My Blog List

Friday, July 4, 2008

ಇಂದಿನ ಇತಿಹಾಸ History Today ಜುಲೈ 3

ಇಂದಿನ ಇತಿಹಾಸ

ಜುಲೈ 3

ಬಕಿಂಗ್ ಹ್ಯಾಮ್ ಅರಮನೆಯಲ್ಲಿ ನಡೆದ ಖಾಸಗಿ ಸಮಾರಂಭವೊಂದರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಅಧ್ಯಕ್ಷ `ಕೊಹಿನೂರ್ ವಜ್ರ'ವನ್ನು ಇಂಗ್ಲೆಂಡಿನ ರಾಣಿ ವಿಕ್ಟೋರಿಯಾಗೆ ಹಸ್ತಾಂತರಿಸಿದ.

2007: ಚಂಡೀಗಢ ಉದ್ಯಮಿ ಬಲಬೀರ್ ಸಿಂಗ್ ಉಪ್ಪಲ್ ಅವರು 15 ಕೆಜಿ ತೂಕದ 1.5 ಕೋಟಿ ಮೌಲ್ಯದ ಬಂಗಾರದ ಪೂಜಾ ಸಾಮಗಿಗಳನ್ನು ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟಿಗೆ ದಾನ ಮಾಡಿದರು.

2007: ಪಾಕಿಸ್ಥಾನದ ಇಸ್ಲಾಮಾಬಾದಿನ ಲಾಲ್ ಮಸೀದಿಯಲ್ಲಿ ಅಡಗಿ ಕುಳಿತಿದ್ದ ತೀವ್ರಗಾಮಿ ವಿದ್ಯಾರ್ಥಿಗಳು ಹಾಗೂ ಪಾಕಿಸ್ಥಾನದ ಅರೆ ಸೇನಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಸೈನಿಕ ಹಾಗೂ ಒಬ್ಬ ನಾಗರಿಕ ಸೇರಿ 11 ಜನ ಮೃತರಾದರು. ಅಡಗಿದ್ದ ಉಗ್ರರನ್ನು ಹೊರಗಟ್ಟುವ ಸಲುವಾಗಿ ನಡೆದ ಕಾರ್ಯಾಚರಣೆ ಕಾಲದಲ್ಲಿ ಈ ಘಟನೆ ಸಂಭವಿಸಿತು.
2007: ನ್ಯಾಟೊ ಮತ್ತು ಆಫ್ಘಾನಿಸ್ಥಾನ ಸೇನಾ ಪಡೆಗಳು ಕಂದಹಾರ ಪ್ರಾಂತ್ಯದ ಜರಿ ಜಿಲ್ಲೆಯಲ್ಲಿ ಈದಿನ ರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ 33 ತಾಲಿಬಾನ್ ಉಗ್ರರು ಮೃತರಾದರು. ನ್ಯಾಟೊ ಪಡೆ ಈ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದ ಕಾರ್ಯಾಚರಣೆ ನಡೆಸಿತು. ದಿನದ ಹಿಂದೆ ಕಂದಹಾರದ ರಸ್ತೆ ಬದಿಂಯಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಏಳು ಮಂದಿ ಆಫ್ಘನ್ ಪೊಲೀಸರು ಪ್ರಾಣ ಕಳೆದುಕೊಂಡಿದ್ದರು.

2007: ರಾಷ್ಟ್ರಪತಿ ಚುನಾವಣೆಗೆ ಯುಪಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಪ್ರತಿಭಾ ಪಾಟೀಲ್ ಅವರ ನಾಮಪತ್ರ ತಿರಸ್ಕರಿಸುವಂತೆ ಆದೇಶಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿತು. ಅರ್ಜಿಯಲ್ಲಿ ಮಾಡಿದ ಆರೋಪಗಳನ್ನು ಸಮರ್ಥಿಸುವ ಯಾವುದೇ ದಾಖಲೆಗಳನ್ನು ಒದಗಿಸಿಲ್ಲ ಎಂದು ನ್ಯಾಯಮೂರ್ತಿಗಳಾದ ತರುಣ್ ಚಟರ್ಜಿ ಮತ್ತು ಪಿ.ಕೆ. ಬಾಲಸುಬ್ರಹ್ಮಣ್ಯನ್ ಅವರನ್ನು ಒಳಗೊಂಡ ಪೀಠ ತಿಳಿಸಿತು. ಸಹಕಾರ ಬ್ಯಾಂಕ್ ಹಾಗೂ ಸಕ್ಕರೆ ಕಾರ್ಖಾನೆಯಲ್ಲಿ ಅವ್ಯವಹಾರ ನಡೆಸಿರುವ ಯುಪಿಎ ಅಭ್ಯರ್ಥಿ ಪ್ರತಿಭಾ ಪಾಟೀಲ್ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸುವುದನ್ನು ಅನರ್ಹಗೊಳಿಸಬೇಕೆಂದು ಕೋರಿದ್ದ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಕೀಲರಾದ ಮನೋಹರ್ ಲಾಲ್ ಶರ್ಮಾ ಸಲ್ಲಿಸಿದ್ದರು. ಜಲಗಾಂವ್ ನಲ್ಲಿ ಪ್ರತಿಭಾ ಪಾಟೀಲ್ ಅವರು 1994 ರಲ್ಲಿ ಸಕ್ಕರೆ ಕಾರ್ಖಾನೆಯ ಹೆಸರಿನಲ್ಲಿ 17.7 ಕೋಟಿ ಸಾಲ ತೆಗೆದಿದ್ದರು. ಈ ಸಾಲವನ್ನು ಇದುವರೆಗೂ ಮರುಪಾವತಿ ಮಾಡಿಲ್ಲ. ಇದಲ್ಲದೆ ಪ್ರತಿಭಾ ಪಾಟೀಲ್ ಹಾಗೂ ಅವರ ಸಂಬಂಧಿಕರ ಹತೋಟಿಯಲ್ಲಿನ ಮಹಿಳಾ ಸಹಕಾರಿ ಬ್ಯಾಂಕಿನಲ್ಲಿ 30 ಮಂದಿ ಉದ್ಯೋಗಿಗಳಿಂದ ಕಾರ್ಗಿಲ್ ಯುದ್ಧ ಸಂತ್ರಸ್ತರಿಗೆಂದು ಸಂಗ್ರಹಿಸಲಾದ ಹಣವನ್ನು ರಾಷ್ಟ್ರೀಯ ಪರಿಹಾರ ನಿಧಿಗೆ ನೀಡಿಲ್ಲ. ಇದು ಗಂಭೀರ ಅಪರಾಧ ಎಂಬುದು ಅರ್ಜಿದಾರರ ವಾದವಾಗಿತ್ತು.

2007: ಅನಾರೋಗ್ಯದ ಬಳಿಕ ಜುಲೈ 2ರಂದು ಮುಂಬೈಯಲ್ಲಿ ನಿಧನರಾದ ಮಾಜಿ ಟೆಸ್ಟ್ ಕ್ರಿಕೆಟ್ ಆಟಗಾರ ದಿಲೀಪ್ ಸರ್ದೇಸಾಯಿ (67) ಪಾರ್ಥಿವ ಶರೀರದ ಅಂತ್ಯಸಂಸ್ಕಾರ ದಕ್ಷಿಣ ಮುಂಬೈಯ ಚಂದನವಾಡ ರುದ್ರಭೂಮಿಯಲ್ಲಿ ನಡೆಯಿತು. ಸರ್ದೇಸಾಯಿ ಅವರ ಪುತ್ರ ಖ್ಯಾತ ಪತ್ರಕರ್ತ ರಾಜ್ ದೀಪ್ ಕೊನೆಯ ಸಾಂಪ್ರದಾಯಿಕ ವಿಧಿಯನ್ನು ಪೂರೈಸಿದರು.

2006: ಭಾರತವು ವಿಂಡೀಸ್ ನೆಲದಲ್ಲಿ 35 ವರ್ಷಗಳ ಬಳಿಕ ನಾಲ್ಕು ಪಂದ್ಯಗಳ ಸರಣಿಯ ಅಂತಿಮ ಟೆಸ್ಟಿನಲ್ಲಿ 49 ರನ್ನುಗಳ ಗೆಲುವು ಸಾಧಿಸಿ, 1-0 ಅಂತರದಲ್ಲಿ ಸರಣಿ ಗೆಲುವಿನ ಮಹತ್ವದ ಸಾಧನೆಯನ್ನು ಮಾಡಿತು.

2006: ಮುಂಬೈ, ಒರಿಸ್ಸಾ, ಕೇರಳದಲ್ಲಿ ಭಾರಿ ಮಳೆಗೆ ಸಿಲುಕಿ 14 ಜನ ಮೃತರಾದರು.

1980: ಭಾರತದ ಕ್ರಿಕೆಟ್ ಆಟಗಾರ ಸ್ಪಿನ್ ಬೌಲರ್ ಹರ್ ಭಜನ್ ಸಿಂಗ್ ಜನ್ಮದಿನ.

1971: ಅಮೆರಿಕನ್ ರಾಕ್ ಗ್ರೂಪ್ `ಡೋರ್ಸ್' ನ ಮುಖ್ಯ ಗಾಯಕ ಜಿಮ್ ಮೊರ್ರಿಸನ್ ಪ್ಯಾರಿಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು.

1969: `ರೋಲ್ಲಿಂಗ್ ಸ್ಟೋನ್ಸ್' ರಾಕ್ ಗುಂಪಿನ ಸ್ಥಾಪಕ ಸದಸ್ಯ ಬ್ರಯಾನ್ ಜೋನ್ಸ್ ಅತಿಯಾದ ಮಾದಕ ದ್ರವ್ಯ ಸೇವನೆಯ ಪರಿಣಾಮವಾಗಿ ತನ್ನ ಈಜುಕೊಳದಲ್ಲೇ ಮುಳುಗಿ ಅಸುನೀಗಿದ.

1897: ಹಂಸಾ ಜೀವರಾಜ್ ಮೆಹ್ತಾ (1897-1995)ಜನ್ಮದಿನ. ಸಾಮಾಜಿಕ ಕಾರ್ಯಕರ್ತೆ ಹಾಗೂ ಶಿಕ್ಷಣತಜ್ಞೆಯಾಗಿದ್ದ ಮೆಹ್ತಾ ಬರೋಡಾದ ಮಹಾರಾಜಾ ಸಯ್ಯಾಜಿರಾವ್ ವಿಶ್ವವಿದ್ಯಾಲಯದ ಉಪಕುಲಪತಿಯಾಗುವ ಮೂಲಕ ಭಾರತದ ಪ್ರಥಮ ಮಹಿಳಾ ಉಪಕುಲಪತಿ ಎಂಬ ಖ್ಯಾತಿಗೆ ಪಾತ್ರರಾದರು.

1850: ಬಕಿಂಗ್ ಹ್ಯಾಮ್ ಅರಮನೆಯಲ್ಲಿ ನಡೆದ ಖಾಸಗಿ ಸಮಾರಂಭವೊಂದರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಅಧ್ಯಕ್ಷ `ಕೊಹಿನೂರ್ ವಜ್ರ'ವನ್ನು ಇಂಗ್ಲೆಂಡಿನ ರಾಣಿ ವಿಕ್ಟೋರಿಯಾಗೆ ಹಸ್ತಾಂತರಿಸಿದ. ಈ ವಜ್ರವನ್ನು ಲಾರ್ಡ್ ಡಾಲ್ ಹೌಸಿ ಭಾರತದಿಂದ ತಂದಿದ್ದ. ಪಂಜಾಬಿನ ಮಹಾರಾಜ ದಲೀಪ್ ಸಿಂಗ್ ತಾನು ಗದ್ದುಗೆಯಿಂದ ಇಳಿದ ಬಳಿಕ ಈ ವಜ್ರವನ್ನು ಡಾಲ್ ಹೌಸಿಗೆ ನೀಡಿದ್ದ.

No comments:

Advertisement