My Blog List

Friday, December 18, 2009

ಇಂದಿನ ಇತಿಹಾಸ History Today ನವೆಂಬರ್ 26

 ಇಂದಿನ ಇತಿಹಾಸ

ನವೆಂಬರ್ 26

ದೇಶದ ವಾಣಿಜ್ಯ ರಾಜಧಾನಿ ಮುಂಬೈಯಲ್ಲಿ ಉಗ್ರರು ಮತ್ತೆ ಅಟ್ಟಹಾಸ ಮೆರೆದರು. ದಕ್ಷಿಣ ಮುಂಬೈನ ಹಲವೆಡೆ ಈದಿನ ರಾತ್ರಿ ಅವರು ನಡೆಸಿದ ಸರಣಿ ಸ್ಪೋಟ ಮತ್ತು ಗುಂಡಿನ ಕಾಳಗಗಳಲ್ಲಿ 80ಕ್ಕೂ ಹೆಚ್ಚು ಮಂದಿ ಪ್ರಾಣತೆತ್ತು, ನೂರಾರು ಮಂದಿ ಗಾಯಗೊಂಡರು. ಇಬ್ಬರು ಉಗ್ರರನ್ನು ಹೊಡೆದುರುಳಿಸುವಲ್ಲಿ ಪೊಲೀಸ್ ಪಡೆಗಳು ಯಶಸ್ವಿಯಾದವು. ಒಬ್ಬ ಉಗ್ರ ತೀವ್ರ ಗಾಯಗೊಂಡು ಸೆರೆ ಸಿಕ್ಕಿದ. ಮೂವರು ಉಗ್ರರು ಕಪ್ಪು ಬಣ್ಣದ ಕಾರೊಂದರಲ್ಲಿ ಪರಾರಿಯಾದರು.

2008: ದೇಶದ ವಾಣಿಜ್ಯ ರಾಜಧಾನಿ ಮುಂಬೈಯಲ್ಲಿ ಉಗ್ರರು ಮತ್ತೆ ಅಟ್ಟಹಾಸ ಮೆರೆದರು. ದಕ್ಷಿಣ ಮುಂಬೈನ ಹಲವೆಡೆ ಈದಿನ ರಾತ್ರಿ ಅವರು ನಡೆಸಿದ ಸರಣಿ ಸ್ಪೋಟ ಮತ್ತು ಗುಂಡಿನ ಕಾಳಗಗಳಲ್ಲಿ 80ಕ್ಕೂ ಹೆಚ್ಚು ಮಂದಿ ಪ್ರಾಣತೆತ್ತು, ನೂರಾರು ಮಂದಿ ಗಾಯಗೊಂಡರು. ಇಬ್ಬರು ಉಗ್ರರನ್ನು ಹೊಡೆದುರುಳಿಸುವಲ್ಲಿ ಪೊಲೀಸ್ ಪಡೆಗಳು ಯಶಸ್ವಿಯಾದವು. ಒಬ್ಬ ಉಗ್ರ ತೀವ್ರ ಗಾಯಗೊಂಡು ಸೆರೆ ಸಿಕ್ಕಿದ. ಮೂವರು ಉಗ್ರರು ಕಪ್ಪು ಬಣ್ಣದ ಕಾರೊಂದರಲ್ಲಿ ಪರಾರಿಯಾದರು. ಭಯೋತ್ಪಾದನೆ ನಿಗ್ರಹ ಪಡೆಯ ಮುಖ್ಯಸ್ಥ ಹೇಮಂತ್ ಕರ್ಕರೆ, ಎನ್‌ಕೌಂಟರ್ ತಜ್ಞ ವಿಜಯ್ ಸಾಲುಸ್ಕರ್ ಸೇರಿದಂತೆ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದರು. ಜನನಿಬಿಡ ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣ (ಹಿಂದಿನ ವಿಕ್ಟೋರಿಯಾ ಟರ್ಮಿನಸ್), ಪ್ರತಿಷ್ಠಿತ ತಾಜ್ ಮತ್ತು ಟ್ರೈಡೆಂಟ್ (ಹಿಂದಿನ ಒಬೆರಾಯ್) ಹೋಟೆಲ್‌ಗಳಲ್ಲಿ ನಡೆದ ಸ್ಪೋಟಗಳು, ಗುಂಡಿನ ದಾಳಿಗಳಲ್ಲಿ ಹಲವಾರು ಮಂದಿ ಬಲಿಯಾದರು. ಕೊಲ್ಗಾ, ನಾರಿಮನ್ ಪಾಯಿಂಟ್ ಸೇರಿದಂತೆ 8 ಕಡೆಗಳಲ್ಲಿ ಈ ವಿಧ್ವಂಸಕ ಕೃತ್ಯಗಳು ನಡೆದವು. ಅತ್ಯಾಧುನಿಕ ಬಂದೂಕು ಮತ್ತು ಗ್ರೆನೇಡುಗಳೊಂದಿಗೆ ಎರಡು ತಂಡಗಳಲ್ಲಿ ಬಂದ ಉಗ್ರರು ನಡೆಸಿದ ಈ ಯೋಜಿತ ದಾಳಿಗಳಿಂದ ಇಡೀ ದೇಶ ಬೆಚ್ಚಿಬಿದ್ದಿತು.
(ಇತ್ತೀಚಿನ ಸರಣಿ ಸ್ಫೋಟಗಳು
ಅಕ್ಟೋಬರ್ 2007: ರಾಜಸ್ಥಾನದ ಅಜ್ನೀರ್ ಶರೀಫ್ ದರ್ಗಾದಲ್ಲಿ ರಂಜಾನ್ ಸಂದರ್ಭ ಸ್ಫೋಟ: ಇಬ್ಬರ ಸಾವು. 
ಆಗಸ್ಟ್ 2007: ಹೈದರಾಬಾದಿನಲ್ಲಿ ಉಗ್ರರ ದಾಳಿ: 30 ಸಾವು 60 ಮಂದಿಗೆ ಗಾಯ.
ಮೇ 2007: ಹೈದರಾಬಾದಿನ ಮೆಕ್ಕಾ ಮಸೀದಿಯಲ್ಲಿ ಬಾಂಬ್ ಸ್ಫೋಟ: 11 ಜನರ ಸಾವು.
ಫೆಬ್ರುವರಿ 19, 2007: ಭಾರತದಿಂದ ಪಾಕಿಸ್ಥಾನಕ್ಕೆ ತೆರಳಿದ ರೈಲಿನಲ್ಲಿ ಎರಡು ಬಾಂಬ್ ಸ್ಫೋಟ:  66 ಪ್ರಯಾಣಿಕರು ಬೆಂಕಿಗೆ ಆಹುತಿ. ಇವರಲ್ಲಿ ಬಹುತೇಕರು ಪಾಕಿಸ್ಥಾನಿಗಳು.
ಸೆಪ್ಟೆಂಬರ್ 2006: ಮಾಲೆಗಾಂವ್‌ ಮಸೀದಿಯಲ್ಲಿ ಅವಳಿ ಸ್ಫೋಟ: 30 ಸಾವು 100 ಮಂದಿಗೆ  ಗಾಯ.
ಜುಲೈ 2006: ಮುಂಬೈ ರೈಲುಗಳಲ್ಲಿ ಏಳು ಬಾಂಬ್ ಸ್ಪೋಟ: 200ಕ್ಕೂ ಹೆಚ್ಚು ಸಾವು. ಇತರ 700 ಮಂದಿಗೆ ಗಾಯ.
ಮಾರ್ಚ್ 2006: ವಾರಣಾಸಿಯ ರೈಲು ನಿಲ್ದಾಣ ಮತ್ತು ದೇವಾಲಯದಲ್ಲಿ ಅವಳಿ ಬಾಂಬ್ ಸ್ಫೋಟ:  20 ಜನರ ಸಾವು.
ಅಕ್ಟೋಬರ್ 2005: ದೀಪಾವಳಿಯ ಮುನ್ನಾದಿನ ನವದೆಹಲಿಯ ಜನನಿಬಿಡ ಮಾರುಕಟ್ಟೆಗಳಲ್ಲಿ  ಮೂರು ಬಾಂಬ್ ಸ್ಫೋಟ: 62 ಸಾವು. ನೂರಾರು ಮಂದಿಗೆ ಗಾಯ. )

2008: ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮದಿಂದಾಗಿ ತಮಿಳುನಾಡಿನ ಹಲವಾರು ಜಿಲ್ಲೆಗಳಲ್ಲಿ 4 ದಿನಗಳಿಂದ ಸುರಿದ ಭಾರಿ ಮಳೆಗೆ 36 ಜನ ಬಲಿಯಾದರು. ಪ್ರವಾಹ, ಮನೆಗಳ ಗೋಡೆ ಕುಸಿತ ಮತ್ತು ವಿದ್ಯುತ್ ಸ್ಪರ್ಶವೇ ಬಹುತೇಕ ಸಾವುಗಳಿಗೆ ಕಾರಣವೆಂದು ಪೊಲೀಸರು ತಿಳಿಸಿದರು.

2008: ಲಂಡನ್ನಿನ ವ್ಯಕ್ತಿಯೊಬ್ಬ ತನ್ನ ಇಬ್ಬರು ಪುತ್ರಿಯರ ಮೇಲೆ 20 ವರ್ಷಗಳ ಕಾಲ ಅತ್ಯಾಚಾರ ನಡೆಸಿ ಮಾನಸಿಕ ಹಿಂಸೆ ನೀಡಿದ ಅಮಾನುಷ ಕೃತ್ಯಕ್ಕಾಗಿ ಏಕಕಾಲಕ್ಕೆ 25 ಜೀವಾವಧಿ ಶಿಕ್ಷೆಗಳಿಗೆ ಗುರಿಯಾದ. ಐವತ್ತಾರು ವರ್ಷದ ಈ ವ್ಯಕ್ತಿ ತನ್ನ ಹಿರಿಯ ಮಗಳು 12 ಬಾರಿ ಗರ್ಭಿಣಿಯಾಗಲು ಕಾರಣನಾದ. ಅಲ್ಲದೆ ಇಬ್ಬರು ಮಕ್ಕಳ ತಂದೆಯೂ ಆದ. ಈ ನಡುವೆ ಇಬ್ಬರು ಮಕ್ಕಳು ಮೃತವಾಗಿವೆ. ಕಿರಿಯ ಮಗಳು 12 ಬಾರಿ ಗರ್ಭಿಣಿಯಾಗಿ, ಏಳು ಮಕ್ಕಳಿಗೆ ಜನ್ಮ ನೀಡಿದಳು. ಕಳೆದ ವರ್ಷ ಈತ  ಚಿಕಿತ್ಸೆಗಾಗಿ ಆಸ್ಪತ್ರೆ ಸೇರಿದ್ದಾಗ ಹಿರಿಯ ಮಗಳು ಮನೆಯಿಂದ ತಪ್ಪಿಸಿಕೊಂಡು ಬಂದ ನಂತರ ಪ್ರಕರಣ ಬೆಳಕಿಗೆ ಬಂತು. ಈ ದುಷ್ಕೃತ್ಯ ಎಸಗಿದ ವ್ಯಕ್ತಿಯ ವಿಚಾರಣೆಯನ್ನು ನಡೆಸಿದ ಶೆಫಿಲ್ಡ್ ಕ್ರೌನ್ ನ್ಯಾಯಾಲಯದ ನ್ಯಾಯಮೂರ್ತಿ ಆಲನ್ ಗೋಲ್ಡ್‌ಸ್ಯಾಕ್ ಅವರು ತಪ್ಪಿತಸ್ಥನಿಗೆ 25 ಜೀವಾವಧಿ ಶಿಕ್ಷೆಯನ್ನು ಏಕಕಾಲದಲ್ಲಿ ಅನುಭವಿಸುವಂತೆ ತೀರ್ಪು ನೀಡಿದರು. ಆಸ್ಟ್ರೇಲಿಯಾದ ಜೋಸೆಫ್ ಫ್ರಿಟ್ಜಿಲ್ ಎಂಬುದು ಈತನ ಹೆಸರು. ಈತ ತನ್ನ ಹೆಣ್ಮಕ್ಕಳನ್ನು 24 ವರ್ಷಗಳ ಕಾಲ ನೆಲಮಾಳಿಗೆಯಲ್ಲಿ ಕೂಡಿಹಾಕಿದ್ದ.

2008: ಕಿಷ್ಲ್ಟಕರ ಆರೋಗ್ಯ ಸಂದರ್ಭಗಳಲ್ಲಿ ವ್ಯಕ್ತಿಯೊಬ್ಬನಿಗೆ ಮರಣ ಹೊಂದಲು ಅವಕಾಶ ನೀಡುವ ಕಾನೂನಿಗೆ ಮೆಕ್ಸಿಕೋ ಸೆನೆಟ್ ಒಪ್ಪಿಗೆ ನೀಡಿತು. ಇದರಿಂದ ಕಾಯಿಲೆ ಪೀಡಿತ ರೋಗಿಗಳು ತಮಗೆ ನೀಡಬೇಕಾಗಿರುವ ಚಿಕಿತ್ಸೆಗೆ ವಿರೋಧ ವ್ಯಕ್ತಪಡಿಸಲು ಅವಕಾಶ ಲಭಿಸಿತು. ಈ ಕಾನೂನಿಗೆ ಈ ಮೊದಲೇ ಮೆಕ್ಸಿಕೊದ ಕೆಳಮನೆ ಒಪ್ಪಿಗೆ ನೀಡಿತ್ತು. ಈಗ ಇದು ರಾಷ್ಟ್ರಪತಿಗಳ ಸಹಿಯೊಂದಿಗೆ ಅಂತಿಮ ರೂಪ ಪಡೆಯುವುದು. ಈ ಕಾನೂನು ದಯಾಮರಣ ಇಲ್ಲವೇ ಆತ್ಮಹತ್ಯೆಯನ್ನು ಸಮ್ಮತಿಸುವುದಿಲ್ಲ ಎಂದು ಕೆಲವು ಸೆನೆಟರುಗಳು ಹೇಳಿದರು. ಈ ಕಾನೂನಿನ ಪ್ರಕಾರ ಯಾವುದೇ ರೋಗಿ ಚಿಕಿತ್ಸೆ ಬೇಡ ಎಂದು ನಿರಾಕರಿಸುವುದಾದರೆ ಇಬ್ಬರು ಸಾಕ್ಷಿಗಳ ಸಮ್ಮುಖದಲ್ಲಿ ಲಿಖಿತ ರೂಪದಲ್ಲಿ ಒಪ್ಪಿಗೆ ನೀಡಬೇಕಾಗುತ್ತದೆ.

2008: ಪಾಕಿಸ್ಥಾನದಲ್ಲಿ ಹತ್ಯೆಯಾದ ಮಾಜಿ ಪ್ರಧಾನಿ  ಬೆನಜೀರ್ ಭುಟ್ಟೊ ಅವರನ್ನು ಮರಣೋತ್ತರವಾಗಿ ವಿಶ್ವಸಂಸ್ಥೆಯ ಮಾನವ ಹಕ್ಕು ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.  ವಿಶ್ವಸಂಸ್ಥೆಯ ಮಾನವ ಹಕ್ಕು ದಿನವಾದ ಡಿಸೆಂಬರ್ 10 ರಂದು  ಪ್ರಧಾನ ಕಾಯಾದರ್ಶಿ ಬಾನ್ ಕಿ ಮೂನ್ ಅವರು ಪ್ರಶಸ್ತಿ ಪ್ರದಾನ ಮಾಡುವರು ಎಂದು ವಿಶ್ವಸಂಸ್ಥೆಯ ಮಹಾಸಭೆಯ ಅಧ್ಯಕ್ಷ ಮಿಗುಯಿಲ್ ಡಿ' ಎಸ್ಕೊಟೊ ಅವರು ಭುಟ್ಟೊ ಪತಿ ಹಾಗೂ ಪಾಕ್ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರಿಗೆ ತಿಳಿಸಿದರು. ವಿಶ್ವಸಂಸ್ಥೆಯು 1968 ರಲ್ಲಿ ಸ್ಥಾಪಿಸಿದ ಈ ಪ್ರಶಸ್ತಿಯನ್ನು ಮಾನವ ಹಕ್ಕುಗಳ ರಕ್ಷಣೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿ ಹಾಗೂ  ಸಂಸ್ಥೆಗಳಿಗೆ ನೀಡುತ್ತದೆ.

2007: ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಸಂಸತ್ತಿನ ಉಭಯ ಸದನಗಳ ಅಂಗೀಕಾರ ಪಡೆದ ಯುಪಿಎ ಸರ್ಕಾರ ಮರುಕ್ಷಣವೇ ವಿಧಾನಸಭೆಯನ್ನು ವಿಸರ್ಜಿಸಲು ನಿರ್ಧರಿಸುವ ಮೂಲಕ ಎರಡು ತಿಂಗಳ ಕಾಲ ರಾಜ್ಯದಲ್ಲಿದ್ದ ಅತಂತ್ರ ರಾಜಕೀಯ ಸ್ಥಿತಿಗೆ ಅಂತ್ಯ ಹಾಡಿತು.

2007: ಪಾಕಿಸ್ಥಾನದ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಅವರು ಪಾಕಿಸ್ಥಾನದ ಸೇನಾ ಮುಖ್ಯಸ್ಥನ ಹುದ್ದೆಯನ್ನು ವಾರಾಂತ್ಯದಲ್ಲಿ ತ್ಯಜಿಸಿ ಪ್ರಜಾಸತ್ತಾತ್ಮಕ ರಾಷ್ಟ್ರಪತಿಯಾಗಿ ಹೊಸ ರೂಪ ಧರಿಸಲು ನಿರ್ಧರಿಸಿದರು. ಅ. 6ರಂದು ನಡೆದ ಅಧ್ಯಕ್ಷ ಚುನಾವಣೆಯಲ್ಲಿ ಮರುಆಯ್ಕೆಯಾದ ಮುಷರಫ್ ಅವರ ಗೆಲುವನ್ನು ಪರಿಗಣಿಸಬೇಕೆಂದು ಸುಪ್ರೀಂಕೋರ್ಟ್ ಪಾಕ್ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. 1998ರ ಅಕ್ಟೋಬರ್ 7ರಂದು  ಜನರಲ್ ಮುಷರಫ್ ಅವರು ಪಾಕ್ ಸೇನಾ ಮುಖ್ಯಸ್ಥನ ಪದವಿಗೇರಿದ್ದರು. ಮೂರು ವರ್ಷಗಳ ಕಾಲ ಮಾತ್ರ ಸೇನಾ ಮುಖ್ಯಸ್ಥನ ಅಧಿಕಾರವಧಿ ನಿಗದಿಯಾಗಿದ್ದರೂ, ಮುಷರಫ್ ಸತತ 9 ವರ್ಷಗಳ ಕಾಲ ಈ ಹುದ್ದೆಯಲ್ಲಿ ಮುಂದುವರೆದಿದ್ದರು.

2007: ಆಗ್ನೇಯ ಇಂಡೋನೇಷ್ಯಾದ ಸುಂಬಾವಾ ದ್ವೀಪದಲ್ಲಿ ಸಂಭವಿಸಿದ ಎರಡು ಪ್ರಬಲ ಭೂಕಂಪಗಳಿಗೆ ಮೂವರು ಬಲಿಯಾಗಿ, 45ಕ್ಕೂ ಹೆಚ್ಚು ಜನರು ಗಾಯಗೊಂಡರು. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.7 ಹಾಗೂ 5.0ರಷ್ಟು ಇತ್ತು.

2007: ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಲಘು ಭೂಕಂಪ ಸಂಭವಿಸಿತು. ನಸುಕಿನ 4.42ರ ಸುಮಾರಿಗೆ ಕೆಲ ಸೆಕೆಂಡುಗಳ ಕಾಲ ಲಘುವಾಗಿ ಭೂಮಿ ಕಂಪಿಸಿದ್ದರಿಂದ ಬೆಳಗಿನ ಸಿಹಿನಿದ್ರೆಯಲ್ಲಿದ್ದ ಜನರು ಭಯಭೀತರಾಗಿ ಮನೆ ಬಿಟ್ಟು ಹೊರಗೋಡಿದರು. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.42ರಷ್ಟು ಇತ್ತು.

 2007: ಬಾಂಗ್ಲಾದೇಶದ ವಿವಾದಾತ್ಮಕ ಲೇಖಕಿ ತಸ್ಲಿಮಾ ನಸ್ರೀನ್ ಅವರು ಭಾರತದಲ್ಲಿ ಎಲ್ಲಿಆಶ್ರಯ ಪಡೆಯಬೇಕು ಎಂದು ನಿರ್ಧರಿಸುವ ಹೊಣೆ ಕೇಂದ್ರ ಸರ್ಕಾರದ್ದು ಎಂದು ಹೇಳುವ ಮೂಲಕ ಪಶ್ಚಿಮ ಬಂಗಾಳ ಸರ್ಕಾರ ಈ ವಿವಾದದಿಂದ ಕೈತೊಳೆದುಕೊಂಡಿತು. ನಸ್ರೀನ್ ಅವರಿಗೆ ಆಶ್ರಯ ನೀಡಿದ್ದರಿಂದ ಪಶ್ಚಿಮ ಬಂಗಾಳದ ಎಡರಂಗ ಸರ್ಕಾರ ಮುಸ್ಲಿಂ ಸಮುದಾಯದಿಂದ ಭಾರಿ ಟೀಕೆ ಹಾಗೂ ಪ್ರತಿಭಟನೆಗಳನ್ನು ಎದುರಿಸಿತ್ತು. ಇದೇ ಸಂದರ್ಭದಲ್ಲಿ ಸಚಿವರೊಬ್ಬರು ತಮ್ಮ ಮನೆಯಲ್ಲಿ ನಸ್ರೀನ್ ಅವರಿಗೆ ಆಶ್ರಯ ನೀಡುವುದಾಗಿ ಹೇಳಿದ್ದು ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡಿತ್ತು. ಈ ಬೆಳವಣಿಗೆ ನಂತರ ನಸ್ರೀನ್ ಅವರು ಜೈಪುರಕ್ಕೆ ತೆರಳಿದ್ದರು.

2006: ಮಹಿಳೆಯರಿಗೆ ರಕ್ಷಣೆ ಒದಗಿಸುವ ಉದ್ದೇಶದ ಮಹತ್ವದ ಕ್ರಮವಾಗಿ ಅಖಿಲ ಭಾರತ ಶಿಯಾ ವೈಯಕ್ತಿಕ ಕಾನೂನು ಮಂಡಳಿಯು ಮುಂಬೈಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ `ಮಾದರಿ ನಿಕ್ಹಾನಾಮಾ'(ಮದುವೆ ಒಪ್ಪಂದ)ಕ್ಕೆ ಸರ್ವಾನುಮತದ ಮಂಜೂರಾತಿ ನೀಡಿತು. ಇದು ವಿಚ್ಛೇದನ ವಿಚಾರದಲ್ಲಿ ಮಹಿಳೆಯರಿಗೂ ಪುರುಷರಷ್ಟೇ ಹಕ್ಕುಗಳನ್ನು ಒದಗಿಸುತ್ತದೆ. `ನಮ್ಮ ಮಾದರಿ ನಿಕ್ಹಾನಾಮಾಕ್ಕೆ ಇರಾಕಿನ ಅತ್ಯುನ್ನತ ಧರ್ಮಗುರು ಅಯತ್ಲ್ಲೊಲಾ ಸಿಸ್ಟಾನಿ ಮತ್ತು ಸಂವಿಧಾನ ತಜ್ಞರು ಅನುಮೋದನೆ ನೀಡಿದ್ದು ಈ ದಿನದಿಂದಲೇ ಜಾರಿಗೆ ಬರುವುದು' ಎಂದು ಮಂಡಳಿ ಅಧ್ಯಕ್ಷ ಮೌಲಾನಾ ಮಿರ್ಜಾ ಮಹಮ್ಮದ್ ಅತಾರ್ ಪ್ರಕಟಿಸಿದರು. ಈ ಮದುವೆ ಒಪ್ಪಂದದ ಪ್ರಕಾರ ವಧು ಮತ್ತು ವರ ಮದುವೆ ಸಮಯದಲ್ಲಿ ತಮ್ಮ ಷರತ್ತುಗಳನ್ನು ಮುಂದಿಡಬಹುದು. ವಧುವಿಗೆ ಅಗತ್ಯ ಬಿದ್ದರೆ ವಿಚ್ಛೇದನಕ್ಕೆ ಒತ್ತಾಯಿಸುವ ಹಕ್ಕು ಇರುತ್ತದೆ. ಅಗತ್ಯ ಬಿದ್ದಾಗ ಆಕೆ ಅದನ್ನು ಬಳಸಿಕೊಳ್ಳಬಹುದು. ಮಂಡಳಿಯ ಎರಡನೇ ಸರ್ವ ಸದಸ್ಯರ ಸಭೆಯಲ್ಲಿ ನಿಕ್ಹಾನಾಮಾಕ್ಕೆ ಮಂಜೂರಾತಿ ನೀಡಲಾಯಿತು. ಭಾರಿ ಸಂಖ್ಯೆಯಲ್ಲಿ ಧರ್ಮಗುರುಗಳು ಮತ್ತು ದೇಶದಾದ್ಯಂತದಿಂದ ಧಾರ್ಮಿಕ ನಾಯಕರು ಸಭೆಗೆ ಆಗಮಿಸಿದ್ದರು.

2006: ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ರಾಜನಾಥ ಸಿಂಗ್ ಅವರು ಮುಂದಿನ ಮೂರು ವರ್ಷಗಳ ಅವಧಿಗೆ ಅವಿರೋಧವಾಗಿ ಆಯ್ಕೆಯಾದರು.

2006: ಭಾರತದ ಜೀವ್ ಮಿಲ್ಕಾ ಸಿಂಗ್ ಅವರು ಜಪಾನಿನ ಕೋಚಿಯಲ್ಲಿ ಮುಕ್ತಾಯಗೊಂಡ ಕ್ಯಾಸಿಯೋ ವಿಶ್ವ ಓಪನ್ ಗಾಲ್ಫ್ ಟೂರ್ನಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡರು. ನ್ಯೂಜಿಲೆಂಡಿನ ಡೇವಿಡ್ ಸ್ಮೇಲ್ ಅವರನ್ನು ಅಂತಿಮ ಸುತಿನಲ್ಲಿ ಹಿಮ್ಮೆಟ್ಟಿಸಿದ ಅವರು ತಮ್ಮ ಚೊಚ್ಚಲ ಪ್ರಶಸ್ತಿಯನ್ನು ಗೆದ್ದುಕೊಂಡರು.

2005: ಆಕಾಶಯಾನಿ, 75 ವರ್ಷದ ವಿಜಯಪತ್ ಸಿಂಘಾನಿಯಾ ಅವರು ಬಿಸಿಗಾಳಿ ತುಂಬಿದ್ದ ಬಲೂನಿನ ಬುಟ್ಟಿಯಲ್ಲಿ ಸಮುದ್ರಮಟ್ಟಕ್ಕಿಂತ 69,852 ಅಡಿಗಳಷ್ಟು ಎತ್ತರಕ್ಕೆ ಏರಿ ವಿಶ್ವದಾಖಲೆ ನಿರ್ಮಿಸಿದರು. ಅಮೆರಿಕದ ಪೇರ್ ಲಿಂಡ್ ಸ್ಟ್ರ್ಯಾಂಡ್ 1988ರಲ್ಲಿ ಟೆಕ್ಸಾಸಿನ ಪ್ಲ್ಯಾನೋದಲ್ಲಿ ಬಿಸಿಗಾಳಿಯ ಬಲೂನಿನಲ್ಲಿ 64,997 ಅಡಿ ಎತ್ತರದಲ್ಲಿ ವಿಹಾರ ನಡೆಸಿದ್ದೇ ಈ ಹಿಂದಿನ ವಿಶ್ವದಾಖಲೆಯಾಗಿತ್ತು. ಸಿಂಘಾನಿಯಾ ಸಾಹಸದೊಂದಿಗೆ ಪೇರ್ ದಾಖಲೆ ಅಳಿಸಿಹೋಯಿತು.

2005: ಟೆಸ್ಟ್ ಕ್ರಿಕೆಟಿನಲ್ಲಿ ಆಸ್ಟ್ರೇಲಿಯಾದ ಆಲನ್ ಬಾರ್ಡರ್ ಅವರು ಸ್ಥಾಪಿಸಿದ್ದ 11,174 ರನ್ ಗಳಿಕೆಯ ವಿಶ್ವದಾಖಲೆಯನ್ನು ವೆಸ್ಟ್ ಇಂಡೀಸಿನ ಬ್ರಯನ್ ಲಾರಾ ಅವರು 11,187 ರನ್ ಗಳಿಸುವ ಮೂಲಕ ಅಳಿಸಿ ಹಾಕಿ ಹೊಸ ವಿಶ್ವದಾಖಲೆ ಬರೆದರು. ಅಡಿಲೇಡ್ ಕ್ರೀಡಾಂಗಣ ಈ ಹೊಸ ದಾಖಲೆ ನಿರ್ಮಾಣಕ್ಕೆ ಸಾಕ್ಷಿಯಾಯಿತು.

2005: ಸಂಗೀತ ಸಾಮ್ರಾಜ್ಞಿ ಲತಾ ಮಂಗೇಶ್ಕರ್ ಅವರು ಮೆರ್ರಿಲ್ ಲಿಂಚ್ ನೀಡುವ `ಜೀವಮಾನದ ಸಾಧನೆ' ಪ್ರಶಸ್ತಿಗೆ ಆಯ್ಕೆಯಾದರು. ಲತಾ ಅವರು ಕಲೆ, ಸಂಸ್ಕತಿ, ಸಂಗೀತ ಕ್ಷೇತ್ರಗಳಿಗೆ ನೀಡಿರುವ ಕೊಡುಗೆಯನ್ನು ಸ್ಮರಿಸಿ ಭಾರತದ ಎರಡನೇ ಅತಿದೊಡ್ಡ ವಜ್ರ ರಫ್ತುದಾರ ಸಂಸ್ಥೆ ಮೆರಿಲ್ ಲಿಂಚ್ ಇನ್ವೆಸ್ಟ್ಮೆಂಟ್ ಮತ್ತು ಅಡೋರ ಸಂಸ್ಥೆಯು ಈ ಪ್ರಶಸ್ತಿಯನ್ನು ನೀಡುತ್ತದೆ.

2005: ವೈಜ್ಞಾನಿಕ ಸಂಶೋಧನೆಗಾಗಿ 2005ನೇ ಸಾಲಿನ ಜಿ.ಡಿ. ಬಿರ್ಲಾ ಪ್ರಶಸ್ತಿಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಪ್ರಾಧ್ಯಾಪಕ ಪ್ರೊ. ದೀಪಂಕರ್ ದಾಸ್ ಪಾತ್ರರಾದರು. ಈ ಪ್ರಶಸ್ತಿಯ ಮೊತ್ತ 1.50 ಲಕ್ಷ ರೂಪಾಯಿಗಳು.

2005: ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಆಯ್ಕೆ ಮಾಡಲು ಬಿಜೆಪಿ ವರಿಷ್ಠ ಮಂಡಳಿ ತೀರ್ಮಾನಿಸಿತು.

1998: ಬ್ರಿಟಿಷ್ ಪ್ರಧಾನಿ ಟೋನಿ ಬ್ಲೇರ್ ಅವರು ಐರಿಷ್ ಸಂಸತ್ತನ್ನು ಉದ್ಧೇಶಿಸಿ ಮೊತ್ತ ಮೊದಲ ಭಾಷಣ ಮಾಡಿದರು. ಉತ್ತರ ಐರ್ಲೆಂಡಿನ ಶಾಂತಿ ಒಪ್ಪಂದವು ಅಂತಿಮವಾಗಿ ಬ್ರಿಟನ್ ಮತ್ತು ಐರ್ಲೆಂಡನ್ನು ಐಕ್ಯ ಗೊಳಿಸುವ ನಿಟ್ಟಿನಲ್ಲಿ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.

1981: ಹಿಂದೂ ಮಹಾಸಾಗರದಲ್ಲಿರುವ ಸೇಷೆಲ್ಸ್ ದ್ವೀಪದಿಂದ ಮುಂಬೈಗೆ 79 ಜನ ಪ್ರಯಾಣಿಕರು ಮತ್ತು ಚಾಲಕ ವರ್ಗವರೊಡನೆ ಯಾನ ಮಾಡುತ್ತಿದ್ದ ಏರ್ ಇಂಡಿಯಾ ಬೋಯಿಂಗ್ ವಿಮಾನ ಅಪಹರಣ ನಡೆದು ನಂತರ ಅಪಹರಣಗಾರರು ಶರಣಾಗತರಾದರು.

1978: ಸ್ವಾತಂತ್ರ್ಯ ಯೋಧ ಶೌಕತ್ ಅಲಿ ನಿಧನ.

1960: ಭಾರತದ ಕಾನ್ಪುರ ಮತ್ತು ಲಖನೌ ಮಧ್ಯೆ ಮೊತ್ತ ಮೊದಲ ಸಬ್ ಸ್ಕ್ರೈಬರ್ ಟ್ರಂಕ್ ಡಯಲಿಂಗ್ (ಎಸ್ ಟಿ ಡಿ) ಅಳವಡಿಸಲಾಯಿತು.

1956: ಅರಿಯಲೂರು ಬಳಿ ಸಂಭವಿಸಿದ ತೂತ್ತುಕುಡಿ ಎಕ್ಸ್ ಪ್ರೆಸ್ ರೈಲಿನ ದುರಂತದಿಂದ ವ್ಯಥೆಗೊಂಡ ರೈಲ್ವೆ ಸಚಿವ ಲಾಲ್ ಬಹ್ದದೂರ್ ಶಾಸ್ತ್ರಿ ಅವರು ತಮ್ಮ ಸಚಿವ ಪದವಿಗೆ ರಾಜೀನಾಮೆ ನೀಡಿದರು.

1954: ಭಾರತದಲ್ಲಿ ಪರಮಾಣು ಶಕ್ತಿ ಆಯೋಗ ಕಾರ್ಯ ಆರಂಭಿಸಿತು.

1949: ಸಂವಿಧಾನ ರಚನಾ ಸಭೆಯ ಅಧ್ಯಕ್ಷ ಡಾ. ರಾಜೇಂದ್ರ ಪ್ರಸಾದ್ ಅವರು ಭಾರತೀಯ ಸಂವಿಧಾನಕ್ಕೆ ಸಹಿ ಹಾಕಿದರು ಹಾಗೂ ಸಂವಿಧಾನವನ್ನು ಅಂಗೀಕರಿಸಲಾಗಿದೆ ಎಂದು ಘೋಷಿಸಿದರು. ಪೌರತ್ವ, ಚುನಾವಣೆಗಳು, ತಾತ್ಕಾಲಿಕ ಸಂಸತ್ತು, ತಾತ್ಕಾಲಿಕ ಮತ್ತು ವರ್ಗಾವಣಾ ವಿಧಿಗಳನ್ನು ತಕ್ಷಣದಿಂದಲೇ ಜಾರಿಗೊಳಿಸಲಾಯಿತು. ಸಂವಿಧಾನದ ಉಳಿದ ಭಾಗ 1950ರ ಜನವರಿ 26ರಂದು ಜಾರಿಗೆ ಬಂದಿತು.

1947: ಸ್ವತಂತ್ರ ಭಾರತದ ಮೊತ್ತ ಮೊದಲ ಮುಂಗಡಪತ್ರವನ್ನು ಆರ್. ಕೆ. ಷಣ್ಮುಖನ್ ಚೆಟ್ಟಿ ಅವರು ಶಾಸನ ಸಭೆಯಲ್ಲಿ ಮಂಡಿಸಿದರು.

1947: ಸಾಹಿತಿ ನಲ್ಲೂರು ಪ್ರಸಾದ್ ಜನನ.

1938: ಸಾಹಿತಿ ಅನಸೂಯಾರಾವ್ ಜನನ.

1932: ಸಾಹಿತಿ ಜನಾರ್ದನ ಗುರ್ಕಾರ ಜನನ.

1929: ಸಾಹಿತಿ ಬಿ.ಕೆ. ಸುಬ್ಬುಲಕ್ಷ್ಮಿ ಜನನ.

1926: ಅಮುಲ್ ಖ್ಯಾತಿಯ ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿ ಅಧ್ಯಕ್ಷ ವರ್ಗೀಸ್ ಕುರಿಯನ್ ಹುಟ್ಟಿದ ದಿನ. ಭಾರತದ `ಕ್ಷೀರಕ್ರಾಂತಿ' ಯೋಜನೆಯ ಮೂಲ ಪುರುಷ ಇವರು. ಹೈನೋದ್ಯಮದಲ್ಲಿ ಮಾಡಿದ ಸಾಧನೆಗಾಗಿ ಇವರಿಗೆ ದೇಶ ವಿದೇಶಗಳ ಪ್ರಶಸ್ತಿ ಲಭಿಸಿದೆ. ಅವರಿಗೆ ಲಭಿಸಿದ ಪ್ರಶಸ್ತಿಗಳು: ರಾಮನ್ ಮ್ಯಾಗ್ಸೇಸೆ (1963), ಪದ್ಮಶ್ರೀ (1965), ಪದ್ಮಭೂಷಣ (1966), ಕೃಷಿರತ್ನ (1986), ವಾಟೆಲರ್ ಶಾಂತಿ ಪ್ರಶಸ್ತಿ (1986), ವಿಶ್ವ ಆಹಾರ ಪ್ರಶಸ್ತಿ (1989), ಪದ್ಮವಿಭೂಷಣ ಪ್ರಶಸ್ತಿ (1999).

1924: ಭಾರತೀಯ ಕ್ರಿಕೆಟ್ ಆಟಗಾರ ಜಸುಭಾಯಿ ಪಟೇಲ್ (1924-1992) ಹುಟ್ಟಿದ ದಿನ.

1922: ಅಮೆರಿಕದ ಚಾರ್ಲ್ಸ್ ಶುಲ್ಜ್ (1922-2000) ಹುಟ್ಟಿದ ದಿನ. 20ನೇ ಶತಮಾನದಲ್ಲಿ ಅತ್ಯಂತ ಯಶಸ್ವೀ ಕಾಮಿಕ್ ಸ್ಟ್ರಿಪ್ ಎಂಬುದಾಗಿ ಹೆಸರು ಪಡೆದ `ಪೀನಟ್ಸ್' ಇವರ ಸೃಷ್ಟಿ.

1911: ಅಮೆರಿಕದ ಚೆಸ್ ಮಾಸ್ಟರ್ ಸ್ಯಾಮ್ಯುಯೆಲ್ ಹರ್ಮನ್ ರೆಶೆವ್ ಸ್ಕಿ (1911-1992) ಹುಟ್ಟಿದ ದಿನ. ಜಾಗತಿಕ ಚಾಂಪಿಯನ್ ಶಿಪ್ ಗಳಿಸದೇ ಇದ್ದರೂ ಇವರು ಅಪ್ರತಿಮ ಚೆಸ್ ಆಟಗಾರರಾಗಿದ್ದರು.

1906: ನಿಘಂಟು ರಚನಾಕಾರ, ಭಾಷಾಶಾಸ್ತ್ರ ಪಂಡಿತ ತೀ.ನಂ. ಶ್ರೀಕಂಠಯ್ಯ (26-11-1906ರಿಂದ 7-9-1966) ಅವರು ನಂಜುಂಡಯ್ಯ- ಭಾಗೀರಥಮ್ಮ ದಂಪತಿಯ ಮಗನಾಗಿ ತುಮಕೂರು ಜಿಲ್ಲೆ ಚಿಕ್ಕನಾಯಕನ ಹಳ್ಳಿ ತಾಲ್ಲೂಕಿನ ತೀರ್ಥಪುರಲದಲ್ಲಿ ಜನಿಸಿದರು.

 1890: ಶಿಕ್ಷಣ ತಜ್ಞ ಸತ್ಯಬೋಧ ಅವರು ಧಾರವಾಡದಲ್ಲಿ ಈದಿನ ಜನಿಸಿದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement