My Blog List

Saturday, October 24, 2009

ಇಂದಿನ ಇತಿಹಾಸ History Today ಅಕ್ಟೋಬರ್ 23

ಇಂದಿನ ಇತಿಹಾಸ

ಅಕ್ಟೋಬರ್ 23


ಎಲ್ಟಿಟಿಇ ಚಟುವಟಿಕೆಗಳಿಗೆ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ತಮಿಳುನಾಡಿನ ಎಂಡಿಎಂಕೆ ನಾಯಕ ವೈಕೊ (ವಿ.ಗೋಪಾಲಸ್ವಾಮಿ) ಅವರನ್ನು ಚೆನ್ನೈ ನಗರದ ವಾಯವ್ಯ ಭಾಗದಲ್ಲಿನ ಅವರ ನಿವಾಸದಲ್ಲಿ ಮಧ್ಯಾಹ್ನ 3.45ರ ಸುಮಾರಿಗೆ ಬಂಧಿಸಲಾಯಿತು. ಪ್ರತ್ಯೇಕತಾವಾದ, ನಿಷೇಧಿತ ಸಂಘಟನೆಗೆ ಬೆಂಬಲ ನೀಡಿದ ಆರೋಪದ ಅನ್ವಯ ಪ್ರಕರಣ ದಾಖಲಾಯಿತು.


2014: ಜೈಪುರ: ರಾಜಸ್ಥಾನದ ಬರ್ಮೇರ್ ಜಿಲ್ಲೆಯ ಪಟಾಕಿ ಅಂಗಡಿಯೊಂದರಲ್ಲಿ ನಸುಕಿನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 7 ಜನ ಮೃತರಾದರು.  ರಾಜಧಾನಿ ಜೈಪುರದಿಂದ 430 ಕಿ.ಮೀ. ದೂರದಲ್ಲಿರುವ ಬರ್ಮೇರ್ ಜಿಲ್ಲೆಯ ಬಲೋಟ್ರದ ಅಂಗಡಿಯೊಂದರಲ್ಲಿ ನಸುಕಿನ 1 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿತು. ದುರಂತ ಸ್ಥಳದಲ್ಲಿ ನಾವು ಈವರೆಗೆ 7 ಶವಗಳನ್ನು ಪತ್ತೆ ಹಚ್ಚಿದ್ದೇವೆ’ ಎಂದು ಬರ್ಮೇರ್ ಜಿಲ್ಲಾ ಪೊಲೀಸ್​ವರಿಷ್ಠಾಧಿಕಾರಿ ಹೇಮಂತ್ ಶರ್ಮಾ ತಿಳಿಸಿದರು. 'ಅಗ್ನಿ ದುರಂತ ಸಂಭವಿಸಿದಾಗ ಈ ಏಳುಮಂದಿ ಅಂಗಡಿಯ ಒಳಗೆ ಸಿಕ್ಕಿಹಾಕಿಕೊಂಡಿದ್ದರೆಂದು ಕಾಣುತ್ತದೆ' ಎಂದು ಶರ್ಮಾ ನುಡಿದರು.

2014: ನವದೆಹಲಿ: ದೀಪಾವಳಿ ಸಂದರ್ಭದಲ್ಲಿ ನಿಗದಿಯಾಗಿದ್ದ ತಮ್ಮ ಜಮ್ಮು ಮತ್ತು ಕಾಶ್ಮೀರದ ಪ್ರವಾಹ
ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಈದಿನ ಬೆಳಗ್ಗೆ ಸಿಯಾಚಿನ್ ನೀರ್ಗಲ್ಲು- ಸಾಲ್ಟೋರೊ ರಿಜ್ ಪ್ರದೇಶದಲ್ಲಿನ ಮುಂಚೂಣಿ ನೆಲೆಗಳಿಗೆ ಭೇಟಿ ನೀಡಿ ಸಮರಭೂಮಿ ಕಾಯುವ ಯೋಧರ ಜೊತೆಗೆ ದೀಪಾವಳಿ ಆಚರಿಸಿದರು. 'ಈ ವಿಶೇಷ ದಿನದಂದು ನಮ್ಮ ಸಾಹಸೀ ಯೋಧರ ಜೊತೆಗೆ ಕಾಲ ಕಳೆಯುವ ಅವಕಾಶ ನನಗೆ ಲಭಿಸಿರುವುದು ನನ್ನ ಸುಯೋಗ' ಎಂದು ಮೋದಿ ಬೆಳಗ್ಗೆಯೇ ಟ್ವೀಟ್ ಮಾಡಿದರು. 'ಎಷ್ಟೇ ಎತ್ತರ ಇರಲಿ, ಎಷ್ಟೇ ಚಳಿ ಇರಲಿ ಅದು ನಮ್ಮ ಯೋಧರನ್ನು ಕಂಗೆಡಿಸುವುದಿಲ್ಲ. ಅವರು ಅಲ್ಲಿ ನಿಂತುಕೊಂಡು ರಾಷ್ಟ್ರದ ಸೇವೆ ಮಾಡುತ್ತಿದ್ದಾರೆ. ನಾವು ನಿಜವಾಗಿಯೂ ಹೆಮ್ಮೆ ಪಡುವಂತೆ ಅವರು ಮಾಡಿದ್ದಾರೆ. ಪ್ರತಿಯೊಬ್ಬ ಭಾರತೀಯನೂ ನಿಮ್ಮ ಜೊತೆಗಿದ್ದಾರೆ' ಎಂದು ಮೋದಿ ಬರೆದರು. ಅಂದಾಜು 16,000ದಿಂದ 22,000 ಅಡಿಗಳಷ್ಟು ಎತ್ತರದಲ್ಲಿ ಇರುವ ಸಿಯಾಚಿನ್ ನೀರ್ಗಲ್ಲು-ಸಾಲ್ಟೋರೊ ರಿಜ್ ಪ್ರದೇಶವನ್ನು ಭಾರತೀಯ ಸೈನಿಕರು ಪ್ರತಿನಿತ್ಯವೂ ರಕ್ಷಣೆ ಮಾಡುತ್ತಿದ್ದಾರೆ. ವಿರೋಧಿಗಳ ಗುಂಡಿನ ದಾಳಿಗಿಂತಲೂ ಹೆಚ್ಚಾಗಿ ಇಲ್ಲಿನ ಪ್ರತಿಕೂಲ ಹವಾಮಾನ, ನೀರ್ಗಲ್ಲ ಪ್ರವಾಹಕ್ಕೆ ಹೆಚ್ಚು ಸೈನಿಕರು ಬಲಿಯಾಗಿದ್ದಾರೆ. 1984ರಿಂದ ಇಲ್ಲಿಯವರೆಗೆ ಅಂದಾಜು 900 ಮಂದಿ ಭಾರತೀಯ ಯೋಧರು ಇಲ್ಲಿ ಅಸು ನೀಗಿದ್ದಾರೆ. ಭಾರತ ಉತ್ತಮ ಮೂಲಸವಲತ್ತು ವ್ಯವಸ್ಥೆ ಮಾಡುತ್ತಿರುವುದರಿಂದ ಈಚಿನ ದಿನಗಳಲ್ಲಿ ಯೋಧರ ಸಾವಿನ ಸಂಖ್ಯೆ ಕ್ಷೀಣಿಸಿದೆ. ವಿಶ್ವದಲ್ಲೇ ಅತ್ಯಂತ ಎತ್ತರದ ಸಮರಭೂಮಿ ಎಂದೇ ಖ್ಯಾತಿ ಪಡೆದಿರುವ ಸಿಯಾಚಿನ್, ಅತ್ಯಂತ ಶೀತ ಹಾಗೂ ದುಬಾರಿ ಸಮರಭೂಮಿ ಕೂಡಾ. ಪಾಕಿಸ್ತಾನದ ಜೊತೆಗೆ ಸಂಯುಕ್ತ ಮಾತುಕತೆ ಪ್ರಕ್ರಿಯೆಗೆ ಅಡ್ಡಿಯಾಗುವ ಎಂಟು ಅಂಶಗಳಲ್ಲಿ ಇದೂ ಒಂದು ಅಂಶವಾಗಿದೆ. ಈ ಎತ್ತರದ ಪ್ರದೇಶದಲ್ಲಿ ಪಾಕಿಸ್ತಾನೀಯರು ಅತಿಕ್ರಮಿಸಿ ಕುಳಿತಲ್ಲಿ ಅವರನ್ನು ಹೊರದಬ್ಬುವುದು ಅತ್ಯಂತ ತ್ರಾಸದ ಕೆಲಸ. ಲಡಾಖ್ ಕಡೆಗೆ ಕಾರಾಕೋರಂ ಕಣಿವೆ ಮೂಲಕ ಮುನ್ನುಗ್ಗಲು ಪಾಕಿಸ್ತಾನ ಪಶ್ಚಿಮದ ಕಡೆಯಿಂದ ಹಾಗೂ ಚೀನಾ ಪೂರ್ವ ಕಡೆಯಿಂದ ಮಾಡುವ ಯತ್ನಗಳನ್ನು ತಡೆಯಲು ಭಾರತದ ಈ ಪ್ರದೇಶದಲ್ಲಿ ತನ್ನ ಸೈನಿಕರನ್ನು ನಿರಂತರವಾಗಿ ನೆಲೆಗೊಳಿಸಿದೆ.
ಮತ್ತೆ ಪಾಕ್ ದಾಳಿ: ಈ ಮಧ್ಯೆ ಪ್ರಧಾನಿ ಅವರ ಸಿಯಾಚಿನ್ ಮತ್ತು ಶ್ರೀನಗರ ಭೇಟಿಗೆ ಮುನ್ನವೇ ಪಾಕಿಸ್ತಾನಿ ಪಡೆಗಳು ಅಂತಾರಾಷ್ಟ್ರೀಯ ಗಡಿಯಾಚೆಯಿಂದ ಮತ್ತೆ ಗುಂಡು ಹಾರಿಸಿದ ಘಟನೆ ಘಟಿಸಿತು. ಪಾಕಿಸ್ತಾನಿ ರೇಂಜರ್​ಗಳು ಸಣ್ಣ ಶಸ್ತ್ರಾಸ್ತ್ರಗಳಿಂದ ಸಾಂಬಾ ಜಿಲ್ಲೆಯ ರಾಮಗಢ ವಿಭಾಗದಲ್ಲಿನ ಬಿಎಸ್​ಎಫ್ ನೆಲೆಯತ್ತ ಗುಂಡು ಮುಂಜಾನೆ 4.10 ಸುಮಾರಿಗೆ ಗುಂಡು ಹಾರಿಸಿದರು ಎಂದು ವರದಿಗಳು ತಿಳಿಸಿದವು.

2014: ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಭೇಟಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಆಗಮಿಸಿದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ನರೇಂದ್ರ ಮೋದಿ ಅವರ ರಾಜಭವನ ಕಾರ್ಯಕ್ರಮಗಳಿಂದ ದೂರ ಉಳಿದರು. ಆದರೆ ಶ್ರೀನಗರ ವಿಮಾನ ನಿಲ್ದಾಣದ ತಾಂತ್ರಿಕ ಪ್ರದೇಶದಲ್ಲಿ ಮೋದಿಯವರಿಗೆ ಅಧಿಕಾರಿಗಳು ನೀಡಿದ ವಿವರಣೆ ಸಂದರ್ಭದಲ್ಲಿ ಅಬ್ದುಲ್ಲಾ ಹಾಜರಿದ್ದರು. ಮೋದಿ ಮತ್ತು ರಾಜ್ಯಪಾಲ ಎನ್.ಎನ್. ವೋಹ್ರಾ ಅವರು ರಾಜಭವನಕ್ಕೆ ತೆರಳಿದಾಗ ಮುಖ್ಯಮಂತ್ರಿ ಒಮರ್ ಅವರು ಗುಪ್ಕರ್ ರಸ್ತೆಯ ತಮ್ಮ ಅತಿ ಭದ್ರತೆಯ ಅಧಿಕೃತ ನಿವಾಸಕ್ಕೆ ತೆರಳಿದರು ಎಂದು ಮೂಲಗಳು ತಿಳಿಸಿದವು. ಪ್ರಧಾನಿಯವರು ರಾಜಭವನದಲ್ಲಿ ಇತ್ತೀಚಿನ ಪ್ರವಾಹ ಸಂತ್ರಸ್ಥ ಕುಟುಂಬಗಳು ಮತ್ತು ಪ್ರಮುಖ ರಾಜಕೀಯ ಪಕ್ಷಗಳು, ಸಂಘಟನೆಗಳ ನಿಯೋಗಗಳನ್ನು ಭೇಟಿ ಮಾಡಿದರು.
2014: ಮಂಗಳೂರು: ನವಮಂಗಳೂರಿನ ತನ್ನ ಮೂರು ಹಡಗುಗಳ ಜೊತೆಗೆ ಭಾರತೀಯ ಕರಾವಳಿ ಕಾವಲುಪಡೆ ಇನ್ನೊಂದು ಹಡಗು ‘’ಅಮರ್ತ್ಯ’ವನ್ನು ಸೇರ್ಪಡೆ ಮಾಡಿಕೊಂಡಿತು. ಇದರೊಂದಿಗೆ ಕರಾವಳಿ ಕಣ್ಗಾವಲು ಮತ್ತು ಪ್ರಾದೇಶಿಕ ಭದ್ರತೆಗೆ ಇನ್ನಷ್ಟು ಬಲ ಬಂದಿತು. ಕೊಚ್ಚಿ ಶಿಪ್​ಯಾರ್ಡ್ ಲಿಮಿಟೆಡ್​ನಲ್ಲಿ ನಿರ್ಮಿಸಲಾದ 'ಅಮರ್ತ್ಯ’ ಹಡಗು ಅಕ್ಟೋಬರ್ 19ರಂದು ನವಮಂಗಳೂರು ಬಂದರಿಗೆ ಬಂದಿತ್ತು ಎಂದು ಬಂದರು ಟ್ರಸ್ಟ್ ತನ್ನ ಹೇಳಿಕೆಯಲ್ಲಿ ತಿಳಿಸಿತು.. 50 ಮೀಟರ್ ಉದ್ದದ ಅಮರ್ತ್ಯನೌಕೆಯು 297 ಟನ್ ಸಾಗಣಾ ಸಾಮರ್ಥ್ಯಹೊಂದಿದ್ದು, 35 ಕಿ.ಮೀ. ವೇಗದಲ್ಲಿ ಸಾಗಬಲ್ಲುದು.

2014: ಕ್ವೆಟ್ಟಾ: ಪಾಕಿಸ್ತಾನದ ಕ್ವೆಟ್ಟಾದ ಹಝಾರಾ ಗಂಜಿ ಪ್ರದೇಶದಲ್ಲಿ ಪ್ರಯಾಣಿಕ ಬಸ್ಸೊಂದರ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ 9 ಮಂದಿ ಹತರಾದರು. ಅಪರಿಚಿತ ಶಸ್ತ್ರಧಾರಿಗಳು ಪ್ರಯಾಣಿಕ ಬಸ್ಸಿನ ಮೇಲೆ ಗುಂಡು ಹಾರಿಸಿದಾಗ 9 ಮಂದಿ ಗಾಯಗೊಂಡರು. ಅವರ ಪೈಕಿ ಆರು ಮಂದಿ ಆಸ್ಪತ್ರೆಗೆ ಒಯ್ಯುತ್ತಿದ್ದಾಗ ದಾರಿಯಲ್ಲೇ ಮೃತರಾದರು. ಉಳಿದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತರಾದರು ಎಂದು ಜಿಲ್ಲಾ ಸರಾಯಿಬ್ ಪೊಲೀಸ್ ವರಿಷ್ಠಾಧಿಕಾರಿ ಇಮ್ರಾನ್ ಖುರೇಷಿ ತಿಳಿಸಿದರು. ಬಸ್ಸಿನಲ್ಲಿದ್ದ ಪ್ರಯಾಣಿಕರು ಹಣ್ಣು ಮತ್ತು ತರಕಾರಿ ಖರೀದಿಸಿದ ಬಳಿಕ ಕ್ವೇಟ್ಟಾಕ್ಕೆ ವಾಪಸ್ ಹೊರಟಿದ್ದರು. ಬಸ್ಸಿನಲ್ಲಿ ಇದ್ದವರು ಷಿಯಾ ಮುಸ್ಲಿಮರು ಎಂದು ಅಧಿಕಾರಿಗಳು ತಿಳಿಸಿದರು.
2014: ನವದೆಹಲಿ: ಮಹಾರಾಷ್ಟ್ರದ ಮುಖ್ಯಮಂತ್ರಿ ಸ್ಥಾನಕ್ಕೆ ತಾನು ಸ್ಪರ್ಧೆಯಲ್ಲಿ ಇಲ್ಲ ಎಂದು ಸಾರಿಗೆ ಸಚಿವ ನಿತಿನ್ ಗಡ್ಕರಿ ನವದೆಹಲಿಯಲ್ಲಿ ಪುನರುಚ್ಚರಿಸಿದರು. 'ನನಗೆ ಆಸಕ್ತಿ ಇಲ್ಲ ಎಂದು ನಾನು ಈಗಾಗಲೇ ಸ್ಪಷ್ಟ ಪಡಿಸಿದ್ದೇನೆ. ನಾನು ದೆಹಲಿಯಲ್ಲಿ ಉಳಿಯಲು ಆಸಕ್ತನಾಗಿದ್ದೇನೆ' ಎಂದು ಗಡ್ಕರಿ ಮಾಧ್ಯಮಗಳಿಗೆ ತಿಳಿಸಿದರು. ಭಾರತೀಯ ಜನತಾ ಪಕ್ಷದ ಶಾಸಕರ ಒಂದು ವರ್ಗ ಗಡ್ಕರಿ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಬೇಕು ಎಂದು ಬಯಸುತ್ತಿರುವುದಾಗಿ ಬಂದ ವರದಿಗಳ ಬಗ್ಗೆ ಪ್ರಶ್ನಿಸಿದಾಗ ಗಡ್ಕರಿ ಈ ಪ್ರತಿಕ್ರಿಯೆ ನೀಡಿದರು. ಮಾಜಿ ಸಚಿವ ಸುಧೀರ್ ಮುಂಗಾಂತಿವಾರ ಅವರು ಗಡ್ಕರಿ ಹೆಸರನ್ನು ತೇಲಿಬಿಟ್ಟಿದ್ದರು. 288 ಸದಸ್ಯಬದಲ ಮಹಾರಾಷ್ಟ್ರ ವಿಧಾನಸಭೆಯಲ್ಲಿ 112 ಸದಸ್ಯರನ್ನು ಹೊಂದುವ ಮೂಲಕ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಉದಯಿಸಿದ್ದು, ಸರ್ಕಾರ ರಚನೆಯ ಪ್ರಕ್ರಿಯೆ ಪೂರ್ಣಗೊಂಡಿಲ್ಲ.

2014: ಇಸ್ಲಾಮಾಬಾದ್: ಭಾರತೀಯ ಪಡೆಗಳು ಅಪ್ರಚೋದಿತ ದಾಳಿಯ 'ಮುಸುಕಿನಲ್ಲಿ' ಗಡಿಯಿಂದ 500 ಮೀಟರ್ ಒಳಗಿನ ಸ್ಥಳಗಳಲ್ಲಿ ಬಂಕರ್​ಗಳನ್ನು ನಿರ್ಮಿಸುತ್ತಿವೆ ಎಂದು ಪಾಕಿಸ್ತಾನಿ ವಿದೇಶಾಂಗ ಕಚೇರಿ ಆಪಾದಿಸಿತು. ಇಸ್ಲಾಮಾಬಾದಿನಲ್ಲಿ ವಾರದ ವಿವರಣೆ ಸಂದರ್ಭದಲ್ಲಿ ಮಾಧ್ಯಮ ಮಂದಿಯೊಂದಿಗೆ ಮಾತನಾಡುತ್ತಿದ್ದ ವಿದೇಶಾಂಗ ಕಚೇರಿ ವಕ್ತಾರೆ ತಸ್ನೀಮ್​ ಅಸ್ಲಂ ಅವರು 'ಈ ರೀತಿ ಬಂಕರ್​ಗಳನ್ನು ನಿರ್ಮಿಸುವುದು 2010ರ ಭಾರತ - ಪಾಕ್ ಒಪ್ಪಂದಕ್ಕೆ ವಿರುದ್ಧ' ಎಂದು ಹೇಳಿದುದಾಗಿ ಡಾನ್ ಆನ್​ಲೈನ್ ವರದಿ ಮಾಡಿತು. ಪಾಕಿಸ್ತಾನವು ಈ ರೀತಿ ದ್ವಿಪಕ್ಷೀಯ ಒಪ್ಪಂದ ಉಲ್ಲಂಘಿಸಿ ಬಂಕರ್ ನಿರ್ಮಿಸಲು ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಅಸ್ಲಂ ಹೇಳಿದುದಾಗಿ ವರದಿ ತಿಳಿಸಿತು. 'ಕಾಶ್ಮೀರಿ ಮಂದಿ ಗಡಿ ನಿಯಂತ್ರಣ ರೇಖೆಯ ಆಚೆಗೂ ವಾಸಿಸುತ್ತಿದ್ದಾರೆ. ಪಾಕಿಸ್ತಾನಿ ಪಡೆಗಳು ಯಾವಾಗಲೂ ಅವರ ಸುರಕ್ಷತೆ ಕಡೆಗೆ ಗಮನ ಇಟ್ಟಿರುತ್ತದೆ. ಗಡಿ ನಿಯಂತ್ರಣ ರೇಖೆಯಲ್ಲಿ ಭಾರತದ ಕಡೆಯಿಂದ ಗುಂಡಿನ ದಾಳಿ ನಡೆದಾಗ ಸೂಕ್ತ ಉತ್ತರ ನೀಡುತ್ತವೆ' ಎಂದು ಗಡಿ ನಿಯಂತ್ರಣ ರೇಖೆಯ ಪರಿಸ್ಥಿತಿ ಬಗ್ಗೆ ಮಾತನಾಡುತ್ತಾ ಅವರು ಹೇಳಿದರು.

2014: ನಾಗಪುರ: ಮಹಾರಾಷ್ಟ್ರದ ವಿದರ್ಭ ಪ್ರದೇಶದಲ್ಲಿ ಆರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಅವರ ಆತ್ಮಹತ್ಯೆಗೆ ಅಧಿಕಾರಿಗಳ ತಾತ್ಸಾರವೇ ಕಾರಣ ಎಂದು ಸಾಮಾಜಿಕ ಕಾರ್ಯಕರ್ತರು ದೂರಿದರು. ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಪೈಕಿ ನಾಲ್ವರು ಯಾವತ್ಮಲ್ ಜಿಲ್ಲೆಯವರಾಗಿದ್ದರೆ, ತಲಾ ಒಬ್ಬರು ಅಕೋಲ ಮತ್ತು ಅಮರಾವತಿ ಜಿಲ್ಲೆಯವರು ಎಂದು ವಿದರ್ಭ ಜನ ಆಂದೋಲನ ಸಮಿತಿ ಅಧ್ಯಕ್ಷ ಕಿಶೋರ ತಿವಾರಿ ಹೇಳಿದರು. ಈ ಆರೂ ರೈತರ ಆತ್ಮಹತ್ಯೆಗಳು ಅಕ್ಟೋಬರ್ 22ರಂದು ಘಟಸಿವೆ. ತಮ್ಮ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂಬ ಆಶಯದೊಂದಿಗೆ ಈ ರೈತರು ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಅತ್ಯುತ್ಸಾಹದಿಂದ ಬಿಜೆಪಿಗೆ ಮತ ನೀಡಿದ್ದರು ಎಂದು ತಿವಾರಿ ನುಡಿದರು. ಸಾಲ, ಹತ್ತಿ ಮತ್ತು ಸೋಯಾಬೀನ್​ಗೆ ಮಾರುಕಟ್ಟೆ ದರ, ಬೆಳೆ ವೈಫಲ್ಯಕ್ಕೆ ಪರಿಹಾರ ಇತ್ಯಾದಿ ವಿಷಯಗಳನ್ನು ಕೈಗೆತ್ತಿಕೊಳ್ಳುವುದಾಗಿ ಭಾರತೀಯ ಜನತಾ ಪಕ್ಷ ಚುನಾವಣಾ ಪ್ರಚಾರ ಕಾಲದಲ್ಲಿ ಭರವಸೆ ನೀಡಿತ್ತು. ಆದರೆ ಅಧಿಕಾರಿಗಳ ತಾತ್ಸಾರ ಮುಂದುವರಿಕೆ ರೈತರನ್ನು ಆತ್ಮಹತ್ಯೆಯತ್ತ ತಳ್ಳಿತು ಎಂದು ತಿವಾರಿ ಹೇಳಿದರು. ವಿದರ್ಭಕ್ಕೆ ಭೇಟಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ತಿವಾರಿ ಆಗ್ರಹಿಸಿದರು. ಮುಂಗಾರು ಎರಡು ತಿಂಗಳು ವಿಳಂಬವಾದರೆ, ಸೆಪ್ಟೆಂಬರ್ 15ರ ಬಳಿಕ ಕಡುಬಿಸಿಲು ಬೆಳೆಗಳನ್ನು ತೀವ್ರವಾಗಿ ಬಾಧಿಸಿತು ಎಂದು ಅವರು ವಿವರಿಸಿದರು.
2014: ನವದೆಹಲಿ: ಪರುಪ್ಪಲ್ಲಿ ಕಶ್ಯಪ್ ಮತ್ತು ಕಿಡಂಬಿ ಶ್ರೀಕಾಂತ್ ಅವರು ಈದಿನ ಬಿಡುಗಡೆ ಮಾಡಲಾದ ವಿಶ್ವ ರಾಂಕಿಂಗ್ ಪಟ್ಟಿಯಲ್ಲಿ ತಲಾ ಏಳು ಸ್ಥಾನಗಳನ್ನು ಪಡೆದುಕೊಂಡರು.  ಇದೇ ವೇಳೆಯಲ್ಲಿ ಮಹಿಳಾ ಆಟಗಾರ್ತಿ ಸೈನಾ ನೆಹ್ವಾಲ್ 6ನೇ ಸ್ಥಾನಕ್ಕೆ ಜಿಗಿದರು. ಶ್ರೀಕಾಂತ್ ಈಗ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ 16ನೇ ರಾಂಕ್ ಪಡೆದಿದ್ದು, ಸ್ವರ್ಣ ಪದಕ ವಿಜೇತ ಕಶ್ಯಪ್ 21ನೇ ಸ್ಥಾನ ಗಳಿಸಿದರು. ಮಹಿಳಾ ಕ್ರೀಡಾಪಟು ಪಿ.ವಿ. ಸಿಂಧು ಹಿಂದಿನ ದಿನ ಪ್ಯಾರಿಸ್ನಲ್ಲಿ ಫ್ರೆಂಚ್ ಓಪನ್ ಸೂಪರ್ಸೀರೀಸ್ ಓಪನಿಂಗ್ ಪಂದ್ಯದಲ್ಲಿ ಸೋತಬಳಿಕ 10ನೇ ಸ್ಥಾನದಲ್ಲಿ ಉಳಿದರು.

2008: ಶ್ರೀಹರಿಕೋಟಾದಿಂದ ಅಕ್ಟೋಬರ್ 22ರಂದು ಉಡಾವಣೆಗೊಂಡ ದೇಶದ ಮಾನವರಹಿತ ಗಗನನೌಕೆ `ಚಂದ್ರಯಾನ-1' ಉತ್ತಮವಾಗಿ ಕಾರ್ಯನಿರ್ವಹಿಸಿ, ಭೂಮಿಯ ಸುತ್ತಲಿನ ಕಕ್ಷೆಗಳಲ್ಲಿ ಪರಿಭ್ರಮಣ ಪೂರ್ಣಗೊಳಿಸಿತು ಎಂದು ಹಿರಿಯ ಬಾಹ್ಯಾಕಾಶ ಅಧಿಕಾರಿಯೊಬ್ಬರು ಬೆಂಗಳೂರಿನಲ್ಲಿ ಪ್ರಕಟಿಸಿದರು. `ಗಗನನೌಕೆಯು ಉತ್ತಮ ಮಟ್ಟದಲ್ಲಿ ಕೆಲಸ ಮಾಡುತ್ತಿದೆ. ಇದು ಪ್ರತಿ ಆರೂವರೆ ಗಂಟೆಗಳಿಗೊಮ್ಮೆ ದೀರ್ಘ ವೃತ್ತಾಕಾರದ ಕಕ್ಷೆಗಳಲ್ಲಿ ಸುತ್ತುತ್ತಿದ್ದು ಈಗಾಗಲೇ ನಾಲ್ಕು ಸುತ್ತುಗಳನ್ನು ಮುಗಿಸಿದೆ'' ಎಂದು ಅವರು ಹೇಳಿದರು.

2008: ರಾಜಸ್ಥಾನದ ಭರತ್ ಪುರದ ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ 12 ಮಕ್ಕಳು, ಆರು ಮಹಿಳೆಯರು ಸೇರಿದಂತೆ 27 ಮಂದಿ ಮೃತರಾದರು.

2008: ಎಲ್ಟಿಟಿಇ ಚಟುವಟಿಕೆಗಳಿಗೆ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ತಮಿಳುನಾಡಿನ ಎಂಡಿಎಂಕೆ ನಾಯಕ ವೈಕೊ (ವಿ.ಗೋಪಾಲಸ್ವಾಮಿ) ಅವರನ್ನು ಚೆನ್ನೈ ನಗರದ ವಾಯವ್ಯ ಭಾಗದಲ್ಲಿನ ಅವರ ನಿವಾಸದಲ್ಲಿ ಮಧ್ಯಾಹ್ನ 3.45ರ ಸುಮಾರಿಗೆ ಬಂಧಿಸಲಾಯಿತು. ಪ್ರತ್ಯೇಕತಾವಾದ, ನಿಷೇಧಿತ ಸಂಘಟನೆಗೆ ಬೆಂಬಲ ನೀಡಿದ ಆರೋಪದ ಅನ್ವಯ ಪ್ರಕರಣ ದಾಖಲಾಯಿತು.

2008: ಕಾರ್ಮಿಕ ಹಾಗೂ ಸಾಮಾಜಿಕ ವ್ಯವಹಾರಗಳ ಸಚಿವ ಮಹಮೂದ್ ಮೊಹಮ್ಮದ್ ಅಲ್-ರಧಿ ಅವರನ್ನು ಗುರಿಯಾಗಿಟ್ಟು ಬಾಗ್ದಾದಿನಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ 13ಕ್ಕೂ ಹೆಚ್ಚು ಜನರು ಮೃತರಾದರು. ಕೂದಲೆಳೆಯಷ್ಟು ಅಂತರದಲ್ಲಿ ಸಚಿವರು ಪಾರಾದರು.

2007: ಡೊಳ್ಳು ಕುಣಿತ, ಕೋಲಾಟ, ವೈವಿಧ್ಯಮಯ ರೂಪಕ ವಾಹನಗಳನ್ನು ಒಳಗೊಂಡ ಆಕರ್ಷಕ ಮೆರವಣಿಗೆಯೊಂದಿಗೆ ಐತಿಹಾಸಿಕ ಕಿತ್ತೂರಿನಲ್ಲಿ ಮೂರು ದಿನಗಳ ಕಿತ್ತೂರು ಉತ್ಸವಕ್ಕೆ ಚಾಲನೆ ನೀಡಲಾಯಿತು. ಬೈಲಹೊಂಗಲದ ವೀರರಾಣಿ ಚನ್ನಮ್ಮನ ಸಮಾಧಿಯಿಂದ ಹೊರಟು ಕಿತ್ತೂರು ತಲುಪಿದ ವಿಜಯ ಜ್ಯೋತಿಯನ್ನು ಜನಸಾಗರದ ಮಧ್ಯೆ ಸಂಸದ ಸುರೇಶ ಅಂಗಡಿ ಬರಮಾಡಿಕೊಂಡರು. ಬೆಳಗ್ಗೆ ಚನ್ನಮ್ಮನ ತವರೂರಾದ ಕಾಕತಿ ಗ್ರಾಮದಲ್ಲಿ ಸಹ ಚನ್ನಮ್ಮ ಪ್ರತಿಮೆಗೆ ಪೂಜೆ ಸಲ್ಲಿಸಲಾಯಿತು.

2007: ಉನ್ನತ ಶಿಕ್ಷಣದಲ್ಲಿ ಖಾಸಗಿ ವಲಯದ ಮುಕ್ತ ಪ್ರವೇಶಕ್ಕಾಗಿ ರಾಜಸ್ಥಾನ ಸರ್ಕಾರವು ಜೈಪುರ ರಾಷ್ಟ್ರೀಯ ವಿಶ್ವವಿದ್ಯಾಲಯ, ಅಮಿಥಿ ವಿಶ್ವವಿದ್ಯಾಲಯ ಜೈಪುರ, ಸಿಂಘಾನಿಯಾ ವಿಶ್ವ ವಿದ್ಯಾಲಯ ಝುಂಝುನು ಮತ್ತು ಸರ್ ಪದ್ಮಪತ್ ವಿಶ್ವವಿದ್ಯಾಲಯ ಉದಯಪುರ- ಈ ನಾಲ್ಕು ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅನುಮತಿ ನೀಡಿತು.

2007: ಸರ್ಕಾರಿ ನೌಕರರು ನಿವೃತ್ತಿ ವೇತನ ಪಡೆಯಲು ಇರುವ ಕನಿಷ್ಠ ಅರ್ಹತಾ ಸೇವೆ ಹಾಗೂ ಪಿಂಚಣಿ ಸೌಲಭ್ಯಗಳನ್ನು ಲೆಕ್ಕ ಹಾಕಲು ಜಾರಿ ಇರುವ ನಿಯಮವನ್ನು ಪರಿಷ್ಕರಿಸಿ ಸರ್ಕಾರವು ಆದೇಶ ಹೊರಡಿಸಿತು. ಅದರಂತೆ ನಿವೃತ್ತಿ ಸೌಲಭ್ಯ ಪಡೆಯಲು ಅಗತ್ಯವಿರುವ ಕನಿಷ್ಠ ಅರ್ಹತಾ ಸೇವೆಯ ನಿಬಂಧನೆಯನ್ನು 15 ವರ್ಷಗಳಿಂದ 10 ವರ್ಷಗಳಿಗೆ ಇಳಿಸಲಾಯಿತು. ಈ ಮೊದಲು ಜಾರಿಯಲ್ಲಿದ್ದ ಇದೇ ಪದ್ಧತಿಯನ್ನು ಎಸ್.ಎಂ. ಕೃಷ್ಣ ನೇತೃತ್ವದ ಸರ್ಕಾರ ಬದಲಾಯಿಸಿತ್ತು. ಇದನ್ನು ಪರಿಷ್ಕರಿಸುವಂತೆ ರಾಜ್ಯ ಸರ್ಕಾರಿ ನೌಕರರ ಸಂಘ ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿತ್ತು.

2007: ಭಾರತ-ಭೂತಾನ್ ಗಡಿ ಬಳಿಯ ತಮಲ್ಪುರ ಸೇನಾ ಶಿಬಿರದಲ್ಲಿ ಒಟ್ಟು 33 ಉಗ್ರಗಾಮಿಗಳು ಸೇನಾ ಮತ್ತು ಪೊಲೀಸ್ ಆಡಳಿತದ ಮುಂದೆ ಶರಣಾಗತರಾದರು. ಶರಣಾಗತರಲ್ಲಿ 31 ಉಲ್ಫಾ ಮತ್ತು ಇಬ್ಬರು ಕರ್ಬಿ ಉಗ್ರಗಾಮಿಗಳು. ಮೂರು ವರ್ಷಗಳಲ್ಲಿ ನಡೆದ ಅತಿ ಹೆಚ್ಚಿನ ಉಗ್ರರ ಶರಣಾಗತಿ ಇದು. ಕೇಂದ್ರ ಮತ್ತು ದಕ್ಷಿಣ ಅಸ್ಸಾಮಿನಲ್ಲಿ ಪ್ರಬಲರಾಗಿದ್ದ ಈ ಉಗ್ರರ ಶರಣಾಗತಿಯಿಂದ ಉಲ್ಫಾ ಸಂಘಟನೆಗೆ ದೊಡ್ಡ ಹೊಡೆತ ಬಿದ್ದಿತು.

2007: ಅಂತಾರಾಷ್ಟ್ರೀಯ ಮಟ್ಟದ ವಿಜ್ಞಾನಿ, ಶಿಕ್ಷಣ ತಜ್ಞ ಹಾಗೂ ದಕ್ಷ ಆಡಳಿತಗಾರ ಎಂಬ ಕಾರಣಕ್ಕೆ ಬ್ರಿಟನ್ನಿನ ವೊಲ್ವರ್ ಹ್ಯಾಂಪ್ಟನ್ ವಿಶ್ವವಿದ್ಯಾಲಯವು ಡಾ. ಅಬ್ದುಲ್ ಕಲಾಂ ಅವರಿಗೆ ವಿಜ್ಞಾನ ಕ್ಷೇತ್ರದ ಗೌರವ ಡಾಕ್ಟರೇಟ್ ನೀಡಿತು. ಈದಿನ ಸಂಜೆ ಲಂಡನ್ನಿನ ವಿಶ್ವವಿದ್ಯಾಲಯದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಕುಲಪತಿ, ಅನಿವಾಸಿ ಭಾರತೀಯ ಉದ್ಯಮಿ ಲಾರ್ಡ್ ಸ್ವರಾಜ್ ಪಾಲ್ ಅವರು 76 ವರ್ಷ ವಯಸ್ಸಿನ ಕಲಾಂ ಅವರನ್ನು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದರು. ಇದು ಕಲಾಂ ಅವರಿಗೆ ದೊರಕಿದ 33ನೇ ಗೌರವ ಡಾಕ್ಟರೇಟ್ ಪದವಿ. ಇದುವರೆಗೆ ಭಾರತ ಮತ್ತು ಇತರ ಅನೇಕ ದೇಶಗಳ ವಿಶ್ವವಿದ್ಯಾಲಯಗಳು ಕಲಾಂ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಅವರ ಜ್ಞಾನ ಮತ್ತು ಸೇವೆಯನ್ನು ಗೌರವಿಸಿವೆ.

2007: ಬಾಂಡ್ ಕಾದಂಬರಿಯ ಲೇಖಕ ಇಯಾನ್ ಫ್ಲೆಮಿಂಗ್ ಅವರ ನೂರನೇ ಜನ್ಮ ದಿನಾಚರಣೆ (1908-2008) ಅಂಗವಾಗಿ ಹೊಸ ಅಂಚೆ ಚೀಟಿಗಳನ್ನು ಈದಿನ ಬಿಡುಗಡೆ ಮಾಡಲಾಯಿತು. ಬ್ರಿಟನ್ನಿನ ಪತ್ರಗಳ ಮೇಲೆ ಇನ್ನು ಮುಂದೆ ಬಾಂಡ್ ಕಾದಂಬರಿಯ ಪ್ರಮುಖ ಕಥೆಗಳ ನಾಯಕನ ಚಿತ್ರ ರಾರಾಜಿಸುವುದು.

2007: ಬೆಂಗಳೂರು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಬಳಿ ಚಿಟ್ಟೆ ಉದ್ಯಾನ ನಿರ್ಮಾಣಕ್ಕೆ ಜಮೀನು ಸ್ವಾಧೀನ ಪಡಿಸಿಕೊಂಡ ಕ್ರಮವನ್ನು ಹೈಕೋರ್ಟ್ ಎತ್ತಿ ಹಿಡಿಯಿತು. ಸ್ವಾಧೀನ ಪ್ರಕ್ರಿಯೆಯನ್ನು ಪ್ರಶ್ನಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಜಿಗಣಿಯ ಬೈರಪ್ಪನಹಳ್ಳಿ ಗ್ರಾಮದ ನಿವಾಸಿಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಮೋಹನ ಶಾಂತನಗೌಡರ್ ವಜಾ ಮಾಡಿದರು.

2006: ಹಿರಿಯ ಸಾಹಿತಿ ಮತ್ತು ಕರ್ನಾಟಕ ಏಕೀಕರಣ ಹೋರಾಟಗಾರ ಕಯ್ಯಾರ ಕಿಂಞಣ್ಣ ರೈ ಅವರ ಪತ್ನಿ ಕುಂಞ್ಞೆಕ್ಕ (80) ಅವರು ಬದಿಯಡ್ಕ ಸಮೀಪದ ಪೆರಡಾಲದ ತಮ್ಮ ಸ್ವಗೃಹ `ಕವಿತಾ ಕುಟೀರ'ದಲ್ಲಿ ನಿಧನರಾದರು. ಕುಂಞ್ಞೆಕ್ಕ ಅವರು ಪತಿ ಕಯ್ಯಾರ ಕಿಂಞ್ಞಣ್ಣ ರೈ, ಆರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದರು. ಕಯ್ಯಾರರಿಗೆ ಈ ದಿನವೇ ಕರ್ನಾಟಕ ಸರ್ಕಾರದ `ಏಕೀಕರಣ ಪ್ರಶಸ್ತಿ' ಘೋಷಣೆಯಾಗಿದ್ದು, ಈ ಸಂತೋಷದ ದಿನವೇ ಅವರಿಗೆ ಪತ್ನಿ ವಿಯೋಗದ ದುಃಖ ಎರಗಿ ಬಂದ್ದದು ವಿಪರ್ಯಾಸವೆನಿಸಿತು.

2006: ಕಯ್ಯಾರ ಕಿಂಞಣ್ಣ ರೈ, ಪಾಟೀಲ ಪುಟ್ಟಪ್ಪ ಸೇರಿದಂತೆ ಕರ್ನಾಟಕ ಏಕೀಕರಣ ಹೋರಾಟದಲ್ಲಿ ತಮ್ಮದೇ ಆದ ಕೊಡುಗೆ ನೀಡಿದ 36 ಮಹನೀಯರು ಮತ್ತು ನಾಲ್ಕು ಸಂಘ ಸಂಸ್ಥೆಗಳಿಗೆ `ಏಕೀಕರಣ ಪ್ರಶಸ್ತಿ' ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ 48 ಗಣ್ಯರು ಹಾಗೂ ಎರಡು ಸಂಸ್ಥೆಗಳಿಗೆ 2006ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಲು ಕರ್ನಾಟಕ ರಾಜ್ಯ ಸರ್ಕಾರ ತೀರ್ಮಾನಿಸಿತು.

1996: ಗುಜರಾತಿನ ನೂತನ ಮುಖ್ಯಮಂತ್ರಿಯಾಗಿ ಶಂಕರ ಸಿಂಗ್ ವಘೇಲ ಅಧಿಕಾರ ಸ್ವೀಕಾರ.

1992: ಕರ್ನಾಟಕದಲ್ಲಿ ಬಂಗಾರಪ್ಪ ನೇತೃತ್ವದ ಸರ್ಕಾರದ ಬಂಡಾಯ ಸಚಿವರ ರಾಜೀನಾಮೆ.

1983: ತಂಬಾಕು ಬೆಳೆಗಾರರ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲು ಅರಕಲಗೂಡು ಹಾಗೂ ಪಿರಿಯಾಪಟ್ಟಣ ತಾಲ್ಲೂಕುಗಳಲ್ಲಿ ರಸ್ತೆಗಳಿಗೆ ತಡೆ ಒಡ್ಡಿದ ಸುಮಾರು ಇನ್ನೂರಕ್ಕೂ ಹೆಚ್ಚು ಮಂದಿ ರೈತ ಸಂಘದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

1983: ಜಾರ್ಜಿಯಾದಲ್ಲಿ ಅಧ್ಯಕ್ಷ ರೇಗನ್ ಅವರು ಗಾಲ್ಫ್ ಆಡುತ್ತಿದ್ದ ಮೈದಾನಕ್ಕೆ ಅಕ್ರಮವಾಗಿ ಪ್ರವೇಶಿಸಿ ಐವರನ್ನು ಸೆರೆ ಹಿಡಿದಿದ್ದ ಬಂದೂಕುಧಾರಿ ಶರಣಾಗತನಾದ. ಬಂದೂಕುಧಾರಿಯು ರೇಗನ್ ಅವರನ್ನು ಕೊಲ್ಲುವ ಬೆದರಿಕೆ ಹಾಕಿದ್ದ ಎಂದು ಶ್ವೇತಭವನದ ಅಧಿಕಾರಿಗಳು ತಿಳಿಸಿದರು.

1980: ಅನಾರೋಗ್ಯ ಕಾರಣ ಸೋವಿಯತ್ ಪ್ರಧಾನಿ ಅಲೆಕ್ಸಿ ಕೊಸಿಗಿನ್ ರಾಜೀನಾಮೆ.

1947: ವಾಷಿಂಗ್ಟನ್ ಯುನಿವರ್ಸಿಟಿ ಮೆಡಿಕಲ್ ಸ್ಕೂಲಿನ ದಂಪತಿ ಕಾರ್ಲ್ ಮತ್ತು ಗೆರ್ಟಿ ಗೋರಿ ಜಂಟಿಯಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾದರು. ಈ ಪ್ರಶಸ್ತಿಯನ್ನು ಅವರು ಅರ್ಜೆಂಟೀನಾದ ಬರ್ನಾರ್ಡೊ ಹೌಸ್ಸೆ ಅವರ ಜೊತೆಗೆ ಹಂಚಿಕೊಂಡರು. ಸಕ್ಕರೆಯನ್ನು ಗ್ಲೈಕೋಜೆನ್ ಆಗಿ ಪರಿವರ್ತಿಸುವುದಕ್ಕೆ ಸಂಬಂಧಿಸಿದಂತೆ ಮಾಡಿದ ಸಂಶೋಧನೆಗಾಗಿ ಅವರಿಗೆ ಈ ಪ್ರಶಸ್ತಿ ಲಭಿಸಿತು. ವೈದ್ಯಕೀಯ ಕ್ಷೇತ್ರ ಸಾಧನೆಗೆ ನೀಡಲಾಗುವ ನೊಬೆಲ್ ಪ್ರಶಸ್ತಿಗೆ ಪಾತ್ರರಾದ ಮೊತ್ತ ಮೊದಲ ದಂಪತಿ ಜೋಡಿ ಇದು. ಭೌತ ವಿಜ್ಞಾನದಲ್ಲಿ ಕ್ಯೂರಿ ದಂಪತಿ ನೊಬೆಲ್ ಪ್ರಶಸ್ತಿ ಪಡೆದ ಪ್ರಥಮ ದಂಪತಿ ಜೋಡಿ.

1934: ಅಖಿಲ ಭಾರತ ಕಾಂಗ್ರೆಸ್ ನಾಯಕತ್ವಕ್ಕೆ ಗಾಂಧೀಜಿ ರಾಜೀನಾಮೆ.

1920: ಜಪಾನಿ ಸಂಜಾತೆ ಸಂಶೋಧಕಿ ಟೆಟ್ಸುಯಾ `ಟೆಡ್' ಫ್ಯೂಜಿತಾ (1920-98) ಜನ್ಮದಿನ. ಈಕೆ ಸುಂಟರಗಾಳಿಗಳ ತೀವ್ರತೆಯನ್ನು ಅವುಗಳು ಉಂಟುಮಾಡುವ ಹಾನಿಯ ಆಧಾರದಲ್ಲಿ ಅಳೆಯುವ `ಫ್ಯೂಜಿತಾ ಸ್ಕೇಲ್' ಸಂಶೋಧಿಸಿದವರು.

1900: ಖ್ಯಾತ ಕ್ರಿಕೆಟ್ ಆಟಗಾರ ಡಗ್ಲಾಸ್ ಜಾರ್ಡಿನ್ ಅವರು ಬಾಂಬೆಯ (ಈಗಿನ ಮುಂಬೈ) ಮಲಬಾರ್ ಹಿಲ್ನಲ್ಲಿ ನಿಧನರಾದರು.

1906: ಗೆರ್ ಟ್ರೂಡ್ ಕರೋಲಿನ್ ಎಡೆರ್ಲೆ ಜನ್ಮದಿನ. ಈಕೆ ಇಂಗ್ಲಿಷ್ ಕಡಲ್ಗಾಲುವೆಯನ್ನು ಈಜಿದ ಮೊತ್ತ ಮೊದಲ ಮಹಿಳೆ.
1920ರ ದಶಕದಲ್ಲಿ ಅಮೆರಿಕದ ಅತ್ಯುತ್ತಮ ಕ್ರೀಡಾಪಟುಗಳಲ್ಲಿ ಒಬ್ಬರು ಎಂದು ಖ್ಯಾತಿ ಪಡೆದಿದ್ದವರು.

1883: ಮೈಸೂರಿನ ದಿವಾನರಾಗಿದ್ದ ಸರ್ ಮಿರ್ಜಾ ಮೊಹಮ್ಮದ್ ಇಸ್ಮಾಯಿಲ್ (1883-1959) ಜನನ.

No comments:

Advertisement