My Blog List

Friday, July 24, 2020

ಪೈಲಟ್ ಗುಂಪಿಗೆ ಮತ್ತೊಂದು ನಿರಾಳತೆ

ಪೈಲಟ್ ಗುಂಪಿಗೆ ಮತ್ತೊಂದು ನಿರಾಳತೆ

ಸೋಮವಾರದವರೆಗೆ ಯಥಾಸ್ಥಿತಿ: ರಾಜಸ್ಥಾನ ಹೈಕೋರ್ಟ್  ಆದೇಶ

ನವದೆಹಲಿ: ಉಪ ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಂಡಿರುವ ಸಚಿನ್ ಪೈಲಟ್ ಮತ್ತು ೧೮ ಮಂದಿಯ ಅವರ ಬಂಡಾಯ ಶಾಸಕರ ಗುಂಪಿನ ಅನರ್ಹತೆ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರzವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ರಾಜಸ್ಥಾನ ಹೈಕೋರ್ಟ್ 2020 ಜುಲೈ 24ರ ಶುಕ್ರವಾರ ಆಜ್ಞಾಪಿಸಿದ್ದು ತನ್ನ ನಿರ್ಧಾರವನ್ನು ಸೋಮವಾರಕ್ಕೆ ಮುಂದೂಡಿತು. ಇದರೊಂದಿಗೆ ಪೈಲಟ್ ಮತ್ತು ಬೆಂಬಲಿಗರಿಗೆ ಇನ್ನೊಂದು ನಿರಾಳತೆ ಲಭ್ಯವಾಯಿತು.

ಸೋಮವಾರ ಸುಪ್ರೀಂಕೋರ್ಟ್ ಕೂಡಾ ತನ್ನ ಮುಂದೆ ವಿಧಾನಸಭಾಧ್ಯಕ್ಷ ಸಿಪಿ ಜೋಶಿ ಅವರು ಸಲ್ಲಿಸಿರುವ ವಿಶೇಷ ಅರ್ಜಿಯ ವಿಚಾರಣೆ ನಡೆಸಲಿದೆ.

ಅನರ್ಹತೆ ವಿಷಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಭಾರತ ಸರ್ಕಾರವನ್ನು ಕಕ್ಷಿದಾರನಾಗಿ ಸೇರಿಸಬೇಕು ಎಂಬುದಾಗಿ ಪೈಲಟ್ ಗುಂಪು ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿದ ಬಳಿಕ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿ ಅಲ್ಲಿಯವರೆಗೆ ಯಥಾಸ್ಥಿತಿ ಪಾಲನೆಗೆ ಆದೇಶ ನೀಡಿತು.

ಅರ್ಜಿದಾರರು ಗುರುವಾರ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಇಂದ್ರಜಿತ್ ಮಹಾಂತಿ ಮತ್ತು ನ್ಯಾಯಮೂರ್ತಿ ಪ್ರಕಾಶ ಗುಪ್ತ ಅವರನ್ನು ಒಳಗೊಂಡ ಪೀಠವು ಅಂಗೀಕರಿಸಿತು. ಬಳಿಕ ಪೀಠವು ೨೦ ನಿಮಿಷಗಳ ಕಾಲ ಕಲಾಪವನ್ನು ಮುಂದೂಡಿತು.

ಸಾಂವಿಧಾನಿಕ ತಿದ್ದುಪಡಿಯನ್ನು ಪ್ರಶ್ನಿಸಲಾಗಿದೆ, ಆದ್ದರಿಂದ ಭಾರತ ಸರ್ಕಾರವು ಪ್ರಕರಣದಲ್ಲಿ ಅಗತ್ಯ ಕಕ್ಷಿದಾರನಾರುತ್ತದೆ ಎಂಬ ನೆಲೆಯಲ್ಲಿ ಅರ್ಜಿದಾರರು ಅರ್ಜಿಯನ್ನು ಸಲ್ಲಿಸಿದ್ದರು.

ಪೈಲಟ್ ನೇತೃತ್ವದ ಭಿನ್ನಮತೀಯ ಕಾಂಗ್ರೆಸ್ ಶಾಸಕರು ತಮಗೆ ವಿಧಾನಸಭಾಧ್ಯಕ್ಷರು ಜಾರಿ ಮಾಡಿದ ಅನರ್ಹತೆ ನೋಟಿಸುಗಳನ್ನು ಅರ್ಜಿ ಮೂಲಕ ಪ್ರಶ್ನಿಸಿದ್ದಾರೆ. ಕಳೆದ ಶುಕ್ರವಾರ ಅರ್ಜಿಯ ವಿಚಾರಣೆಯನ್ನು ಪೀಠವು ಕೈಗೆತ್ತಿಕೊಂಡಿತ್ತು.

ತಮ್ಮ ವಿರುದ್ಧದ ನೋಟಿಸುಗಳನ್ನು ಪ್ರಶ್ನಿಸಿ ಬಂಡಾಯ ಶಾಸಕರು ಸಲ್ಲಿಸಿರುವ ಅರ್ಜಿಯ ಮೇಲೆ ಆದೇಶ ನೀಡದಂತೆ ರಾಜಸ್ಥಾನ ಹೈಕೋರ್ಟನ್ನು ನಿರ್ಬಂಧಿಸಲು ಗುರುವಾರ ಸುಪ್ರೀಂಕೋರ್ಟ್ ನಿರಾಕರಿಸಿತ್ತು. ರಾಜಸ್ಥಾನ ಹೈಕೋರ್ಟ್ ನೀಡುವ ತೀರ್ಪು ಸುಪ್ರೀಕೋರ್ಟ್ ತೀರ್ಪಿಗೆ ಆಧೀನವಾಗಿರುತ್ತದೆ  ಎಂದು ಪೀಠ ಹೇಳಿತ್ತು.

ಪ್ರಜಾಪ್ರಭುತ್ವದಲ್ಲಿ ಭಿನ್ನಮತದ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂಬುದಾಗಿ ಅಭಿಪ್ರಾಯಪಟ್ಟ ಪೀಠವು, ಹೈಕೋರ್ಟಿನ ಮುಂದಿರುವ ಪ್ರಕರಣದ ವಿಚಾರಣೆಗೆ ತಡೆಯಾಜ್ಞೆ ನೀಡುವಂತೆ ಅಥವಾ ಪ್ರಕರಣವನ್ನು ಸುಪ್ರೀಂಕೋರ್ಟಿಗೆ ವರ್ಗಾಯಿಸುವಂತೆ ವಿಧಾನಸಭಾಧ್ಯಕ್ಷ ಸಿಪಿ ಜೋಶಿ ಅವರು ಮಾಡಿದ ಮನವಿಯನ್ನು ಅಂಗೀಕರಿಸಲು ನಿರಾಕರಿಸಿತ್ತು.

ಜುಲೈ ೨೪ರವರೆಗೆ ಅನರ್ಹತೆ ಪ್ರಕ್ರಿಯೆಗಳನ್ನು ಮುಂದೂಡುವಂತೆ ತಮಗೆ ಸೂಚಿಸಿದ ಹೈಕೋರ್ಟ್ ನಿರ್ದೇಶನದ ವಿರುದ್ಧ ವಿಧಾನಸಭಾಧ್ಯಕ್ಷ ಸಿಪಿ ಜೋಶಿ ಅವರು ಸುಪ್ರೀಂಕೋರ್ಟಿಗೆ ಸಲ್ಲಿಸಿದ ವಿಶೇಷ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಅರುಣ್ ಮಿಶ್ರ ನೇತೃತ್ವದ ಪೀಠವು ನಡೆಸುತ್ತಿದೆ. ೧೯ ಮಂದಿ ಭಿನ್ನಮತೀಯ ಶಾಸಕರ ಅರ್ಜಿಯ ಕುರಿತು ಹೈಕೋರ್ಟ್ ಶುಕ್ರವಾರ ಆದೇಶ ನೀಡಬೇಕಿತ್ತು.

ನ್ಯಾಯಮೂರ್ತಿ ಬಿಆರ್ ಗವಾಯಿ ಮತ್ತು ಕೃಷ್ಣ ಮುರಾರಿ ಅವರನ್ನೂ ಒಳಗೊಂq ಸುಪ್ರೀಂಕೋರ್ಟ್ ಪೀಠವು, ಹಲವಾರು ಪ್ರಮುಖ ಪ್ರಶ್ನೆಗಳನ್ನು ಎತ್ತಿದ್ದು ಸುದೀರ್ಘ ವಿಚಾರಣೆಯ ಅಗತ್ಯವಿದೆ ಎಂದೂ ಹೇಳಿತು. ’ಆದೇಶ ನೀಡದಂತೆ ನಾವು ಹೈಕೋರ್ಟನ್ನು ನಿರ್ಬಂಧಿಸುವುದಿಲ್ಲ. ಆದರೆ ಅದರ ಆದೇಶವು ಸುಪ್ರೀಂಕೋರ್ಟಿನ ಮುಂದಿರುವ (ವಿಧಾನ ಸಭಾಧ್ಯಕ್ಷರ) ಅರ್ಜಿಯ ಕುರಿತ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಹೇಳಿದ ಪೀಠ ಮುಂದಿನ ವಿಚಾರಣೆಯನ್ನು ಜುಲೈ ೨೭ಕ್ಕೆ ನಿಗದಿ ಪಡಿಸಿತ್ತು.

ಭಿನ್ನಮತದ ಧ್ವನಿಯನ್ನು ಪ್ರಜಾಪ್ರಭುತ್ವದಲ್ಲಿ ಅಡಗಿಸಲು ಸಾಧ್ಯವಿಲ್ಲ ಎಂದು ಪೀಠ ಹೇಳಿತು. ’ ಪ್ರಕ್ರಿಯೆಯು (ಅನರ್ಹತೆ) ಸಾಧ್ಯವೇ ಅಥವಾ ಇಲ್ಲವೇ ಎಂಬುದಾಗಿ ತಿಳಿಯಲು ನಾವು ಯತ್ನಿಸುತ್ತಿದ್ದೇವೆ ಎಂದು ಪೀಠವು ಭಿನ್ನಮತೀಯರ ವಿರುದ್ಧ ಅನರ್ಹತೆ ಪ್ರಕ್ರಿಯೆ ಆರಂಭಿಸಲು ಕಾರಣಗಳೇನು ಎಂದು ಪ್ರಶ್ನಿಸುತ್ತಾ ಅಭಿಪ್ರಾಯ ವ್ಯಕ್ತ ಪಡಿಸಿತ್ತು.

ಜೋಶಿ ಪರ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಅನರ್ಹತೆ ಪ್ರಕ್ರಿಯೆ ಆರಂಭಿಸಲು ಕಾರಣಗಳನ್ನು ಪಟ್ಟಿ ಮಾಡಿದ್ದರು. ಶಾಸಕರು ಪಕ್ಷದ ಸಭೆಗಳಿಗೆ ಹಾಜರಾಗಲಿಲ್ಲ ಮತ್ತು ತಮ್ಮದೇ ಸರ್ಕಾರವನ್ನು ಅಸ್ಥಿರಗೊಳಿಸಲು ಸಂಚು ಹೂಡಿದರು ಎಂದು ಅವರು ಹೇಳಿದ್ದರು.

ಇದು ಸರಳ ವಿಷಯವಲ್ಲ, ಶಾಸಕರು ಚುನಾಯಿತ ಪ್ರತಿನಿಧಿಗಳು ಎಂದು ಪೀಠ ಹೇಳಿತ್ತು. ಪೀಠದ ಪ್ರಶ್ನೆಗೆ ಉತ್ತರ ನೀಡಿದ ಸಿಬಲ್, ಶಾಸಕರು ಹರಿಯಾಣಕ್ಕೆ ಹೋಗಿದ್ದು, ಹೋಟೆಲ್ ಒಂದರಲ್ಲಿ ವಾಸ್ತವ್ಯ ಹೂಡಿದ್ದಾರೆ ಮತ್ತು ಸದನದಲ್ಲಿ ಬಲಾಬಲ ಪರೀಕ್ಷೆ ನಡೆಯಬೇಕು ಎಂಬುದಾಗಿ ತಾವು ಬಯಸುವುದಾಗಿ ಟಿವಿಗಳಿಗೆ ತಿಳಿಸಿದ್ದಾರೆ ಎಂದು ವಿವರಿಸಿದ್ದರು.

ಅನರ್ಹತೆ ಪ್ರಕ್ರಿಯೆಗೆ ಅನುಮತಿ ನೀಡಬೇಕೇ ಅಥವಾ ಬೇಡವೇ ಎಂಬ ವಿಷಯದ ಬಗ್ಗೆ ನ್ಯಾಯಾಲಯವು ಹಂತದಲ್ಲಿ ಗಮನಿಸುವಂತಿಲ್ಲ. ನಮ್ಮ ಸಮಸ್ಯೆಯು ಸಂಪೂರ್ಣವಾಗಿ ಸಾಂವಿಧಾನಿಕವಾದುದಾಗಿದ್ದು, ಸಭಾಧ್ಯಕ್ಷರು ನಿರ್ಧಾರ ಕೈಗೊಳ್ಳುವವರೆಗೆ ಯಾವುದೇ ಆದೇಶ ಸಾಧ್ಯವಿಲ್ಲ ಎಂದು ಸಿಬಲ್ ವಾದಿಸಿದ್ದರು.

ಹೆಚ್ಚೆಂದರೆ ನಿರ್ದಿಷ್ಟ ಕಾಲಮಿತಿಯೊಳಗೆ ಅನರ್ಹತೆ ಬಗ್ಗೆ ನಿರ್ಧರಿಸುವಂತೆ ಸಭಾಧ್ಯಕ್ಷರಿಗೆ ಸೂಚಿಸಬಹುದು. ಆದರೆ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಲಾಗದು ಮತ್ತು ಶಾಸಕರ ಅನರ್ಹತೆ ಅಥವಾ ಅಮಾನತು ವಿಚಾರದಲ್ಲಿ ಸಭಾಧ್ಯಕ್ಷರು ನಿರ್ಧಾರ ಕೈಗೊಳ್ಳುವ ಮುನ್ನ ಯಾವುದೇ ರಿಟ್ ಅರ್ಜಿಯು ಪುರಸ್ಕೃತಗೊಳ್ಳಲು ಸಾಧ್ಯವಿಲ್ಲ ಎಂದೂ ಸಿಬಲ್ ವಾದಿಸಿದ್ದರು.

ಸಭೆಯಲ್ಲಿ ಹಾಜರಾಗದೇ ಇದ್ದುದಕ್ಕಾಗಿ ಶಾಸಕರಿಗೆ ಅನರ್ಹತೆ ನೋಟಿಸ್ ನೀಡಬಹುದೇ? ಮತ್ತು ಇದನ್ನು ಪಕ್ಷ ವಿರೋಧಿ ನಿಲುವು ಎಂಬುದಾಗಿ ಪರಿಗಣಿಸಬಹುದೇ ಎಂದು ಪೀಠವು ಸಿಬಲ್ ಅವರನ್ನು ಪ್ರಶ್ನಿಸಿತ್ತು. ಸಭೆಗಳಿಗೆ ಹಾಜರಾಗುವಂತೆ ಎಲ್ಲ ಶಾಸಕರಿಗೆ ಮುಖ್ಯ ಸಚೇತಕರು ನೋಟಿಸ್ ನೀಡಿದ್ದರು ಎಂದು ಸಿಬಲ್ ಹೇಳಿದಾಗ ಪೀಠ ಪ್ರಶ್ನೆ ಕೇಳಿತ್ತು.

ವಜಾಗೊಳಿಸಲಾಗಿರುವ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಸೇರಿದಂತೆ ೧೯ ಮಂದಿ ಭಿನ್ನಮತೀಯ ಕಾಂಗ್ರೆಸ್ ಶಾಸಕರ ವಿರುದ್ಧ ಜುಲೈ ೨೪ರವರೆಗೆ ಅನರ್ಹತೆ ಪ್ರಕ್ರಿಯೆ ನಡೆಸದಂತೆ ತನ್ನನ್ನು ನಿರ್ಬಂಧಿಸಲು ರಾಜ್ಯ ಹೈಕೋರ್ಟಿಗೆ ಯಾವುದೇ ಅಧಿಕಾರ ವ್ಯಾಪ್ತಿ ಇಲ್ಲ ಎಂದು ಜೋಶಿ ಅವರು ಸುಪ್ರೀಂಕೋರ್ಟಿನ ಮುಂದೆ ಪ್ರತಿಪಾದಿಸಿದ್ದರು.

೧೯೯೨ರಲ್ಲಿ ಕಿಹೊಟೊ ಹೊಲ್ಲೋಹಾನ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ಪ್ರಮುಖ ತೀರ್ಪನ್ನು ಸಿಬಲ್ ಉಲ್ಲೇಖಿಸಿದ್ದರು. ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಸಂವಿಧಾನದ ೧೦ನೇ ಶೆಡ್ಯೂಲಿನ ಅಡಿಯಲ್ಲಿ ವಿಧಾನಸಭಾಧ್ಯಕ್ಷರು ಕೈಗೊಳ್ಳುವ ಅನರ್ಹತೆ ಪ್ರಕ್ರಿಯೆಯಲ್ಲಿ ನ್ಯಾಯಾಲಯಗಳು ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಹೇಳಿತ್ತು.

ಸದನದ ಸದಸ್ಯನನ್ನು ಅಮಾನತುಗೊಳಿಸಲು ಅಥವಾ ಅನರ್ಹಗೊಳಿಸಲು  ಸಭಾಧ್ಯಕ್ಷರು ನಿರ್ಧಾರ ಕೈಗೊಂಡಾಗ ಮಾತ್ರ ನ್ಯಾಯಾಲಯಗಳು ಹಸ್ತಕ್ಷೇಪ ಮಾಡಬಹುದು ಎಂದು ಸಿಬಲ್ ಹೇಳಿದ್ದರ. ಸಭಾಧ್ಯಕ್ಷರು ಶಾಸನಕರ್ತನನ್ನು ಅಮಾನತುಗೊಳಿಸಿದರೆ ಅಥವಾ ಅನರ್ಹಗೊಳಿಸಿದರೆ ನ್ಯಾಯಾಲಯಗಳು ಹಸ್ತಕ್ಷೇಪ ಮಾಡಲು ಸಾಧ್ಯವೇ ಇಲ್ಲವೇ ಎಂಬುದಾಗಿ ಪೀಠ ಪ್ರಶ್ನಿಸಿದಾಗ ಸಿಬಲ್ ಉತ್ತರ ನೀಡಿದ್ದರು.

ಸಭಾಧ್ಯಕ್ಷರು ನೀಡಿದ ಅನರ್ಹತೆ ನೋಟಿಸ್‌ಗಳನ್ನು ಪ್ರಶ್ನಿಸಿ  ೧೯ ಮಂದಿ ಶಾಸಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಬಳಿಕ ತಾನು ಜುಲೈ ೨೪ರಂದು ತೀರ್ಪು ನೀಡುವುದಾಗಿಯೂ , ಅಲ್ಲಿಯವರೆಗೆ ಅನರ್ಹತೆ ಪ್ರಕ್ರಿಯೆಗಳನ್ನು ಮುಂದೂಡುವಂತೆಯೂ ರಾಜಸ್ಥಾನ ಹೈಕೋರ್ಟ್ ಜುಲೈ ೨೧ರಂದು ನೀಡಿದ ಆದೇಶವನ್ನು ಜೋಶಿ ಅವರು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿದ್ದರು.

No comments:

Advertisement