Saturday, November 23, 2019

ಸುಪ್ರೀಂಕೋರ್ಟ್ ಮೆಟ್ಟಿಲೇರಿದ ದಿಂಡೋಶಿ ಮತದಾರ

ಸುಪ್ರೀಂಕೋರ್ಟ್ ಮೆಟ್ಟಿಲೇರಿದ  ದಿಂಡೋಶಿ ಮತದಾರ
ನವದೆಹಲಿ: ಮಹಾರಾಷ್ಟ್ರದಲ್ಲಿ ಚುನಾವಣೆಯ ಬಳಿಕ ಸರ್ಕಾರ ರಚಿಸುವ ಸಲುವಾಗಿ ಶಿವಸೇನಾ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಮತ್ತು ಕಾಂಗ್ರೆಸ್ ಮಾಡುತ್ತಿರುವಚುನಾವಣೋತ್ತರ  ಮೈತ್ರಿಕೂಟಕ್ಕೆ  ತಡೆ ಹಾಕುವಂತೆ ಕೋರಿ 2019 ನವೆಂಬರ್ 22ರ  ಶುಕ್ರವಾರ ಮತದಾರರೊಬ್ಬರು ಸುಪ್ರೀಂಕೋರ್ಟ್ ಮೆಟ್ಟಿಲೇರಿದರು.
ರಾಜ್ಯದ ಪಶ್ಚಿಮ ಭಾಗದ ದಿಂಡೋಶಿ ಕ್ಷೇತ್ರದ ಮತದಾರ ಸುರೇಂದ್ರ ಇಂದ್ರಬಹಾದುರ್ ಸಿಂಗ್ ಅವರು ಸುಪ್ರೀಂಕೋರ್ಟಿಗೆ ಅರ್ಜಿಯನ್ನು ಸಲ್ಲಿಸಿದ್ದು ಮೂರೂ ಪಕ್ಷಗಳು ಚುನಾವಣೆ ಬಳಿಕ ಮೈತ್ರಿಕೂಟ ಮಾಡಿಕೊಳ್ಳುವ ಮೂಲಕ ಮತದಾರರು ನೀಡಿದಜನಾದೇಶವನ್ನು ಪರಾಭವಗೊಳಿಸಲು ಯತ್ನಿಸುತ್ತಿದ್ದಾರೆಎಂದು ವಾದಿಸಿದರು.
ಮೂರೂ ಪಕ್ಷಗಳು ವಿಧಾನಸಭಾ ಚುನಾವಣೆಯಲ್ಲಿ ಪರಸ್ಪರ ವಿರುದ್ಧವಾಗಿ ಹೋರಾಡಿವೆ ಮತ್ತು ಫಲಿತಾಂಶದ ಬಳಿಕ ಸರ್ಕಾರ ರಚಿಸಲು ಕೈಜೋಡಿಸುತ್ತಿವೆ. ಅವರು ಜನರ ಆದೇಶವನ್ನು ಪರಾಭವಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಸುರೇಂದ್ರ ಇಂದ್ರಬಹಾದುರ್ ಸಿಂಗ್ ಹೇಳಿದರು.
ರಾಜ್ಯದ ನಾಲ್ಕು ಪ್ರಮುಖ ರಾಜಕೀಯ ಪಕ್ಷಗಳು ಚುನಾವಣಾ ಪೂರ್ವ ಮೈತ್ರಿಯನ್ನು ಮಾಡಿಕೊಂಡು ವರ್ಷ ಅಕ್ಟೋಬರ್ ತಿಂಗಳಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಪರಸ್ಪರ ವಿರುದ್ಧ ಹೋರಾಟ ನಡೆಸಿದ್ದವು.

ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು  ಶಿವಸೇನಾಮಹಾಯುತಿಯನ್ನು ರಚಿಸಿಕೊಂಡಿದ್ದರೆ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ಮಹಾ ಅಘಾದಿಯನ್ನು ರಚಿಸಿಕೊಂಡಿದ್ದವು.
ಚುನಾವಣಾ ಪೂರ್ವ ಮೈತ್ರಿಯ ಕಾರಣ ಮತದಾರರು ತಾವುಮಹಾಯುತಿಗೆ ಮತ ನೀಡುತ್ತಿದ್ದೇವೆ ಎಂಬುದಾಗಿ ಭಾವಿಸಿಕೊಂಡು ಬಿಜೆಪಿ ಅಥವಾ ಶಿವಸೇನಾ ಅಭ್ಯರ್ಥಿಗೆ ಮತದಾನ ಮಾಡಿದ್ದರು. ಅದೇ ರೀತಿ, ಎನ್ಸಿಪಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದವರು ತಾವುಮಹಾ ಅಘಾದಿಯನ್ನು ಬೆಂಬಲಿಸುತ್ತಿದ್ದೇವೆ ಎಂದು ಭಾವಿಸಿಕೊಂಡಿದ್ದರು ಎಂದು ಅರ್ಜಿದಾರರು ತಿಳಿಸಿದರು.
ಫಲಿತಾಂಶ ಪ್ರಕಟಗೊಂಡಾಗ ಬಿಜೆಪಿ-ಶಿವಸೇನಾ ಮೈತ್ರಿಕೂಟಕ್ಕೆ ೧೬೧ ಸ್ಥಾನಗಳೊಂದಿಗೆ ಸ್ಪಷ್ಟ ಬಹುಮತ ಪ್ರಾಪ್ತವಾಗಿತ್ತು ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಸ್ಥಾನ ಮತ್ತು ಸಮಾನಸಂಖ್ಯೆಯ ಖಾತೆಗಳಿಗಾಗಿ ಜಗಳಾಡಿಕೊಂಡು ಬಿಜೆಪಿ ಮತ್ತು ಶಿವಸೇನಾ ತಮ್ಮ ದಶಕಗಳಷ್ಟು ಹಳೆಯ ಮೈತ್ರಿಯನ್ನು ಕೊನೆಗೊಳಿಸಿದವು. ಆಗ ರಾಜ್ಯಪಾಲ ಬಿಎಸ್ ಕೋಶಿಯಾರಿ ಅವರು ಕ್ರಮವಾಗಿ  ಸೇನಾ ಮತ್ತು ಎನ್ಸಿಪಿಯನ್ನು ಸರ್ಕಾರ ರಚನೆಗೆ ಆಹ್ವಾನಿಸಿದರು. ಆದರೆ ಯಾವುದೇ ಪಕ್ಷಕ್ಕೆ ರಾಜ್ಯಪಾಲರು ಸೂಚಿಸಿದ ಗಡುವಿನ ಒಳಗಾಗಿ ಬಹುಮತ ಸಾಬೀತು ಪಡಿಸಲು ಸಾಧ್ಯವಾಗಲಿಲ್ಲ.

ಯಾವುದೇ ಪಕ್ಷವೂ ರಾಜ್ಯದಲ್ಲಿ ಸರ್ಕಾರ ರಚನೆಯ ಸ್ಥಿತಿಯಲ್ಲಿ ಇಲ್ಲ ಎಂಬುದಾಗಿ ರಾಜ್ಯಪಾಲರು ಕೇಂದ್ರಕ್ಕೆ ತಿಳಿಸಿದ ಬಳಿಕ  2019 ನವೆಂಬರ್ ೧೨ರಂದು ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೊಳಿಸಲಾಯಿತು.

ಉದ್ಧವ್ ಠಾಕ್ರೆ ಅವರ ಶಿವಸೇನೆಯು ಈಗ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಹಕ್ಕು ಮಂಡಿಸುವ ಸಲುವಾಗಿ ಎನ್ಸಿಪಿ ಮತ್ತು ಕಾಂಗ್ರೆಸ್ ಜೊತೆ ಹೆಜ್ಜೆ ಹಾಕುತ್ತಿದೆ. ಇದು ಶಿವಸೇನೆಯು ಬಿಜೆಪಿಯ ಜೊತೆಗೆ ಮೈತ್ರಿ ಹೊಂದಿದೆ ಎಂಬುದಾಗಿ ನಂಬಿ ಮತ ನೀಡಿದ ಮತದಾರಿಗೆ ಮಾಡಿದ ವಂಚನೆಯಾಗುತ್ತದೆ ಎಂದು ಅರ್ಜಿದಾರರು ಹೇಳಿದರು.
ಮಹಾರಾಷ್ಟ್ರದ ರಾಜ್ಯಪಾಲರಿಗೆಜನಪ್ರಿಯ ಸರ್ಕಾರ ಕಲ್ಪನೆಯನ್ನು ಪರಿಗಣಿಸಬೇಕಾದ ಸಾಂವಿಧಾನಿಕ ಬದ್ಧತೆ ಇದೆ. ಹಾಲಿ ಚುನಾವಣೋತ್ತರ ಮೈತ್ರಿಯು ಜನರು ತಿರಸ್ಕರಿಸಿದ ಎರಡು ರಾಜಕೀಯ ಪಕ್ಷಗಳ ಅಧಿಕಾರ ಹಂಚಿಕೆ ಕಲ್ಪನೆಯನ್ನು ಆಧರಿಸಿದೆ ಎಂದು ಅರ್ಜಿದಾರರು ವಾದಿಸಿದರು.
ಅರ್ಜಿದಾರರು ತಮ್ಮ ವಾದಕ್ಕೆ ಸಮರ್ಥನೆಯಾಗಿ ಪಂಛಿ ಆಯೋಗದ ವರದಿಯನ್ನು ಉಲ್ಲೇಖಿಸಿದರು. ಅಸ್ಥಿರ ಸಂಸತ್ತು ರಚನೆಯಾದ ಸಂದರ್ಭದಲ್ಲಿ ಸರ್ಕಾರ ರಚನೆಗೆ ಆಹ್ವಾನಿಸಲು ಚುನಾವಣಾ ಪೂರ್ವ ಮೈತ್ರಿಕೂಟವನ್ನು ಒಂದೇ ಪಕ್ಷ ಎಂಬುದಾಗಿ ಪರಿಗಣಿಸಬೇಕು ಎಂಬುದಾಗಿ ಪಂಛಿ ಆಯೋಗ ತನ್ನ ವರದಿಯಲ್ಲಿ ತಿಳಿಸಿದ್ದನ್ನು ಅರ್ಜಿದಾರರು ನಮೂದಿಸಿದರು.
ಆದ್ದರಿಂದ ಶಿವಸೇನಾ ಮತ್ತು ಎನ್ಸಿಪಿಗೆ ಸರ್ಕಾರ ರಚಿಸುವಂತೆ ರಾಜ್ಯಪಾಲರು ನೀಡುವ ಆಹ್ವಾನ ಪಂಛಿ ಆಯೋಗದ ಶಿಫಾರಸುಗಳಿಗೆ ವಿರುದ್ಧವಾಗಿದೆ ಎಂದು ಅರ್ಜಿದಾರರು ವಾದಿಸಿದರು.
ಎಸ್ ಆರ್ ಬೊಮ್ಮಾಯಿ ವರ್ಸಸ್ ಭಾರತ ಒಕ್ಕೂಟ ಪ್ರಕರಣದಲ್ಲಿ ಸುಪ್ರೀಂಕೋರ್ಟಿನ  ಸಪ್ತ ಸದಸ್ಯ ಸಂವಿಧಾನ ಪೀಠವು ನೀಡಿದ್ದ ತೀರ್ಪನ್ನೂ ಅರ್ಜಿದಾರರು ಉಲ್ಲೇಖಿಸಿದ್ದಾರೆ. ರಾಜ್ಯಪಾಲರು ಸದನದಲ್ಲಿ ಬಹುಮತ ಹೊಂದಿರುವ ಪಕ್ಷದ ನಾಯಕನನ್ನು ಅಥವಾ ಬಹುಮತ ಹೊಂದಿರುವ ಗುಂಪನ್ನು ಸರ್ಕಾರ ರಚನೆಗೆ ಆಹ್ವಾನಿಸಬೇಕು ಎಂದು ಸುಪ್ರೀಂಕೋರ್ಟ್ ಪ್ರಕರಣದಲ್ಲಿ ಹೇಳಿತ್ತು.

ಆದಾಗ್ಯೂ, ಸುಪ್ರೀಂಕೋರ್ಟ್ ತೀರ್ಪಿನಲ್ಲಿರಾಜಕೀಯ ಪಕ್ಷ ಅಥವಾ ಪಕ್ಷಗಳು ಗುಂಪುಎಂಬ ಅಭಿವ್ಯಕ್ತಿ ಬಗ್ಗೆ ಸ್ಪಷ್ಟತೆಯ ಕೊರತೆ ಇದೆ. ಅಭಿವ್ಯಕ್ತಿಯು ಪರಸ್ಪರ ವಿರುದ್ಧ ಸ್ಪರ್ಧಿಸಿದ ಪಕ್ಷಗಳ ಗುಂಪನ್ನೂ ಒಳಗೊಳ್ಳುತ್ತದೆಯೇ ಎಂಬುದು ಇನ್ನೂ ಇತ್ಯರ್ಥವಾಗಿಲ್ಲಎಂದು ಅರ್ಜಿದಾರರು ಹೇಳಿದರು.

ರಾಜ್ಯದ
ಹಾಲಿ ಶಾಸನಾತ್ಮಕ ಮತ್ತು ಸಾಂವಿಧಾನಿಕ ಶೂನ್ಯವನ್ನು ತುಂಬಲು ಮಧ್ಯಪ್ರವೇಶ ಮಾಡುವಂತೆ ಅರ್ಜಿದಾರರು ಸುಪ್ರೀಂಕೋರ್ಟಿಗೆ ಮನವಿ ಮಾಡಿದರು.  ಶಿವಸೇನಾ, ಎನ್ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳನ್ನು ಸರ್ಕಾರ ರಚಿಸಲು ಆಹ್ವಾನ ನೀಡದಂತೆ ರಾಜ್ಯಪಾಲರನ್ನು ನಿರ್ಬಂಧಿಸಬೇಕು ಎಂದು ಅರ್ಜಿದಾರರು ಸುಪ್ರೀಂಕೋರ್ಟಿಗೆ ಮನವಿ ಮಾಡಿದರು.

No comments:

Advertisement