My Blog List

Monday, August 24, 2009

ಇಂದಿನ ಇತಿಹಾಸ History Today ಆಗಸ್ಟ್ 24

ಇಂದಿನ ಇತಿಹಾಸ

ಆಗಸ್ಟ್ 24

ಜೆಕ್ ಗಣರಾಜ್ಯದ ರಾಜಧಾನಿ ಪ್ಲೇಗ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಖಗೋಳ ವಿಜ್ಞಾನ ಸಂಘದ ಮಹಾಧಿವೇಶನದಲ್ಲಿ ವಿಜ್ಞಾನಿಗಳು ಒಂಬತ್ತು ಗ್ರಹಗಳ ಸಾಲಿನಿಂದ `ಪ್ಲೂಟೋ'ವನ್ನು ಕಿತ್ತು ಹಾಕಲು ತೀರ್ಮಾನಿಸಿದರು. ಗ್ರಹ ಎಂದು ಕರೆಸಿಕೊಳ್ಳಲು ನಿರ್ದಿಷ್ಟ ವ್ಯಾಖ್ಯಾನವ್ದಿದು, ಇದರ ಪ್ರಕಾರ `ಪ್ಲೂಟೋ' ಗ್ರಹಗಳ ಸಾಲಿಗೆ ಸೇರುವುದಿಲ್ಲ ಎಂಬುದು ವಿಜ್ಞಾನಿಗಳ ಪ್ರತಿಪಾದನೆ. ಸೌಮಂಡಲದ 9ನೇ ಗ್ರಹವಾಗಿದ್ದ ಪ್ಲೂಟೋ 1930ರಲ್ಲಿ ಪತ್ತೆಯಾಗಿತ್ತು.

2008: ಕಿರ್ಗಿಸ್ಥಾನ್ ರಾಜಧಾನಿ ಬಿಶ್ಕೇಕಿನಲ್ಲಿ ವಿಮಾನವೊಂದು ಅಪಘಾತಕ್ಕೀಡಾಗಿ 87 ಜನ ಮೃತರಾದರು. ಇರಾನಿಗೆ ತೆರಳುತ್ತಿದ್ದ ಈ ವಿಮಾನ ಬಿಶ್ಕೇಕಿನ ನಿಲ್ದಾಣದಿಂದ ಹಾರಾಟ ಆರಂಭಿಸಿದ ಕೆಲ ಕ್ಷಣಗಳಲ್ಲೇ ಅಪಘಾತಕ್ಕೆ ತುತ್ತಾಯಿತು. ವಿಮಾನದಲ್ಲಿ 123 ಪ್ರಯಾಣಿಕರಿದ್ದರು.

2007: ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ತಮ್ಮ ವಿರುದ್ಧ ಜೈಪುರ ಸ್ಥಳೀಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಿಧಿಸಿದ ಐದು ವರ್ಷಗಳ ಸೆರೆವಾಸದ ಶಿಕ್ಷೆಯನ್ನು ಪ್ರಶ್ನಿಸಿ ಬಾಲಿವುಡ್ ನಟ ಸಲ್ಮಾನ್ ಖಾನ್ ಸಲ್ಲಿಸಿದ್ದ ಅರ್ಜಿಯನ್ನು ಜೋಧ್ ಪುರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿತು. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸಲ್ಮಾನ್ ವಿರುದ್ಧ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಬಿ.ಕೆ. ಜೈನ್ ಅವರು 2006ರ ಏಪ್ರಿಲ್ 10ರಂದು ನೀಡಿದ್ದ ತೀರ್ಪನ್ನು ಎತ್ತಿಹಿಡಿದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕಮಲ್ ರಾಜ್ ಸಿಂಘ್ವಿ ಅವರು, ನಟನ ಬಂಧನಕ್ಕೆ ಜಾಮೀನುರಹಿತ ವಾರಂಟ್ ಹೊರಡಿಸಿದರು. ಆದರೆ ಇನ್ನೊಬ್ಬ ಆರೋಪಿ ಗೋವರ್ಧನ್ ಸಿಂಗ್ ನನ್ನು ಖುಲಾಸೆ ಮಾಡಿದರು. 41 ವರ್ಷದ ಸಲ್ಮಾನ್ ಅವರು 1998ರ ಸೆಪ್ಟೆಂಬರ್ 28ರಂದು ಸೂರಜ್ ಅವರ ``ಹಮ್ ಸಾಥ್ ಸಾಥ್ ಹೈ'' ಚಲನಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಗೋಡಾ ಫಾರ್ಮ್ ಬಳಿಯ ಉಜಿಯಾಲ ಬಖಾರದಲ್ಲಿ ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿದ್ದ ಆರೋಪಕ್ಕೆ ಗುರಿಯಾಗಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಲ್ಮಾನ್ ಗೆ ಐದು ವರ್ಷಗಳ ಜೈಲುಶಿಕ್ಷೆ ಮತ್ತು ರೂ 25 ಸಾವಿರ ದಂಡ ವಿಧಿಸಿ ತೀರ್ಪು ನೀಡಿತ್ತು.

2007: ಬಡತನ ರೇಖೆಗಿಂತ ಕೆಳಗಿನ ಕುಟುಂಬದ ಬಾಣಂತಿ ಹಾಗೂ ನವಜಾತ ಶಿಶುವಿನ ಆರೈಕೆಗೆ ಕರ್ನಾಟಕದ ಕುಟುಂಬ ಕಲ್ಯಾಣ ಇಲಾಖೆಯು `ಮಡಿಲು' ಎಂಬ ನೂತನ ಯೋಜನೆಯನ್ನು ಜಾರಿಗೆ ತಂದಿತು. ಸುರಕ್ಷಿತ ಹೆರಿಗೆ, ತಾಯಿ- ಮಗುವಿನ ಆರೋಗ್ಯ ರಕ್ಷಣೆಗಾಗಿ ವರಮಹಾಲಕ್ಷ್ಮಿ ಹಬ್ಬದಂದೇ ಈ ಯೋಜನೆಯನ್ನು ಜಾರಿಗೊಳಿಸಲಾಯಿತು ಎಂದು ಆರೋಗ್ಯ ಸಚಿವ ಆರ್.ಅಶೋಕ್ ಪ್ರಕಟಿಸಿದರು. ಯೋಜನೆಗಾಗಿ 18.38 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಯೋಜನೆಯು ಆಗಸ್ಟ್ 15ರಿಂದ ಪೂರ್ವಾನ್ವಯವಾಗಿ ಜಾರಿಯಾಗುವುದು.

2007: 30 ವರ್ಷಗಳ ಹಿಂದೆ ಮಂಗಳಯಾನ ಕೈಗೊಂಡಿದ್ದ ವೈಕಿಂಗ್ ಲ್ಯಾಂಡರಿನ ವರದಿಯನ್ನು ಈಗ ಜರ್ಮನಿಯ ಜಿಯೆಸ್ಸೆನ್ ವಿಶ್ವವಿದ್ಯಾನಿಲಯದ ಜೂಪ್ ಹೌಟ್ಕೂಪರ್ ಹೊಸದಾಗಿ ವಿಶ್ಲೇಷಿದ್ದು, ಮಂಗಳ ಗ್ರಹದ ಮಣ್ಣಿನಲ್ಲಿ ಸೂಕ್ಷ್ಮಾಣು ಜೀವಿಗಳು ಇರಬಹುದು, ಮಂಗಳನ ಮಣ್ಣಿನಲ್ಲಿ ಶೇಕಡಾ 0.1ರಷ್ಟು ಭಾಗದಲ್ಲಿ ಜೈವಿಕ ಅಂಶಗಳು ಇರಬಹುದು ಎಂದು ಹೇಳಿದರು. ಅಂಟಾರ್ಟಿಕಾದ ಅತಿಶೀತಲ ಪ್ರದೇಶದಲ್ಲಿ ಇರುವಷ್ಟೇ ಪ್ರಮಾಣದ ಜೀವ ಪಸೆ ಮಂಗಳನ ಮಣ್ಣಿನಲ್ಲೂ ಇದೆ. ಅಂಟಾರ್ಟಿಕಾದಲ್ಲಿ ಕೆಲ ವಿಶಿಷ್ಟ ಬ್ಯಾಕ್ಟೀರಿಯಾ ಹಾಗೂ ಶಿಲಾವಲ್ಕಗಳು ಜೀವಿಸುತ್ತಿವೆ. ಕೋಟ್ಯಂತರ ವರ್ಷಗಳ ಹಿಂದೆ ಭೂಮಿಯಿಂದ ಮಂಗಳಕ್ಕೆ ಅಥವಾ ಅಲ್ಲಿಂದ ಭೂಮಿಗೆ ಜೀವಾಣುಗಳು ಹಾರಿ ಬಂದಿರಬಹುದಾದ ಸಾಧ್ಯತೆಯಿದೆ ಎಂದು ಹೌಟ್ ಕೂಪರ್ ಅಭಿಪ್ರಾಯ ಪಟ್ಟರು. ದಶಕಗಳ ಹಿಂದೆ ಅಂಟಾರ್ಟಿಕಾದಲ್ಲಿ ಸಿಕ್ಕಿದ್ದ ಉಲ್ಕಾಶಿಲೆಯೊಂದು, ಮಂಗಳನಲ್ಲಿ ಜೀವ ಸೆಲೆ ಇದ್ದುದರ ಕುರುಹು ನೀಡಿತ್ತು.

2007: ನಕ್ಷತ್ರಗಂಗೆಗಳು, ನಕ್ಷತ್ರಗಳು ಹಾಗೂ ಕಪ್ಪು ದ್ರವ್ಯವೂ ಇಲ್ಲದ ದೈತ್ಯ ರಂಧ್ರವೊಂದು ಬ್ರಹ್ಮಾಂಡದಲ್ಲಿ ಪತ್ತೆಯಾಗಿದೆ ಎಂದು ಮಿನ್ನೆಸೊಟಾ ವಿಶ್ವವಿದ್ಯಾನಿಲಯದ ಖಗೋಳವಿಜ್ಞಾನಿಗಳ ತಂಡ ಈದಿನ ಪ್ರಕಟಿಸಿತು. ಈ ರಂಧ್ರ 100 ಕೋಟಿ ಜ್ಯೋತಿರ್ವರ್ಷಗಳಷ್ಟು ಅಗಲವಿದೆ. ಇಂತಹ ಬೃಹತ್ ರಂಧ್ರವನ್ನು ಈ ಹಿಂದೆ ಯಾರೂ ಪತ್ತೆ ಹಚ್ಚಿರಲಿಲ್ಲ. ನಾವು ಸಹ ಇದನ್ನು ನಿರೀಕ್ಷಿಸಿರಲಿಲ್ಲ. ಆದರೆ, ಆಕಾಶದ ಆ ಭಾಗದಲ್ಲಿ ವಿಶಿಷ್ಟವಾದುದು ಏನೋ ಇರಬಹುದು ಎಂದು ಅಂದುಕೊಂಡಿದ್ದೆವು ಎಂದು ಖಗೋಳಶಾಸ್ತ್ರ ಪ್ರಾಧ್ಯಾಪಕ ಲಾರೆನ್ಸ್ ರುಡ್ನಿಕ್ ಹೇಳಿದರು.

2007: ಪಾಕಿಸ್ಥಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಸ್ವದೇಶಕ್ಕೆ ಮರಳಲು ಪಾಕ್ ಸುಪ್ರೀಂಕೋರ್ಟ್ ಅನುಮತಿ ನೀಡಿದ್ದು, ಆ ದೇಶದಲ್ಲಿ ಕೋಲಾಹಲ ಹುಟ್ಟುಹಾಕಿತು. ಸುಪ್ರೀಂಕೋರ್ಟ್ ತೀರ್ಪಿನ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಸಂಸದೀಯ ವ್ಯವಹಾರ ಸಚಿವ ಶೇರ್ ಆಫ್ಘಾನ್ ನಿಯಾಜಿ ಅವರಿಗೆ ಸುಪ್ರೀಂಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿತು. ಟಿವಿ ವಾಹಿನಿಯೊಂದರಲ್ಲಿ ಕೋರ್ಟ್ ತೀರ್ಪನ್ನು ಟೀಕಿಸಿದ್ದ ಸಚಿವ ನಿಯಾಜಿ, ನ್ಯಾಯಾಂಗವೂ ಈಗ ರಾಜಕೀಯ ಪಕ್ಷದಂತೆ ವರ್ತಿಸುತ್ತಿದೆ. ತಾವು ಈ ತೀರ್ಪನ್ನು ಒಪ್ಪುವುದಿಲ್ಲ. ನ್ಯಾಯಾಂಗ ಸಂಘರ್ಷದ ಹಾದಿ ಹಿಡಿದಿದೆ ಎಂದು ಹೇಳಿದ್ದರು.

2007: ಕರ್ನಾಟಕ ರಾಜ್ಯ ಸರ್ಕಾರ ನೀಡುವ 2006-07ನೇ ಸಾಲಿನ ಬಸವ ಪ್ರಶಸ್ತಿಯನ್ನು ಮಾಜಿ ರಾಷ್ಟ್ರಪತಿ ಪ್ರೊ ಎ.ಪಿ.ಜೆ.ಅಬ್ದುಲ್ ಕಲಾಂ ಅವರಿಗೆ ನೀಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಎಚ್. ಎಸ್. ಮಹದೇವ ಪ್ರಸಾದ್ ಪ್ರಕಟಿಸಿದರು.

2007: ರಾಗ ಸಂಯೋಜನೆ ಸಂದರ್ಭದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಹಾಗೂ ಭಾರ್ತಿ ಎಂಟರ್ ಪ್ರೈಸಸ್ ಅಧ್ಯಕ್ಷ ಸುನೀಲ್ ಮಿತ್ತಲ್ ಅವರು ರಾಷ್ಟ್ರಗೀತೆಗೆ ಅಗೌರವ ಸಲ್ಲಿಸಿದ್ದಾರೆ ಎಂದು ಆರೋಪಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿತು. ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿ ಜೆ. ಮೋಹನ್ ರಾಜ್ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಪಿ. ಶಹಾ ಹಾಗೂ ನ್ಯಾಯಮೂರ್ತಿ ಪಿ. ಜೋತಿಮಣಿ ಅವರನ್ನು ಒಳಗೊಂಡ ವಿಭಾಗೀಯ ಪೀಠ ವಜಾ ಮಾಡಿತು. ರೆಹಮಾನ್ ಅವರು ರಾಷ್ಟ್ರಗೀತೆಯನ್ನು `ಮೊಟಕುಗೊಳಿಸಿ ಹಾಗೂ ವಿರೂಪಗೊಳಿಸಿ' ರಾಗಸಂಯೋಜನೆ ಮಾಡಿದ ಹಾಡನ್ನು ಪ್ರಸಾರ ಮಾಡುವುದು ಹಾಗೂ ಈ ಹಾಡಿನ ಕ್ಯಾಸೆಟ್ ಮಾರಾಟ ಮಾಡುವುದನ್ನು ಕಾನೂನು ಬಾಹಿರವೆಂದು ಘೋಷಿಸುವಂತೆ ಆಗ್ರಹಿಸಿ ಮೋಹನ್ ರಾಜ್ ಅರ್ಜಿ ಸಲ್ಲಿಸಿದ್ದರು. ಮಿತ್ತಲ್ ಮಾಲೀಕತ್ವದ ಭಾರ್ತಿ ಏರ್ಟೆಲ್ ಪ್ರಾಯೋಜಿಸಿದ ಈ ಕಾರ್ಯಕ್ರಮ ಹಲವು ಟಿ.ವಿ ಚಾನೆಲ್ಲುಗಳಲ್ಲಿ ಪ್ರಸಾರಗೊಂಡಿತ್ತು.

2006: ಜೆಕ್ ಗಣರಾಜ್ಯದ ರಾಜಧಾನಿ ಪ್ಲೇಗ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಖಗೋಳ ವಿಜ್ಞಾನ ಸಂಘದ ಮಹಾಧಿವೇಶನದಲ್ಲಿ ವಿಜ್ಞಾನಿಗಳು ಒಂಬತ್ತು ಗ್ರಹಗಳ ಸಾಲಿನಿಂದ `ಪ್ಲೂಟೋ'ವನ್ನು ಕಿತ್ತು ಹಾಕಲು ತೀರ್ಮಾನಿಸಿದರು. ಗ್ರಹ ಎಂದು ಕರೆಸಿಕೊಳ್ಳಲು ನಿರ್ದಿಷ್ಟ ವ್ಯಾಖ್ಯಾನವ್ದಿದು, ಇದರ ಪ್ರಕಾರ `ಪ್ಲೂಟೋ' ಗ್ರಹಗಳ ಸಾಲಿಗೆ ಸೇರುವುದಿಲ್ಲ ಎಂಬುದು ವಿಜ್ಞಾನಿಗಳ ಪ್ರತಿಪಾದನೆ. ಸೌಮಂಡಲದ 9ನೇ ಗ್ರಹವಾಗಿದ್ದ ಪ್ಲೂಟೋ 1930ರಲ್ಲಿ ಪತ್ತೆಯಾಗಿತ್ತು. ವಿಜ್ಞಾನಿಗಳ ತೀರ್ಮಾನದ ಪ್ರಕಾರ ಇನ್ನು ಮುಂದೆ ಸೌರಮಂಡಲದಲ್ಲಿ ಇರುವ ಗ್ರಹಗಳು ಎಂಟು ಮಾತ್ರ. ಅವುಗಳು ಯಾವುವು ಎಂದರೆ ಮಂಗಳ, ಬುಧ, ಭೂಮಿ, ಗುರು, ಶುಕ್ರ, ಶನಿ, ಯುರೇನಸ್ ಮತ್ತು ನೆಪ್ಚೂನ್.

2006: ಯುರೋಪಿನ ಅತ್ಯಂತ ದೊಡ್ಡ ಹಿಂದೂ ದೇವಾಲಯ ಎನ್ನಲಾದ `ವೆಂಕಟೇಶ್ವರ ದೇವಾಲಯ'ವನ್ನು ಬರ್ಮಿಂಗ್ ಹ್ಯಾಮ್ ಬಳಿ ಉದ್ಘಾಟಿಸಲಾಯಿತು. 57.3 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಈ ದೇವಾಲಯವನ್ನು ತಿರುಪತಿಯ ವೆಂಕಟೇಶ್ವರ ದೇವಾಲಯದ ಮಾದರಿಯಲ್ಲಿಯೇ ನಿರ್ಮಿಸಲಾಗಿದೆ. 6.6 ಮೀಟರ್ ಎತ್ತರದ ಕೃಷ್ಣನ ವಿಗ್ರಹವನ್ನು ಇಲ್ಲಿ ಸ್ಥಾಪಿಸಲಾಗಿದೆ.

2006: `ಆರ್ಟ್ ಆಫ್ ಲಿವಿಂಗ್' ಸಂಸ್ಥಾಪಕ ಶ್ರೀಶ್ರೀಶ್ರೀ ರವಿಶಂಕರ ಗುರೂಜಿ ಅವರಿಗೆ ಮಂಗೋಲಿಯಾ ಸರ್ಕಾರದ ಅತ್ಯುನ್ನತ ನಾಗರಿಕ ಪ್ರಶಸ್ತಿ `ಪೋಲ್ ಸ್ಟಾರ್' ಪ್ರದಾನ ಮಾಡಲಾಯಿತು. ಭಾರತ- ಮಂಗೋಲಿಯಾ ನಡುವಣ ಸ್ನೇಹವರ್ಧನೆಗೆೆ ನೀಡಿದ ಮೌಲಿಕ ಕಾಣಿಕೆಗಾಗಿ ಮಂಗೋಲಿಯಾದ ಉಲನ್ ಬತರಿನಲ್ಲಿ ರಾಷ್ಟ್ರಾಧ್ಯಕ್ಷರ ಕಚೇರಿಯಲ್ಲಿ ಈ ಪ್ರಶಸ್ತಿಯನ್ನು ಗುರೂಜಿ ಅವರಿಗೆ ನೀಡಲಾಯಿತು.

2006: ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಿರಿಯ ಸಾಹಿತಿ ಬಿ.ಆರ್. ವಾಡಪ್ಪಿ (92) ಧಾರವಾಡದಲ್ಲಿ ನಿಧನರಾದರು. ಸರ್ವೋದಯ ಸಾಹಿತ್ಯ ಆರಂಭದಲ್ಲಿ ಸಾಹಿತ್ಯ ಕೃಷಿ ಆರಂಭಿಸಿದ ವಾಡಪ್ಪಿ ಅವರು ವಿಮರ್ಶೆ, ನಾಟಕ, ಭಾಷಣ, ಹರಟೆ ಮುಂತಾದ ಹಲವಾರು ಪ್ರಕಾರಗಳಲ್ಲಿ ಮೌಲಿಕ ಕೃತಿಗಳನ್ನು ಹೊರತಂದವರು. 1991ರಲ್ಲಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು.

2006: ಸಂಗೀತಗಾರ ವಲ್ಲಾನ್ ಚಕ್ರವರ್ತಿಲು ಕೃಷ್ಣಮಾಚಾರುಲು (84) ವಿಜಯವಾಡದ ಸ್ವಗೃಹದಲ್ಲಿ ನಿಧನರಾದರು. 1923ರಲ್ಲಿ ಕೃಷ್ಣಾ ಜಿಲ್ಲೆ ಜಗ್ಗಯ್ಯ ಪೇಟೆಯಲ್ಲಿ ಜನಿಸಿದ ಅವರು ಆಕಾಶವಾಣಯಲ್ಲಿ ಮೂರೂವರೆ ದಶಕ ಕಾಲ ಅತ್ಯುನ್ನತ ಶ್ರೇಣಿಯ ಸಂಗೀತ ಕಲಾವಿದರಾಗಿ ಸೇವೆ ಸಲ್ಲಿಸಿದ್ದರು. ಸಂಸ್ಕೃತ, ತೆಲುಗು ಭಾಷೆಗಳಲ್ಲಿ ವಿದ್ವಾಂಸರಾಗಿದ್ದ ಅವರನ್ನು ಆಂಧ್ರಪ್ರದೇಶ ಸಂಗೀತ ನಾಟಕ ಅಕಾಡೆಮಿಯು `ಗಾನಕಲಾ ಪ್ರಪೂರ್ಣ' ಪ್ರಶಸ್ತಿ ನೀಡಿ ಗೌರವಿಸಿತ್ತು.

1995: ಮೈಕ್ರೋಸಾಫ್ಟ್ ಕಾರ್ಪೊರೇಷನ್ `ವಿಂಡೋಸ್ 95' ಅನ್ನು ನ್ಯೂಯಾರ್ಕಿನಲ್ಲಿ ಬಿಡುಗಡೆ ಮಾಡಿತು.

1974: ಫಕ್ರುದ್ದೀನ್ ಆಲಿ ಅಹಮದ್ ಅವರು ಭಾರತದ ಐದನೆಯ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

1971: ಅಜಿತ್ ವಾಡೇಕರ್ ನೇತೃತ್ವದಲ್ಲಿ ಭಾರತವು ಇಂಗ್ಲೆಂಡಿನಲ್ಲಿ ಇಂಗ್ಲೆಂಡ್ ವಿರುದ್ಧದ ಕ್ರಿಕೆಟ್ ಸರಣಿಯಲ್ಲಿ ತನ್ನ ಮೊತ್ತ ಮೊದಲ ಜಯವನ್ನು (1-0) ಗಳಿಸಿತು. ಲೆಗ್ ಸ್ಪಿನ್ನರ್ ಚಂದ್ರಶೇಖರ್ ಅವರು ಈ ಜಯದ `ಹೀರೋ' ಆಗ್ದಿದರು.

1969: ವರಾಹಗಿರಿ ವೆಂಕಟಗಿರಿ ಅವರು ಭಾರತದ ನಾಲ್ಕನೆಯ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

1968: ಖ್ಯಾತ ಭೂಗರ್ಭ ಶಾಸ್ತ್ರಜ್ಞ ರಾಧಾ ಕಮಲ್ ಮುಖರ್ಜಿ ನಿಧನರಾದರು.

1955: ಡಾ. ರಾಮಮನೋಹರ ಲೋಹಿಯಾ ಅವರು ಭಾರತೀಯ ಸಮಾಜವಾದಿ ಪಕ್ಷವನ್ನು ಸ್ಥಾಪಿಸಿದರು.

1952: ಸೋಷಿಯಲಿಸ್ಟ್ ಪಾರ್ಟಿ ಮತ್ತು ಕೃಷಿಕ್ ಮಜ್ದೂರ್ ಪಾರ್ಟಿ ವಿಲೀನ.

1932: ಅಮೇಲಿಯಾ ಈಯರ್ ಹಾರ್ಟ್ ಅವರು ಅಮೆರಿಕದ ಮೇಲಿನಿಂದ ನಿಲುಗಡೆ ರಹಿತವಾಗಿ ವಿಮಾನಯಾನ ಮಾಡಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು ಲಾಸ್ ಏಂಜೆಲಿಸ್ ನಿಂದ ನ್ಯೂಜೆರ್ಸಿಯನೆವಾರ್ಕಿಗೆ 19 ಗಂಟೆಗಳ ಕಾಲ ಪ್ರಯಾಣಿಸಿದರು.

1924: ಸಾಹಿತಿ ಕೆ.ಎಚ್. ಶ್ರೀನಿವಾಸ್ ಜನನ.

1911: ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ್ತಿ ವೀಣಾದಾಸ್ ಜನನ.

1903: ಕನ್ನಡ ಸಾಹಿತ್ಯಾರಾಧಕ, ಏಕೀಕರಣ ಹೋರಾಟಗಾರ , ಕರ್ನಾಟಕ ಹೈಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ ನಿಟ್ಟೂರು ಶ್ರೀನಿವಾಸರಾವ್ (1903-2004) ಅವರು ನಿಟ್ಟೂರು ಶಾಮಣ್ಣ- ಸೀತಮ್ಮ ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು. ಹೈಕೋರ್ಟಿನ ಮುಖ್ಯನ್ಯಾಯಾಧೀಶರಾಗಿ 1963ರಲ್ಲಿ ನಿವೃತ್ತರಾದ ಬಳಿಕ ಅದೇ ವರ್ಷ ಹಂಗಾಮೀ ರಾಜ್ಯಪಾಲರಾಗಿ, ನಂತರ ಭಾರತ ಸರ್ಕಾರದ ಪ್ರಥಮ ವಿಜಿಲೆನ್ಸ್ ಕಮೀಷನರ್ ಆಗಿ ಸಾರ್ವಜನಿಕ ಆಡಳಿತದಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಸಂತಾನಂ ಸಮಿತಿ ರಚನೆಗೆ ಕಾರಣರಾಗಿ 1968ರಲ್ಲಿ ನಿವೃತ್ತರಾದರು. ಸತ್ಯಶೋಧನಾ ಪ್ರಕಟಣಾ ಮಂದಿರ ಸ್ಥಾಪಿಸಿ ಹಲವಾರು ಗ್ರಂಥಗಳನ್ನು ಪ್ರಕಟಿಸಿದ ಅವರು ಶಿವರಾಮ ಕಾರಂತರ `ಬಾಲ ಪ್ರಪಂಚ'ಕ್ಕೆ (ವಿಶ್ವಕೋಶ) ಪಡಿಯಚ್ಚನ್ನು ಜರ್ಮನಿಯಿಂದ ತರಿಸಿ, ಆ ದಿನಗಳಲ್ಲೇ ಅದರ ಮುದ್ರಣಕ್ಕೆ ಒಂದು ಲಕ್ಷ ರೂಪಾಯಿ ವೆಚ್ಚ ಮಾಡಿದ್ದರು. ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕೃತರಾದ ಅವರು 2004ರ ಆಗಸ್ಟ್ 12ರಂದು ನಿಧನರಾದರು.

1891: ಚಲನಚಿತ್ರ ಕ್ಯಾಮೆರಾ ಕಂಡು ಹಿಡಿದ ಥಾಮಸ್ ಆಲ್ವ ಎಡಿಸನ್ ಗೆ ಇದಕ್ಕೆ ಸಂಬಂಧಿಸಿದ ಹಕ್ಕುಸ್ವಾಮ್ಯ ನೀಡಲಾಯಿತು.

1690: ಜಾಬ್ ಚಾರ್ನಾಕ್ ಅವರು 1690ರಲ್ಲಿ ಈದಿನ ಕೋಲ್ಕತಾ (ಅಂದಿನ ಕಲ್ಕತ್ತಾ) ನಗರವನ್ನು ಸ್ಥಾಪಿಸಿದರು. ಹಾಗಾಗಿ ಈ ದಿನವನ್ನು ಕೋಲ್ಕತಾ ದಿನ ಎಂದು ಘೋಷಿಸಲಾಯಿತು. 2000ದಲ್ಲಿ ಇದೇ ದಿನ ಕೋಲ್ಕತಾ ಮುನಿಸಿಪಲ್ ಕಾರ್ಪೊರೇಷನ್ 310ನೇ ಕೋಲ್ಕತಾ ಜನ್ಮದಿನವನ್ನು ಆಚರಿಸಿತು. ಈ ಸಂದರ್ಭದಲ್ಲಿ ಕೋಲ್ಕತಾ ನಗರ ಕುರಿತ ವೆಬ್ಸೈಟ್ ಬಿಡುಗಡೆ ಮಾಡಲಾಯಿತು.

1608: ಮೊದಲ ಇಂಗ್ಲಿಷ್ ರಾಯಭಾರಿ ಸೂರತ್ ಗೆೆ ಆಗಮಿಸಿದ.

1600: ಈಸ್ಟ್ ಇಂಡಿಯಾ ಕಂಪೆನಿಯ ಮೊದಲ ಹಡಗು `ಹೆಕ್ಟರ್' ಸೂರತ್ ಬಂದರಿಗೆ ಆಗಮಿಸಿತು.

ಕ್ರಿ.ಶ.79: ವೆಸೂವಿಯಸ್ ಜ್ವಾಲಾಮುಖಿ ಬಾಯ್ದೆರೆದು ಪಾಂಪೆ ಮತ್ತು ಸ್ಟಾಬೀ ಪಟ್ಟಣಗಳನ್ನು ಬೂದಿಯ ಅಡಿಯಲ್ಲಿ ಮುಳುಗಿಸಿದರೆ, ಹರ್ಕ್ಯುಲೇನಿಯಮ್ ನಗರವನ್ನು ಲಾವಾರಸದ ಕೆಸರಿನಲ್ಲಿ ಮುಳುಗಿಸಿತು. 1631ರ ಡಿಸೆಂಬರ್ 16ರಂದು ಜ್ವಾಲಾಮುಖಿ ಮತ್ತೊಮ್ಮೆ ಭಾರೀ ಪ್ರಮಾಣದಲಿ ಬಾಯ್ದೆರೆದು 3000 ಜನರನ್ನು ಬಲಿ ತೆಗೆದುಕೊಂಡಿತು.

No comments:

Advertisement