ಇಂದಿನ ಇತಿಹಾಸ
ಡಿಸೆಂಬರ್ 4
![](https://blogger.googleusercontent.com/img/b/R29vZ2xl/AVvXsEj1jfasw-qM-MiDtIGnOlJnS71px444KvRsZdBQxO9sVuT7E1fKng_HjzTVwhF8rFFd91hIZz6L8lnnbiqWldBHHBMZxklTRrntrgt0BbJE45l0ohkNfnYfA44cjzlbdxm6OyOD2yXlc9Em/s320/honey-2.jpg)
2007: ಅಕ್ರಮ ಕಟ್ಟಡಗಳ ಸಕ್ರಮದ ವಿವಾದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರ ಹಿತಾಸಕ್ತಿಗೆ ಅನುಗುಣವಾಗಿ ಸರ್ಕಾರವೇ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಕರ್ನಾಟಕ ಹೈಕೋರ್ಟ್ ಆದೇಶಿಸಿತು. ಇದರಿಂದಾಗಿ ಪ್ರಕರಣ ಹೈಕೋರ್ಟಿನಿಂದ ಸರ್ಕಾರದ ಅಂಗಳಕ್ಕೆ ಬಂದಿತು. `ಸಕ್ರಮ' ಯೋಜನೆ ಕುರಿತು ರಾಜ್ಯಪಾಲರು ಇನ್ನೊಮ್ಮೆ ಅವಲೋಕನ ಮಾಡುವ ಅಗತ್ಯ ಇದೆ ಎಂದೂ ನ್ಯಾಯಾಲಯ ಅಭಿಪ್ರಾಯಪಟ್ಟಿತು.
2007: ನಂದಿಗ್ರಾಮ ಪ್ರಕರಣಕ್ಕೆ ಸಂಬಂಧಿಸಿದಂತೆ ತಾವು ನೀಡಿರುವ ವಿವಾದಾತ್ಮಕ ಹೇಳಿಕೆ ಬಗ್ಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಬುದ್ಧದೇವ ಭಟ್ಟಾಚಾರ್ಯ ವಿಷಾದ ವ್ಯಕ್ತಪಡಿಸಿದರು. `ಅವರದೇ ವಿಧಾನದ ಮೂಲಕ ಅವರಿಗೆ ಪಾಠ ಕಲಿಸಿದ್ದೇವೆ ಎಂಬ ಹೇಳಿಕೆಯನ್ನು ನಾನು ನೀಡಬಾರದಿತ್ತು. ಏಕೆಂದರೆ ಎಲ್ಲ ವರ್ಗಗಳಲ್ಲಿ ಶಾಂತಿ ನೆಲೆಸಬೇಕಾಗಿರುವುದು ಈಗಿನ ಅವಶ್ಯಕತೆ' ಎಂದು ಭಟ್ಟಾಚಾರ್ಯ ಹೇಳಿದರು.
2007: ಕೆಮ್ಮಿನಿಂದ ನರಳುವ ಮಕ್ಕಳಿಗೆ ಸಿರಪ್ ಕುಡಿಸುವ ಬದಲು ಹಳೇ ಜೇನುತುಪ್ಪ ಕುಡಿಸಿ. ಇದು ಈಗ ಜಾಗತಿಕವಾಗಿ ಸಂಶೋಧಕರು ಒಪ್ಪಿಕೊಂಡ ಸತ್ಯ. ಜೇನುತುಪ್ಪವನ್ನು ಹಿಂದಿನಿಂದಲೂ ಸ್ವಸ್ಥ ಆರೋಗ್ಯಕ್ಕೆ ಪೂರಕ ಎಂದು ಭಾರತದಲ್ಲಿ ಭಾವಿಸಲಾಗುತ್ತಿದೆ. ಈಗ ಅದಕ್ಕೆ ಲಂಡನ್ನಿನ ಸಂಶೋಧಕರೂ ಅಧಿಕೃತ ಮುದ್ರೆ ಒತ್ತಿದರು. ಇತ್ತೀಚೆಗೆ ನಡೆದ ಅಧ್ಯಯನವೊಂದರ ಪ್ರಕಾರ ತೀವ್ರ ಕೆಮ್ಮಿನಿಂದ ಬಳಲುತ್ತಿರುವವರು ರಾತ್ರಿ ಮಲಗುವಾಗ ದುಬಾರಿ ಸಿರಪ್ಪುಗಳನ್ನು ಕುಡಿಯುವ ಬದಲಿಗೆ ಜೇನುತುಪ್ಪವನ್ನು ಕುಡಿದರೆ ಹೆಚ್ಚು ನೆಮ್ಮದಿ ಸಿಗುತ್ತದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟರು.
2007: ಜಪಾನಿನ ಸೇನಾ ತುಕಡಿಗಳು 1937ರ ಡಿಸೆಂಬರ್ 13ರಂದು ಚೀನಾದ ರಾಜಧಾನಿಯನ್ನು ವಶಪಡಿಸಿಕೊಂಡಾಗ ಹುತಾತ್ಮರಾದ 30 ಸಾವಿರ ಚೀನಿಯರ ಪೈಕಿ 13 ಸಾವಿರ ಜನರ ಹೆಸರುಗಳನ್ನು ಎಂಟು ಸಂಪುಟಗಳಲ್ಲಿ ಚೀನಾ ಪ್ರಕಟಿಸಿತು. ಚೀನಾದ ಮೇಲೆ ದಂಡೆತ್ತಿ ಬಂದ ಜಪಾನಿನ ಸೈನಿಕರು 30 ಸಾವಿರ ನಾಗರಿಕರನ್ನು ನಿರ್ದಯವಾಗಿ ಹತ್ಯೆಗೈದರು. ಅವರೆಲ್ಲರ ಹೆಸರುಗಳನ್ನು ಪ್ರಕಟಿಸಲು ಉದ್ದೇಶಿಸಲಾಗಿದೆ ಎಂದು ಸರ್ಕಾರಿ ಸುದ್ದಿ ಸಂಸ್ಥೆ ಹೇಳಿತು. `ಜಸ್ಟ್ ಸ್ಟಾರ್ಟ್' ಹೆಸರಿನಲ್ಲಿ ಪ್ರಕಟವಾಗಿರುವ ಎಂಟು ಸಂಪುಟಗಳಲ್ಲಿ ಮೃತಪಟ್ಟವರ ಕುರಿತು ಮಾಹಿತಿಗಳನ್ನು ಒದಗಿಸಲಾಗಿದೆ. ಇನ್ನುಳಿದ ಮಾಹಿತಿಯನ್ನು ಒಟ್ಟು 27 ಸಂಪುಟಗಳಲ್ಲಿ ಹೊರತರಲು ನಿರ್ಧರಿಸಲಾಗಿದೆ ಎಂದು ಸಂಸ್ಥೆಯ ಪ್ರಧಾನ ಸಂಪಾದಕರು ತಿಳಿಸಿದರು.
2006: ಇಡೀ ರಾಷ್ಟ್ರದ ಗಮನ ಸೆಳೆದಿದ್ದ ಚಿಂತಾಮಣಿ ತಾಲ್ಲೂಕಿನ ಕಂಬಾಲಪಲ್ಲಿ ದಲಿತರ ಸಜೀವ ಹತ್ಯಾಕಾಂಡದ ಎಲ್ಲ 32 ಆರೋಪಿಗಳನ್ನೂ ಕೋಲಾರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ದೌರ್ಜನ್ಯ ವಿರೋಧಿ ವಿಶೇಷ ನ್ಯಾಯಾಲಯವು ಖುಲಾಸೆ ಮಾಡಿತು. ಈ ಪ್ರಕರಣದಲ್ಲಿ ಪ್ರತ್ಯಕ್ಷ ಸಾಕ್ಷಿಗಳು ಪ್ರತಿಕೂಲ ಸಾಕ್ಷ್ಯ ನೀಡಿದ ಕಾರಣ ಆರೋಪಿಗಳ ವಿರುದ್ಧ ದೋಷಾರೋಪ ಸಾಬೀತಾಗಲಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿತು.
2006: ನಾಡಿನ ಪ್ರಸಿದ್ಧ ಶಾಸ್ತ್ರೀಯ ಸಂಗೀತ ಗಾಯಕ ಪಂ. ಗಣಪತಿ ಭಟ್ಟ ಹಾಸಣಗಿ ಅವರು ಸಂಗೀತ ಕ್ಷೇತ್ರದ ಪ್ರತಿಷ್ಠಿತ ವತ್ಸಲಾಬಾಯಿ ಭೀಮಸೇನ್ ಜೋಶಿ ಪ್ರಶಸ್ತಿಗೆ ಆಯ್ಕೆಯಾದರು. ಪುಣೆಯ ಆರ್ಯ ಸಂಗೀತ ಪ್ರಸಾರಕ ಮಂಡಳಿ ಈ ಪ್ರಶಸ್ತಿಯನ್ನು ನೀಡುತ್ತಿದೆ.
2006: ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಆಯಾಮ ನೀಡಿದ ಸಂಸ್ಥೆಗಳಿಗೆ ನೀಡುವ `ಟೆಕ್ನಾಲಜಿ ಪಯೋನೀರ್ಸ್ 2007' ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ನಿಧಾನವಾಗಿ ಹೆಸರು ಮಾಡುತ್ತಿರುವ ಬೆಂಗಳೂರಿನ `ಸ್ಟ್ರಾಂಡ್ ಲೈಫ್ ಸೈನ್ಸಸ್' ಮತ್ತು ಗ್ರಾಮೀಣ ಪ್ರದೇಶಗಳಿಗೆ ಇಂಟರ್ನೆಟ್ ಸೌಲಭ್ಯ ಕಲ್ಪಿಸುತ್ತಿರುವ `ದೃಷ್ಟಿ' ಈ ಎರಡು ಕಂಪೆನಿಗಳು ಪಡೆದುಕೊಂಡವು. ಜಿನೀವಾದಲ್ಲಿರುವ ವಿಶ್ವ ಆರ್ಥಿಕ ವೇದಿಕೆ ಈ ಪ್ರಶಸ್ತಿಯನ್ನು ಪ್ರಕಟಿಸಿದೆ. ವೇದಿಕೆ ಜಗತ್ತಿನ 47 ಕಂಪೆನಿಗಳನ್ನು ಈ ಪ್ರಶಸ್ತಿಗಾಗಿ ಗುರುತಿಸಿದೆ.
2006: ಎಂ.ಎಲ್.ವಸಂತಕುಮಾರಿ ಸ್ಮಾರಕ ಸಂಗೀತ ಸಭಾ ನೀಡುವ `ಎಂ.ಎಲ್.ವಸಂತಕುಮಾರಿ ಮೆಮೋರಿಯಲ್ ಸಂಗೀತ ಪ್ರಶಸ್ತಿ'ಗೆ ಖ್ಯಾತ ಚಲನಚಿತ್ರ ನಟಿ, ಶ್ರೀಲತಾ ನಂಬೂದರಿ ಆಯ್ಕೆಯಾದರು.
2005: ಸಮಕಾಲೀನ ಕಲಾ ಪರಂಪರಯಲ್ಲಿ ತಮ್ಮದೇ ಆದ ವಿಶಿಷ್ಟ ಪ್ರಯೋಗಗಳ ಮೂಲಕ ಹೆಸರಾಗಿದ್ದ ಕಲಾವಿದ, ಚಿಂತಕ ಹಡಪದ್ ಅವರ ನೆನಪಿಗೆ ನೀಡುವ ನಾಡೋಜ ಎಂ. ಹಡಪದ್ ಪ್ರಶಸ್ತಿ-2005ನ್ನು ಕಲಾವಿದ ಎನ್. ಕೃಷ್ಣಾಚಾರ್ ಅವರಿಗೆ ಹಿರಿಯ ಸಂಶೋಧಕ ಡಾ. ಎಂ. ಚಿದಾನಂದ ಮೂರ್ತಿ ಬೆಂಗಳೂರು ಶೇಷಾದ್ರಿಪುರದ ಕೆನ್ ಕಲಾಶಾಲೆಯಲ್ಲಿ ಪ್ರದಾನ ಮಾಡಿದರು.
2005: ವೋಲ್ಕರ್ ವರದಿಯ ಹಿನ್ನೆಲೆಯಲ್ಲಿ ವಿದೇಶಾಂಗ ಖಾತೆ ಕಳೆದುಕೊಂಡ ಸಚಿವ ನಟವರ್ ಸಿಂಗ್ ವಿರುದ್ಧ ಹೇಳಿಕೆ ನೀಡಿ ಬಿರುಗಾಳಿ ಎಬ್ಬಿಸಿದ ಕ್ರೊಯೇಷಿಯಾದ ಮಾಜಿ ರಾಯಭಾರಿ ಅನಿಲ್ ಮಥೆರಾನಿ ಅವರನ್ನು ಜಾರಿ ನಿರ್ದೇಶನಾಲಯ, ಕೇಂದ್ರ ಗುಪ್ತಚರ ವಿಭಾಗ ಹಾಗೂ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದ ಅಧಿಕಾರಿಗಳ ತಂಡಗಳು ವಿಚಾರಣೆಗೆ ಒಳಪಡಿಸಿದವು.
1993: ಮುಲಯಂ ಸಿಂಗ್ ಅವರು ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.
1982: ಚೀನಾದಲ್ಲಿ ಸಂವಿಧಾನ ಅಳವಡಿಸಿಕೊಳ್ಳಲಾಯಿತು.
1981: ನವದೆಹಲಿಯ ಇತಿಹಾಸ ಪ್ರಸಿದ್ಧ ಕುತುಬ್ ಮೀನಾರಿನ ಮೆಟ್ಟಿಲು ಸಾಲಿನಲ್ಲಿ ನೂಕು ನುಗ್ಗಲು ಸಂಭವಿಸಿ 21 ಮಂದಿ ಶಾಲಾ ಮಕ್ಕಳು ಸೇರಿದಂತೆ ಒಟ್ಟು 45 ಮಂದಿ ಅಸು ನೀಗಿದರು. ಇತರ 21 ಮಂದಿ ಗಾಯಗೊಂಡರು. ವಿದ್ಯುತ್ ವೈಫಲ್ಯದಿಂದ ಉಂಟಾದ ಗಾಬರಿಯಿಂದ ಈ ನೂಕುನುಗ್ಗಲು ಸಂಭವಿಸಿತು.
1924: ವೈಸ್ ರಾಯ್ ದಿ ಅರ್ಲ್ ಅಫ್ ರೀಡಿಂಗ್ ಅವರಿಂದ ಬಾಂಬೆಯ (ಈಗಿನ ಮುಂಬೈ) `ಗೇಟ್ ವೇ ಆಫ್ ಇಂಡಿಯಾ' ಉದ್ಘಾಟನೆಗೊಂಡಿತು. ಇಂಡೋ ಸಾರ್ಸನಿಕ್ ಶೈಲಿಯಲ್ಲಿ ನಿರ್ಮಿಸಲಾದ ಇದನ್ನು ದೊರೆ 5ನೇ ಜಾರ್ಜ್ ಮತ್ತು ರಾಣಿ ಮೇರಿ
1911ರ ಡಿಸೆಂಬರಿನಲ್ಲಿ ಬಾಂಬೆಗೆ ನೀಡಿದ ಭೇಟಿಯ ನೆನಪಿಗಾಗಿ ನಿರ್ಮಿಸಲಾಯಿತು. ಇದಕ್ಕೆ 1911ರ ಮಾಚರ್ಿಯಲ್ಲಿ ಶಿಲಾನ್ಯಾಸ ನೆರವೇರಿಸಲಾಗಿತ್ತು. ಶಿಲ್ಪಿ ಜಾರ್ಜ್ ವಿಟ್ಟೆಟ್ ಅವರ ಅಂತಿಮ ವಿನ್ಯಾಸಕ್ಕೆ 1914ರ ಆಗಸ್ಟಿನಲ್ಲಿ ್ಲಮಂಜೂರಾತಿ ದೊರಕಿತ್ತು.
1919: ಭಾರತದ ಮಾಜಿ ಪ್ರಧಾನಿ ಇಂದ್ರ ಕುಮಾರ್ ಗುಜ್ರಾಲ್ ಹುಟ್ಟಿದ ದಿನ. ಅವರು 1997ರ
ಏಪ್ರಿಲ್ನಿಂದ ನವೆಂಬರವರೆಗೆ ಪ್ರಧಾನಿಯಾಗಿದ್ದರು.
1910: ಭಾರತದ ಮಾಜಿ ರಾಷ್ಟ್ರಪತಿ ರಾಮಸ್ವಾಮಿ ವೆಂಕಟ್ರಾಮನ್ ಹುಟ್ಟಿದ ದಿನ. ರಾಜಕಾರಣಿ, ಅಧಿಕಾರಿ ಹಾಗೂ ವಕೀಲರಾಗಿದ್ದ ಅವರು 1987 ಜುಲೈ 25ರಂದು ಭಾರತದ ರಾಷ್ಟ್ರಪತಿಯಾದರು.
1888: ಭಾರತದ ಖ್ಯಾತ ಇತಿಹಾಸಕಾರ ರೊಮೇಶ್ ಚಂದ್ರ ಮಜುಂದಾರ್ (1888-1980) ಹುಟ್ಟಿದ ದಿನ.
1829: ರೆಗ್ಯೂಲೇಷನ್ 17 ಜಾರಿ ಮಾಡುವ ಮೂಲಕ ಲಾರ್ಡ್ ವಿಲಿಯಂ ಬೆಂಟಿಂಕ್ ಭಾರತದಲ್ಲಿ ಸತಿ ಪದ್ಧತಿಯನ್ನು ನಿಷೇಧಿಸಿದ.
1775: ಬ್ರಿಟಿಷ್ ಇತಿಹಾಸಕಾರ ಹಾಗೂ ಪ್ರಬಂಧಕಾರ ಥಾಮಸ್ ಕಾರ್ಲೈಲ್ (1795-1881) ಹುಟ್ಟಿದ ದಿನ. `ಫ್ರೆಂಚ್ ರೆವಲ್ಯೂಷನ್' ಕೃತಿ ಈತನಿಗೆ ಅಪಾರ ಖ್ಯಾತಿ ತಂದು ಕೊಟ್ಟಿತು. ಈ ಕೃತಿಯ ಇಡೀ ಮೊದಲ ಸಂಪುಟದ ಹಸ್ತಪ್ರತಿಯನ್ನು ಜಾನ್ ಸ್ಟುವರ್ಟ್ ಮಿಲ್ ಓದಲು ಒಯ್ದು ತನ್ನ ಭಾವೀ ಪತ್ನಿಯ ಕೈಯಲ್ಲಿ ಕೊಟ್ಟಿದ್ದ. ಆಕೆಯ ಸೇವಕಿ ಅದು ನಿರುಪಯುಕ್ತ ಹಾಳೆ ಎಂದು ಭಾವಿಸಿ ಸುಟ್ಟು ಹಾಕಿದಳು! ಹೀಗಾಗಿ ಥಾಮಸ್ ಕಾರ್ಲೈಲ್ ಕೃತಿಯ ಮೊದಲ ಇಡೀ ಸಂಪುಟವನ್ನು ಮತ್ತೆ ಬರೆಯಬೇಕಾಗಿ ಬಂದಿತ್ತು.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment