My Blog List

Saturday, August 29, 2009

ಇಂದಿನ ಇತಿಹಾಸ History Today ಆಗಸ್ಟ್ 26

ಇಂದಿನ ಇತಿಹಾಸ

ಆಗಸ್ಟ್ 26


`ಎಚ್ಚೆಸ್ಕೆ' ಎಂದೇ ಖ್ಯಾತರಾದ ಎಚ್. ಎಸ್. ಕೃಷ್ಣಸ್ವಾಮಿ ಅಯ್ಯಂಗಾರರು ಎಚ್. ಶ್ರೀನಿವಾಸ ಅಯ್ಯಂಗಾರ್- ಅಲಮೇಲಮ್ಮ ದಂಪತಿಯ ಮಗನಾಗಿ ಮೈಸೂರು ಜಿಲ್ಲೆಯ ಕೃಷ್ಣರಾಜ ನಗರ ತಾಲ್ಲೂಕಿನ ಹಳೆಯೂರು ಗ್ರಾಮದಲ್ಲಿ ಜನಿಸಿದರು.

ಕಾದಂಬರಿ ಹಾಗೂ ಇತರ ಹಲವಾರು ಕೃತಿಗಳನ್ನು ರಚಿಸಿದ ಎಚ್ಚೆಸ್ಕೆ ಹಾ.ಮಾ.ನಾ. ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾದವರು.

2015:ಅಹಮದಾಬಾದ್: ಶಿಕ್ಷಣ ಹಾಗೂ ಸರ್ಕಾರಿ ಉದ್ಯೋಗಗಳಲ್ಲಿ ಪಟೇಲ್ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ, ಗಲಭೆಯಲ್ಲಿ ಒಟ್ಟು 6 ಜನರು ಮೃತರಾದರು. ಪಟೇಲ್ ಸಮುದಾಯದ ಮುಖಂಡ ಹಾರ್ದಿಕರ್​ನ್ನು 25ರ ರಾತ್ರಿಯೇ ಬಿಡುಗಡೆಗೊಳಿಸಿದ್ದರೂ ಹೋರಾಟ ತೀವ್ರ ರೂಪ ಪಡೆಯಿತು. ರಾಜ್ಯ ಸಾರಿಗೆ ಸಂಸ್ಥೆಯ ನೂರಕ್ಕೂ ಅಧಿಕ ಬಸ್​ಗಳಿಗೆ
ಬೆಂಕಿ ಹಚ್ಚಲಾಯಿತು..ಪರಿಸ್ಥಿತಿ ತಿಳಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಕ್ಷಿಪ್ರ ಕಾರ್ಯಾಚರಣಾ ಪಡೆ, ಸಿಆರ್​ಪಿಎಫ್, ಬಿಎಸ್​ಎಫ್ ಯೋಧರನ್ನು ಕಳುಹಿಸಿತು. ಈದಿನ ಸಂಭವಿಸಿದ ಗಲಭೆಗೆ 6 ಜನರು ಬಲಿಯಾದರು. ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ, ಸಿಎಂ ಆನಂದಿಬೆನ್ ಪಟೇಲ್ ಶಾಂತಿ ಕಾಪಾಡುವಂತೆ ಮನವಿ ಮಾಡಿದರು. ಹಿಂದಿನ ರಾತ್ರಿ ಹಾರ್ದಿಕ್ ಬಂಧನದ ಸುದ್ದಿ ಹರಡುತ್ತಿದ್ದಂತೆಯೇ, ಪ್ರತಿಭಟನಾ ಪ್ರದರ್ಶನದಲ್ಲಿ ಪಾಲ್ಗೊಂಡ ಸಾವಿರಾರು ಮಂದಿ ಅಹಮದಾಬಾದ್ ನಗರದಲ್ಲಿ 20 ಕಡೆಗಳಲ್ಲಿ ಪೊಲೀಸರ ಮೇಲೆ ಕಲ್ಲುತೂರಾಟ, ವಾಹನಗಳಿಗೆ ಬೆಂಕಿಹಚ್ಚಿ ಹಿಂಸಾಚಾರ ಆರಂಭಿಸಿದರು. ಪರಿಸ್ಥಿತಿ ನಿಯಂತ್ರಿಸಲು ಅಹಮದಾಬಾದ್ ವ್ಯಾಪ್ತಿಯ ರಾಮೊಲ್, ನಿಕೋಲ್, ಬಾಪೂನಗರ್, ಘಾಟ್ಲೋಡಿಯಾ, ನರನ್​ಪುರ, ಒಧವ್, ನರೋಡಾ, ಕೃಷ್ಣಾನಗರ ಹಾಗೂ ವಡಾಜ್ 9 ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕರ್ಫ್ಯೂ ಜಾರಿಗೊಳಿಸಿತು. ಈದಿನ ಮುಂಜಾನೆ 3 ಗಂಟೆ ವೇಳೆಗೆ ಪಟೇಲ್ ಸಮುದಾಯ ಬಹುಸಂಖ್ಯಾತರಾಗಿರುವ ವಡೋದರಾ, ಸೂರತ್, ರಾಜ್​ಕೋಟ್, ಭರೂಚ್, ಜಾಮ್ಗರ, ಭಾವನಗರ ಹಾಗೂ ವಲ್ಸಾಡ್​ಗಳಲ್ಲಿ ಸಾವಿರಾರು ಮಂದಿ ವಾಹನಗಳನ್ನು ತಡೆದು ಬೆಂಕಿ ಹಚ್ಚಿದರು. ಮತ್ತೊಂದೆಡೆ, ಬಿಜೆಪಿ ಸರ್ಕಾರದ ಪಟೇಲ್ ಸಮುದಾಯದ ಶಾಸಕರು, ಸಂಸದರು, ಸಚಿವರ ಮನೆ ಹಾಗೂ ಕಚೇರಿಗಳ ಮೇಲೂ ಕಲ್ಲುತೂರಾಟ ನಡೆಸಿದರು.


2015: ನವದೆಹಲಿ: ಶೀನಾ ಬೋರಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದ್ರಾಣಿ ಮುಖರ್ಜಿಯನ್ನು ಬಂಧಿಸಿದ ಬೆನ್ನಲ್ಲೇ ಇನ್ನೊಬ್ಬ ಆರೋಪಿ ಎಂದೇ ಹೇಳಲಾಗುತ್ತಿರುವ ಸಂಜೀವ್ ಖನ್ನಾರನ್ನೂ ಮುಂಬೈ ಪೊಲೀಸರು ಬಂಧಿಸಿದರು. ಸೋದರಿ ಹತ್ಯೆಗೆ ಇಂದ್ರಾಣಿಗೆ ಸಹಕರಿದ್ದ ಎನ್ನುವ ಹಿನ್ನೆಲೆಯಲ್ಲಿ ಸಂಜೀವ್ ಖನ್ನಾರನ್ನು ಕೋಲ್ಕತದಲ್ಲಿ ಬಂಧಿಸಲಾಯಿತು. ಪಶ್ಚಿಮ ಬಂಗಾಳ ಪೊಲೀಸರು ಖನ್ನಾ ಬಂಧನಕ್ಕೊಳಗಾಗಿರುವ ಮಾಹಿತಿಯನ್ನು ಖಚಿತಪಡಿಸಿದರು. ಅಷ್ಟಕ್ಕೂ ಸಂಜೀವ್ ಮತ್ಯಾರೂ ಅಲ್ಲ, ಇಂದ್ರಾಣಿ ಮೊದಲ ಪತಿ. ಕಳೆದ ಕೆಲ ದಿನಗಳಿಂದ ಆದ ಮಹತ್ವದ ಬೆಳವಣಿಗೆಯಲ್ಲಿ ಶೀನಾ ಬೋರಾ ಹತ್ಯೆ ಪ್ರಕರಣ ಹೊಸ ರೂಪ ಪಡೆದುಕೊಂಡಿತು. ಸ್ಟಾರ್ ಇಂಡಿಯಾದ ಮಾಜಿ ಸಿಇಒ ಪೀಟರ್ ಮುಖರ್ಜಿ ಪತ್ನಿಯಾಗಿರುವ ಇಂದ್ರಾಣಿಯವರನ್ನು ಹಿಂದಿನ ದಿನ ಬಲವಾದ ಪುರಾವೆಗಳು ದೊರೆತ ಹಿನ್ನೆಲೆಯಲ್ಲಿ ಬಂಧಿಸಲಾಗಿತ್ತು.
2008: ಜಗದ್ವಿಖ್ಯಾತ ತಿರುಪತಿ ತಿರುಮಲ ದೇವಾಲಯ ನಗರಿಯಲ್ಲಿ ಇತಿಹಾಸ ಮರುಕಳಿಸಿತು. ಅಲ್ಲಿನ ಅವಿಲಾಲ ಚೆರುವು ಮೈದಾನದಲ್ಲಿ ನಿರ್ಮಿಸಿದ್ದ ಬೃಹತ್ ವರ್ಣರಂಜಿತ ವೇದಿಕೆಯಲ್ಲಿ ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ತಮ್ಮ ನೂತನ `ಪ್ರಜಾ ರಾಜ್ಯಂ' ಪಕ್ಷಕ್ಕೆ ನಾಂದಿ ಹಾಡಿದರು. ಬಿಳಿ, ಹಸಿರು ವರ್ಣದ ನಡುವೆ ಉದಯಿಸುತ್ತಿರುವ ಸೂರ್ಯನ ಲಾಂಛನವಿರುವ ಪಕ್ಷದ ಪತಾಕೆ ಸೂರ್ಯಾಸ್ತದ ಸಮಯಕ್ಕೆ ಸರಿಯಾಗಿ ಆರೋಹಣಗೊಳ್ಳುತ್ತಿದ್ದಂತೆಯೇ, ಆಂಧ್ರ ಪ್ರದೇಶದ ರಾಜಕೀಯದಲ್ಲಿ ಸಂಚಲನವೊಂದು ಸೃಷ್ಟಿಯಾಯಿತು. 1982ರಲ್ಲಿ ಇದೇ ತಿರುಪತಿ ತಿಮ್ಮಪ್ಪನ ಸನ್ನಿದಿಯಲ್ಲೇ ದಿವಂಗತ ಎನ್. ಟಿ. ರಾಮರಾವ್ ಅವರು ಆರಂಭಿಸಿದ್ದ `ತೆಲುಗುದೇಶಂ' ಕಾಂಗ್ರೆಸ್ಸಿಗೆ ಸೆಡ್ಡು ಹೊಡೆದಿತ್ತು.

2008: ನೇಪಾಳದಲ್ಲಿ ಕೋಶಿ ನದಿ ತುಂಬಿ ಹರಿದು ಪ್ರವಾಹ ತಡೆಗೆ ನಿರ್ಮಿಸಿದ ಏರಿ ಒಡೆದ ಪರಿಣಾಮ ತಗ್ಗು ಪ್ರದೇಶವಾದ ಬಿಹಾರದಲ್ಲಿ ಭಾರಿ ಪ್ರವಾಹ ಉಂಟಾಗಿ 45 ಮಂದಿ ಮೃತರಾದರು. ಲಕ್ಷಾಂತರ ಜನರು ಅಪಾಯದಲ್ಲಿ ಸಿಲುಕಿದರು.

2007: `ಗೋವನ್ನು ನಾವೆಲ್ಲರೂ ಎರಡನೇ ಮಾತೆ ಎಂದು ಕರೆಯುತ್ತೇವೆ. ಆದರೆ ಗೋವು ತಾಯಿಗೆ- ತಾಯಿಯಾದ್ದರಿಂದ ನಮ್ಮೆಲ್ಲರ ಮೊದಲ ಮಾತೆ ಎಂದು ಕರೆಯಬೇಕು' ಎಂದು ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಬೆಂಗಳೂರಿನ ಆರ್.ಟಿ. ನಗರದ ಎಚ್. ಎಂ.ಟಿ ಬಡಾವಣೆಯಲ್ಲಿ 'ಗೋ ಸಂಧ್ಯಾ' ಕಾರ್ಯಕ್ರಮದಲ್ಲಿ ಪ್ರತಿಪಾದಿಸಿದರು. ದೇಶ ಮತ್ತು ಸಂಸ್ಕೃತಿಯನ್ನು ಉಳಿಸುವ ದೇಶೀಯ ಗೋತಳಿಗಳ ಸಂರಕ್ಷಣೆ ಮತ್ತು ಸಂವರ್ಧನೆಗೆ ರಾಮಚಂದ್ರಾಪುರ ಮಠ ನಿಂತಿದೆ. ಇದು ದೇಶದ ಎರಡನೇ ಸ್ವಾತಂತ್ರ್ಯ ಸಂಗ್ರಾಮ. ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದ 70 ಬಗೆಯ ದೇಶೀಯ ತಳಿಗಳ ಪೈಕಿ ಪ್ರಸ್ತುತ 32 ತಳಿಗಳು ಮಾತ್ರ ಉಳಿದಿವೆ. ಈ ಸಂಖ್ಯೆಯಲ್ಲಿ ಗೋತಳಿಗಳು ನಶಿಸಲು ಕಾರಣವೇನು ಎಂದು ದೇಶದ ಸಂಸತ್ತು ಹಾಗೂ ವಿಧಾನಸೌಧಗಳನ್ನು ಪ್ರಶ್ನಿಸಬೇಕಾಗಿದೆ ಎಂದು ಅವರು ಹೇಳಿದರು. ರಾಮಚಂದ್ರಾಪುರ ಮಠದಲ್ಲಿರುವ ಗೋವಿನ ಒಂದು ತಳಿಯನ್ನು ಸಂರಕ್ಷಿಸುವ ಸಂಪೂರ್ಣ ಜವಾಬ್ದಾರಿಯನ್ನು ಚಿತ್ರನಟ ವಿವೇಕ ಒಬೆರಾಯ್ ಕುಟುಂಬ ವಹಿಸಿಕೊಂಡಿದೆ ಎಂದು ಮಠವು ಈ ಸಂದರ್ಭದಲ್ಲಿ ಪ್ರಕಟಿಸಿತು.

2007: ``ಸುವರ್ಣ ವಿಧಾನಸೌಧ ಶಂಕುಸ್ಥಾಪನೆಯೊಂದಿಗೆ ಬೆಳಗಾವಿ ನಗರ ರಾಜ್ಯದ ಎರಡನೇ ರಾಜಧಾನಿಯಾಗಿ ಅಸ್ತಿತ್ವ ಪಡೆದಿದೆ'' ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಬೆಳಗಾವಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸುವರ್ಣ ವಿಧಾನಸೌಧ ಶಂಕುಸ್ಥಾಪನಾ ಸಮಾರಂಭದಲ್ಲಿ ಹೇಳಿದರು. ಇದು ಜೆಡಿ ಎಸ್- ಬಿಜೆಪಿ ಸಮ್ಮಿಶ್ರ ಸರ್ಕಾರದ ದೂರದೃಷ್ಟಿಯ ಫಲ. ಇದು ಸರ್ಕಾರದ ಸಾಧನೆ ಎಂದು ಅವರು ಬಣ್ಣಿಸಿದರು.

2007: ಹೈದರಾಬಾದಿನಲ್ಲಿ ಸಂಭವಿಸಿದ ಅವಳಿ ಬಾಂಬ್ ಸ್ಫೋಟಗಳಲ್ಲಿ ಸತ್ತವರ ಸಂಖ್ಯೆ 43ಕ್ಕೆ ಏರಿತು.

2007: ಅಂಡಮಾನ್ ದ್ವೀಪದ ವಿವಿಧ ಭಾಗಗಳಲ್ಲಿ ಈದಿನ ಮುಂಜಾನೆ ಮಧ್ಯಮ ಪ್ರಮಾಣದ ಭೂಕಂಪ ಸಂಭವಿಸಿತು. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 5.4ರಷ್ಟು ದಾಖಲಾಯಿತು.

2006: ಇರಾನಿನ ವಿವಾದಾತ್ಮಕ ಪರಮಾಣು ಕಾರ್ಯಕ್ರಮದ ಭಾಗವಾಗಿರುವ ಖೊಂಡಬ್ ಭಾರಜಲ ಘಟಕವನ್ನು ಅಧ್ಯಕ್ಷ ಮೊಹಮ್ಮದ್ ಅಹ್ಮದಿನೇಜಾದ್ ಉದ್ಘಾಟಿಸಿದರು.

2006: ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟ್ ಪಟು ಕ್ಲೈಡ್ ವಾಲ್ಕಾಟ್ (80) ಬ್ರಿಜ್ ಟೌನಿನಲ್ಲಿ ನಿಧನರಾದರು. ಐವತ್ತರ ದಶಕದಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ಟಿನ ವಿಖ್ಯಾತ ಮೂವರು ಡಬ್ಲ್ಯುಗಳು ಎಂದೇ ಖ್ಯಾತರಾಗಿದ್ದವರಲ್ಲಿ ವಾಲ್ಕಾಟ್ ಒಬ್ಬರಾಗಿದ್ದರು. ಫ್ರಾಂಕ್ ವೊರೆಲ್, ಎವರ್ಟನ್ ವೀಕ್ಸ್ ಇತರ ಇಬ್ಬರು ಖ್ಯಾತ ಡಬ್ಲ್ಯುಗಳು.

2006: ನೇಪಾಳದ ಕಠ್ಮಂಡುವಿನಲ್ಲಿ ಇದೇ ಪ್ರಥಮ ಬಾರಿಗೆ ಸಲಿಂಗಪ್ರೇಮಿಗಳ ಮದುವೆ ನಡೆಯಿತು. 29ರ ಹರೆಯದ ಅನಿಲ್ ಮಹಜು ಮತ್ತು 23ರ ಹರೆಯದ ದಿಯಾ ಮಹಜು ಇವರೇ ಮದುವೆಯಾದ ಸಲಿಂಗ ಪ್ರೇಮಿಗಳು.

2001: ಪೆಂಟ್ಯಾಲ ಹರಿಕೃಷ್ಣ ಅವರು 15ನೇ ವಯಸ್ಸಿನಲ್ಲಿ ಅತ್ಯಂತ ಕಿರಿಯ ಚೆಸ್ ಗ್ರ್ಯಾಂಡ್ ಮಾಸ್ಟರ್ ಎಂಬ ಕೀರ್ತಿಗೆ ಭಾಜನರಾದರು. 1987ರಲ್ಲಿ ವಿಶ್ವನಾಥನ್ ಆನಂದ್ ಅವರು ತಮ್ಮ 18ನೇ ವಯಸ್ಸಿನಲ್ಲಿ ಭಾರತದ ಮೊತ್ತ ಮೊದಲ ಗ್ರ್ಯಾಂಡ್ ಮಾಸ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ವಿಶ್ವನಾಥನ್ ಆನಂದ್ ಅವರ ದಾಖಲೆಯನ್ನು ಹರಿಕೃಷ್ಣ ಮೀರಿಸಿದರು.

1978: ರಷ್ಯದ ಸೋಯುಜ್ 31ರ ಮೂಲಕ ಗಗನಕ್ಕೆ ಏರಿದ ಸಿಗ್ಮಂಡ್ ಜಾನ್ ಅವರು ಬಾಹ್ಯಾಕಾಶಕ್ಕೆ ಏರಿದ ಪ್ರಥಮ ಜರ್ಮನ್ ಎಂಬ ಕೀರ್ತಿಗೆ ಭಾಜನರಾದರು.

1874: ತತ್ವಜ್ಞಾನಿ, ರಾಜಕಾರಣಿ, ಈಶ್ವರ ಶರಣ್ ಮುನ್ಷಿ ಜನನ.

1965: ಸಾಹಿತಿ ಎಂ.ಎಸ್. ವೇದಾ ಜನನ.

1959: ಸಾಹಿತಿ ರಹಮತ್ ತರೀಕೆರೆ ಜನನ.

1955: ಸಾಹಿತಿ ಟಿ.ಪಿ. ಅಶೋಕ ಜನನ.

1933: ಸಾಹಿತಿ ಟಿ.ವಿ. ವೆಂಕಟಾಚಲ ಶಾಸ್ತ್ರಿ ಜನನ.

1920: ಅಮೆರಿಕದಲ್ಲಿ ಈದಿನವನ್ನು `ಮಹಿಳಾ ಸಮಾನತಾ ದಿನ' ಎಂಬುದಾಗಿ ಆಚರಿಸಲಾಗುತ್ತದೆ. 72 ವರ್ಷಗಳ ಹೋರಾಟದ ಬಳಿಕ ಈದಿನ ಅಮೆರಿಕದ ಸಂವಿಧಾನಕ್ಕೆ 19ನೇ ತಿದ್ದುಪಡಿ ತಂದು ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಲಾಯಿತು.

1918: `ಎಚ್ಚೆಸ್ಕೆ' ಎಂದೇ ಖ್ಯಾತರಾದ ಎಚ್. ಎಸ್. ಕೃಷ್ಣಸ್ವಾಮಿ ಅಯ್ಯಂಗಾರರು ಎಚ್. ಶ್ರೀನಿವಾಸ ಅಯ್ಯಂಗಾರ್- ಅಲಮೇಲಮ್ಮ ದಂಪತಿಯ ಮಗನಾಗಿ ಮೈಸೂರು ಜಿಲ್ಲೆಯ ಕೃಷ್ಣರಾಜ ನಗರ ತಾಲ್ಲೂಕಿನ ಹಳೆಯೂರು ಗ್ರಾಮದಲ್ಲಿ ಜನಿಸಿದರು. ಕಾದಂಬರಿ ಹಾಗೂ ಇತರ ಹಲವಾರು ಕೃತಿಗಳನ್ನು ರಚಿಸಿದ ಎಚ್ಚೆಸ್ಕೆ ಹಾ.ಮಾ.ನಾ. ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾದವರು.

1883: ಕ್ರಾಕಟೋವಾ ಜ್ವಾಲಾಮುಖಿ ಭೀಕರವಾಗಿ ಬಾಯ್ದೆರೆದ ದಿನವಿದು. ಮಧ್ಯಾಹ್ನ 1 ಗಂಟೆಗೆ ಮೊದಲ ಬಾರಿಗೆ ಸ್ಫೋಟಗಳ ಸರಣಿ ಸಂಭವಿಸಿತು. 2 ಗಂಟೆಗೆ ಬೂದಿಯ ಕರಿಮೋಡ ಕ್ರಾಕಟೋವಾದ ಮೇಲೆ 17 ಮೈಲುಗಳಷ್ಟು ಎತ್ತರಕ್ಕೆ ಎದ್ದು ನಿಂತಿತು. ಮರುದಿನ ಬೆಳಿಗ್ಗೆ ಹತ್ತು ಗಂಟೆ ವೇಳೆಗೆ ಜ್ವಾಲಾಮುಖಿ ಕ್ಲೈಮ್ಯಾಕ್ಸ್ ಹಂತವನ್ನು ತಲುಪಿತು. ಆಗ ಸಂಭವಿಸಿದ ಸ್ಫೋಟದ ಸದ್ದು 2200 ಮೈಲು ದೂರದ ಆಸ್ಟ್ರೇಲಿಯಾಕ್ಕೂ ಕೇಳಿಸಿತು. ಐವತ್ತು ಮೈಲುಗಳಷ್ಟು ದೂರಕ್ಕೆ ಬೂದಿ ಚಿಮ್ಮಿತು.

No comments:

Advertisement