 1926ರ ಜನವರಿ ಒಂದರಂದು ಮಡಿಕೇರಿಯಲ್ಲಿ ಜನಿಸಿದ ಜಿಟಿಎನ್ ಮದ್ರಾಸು ವಿಶ್ವವಿದ್ಯಾಲಯದಿಂದ ಗಣಿತದಲ್ಲಿ ಎಂ.ಎ. ಪದವಿ ಪಡೆದವರು. ಎನ್ಎಸ್ಎಸ್ ಅಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದ ಅವರಿಗೆ, ಕರ್ನಾಟಕ ಸಂಗೀತ ಹಾಗೂ ಕನ್ನಡ ಅಭಿಜಾತ ವಾಙ್ಮಯ ಕುರಿತು, ಅಪಾರ ಆಸಕ್ತಿ ಇತ್ತು. ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಶ್ವಕೋಶ ವಿಜ್ಞಾನ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ ಜಿಟಿಎನ್ ಗಹನವಾದ ವಿಜ್ಞಾನದ ಸಂಗತಿಗಳನ್ನು ಸರಳವಾಗಿ ಬರೆದವರು. ಇವರ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟವಾದ `ನವಕರ್ನಾಟಕ ವಿಜ್ಞಾನ ಪದವಿವರಣ ಕೋಶ' ಒಂದು ಅಮೂಲ್ಯ ಆಕರ ಗ್ರಂಥ. ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಸಿ.ವಿ. ರಾಮನ್ ಅವರನ್ನು ಬೆಂಗಳೂರಿನಲ್ಲಿಯೂ, ಎಸ್. ಚಂದ್ರಶೇಖರ್ ಅವರನ್ನು ಚಿಕಾಗೋದಲ್ಲಿಯೂ ಭೇಟಿ ಮಾಡಿ ಇವರಿಬ್ಬರ ಬಗೆಗೆ ವೈಜ್ಞಾನಿಕ ಜೀವನ ಚರಿತ್ರೆಗಳನ್ನೂ ರಚಿಸಿದವರು ಇವರು. ಇಂಗ್ಲಿಷಿನಿಂದ ಕನ್ನಡಕ್ಕೆ, ವೈಜ್ಞಾನಿಕ ಕೃತಿಗಳನ್ನೂ, ವಿಜ್ಞಾನ ಲೇಖನಗಳನ್ನೂ ವಿಪುಲವಾಗಿ ಅನುವಾದಿಸಿದ್ದಾರೆ. 60ಕ್ಕೂ ಅಧಿಕ ಕನ್ನಡ ಹಾಗೂ ಮೂರು ಇಂಗ್ಲಿಷ್ ಕೃತಿಗಳನ್ನು ಅವರು ರಚಿಸಿದ್ದಾರೆ. ಕೃಷ್ಣ ವಿವರಗಳು, ವಿಶ್ವದ ಕತೆ, ಸೂಪರ್ನೋವಾ, ರಾಮನ್ ಸಂದರ್ಶನ, ಸುಬ್ರಹ್ಮಣ್ಯನ್ ಚಂದ್ರಶೇಖರ್, ರಾಮಾನುಜನ್ ಬಾಳಿದರಿಲ್ಲಿ, ವಿಜ್ಞಾನ ಸಪ್ತರ್ಷಿಗಳು, ಐನ್ಸ್ಟೈನ್ ಬಾಳಿದರಿಲ್ಲಿ, ಕೊಪರ್ನಿಕಸ್ ಕ್ರಾಂತಿ, ಜಾತಕ ಮತ್ತು ಭವಿಷ್ಯ, ಎನ್ಸಿಸಿ ದಿನಗಳು, ನೋಡೋಣು ಬಾರಾ ನಕ್ಷತ್ರ., ಫರ್ಮಾ ಯಕ್ಷಪ್ರಶ್ನೆ, ವೈಜ್ಞಾನಿಕ ಮನೋಧರ್ಮ, ಆಕಾಶದಲ್ಲಿ ಭಾರತ, ಮುಗಿಯದ ಪಯಣ, ಸಂಗೀತ ರಸನಿಮಿಷಗಳು ಅವರ ಪ್ರಮುಖ ಕೃತಿಗಳು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಎಚ್.ನರಸಿಂಹಯ್ಯ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಮಾಳವಾಡ ಪ್ರಶಸ್ತಿ, ಕನ್ನಡ ವಿಜ್ಞಾನ ಪರಿಷತ್ತಿನ ಪ್ರಶಸ್ತಿ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಅವರನ್ನು ಹುಡುಕಿಕೊಂಡು ಬಂದಿದ್ದವು. ಇದೇ ವರ್ಷ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಅವರಿಗೆ `ಗೌರವ ಡಾಕ್ಟರೇಟ್' ಪ್ರಶಸ್ತಿ ನೀಡಿ ಗೌರವಿಸಿತ್ತು.

2007: ಸದ್ದುಗದ್ದಲ ಇಲ್ಲದೆ ಕೆಲಸ ಮಾಡುವ ಲೇಬರ್ ಪಕ್ಷದ ನಾಯಕ ಗಾರ್ಡನ್ ಬ್ರೌನ್ ಬ್ರಿಟನ್ನಿನ ನೂತನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಇದರೊಂದಿಗೆ ಇದೇ ಪಕ್ಷದ ಟೋನಿ ಬ್ಲೇರ್ ಅವರ 10 ವರ್ಷದ ಆಡಳಿತಕ್ಕೆ ತೆರೆ ಬಿತ್ತು.

2007: ಬಹುಕೋಟಿ ನಕಲಿ ಛಾಪಾ ಕಾಗದ ಹಗರಣದಲ್ಲಿ ಆರೋಪಿಗಳಾಗಿದ್ದ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಆರ್. ಎಸ್. ಶರ್ಮಾ ಮತ್ತು ಮತ್ತಿಬ್ಬರು ಪೊಲೀಸ್ ಅಧಿಕಾರಿಗಳನ್ನು ಸಾಕ್ಷ್ಯಗಳ ಕೊರತೆಯ ಕಾರಣ ಪುಣೆಯ ವಿಶೇಷ ನ್ಯಾಯಾಲಯ ಆರೋಪಮುಕ್ತ ಗೊಳಿಸಿತು.

2007: ಮೂರು ವರ್ಷಗಳಿಂದ ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಕುಲಪತಿಯಾಗಿದ್ದ ಡಾ. ಬಿ.ಎ. ವಿವೇಕ ರೈ ಅವರು ಕರ್ನಾಟಕ ಮುಕ್ತ ವಿಶ್ವ ವಿದ್ಯಾಲಯದ ನೂತನ ಕುಲಪತಿಯಾಗಿ ನೇಮಕಗೊಂಡರು.

2007: ಕಾರ್ಮಿಕ ಮುಖಂಡ, ಸ್ವಾತಂತ್ರ್ಯ ಹೋರಾಟಗಾರ ಎಡ ಪಂಥೀಯ ನಾಯಕ ಕೆ.ಆರ್. ನಾಯಕ್ (78) ಅವರು ತುಮಕೂರಿನಲ್ಲಿ ಈದಿನ ನಿಧನರಾದರು.

2006: ಗೋವಾದ ರಾಷ್ಟ್ರೀಯ ಸಾಗರ ಭೂಗರ್ಭ ವಿಜ್ಞಾನ ಸಂಸ್ಥೆಯ 55 ವರ್ಷದ ಸಾಗರ ಭೂಗರ್ಭ ವಿಜ್ಞಾನಿ ಅನಿಲ್ ಬಾಲ್ಸಂಕರ್ ಅವರು ಲಿಮ್ಕಾ ದಾಖಲೆ ಸೇರಲು ಪಣಜಿಯಲ್ಲಿ ಮಾಧ್ಯಮ, ಕ್ಯಾಮರಾಗಳು, ವೈದ್ಯರ ಮುಂದೆ ಇಚ್ಛಾಶಕ್ತಿಯನ್ನು ಬಳಸಿ ಬೇಕೆಂದಾಗ ತಮ್ಮ ರೋಮಗಳನ್ನು ನಿಮಿರಿಸಿದರು..! (ನೆಟ್ಟಗೆ ನಿಲ್ಲಿಸಿದರು..!) ಈ ವಿಜ್ಞಾನಿ ಕಳೆದ 25 ವರ್ಷಗಳಿಂದ ತಮ್ಮ ಕೂದಲುಗಳನ್ನು ತಮ್ಮ ಇಚ್ಛೆಗೆ ಅನುಗುಣವಾಗಿ ನೆಟ್ಟಗೆ ನಿಲ್ಲಿಸುವ ಕಲೆ ಅಭ್ಯಾಸ ಮಾಡುತ್ತಾ ಬಂದಿದ್ದಾರೆ. ಪರಿಣಾಮವಾಗಿ ಬಾಲ್ಸಂಕರ್ ಅವರು ತಮ್ಮ ಮನಸ್ಸಿನ ಮೂಲಕವಾಗಿ ಏಕಾಗ್ರತೆ ಸಾಧಿಸಿದ ಐದಾರು ಸೆಕೆಂಡುಗಳಲ್ಲಿ, ಅವರ ಕೈಗಳು, ಕಾಲುಗಳು, ಕಂಕುಳ ರೋಮಗಳು ನೆಟ್ಟಗೆ ನಿಲ್ಲುತ್ತವೆ.

2006: ಲಾಹೋರಿನಲ್ಲಿ ಇರುವ ಏಕೈಕ ಕೃಷ್ಣ ದೇವಾಲಯವನ್ನು ಕೆಡವಿಲ್ಲ. ಸತ್ಯಾಸತ್ಯತೆ ಪರಿಶೀಲಿಸಲು ಲಾಹೋರಿಗೆ ಬನ್ನಿ ಎಂದು ಪಾಕಿಸ್ತಾನದ ಧಾರ್ಮಿಕ ವ್ಯವಹಾರಗಳ ಸಚಿವ ಎಜಾಜುಲ್ ಹಕ್ ಅವರು ಬಿಜೆಪಿ ನಾಯಕ ಎಲ್. ಕೆ. ಅಡ್ವಾಣಿ ಅವರನ್ನು ಕೋರಿದರು.

1979: ಅಮೆರಿಕದ ಬಾಕ್ಸರ್ ಮಹಮ್ಮದ್ ಅಲಿ ಬಾಕ್ಸಿಂಗ್ ನಿಂದ ತಮ್ಮ ನಿವೃತ್ತಿ ಘೋಷಿಸಿದರು. ಜಗತ್ತಿನ ಮಹಾನ್ ಹೆವಿವೇಯ್ಟ್ ಬಾಕ್ಸರ್ಗಳಲ್ಲಿ ಇವರು ಒಬ್ಬರು. 20ನೇ ಶತಮಾನದ ಮಹಾನ್ ಅಥ್ಲೆಟ್ ಗಳಲ್ಲೂ ಒಬ್ಬರೆಂದು ಖ್ಯಾತರಾಗಿದ್ದಾರೆ.

1967: ಜಗತ್ತಿನ ಪ್ರಪ್ರಥಮ ಎಟಿಎಂ (ಆಟೋಮ್ಯಾಟಿಕ್ ಟೆಲ್ಲರ್ ಮೆಷಿನ್) ಲಂಡನ್ನಿನ ಎನ್ ಫೀಲ್ಡಿನಲ್ಲಿ ಸ್ಥಾಪನೆಗೊಂಡಿತು. ಬ್ಯಾಂಕ್ ಗ್ರಾಹಕರಿಗೆ ಯಾವುದೇ ಸಮಯದಲ್ಲಿ ಮಾನವ ನೆರವು ಇಲ್ಲದೆಯೇ ಹಣ ಹಿಂತೆಗೆದುಕೊಳ್ಳಲು, ಬ್ಯಾಲೆನ್ಸ್ ನೋಡಿಕೊಳ್ಳಲು ಈ ಎಲೆಕ್ಟ್ರಾನಿಕ್ ಯಂತ್ರ ಅವಕಾಶ ಕಲ್ಪಿಸುತ್ತದೆ.

1961: ಕ್ಯಾಂಟರ್ಬರಿ ಕ್ಯಾಥೆಡ್ರಲ್ ನಲ್ಲಿ 100ನೇ ಕ್ಯಾಂಟರ್ ಬರಿ ಆರ್ಚ್ ಬಿಷಪ್ ಆಗಿ ಆರ್ಥರ್ ಮೈಕೆಲ್ ರಾಮ್ ಸೆ ಅವರಿಗೆ ಪಟ್ಟಗಟ್ಟಲಾಯಿತು.

1943: ಸಂಗೀತ ಕಲಾವಿದರ, ಸಂಗೀತ ತಜ್ಞರ ಮನೆತನದಲ್ಲಿ ಹುಟ್ಟಿ ಸಂಗೀತ ವಿದುಷಿ ಎನಿಸಿಕೊಂಡು 50 ವರ್ಷಗಳಿಗೂ ಹೆಚ್ಚು ಕಾಲದಿಂದ ಹಾಡಿ ಮೋಡಿ ಮಾಡಿದ ಗಾಯಕಿ ಸರೋಜಾ ನಟರಾಜನ್ ಜನನ.

1839: ಪಂಜಾಬಿನ ಮಹಾರಾಜ ರಣಜಿತ್ ಸಿಂಗ್ ತನ್ನ 58ನೇ ವಯಸ್ಸಿನಲ್ಲಿ ಲಾಹೋರಿನಲ್ಲಿ ಮೃತನಾದ. ಆತನ ನಾಲ್ವರು ಪತ್ನಿಯರು ಮತ್ತು 7 ಮಂದಿ ದಾಸಿಯರು ಸಿಂಗ್ ಚಿತೆಗೆ ಹಾರಿ ಆತ್ಮಾರ್ಪಣೆ ಮಾಡಿಕೊಂಡರು. ರಣಜಿತ್ ಸಿಂಗ್ ಸಾವಿನ ಆರು ವರ್ಷಗಳಿಗೂ ಕಡಿಮೆ ಅವದಿಯಲ್ಲಿ ಆತ ಕಟ್ಟಿದ್ದ ಸಿಖ್ ರಾಜ್ಯ ನಾಯಕರ ಪೈಪೋಟಿಯಿಂದ ಉಂಟಾದ ಆಂತರಿಕ ಗೊಂದಲದ ಪರಿಣಾಮವಾಗಿ ಪತನಗೊಂಡಿತು.

1829: ವಾಷಿಂಗ್ಟನ್ ಡಿ.ಸಿ.ಯ ಸ್ಮಿತ್ ಸೋನಿಯನ್ ಇನ್ ಸ್ಟಿಟ್ಯೂಟ್ ಸ್ಥಾಪನೆಗೆ ನಿಧಿ ಒದಗಿಸಿದ ಇಂಗ್ಲಿಷ್ ವಿಜ್ಞಾನಿ ಜೇಮ್ಸ್ ಸ್ಮಿತ್ ಸನ್ (1765-1829) ಜಿನೋವಾದಲ್ಲಿ ಮೃತನಾದ. ತಾನು ಜನಿಸಿದ ಸಂದರ್ಭ ಕುರಿತ ವಿವಾದಗಳ ಅಸಮಾಧಾನದ ಹಿನ್ನೆಲೆಯಲ್ಲಿ ಆತ ತನ್ನ ಹಣವನ್ನೆಲ್ಲ ಅಮೆರಿಕದ ಸಂಸ್ಥೆಗೆ ನೀಡಿದ. 1904ರಲ್ಲಿ ಆತನ ಅಸ್ಥಿಯನ್ನು ಬಿಗಿ ಭದ್ರತೆಯ ಮಧ್ಯೆ ಅಮೆರಿಕಕ್ಕೆ ತಂದು ಸ್ಮಿತ್ ಸೋನಿಯನ್ ಸಂಸ್ಥೆಯ ಮೂಲ ಕಟ್ಟಡದಲ್ಲಿ ಇರಿಸಲಾಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement