My Blog List

Sunday, September 21, 2008

ಇಂದಿನ ಇತಿಹಾಸ History Today ಸೆಪ್ಟೆಂಬರ್ 21

ಇಂದಿನ ಇತಿಹಾಸ

ಸೆಪ್ಟೆಂಬರ್ 21

ಒರಿಸ್ಸಾದ ಬಾಲ ಮ್ಯಾರಥಾನ್ ಓಟಗಾರ ಬುಧಿಯಾ ಸಿಂಗ್ ನನ್ನು ಒರಿಸ್ಸಾ ಸರ್ಕಾರ ದತ್ತು ತೆಗೆದುಕೊಂಡಿತು. ಅವನ ತಾಯಿ ಈ ಕುರಿತ ಅಧಿಕೃತ ಪತ್ರಗಳಿಗೆ ಈದಿನ ಇಲ್ಲಿ ಸಹಿ ಹಾಕಿದರು.  ಸೆ. 4 ರಂದು ಈಕೆ ಯುವಜನ ಸೇವೆ ಮತ್ತು ಕ್ರೀಡಾ ಸಚಿವ ದೇಬಸಿಸ್ ನಾಯಕ್ ಅವರನ್ನು ಭೇಟಿ ಮಾಡಿ, ತನಗಿರುವ 2 ಸಾವಿರ ರೂ ಆದಾಯದಲ್ಲಿ ತನ್ನ ನಾಲ್ಕೂ ಮಕ್ಕಳನ್ನು ಸಾಕಲು ಕಷ್ಟವಾಗುತ್ತಿದ್ದು ಬುಧಿಯಾನಿಗೆ ಪುನರ್ವಸತಿ ಕಲ್ಪಿಸಿಕೊಡಬೇಕು ಎಂದು ಕೇಳಿಕೊಂಡಿದ್ದರು.

2007: ನ್ಯಾಯಾಂಗ ನಿಂದನೆ ಆರೋಪದ ಮೇಲೆ `ಮಿಡ್ ಡೇ' ಪತ್ರಿಕೆಯ ನಾಲ್ವರು ಪತ್ರಕರ್ತರಿಗೆ ನಾಲ್ಕು ತಿಂಗಳ ಶಿಕ್ಷೆ ವಿಧಿಸಿ ದೆಹಲಿ ಹೈಕೋರ್ಟ್ ತೀರ್ಪು ನೀಡಿತು. ನ್ಯಾಯಮೂರ್ತಿಗಳಾದ ಆರ್.ಎಸ್.ಸೋಧಿ ಮತ್ತು  ಬಿ.ಎನ್.ಚತುರ್ವೇದಿ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ತೀರ್ಪು ನೀಡಿ, `ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ ವರದಿ  ಪ್ರಕಟಿಸುವ ಮೂಲಕ ಆರೋಪಿಗಳು, ಉನ್ನತ ನ್ಯಾಯಾಲಯದ ಘನತೆಗೆ ಕುಂದು ತಂದಿದ್ದಾರೆ' ಎಂದು ತಿಳಿಸಿತು. 2007ರ ಮೇ 19 ರಂದು `ಮಿಡ್ ಡೇ' ಪತ್ರಿಕೆಯು ವರದಿಯೊಂದನ್ನು ಪ್ರಕಟಿಸಿತ್ತು. ನಿವೃತ್ತ ಮುಖ್ಯ ನ್ಯಾಯಮೂರ್ತಿ ವೈ.ಕೆ.ಸಬರ್ ವಾಲ್ ಅವರ ನೇತೃತ್ವದ ಪೀಠವು ದೆಹಲಿಯಲ್ಲಿ ವಸತಿ ಪ್ರದೇಶಗಳಲ್ಲಿನ ಅನಧಿಕೃತ ಅಂಗಡಿಗಳಿಗೆ `ಬೀಗಮುದ್ರೆ' ಹಾಕುವ ಪ್ರಕರಣ ಕುರಿತು ನೀಡಿದ ತೀರ್ಪು ತಮ್ಮ ಮಕ್ಕಳಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಹೊಂದಿತ್ತು. ಸಬರ್ವಾಲ್  ಅವರ ಮಕ್ಕಳು ದೆಹಲಿಯ ಕೆಲ ಮಾಲ್ ಗಳ ಡೆವಲಪರ್ಸ್ ಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬುದು ಲೇಖನದ ಸಾರವಾಗಿತ್ತು. ಈ ಬಗ್ಗೆ  ವಿಚಾರಣೆ  ನಡೆದು ನಂತರ ಸೆಪ್ಟೆಂಬರ್ 11ರ ತೀರ್ಪಿನಲ್ಲಿ ಪತ್ರಿಕೆಯ ಸ್ಥಾನಿಕ ಸಂಪಾದಕಿ ವಿತುಷಾ ಒಬೇರಾಯ್, ನಗರ ಸಂಪಾದಕ ಎಂ.ಕೆ.ತಯಾಲ್, ವ್ಯಂಗ್ಯಚಿತ್ರಕಾರ ಇರ್ಫಾನ್ ಖಾನ್ ಮತ್ತು ಎಸ್.ಕೆ.ಅಖ್ತರ್ ಅವರನ್ನು ದೋಷಿಗಳೆಂದು ಹೇಳಲಾಗಿತ್ತು. ಈದಿನ ಇವರಿಗೆ ಶಿಕ್ಷೆಯನ್ನು ಪ್ರಕಟಿಸಲಾಯಿತು.

2007: ಭಾರತ -ಅಮೆರಿಕ ನಾಗರಿಕ ಪರಮಾಣು ಒಪ್ಪಂದವು ಪರಮಾಣು ಇಂಧನದ ಕೊರತೆ ನೀಗಿಸಬಲ್ಲುದು ಎಂದು ಹೇಳುವ ಮೂಲಕ ಸಿಪಿಎಂ ಹಿರಿಯ ಧುರೀಣ ಜ್ಯೋತಿ ಬಸು ಅವರೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ  ಬುದ್ಧದೇವ್ ಭಟ್ಟಾಚಾರ್ಯ ಅವರ ಹಾದಿ  ತುಳಿದರು. ಪರಮಾಣು ಒಪ್ಪಂದ ಕುರಿತು ಯುಪಿಎ ಮತ್ತು  ಎಡಪಕ್ಷಗಳ ನಡುವೆ ಭಾರೀ ಭಿನ್ನಾಭಿಪ್ರಾಯ ತಲೆದೋರಿದ್ದಾಗಲೇ ಕೆಲ ದಿನಗಳ ಹಿಂದೆ ಬುದ್ಧದೇವ್ ಭಟ್ಟಾಚಾರ್ಯ ಅವರು, ಪರಮಾಣು ಶಕ್ತಿಯ ಅಗತ್ಯತೆಯನ್ನು ಪ್ರತಿಪಾದಿಸಿ ಎಲ್ಲರ ಹುಬ್ಬೇರಿಸಿದ್ದರು. ಜ್ಯೋತಿ  ಬಸು ಅವರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು.

2007: ರಾಮ ಸೇತು ವಿವಾದದಲ್ಲಿ ತನ್ನ ದನಿಯನ್ನು ಮತ್ತಷ್ಟು ಎತ್ತರಿಸಿದ ಬಿಜೆಪಿ, ಶ್ರೀರಾಮನ ಕುರಿತು ಮಾಡಿದ ಅವಹೇಳನಕಾರಿ ಹೇಳಿಕೆಗಳನ್ನು ವಾಪಸು ಪಡೆಯುವಂತೆ ಕರುಣಾನಿಧಿ ಅವರ ಮನವೊಲಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾದಲ್ಲಿ ಡಿಎಂಕೆಯ ಎಲ್ಲ ಸಚಿವರನ್ನೂ ವಜಾ ಮಾಡಬೇಕು ಎಂದು ಆಗ್ರಹಿಸಿತು. ಇಲ್ಲಿ ಆರಂಭವಾದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯ ಉದ್ಘಾಟನಾ ಸಮಾರಂಭದಲ್ಲಿ ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ಈ ಆಗ್ರಹ ಮಾಡಿದರು.

2007: ನಕಲಿ ಛಾಪಾ ಕಾಗದ ಪ್ರಕರಣದ ಆರೋಪಿ ಬೆಂಗಳೂರು ಕೇಂದ್ರ ಕಾರಾಗೃಹದ ಮಾಜಿ ಹಿರಿಯ ಅಧೀಕ್ಷಕ ಜಯಸಿಂಹ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿತು. ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಮತ್ತು ನ್ಯಾಯಮೂರ್ತಿಗಳಾದ ತರುಣ್ ಚಟರ್ಜಿ ಹಾಗೂ ಆರ್.ವಿ.ರವೀಂದ್ರನ್ ಅವರನ್ನೊಳಗೊಂಡ ನ್ಯಾಯಪೀಠವು, ಪ್ರಕರಣದ ವಿಚಾರಣೆ ವಿಳಂಬವಾಗುತ್ತಿದೆ. ಜಯಸಿಂಹ ಅವರ ಮೇಲಿರುವ ಆರೋಪದ ಸ್ವರೂಪ ಮತ್ತು ಈಗಾಗಲೇ ಅವರು ಕಾರಾಗೃಹದಲ್ಲಿ ಕಳೆದ ಅವಧಿಯನ್ನು ಪರಿಗಣಿಸಿ ಅವರಿಗೆ ಜಾಮೀನು ಮಂಜೂರು ಮಾಡುವುದು ಸೂಕ್ತ ಎಂದು ಭಾವಿಸಲಾಯಿತು ಎಂದು ಹೇಳಿತು. ಜಯಸಿಂಹ ಮತ್ತು ಉಪ ಅಧೀಕ್ಷಕ ನಂಜಪ್ಪ ಅವರು ಕಾರಾಗೃಹದಲ್ಲಿ ಮೊಬೈಲ್ ಬಳಸಲು ಅಬ್ದುಲ್ ಕರೀಂ ತೆಲಗಿಗೆ ನೆರವಾಗಿದ್ದರು ಎಂಬ ಆರೋಪದ ಮೇಲೆ 2003ರ ಡಿಸೆಂಬರ್ 9 ರಂದು ಸಿಬಿಐ ಅವರನ್ನು ಬಂಧಿಸಿತ್ತು. ಕಳೆದ ಏಪ್ರಿಲ್ 17ರಂದೇ ನಂಜಪ್ಪ ಅವರನ್ನು ಜಾಮೀನು ಮೇಲೆ ಬಿಡುಗಡೆ ಮಾಡಲಾಗಿತ್ತು.

2007: ನೇಮಕಾತಿಯ ಸಂದರ್ಭದಲ್ಲಿ ಅಭ್ಯರ್ಥಿಗಳಿಗೆ ಕನಿಷ್ಠ ಅಂಕಗಳನ್ನು ನಿಗದಿಪಡಿಸುವ ಅಧಿಕಾರ ಉದ್ಯೋಗ ನೀಡುವವರಿಗೆ ಇರುತ್ತದೆ. ಆದರೆ ನಿಯಮಗಳಲ್ಲಿ ಅವಕಾಶ ಇಲ್ಲದಿದ್ದರೆ ಈ ಅಂಕಗಳನ್ನು ನಂತರ ಕಡಿಮೆ ಮಾಡುವ ಅಧಿಕಾರ ಇಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತು. ಮೀಸಲು ಗ್ಯಾಂಗ್ ಮನ್ ಹುದ್ದೆಗಳಿಗೆ ಸೂಕ್ತ ಅಭ್ಯರ್ಥಿಗಳು ದೊರೆಯದಿರುವುದರಿಂದ ಸಾಮಾನ್ಯ ವರ್ಗದ ಅಭ್ಯರ್ಥಿಗಳ ನೇಮಕಕ್ಕೆ ಅನುಕೂಲವಾಗುವಂತೆ ಪೂರ್ವ ಕರಾವಳಿ ರೈಲ್ವೆ (ಇಸಿಆರ್) ಕನಿಷ್ಠ ಅಂಕಗಳನ್ನು ಕಡಿಮೆ ಮಾಡಿದ್ದನ್ನು ಪೀಠ ಅನೂರ್ಜಿತಗೊಳಿಸಿತು.

2007: ಆಂಧ್ರದ ಕರ್ನೂಲ್ ಜಿಲ್ಲೆಯಲ್ಲಿ ಎರಡು ತಿಂಗಳಿಂದ ಮಳೆಯ ಪ್ರಕೋಪ ಹೆಚ್ಚಿದ ಹಿನ್ನೆಲೆಯಲ್ಲಿ ಅನೇಕ ಗ್ರಾಮಗಳು ಜಲಾವೃತಗೊಂಡಿವು. ಸುರಕ್ಷತಾ ಕ್ರಮವಾಗಿ ಒಂದು ಒಂದು ಲಕ್ಷ ಜನರನ್ನು ಸ್ಥಳಾಂತರಿಸಲಾಯಿತು.

2007: ಒರಿಸ್ಸಾದ ಬಾಲ ಮ್ಯಾರಥಾನ್ ಓಟಗಾರ ಬುಧಿಯಾ ಸಿಂಗ್ ನನ್ನು ಒರಿಸ್ಸಾ ಸರ್ಕಾರ ದತ್ತು ತೆಗೆದುಕೊಂಡಿತು. ಅವನ ತಾಯಿ ಈ ಕುರಿತ ಅಧಿಕೃತ ಪತ್ರಗಳಿಗೆ ಈದಿನ ಇಲ್ಲಿ ಸಹಿ ಹಾಕಿದರು.  ಸೆ. 4 ರಂದು ಈಕೆ ಯುವಜನ ಸೇವೆ ಮತ್ತು ಕ್ರೀಡಾ ಸಚಿವ ದೇಬಸಿಸ್ ನಾಯಕ್ ಅವರನ್ನು ಭೇಟಿ ಮಾಡಿ, ತನಗಿರುವ 2 ಸಾವಿರ ರೂ ಆದಾಯದಲ್ಲಿ ತನ್ನ ನಾಲ್ಕೂ ಮಕ್ಕಳನ್ನು ಸಾಕಲು ಕಷ್ಟವಾಗುತ್ತಿದ್ದು ಬುಧಿಯಾನಿಗೆ ಪುನರ್ವಸತಿ ಕಲ್ಪಿಸಿಕೊಡಬೇಕು ಎಂದು ಕೇಳಿಕೊಂಡಿದ್ದರು. ಹೊಸ ಮನೆ ಮತ್ತು ಹೊಸ ಸ್ನೇಹಿತರೊಂದಿಗೆ ನಾನು ಈಗ ಸಂತೋಷವಾಗಿದ್ದೇನೆ ಎಂದು ಬುಧಿಯಾ ಹರ್ಷ ವ್ಯಕ್ತಪಡಿಸಿದ.

2007: ಈ- ಮೇಲ್ ನಲ್ಲಿ ಬಂದ ಕೋರಿಕೆಯನ್ನು ಗಣನೆಗೆ ತೆಗೆದುಕೊಂಡು ಚೆನ್ನೈಯ ಕೌಟುಂಬಿಕ ನ್ಯಾಯಾಲಯವೊಂದು ವಿದೇಶದಲ್ಲಿ ನೆಲೆಸಿದ ದಂಪತಿಗೆ ವಿಡಿಯೊ ಕಾನ್ಫರೆನ್ಸ್ ಸಹಾಯದಿಂದ ಕೇವಲ 15 ನಿಮಿಷದಲ್ಲಿ ವಿಚ್ಛೇದನ ನೀಡಿತು. ಗಂಡ- ಹೆಂಡತಿ ಇಬ್ಬರೂ ಸಾಫ್ಟ್ ವೇರ್ ಉದ್ಯೋಗದಲ್ಲಿದ್ದು, ಪರಸ್ಪರ ಭಿನ್ನಾಭಿಪ್ರಾಯದಿಂದ ಬೇರೆಯಾಗಲು ಬಯಸಿದ್ದರು. ಆದರೆ ಗಂಡ ಅಮೆರಿಕದಲ್ಲಿದ್ದರೆ, ಹೆಂಡತಿ ನೆಲೆಸಿರುವುದು ಆಸ್ಟ್ರೇಲಿಯಾದಲ್ಲಿ. ಹಾಗಾಗಿ  ಅರ್ಜಿ ವಿಚಾರಣೆಯಲ್ಲಿ ಇಬ್ಬರೂ ಗೈರುಹಾಜರಾಗಿದ್ದರು. ತಾವು ವಿಚಾರಣೆಯ ದಿನ ಹಾಜರಾಗದಿರಲು ಸಾಧ್ಯವಾಗದ ಬಗ್ಗೆ ಮೊದಲೇ ನ್ಯಾಯಾಲಯಕ್ಕೆ ತಿಳಿಸಿದ್ದರು. ವಿಚ್ಛೇದನ ಬಯಸಿ ಅರ್ಜಿ ಸಲಿಸಿದ ಈ ದಂಪತಿ ಬೇರೆ ಬೇರೆ ದೇಶಗಳಲ್ಲಿ ನೆಲೆಸಿರುವುದರಿಂದ ಆಯಾ ದೇಶದಲ್ಲೇ ಕುಳಿತು ವಿಡಿಯೊ ಕಾನ್ಫರೆನ್ಸ್ ಮೂಲಕ ಇಬ್ಬರೂ ನೀಡಿದ ಹೇಳಿಕೆಯನ್ನು ನ್ಯಾಯಾಧೀಶ ಆರ್.ದೇವದಾಸ್ ದಾಖಲಿಸಿಕೊಂಡರು. ದಂಪತಿಯನ್ನು ವಿಡಿಯೊದಲ್ಲಿ ಗುರುತಿಸಲು ರಕ್ತ ಸಂಬಂಧಿಗಳನ್ನು ಕೋರ್ಟಿಗೆ  ಕರೆಸಲಾಗಿತ್ತು. ದಂಪತಿ ಪರ ವಕೀಲರು ಹಾಗೂ ಸಂಬಂಧಿಕರು ನಂತರ ಈ ವಿಚ್ಛೇದನಕ್ಕೆ ಒಪ್ಪಿ ಸಹಿ ಹಾಕಿದರು. ಕೇವಲ 15 ನಿಮಿಷಗಳಲ್ಲಿ ಎಲ್ಲ ಪ್ರಕ್ರಿಯೆ ಮುಗಿಯಿತು. ಇದಕ್ಕೆ ತಗುಲಿದ್ದು ಕೇವಲ 300 ರೂಪಾಯಿ. ಸಾಮಾನ್ಯವಾಗಿ ಬೇರೆ ವಿಚ್ಛೇದನ ಪ್ರಕ್ರಿಯೆಗೆ 2 ಲಕ್ಷ ರೂ ಖರ್ಚಾಗುತ್ತಿತ್ತು.

2006: 1993ರ ಮುಂಬೈ ಸರಣಿ ಬಾಂಬ್ ಸ್ಫೋಟಗಳ ಪೈಕಿ ಖಾತಾ ಬಜಾರ್ ಮತ್ತು ಹೋಟೆಲ್ ಸೀರಾಕಿನಲ್ಲಿ ಸಂಭವಿಸಿದ ಸ್ಫೋಟಗಳ ಆರೋಪಿ ಪರ್ವೇಜ್ ನಾಸಿರ್ ಅಹಮದ್ ಶೇಖ್ ತಪ್ಪಿತಸ್ಥ ಎಂದು ವಿಶೇಷ ಟಾಡಾ ನ್ಯಾಯಾಲಯ ತೀರ್ಪು ನೀಡಿತು. ಟೈಗರ್ ಮೆಮೆನ್ ನ ಸಹಚರನಾಗಿದ್ದ ಶೇಖ್ 1993ರ ಮಾಚರ್್ 12ರಂದು ಸ್ಕೂಟರಿನಲ್ಲಿ ಆರ್ ಡಿಎಕ್ಸ್ ಸ್ಫೋಟಕಗಳನ್ನು ಇರಿಸಿ ಖಾತಾ ಬಜಾರಿನಲ್ಲಿ ಇಟ್ಟಿದ್ದ. ಈ ಸ್ಫೋಟದಲ್ಲಿ ನಾಲ್ವರು ಮೃತರಾಗಿದ್ದರು.

2006: ಬಂಗಾಳ ಕೊಲ್ಲಿಯಲ್ಲಿ ಎದ್ದ ಬಿರುಗಾಳಿಗೆ ಸಿಲುಕಿ 100ಕ್ಕೂ ಹೆಚ್ಚು ಮೀನುಗಾರಿಕಾ ದೋಣಿಗಳು ಮುಳುಗಿದ ಪರಿಣಾಮವಾಗಿ ಕನಿಷ್ಠ 73 ಜನ ಮೃತರಾಗಿ ಇತರ 100ಕ್ಕೂ ಹೆಚ್ಚು ಜನ ಕಣ್ಮರೆಯಾದರು.

2006: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದ ವೈಫಲ್ಯಗಳನ್ನು ದುರಸ್ತಿ ಮಾಡಲು ತೆರಳಿದ್ದ `ಅಟ್ಲಾಂಟಿಸ್' ಬಾಹ್ಯಾಕಾಶ ನೌಕೆಯು ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿ ಯಶಸ್ವಿಯಾಗಿ ಧರೆಗಿಳಿಯಿತು. ಆರು ಗಗನಯಾನಿಗಳು ಮತ್ತು 15,880 ಕೆ.ಜಿ. ತೂಕದ ಸಾಮಗ್ರಿಗಳನ್ನು ಈ ನೌಕೆಯು ತನ್ನೊಂದಿಗೆ ಬಾಹ್ಯಾಕಾಶಕ್ಕೆ ಒಯ್ದಿತ್ತು. ಈ ಗಗನ ಯಾನಿಗಳು 12 ದಿನಗಳ ಕಾಲ ಅಂತರಿಕ್ಷದಲ್ಲಿದ್ದು ನಿಲ್ದಾಣದ ದುರಸ್ತಿಕಾರ್ಯಗಳನ್ನು ಪೂರೈಸಿ ಈದಿನ ಯಶಸ್ವಿಯಾಗಿ ಧರೆಗೆ ವಾಪಸಾದರು.

2006: ಖಜಕಿಸ್ಥಾನ ಮತ್ತು ಉಕ್ರೇನಿನ ಕಲ್ಲಿದ್ದಲು ಗಣಿಗಳಲ್ಲಿ ಸಂಭವಿಸಿದ ಆಕಸ್ಮಿಕ ಸ್ಫೋಟ ಮತ್ತು ವಿಷಾನಿಲ ಸೋರಿಕೆಯಿಂದಾಗಿ ಕನಿಷ್ಠ 53 ಜನ ಮೃತರಾದರು. ಸೋವಿಯತ್ ಒಕ್ಕೂಟದ ಗಣಿ ಕ್ಷೇತ್ರದಲ್ಲಿ ಇತ್ತೀಚೆಗೆ ಸಂಭವಿಸಿದ ದುರಂತಗಳಲ್ಲಿ ಇದು ಅತ್ಯಂತ ದೊಡ್ಡ ದುರಂತ.

2006: ಮಾಜಿ ಅಥ್ಲೆಟ್ ಮತ್ತು ಖ್ಯಾತ ಕೋಚ್ ಆಗಿದ್ದ ಎ.ಜೆ. ಡಿ.ಸೋಜಾ (67) ಅವರು ಚೆನ್ನೈಯಲ್ಲಿ ನಿಧನರಾದರು. ತಮಿಳುನಾಡಿನ ಹಲವಾರು ಅಥ್ಲೆಟ್ ಗಳಿಗೆ ತರಬೇತಿ ನೀಡಿ, ಅವರನ್ನು ರಾಜ್ಯ- ರಾಷ್ಟ್ರಕ್ಕೆ ಹೆಸರು ತರುವಂತಹ ಉತ್ತಮ ಅಥ್ಲೆಟ್ ಗಳನ್ನಾಗಿ ಡಿಸೋಜಾ ಅವರು ರೂಪಿಸಿದ್ದರು.

1998: ಒಲಿಂಪಿಕ್ ಸ್ವರ್ಣ ಪದಕ ವಿಜೇತೆ ಓಟಗಾರ್ತಿ ಫ್ಲಾರೆನ್ಸ್ ಗ್ರಿಫಿತ್ ಜಾಯ್ನರ್ ಅವರು ಕ್ಯಾಲಿಫೋರ್ನಿಯಾದ ಮಿಷನ್ ವೀಜೋದಲ್ಲಿನ ತಮ್ಮ ಮನೆಯಲ್ಲಿ ಮೃತರಾಗಿದ್ದುದು ಪತ್ತೆಯಾಯಿತು. ಆಗ ಅವರ ವಯಸ್ಸು 38 ವರ್ಷ.

1995: ಗಣೇಶ ಹಾಲು ಕುಡಿಯುತ್ತಾನೆ ಎಂಬ ವದಂತಿ ರಾಷ್ಟ್ರದಾದ್ಯಂತ ಹರಡಿದ ದಿನವಿದು. ಮೊದಲಿಗೆ ನವದೆಹಲಿಯಲ್ಲಿ ಹರಡಿದ ಈ ವದಂತಿ ನಂತರ ದೇಶದಾದ್ಯಂತ ಹರಡಿ ಆಸ್ತಿಕರು ಮತ್ತು ನಾಸ್ತಿಕರು ಹುಬ್ಬೇರಿಸಿದರು. ಸೊಂಡಿಲ ಮೂಲಕ ಗಣೇಶ ಹಾಲು ಸ್ವೀಕರಿಸುತ್ತಾನೆ ಎಂದು ನಂಬಿದ ಭಕ್ತರು ಹಾಲಿನ ನೈವೇದ್ಯದ ಪ್ರಯೋಗ ಮಾಡಿದರೆ, ವಿಗ್ರಹದ ಒಳಗಿನ ನಿರ್ವಾತಪ್ರದೇಶದಿಂದಾಗಿ ಈ ರೀತಿ ಆಗುತ್ತದೆ ಎಂದು ಸಂಶೋಧಕರು ವಿವರಣೆ ನೀಡಿದರು.

1994: ಸ್ವಾತಂತ್ರ್ಯ ಹೋರಾಟಗಾರ, ಹಿರಿಯ ಉದ್ಯಮಿ ರಾಮಕೃಷ್ಣ ಬಜಾಜ್ ನಿಧನ.

1981: ನಾಲ್ಕು ದಶಕಗಳ ಕಾಲ ತಮ್ಮ ಕಂಠ ಮಾಧುರ್ಯದಿಂದ ಜನಮನ ರಂಜಿಸಿದ ಪಾಂಡೇಶ್ವರ ಕಾಳಿಂಗರಾವ್ (67) ಅವರು ಈದಿನ ಬೆಳಗ್ಗೆ ಬೆಂಗಳೂರಿನ ಸಂಪಂಗಿರಾಮ ನಗರದಲ್ಲಿ ತಮ್ಮ ಮನೆಯಲ್ಲಿ ನಿಧನರಾದರು.

1981: ಬ್ರಿಟಿಷ್ ಹೊಂಡುರಾಸ್ ಎಂದೇ ಖ್ಯಾತಿ ಪಡೆದಿದ್ದ ಬೆಲಿಝ್ ಸ್ವತಂತ್ರವಾಯಿತು.

1964: ಬ್ರಿಟಿಷರ 164 ವರ್ಷಗಳ ಆಳ್ವಿಕೆಯ ಬಳಿಕ ಮಾಲ್ಟಾ ಸ್ವತಂತ್ರ ರಾಷ್ಟ್ರವಾಯಿತು.

1947: ಅಮೆರಿಕದ ಕಾದಂಬರಿಕಾರ ಹಾಗೂ ಸಣ್ಣ ಕಥೆಗಾರ ಸ್ಟೀಫನ್ (ಎಡ್ವಿನ್) ಕಿಂಗ್ ಜನ್ಮದಿನ. ಭಯಾನಕ ಕಾದಂಬರಿಗಳಿಗಾಗಿ ಟೀಕೆಯ ಜೊತೆಗೇ ಜನಪ್ರಿಯತೆಯನ್ನೂ ಅವರು ಗಳಿಸಿದ್ದರು.

1945: ಸಾಹಿತಿ ಸರೋಜಿನಿ ಚವಲಾರ ಜನನ.

1912: ರಾಜಕಾರಣಿ ಫಿರೋಜ್ ಗಾಂಧಿ ಜನನ.

1907: ಸ್ವಾತಂತ್ರ್ಯ ಹೋರಾಟಗಾರ ಯು.ಎನ್. ಧೇಬರ್ (1907-77) ಜನ್ಮದಿನ. 1955-59ರ ಅವದಿಯಲ್ಲಿ ಅವರು ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧ್ಯಕ್ಷರಾಗಿದ್ದರು.

1898: ಖ್ಯಾತ ಪತ್ರಕರ್ತ ತುಷಾರ ಕಾಂತಿ ಘೋಷ್ ಜನನ.

1882: ವೃತ್ತಿ ರಂಗಭೂಮಿಗೆ ನಾಟಕಗಳನ್ನು ಬರೆದುಕೊಟ್ಟ ಖ್ಯಾತರಾದ ಬೆಳ್ಳಾವೆ ನರಹರಿ ಶಾಸ್ತ್ರಿ (21-9-1882ರಿಂದ 21-6-1961) ಅವರು ನರಸಾವಧಾನಿಗಳು- ವೆಂಕಟಲಕ್ಷ್ಮಮ್ಮ ದಂಪತಿಯ ಮಗನಾಗಿ ತುಮಕೂರು ಜಿಲ್ಲೆಯ ಬೆಳ್ಳಾವೆಯಲ್ಲಿ ಜನಿಸಿದರು. ನಾಟಕಗಳು ಇಲ್ಲದೆ ರಂಗಭೂಮಿ ಸೊರಗಿದ್ದ ಕಾಲದಲ್ಲಿ ನಾಟಕಗಳನ್ನು ಬರೆದುಕೊಟ್ಟು ಕನ್ನಡಿಗರಲ್ಲಿ ಹಾಸ್ಯ ಪ್ರಜ್ಞೆಯನ್ನು ಮೂಡಿಸಿದವರು ಇವರು.

1452: ಇಟಲಿಯ ಕ್ರೈಸ್ತ ಪ್ರಚಾರಕ ಗಿರೊಲಾಮೊ ಸವೊನರೋಲಾ (1452-98) ಜನ್ಮದಿನ. ಭ್ರಷ್ಟ ಪಾದ್ರಿಗಳ ಜೊತೆಗೆ ಘರ್ಷಣೆಗೆ ಹೆಸರಾಗಿದ್ದ ಅವರು 1494ರಲ್ಲಿ ಫ್ಲಾರೆನ್ಸ್ ಪ್ರಜಾತಾಂತ್ರಿಕ ಗಣರಾಜ್ಯವನ್ನು ಸ್ಥಾಪಿಸಿ ಅದರ ಏಕಮೇವ ಧುರೀಣರಾಗಿದ್ದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement