My Blog List

Tuesday, March 9, 2010

ಇಂದಿನ ಇತಿಹಾಸ History Today ಫೆಬ್ರುವರಿ 03

ಇಂದಿನ ಇತಿಹಾಸ

ಫೆಬ್ರುವರಿ 03

ಯಕ್ಷಗಾನ ಕ್ಷೇತ್ರದ ಮೇರು ಕಲಾವಿದ, ಜಾನಪದ ಹಾಗೂ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಕೆರೆಮನೆ ಶಂಭು ಹೆಗಡೆ (70) ಈದಿನ ಬೆಳಗಿನ ಜಾವ 4.30ರ ಸುಮಾರಿಗೆ ಇಡುಗುಂಜಿಯಲ್ಲಿ ಹೃದಯಾಘಾತದಿಂದ ನಿಧನರಾದರು. ಇಡಗುಂಜಿಯಲ್ಲಿ ಜಾತ್ರೆಯ ನಿಮಿತ್ತ ಹಿಂದಿನ ದಿನ ರಾತ್ರಿ ದೇವಸ್ಥಾನ ಆವರಣದಲ್ಲಿ ನಡೆದ 'ಲವ-ಕುಶರ ಕಾಳಗ' ಯಕ್ಷಗಾನ ಪ್ರಸಂಗದಲ್ಲಿ ಶಂಭು ಹೆಗಡೆ ಅವರು ರಾಮನ ಪಾತ್ರ ನಿರ್ವಹಿಸಿದ್ದರು.

2009: ಯಕ್ಷಗಾನ ಕ್ಷೇತ್ರದ ಮೇರು ಕಲಾವಿದ, ಜಾನಪದ ಹಾಗೂ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಕೆರೆಮನೆ ಶಂಭು ಹೆಗಡೆ (70) ಈದಿನ ಬೆಳಗಿನ ಜಾವ 4.30ರ ಸುಮಾರಿಗೆ ಇಡುಗುಂಜಿಯಲ್ಲಿ ಹೃದಯಾಘಾತದಿಂದ ನಿಧನರಾದರು. ಇಡಗುಂಜಿಯಲ್ಲಿ ಜಾತ್ರೆಯ ನಿಮಿತ್ತ ಹಿಂದಿನ ದಿನ ರಾತ್ರಿ ದೇವಸ್ಥಾನ ಆವರಣದಲ್ಲಿ ನಡೆದ 'ಲವ-ಕುಶರ ಕಾಳಗ' ಯಕ್ಷಗಾನ ಪ್ರಸಂಗದಲ್ಲಿ ಶಂಭು ಹೆಗಡೆ ಅವರು ರಾಮನ ಪಾತ್ರ ನಿರ್ವಹಿಸಿದ್ದರು. ಪ್ರಸಂಗದ ಕೊನೆಯ ಸನ್ನಿವೇಶ ಬಾಕಿ ಇದ್ದಾಗ ಹೆಗಡೆ ಅವರಿಗೆ ಎದೆ ನೋವು ಕಾಣಿಸಿಕೊಂಡಿತು. ಕೂಡಲೇ ರಂಗದಿಂದ ಚೌಕಿ ಮನೆಗೆ ಬಂದ ಅವರು ಕುಸಿದು ಬಿದ್ದರು. ಅಲ್ಲಿದ್ದವರು ಕೂಡಲೇ ಅವರನ್ನು ಆಸ್ಪತ್ರೆಗೆ ಒಯ್ದರು. ಆದರೆ ಮಾರ್ಗಮಧ್ಯೆ ಹೆಗಡೆ ಕೊನೆಯುಸಿರೆಳೆದರು. ಕಲಾವಿದ ಕೆರೆಮನೆ ಶಂಭು ಹೆಗಡೆಯವರು ಬಡಗುತಿಟ್ಟು ಯಕ್ಷಗಾನವನ್ನು ಸಾಗರದಾಚೆಗೂ ಪ್ರಚುರಪಡಿಸಿ ಸಾಂಸ್ಕೃತಿಕ ಭೂಪಟದಲ್ಲಿ ಯಕ್ಷಗಾನಕ್ಕೊಂದು ನೆಲೆ ತಂದುಕೊಟ್ಟ ಈ ಅಪ್ರತಿಮ ಕಲಾವಿದ. 50 ವರ್ಷಗಳಿಗೂ ಹೆಚ್ಚು ಕಾಲ ಗೆಜ್ಜೆ ಕಟ್ಟಿ ರಂಗದಲ್ಲಿ ಮಿಂಚಿದ್ದರು. ಯಕ್ಷಗಾನದ ಮೇರುನಟ ಕೆರೆಮನೆ ಶಿವರಾಮ ಹೆಗಡೆ ಅವರ ಮಗನಾದ ಶಂಭು ಹೆಗಡೆ 'ಶ್ರೀ ಇಡಗುಂಜಿ ಮಹಾಗಣಪತಿ' ಯಕ್ಷಗಾನ ಮೇಳ ಸಂಘಟಿಸಿ, ದೇಶದ ಉದ್ದಗಲಕ್ಕೂ ಸಂಚರಿಸಿ, ಐದು ಸಾವಿರಕ್ಕಿಂತಲೂ ಹೆಚ್ಚು ಪಾತ್ರಗಳನ್ನು ನಿರ್ವಹಿಸಿದ್ದರು. ಸಂಪ್ರದಾಯದ ಚೌಕಟ್ಟಿನಲ್ಲಿ ಯಕ್ಷಗಾನ ಪ್ರದರ್ಶನದ ನವೀನ ಸಾಧ್ಯತೆಗಳ ಬಗ್ಗೆ ಸದಾ ಹುಡುಕಾಟದಲ್ಲಿದ್ದ ಚಿಂತಕ, ಕಲಾವಿದ ಶಂಭು ಹೆಗಡೆ ಅವರು, ಅರ್ಧ ಚಂದ್ರಾಕೃತಿಯ ರಂಗಸ್ಥಳವನ್ನು ಯಕ್ಷಗಾನಕ್ಕೆ ಪರಿಚಯಿಸಿದ್ದರು. ಶಂಭು ಹೆಗಡೆ ಅವರು ಯಕ್ಷಗಾನ ಕ್ಷೇತ್ರಕ್ಕೆ ನೀಡಿರುವ ಸಾಧನೆ ಗಮನಿಸಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಅವರಿಗೆ ಒಲಿದಿದ್ದವು. ಹೊನ್ನಾವರ ತಾಲ್ಲೂಕಿನ ಇಡಗುಂಜಿಯಲ್ಲಿ ನಡೆದ 'ಲವ-ಕುಶ ಕಾಳಗ' ಯಕ್ಷಗಾನ ಪ್ರಸಂಗದ ರಾಮ ಪಾತ್ರದಲ್ಲಿ ಕಾಣಿಸಿಕೊಂಡ ಶಂಭು ಹೆಗಡೆ. ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪುವ ಮುನ್ನ ರಂಗದ ಮೇಲೆ ಅವರು ಈ ಪಾತ್ರವನ್ನು ನಿರ್ವಹಿಸುತ್ತಿದ್ದರು.

2009: ಮುಕ್ತ ಮಾರುಕಟ್ಟೆಯಲ್ಲಿ ಮಾರಲಾಗುವ ವನಸ್ಪತಿ ಬ್ರಾಂಡ್ ಸೇರಿದಂತೆ ಎಲ್ಲ ಬಗೆಯ ಅಡುಗೆಗೆ ಬಳಸಲಾಗುವ ತೈಲಗಳು ಮಿತಿಮೀರಿದ ಕೊಬ್ಬು ಮತ್ತು ಆಮ್ಲದ ಅಂಶಗಳನ್ನು ಹೊಂದಿವೆ ಎಂದು ವಿಜ್ಞಾನ ಮತ್ತು ಪರಿಸರ ಕೇಂದ್ರ ನಡೆಸಿರುವ ಅಧ್ಯಯನ ಎಚ್ಚರಿಸಿತು. ಮಾರುಕಟ್ಟೆಯಲ್ಲಿ ದೊರೆಯುವ ವಿವಿಧ ಬ್ರಾಂಡ್‌ಗಳ ಸುಮಾರು 30ಕ್ಕೂ ಹೆಚ್ಚು ಬಗೆಯ ಅಡುಗೆಯ ತೈಲ, ದೇಸಿ ತುಪ್ಪ ಹಾಗೂ ಬೆಣ್ಣೆಗಳಲ್ಲಿ ಈ ಅಂಶ ಇರುವುದನ್ನು ಅಧ್ಯಯನ ಪತ್ತೆ ಮಾಡಿತು. ಉನ್ನತ ತಂತ್ರಜ್ಞಾನದ ಮೂಲಕ ಅಧ್ಯಯನ ನಡೆಸಿದ ನಂತರವಷ್ಟೇ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಕೇಂದ್ರದ ಸಹಾಯಕ ನಿರ್ದೇಶಕ ಚಂದ್ರಭೂಷಣ ಹೇಳಿದರು. ಈ ತೈಲಗಳಲ್ಲಿನ ಕೊಬ್ಬಿನ ಅಂಶವು ಮಾನವರ ಉಪಯೋಗಕ್ಕೆ ಎಷ್ಟರಮಟ್ಟಿಗೆ ಅಪಾಯಕಾರಿ ಎಂಬ ಬಗ್ಗೆ ನಾವು ಅಧ್ಯಯನ ನಡೆಸಿದೆವು. ಇವುಗಳು ನೀಡುವ ಜಾಹೀರಾತಿನ ಅನುಸಾರ ಯಾವುವೂ ಕೂಡಾ ಮಾನವರ ಆರೋಗ್ಯಕ್ಕೆ ಆ ಮಟ್ಟದಲ್ಲಿ ಪ್ರಯೋಜನಕಾರಿಯಾಗಿಲ್ಲ. ಕೊಬ್ಬಿನಾಂಶಗಳು ಹೃದಯ ರೋಗದ ಅಪಾಯಗಳನ್ನು ಉಲ್ಬಣಿಸಬಲ್ಲವು, ಮಹಿಳೆಯರಲ್ಲಿ ಗರ್ಭಧಾರಣೆಯ ಫಲವತ್ತತೆ ಕುಂದಿಸಬಲ್ಲವು, ಸ್ತನ ಕ್ಯಾನ್ಸರ್, ಮಧುಮೇಹ, ಅಲ್ಜೆಮೈರ್ (ವೃದ್ಧಾಪ್ಯದಲ್ಲಿನ ಮರೆಗುಳಿ ರೋಗ) ನಂತಹ ಕಾಯಿಲೆಗಳಿಗೆ ಆಹ್ವಾನ ನೀಡಬಲ್ಲವು ಎಂದು ಚಂದ್ರಭೂಷಣ ಅವರು ಎಚ್ಚರಿಸಿದರು. ಅತ್ಯಂತ ಕಡಿಮೆ ಪ್ರಮಾಣದ ಕೊಬ್ಬಿನಂಶ, ಆಮ್ಲಗಳು ದೇಸಿ ತುಪ್ಪ ಮತ್ತು ಅಮುಲ್ ಬೆಣ್ಣೆಯಲ್ಲಿ ಕಂಡು ಬಂದಿದೆ. ಇವುಗಳಲ್ಲಿ ಕ್ರಮವಾಗಿ 5.3 ಹಾಗೂ 3.7ರಷ್ಟು ಕೊಬ್ಬಿನಂಶ ಇದೆ ಸಾಸಿವೆ ಎಣ್ಣೆಯಲ್ಲಿ ಈ ಅಂಶಗಳು ಶೇಕಡಾ 1 ಇದೆ. ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸಿನ ಅನುಸಾರ ಅಡುಗೆ ತೈಲಗಳಲ್ಲಿ ಶೇಕಡಾ ಒಂದು ಹಾಗೂ ಅದಕ್ಕಿಂತಲೂ ಕಡಿಮೆ ಕೊಬ್ಬಿನಂಶ ಇರಬೇಕೆಂದು ಹೇಳಲಾಗಿದೆ.

2009: ಅಮೆರಿಕದ ನಿಕಟಪೂರ್ವ ಅಧ್ಯಕ್ಷ ಜಾರ್ಜ್ ಬುಶ್ ಅವರತ್ತ ಬೂಟು ಎಸೆದು ವಿಶ್ವಾದ್ಯಂತ ಸುದ್ದಿ ಮಾಡಿದ್ದ ಇರಾಕ್ ಪತ್ರಕರ್ತ ಅಲ್ ಜೈದಿ ಪ್ರಕರಣ ಇನ್ನೂ ಹಸಿಯಾಗಿರುವಾಗಲೇ, ಬ್ರಿಟನ್‌ನಲ್ಲಿ ಅಂತಹುದೇ ಘಟನೆ ಮರುಕಳಿಸಿತು. ಟಿಬೆಟ್ ಪರ ಯುವಕನ ಬೂಟೇಟಿನಿಂದ ಚೀನಾದ ಪ್ರಧಾನಿ ವೆನ್ ಜಿಯಬಾವೊ ಸ್ವಲ್ಪದರಲ್ಲಿ ಪಾರಾದರು. ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಜಿಯಬಾವೊ ಜಾಗತಿಕ ಆರ್ಥಿಕತೆಯ ಬಗ್ಗೆ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆಯಿತು. ಭಾಷಣ ಅಂತಿಮ ಹಂತಕ್ಕೆ ಬರುತ್ತಿದ್ದಂತೆಯೇ ಸುಮಾರು 27 ವರ್ಷದ ಯುವಕನೊಬ್ಬ ಶಿಳ್ಳು ಹಾಕುತ್ತಾ ಎದ್ದುನಿಂತು ತನ್ನ ಬೂಟನ್ನು ಕಳಚಿ ಜಿಯೊಬಾವೊ ಅವರಿದ್ದ ವೇದಿಕೆಯತ್ತ ಎಸೆದ. ಆದರೆ ಅದು ಗುರಿ ತಪ್ಪಿ ಅವರಿಂದ ಕೆಲವೇ ಅಡಿಗಳ ದೂರದಲ್ಲಿ ಬಿತ್ತು.

2008: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೊದಲ ವಿಮಾನವು ಮಾರ್ಚ್ 30ರ ಮಧ್ಯರಾತ್ರಿ 12 ಗಂಟೆಗೆ ಪ್ರಯಾಣ ಬೆಳೆಸುವುದು, ಇದಕ್ಕೂ ಮುನ್ನ ಮಾರ್ಚ್ 29ರ ರಾತ್ರಿ ಎಂಟು ಗಂಟೆ ನಂತರ ಖಾಸಗಿ ಸಂಸ್ಥೆಯ ವಿಮಾನವೊಂದು ನಿಲ್ದಾಣಕ್ಕೆ ಆಗಮಿಸುವುದು. ಮಾರ್ಚ್ 29ರ ರಾತ್ರಿ ಎಂಟು ಗಂಟೆಯ ನಂತರ ಯಾವುದೇ ವಿಮಾನದ ಆಗಮನಕ್ಕೆ ಎಚ್ ಎ ಎಲ್ ವಿಮಾನ ನಿಲ್ದಾಣದಲ್ಲಿ ಅವಕಾಶ ಇರುವುದಿಲ್ಲ ಎಂದು ಎಚ್ ಎ ಎಲ್ ಅಧಿಕಾರಿಗಳು ಪ್ರಕಟಿಸಿದರು.

2008: ಆಸ್ಟ್ರೇಲಿಯಾ ವಿರುದ್ಧ ಬ್ರಿಸ್ಬೇನಿನಲ್ಲಿ ನಡೆದ ಪಂದ್ಯದಲ್ಲಿ `ಹಿಟ್ ವಿಕೆಟ್' ರೂಪದಲ್ಲಿ ವಿಕೆಟ್ ಒಪ್ಪಿಸಿದ ಸಚಿನ್ ತೆಂಡೂಲ್ಕರ್ ಅವರು ಈ ರೀತಿಯಲ್ಲಿ ಔಟಾದ ಭಾರತದ ಮೂರನೇ ಬ್ಯಾಟ್ಸ್ ಮನ್ ಎನಿಸಿಕೊಂಡರು. ಪಂದ್ಯದಲ್ಲಿ ಉತ್ತಮ ಆರಂಭ ಪಡೆದಿದ್ದ ಮಾಸ್ಟರ್ ಬ್ಲಾಸ್ಟರ್ ಅವರು ಬ್ರೆಟ್ ಲೀ ಎಸೆತದಲ್ಲಿ ಔಟಾದರು. ಚೆಂಡನ್ನು ರಕ್ಷಣಾತ್ಮಕವಾಗಿ ಆಡಿ ರನ್ ಗಳಿಸುವ ಪ್ರಯತ್ನದ ವೇಳೆ ಸಚಿನ್ ಅವರ ಬಲಗಾಲು ಸ್ಟಂಪ್ ಗೆ ತಾಗಿ ಬೇಲ್ಸ್ ಕೆಳಕ್ಕುರುಳಿತು. ತಮ್ಮ ವೃತ್ತಿಜೀವನದಲ್ಲಿ ತೆಂಡೂಲ್ಕರ್ ಇದೇ ಮೊದಲ ಬಾರಿಗೆ ಹಿಟ್ ವಿಕೆಟ್ ರೂಪದಲ್ಲಿ ಔಟಾಗಿ ನಯನ್ ಮೋಂಗಿಯ ಹಾಗೂ ಅನಿಲ್ ಕುಂಬ್ಳೆ ಅವರ ಸಾಲಿಗೆ ಸೇರಿಕೊಂಡರು. 1995ರಲ್ಲಿ ಶಾರ್ಜಾದಲ್ಲಿ ಪಾಕಿಸ್ಥಾನದ ವಿರುದ್ಧದ ಪಂದ್ಯದಲ್ಲಿ ಮೋಂಗಿಯಾ ಅವರು ವಾಸೀಂ ಅಕ್ರಂ ಎಸೆತದಲ್ಲಿ ಇದೇ ರೀತಿ ಔಟಾಗಿದ್ದರು. 2003ರಲ್ಲಿ ವೆಲ್ಲಿಂಗ್ಟನ್ನಿನಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಅನಿಲ್ ಕುಂಬ್ಳೆ ಅವರು ಹಿಟ್ ವಿಕೆಟ್ ರೂಪದಲ್ಲಿ ಆಂಡ್ರೆ ಆಡಮ್ಸ್ ಗೆ ವಿಕೆಟ್ ಒಪ್ಪಿಸಿದ್ದರು. ತೆಂಡೂಲ್ಕರ್ ಅಲ್ಲದೆ ಏಕದಿನ ಕ್ರಿಕೆಟಿನಲ್ಲಿ 10,000 ರನ್ ಪೂರೈಸಿರುವ ಇನ್ನಿಬ್ಬರು ಆಟಗಾರರಾದ ಪಾಕಿಸ್ಥಾನದ ಇಂಜಮಾಮ್ ಉಲ್ ಹಕ್ ಹಾಗೂ ವೆಸ್ಟ್ ಇಂಡೀಸಿನ ಬ್ರಯನ್ ಲಾರಾ ಹಿಟ್ ವಿಕೆಟ್ ರೂಪದಲ್ಲಿ ಔಟಾಗಿದ್ದರು.

2008: ಮೈಸೂರಿನ ಸ್ವರ ಮಾಧುರ್ಯ ಟ್ರಸ್ಟ್ ನೀಡುವ ಸುಗಮ ಸಂಗೀತ ಕಲಾನಿಧಿ ಪ್ರಶಸ್ತಿಯನ್ನು ಖ್ಯಾತ ಕಲಾವಿದ ಪುತ್ತೂರು ನರಸಿಂಹ ನಾಯಕ್ ಅವರಿಗೆ ಕೈಗಾರಿಕೋದ್ಯಮಿ ಕೆ.ವಿ. ಮೂರ್ತಿ ಪ್ರದಾನ ಮಾಡಿದರು.

2008: ಆಫ್ರಿಕಾದ ರುವಾಂಡಾ ದಕ್ಷಿಣ ಭಾಗದಲ್ಲಿ ಸಂಭವಿಸಿದ ಭೂಕಂಪದಲ್ಲಿ ಕನಿಷ್ಠ 31 ಮಂದಿ ಮೃತರಾಗಿ 380ಕ್ಕೂ ಅಧಿಕ ಮಂದಿ ಗಾಯಗೊಂಡರು. ಕಂಪನದ ಪ್ರಮಾಣ ರಿಕ್ಟರ್ ಮಾಪಕದಲ್ಲಿ 5ರಷ್ಟಿತ್ತು.

2008: ಛತ್ತೀಸ್ ಗಢ ಮೂಲದ 14 ವರ್ಷದ ಬಾಲಕಿ ಆರತಿಕುಮಾರಿ ದೇಹದ ಬಲಭಾಗದಲ್ಲಿರುವ ಹೃದಯದ ರಂಧ್ರವನ್ನು ಶಸ್ತ್ರಚಿಕಿತ್ಸೆಯಿಂದ ಮುಚ್ಚುವ ಮೂಲಕ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ವೈದ್ಯರು ವಿಶೇಷ ಸಾಧನೆ ಮೆರೆದರು. ಹತ್ತು ಸಾವಿರ ಮಕ್ಕಳಿಗೆ ಒಬ್ಬರಲ್ಲಿ ಮಾತ್ರ ಕಂಡು ಬರುವ ಡೆಕ್ಸಟ್ರೊಕಾರ್ಡಿಯ (ಬಲಭಾಗದಲ್ಲಿರುವ ಅಂಗಗಳು ಎಡಭಾಗದಲ್ಲಿ ಮತ್ತು ಎಡಭಾಗದಲ್ಲಿರುವ ಅಂಗಗಳು ಬಲಭಾಗದಲ್ಲಿ ಇರುವುದು) ಎಂಬ ಅಪರೂಪದ ಅಂಗ ರಚನೆಯನ್ನು ಆರತಿ ಹೊಂದಿದ್ದಳು. ಉಸಿರಾಟಕ್ಕೆ ತೊಂದರೆ ನೀಡುತ್ತಿದ್ದ ಆಕೆಯ ಹೃದಯದ ರಂಧ್ರವನ್ನು ಶಸ್ತ್ರಚಿಕಿತ್ಸೆಯಿಂದ ಮುಚ್ಚುವ ಮೂಲಕ ಹೃದಯ ಕವಾಟದಲ್ಲಿ ರಕ್ತ ಹರಿಯುವಿಕೆಯನ್ನು ವೈದ್ಯರು ಸುಗಮಗೊಳಿಸಿದರು.

2008: ಜನಪ್ರಿಯ ರಂಗಪ್ರಕಾರ `ನೌಟಂಕಿ'ಯ ಹೆಸರಾಂತ ಕಲಾವಿದ ಮಾಸ್ಟರ್ ಗಿರಿಜ (92) ಜೈಪುರದಲ್ಲಿ ನಿಧನರಾದರು. ಉತ್ತರ ಭಾರತದಲ್ಲಿ ಅತ್ಯಂತ ಜನಪ್ರಿಯ ರಂಗ ಪ್ರಕಾರವಾಗಿರುವ `ನೌಟಂಕಿ' ಬೆಳವಣಿಗೆ ಮತ್ತು ಅದರ ಜನಪ್ರಿಯತೆಗೆ ಅತ್ಯಂತ ಸೃಜನಶೀಲವಾಗಿ ತೊಡಗಿಸಿಕೊಂಡವರಲ್ಲಿ ಗಿರಿಜ ಮುಂಚೂಣಿ ನಾಯಕರು. ಅವರು ರಾಜಸ್ಥಾನ, ಉತ್ತರ ಪ್ರದೇಶ ಮಾತ್ರವಲ್ಲ ದೇಶದ ಎಲ್ಲಡೆ ಹಲವಾರು ಪ್ರದರ್ಶನಗಳನ್ನು ನೀಡಿದ್ದಾರೆ. ಈ ರಂಗಪ್ರಕಾರಕ್ಕೆ ಅವರು ಸಲ್ಲಿಸಿದ ಸೇವೆಗಾಗಿ ಹಲವಾರು ಪ್ರಶಸ್ತಿ, ಸನ್ಮಾನಗಳೂ ಸಂದಿವೆ.

2008: ಪಕ್ಷಿಜ್ವರ (ಕೋಳಿಜ್ವರ) ಹರಡುವುದನ್ನು ತಡೆಯುವ ಉದ್ದೇಶದಿಂದ ಪಶ್ಚಿಮಬಂಗಾಳ ಗಡಿಯಲ್ಲಿ ಕೋಳಿಗಳ ಹತ್ಯೆಗೆ ಕೇಂದ್ರ ಸರ್ಕಾರ ಸೂಚನೆ ನೀಡಿದ ಮೇರೆಗೆ ಅಸ್ಸಾಂ ಸರ್ಕಾರವು ಮುಂಜಾಗ್ರತಾ ಕ್ರಮವಾಗಿ ಸಾವಿರಾರು ಕೋಳಿಗಳನ್ನು ಕೊಲ್ಲಲು ಆರಂಭಿಸಿತು.

2008: ಸುನಾಮಿ ಚಂಡಮಾರುತಗಳ ಬಗ್ಗೆ ಅರಿಯುವ ಮುನ್ನೆಚ್ಚರಿಕೆ ಸಂಶೋಧನೆಗಳಲ್ಲಿ ಅಮೆರಿಕದ ನಾಸಾ ಮಹತ್ವದ ಸಾಧನೆ ಮಾಡಿತು. ಸದ್ಯ ಜಾರಿಯಲ್ಲಿರುವ ವಿಧಾನಗಳಿಗಿಂತಲೂ ಹೆಚ್ಚು ವಿಶ್ವಾಸಾರ್ಹ ಪದ್ಧತಿ ಮೂಲಕ ಸುನಾಮಿ ಕಂಪನಗಳ ಖಚಿತತೆಯನ್ನು ಅರಿಯುವಲ್ಲಿ ನಾಸಾ ವಿಜ್ಞಾನಿಗಳು ಯಶಸ್ವಿಯಾದರು. ಇದರಿಂದ ಸುನಾಮಿ ಸಂಭವಿಸಬಹುದಾದ ಪ್ರದೇಶಗಳ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗಳ ನಕಾರಾತ್ಮಕ ಬೆಳವಣಿಗೆ ಹಾಗೂ ಜೀವ ಹಾನಿ ತಡೆಗಟ್ಟಬಹುದಾಗಿದೆ ಎಂದು ಕ್ಯಾಲಿಫೋರ್ನಿಯಾದ ನಾಸಾ ಪ್ರಯೋಗಾಲಯದ ವಿಜ್ಞಾನಿ ವೈ.ಟೋನಿ ಸಾಂಗ್ ಹೇಳಿದರು. ಸುನಾಮಿ ಅಲೆಗಳು ಕಡಲತೀರಕ್ಕೆ ತಲುಪುವ ಮುನ್ಸೂಚನೆಯ ಸಮಯವನ್ನು ಇನ್ನು ಮುಂದೆ ನಾಸಾದ ಜಾಗತಿಕ ಸ್ಥಿತಿ ಪದ್ಧತಿ ಕೇಂದ್ರಗಳು ಖಚಿತವಾಗಿ ಅರಿಯಲಿವೆ ಎಂಬುದನ್ನು ಟೋನಿ ಪ್ರಾತ್ಯಕ್ಷಿಕೆ ಮೂಲಕ ಪ್ರದರ್ಶಿಸಿದರು. ಈ ವರೆವಿಗೂ ಸುನಾಮಿ ಗಾತ್ರಗಳ ಮುನ್ಸೂಚನೆಯನ್ನು ಭೂಕಂಪನದ ವಿಸ್ತಾರದ ಆಧಾರದ ಮೇಲೆ ನಿರ್ಧರಿಸುವ ಪದ್ಧತಿಯಿತ್ತು. ಆದರೆ ಈ ಪದ್ಧತಿಯಿಂದ ಬಲವಾದ ಸುನಾಮಿ ಅಲೆಗಳ ಖಚಿತ ಸೂಚನೆಗಳನ್ನು ಪಡೆಯಲು ಸಾಧ್ಯವಿಲ್ಲ ಎಂಬುದು ಇತ್ತೀಚಿನ ಅಧ್ಯಯನಗಳಿಂದ ವ್ಯಕ್ತವಾಗಿತ್ತು.

2007: ಅಂಧರಿಗೂ ಭಗವದ್ಗೀತೆ ಓದುವ ಸೌಭಾಗ್ಯವನ್ನು ಕಲ್ಪಿಸಿಕೊಡುವ ಪ್ರಯತ್ನವನ್ನು ರಾಷ್ಟ್ರದಲ್ಲೇ ಪ್ರಥಮ ಬಾರಿಗೆ ಬೆಂಗಳೂರಿನ ರೋಟರಿ ಸಂಸ್ಥೆ ಕಬ್ಬನ್ ಪಾರ್ಕ್ ಶಾಖೆ ಮಾಡಿತು. ಸ್ವಾಮಿ ಚಿನ್ಮಯಾನಂದರು 29 ಆವೃತ್ತಿಗಳಲ್ಲಿ ವಿಶ್ಲೇಷಿಸಿದ ಭಗವದ್ಗೀತೆಯ ಬ್ರೈಲ್ ಲಿಪಿ ಆವೃತ್ತಿಯನ್ನು ಚಿನ್ಮಯ ಮಿಷನ್ ಮುಖ್ಯಸ್ಥ ಬ್ರಹ್ಮಾನಂದ ಸ್ವಾಮೀಜಿ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು.

2007: ಇರಾಕಿನ ಬಾಗ್ದಾದ್ ನಗರದ ಜನ ನಿಬಿಡ ಮಾರುಕಟ್ಟೆ ಪ್ರದೇಶದಲ್ಲಿ ಆತ್ಮಾಹುತಿ ದಳದ ಉಗ್ರಗಾಮಿಯೊಬ್ಬ ಲಾರಿಯನ್ನು ಸ್ಫೋಟಗೊಳಿಸಿದ ಪರಿಣಾಮವಾಗಿ ಕನಿಷ್ಠ 121 ಜನ ಮೃತರಾಗಿ, 226ಕ್ಕೂ ಹೆಚ್ಚು ಜನ ಗಾಯಗೊಂಡರು. ಟೈಗ್ರಿಸ್ ನದಿ ದಡದಲ್ಲಿ ಸುನ್ನಿ ಅರಬ್ಬರು, ಶಿಯಾಗಳು ಮತ್ತು ಕುರ್ದರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಬಾಗ್ದಾದ್ ಸಮೀಪದ ಅಲ್ ಸದ್ರಿಯಾ ಪ್ರದೇಶದಲ್ಲಿ ಈ ಭೀಕರ ಸ್ಫೋಟ ಸಂಭವಿಸಿತು. ಸ್ಫೋಟಕ್ಕೆ ತುತ್ತಾದ ಬಹುತೇಕ ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿದರು. ನವೆಂಬರ್ 23ರಿಂದೀಚೆಗೆ ಇರಾಕಿನಲ್ಲಿ ಸಂಭವಿಸಿರುವ ದಾಳಿಗಳಲ್ಲಿ ಇದು ಅತ್ಯಂತ ಭೀಕರ ದಾಳಿ. ನವೆಂಬರ್ 23ರಂದು ನಡೆದ ಕಾರು ಬಾಂಬ್ ದಾಳಿಯಲ್ಲಿ 200ಕ್ಕೂ ಜನ ಮೃತರಾಗಿದ್ದರು.

2007: ಬಿಹಾರಿನ ಪಟ್ನಾದಲ್ಲಿ ಹೊಸದಾಗಿ ನಿರ್ಮಿಸಲಾದ ಮಹಾಬೋಧಿ ಸಂಸ್ಥೆಯ ಜಯಶ್ರೀ ಮಹಾಬೋಧಿ ವಿಹಾರ ದೇವಸ್ಥಾನದಲ್ಲಿ ಬುದ್ಧನ ಪವಿತ್ರ ಅವಶೇಷಗಳನ್ನು ಇರಿಸಲಾಯಿತು. ಟಿಬೆಟಿಯನ್ನರ ಧಾರ್ಮಿಕ ಗುರು ದಲೈಲಾಮಾ ಅವರ ನೇತೃತ್ವದಲ್ಲಿ ವೇದಘೋಷಗಳ ಮಧ್ಯೆ ಈ ಅವಶೇಷಗಳನ್ನು ಶುದ್ಧಗೊಳಿಸಲಾಯಿತು. ಶ್ರೀಲಂಕಾದ ಐವರು ಬೌದ್ಧ ಭಿಕ್ಷುಗಳು ಈ ಅವಶೇಷಗಳನ್ನು ತೆಗೆದುಕೊಂಡು ಬಂದಿದ್ದರು. ಬುದ್ಧನ ಇಬ್ಬರು ಪ್ರಮುಖ ಶಿಷ್ಯರಾದ ಸರಿಪುತ್ತ ಮತ್ತು ಮೊದ್ಗಲ್ಯಾಯನ ಅವರ ಅವಶೇಷಗಳನ್ನೂ ಇದೇ ಮಂದಿರದಲ್ಲಿ ಇರಿಸಲಾಯಿತು.

2007: ಚಿತ್ರನಟಿ ನಂದಿತಾದಾಸ್, ಫ್ಯಾಷನ್ ವಿನ್ಯಾಸಗಾರ್ತಿ ರೀತು ಬೆರಿ ಮತ್ತು ಕೈಗಾರಿಕೋದ್ಯಮಿ ಕಿರಣ್ ಮಜುಂದಾರ್ ಅವರಿಗೆ ನವದೆಹಲಿಯಲ್ಲಿ ಕಲ್ಪನಾ ಚಾವ್ಲಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

2007: ಕ್ರಿಕೆಟ್ ಒಳಗೊಂಡಂತೆ ಪ್ರಮುಖ ಕ್ರೀಡೆಗಳ ಪ್ರಸಾರ ಹಕ್ಕು ಪಡೆದಿರುವ ಖಾಸಗಿ ಚಾನೆಲ್ ಗಳು ನೇರ ಪ್ರಸಾರವನ್ನು ದೂರದರ್ಶನದ ಜೊತೆಗೆ ಹಂಚಿಕೊಳ್ಳಬೇಕು ಎಂಬ ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಅಬ್ದುಲ್ ಕಲಾಂ ಒಪ್ಪಿಗೆ ನೀಡಿದ್ದು, ಅದು ಈ ದಿನ ನಡುರಾತ್ರಿಯಿಂದಲೇ ಜಾರಿಗೆ ಬಂದಿತು.

2007: ಯಕ್ಷಗಾನ ಕಲಾವಿದ, ಅರ್ಥದಾರಿ ದೇರಾಜೆ ಸೀತಾರಾಮಯ್ಯ ಅವರ ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿಗೆ ಸಾಹಿತಿ ಎಸ್. ಎಲ್, ಭೈರಪ್ಪ ಆಯ್ಕೆಯಾದರು.

2007: ವಿಶ್ವ ವಿಖ್ಯಾತ ವಿಜ್ಞಾನಿ `ಜೀನ್ ಥೆರೆಪಿ'ಯ ಜನಕ ಎಂದೇ ಪರಿಗಣಿತರಾದ ಅಮೆರಿಕದ ವಿಲಿಯಂ ಫ್ರೆಂಚ್ ಆಂಡರ್ಸನ್ (70) ಅವರಿಗೆ ಲಾಸ್ ಏಂಜೆಲಿಸ್ನ ನ್ಯಾಯಾಲಯವೊಂದು ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ್ದಕ್ಕಾಗಿ 14 ವರ್ಷಗಳ ಸೆರೆವಾಸ ವಿಧಿಸಿತು.

2007: ಕೋಚಿಯ ಶಸ್ತ್ರಚಿಕಿತ್ಸಕರಾದ ಪಾವುಲ್ ವಿ ಜೋಸೆಫ್ ಮತ್ತು ವಿನೋದ ಬಿ. ನಾಯರ್ ಅವರು 44 ವರ್ಷದ ಸುರೇಶ ಬಾಬು ಎಂಬ ವ್ಯಕ್ತಿಯ ಮೇಲೆ ಐದೂವರೆ ಗಂಟೆಗಳ ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿ ಆತನ ನಾಲಿಗೆಯನ್ನು ಮಾಮೂಲಿ ಗಾತ್ರಕ್ಕೆ ಇಳಿಸಿದರು. ಆತನ ನಾಲಿಗೆ ಮಾಮೂಲಿ ಗಾತ್ರಕ್ಕಿಂತ ಮೂರುಪಟ್ಟು ದೊಡ್ಡದಾಗಿತ್ತು. ಅಂದರೆ 13.5 ಸೆಂ.ಮೀ. ಉದ್ದ ಹಾಗೂ 12 ಸೆಂ.ಮೀ. ಅಗಲವಾಗಿತ್ತು! ಈ ಶಸ್ತ್ರಚಿಕತ್ಸೆಗೆ ವೈದ್ಯರು ಅತ್ಯಾಧುನಿಕ `ಹಾರ್ಮೋನಿಕ್ ಸ್ಕಾಲ್ಪೆಲ್' ಎಂಬ ಉಪಕರಣ ಬಳಸಿದರು.
2006: ಕರ್ನಾಟಕದ 18ನೇ ಮುಖ್ಯಮಂತ್ರಿಯಾಗಿ ಎಚ್. ಡಿ. ಕುಮಾರಸ್ವಾಮಿ ಮತ್ತು 5ನೇ ಉಪಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದರು. ಇದರೊಂದಿಗೆ ಜನತಾದಳ (ಎಸ್)- ಬಿಜೆಪಿ ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂತು. ರಾಜ್ಯದಲ್ಲಿ ಹೊಸ ರಾಜಕೀಯ ಶಕೆ ಆರಂಭವಾಯಿತು.

2006: ಸೇನಾ ನ್ಯಾಯಾಲಯದ ವಿಚಾರಣೆಗೆ ಒಳಗಾಗಿದ್ದ ಭಾರತೀಯ ವಾಯುಪಡೆಯ ಪ್ರಪ್ರಥಮ ಮಹಿಳಾ ಫ್ಲೈಯಿಂಗ್ ಅಧಿಕಾರಿ ಅಂಜಲಿ ಗುಪ್ತಾ ಅವರನ್ನು ಸೇನೆಯಿಂದ ವಜಾ ಮಾಡಲಾಯಿತು. ಈ ಸಂಬಂಧ ಸೇನಾ ನ್ಯಾಯಾಲಯ ನೀಡಿದ್ದ ಆದೇಶವನ್ನು ವಾಯುಪಡೆ ಮುಖ್ಯಸ್ಥ ಎಸ್.ಪಿ. ತ್ಯಾಗಿ ಎತ್ತಿ ಹಿಡಿದರು. ಇದರೊಂದಿಗೆ ಅಂಜಲಿ ಅವರು ತಮ್ಮ ಕೆಲವು ಸಹೋದ್ಯೋಗಿಗಳ ವಿರುದ್ಧ ಮಾಡಿದ್ದ ಲೈಂಗಿಕ ಕಿರುಕುಳದ ಆರೋಪ ಸೇರಿದಂತೆ ಇತರ ಆರೋಪಗಳೆಲ್ಲ ಬಿದ್ದು ಹೋದವು.

1982: ಧರ್ಮಸ್ಥಳದ `ರತ್ನಗಿರಿ' ಬೆಟ್ಟದ ಮೇಲೆ ಪ್ರತಿಷ್ಠಾಪಿಸಲಾಗಿರುವ ಭಗವಾನ್ ಬಾಹುಬಲಿಯ ಮೊದಲ ಮಹಾಮಸ್ತಕಾಭಿಷೇಕ ಈದಿನ ಸಂಭ್ರಮೋತ್ಸಾಹದೊಂದಿಗೆ ನಡೆಯಿತು.

1968: ಬಾಂಬೆಯ (ಈಗಿನ ಮುಂಬೈ) ಬ್ರಾಬೋರ್ನ್ ಸ್ಟೇಡಿಯಂನಲ್ಲಿ ಮೊತ್ತ ಮೊದಲ `ಫ್ರಾಂಕೀ' ಮಾರಾಟಗೊಂಡಿತು. ಅಮರಜಿತ್ ಟಿಬ್ ಅವರ ಮಿದುಳಿನ ಕೂಸಾದ ಇದರ ಹೆಸರನ್ನು ಸರ್ ಫ್ರಾಂಕ್ ವೊರೆಲ್ ಅವರಿಂದ ಪಡೆಯಲಾಯಿತು.

1966: ಸೋವಿಯತ್ ಬಾಹ್ಯಾಕಾಶ ನೌಕೆ `ಲ್ಯೂನಾ 9' ಮೊತ್ತ ಮೊದಲ ರಾಕೆಟ್ ನಿಯಂತ್ರಣದ ನೆರವಿನೊಂದಿಗೆ ಚಂದ್ರನಲ್ಲಿ ಇಳಿಯಿತು.

1959: ರಾಕ್ ಸಂಗೀತದ ಜನಕ ಎಂದೇ ಖ್ಯಾತರಾದ ಅಮೆರಿಕನ್ ಗಾಯಕ ಬುಡ್ಡಿ ಹಾಲ್ಲಿ ಅಮೆರಿಕದಲ್ಲಿ ಸಂಭವಿಸಿದ ವಿಮಾನ ಅಪಘಾತವೊಂದರಲ್ಲಿ ರಿಚ್ಚೀ ವ್ಯಾಲೆನ್ಸ್ ಮತ್ತು ಜೆ.ಪಿ. ರಿಚಡರ್್ಸನ್ ಜೊತೆಗೆ ಅಸು ನೀಗಿದರು. ಆಗ ಹಾಲ್ಲಿಯ ಪ್ರಾಯ ಕೇವಲ 22 ವರ್ಷ.

1959: ಅಪರೂಪದ ಸಂಗೀತ ರಚನೆಗಾರ, ಧ್ವನಿ ಅನ್ವೇಷಕ, ರಂಗಭೂಮಿ ನಟ ಅನಂತರಾಮ್ (ಜೆರ್ರಿ) ಅವರು ಆರ್. ಜಿ. ಕೃಷ್ಣನ್- ಸೀತಾಲಕ್ಷ್ಮಮ್ಮ ದಂಪತಿಯ ಮಗನಾಗಿ ಮೈಸೂರಿನಲ್ಲಿ ಜನಿಸಿದರು. ಬಿರುಗಾಳಿ, ಮಳೆ ಶಬ್ದ, ಹರಿವ ನದಿ ನೀರಿನ ಜುಳು ಜುಳು ನಾದ ಮುಂತಾದ ಹಿನ್ನೆಲೆ ಸಂಗೀತ ಶಬ್ದವನ್ನು ಅನುಪಯೋಗಿ ವಸ್ತುಗಳಾದ ಕರಟ, ಕಲ್ಲು, ಗೋಲಿ, ಬಿದಿರು, ಪರಂಗಿ ಕೊಂಬು, ಪ್ಲಾಸ್ಟಿಕ್ ಬಕೆಟಿನಿಂದ ಹೊರಹೊಮ್ಮಿಸುವ ನಾದ ವಿಶೇಷತೆಯನ್ನು ಕರಗತ ಮಾಡಿಕೊಂಡಿದ್ದ ಅನಂತರಾಮ್ ತಮ್ಮದೇ `ರಂಗಸ್ವರ' ಸಂಸ್ಥೆಯ ಮೂಲಕ ರಂಗಗೀತೆಗಳ ಪ್ರಚಾರದಲ್ಲಿ ನಿರತರಾದ ವ್ಯಕ್ತಿ.

1938: ಭಾರತದ ಚಿತ್ರ ನಟಿ ವಹೀದಾ ರೆಹಮಾನ್ ಹುಟ್ಟಿದ ದಿನ.

1928: ಖ್ಯಾತ ಸಾಹಿತಿ ಪ್ರೊ. ಎಚ್. ತಿಪ್ಪೇರುದ್ರ ಸ್ವಾಮಿ (1928-1994) ಶಿವಮೊಗ್ಗ ಜಿಲ್ಲೆಯ ಹೊನ್ನಾಳಿಯ ಬಡ ಕುಟುಂಬದಲ್ಲಿ ಜನಿಸಿದರು.

1925: ವಿಕ್ಟೋರಿಯಾ ಟರ್ಮಿನಸ್ನಿಂದ ಕುರ್ಲಾವರೆಗೆ ಗ್ರೇಟ್ ಇಂಡಿಯನ್ ಪೆನಿನ್ ಸ್ಯುಲರ್ ರೈಲ್ವೆಯ ಬಂದರು ಶಾಖೆಯ ಆರಂಭದೊಂದಿಗೆ ಭಾರತದಲ್ಲಿ ಮೊತ್ತ ಮೊದಲ ಎಲೆಕ್ಟ್ರಿಕ್ ರೈಲುಸೇವೆ ಆರಂಭಗೊಂಡಿತು.

1928: ಖ್ಯಾತ ಸಾಹಿತಿ ಪ್ರೊ. ಎಚ್. ತಿಪ್ಪೇರುದ್ರ ಸ್ವಾಮಿ (1928-1994) ಶಿವಮೊಗ್ಗ ಜಿಲ್ಲೆಯ ಹೊನ್ನಾಳಿಯ ಬಡ ಕುಟುಂಬದಲ್ಲಿ ಜನಿಸಿದರು.

1924: ಅಮೆರಿಕದ 28ನೇ ಅಧ್ಯಕ್ಷ ವುಡ್ರೋ ವಿಲ್ಸನ್ ವಾಷಿಂಗ್ಟನ್ನಿನಲ್ಲಿ ತಮ್ಮ 67ನೇ ವಯಸ್ಸಿನಲ್ಲಿ ನಿಧನರಾದರು. ಹೊಸದಾಗಿ ನಿರ್ಮಿಸಲಾದ ನ್ಯಾಷನಲ್ ಕೆಥೆಡ್ರಲ್ನಲ್ಲಿ ಅವರ ಪಾರ್ಥಿವ ಶರೀರವನ್ನು ಸಮಾಧಿ ಮಾಡಲಾಯಿತು. ರಾಜಧಾನಿಯಲ್ಲಿ ಸಮಾಧಿ ಮಾಡಲಾದ ಮೊತ್ತ ಮೊದಲ ಅಧ್ಯಕ್ಷ ಈತ.

1916: ಮಹಾತ್ಮಾ ಗಾಂಧಿಯವರು ಬನಾರಸ್ ಹಿಂದು ವಿಶ್ವ ವಿದ್ಯಾಲಯವನ್ನು ರಾಷ್ಟ್ರಕ್ಕೆ ಅರ್ಪಿಸಿದರು. ವಾರಣಾಸಿಯಲ್ಲಿ ಇರುವ ಈ ವಿಶ್ವವಿದ್ಯಾಲಯ ವಿಶ್ವದ ಮೂರು ಅತಿದೊಡ್ಡ ವಸತಿ ವ್ಯವಸ್ಥೆ ಉಳ್ಳ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದ್ದು, 1300 ಎಕರೆ ಪ್ರದೇಶದಲ್ಲಿ ಹರಡಿದೆ. 124 ಸಂಯೋಜಿತ ಕಾಲೇಜುಗಳು ಸೇರಿ ಆರು ಉನ್ನತ ಅಧ್ಯಯನ ಕೇಂದ್ರಗಳನ್ನು ಒಳಗೊಂಡಿದೆ.

1867: ರಾಜಕುಮಾರ ಮುತ್ಸುಹಿತೊ ಜಪಾನಿನ ಚಕ್ರವರ್ತಿ ಮೀಜಿ ಆದರು. ಮತ್ತು 1912ರವರೆಗೆ ಆಳ್ವಿಕೆ ನಡೆಸಿದರು.

1821: ಎಲಿಜಬೆತ್ ಬ್ಲಾಕ್ವೆಲ್ (1821-1910) ಹುಟ್ಟಿದ ದಿನ. ಆಂಗ್ಲೊ ಇಂಡಿಯನ್ ವೈದ್ಯಳಾದ ಈಕೆ ಆಧುನಿಕ ಕಾಲದ ಮೊತ್ತ ಮೊದಲ ಮಹಿಳಾ ವೈದ್ಯಳೆಂಬ ಖ್ಯಾತಿಗೆ ಪಾತ್ರಳಾಗಿದ್ದಾಳೆ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement