ಇಂದಿನ ಇತಿಹಾಸ
ಅಕ್ಟೋಬರ್ 29
![](https://blogger.googleusercontent.com/img/b/R29vZ2xl/AVvXsEhuA0o1jwQZOHjmJCceFArkf_3W89xjQ1ux2XdyLYQy6nMaNbDCC8r8tke_I4w1Oe5h4gLWD4lXRHoaGdshsXGo1XPDYkexWvarHTmKyLN91XMDNaiUwxrp85diS-wINKQzBx1vWK_O21M/s320/mohammad-nashid.jpg)
ಹಿಂದೂ ಮಹಾಸಾಗರದ ದ್ವೀಪ ಸಮೂಹ ರಾಷ್ಟ್ರವಾದ ಮಾಲ್ಡೀವ್ಸಿನಲ್ಲಿ ಪ್ರಜಾತಾಂತ್ರಿಕ ಮಾದರಿಯಲ್ಲಿ ಇದೇ ಮೊತ್ತಮೊದಲ ಬಾರಿಗೆ ಹಿಂದಿನ ದಿನ ನಡೆದ ರಾಷ್ಟ್ರಾಧ್ಯಕ್ಷ ಚುನಾವಣೆಯಲ್ಲಿ ಮಾಜಿ ರಾಜಕೀಯ ಕೈದಿ ಮೊಹಮ್ಮದ್ ನಶೀದ್ ನಿಚ್ಚಳ ಗೆಲುವು ಸಾಧಿಸಿದರು. ಈ ಮೂಲಕ ಏಷ್ಯಾದ ದೀರ್ಘ ಕಾಲದ ಅಧ್ಯಕ್ಷರೆನಿಸಿಕೊಂಡಿದ್ದ ಮೊಹಮ್ಮದ್ ಅಬ್ದುಲ್ ಗಯೂಂ ಅಧಿಕಾರದಿಂದ ಪತನಗೊಂಡರು.
2008: ಬೆಂಗಳೂರು ಮಹದೇವಪುರ ಸಮೀಪದ ಸಿದ್ಧಾಪುರ ಗ್ರಾಮದ ಕೆರೆಗೆ ಹಾನಿಕಾರಕ ತ್ಯಾಜ್ಯ ಹರಿದು ಬಂದ ಪರಿಣಾಮ ಈದಿನ ಮುಂಜಾನೆ ಮೂವತ್ತು ಸಾವಿರಕ್ಕೂ ಹೆಚ್ಚು ಮೀನುಗಳು ಸತ್ತವು. ಕೆರೆಯ ಸುತ್ತಮುತ್ತಲ ವಸತಿ ಸಮುಚ್ಛಯಗಳಿಂದ ಹೊರಬರುವ ತ್ಯಾಜ್ಯವೇ ಮೀನುಗಳ ಸಾವಿಗೆ ಮುಖ್ಯ ಕಾರಣ. ಅಲ್ಲದೇ, ಕೆರೆಗೆ ಹೊಂದಿಕೊಂಡ ಕೆಲವು ಸಣ್ಣ ಕೈಗಾರಿಕಾ ಕೇಂದ್ರಗಳಿಂದಲೂ ವಿಷಯುಕ್ತ ಕೊಳಕು ನೀರನ್ನು ಕೆರೆಗೆ ಹರಿಯಬಿಡುತ್ತಿದ್ದುದು ಮತ್ತು ಬೆಮೆಲ್ ಬಡಾವಣೆಯಿಂದ ಒಳಚರಂಡಿ ನೀರು ಸಹ ಯಥೇಚ್ಛವಾಗಿ ಕೆರೆಯ ಒಡಲನ್ನು ಸೇರುತ್ತಿದ್ದುದರ ಪರಿಣಾಮವಾಗಿ ಈ ದುರಂತ ಸಂಭವಿಸಿತು.
2008: ಜರ್ಮನಿಯ ಬಾನ್ ನಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್ ಶಿಪ್ ಫೈನಲಿನಲ್ಲಿ ಒಟ್ಟು 6.5 ಪಾಯಿಂಟ್ ಸಂಗ್ರಹಿಸುವ ಮೂಲಕ ಭಾರತದ ಗ್ರ್ಯಾಂಡ್ ಚೆಸ್ ಮಾಸ್ಟರ್ ವಿಶ್ವನಾಥನ್ ಆನಂದ ಅವರು ರಷ್ಯಾದ ಗ್ರ್ಯಾಂಡ್ ಮಾಸ್ಟರ್ ವ್ಲಾಡಿಮಿರ್ ಕ್ರಾಮ್ನಿಕ್ ಅವರನ್ನು ಪರಾಭವಗೊಳಿಸಿ ಮತ್ತೆ ವಿಶ್ವ ಚೆಸ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ಈ ಮೂಲಕ ವಿಶ್ವ ಚದುರಂಗ ಲೋಕದಲ್ಲಿ ಭಾರತ ಮತ್ತೊಮ್ಮೆ ತನ್ನ ಪಾರಮ್ಯ ಮೆರೆಯಲು ಆನಂದ್ ಕಾರಣರಾದರು. ಕೇವಲ 4.5 ಪಾಯಿಂಟ್ ಗಳಿಸಿದ ಕ್ರಾಮ್ನಿಕ್ ನಿರಾಶೆ ಅನುಭವಿಸಿದರು. 2007ರಲ್ಲಿ ಮೆಕ್ಸಿಕೋದಲ್ಲಿ ನಡೆದ ವಿಶ್ವ ಚಾಂಪಿಯನ್ ಶಿಪ್ ಕಿರೀಟ ಕೂಡ ಆನಂದ್ ಪಾಲಾಗಿತ್ತು. 2000ದಲ್ಲಿ ಟೆಹರಾನಿನಲ್ಲಿ ಆನಂದ್ ಮೊದಲ ಬಾರಿ ವಿಶ್ವ ಚಾಂಪಿಯನ್ ಆಗಿದ್ದರು.
2008: ನೈಋತ್ಯ ಪಾಕಿಸ್ಥಾನದ ಬಲೂಚಿಸ್ಥಾನದಲ್ಲಿ ಬೆಳಗಿನ ಜಾವ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಕನಿಷ್ಠ 170 ಜನ ಸತ್ತು, ಸಾವಿರಾರು ಜನ ಗಾಯಗೊಂಡರು. ಸುಮಾರು 500ಕ್ಕೂ ಹೆಚ್ಚು ಮನೆಗಳು ನಾಶವಾಗಿ, 15,000ಕ್ಕೂ ಹೆಚ್ಚು ಜನ ನಿರ್ವಸಿತರಾದರು. ಪ್ರಾಂತ್ಯ ರಾಜಧಾನಿ ಕ್ವೆಟ್ಟಾದ ಈಶಾನ್ಯಕ್ಕೆ 60 ಕಿ.ಮೀ. ದೂರದಲ್ಲಿ ಕೇಂದ್ರ ಬಿಂದು ಹೊಂದಿದ್ದ ರಿಕ್ಟರ್ ಮಾಪಕದಲ್ಲಿ 6.4ರಷ್ಟು ತೀವ್ರತೆ ಇದ್ದ ಈ ಭೂಕಂಪ ಬೆಳಿಗ್ಗೆ 5.10ಕ್ಕೆ ಸಂಭವಿಸಿತು. ಜéಿಯಾರತ್ ಮತ್ತು ಪಿಶಿನ್ ಜಿಲ್ಲೆಗಳು ಅತಿ ಹೆಚ್ಚು ಹಾನಿಗೆ ತುತ್ತಾದವು.
2008: ಹಿಂದೂ ಮಹಾಸಾಗರದ ದ್ವೀಪ ಸಮೂಹ ರಾಷ್ಟ್ರವಾದ ಮಾಲ್ಡೀವ್ಸಿನಲ್ಲಿ ಪ್ರಜಾತಾಂತ್ರಿಕ ಮಾದರಿಯಲ್ಲಿ ಇದೇ ಮೊತ್ತಮೊದಲ ಬಾರಿಗೆ ಹಿಂದಿನ ದಿನ ನಡೆದ ರಾಷ್ಟ್ರಾಧ್ಯಕ್ಷ ಚುನಾವಣೆಯಲ್ಲಿ ಮಾಜಿ ರಾಜಕೀಯ ಕೈದಿ ಮೊಹಮ್ಮದ್ ನಶೀದ್ ನಿಚ್ಚಳ ಗೆಲುವು ಸಾಧಿಸಿದರು. ಈ ಮೂಲಕ ಏಷ್ಯಾದ ದೀರ್ಘ ಕಾಲದ ಅಧ್ಯಕ್ಷರೆನಿಸಿಕೊಂಡಿದ್ದ ಮೊಹಮ್ಮದ್ ಅಬ್ದುಲ್ ಗಯೂಂ ಅಧಿಕಾರದಿಂದ ಪತನಗೊಂಡರು. 41ರ ಪ್ರಾಯದ ನಶೀದ್ ಪ್ರವಾಸಿಗರ ಸ್ವರ್ಗವೆಂಬ ಖ್ಯಾತಿಯ ಈ ನಾಡಿನಲ್ಲಿ ನಡೆದ ಪ್ರಜಾಪ್ರಭುತ್ವ ಪರ ಹೋರಾಟಗಳ ನೇತೃತ್ವ ವಹಿಸಿದ್ದರು. `ವರ್ಚಸ್ವೀ ನಾಯಕ'ರೆಂಬ ಹಾಗೂ `ಅಂತಃಸಾಕ್ಷಿಯಿರುವ ಕೈದಿ' ಎಂಬ ಹೆಗ್ಗಳಿಕೆಗಳನ್ನೂ ಅವರು ಹೊಂದಿದ್ದರು.
2008: ಅಗ್ಗದ ದರದ ವಿಮಾನಯಾನ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಡೆನ್ಮಾರ್ಕಿನ ಸ್ಟೆರ್ಲಿಂಗ್ ಏರ್ ಲೈನ್ಸ್ ತಾನು ದಿವಾಳಿ ಎಂದು ಕೊಪೆನ್ ಹೇಗನ್ನಿನಲ್ಲಿ ಘೋಷಿಸಿಕೊಂಡು, ತನ್ನೆಲ್ಲಾ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿತು. ಇದರಿಂದಾಗಿ ಈ ಸಂಸ್ಥೆಯಲ್ಲಿದ್ದ 1,100 ಉದ್ಯೋಗಿಗಳ ಭವಿಷ್ಯ ಅತಂತ್ರವಾಯಿತು. ಜೊತೆಗೆ ಟಿಕೆಟ್ ಪಡೆದ ಸಾವಿರಾರು ಪ್ರಯಾಣಿಕರೂ ಹತಾಶರಾದರು. ವೆಬ್ ಸೈಟಿನಲ್ಲಿ ತಾನು ದಿವಾಳಿ ಎಂದು ಹೇಳಿದ ಸಂಸ್ಥೆ, ಜಾಗತಿಕ ಆರ್ಥಿಕ ಬಿಕ್ಕಟ್ಟು, ಹೆಚ್ಚಿದ ತೈಲ ಬೆಲೆಗಳಿಂದಾಗಿ ಸಂಸ್ಥೆಯ ಷೇರುದಾರರು ತೀವ್ರ ನಷ್ಟಕ್ಕೆ ಸಿಲುಕಿದರು, ಇದರಿಂದ ಸಂಸ್ಥೆಯನ್ನು ದಿವಾಳಿ ಎಂದು ಘೋಷಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿತು.
2008: ಮಾಲೆಗಾಂವ್ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ನಿವೃತ್ತ ಮೇಜರ್ ರಮೇಶ್ ಚಂದ್ರ ಉಪಾಧ್ಯ ಮತ್ತು ಕಾರ್ಯಕರ್ತ ಸಮೀರ್ ಕುಲಕರ್ಣಿ ಎಂಬುವವರನ್ನು ಪೊಲೀಸರು ಪುಣೆಯಲ್ಲಿ ಬಂಧಿಸಿದರು. ಈ ನಡುವೆ ಅವರಿಗೆ ಸಂಬಂಧಿಸಿದ ಹಿಂದುತ್ವ ಸಂಘಟನೆ `ಅಭಿನವ್ ಭಾರತ್'ಯ ವೆಬ್ ಸೈಟ್ ಅಂತರ್ಜಾಲ ತಾಣದಿಂದ ಕಣ್ಮರೆಯಾಯಿತು.
2007: ತೀವ್ರವಾಗಿ ಅಸ್ವಸ್ಥರಾಗಿದ್ದ ಖ್ಯಾತ ರಂಗಕರ್ಮಿ ಪ್ರೇಮಾ ಕಾರಂತ (73) ಬೆಂಗಳೂರಿನ ಟ್ರಿನಿಟಿ ಆಸ್ಪತ್ರೆಯಲ್ಲಿ ಈದಿನ ಮಧ್ಯಾಹ್ನ ನಿಧನರಾದರು. ಸಂಜೆ ವಿಲ್ಸನ್ ಗಾರ್ಡನ್ ವಿದ್ಯುತ್ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು. ಪ್ರಸಿದ್ಧ ವ್ಯಕ್ತಿಯ ಪತ್ನಿಯಾಗಿದ್ದೂ ಅಸ್ತಿತ್ವವನ್ನು ಉಳಿಸಿಕೊಂಡ ಅಪರೂಪದ ಮಹಿಳೆಯರ ಸಾಲಿಗೆ ಸೇರಿದವರು ಪ್ರೇಮಾ ಕಾರಂತ. ಅವರ ಆಸಕ್ತಿ ಹಾಗೂ ಸಾಧನೆ ಸಿನಿಮಾ, ರಂಗಭೂಮಿ, ಭಾಷಾಂತರ, ಬೋಧನೆ- ಹೀಗೆ ಹಲವು ಕ್ಷೇತ್ರಗಳಲ್ಲಿ ಹಂಚಿಹೋಗಿತ್ತು.
ದೆಹಲಿಯ `ರಾಷ್ಟ್ರೀಯ ನಾಟಕ ಶಾಲೆ'ಯಲ್ಲಿ ರಂಗಭೂಮಿಯ ಪಟ್ಟುಗಳನ್ನು ಕಲಿಯುವಾಗ ಅಂಕುರಿಸಿದ ಪ್ರೇಮ ಬಿ.ವಿ. ಕಾರಂತರೊಂದಿಗೆ ಪ್ರೇಮ ವಿವಾಹದಲ್ಲಿ ಪರ್ಯವಸಾನಗೊಂಡಿತ್ತು. ಪ್ರೇಮ ವಿವಾಹದ ಸಂಕಷ್ಟ, ಆರ್ಥಿಕ ಅಡಚಣೆಗಳ ನಡುವೆ ಸಾಗಿದ ಅವರ ಬಾಳ ಹಾದಿಯಲ್ಲಿ ಗುರಿ ನಿಚ್ಚಳವಾಗಿತ್ತು. ರಂಗಭೂಮಿಯ ಹಾದಿಯ ಪಯಣ ಲೌಕಿಕ ತೊಂದರೆಗಳನ್ನು ಮರೆಸುವಷ್ಟು ಪ್ರಭಾವಶಾಲಿಯಾಗಿತ್ತು. ಅರವತ್ತು ಎಪ್ಪತ್ತರ ದಶಕ ಕಾರಂತರು ನಾಟಕ ಹಾಗೂ ಸಿನಿಮಾಗಳಲ್ಲಿ ನಿರಂತರ ಪ್ರಯೋಗಶೀಲರಾಗಿದ್ದಾಗ, ಆರಂಭವಾದ ಕನ್ನಡದ ಹೊಸ ಅಲೆಯ ಚಿತ್ರಗಳ ನಿರ್ಮಾಣ ಸೇರಿದಂತೆ ಪತಿಯ ಎಲ್ಲ ಪ್ರಯೋಗಗಳಲ್ಲಿ ಪ್ರೇಮಾ ಸಹಕಾರವಿತ್ತು. `ಹಂಸಗೀತೆ' ಚಿತ್ರಕ್ಕೆ ಪ್ರೇಮಾ ಅವರೇ ವಸ್ತ್ರವಿನ್ಯಾಸ ಮಾಡಿದ್ದರು. ಜೊತೆಗೆ ಪ್ರೇಮಾ ತಮ್ಮದೇ ಆದ ದಾರಿಯಲ್ಲಿಯೂ ನಡೆದರು. ಅವರು ನಿರ್ದೇಶಿಸಿದ `ಫಣಿಯಮ್ಮ' ರಾಷ್ಟ್ರಪ್ರಶಸ್ತಿ ಪಡೆಯಿತು. ಎಂ.ಕೆ. ಇಂದಿರಾ ಅವರ ಕಾದಂಬರಿ ಆಧಾರಿತ ಚಿತ್ರದಲ್ಲಿ ಪ್ರೇಮಾ ಎಳೆಯ ವಯಸ್ಸಿನಲ್ಲಿ ವಿಧವೆಯಾದ ಹೆಣ್ಣುಮಗಳ ತವಕ ತಲ್ಲಣಗಳನ್ನು ಅದ್ಭುತವಾಗಿ ಚಿತ್ರಿಸಿದ್ದು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಿತು. ಪ್ರೇಮಾ ನಿರ್ದೇಶಿಸಿದ `ಬಂಧ್ ಝರೋಕೆ' ಹಿಂದಿಚಿತ್ರ ರಾಷ್ಟ್ರೀಯ ಮಟ್ಟದಲ್ಲಿ ಅವರಿಗೆ ಹೆಸರು ತಂದು ಕೊಟ್ಟಿತ್ತು. `ನಕ್ಕಳಾ ರಾಜಕುಮಾರಿ', `ಲಕ್ಷ್ಮೀ ಕಟಾಕ್ಷ', `ಅಬ್ದುಲ್ಲಾ ಗೋಪಾಲ' ಅವರ ನಿರ್ದೇಶನದ ಇತರ ಚಿತ್ರಗಳು. ಮಕ್ಕಳನ್ನು ಕಂಡರೆ ಪ್ರೇಮಾ ಅವರಿಗೆ ಮೈಮರೆಯುವಷ್ಟು ಅಕ್ಕರೆ. `ಬೆನಕ' ಮಕ್ಕಳ ರಂಗತಂಡದ ಮೂಲಕ ಅವರು ಮಕ್ಕಳ ನಾಟಕಗಳನ್ನು ರೂಪಿಸಲಿಕ್ಕೆ ಈ ಅಕ್ಕರೆಯೇ ಕಾರಣ. ಅವರ ನಿರ್ದೇಶನದ `ಆಲೀಬಾಬಾ' ನಾಟಕ- ಆ ನಾಟಕದ ಸಂಗೀತ- ಮಕ್ಕಳಿಗೆ ತುಂಬಾ ಇಷ್ಟವಾಗಿತ್ತು, `ಸಿಂದಾಬಾದ್', `ನಕ್ಕಳಾ ರಾಜಕುಮಾರಿ', `ಇಸ್ಪೀಟ್ ರಾಜ್ಯ', `ಪಂಜರಶಾಲೆ', `ಅಳಿಲು ರಾಮಾಯಣ', `ಸುಣ್ಣದ ಸುತ್ತು', `ಕುಣಿಯೋ ಕತ್ತೆ', `ಹಿಂದುಮುಂದಾದ ಕಾಳಿ' ಅವರ ಕೆಲವು ಜನಪ್ರಿಯ ಮಕ್ಕಳ ನಾಟಕಗಳು. ಷೇಕ್ಸ್ಪಿಯರ್ನ `ಕಿಂಗ್ಲಿಯರ್' ಹಾಗೂ ಎಚ್.ಎಸ್. ವೆಂಕಟೇಶಮೂರ್ತಿಯವರ `ಹುಚ್ಚುದೊರೆ ಮತ್ತು ಮೂವರು ಮಕ್ಕಳು' ನಾಟಕಗಳು ಪ್ರೇಮಾ ಅವರ ಯಶಸ್ವಿ ನಾಟಕಗಳಲ್ಲಿ ಕೆಲವು. ವಿಪರ್ಯಾಸವೆಂದರೆ ಮಕ್ಕಳ ಬಗ್ಗೆ ಇಷ್ಟೆಲ್ಲ ಕಾಳಜಿ ಹೊಂದಿದ್ದ ಪ್ರೇಮಾ ಅವರಿಗೆ ಸಂತಾನವಿರಲಿಲ್ಲ. ಭಾಷಾಂತರದಲ್ಲೂ ಪ್ರೇಮಾ ಪ್ರವೀಣೆಯಾಗಿದ್ದರು. ಹಿಂದಿಯಿಂದ ಶಂಭುಮಿತ್ರ, ವಿಜಯ್ ತೆಂಡೂಲ್ಕರರ ಕೃತಿಗಳನ್ನು, ಗುಜರಾತಿ ಏಕಾಂಕಗಳನ್ನು, ಇಂಗ್ಲಿಷಿನ ಕೆಲವು ಕೃತಿಗಳನ್ನು ಕನ್ನಡಕ್ಕೆ ತಂದಿದ್ದರು. ರಾಷ್ಟ್ರೀಯ ಪುಸ್ತಕ ಟ್ರಸ್ಟಿನಿಂದ ಭಾಷಾಂತರಕಾರಳಾಗಿ ಮನ್ನಣೆ ಪಡೆದಿದ್ದರು. ಪ್ರೇಮಾ ಅವರು ರಂಗಕ್ಕೆ ತಂದ ದ.ರಾ. ಬೇಂದ್ರೆಯವರ `ಸಾಯೋ ಆಟ', ಗಿರೀಶ್ ಕಾರ್ನಾಡರ `ಹಿಟ್ಟಿನ ಹುಂಜ', ವಿಜಯ್ ತೆಂಡೂಲ್ಕರರ `ಹಕ್ಕಿ ಹಾರುತಿದೆ ನೋಡಿದಿರಾ', ಶ್ರೀರಂಗರ `ಸ್ವಗತ ಸಂಭಾಷಣೆ', ಲಂಕೇಶರ `ಪೊಲೀಸರಿದ್ದಾರೆ ಎಚ್ಚರಿಕೆ' ನಾಟಕಗಳು ಅವರ ರಂಗಪ್ರೀತಿ ಹಾಗೂ ಬದ್ಧತೆಗೆ ಸಾಕ್ಷಿಯಾಗಿದ್ದವು. ದೇಶದ ವಿವಿಧ ಭಾಗಗಳಲ್ಲಿ ರಂಗಭೂಮಿಗೆ ಸಂಬಂಧಿಸಿದ ಕಮ್ಮಟಗಳನ್ನು ನಡೆಸಿದ್ದರು. ಸಿನೆಮಾಗಳಿಗೆ ಲಭಿಸಿದ ರಾಷ್ಟ್ರಪ್ರಶಸ್ತಿಗಳ ಜೊತೆಗೆ ಪ್ರೇಮಾ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯೂ ಲಭಿಸಿತ್ತು. ಪತಿ ಬಿ.ವಿ. ಕಾರಂತರ ನಿಧನದ ಬಳಿಕ ಅವರು ಸ್ಥಾಪಿಸಿದ್ದ `ಬಾಬುಕೋಡಿ ಪ್ರತಿಷ್ಠಾನ'ದ ಮೂಲಕ ಪತಿಯ ಕನಸುಗಳನ್ನು ನನಸಾಗಿಸುವ ಯತ್ನದಲ್ಲಿ ಪ್ರೇಮಾ ಸಕ್ರಿಯರಾಗಿದ್ದರು. ಕಾರಂತರ ಬೃಹತ್ ಪುಸ್ತಕ ಸಂಗ್ರಹ ಹಾಗೂ ದೇಶವಿದೇಶಗಳ- ಅಪರೂಪದ ವಾದ್ಯಗಳನ್ನೊಳಗೊಂಡ- ವಸ್ತು ಸಂಗ್ರಹವನ್ನು ಜೋಪಾನವಾಗಿರಿಸುವ ಕನಸು ಅವರಿಗಿತ್ತು.
2007: ವಾಯುಭಾರ ಕುಸಿತದಿಂದಾಗಿ ವರ್ಷದ ಅತ್ಯಂತ ಬಿರುಸಿನ ಮಳೆಯ ಆರ್ಭಟಕ್ಕೆ ಸಿಲುಕಿದ ತಮಿಳುನಾಡಿನ ವಿವಿಧೆಡೆಗಳಲ್ಲಿ 48 ಗಂಟೆಗಳ ಅವಧಿಯಲ್ಲಿ 30 ಜನ ಮೃತರಾಗಿ ಕೋಟ್ಯಂತರ ರೂಪಾಯಿಗಳ ಆಸ್ತಿಪಾಸ್ತಿ ನಷ್ಟವಾಯಿತು. ತಂಜಾವೂರು, ಕಡಲೂರು, ಚೆನ್ನೈ ಜಿಲ್ಲೆಗಳಲ್ಲಿ ಮಳೆಯಿಂದ ಅಪಾರ ಹಾನಿ ಉಂಟಾಯಿತು.
2007: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಈದಿನ ವಹಿವಾಟಿನಲ್ಲಿ ದೀಪಾವಳಿಯ ರಾಕೆಟ್ನಂತೆ ಚಿಮ್ಮಿ 20 ಸಾವಿರ ಅಂಶಗಳ ಮಾಂತ್ರಿಕ ಸಂಖ್ಯೆ ದಾಟಿ ಹೊಸ ಇತಿಹಾಸ ಬರೆಯಿತು.
2007: ಚಿತ್ರ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್, ನಟ ಅನಂತನಾಗ್, ಬಿಲಿಯರ್ಡ್ಸ್ ವಿಶ್ವ ಚಾಂಪಿಯನ್ ಪಂಕಜ್ ಆಡ್ವಾಣಿ ಸಹಿತ ವಿವಿಧ ಕ್ಷೇತ್ರಗಳ ಗಣ್ಯರಿಗೆ 2007ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಯಿತು. 51ನೇ ರಾಜ್ಯೋತ್ಸವ ನಿಮಿತ್ತ 51 ಮಂದಿಯನ್ನು ಪ್ರಶಸ್ತಿಗೆ ಆರಿಸಲಾಯಿತು.
2007: ನಿರೀಕ್ಷಿತ ಬೆಂಬಲ ಸಿಗದೆ ಮುಗ್ಗರಿಸಿದ ಎಂ.ಪಿ.ಪ್ರಕಾಶ್ ಬಣ, ರಾಜ್ಯಪಾಲರ ಮುಂದೆ ಬಿಜೆಪಿ- ಜೆಡಿಎಸ್ ಮೈತ್ರಿ ಕೂಟದ ಸ್ವಯಂ ಪ್ರೇರಿತ ಶಕ್ತಿ ಪ್ರದರ್ಶನ, ರಾಜಭವನದಲ್ಲಿ 129 ಶಾಸಕರ ಖುದ್ದು ಹಾಜರಿ ಹಾಜರಿ, ಮರು ಮೈತ್ರಿಗೆ ಕಾಂಗ್ರೆಸ್ಸಿನಿಂದ ಮುಂದುವರೆದ ಕಿರಿಕಿರಿ, ತಮಗೆ ಅವಕಾಶ ನೀಡುವಲ್ಲಿ ರಾಜ್ಯಪಾಲರು ವಿಳಂಬ ಮಾಡುತ್ತಿದ್ದಾರೆಂಬ ಮಿತ್ರ ಪಕ್ಷಗಳ ತೀವ್ರ ಅಸಮಾಧಾನ- ಈ ಪ್ರಮುಖ ಬೆಳವಣಿಗೆಗಳು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಈದಿನ ನಡೆದವು. ಇಡೀದಿನ ರಾಜಕೀಯ ಚಟುವಟಿಕೆಗಳು ನಡೆದರೂ ರಾಜ್ಯಪಾಲರ ಮನದಿಂಗಿತ ಬಹಿರಂಗಗೊಳ್ಳದ ಕಾರಣ ಪರ್ಯಾಯ ಸರ್ಕಾರ ರಚನೆ ಸಂಬಂಧದ ಅನಿಶ್ಚಿತತೆ ಮುಂದುವರೆಯಿತು. ಬಿಜೆಪಿ ಮತ್ತು ಜೆಡಿಎಸ್ ಜಂಟಿ ಶಾಸಕಾಂಗ ಪಕ್ಷದ ನಾಯಕರಾಗಿ ಬಿ.ಎಸ್. ಯಡಿಯೂರಪ್ಪ ಆಯ್ಕೆಯಾದರು. ವಿಂಡ್ಸರ್ ಮ್ಯಾನರಿನಲ್ಲಿ ಸಂಜೆ ಹದಿನೈದು ನಿಮಿಷಗಳ ಕಾಲ ನಡೆದ ಜಂಟಿ ಸಭೆಯಲ್ಲಿ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹೆಸರನ್ನು ಸೂಚಿಸಿದರು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಬಿಜೆಪಿ- ಜೆಡಿಎಸ್ ರಾಜ್ಯ ಘಟಕಗಳ ಅಧ್ಯಕ್ಷರಾದ ಸದಾನಂದಗೌಡ ಮತ್ತು ಮೆರಾಜ್ದುದೀನ್ ಪಟೇಲ್, ಶಾಸಕರು ಭಾಗವಹಿಸಿದ್ದರು.
2006: ನೇತಾಜಿ ಸುಭಾಶ್ಚಂದ್ರ ಬೋಸ್ ಅವರು ಅಕ್ಟೋಬರ್ 27ರಂದು ಮಧ್ಯಪ್ರದೇಶದಲ್ಲಿ ನಿಧನರಾಗಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಪೊಲೀಸರು ಗುನಾದಲ್ಲಿ ತನಿಖೆ ಆರಂಭಿಸಿದರು. ಮಧ್ಯ ಪ್ರದೇಶದ ಅಶೋಕ ನಗರ ಜಿಲ್ಲೆಯ ಸಾಯಿಜಿ ಗ್ರಾಮದಲ್ಲಿ 30 ವರ್ಷಗಳಿಂದ ವಾಸವಾಗಿದ್ದ 100ಕ್ಕೂ ಹೆಚ್ಚು ವಯಸ್ಸಿನ ಸಂತ ಬಾಬಾ ಲಾಲ್ ಜಿ ಮಹಾರಾಜ್ ಎರಡು ದಿನಗಳ ಹಿಂದೆ ಮರಣಶಯ್ಯೆಯಲ್ಲಿ ಇದ್ದಾಗ ತಾವೇ ನೇತಾಜಿ ಸುಭಾಶ್ ಚಂದ್ರ ಬೋಸ್ ಎಂಬುದಾಗಿ ಒಪ್ಪಿಕೊಂಡಿದ್ದಾರೆ ಎಂಬುದಾಗಿ ಮಾಜಿ ಗ್ರಾಮ ಸರಪಂಚ ಗಜೇಂದ್ರ ಸಿಂಗ್ ರಘುವಂಶಿ ಪ್ರಕಟಿಸಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ವಾಪಸಾಗುವಾಗ ಬಾಬಾ ತಾವೇ ನೇತಾಜಿ ಸುಭಾಶ್ ಚಂದ್ರ ಬೋಸ್ ಎಂಬುದಾಗಿ ಒಪ್ಪಿಕೊಂಡಿದ್ದು, ಅಂತ್ಯಕ್ರಿಯೆ ಪೂರ್ಣಗೊಳ್ಳುವವರೆಗೆ ಈ ವಿಚಾರವನ್ನು ಬಹಿರಂಗ ಪಡಿಸಬಾರದು ಎಂದು ನಮಗೆ ಸೂಚಿಸಿದ್ದರು' ಎಂದು ರಘುವಂಶಿ ಹೇಳಿದರು. ಸಾಯಿಜಿ ಗ್ರಾಮಕ್ಕೆ ಬರುವ ಮುನ್ನ ಬಾಬಾ ಲಾಲ್ ಜಿ ಮಹಾರಾಜ್ ಅವರು ನೆರೆಯ ಚಾಕ್ ಚಿರೋಲಿ ಗ್ರಾಮದಲ್ಲಿ 20 ವರ್ಷಗಳ ಕಾಲ ವಾಸವಾಗಿದ್ದರು. ಸಾಯುವ ಮುನ್ನ ಲಾಲ್ ಜಿ ಅವರು ತಮ್ಮ ಬಳಿ ಇದ್ದ ಹಲವಾರು ಪುಸ್ತಕಗಳನ್ನು ರಘುವಂಶಿ ಅವರಿಗೆ ನೀಡಿದ್ದರು. ಇದಲ್ಲದೆ ಬೌದ್ಧಮತಕ್ಕೆ ಸಂಬಂಧಿಸಿದ ಹಲವಾರು ಪುಸ್ತಕಗಳು, ಹಳೆಯ ರೈಲು ಮತ್ತು ಬಸ್ ಟಿಕೆಟ್ಟುಗಳು, ಸುಭಾಶ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ ಹಳೆ ವೃತ್ತ ಪತ್ರಿಕಾ ತುಣುಕುಗಳು ಮತ್ತು ಫೊಟೋಗಳು ಆಶ್ರಮದಲ್ಲಿ ಲಭಿಸಿದವು.
2006: ಬಾಂಗ್ಲಾದೇಶದ ರಾಷ್ಟ್ರಪತಿ ಇವಾಜ್ದುದೀನ್ ಅಹ್ಮದ್ ಅವರು ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. ಅವರೇ ಜನವರಿ ತಿಂಗಳಲ್ಲಿ ನಡೆಯಲಿರುವ ಮಹಾಚುನಾವಣೆಯ ಮೇಲುಸ್ತುವಾರಿ ನೋಡಿಕೊಳ್ಳುವುದಾಗಿ ಪ್ರಕಟಿಸಿದರು. ಸುಪ್ರೀಂ ಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ.ಎಂ. ಹಸನ್ ಹಂಗಾಮಿ ಆಡಳಿತಗಾರರಾಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೆ ವಿರೋಧ ಪಕ್ಷಗಳಿಂದ ವ್ಯಕ್ತವಾದ ತೀವ್ರ ಪ್ರತಿಭಟನೆ ಹಾಗೂ ಹಸನ್ ಅವರು ಹಠಾತ್ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಪ್ರಮಾಣ ವಚನ ಸಮಾರಂಭ ಮುಂದೂಡಿದ್ದ ಇವಾಜುದ್ದೀನ್ ಅಹ್ಮದ್ ಅವರು ಮೌನ ಮುರಿದು ರಾಜಕೀಯ ಪಕ್ಷಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಈ ಕ್ರಮ ಕೈಗೊಂಡರು.
2006: ನೈಜೀರಿಯಾದ ರಾಜಧಾನಿ ಅಬುಜಾ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿದ ವಿಮಾನ ಕೆಲ ಕ್ಷಣಗಳಲ್ಲೇ ಪತನಗೊಂಡು 100ಕ್ಕೂ ಹೆಚ್ಚು ಮಂದಿ ಮೃತರಾದರು. ವಿಮಾನದಲ್ಲಿ 110ಕ್ಕೂ ಹೆಚ್ಚು ಪ್ರಯಾಣಿಕರಿದ್ದರು.
2006: ಇನ್ಫೋಸಿಸ್ ಟೆಕ್ನಾಲಜೀಸ್ ಸಿಇಓ ನಂದನ್ ನೀಲೇಕಣಿ ಅವರಿಗೆ 2006ನೇ ಸಾಲಿನ ಡೇಟಾ ಕ್ವೆಸ್ಟ್ ಐಟಿ ವ್ಯಕ್ತಿ ಪ್ರಶಸ್ತಿ ಲಭಿಸಿತು. ಡೇಟಾಕ್ವೆಸ್ಟ್ ಜೀವಮಾನದ ಸಾಧನೆ ಪ್ರಶಸ್ತಿಯನ್ನು ಪ್ಲೆಕ್ಸ್ ಟ್ರಾನಿಕ್ಸ್ ಸಾಫ್ಟ್ ವೇರ್ ಮುಖ್ಯಸ್ಥರಾಗಿದ್ದ ಅರುಣ್ ಕುಮಾರ್ ಅವರಿಗೆ ಮರಣೋತ್ತರವಾಗಿ ನೀಡಲಾಯಿತು.
2006: ಕನ್ನಡದ ಹಿರಿಯ ನಟಿ ಜಯಶ್ರೀ (77) ಅವರು ಮೈಸೂರಿನಲ್ಲಿ ನಿಧನರಾದರು. `ಭಕ್ತ ಕುಂಬಾರ' ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಜಯಶ್ರೀ ಕನ್ನಡ, ತಮಿಳು ಸೇರಿದಂತೆ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು.ನಾಯಕಿಯಾಗಿ ನಟಿಸಿದ ಮೊದಲ ಚಿತ್ರ ನಾಗಕನ್ನಿಕಾದಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವ ಮೂಲಕ ಆ ಕಾಲದಲ್ಲೇ ಪ್ರೇಕ್ಷಕರು ಹುಬ್ಬೇರಿಸುವಂತೆ ಮಾಡಿದ್ದರು. 1970-71ರ ಸಾಲಿನಲ್ಲಿ `ಅಮರ ಭಾರತಿ' ಚಿತ್ರಕ್ಕೆ ಶ್ರೇಷ್ಠ ಪೋಷಕ ನಟಿ ಪ್ರಶಸ್ತಿ ಲಭಿಸಿತ್ತು.
2006: ಕನಕದಾಸರ ನೆಲೆವೀಡಾದ ಹಾವೇರಿ ಜಿಲ್ಲೆ ಕಾಗಿನೆಲೆಯ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಎರಡನೇ ಜಗದ್ಗುರುಗಳಾಗಿ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಅಧಿಕಾರ ಸ್ವೀಕರಿಸಿದರು.
2005: ಆಂಧ್ರಪ್ರದೇಶದ ನಲಗೊಂಡ ಜಿಲ್ಲೆಯಲ್ಲಿ ನಸುಕಿನ 4.40ರ ವೇಳೆಗೆ ಸಿಕಂದರಾಬಾದ್ ಡೆಲ್ಟಾ ಫಾಸ್ಟ್ ಪ್ಯಾಸೆಂಜರ್ ರೈಲಿನ ಬೋಗಿಗಳು ಪ್ರವಾಹದಿಂದ ಕೊಚ್ಚಿಹೋದ ಸೇತುವೆ ಮೇಲೆ ಹಳಿತಪ್ಪಿದವು. 150ಕ್ಕೂ ಹೆಚ್ಚು ಜನ ಮೃತರಾಗಿ 200ಕ್ಕೂ ಹೆಚ್ಚು ಜನ ಗಾಯಗೊಂಡರು.
2005: ದೆಹಲಿಯ ಪಹಾಡ್ ಗಂಜ್, ಸರೋಜಿನಿ ನಗರ ಮಾರುಕಟ್ಟೆ, ಗೋವಿಂದ ಪುರಿಯ ಬಸ್ಸುಗಳಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟಗಳಲ್ಲಿ 62 ಜನ ಮೃತರಾಗಿ ನೂರಾರು ಮಂದಿ ಗಾಯಗೊಂಡರು.
2005: ಇಪ್ಪತ್ಮೂರು ವರ್ಷಗಳ ಕಾನೂನು ಸಮರದ ಬಳಿಕ ಬೆಂಗಳೂರು ನಗರ ರೇಸ್ ಕೋರ್ಸ್ ರಸ್ತೆಯ ಸಂಖ್ಯೆ 3ರ ಪಕ್ಷದ ಕಚೇರಿ ಕಟ್ಟಡವನ್ನು ತೆರವುಗೊಳಿಸಿ ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಡುವಂತೆ ಬೆಂಗಳೂರಿನ ಸಿವಿಲ್ ನ್ಯಾಯಾಲಯ ಜನತಾದಳಕ್ಕೆ (ಎಸ್) ಆದೇಶ ನೀಡಿತು. ಈ ಕಟ್ಟಡದ ಮಾಲೀಕತ್ವ ಕೋರಿ ಕಾಂಗ್ರೆಸ್ 1982ರಲ್ಲಿ ಅರ್ಜಿ ಸಲ್ಲಿಸಿತ್ತು. ಅಂದಿನ ಜನತಾ ಪಕ್ಷವೂ ಇಂತಹುದೇ ಅರ್ಜಿ ಸಲ್ಲಿಸಿತ್ತು. ನಂತರ ಕಟ್ಟಡ ವಶಪಡಿಸಿಕೊಂಡ ಜನತಾದಳ (ಎಸ್) ಪ್ರತಿವಾದಿಯಾಗಿ ಸೇರಿಕೊಂಡು ಕಟ್ಟಡ ತನಗೆ ಸೇರಬೇಕು ಎಂದು ವಾದಿಸಿತ್ತು.
2005: ಮಂಗಳ ಗ್ರಹವು ಭೂಮಿಗೆ ಅತ್ಯಂತ ಸಮೀಪ ಬಂತು. ನಾಸಾದ ಹಬಲ್ ಬಾಹ್ಯಾಕಾಶ ದೂರದರ್ಶಕವು ಈ ವಿದ್ಯಮಾನವನ್ನು ಸೆರೆ ಹಿಡಿಯಿತು. 2018ರಲ್ಲಿ ಇನ್ನೊಮ್ಮೆ ಇಂತಹ ಘಟನೆ ಘಟಿಸಲಿದೆ.
2000: ಶಾರ್ಜಾದಲ್ಲಿ ನಡೆದ ಕೋಕಾ-ಕೋಲಾ ಪಂದ್ಯದಲ್ಲಿ ಭಾರತವು ಶ್ರೀಲಂಕೆಯ ಎದುರಲ್ಲಿ ಅತ್ಯಂತ ಹೀನಾಯ ಸೋಲು ಅನುಭವಿಸಿತು. ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕಡಿಮೆ ಅಂದರೆ 54 ರನ್ನುಗಳಿಗೆ ಅದು ಆಲ್ ಔಟ್ ಆಯಿತು. ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧ ಕೇವಲ 63 ರನ್ ಗಳಿಕೆಯೊಂದಿಗೆ ಭಾರತ ಸೋಲು ಅನುಭವಿಸಿತ್ತು.
1990: ಖ್ಯಾತ ಹಿಂದಿ ನಟ ವಿನೋದ ಮೆಹ್ರಾ ನಿಧನ.
1987: ಥಾಮಸ್ ಹೀಯರ್ನ್ಸ್ ಲಾಸ್ ಏಂಜೆಲಿಸ್ ನಲ್ಲಿ ಜಾಗತಿಕ ಮಿಡ್ಲ್ ವೇಯ್ಟ್ ಪ್ರಶಸ್ತಿಯನ್ನು ಗೆದ್ದುಕೊಂಡರು. ಇದರೊಂದಿಗೆ ನಾಲ್ಕು ಬೇರೆ ಬೇರೆ ವೇಯ್ಟ್ ಗಳಲ್ಲಿ ಜಾಗತಿಕ ಪ್ರಶಸ್ತಿಗಳನ್ನು ಗೆದ್ದ ಪ್ರಥಮ ಬಾಕ್ಸರ್ ಎಂಬ ಎಂಬ ಹೆಗ್ಗಳಿಕೆ ಅವರದಾಯಿತು.
1967: ತತ್ವಜ್ಞಾನಿ ಕುರ್ತಕೋಟಿ ಲಿಂಗನಗೌಡ ನಿಧನ.
1959: `ಆಸ್ಟೆರಿಕ್ಸ್' ಎಂಬ ಕಾಮಿಕ್ಸ್ ಕಥಾಸರಣಿ ಫ್ರೆಂಚ್ ಸಾಪ್ತಾಹಿಕ ಮ್ಯಾಗಜಿನ್ `ಪೈಲೊಟ್' ನಲ್ಲಿ ಜನಿಸಿತು. ಈವರೆಗೆ `ಆಸ್ಟೆರಿಕ್ಸ್' ನ 35 ಕಥೆಗಳು ಪ್ರಕಟವಾಗಿದ್ದು 40 ಭಾಷೆಗಳಿಗೆ ಅದು ಭಾಷಾಂತರಗೊಂಡಿದೆ. 22 ಕೋಟಿ ಪ್ರತಿಗಳು ಮಾರಾಟವಾಗಿವೆ.
1936: ಸಾಹಿತಿ ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ ಅವರು ನೈಲಾಡಿ ರಾಮಭಟ್ಟ- ಮೂಕಾಂಬಿಕೆ ದಂಪತಿಯ ಮಗನಾಗಿ ಶಿವಮೊಗ್ಗದಲ್ಲಿ ಜನಿಸಿದರು.
1931: ಸಾಹಿತಿ ಎಂ.ಜಿ. ಭೀಮರಾವ್ (ವಂಶಿ) ಜನನ.
1931: ಸಾಹಿತಿ ಆರ್.ಜಿ. ಕುಲಕರ್ಣಿ ಜನನ.
1929: ಅಮೆರಿಕದ ಸ್ಟಾಕ್ ಮಾರ್ಕೆಟ್ `ಕರಾಳ ಮಂಗಳವಾರ'ದ ದಿನ ಕುಸಿಯಿತು. 1.60 ಕೋಟಿ ಷೇರುಗಳ ಮಾರಾಟಗೊಂಡವು. ಇದರಿಂದಾಗಿ ಸ್ಟಾಕ್ ಮಾರ್ಕೆಟಿನಲ್ಲಿ ಬೆಲೆಗಳು ಸಂಪೂರ್ಣ ಕುಸಿದು ಬಿದ್ದವು. ಬ್ಯಾಂಕ್ ಸಾಲಗಳನ್ನು ಭರಿಸಲು ಸಾಧ್ಯವಾಗುವುದಿಲ್ಲ ಎಂಬದಾಗಿ ಹರಡಿದ ಊಹಾಪೋಹಗಳು ಸ್ಟಾಕ್ ಮಾರ್ಕೆಟಿನ ಈ ಭಾರೀ ಕುಸಿತಕ್ಕೆ ಕಾರಣವಾಗಿದ್ದವು. ಇದರಿಂದಾಗಿ ಭಾರೀ ಬೆಲೆ ಇಳಿಕೆ ಉಂಟಾಗಿ ಪಶ್ಚಿಮದ ಕೈಗಾರಿಕಾ ದೇಶಗಳಲ್ಲಿ 10 ವರ್ಷಗಳ ಕಾಲ ಆರ್ಥಿಕತೆ ಸ್ಥಗಿತಗೊಂಡಿತು.
1923: `ಟರ್ಕಿಶ್' ರಿಪಬ್ಲಿಕ್ ಜನಿಸಿತು. ಕೆಮಲ್ ಅಟಾಟರ್ಕ್ ಮೊದಲ ಅಧ್ಯಕ್ಷರಾದರು. ಅಂಕಾರಾ ಅದರ ರಾಜಧಾನಿಯಾಯಿತು.
1920: ಸ್ವಾತಂತ್ರ್ಯ ಹೋರಾಟಗಾರ ಮೌಲಾನಾ ಮಹಮೂದ್ ಹಸನ್ ಅವರಿಂದ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾಕ್ಕೆ ಅಡಿಗಲ್ಲು ಹಾಕಲಾಯಿತು.
1916: ಸಾಹಿತಿ ಚಂದ್ರಭಾಗಿ ಕೆ. ರೈ ಜನನ.
1907: ಸಾಹಿತಿ ಡಿ.ವಿ. ಶೇಷಗಿರಿ ರಾವ್ ಜನನ.
1903: ಇಪ್ಪತ್ತನೇ ಶತಮಾನದಲ್ಲಿ ಮಹಿಳೆಯರ ಉನ್ನತಿಗಾಗಿ ದುಡಿದ ಕಮಲಾದೇವಿ ಚಟ್ಟೋಪಾಧ್ಯಾಯ ನಿಧನರಾದರು.
1897: ಅಡಾಲ್ಫ್ ಹಿಟ್ಲರನ ಪ್ರಚಾರ ಸಚಿವ ಜೋಸೆಫ್ ಗೋಬೆಲ್ಸ್ (1897-1945) ಜನ್ಮದಿನ. ಜರ್ಮನ್ನರಲ್ಲಿ ಹಿಟ್ಲರನ ನಾಝಿ ಆಡಳಿತ ಬಗ್ಗೆ ಅನುಕಂಪ ಮೂಡುವಂತೆ ಮಾಡುವಲ್ಲಿ ಈತನ ಪ್ರಚಾರ ತಂತ್ರಗಳೇ ಪ್ರಮುಖ ಪಾತ್ರ ವಹಿಸಿದ್ದವು.
1863: ಹೆನ್ರಿ ಡ್ಯುನಾನ್ ಅವರು ಇಂಟರ್ ನ್ಯಾಷನಲ್ ರೆಡ್ ಕ್ರಾಸ್ ಸಂಸ್ಥೆಯನ್ನು ಸ್ಥಾಪಿಸಿದರು. ಉತ್ತರ ಇಟಲಿಯ ಮಂಟುವಾ ಸಮೀಪ ಸೊಲ್ಫರಿನೋ ಕದನದಲ್ಲಿ ಗಾಯಗೊಂಡವರ ಪರಿಸ್ಥಿತಿಯನ್ನು ಕಂಡು ಮನಮಿಡಿದ ಹೆನ್ರಿ ಅವರ ನೆರವಿಗಾಗಿ ಈ ಸಂಸ್ಥೆ ಸ್ಥಾಪನೆಗೆ ಮುಂದಾದರು.
No comments:
Post a Comment