Friday, December 13, 2019

ಅಯೋಧ್ಯಾ ತೀರ್ಪು ಅಂತಿಮ: ಎಲ್ಲ ಪುನರ್ ಪರಿಶೀಲನಾ ಅರ್ಜಿ ವಜಾ

ಅಯೋಧ್ಯಾ ತೀರ್ಪು ಅಂತಿಮ: ಎಲ್ಲ
ಪುನರ್ ಪರಿಶೀಲನಾ ಅರ್ಜಿ ವಜಾ

ರಾಮಮಂದಿರ ನಿರ್ಮಾಣಕ್ಕೆ ದಾರಿ ಸುಗಮಗೊಳಿಸಿದ ಸುಪ್ರೀಂಕೋರ್ಟ್
ನವದೆಹಲಿ: ಅಯೋಧ್ಯೆಯ ವಿವಾದಾತ್ಮಕ ನಿವೇಶನದಲ್ಲಿ ರಾಮಮಂದಿರ ನಿರ್ಮಾಣಕ್ಕೆ ದಾರಿ ಸುಗಮಗೊಳಿಸಿ ಅಯೋಧ್ಯಾ ಪ್ರಕರಣದಲ್ಲಿ ಪಂಚ ಸದಸ್ಯ ಸಂವಿಧಾನ ಪೀಠವು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಎಲ್ಲ ಪುನರ್ ಪರಿಶೀಲನಾ ಅರ್ಜಿಗಳನ್ನೂ ಸುಪ್ರೀಂಕೋರ್ಟ್  2019 ಡಿಸೆಂಬರ್ 12ರ ಗುರುವಾರ ವಜಾಗೊಳಿಸಿತು.

ಸಂವಿಧಾನ ಪೀಠದ ತೀರ್ಪಿನ ವಿರುದ್ಧ ಸಲ್ಲಿಕೆಯಾಗಿದ್ದ ಎಲ್ಲ ೧೮ ಪ್ರಕರಣಗಳನ್ನೂಕೊಠಡಿಯ ಒಳಗೆಪರಿಶೀಲಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ ಬೋಬ್ಡೆ ನೇತೃತ್ವದ ಪಂಚ ಸದಸ್ಯ ಸುಪ್ರೀಂಕೋರ್ಟ್ ಪೀಠವುಅರ್ಹತೆ ಇಲ್ಲಎಂಬ ನೆಲೆಯಲ್ಲಿ ಅವೆಲ್ಲವನ್ನೂ ವಜಾಗೊಳಿಸಿತು.

ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್, ಅಶೋಕ ಭೂಷಣ್, ಎಸ್ ನಜೀರ್ ಮತ್ತು ನಿವೃತ್ತ ಸಿಜೆಐ ರಂಜನ್ ಗೊಗೋಯಿ ಅವರ ಬದಲಿಗೆ ನೇಮಕಗೊಂಡಿದ್ದ ಸಂಜೀವ ಖನ್ನಾ ಅವರು ಪೀಠದ ಇತರ ಸದಸ್ಯರಾಗಿದ್ದರು. ಪೀಠವು ಸೂಕ್ಷ್ಮ ವಿವಾದದಲ್ಲಿ ನಾಲ್ಕು ಮೂಲ ಖಟ್ಲೆಗಳಲ್ಲಿ ಕಕ್ಷಿದಾರರಾಗಿದ್ದವರ ಪುನರ್ ಪರಿಶೀಲನಾ ಅರ್ಜಿಗಳನ್ನು ಮಾತ್ರವೇ ಪರಿಗಣಿಸಿತು.

ಪಂಚ ಸದಸ್ಯ ಸಂವಿಧಾನ ಪೀಠದ ಗುರುವಾರದ ಆದೇಶವು ರಾಮಲಲ್ಲಾನಿಗೆ .೭೭ ಎಕರೆ ವಿವಾದಾತ್ಮಕ ಭೂಮಿಯನ್ನು ನೀಡಿ ನವೆಂಬರ್ ೯ರಂದು ನೀಡಲಾದ ಸರ್ವಾನುಮತದ ತೀರ್ಪಿನ ಅನುಷ್ಠಾನಕ್ಕೆ ಹಾದಿ ಸುಗಮಗೊಳಿಸಿತು.

ಸಲ್ಲಿಕೆಯಾಗಿದ್ದ ೧೮ ಪುನರ್ ಪರಿಶೀಲನಾ ಅರ್ಜಿಗಳಲ್ಲಿ ಅರ್ಜಿಗಳನ್ನು ಹಿಂದಿನ ಖಟ್ಲೆಗಳಲ್ಲಿ ಕಕ್ಷಿದಾರರಾಗಿದ್ದವರು ಸಲ್ಲಿಸಿದ್ದರು ಮತ್ತು ಇತರ ಅರ್ಜಿಗಳನ್ನುಮೂರನೇ ಕಕ್ಷಿದಾರರುಸಲ್ಲಿಸಿದ್ದರು.

ಮೂಲಖಟ್ಲೆಯಲ್ಲಿ ಕಕ್ಷಿದಾರರಾಗಿ ಇಲ್ಲದೇ ಇದ್ದವರು ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಗಳನ್ನು ಪರಿಗಣಿಸಲು ಪೀಠವು ತಿರಸ್ಕರಿಸಿತು. ’ಮೂರನೇ ಕಕ್ಷಿದಾರರಪೈಕಿ ೪೦ ಮಂದಿ ನಾಗರಿಕ ಹಕ್ಕುಗಳ ಕಾರ್ಯಕರ್ತರೂ ಸೇರಿದ್ದು ಅವರು ತೀರ್ಪನ್ನು ಪುನರ್ ಪರಿಶೀಲಿಸುವಂತೆ ಕೋರಲು ಒಟ್ಟಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

ಪುನರ್ ಪರಿಶೀಲನಾ ಅರ್ಜಿಗಳನ್ನು ಸುಪ್ರೀಂಕೋರ್ಟ್ ತಿರಸ್ಕರಿಸುವುದರೊಂದಿಗೆ ಅರ್ಜಿಗಳ ಮೇಲೆ ಮುಕ್ತ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಬೇಕು ಎಂಬುದಾಗಿ ಕಕ್ಷಿದಾರರು ಸಲ್ಲಿಸಿದ್ದ ಮನವಿ ಕೂಡಾ ವಜಾಗೊಂಡಂತಾಗಿದೆ.

ಆಗಿನ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಪಂಚ ಸದಸ್ಯ ಪೀಠವು ನವೆಂಬರ್ ೯ರಂದು ನೀಡಿದ ತನ್ನ ಸರ್ವಾನುಮತದ ತೀರ್ಪಿನಲ್ಲಿ ಅಯೋಧ್ಯೆಯ .೭೭ ಎಕರೆ ವಿವಾದಾತ್ಮಕ ಭೂಮಿ ಪೂರ್ಣವಾಗಿ ರಾಮಲಲ್ಲಾಗೆ  (ಬಾಲರಾಮ) ಸೇರಿದ್ದು ಎಂಬುದಾಗಿ ಹೇಳಿ, ಅಯೋಧ್ಯೆಯಲ್ಲಿ ಮಸೀದಿ ನಿರ್ಮಿಸಲು ಸುನ್ನಿ ವಕ್ಫ್ ಮಂಡಳಿಗೆ ಎಕರೆ ಪರ್ಯಾಯ ಭೂಮಿಯನ್ನು ಹಂಚಿಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ  ನಿರ್ದೇಶನ ನೀಡಿತ್ತು.

ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ಬೆಂಬಲ ಪಡೆದ ಕೆಲವರು ಸೇರಿದಂತೆ ಹಲವಾರು ಮುಸ್ಲಿಮ್ ಕಕ್ಷಿದಾರರು, ೪೦ ಮಂದಿ ಹಕ್ಕು ಕಾರ್ಯಕರ್ತರು, ಹಿಂದೂ ಮಹಾಸಭಾ ಮತ್ತು ನಿರ್ಮೋಹಿ ಅಖಾಡ ಸುಪ್ರೀಂಕೋರ್ಟ್ ಮೆಟ್ಟಿಲೇರಿದವರಲ್ಲಿ ಸೇರಿದ್ದರು.

ಸುಪ್ರೀಂಕೋರ್ಟ್ ನಿರ್ಧಾರದಿಂದ ತಾವು ತೊಂದರೆಗೆ ಒಳಗಾಗಿದ್ದೇವೆ ಎಂದು ಹೇಳಿದ ಅರ್ಜಿದಾರರು ಮೇಲ್ನೋಟಕ್ಕೆ ತಪ್ಪುಗಳು ಎದ್ದು ಕಾಣುತ್ತಿರುವುದರಿಂದ ನಿರ್ಣಯವನ್ನು ಪುನರ್ ಪರಿಶೀಲಿಸಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದರು.

ಹಿಂದು ಕಕ್ಷಿದಾರರಿಗೆ ಕೊಟ್ಟಿರುವ ಪರಿಹಾರವು, ಅತಿಕ್ರಮ ಪ್ರವೇಶ ಮತ್ತು ಮಸೀದಿ ನಾಶಗೊಳಿಸಿದ ಅಕ್ರಮ ಕೃತ್ಯಗಳಿಗೆ ಕೊಟ್ಟ ಬಹುಮಾನಕ್ಕೆ ಸಮವಾಗಿದೆ ಎಂದು ಮುಸ್ಲಿಮ್ ಕಕ್ಷಿದಾರರು ತೀರ್ಪಿನ ವಿರುದ್ಧದ ತಮ್ಮ ಪುನರ್ ಪರಿಶೀಲನಾ ಅರ್ಜಿಯಲ್ಲಿ ಪ್ರತಿಪಾದಿಸಿದ್ದರು.

ತೀರ್ಪು ಜಾತ್ಯತೀತ ತತ್ವಕ್ಕಿಂತ ಹೆಚ್ಚಾಗಿ ಹಿಂದೂ ನಂಬಿಕೆಯನ್ನು ಆಧರಿಸಿದೆ ಎಂದು ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ಬೆಂಬಲದೊಂದಿಗೆ ಇತರ ವ್ಯಕ್ತಿಗಳು ಸಲ್ಲಿಸಿದ್ದ ಇನ್ನೊಂದು ಪುನರ್ ಪರಿಶೀಲನಾ ಅರ್ಜಿ ವಾದಿಸಿತ್ತು.

ದೇವರ ಮೇಲಿನಶೆಬಾಯಿತ್ (ನಿರ್ವಹಣಾ) ಹಕ್ಕು ಪ್ರತಿಪಾದಿಸಿದ್ದ ನಿರ್ಮೋಹಿ ಅಖಾಡವು, ತನ್ನ ಹಕ್ಕುಗಳನ್ನು ತಿರಸ್ಕರಿಸಿದ ಪೀಠದ ನಿರ್ಧಾರವನ್ನು ಪ್ರಶ್ನಿಸಿ, ಪುನರ್ ಪರಿಶೀಲನೆಗೆ ಕೋರಿಕೆ ಮಂಡಿಸಿತ್ತು

ಮೂಲ ಪ್ರಕರಣದಲ್ಲಿ ಕಕ್ಷಿದಾರರಾಗಿ ಇಲ್ಲದೇ ಇದ್ದ ೪೦ ಮಂದಿ ನಾಗರಿಕ ಹಕ್ಕುಗಳ ಕಾರ್ಯಕರ್ತರು ತಮ್ಮ ಪುನರ್ ಪರಿಶೀಲನಾ ಅರ್ಜಿಯಲ್ಲಿತೀರ್ಪಿನಿಂದ ದೇಶದ ಸಮನ್ವಯದ ಸಂಸ್ಕೃತಿ ಮತ್ತು ಸಂವಿಧಾನದಲ್ಲಿ ಹೇಳಲಾಗಿರುವ ಜಾತ್ಯತೀತ ಚೌಕಟ್ಟಿನ ಮೇಲೆ ಪರಿಣಾಮ ಬೀರಿದೆಎಂದು ವಾದಿಸಿದ್ದರು.

ವಿವಾದಾತ್ಮಕ ನಿವೇಶನವನ್ನು ರಾಮಲಲ್ಲಾನಿಗೆ ನೀಡುವುದರ ಜೊತೆಗೆ, ಅಯೋಧ್ಯೆಯಲ್ಲಿ ನೂತನ ಮಸೀದಿ ನಿರ್ಮಿಸಲು ಐದು ಎಕರೆ ಪರ್ಯಾಯ ಭೂಮಿಯನ್ನು ನೀಡುವಂತೆಯೂ ಪೀಠವು ಆದೇಶ ನೀಡಿತ್ತು. ರಾಮಮಂದಿರ ನಿರ್ಮಾಣ ಮತ್ತು ನಿವೇಶನದ ನಿರ್ವಹಣೆಗೆ ಟ್ರಸ್ಟ್ ಒಂದನ್ನು ರಚಿಸುವಂತೆಯೂ ಪೀಠವು ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿತ್ತು.

ಪುನರ್ ಪರಿಶೀಲನಾ ಅರ್ಜಿಗಳನ್ನು ತಿರಸ್ಕರಿಸಿದ ಪೀಠದ ನಿರ್ಧಾರವು ಅರ್ಜಿದಾರರಿಗೆ ಈಗಕುರೇಟಿವ್ ಅರ್ಜಿಯನ್ನು ಸಲ್ಲಿಸುವ ಕಟ್ಟ ಕಡೆಯ ಅವಕಾಶವನ್ನು ಮಾತ್ರ ಉಳಿಸಿದೆಆದರೆ ಇಂತಹ ಅರ್ಜಿ ಯಶಸ್ವಿಯಾಗುವ ಸಾಧ್ಯತೆ ಅತ್ಯಂತ ಅಪರೂಪ ಎಂದು ಹಿರಿಯ ವಕೀಲರ ಅಭಿಮತ..

No comments:

Advertisement