My Blog List

Saturday, November 23, 2019

ಕಡುವೈರಿಗಳ 'ಮಹಾಮೈತ್ರಿ' ಕೂಟಕ್ಕೆ ಉದ್ಧವ್ ನೇತಾರ

ಕಡುವೈರಿಗಳ  'ಮಹಾಮೈತ್ರಿ' ಕೂಟಕ್ಕೆ  ಉದ್ಧವ್ ನೇತಾರ
ತ್ರಿಪಕ್ಷಗಳ ಸಭೆಯ ಬಳಿಕ ಶರದ್ ಪವಾರ್ ಪ್ರಕಟಣೆ
ಮುಂಬೈ: ಮೂರು ಕಡುವೈರಿ ಪಕ್ಷಗಳಾದ ಶಿವಸೇನಾ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ಮೈತ್ರಿಕೂಟವನ್ನು ೫೯ರ ಹರೆಯದ ಉದ್ಧವ್ ಠಾಕ್ರೆ ಅವರು ಮುನ್ನಡೆಸಲಿದ್ದಾರೆ. ಮೂರೂ ಪಕ್ಷಗಳ ಜಂಟಿ ಸಭೆಯಲ್ಲಿ 2019 ನವೆಂಬರ್ 22ರ  ಶುಕ್ರವಾರ ಇದನ್ನು ತೀರ್ಮಾನಿಸಲಾಯಿತು.

ತ್ರಿಪಕ್ಷ ಮೈತ್ರಿಕೂಟವು ಮಹಾರಾಷ್ಟ್ರದ ಮುಂದಿನ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದೆ ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಜಂಟಿ ಸಭೆಯ ಬಳಿಕ ಇಲ್ಲಿ ಪ್ರಕಟಿಸಿದರು.

ಮುಂಬೈಯ ನೆಹರೂ ಕೇಂದ್ರದಲ್ಲಿ ನಡೆದ ಮೂರೂ ಪಕ್ಷಗಳ ನಾಯಕರ ಅತ್ಯಪರೂಪದ ಸಭೆಯ ಬಳಿಕ ಶರದ್ ಪವಾರ್ ಅವರ ಪ್ರಕಟಣೆ ಹೊರಬಿದ್ದಿತು. ಸಭೆಯು ಮೈತ್ರಿಕೂಟದ ಮೂಲ ನಿಯಮಗಳಿಗೆ ಅಂತಿಮ ಮುದ್ರೆಯನ್ನು ಒತ್ತಿತು.

ಮುಖ್ಯಮಂತ್ರಿ ಸ್ಥಾನವನ್ನು ಹಂಚಿಕೊಳ್ಳಲು ಭಾರತೀಯ ಜನತಾ ಪಕ್ಷವು ನಿರಾಕರಿಸಿದ ಬಳಿಕ ಅದರ ಜೊತೆಗಿನ ಮೂರು ದಶಕಗಳ ಮೈತ್ರಿಯನ್ನು ಮುರಿದುಕೊಂಡ ಶಿವಸೇನೆಯು ಈಗ ನೂತನ ಮೈತ್ರಿಕೂಟದ ನೇತಾರನಾಗಿ ಮುಂದಿನ ಐದು ವರ್ಷಗಳಿಗೆ ಸರ್ಕಾರದ ಉನ್ನತ ಸ್ಥಾನವನ್ನು ಹೊಂದಲಿದೆ.

ಸರ್ಕಾರ ರಚನೆಯ ಹಕ್ಕು ಮಂಡಿಸಲು ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರ ಬಳಿ ಭೇಟಿಗೆ ಯಾವಾಗ ಸಮಯ ಕೋರಬೇಕು ಎಂಬ ಬಗ್ಗೆ ಮೈತ್ರಿಕೂಟದ ನಾಯಕರು ಶನಿವಾರ ನಿರ್ಧರಿಸಲಿದ್ದಾರೆ ಎಂದು ಪವಾರ್ ಅವರು ವರದಿಗಾರರಿಗೆ ತಿಳಿಸಿದರು.

ಸಭೆಯ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವೀರಾಜ್ ಚವಾಣ್ ಅವರುಎಲ್ಲ ಪಕ್ಷಗಳ ಎಲ್ಲ ಹಿರಿಯ ನಾಯಕರೂ ಹಾಜರಿದ್ದರು. ಮಾತುಕತೆಗಳು ಅತ್ಯಂತ ಧನಾತ್ಮಕವಾಗಿದ್ದವು. ಮಾತುಕತೆಗಳು ಶನಿವಾರವೂ ಮುಂದುವರೆಯಲಿವೆಎಂದು ಹೇಳಿದರು.

ದೆಹಲಿ ಪಯಣ ರದ್ದು ಪಡಿಸಿದ ರಾಜ್ಯಪಾಲರು: ಮೂರು ಪಕ್ಷಗಳು ತಮ್ಮ ಸೈದ್ಧಾಂತಿಕ ಭಿನ್ನಮತಗಳನ್ನು ಮೀರಿ ಸರ್ಕಾರ ರಚನೆಗಾಗಿ ಸಮಾನ ಕಾರ್ಯಸೂಚಿ ರೂಪಿಸಲು ಸಮರ್ಥರಾಗುತ್ತಿರುಂತೆ ಕಂಡು ಬಂದ ಹಿನ್ನೆಲೆಯಲ್ಲಿ,  ರಾಜ್ಯಪಾಲ ಕೋಶಿಯಾರಿ ಅವರು ತಮ್ಮ ಶುಕ್ರವಾರದ ದೆಹಲಿ ಪಯಣವನ್ನು ರದ್ದು ಪಡಿಸಿದ್ದರು. ರಾಷ್ಟ್ರದ ರಾಜಧಾನಿಯಲ್ಲಿ ಅವರು ರಾಜ್ಯಪಾಲರ ಸಮ್ಮೇಳನದಲ್ಲಿ ಪಾಲ್ಗೊಳ್ಳಬೇಕಿತ್ತು.

ನಿತಿನ್ ಗಡ್ಕರಿ ಕಟು ಟೀಕೆ: ಕಳೆದ ತಿಂಗಳು ನಡೆದ ವಿಧಾನಸಭಾ ಚುನಾವಣೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಉದಯಿಸಿದ್ದ ಭಾರತೀಯ ಜನತಾ ಪಕ್ಷವು ಸಮಿಶ್ರ ಸರ್ಕಾರದ ಬಗ್ಗೆ ಈವರೆಗೆ ತನ್ನ ಪ್ರತಿಕ್ರಿಯೆಯನ್ನು ನೀಡಿಲ್ಲ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಮಾತ್ರ ಬಿಜೆಪಿ ಜೊತೆಗಿನ ಮೈತ್ರಿಯನ್ನು ಕಡಿದುಕೊಳ್ಳುವ ಶಿವಸೇನೆಯ ನಿರ್ಧಾರವನ್ನು ಖಂಡಿಸಿ ಅದುಹಿಂದುತ್ವದ ಹಿತಕ್ಕೆ ಧಕ್ಕೆ ಉಂಟು ಮಾಡಲಿದೆಎಂದು ಹೇಳಿದ್ದರು.

ಹೊಸದಾಗಿ ರೂಪಿಸಲಾಗಿರುವ ಮೈತ್ರಿಕೂಟವು ಆರು ಅಥವಾ ಎಂಟು ತಿಂಗಳುಗಳಿಗಿಂತ ಹೆಚ್ಚು ಕಾಲ ಬಾಳುವುದಿಲ್ಲ ಎಂದೂ ಗಡ್ಕರಿ ಭವಿಷ್ಯ ನುಡಿದಿದ್ದರು.

ಸರ್ವಾನುಮತದ ಆಯ್ಕೆ- ಪವಾರ್:  ಮೂರು ಪಕ್ಷಗಳ ಸಭೆಯ ಬಳಿಕ ನೀಡಿದ ಹೇಳಿಕೆಯಲ್ಲಿ ಶರದ್ ಪವಾರ್ ಅವರು ಶಿವಸೇನೆಯ ಉದ್ಧವ್ ಠಾಕ್ರೆ ಅವರನ್ನು ಮಹಾರಾಷ್ಟ್ರವನ್ನು ಮುನ್ನಡೆಸಲು ನಾಯಕನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಮೂರು ಪಕ್ಷಗಳ ನಾಯಕರ ಸಭೆಗೆ ಮುನ್ನ ಮುಂಬೈಯಲ್ಲಿನ ಠಾಕ್ರೆ ಅವರ ನಿವಾಸವಾದ ಮಾತೋಶ್ರೀಯಲ್ಲಿ ನಡೆದ ಶಿವಸೇನಾ ಶಾಸಕರ ಸಭೆಯಲ್ಲಿ ಶಾಸಕರು ಸೇನಾ ಮುಖ್ಯಸ್ಥರ ಹೆಸರನ್ನು ರಾಜ್ಯದ ಉನ್ನತ ಹುದ್ದೆಗಾಗಿ ಒತ್ತಾಯಿಸಿದ್ದರು. ಬಳಿಕ ಎನ್ಸಿಪಿ ಕೂಡಾ ಶಾಸಕರ ಬೇಡಿಕೆಗೆ ಬೆಂಬಲ ನೀಡಿತು.

ಉದ್ಧವ್ ಠಾಕ್ರೆ ಅವರು ಮುಖ್ಯಮಂತ್ರಿಯಾಗಬೇಕು ಎಂಬುದು ಕಾಂಗ್ರೆಸ್-ಎನ್ಸಿಪಿ ಅಭಿಪ್ರಾಯ. ಹುದ್ದೆಗೆ ಬೇರೆ ಯಾವುದಾದರೂ ಹೆಸರನ್ನು ನಾವು ಬೆಂಬಲಿಸಬಹುದೇ ಎಂಬ ಬಗ್ಗೆ ಖಾತರಿ ಇಲ್ಲಎಂದು ಎನ್ಸಿಪಿಯ ನಾಯಕ ಛಗನ್ ಭುಜಬಲ್ ಹೇಳಿದ್ದರು. ಮುಖ್ಯಮಂತ್ರಿ ಸ್ಥಾನಕ್ಕೆ ಸಂಜಯ್ ರಾವತ್ ಮತ್ತು ಅರವಿಂದ ಸಾವಂತ್ ಅವರ ಹೆಸರುಗಳೂ ಮುಂಚೂಣಿಯಲ್ಲಿವೆ ಎಂಬ ವರ್ತಮಾನ ಹರಡಿದ ಕೆಲವು ಗಂಟೆಗಳ ಬಳಿಕ ನಾಯಕನಾಗಿ ಉದ್ಧವ್ ಠಾಕ್ರೆ ಆಯ್ಕೆಯ ವಿದ್ಯಮಾನ ನಡೆಯಿತು.

ಇದಕ್ಕೆ ಮುನ್ನ ಸಂಜಯ್ ರಾವತ್ ಅವರು ಶಿವಸೇನೆಯು ಐದು ವರ್ಷಗಳ ಅವಧಿಗೆ ಮುಖ್ಯಮಂತ್ರಿ ಸ್ಥಾನವನ್ನು ಪಡೆಯಲಿದೆ ಎಂದು ಹೇಳಿದ್ದರು. ಠಾಕ್ರೆ ಅವರಿಗೆ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಅಷ್ಟೊಂದು ಆಸಕ್ತಿ ಇಲ್ಲದ ಕಾರಣ ಉಳಿದ ಎರಡು ಹೆಸರುಗಳನ್ನು ಸಲಹೆ ಮಾಡಲಾಗಿದೆ ಎಂದು ಪಕ್ಷ ಮೂಲಗಳು ತಿಳಿಸಿದ್ದವು.

ಪಕ್ಷಾಧ್ಯಕ್ಷರಾಗಿ ಠಾಕ್ರೆ ಅವರು ಶರದ್ ಪವಾರ್ ಮತ್ತು ಸೋನಿಯಾ ಗಾಂಧಿ ಅವರ ಜೊತೆಗೆ ಕುಳಿತು ನೇರ ಮಾತುಕತೆ ನಡೆಸಲಿದ್ದಾರೆ ಮತ್ತು ಅವರಿಗೆ ವರದಿ ನೀಡಲಿದ್ದಾರೆ ಎಂದು ಮೂಲವೊಂದು ಹೇಳಿತ್ತು. ಮುಖ್ಯಮಂತ್ರಿ ಸ್ಥಾನಕ್ಕೆ ಕೇಳಿಬಂದಿದ್ದ ಇನ್ನೊಂದು ಹೆಸರು ಏಕನಾಥ ಶಿಂಧೆ ಅವರದಾಗಿದ್ದು, ಅವರು ಹೊಣೆ ಹೊತ್ತುಕೊಳ್ಳಲು ನಿರಾಕರಿಸಿದ್ದರು. 
ಮೂರೂ ಪಕ್ಷಗಳ ನಾಯಕರ ಸಭೆ ಮುಗಿಸಿ ಹೊರಬರುತ್ತಾ ಶರದ್ ಪವಾರ್ ಅವರು ಮಹಾರಾಷ್ಟ್ರ ಸರ್ಕಾರವನ್ನು ಮುನ್ನಡೆಸಲು ಉದ್ಧವ್ ಠಾಕ್ರೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು. ’ನಾವು ಮಹಾರಾಷ್ಟ್ರದ ಮುಂದಿನ ದಾರಿಯನ್ನು ನಿರ್ಧರಿಸಿದ್ದೇವೆಎಂದು ಉದ್ಧವ್ ಠಾಕ್ರೆ ನುಡಿದರು. ಮೂರೂ ಪಕ್ಷಗಳು ಶನಿವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಲಿವೆ ಎಂದು ಅವರು ಹೇಳಿದರು.

ಇದಕ್ಕೆ ಮುನ್ನ ಪತ್ರಕರ್ತರೊಂದಿಗೆ ಮಾತನಾಡುತ್ತಾ ಸಂಜಯ್ ರಾವತ್ ಅವರುಮೂರು ಪಕ್ಷಗಳ ಮೈತ್ರಿಕೂಟವು ಅಧಿಕಾರ ವಹಿಸಿಕೊಳ್ಳುವಾಗ ತಮ್ಮ ಪಕ್ಷವು ಮಹಾರಾಷ್ಟ್ರದ ಮುಖ್ಯಮಂತ್ರಿ ಸ್ಥಾನವನ್ನು ಪಡೆಯಲಿದೆಎಂದು ಹೇಳಿದ್ದರು. ಬಿಜೆಪಿಯು ಮುಖ್ಯಮಂತ್ರಿ ಸ್ಥಾನವನ್ನು ಸೇನಾ ಜೊತೆಗೆ ಹಂಚಿಕೊಳ್ಳಲು ಒಪ್ಪಿರುವ ವರದಿಗಳ ಬಗ್ಗೆ ಪ್ರಶ್ನಿಸಿದಾಗಕೊಡುಗೆಗಳ ಕಾಲ ಮುಗಿದಿದೆಎಂದು ರಾವತ್ ಉತ್ತರಿಸಿದರು.

ಹಿಂದಿನ ದಿನ ತಡರಾತ್ರಿಯ ಬೆಳವಣಿಗೆಯಲ್ಲಿ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಅವರ ಶಾಸಕ ಪುತ್ರ ಅದಿತ್ಯ ಠಾಕ್ರೆ ಅವರು ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಅವರನ್ನು ಎನ್ಸಿಪಿ ಮುಖ್ಯಸ್ಥನ  ದಕ್ಷಿಣ ಮುಂಬೈಯಸಿಲ್ವರ ಓಕ್ನಿವಾಸದಲ್ಲಿ ಭೇಟಿ ಮಾಡಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದರು. ಎನ್ಸಿಪಿ ಮತ್ತು ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರ ರಚಿಸುವ ಯತ್ನದ ಮುಂದುವರೆದ ಹೆಜ್ಜೆಯಾಗಿ ದಿಢೀರ್ ಸಭೆ ನಡೆದಿತ್ತು.

ನವದೆಹಲಿಯಿಂದ ಸಂಜೆ ವಾಪಸಾದ ರಾಜ್ಯಸಭಾ ಸಂಸದರೂ ಆದ ಶರದ್ ಪವಾರ್ ಅವರು ಠಾಕ್ರೆ ದ್ವಯರನ್ನು ಕರೆದಿದ್ದರು. ದಿಢೀರ್ ಸಭೆಯಲ್ಲಿ ಶಿವಸೇನಾ ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಅವರೂ ಪಾಲ್ಗೊಂಡಿದ್ದರು.

ಅದು ಉನ್ನತ ನಾಯಕರ ಸಭೆಯಾದ ಕಾರಣ ಅವರಿಗೆ ಮಾತ್ರವೇ ಏನು ಮಾತುಕತೆ ನಡೆಯಿತು ಎಂಬುದು ಗೊತ್ತಿರುತ್ತದೆ. ಆದರೆ ಮಾತುಕತೆಗಳು ಸರ್ಕಾರದಲ್ಲಿ ಹುದ್ದೆಗಳನ್ನು ಹಂಚಿಕೊಳ್ಳುವ ವಿಚಾರಕ್ಕೆ ಅಂತಿಮ ರೂಪ ನೀಡುವ ಬಗ್ಗೆ ಆಗಿರುವ ಸಾಧ್ಯತೆ ಇದೆಎಂದು ಎನ್ಸಿಪಿ ನಾಯಕರೊಬ್ಬರು ಹೇಳಿದ್ದರು.

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಕಾಂಗ್ರೆಸ್ ಮತ್ತು ಎನ್ಸಿಪಿ ಮಧ್ಯೆ ಸಂಪೂರ್ಣ ಸರ್ವಾನುಮತ ಇದೆ. ಇನ್ನು ಮೈತ್ರಿಯ ವಿನ್ಯಾಸವನ್ನು ಅಂತಿಮಗೊಳಿಸುವ ಬಗ್ಗೆ ಶಿವಸೇನೆ ಜೊತೆಗೆ ಮಾತುಕತೆ ನಡೆಯಲಿದೆ ಎಂದು ಕಾಂಗ್ರೆಸ್ ನಾಯಕ ಪೃಥ್ವೀರಾಜ್ ಚವಾಣ್ ಇದಕ್ಕೆ ಮುನ್ನ ಹೇಳಿದ್ದರು.

No comments:

Advertisement