ಗ್ರಾಹಕರ ಸುಖ-ದುಃಖ

My Blog List

Wednesday, December 18, 2019

ಪರ್ವೇಜ್ ಮುಷರಫ್ ಗೆ ಗಲ್ಲು ಶಿಕ್ಷೆ ವಿಧಿಸಿದ ನ್ಯಾಯಾಲಯ

ಪರ್ವೇಜ್ ಮುಷರಫ್ ಗೆ ಗಲ್ಲು ಶಿಕ್ಷೆ ವಿಧಿಸಿದ ನ್ಯಾಯಾಲಯ
ಇಸ್ಲಾಮಾಬಾದ್:  ಪಾಕಿಸ್ತಾನದ ಮಾಜಿ ಸರ್ವಾಧಿಕಾರಿ ಪರ್ವೇಜ್ ಮುಷರಫ್ ಅವರಿಗೆ ವಿಶೇಷ ನ್ಯಾಯಾಲಯವು 2019 ಡಿಸೆಂಬರ್ 17ರ ಮಂಗಳವಾರ ಮರಣದಂಡನೆ ವಿಧಿಸಿತು.  ಇದರೊಂದಿಗೆ ಮರಣದಂಡನೆ ಶಿಕ್ಷೆಗೆ ಗುರಿಯಾದ ಪಾಕಿಸ್ತಾನದ ಮೊದಲ ಮಾಜಿ ಅಧ್ಯಕ್ಷ ಎಂಬ ಕುಖ್ಯಾತಿಗೆ ಮುಷರಫ್ ಪಾತ್ರರಾದರು.

ಪೇಶಾವರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಖಾರ್ ಅಹಮದ್ ಸೇಠ್ ನೇತೃತ್ವದ ತ್ರಿಸದಸ್ಯ ಪೀಠವು ಬಹುಕಾಲದಿಂದ ವಿಚಾರಣೆ ನಡೆಯುತ್ತಿದ್ದ ದೇಶದ್ರೋಹ ಆರೋಪದ ಪ್ರಕರಣದ ಬಗ್ಗೆ  ತೀರ್ಪು ಪ್ರಕಟಿಸಿತು ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿದವು.

ನವೆಂಬರ್ , ೨೦೦೭ರಲ್ಲಿ ದೇಶದ ಮೇಲೆ ಸಂವಿಧಾನಬಾಹಿರವಾಗಿ ತುರ್ತುಸ್ಥಿತಿ ಹೇರಲಾದ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ತನ್ನ ತೀರ್ಪು ಪ್ರಕಟಿಸಿತು. ಪ್ರಸ್ತುತ ದುಬೈಯಲ್ಲಿ  ನೆಲೆಸಿರುವ ಮುಷರಫ್, ೧೯೯೯ರಿಂದ ೨೦೦೮ರವರೆಗೆ ಪಾಕಿಸ್ತಾನದ ಸರ್ವಾಧಿಕಾರಿಯಾಗಿದ್ದರು.

ಡಿಸೆಂಬರ್ ೨೦೧೩ರಂದು ಮುಷರಫ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಮಾರ್ಚ್ ೩೧, ೨೦೧೪ರಂದು ನ್ಯಾಯಾಲಯ ಆರೋಪಿ ಎಂದು ಗುರುತಿಸಿತು. ಅದೇ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಸರ್ಕಾರ ಪೂರ್ಣ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿತು. ವಿವಿಧ ವೇದಿಕೆಗಳಲ್ಲಿ ಹಲವು ದೋಷಾರೋಪಗಳು ಸಲ್ಲಿಕೆಯಾದ ಕಾರಣ ವಿಚಾರಣೆ ಸಾಕಷ್ಟು ಸಮಯ ತೆಗೆದುಕೊಂಡಿತು.

ಮಾರ್ಚ್
೨೦೧೬ರಂದು ಮುಷರಫ್ ಪಾಕಿಸ್ತಾನದಿಂದ  ಪರಾರಿಯಾದರು.

ಮುಷರಫ್ ವಿರುದ್ಧದ ದೋಷಾರೋಪ ವಿಚಾರಣೆಗೆಂದು ನ್ಯಾಯಮೂರ್ತಿ ಸೇಠ್ ನೇತೃತ್ವದಲ್ಲಿ ಸಿಂಧ್ ಹೈಕೋರ್ಟಿನ  ನ್ಯಾಯಮೂರ್ತಿ ನಜರ್ ಅಕ್ಬರ್ ಮತ್ತು ಲಾಹೋರ್ ಹೈಕೋರ್ಟಿನ  ನ್ಯಾಯಮೂರ್ತಿ ಶಾಹಿದ್ ಕರೀಂ ನೇತೃತ್ವದಲ್ಲಿ ನ್ಯಾಯಪೀಠ ರಚಿಸಲಾಯಿತು. ನವೆಂಬರ್ ೧೯ರಂದು ವಿಚಾರಣೆ ನಡೆಸಿದ್ದ ನ್ಯಾಯಪೀಠ ತೀರ್ಪು ಕಾಯ್ದಿರಿಸಿತ್ತು.

ಲಭ್ಯ ದಾಖಲೆಗಳನ್ನು ಆಧರಿಸಿ .೨೮ರಂದು ತೀರ್ಪು ನೀಡುವುದಾಗಿ ಅಂದು ನ್ಯಾಯಪೀಠ ಪ್ರಕಟಿಸಿತ್ತು. ಆದರೆ ಅಂತಿಮ ತೀರ್ಪಿಗೆ ಕೆಲವೇ ದಿನಗಳು ಬಾಕಿಯಿರುವಂತೆ ಪಾಕಿಸ್ತಾನದ ಆಡಳಿತಾರೂಢ ತೆಹ್ರೀಕ್ ಇನ್ಸಾಫ್ ಪಕ್ಷವು ಇಸ್ಲಾಮಾಬಾದ್ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿ, ನ್ಯಾಯಪೀಠ ತೀರ್ಪು ಮುಂದೂಡುವಂತೆ ನಿರ್ದೇಶನ ನೀಡಲು ಕೋರಿತ್ತು.

ಸರ್ಕಾರದ ಮನವಿ ಪುರಸ್ಕರಿಸಿದ ಇಸ್ಲಾಮಾಬಾದ್ ಹೈಕೋರ್ಟ್ ನವೆಂಬರ್ ೨೭ರಂದು ಆದೇಶ ನೀಡಿ, ನ್ಯಾಯಪೀಠದ ತೀರ್ಪು ಪ್ರಕಟಣೆಗೆ ತಡೆಯಾಜ್ಞೆ ನೀಡಿತು. ಡಿಸೆಂಬರ್ ೫ರ ಒಳಗೆ ಸರ್ಕಾರಿ ವಕೀಲರು ನ್ಯಾಯಪೀಠದ ಎದುರು ಹೊಸ ಮನವಿ ಸಲ್ಲಿಸಬೇಕು ಎಂದು ಆದೇಶಿಸಿತು.

ಅದರಂತೆ ವಿಶೇಷ ನ್ಯಾಯಾಲಯದ ಎದುರು ಹಾಜರಾದ ಸರ್ಕಾರಿ ವಕೀಲರು ತಮ್ಮ ವಾದ ಮಂಡಿಸಿದರು. ನ್ಯಾಯಪೀಠವು ಡಿ.೧೭ಕ್ಕೆ ಕಲಾಪ ಮುಂದೂಡಿತ್ತು. ಅಂದು ವಾದ-ಪ್ರತಿವಾದ ಆಲಿಸುವುದರ ಜೊತೆಗೆ ತೀರ್ಪನ್ನೂ ಪ್ರಕಟಿಸಲಾಗುವುದು ಎಂದು ಹೇಳಿತ್ತು. ಅದರಂತೆ ಇಂದು ನ್ಯಾಯಪೀಠದ ತೀರ್ಪು ಹೊರಬಿದ್ದಿತು..

ಪರ್ವೇಜ್
ಮುಷರಫ್ ೨೦೦೭ರಲ್ಲಿ ಸರ್ವಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಸಮಯದಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ  ಘೋಷಿಸಲಾಗಿತ್ತು.   ಪರಿಸ್ಥಿತಿ ನಿರ್ವಹಣೆ ಸಂದರ್ಭದಲ್ಲಿ ಮುಷರಫ್ ಸಾಕಷ್ಟು ದೇಶದ್ರೋಹ ಎಸಗಿದ್ದಾರೆ ಎಂದು ಆರೋಪಿಸಿ ೨೦೧೩ರ ಡಿಸೆಂಬರಿನಲ್ಲಿ ಅವರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿತ್ತು.

ಪಾಕಿಸ್ತಾನ ಸೇನೆಯ ಸೇನಾಧಿಕಾರಿಯಾಗಿದ್ದ ಮುಷರಫ್ ೧೯೯೯ ರಿಂದ ೨೦೦೮ರ ವರೆಗೆ ಪಾಕಿಸ್ತಾನದ ಸರ್ವಾಧಿಕಾರಿಯಾಗಿ ಅಧಿಕಾರ ನಡೆಸಿದ್ದರು. ಭಾರತ ಮತ್ತು ಪಾಕಿಸ್ತಾನದ ನಡುವೆ ಕಾರ್ಗಿಲ್ ಯುದ್ಧ ಇವರ ಕಾಲದಲ್ಲೇ ನಡೆದಿತ್ತು ಎಂಬುದು ಉಲ್ಲೇಖಾರ್ಹ.ಅಲ್ಲದೆ, ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗುತ್ತಿರುವ ಮೊದಲ ರಾಜಕೀಯ ನಾಯಕ ಇವರಲ್ಲ. ಇದಕ್ಕೂ ಮೊದಲು ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ಜುಲ್ಪೀಕರ್ ಅಲಿ ಬುಟ್ಟೋ ಅವರನ್ನು ದೂಷಿ ಎಂದು ಘೋಷಿಸಿದ್ದ ನ್ಯಾಯಾಲಯ ಅವರಿಗೆ ಗಲ್ಲು ಶಿಕ್ಷೆ ವಿಧಿಸಿತ್ತು.

೧೯೭೯
ಏಪ್ರಿಲ್ ೦೪ ರಂದು ಜುಲ್ಪೀಕರ್ ಅಲಿ ಬುಟ್ಟೋ ಅವರನ್ನು ಗೆಲ್ಲಿಗೇರಿಸಲಾಗಿತ್ತು.

ಪರ್ವೇಜ್ ಮುಷರಫ್: ಸಂಕ್ಷಿಪ್ತ ಹಿನ್ನೆಲೆ
೧೯೪೩ರ ಆಗಸ್ಟ್ ೧೧ರಂದು ಜನಿಸಿದ ಪಾಕಿಸ್ತಾನಿ ರಾಜಕಾರಣಿ ಪರ್ವೇಜ್ ಮುಷರಫ್ ಮೂಲತಃ ಪಾಕಿಸ್ತಾನಿ ಸೇನೆಯ ನಿವೃತ್ತ ನಾಲ್ಕು ಸ್ಟಾರ್ ಜನರಲ್. ೨೦೦೧ರಲ್ಲಿ ಪಾಕಿಸ್ತಾನದ ೧೦ನೇ ಅಧ್ಯಕ್ಷರಾದ ಅವರು ೨೦೦೮ರಲ್ಲಿ ವಾಗ್ದಂಡನೆಗೆ ಗುರಿಯಾಗುವುದನ್ನು ತಪ್ಪಿಸುವ ಸಲುವಾಗಿ ೨೦೦೮ರಲ್ಲಿ ರಾಜೀನಾಮೆ ನೀಡುವವರೆಗೂ ಪಾಕಿಸ್ತಾನದ ಅಧ್ಯಕ್ಷರಾಗಿದ್ದರು.

ಬ್ರಿಟಿಷ್ ಆಳ್ವಿಕೆಯ ಅವಧಿಯಲ್ಲಿ ದೆಹಲಿಯಲ್ಲಿ ಜನಿಸಿದ್ದ ಮುಷರಫ್ ಬೆಳೆದದ್ದು ಕರಾಚಿ ಮತ್ತು ಇಸ್ತಾಂಬುಲ್ನಲ್ಲಿ. ಲಾಹೋರಿನ ಫೋರ್ಮನ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಗಣಿತ ಅಭ್ಯಾಸ ಮಾಡಿದ್ದ ಅವರು ರಾಯಲ್ ಕಾಲೇಜಫ್ ಡಿಫೆನ್ಸ್ನಲ್ಲಿ ಶಿಕ್ಷಣ ಪಡೆದಿದ್ದರು.

ಮುಷರಫ್ ಅವರು ೧೯೬೧ರಲ್ಲಿ ಪಾಕಿಸ್ತಾನ ಮಿಲಿಟರಿ ಅಕಾಡೆಮಿ ಪ್ರವೇಶಿಸಿದರು. ಅವರನ್ನು ೧೯೬೪ರಲ್ಲಿ ಪಾಕಿಸ್ತಾನಿ ಸೇನೆಗೆ ನಿಯೋಜಿಸಲಾಗಿತ್ತು. ಆಫ್ಘನ್ ಅಂತರ್ಯುದ್ಧದಲ್ಲಿ ಸಕ್ರಿಯ ಪಾತ್ರ ವಹಿಸಿದ್ದ ಮುಷರಫ್ ೧೯೬೫ರ ಭಾರತ -ಪಾಕಿಸ್ತಾನ ಸಮರ ಕಾಲದಲ್ಲಿ ಎರಡನೇ ಲೆಫ್ಟಿನೆಂಟ್ ಆಗಿದ್ದರು. ೧೯೮೦ರ ವೇಳೆಗೆ ಅವರು ಆರ್ಟಿಲರಿ ಬ್ರಿಗೇಡ್ ಕಮಾಂಡರ್ ಆಗಿದ್ದರು. ೧೯೯೦ರಲ್ಲಿ ಮುಷರಫ್ ಗೆ ಮೇಜರ್ ಜನರಲ್ ಆಗಿ ಬಡ್ತಿ ಲಭಿಸಿತ್ತು. ಮತ್ತು ಅವರನ್ನು ಪದಾತಿದಳ ವಿಭಾಗಕ್ಕೆ ನಿಯೋಜಿಸಲಾಗಿತ್ತು. ಬಳಿಕ ಅವರು ವಿಶೇಷ ಸೇವಾ ಗುಂಪಿನ ಕಮಾಂಡರ್ ಆದರು. ಬೆನ್ನಲ್ಲೇ ಡೆಪ್ಯುಟಿ ಮಿಲಿಟರಿ ಸೆಕ್ರೆಟರಿ ಆಗಿ ಹಾಗೂ ಸೇನಾ ಕಾರ್ಯಾಚರಣೆಗೆಳ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿದರು.

೧೯೯೮ರಲ್ಲಿ ಆಗಿನ ಪ್ರಧಾನಿ ನವಾಜ್ ಷರೀಫ್ ಅವರು ಸ್ಟಾರ್ ಜನರಲ್ ಆಗಿ ಬಡ್ತಿ ನೀಡಿದ ಬಳಿಕ ಮುಷರಫ್ ರಾಷ್ಟ್ರೀಯ ಪ್ರಾಮುಖ್ಯತೆ ಗಳಿಸಿದರು. ೧೯೯೯ರಲ್ಲಿ ಭಾರತ-ಪಾಕಿಸ್ತಾನ ನಡುವಣ ಕಾರ್ಗಿಲ್ ಯುದ್ಧಕ್ಕೆ ಕಾರಣವಾದ ಕಾರ್ಗಿಲ್ ನುಸುಳುವಿಕೆಯ ನೇತೃತ್ವ ಮುಷರಫ್ ಅವರದ್ದೇ ಆಗಿತ್ತು. ಮುಷರಫ್- ನವಾಜ್ ಷರೀಫ್ ಬಾಂಧವ್ಯ ಹಳಸಿದಾಗ ಷರೀಫ್ ಅವರು ಮುಷರಫ್ ಅವರನ್ನು ಸೇನಾ ಮುಖ್ಯಸ್ಥನ ಸ್ಥಾನದಿಂದ ಕಿತ್ತುಹಾಕಲು ವಿಫಲಯತ್ನ ನಡೆಸಿದರು. ಇದಕ್ಕೆ ಸೇಡು ತೀರಿಸಿದ ಮುಷರಫ್ ೧೯೯೯ರಲ್ಲಿ ದಂಗೆ ನಡೆಸಿ ನವಾಜ್ ಷರೀಫ್ ಅವರನ್ನು ಕಿತ್ತು ಹಾಕಿ ಅಧಿಕಾರವನ್ನು ಕೈವಶ ಮಾಡಿಕೊಂಡರು.

  ೨೦೦೧ರಲ್ಲಿ ಅವರೇ ಸ್ವತಃ ಪಾಕಿಸ್ತಾನದ ಅಧ್ಯಕ್ಷರಾಗಿ ಅಧಿಕಾರಕ್ಕೆ ಏರಿದರು. ಬಳಿಕ ನವಾಜ್ ಷರೀಫ್ ಅವರನ್ನೇ ಗೃಹಬಂಧನದಲ್ಲಿ ಇರಿಸಿ ಅವರ ವಿರುದ್ಧ ಕ್ರಿಮಿನಲ್ ಖಟ್ಲೆ ದಾಖಲಿಸಿದರು.

No comments:

Advertisement