My Blog List

Tuesday, November 24, 2009

ಇಂದಿನ ಇತಿಹಾಸ History Today ನವೆಂಬರ್ 10

ಇಂದಿನ ಇತಿಹಾಸ

ನವೆಂಬರ್ 10

ಒಂದೂವರೆ ದಶಕದ ಕಾಲ ಭಾರತದ ಕ್ರಿಕೆಟಿನಲ್ಲಿ ನಕ್ಷತ್ರದಂತೆ ಮಿನುಗಿದ್ದ ಸೌರವ್ ಚಂಡಿದಾಸ್ ಗಂಗೂಲಿ ಮಹಾರಾಷ್ಟ್ರದ ನಾಗಪುರದ ವಿದರ್ಭ ಕ್ರಿಕೆಟ್ ಸಂಸ್ಥೆಯ ನೂತನ ಕ್ರೀಡಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಸಾವಿರಾರು ಕ್ರಿಕೆಟ್ ಅಭಿಮಾನಿಗಳ ಸಮ್ಮುಖದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪೂರ್ಣ ವಿದಾಯ ಹೇಳಿದರು. ಗಾವಸ್ಕರ್- ಬಾರ್ಡರ್ ಟ್ರೋಫಿ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ `ದಾದಾ' ವೃತ್ತಿ ಜೀವನದ ಕೊನೆಯ ಪಂದ್ಯವಾಗಿ ಇತಿಹಾಸದ ಪುಟ ಸೇರಿತು.


2008: ಒಂದೂವರೆ ದಶಕದ ಕಾಲ ಭಾರತದ ಕ್ರಿಕೆಟಿನಲ್ಲಿ ನಕ್ಷತ್ರದಂತೆ ಮಿನುಗಿದ್ದ ಸೌರವ್ ಚಂಡಿದಾಸ್ ಗಂಗೂಲಿ ಮಹಾರಾಷ್ಟ್ರದ ನಾಗಪುರದ ವಿದರ್ಭ ಕ್ರಿಕೆಟ್ ಸಂಸ್ಥೆಯ ನೂತನ ಕ್ರೀಡಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಸಾವಿರಾರು ಕ್ರಿಕೆಟ್ ಅಭಿಮಾನಿಗಳ ಸಮ್ಮುಖದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪೂರ್ಣ ವಿದಾಯ ಹೇಳಿದರು. ಗಾವಸ್ಕರ್- ಬಾರ್ಡರ್ ಟ್ರೋಫಿ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ `ದಾದಾ' ವೃತ್ತಿ ಜೀವನದ ಕೊನೆಯ ಪಂದ್ಯವಾಗಿ ಇತಿಹಾಸದ ಪುಟ ಸೇರಿತು.

2008: ಭಯೋತ್ಪಾದನೆ ಇಸ್ಲಾಂ ಧರ್ಮಕ್ಕೆ ವಿರುದ್ಧವಾದದ್ದು ಎಂಬ ದಾರುಲ್ ಉಲೂಮ್ ದಿಯೊಬಂದ್ (ದೇವಬಂದ್) ಇಸ್ಲಾಂ ಅಕಾಡೆಮಿಕ್ ಸೆಂಟರಿನ ಫತ್ವಾಕ್ಕೆ (ಧಾರ್ಮಿಕ ಆದೇಶ) ಹೈದರಾಬಾದಿನಲ್ಲಿ ನಡೆದ ಮುಸ್ಲಿಮ್ ಧಾರ್ಮಿಕ ಮುಖಂಡರ ಮತ್ತು ಶಿಕ್ಷಕರ ರಾಷ್ಟ್ರೀಯ ಸಮಾವೇಶದಲ್ಲಿ ಸಹಮತ ವ್ಯಕ್ತಪಡಿಸಲಾಯಿತು. ಜಮಾತ್ ಉಲೆಮಾ ಇ ಹಿಂದ್ ಸಮಾವೇಶದಲ್ಲಿ ರಾಷ್ಟ್ರದ ವಿವಿಧ ಭಾಗಗಳಿಂದ ಬಂದಿದ್ದ ಸುಮಾರು ಆರು ಸಾವಿರ ಧಾರ್ಮಿಕ ಮುಖಂಡರು ಹಾಗೂ ಶಿಕ್ಷಕರು ಭಾಗವಹಿಸಿದ್ದರು. ಈ ಸಮಾವೇಶದಲ್ಲಿ ಅಂಗೀಕರಿಸಲಾದ ಗೊತ್ತುವಳಿಯನ್ನು ಹೈದರಾಬಾದ್ ನಿರ್ಣಯ ಎಂದು ಕರೆಯಲಾಯಿತು. ಇಸ್ಲಾಮ್ ಮತ್ತು ಭಯೋತ್ಪಾದನೆಗೆ ಸಂಬಂಧವೇ ಇಲ್ಲ, ಇಸ್ಲಾಂ ಅಕಾಡೆಮಿಕ್ ಸೆಂಟರಿನ ಫತ್ವಾಕ್ಕೆ ಸಹಮತವಿದೆ, ಅನಗತ್ಯ ಹಿಂಸಾಚಾರಕ್ಕೆ ಇಸ್ಲಾಮಿನ ವಿರೋಧವಿದೆ, ಶಾಂತಿ ಕದಡುವ ಹಾಗೂ ರಕ್ತಪಾತದ ಕೃತ್ಯಗಳಿಗೆ ವಿರೋಧವಿದೆ ಎಂಬ ಮಹತ್ವದ ನಿರ್ಣಯವನ್ನು ಈ ಸಮಾವೇಶದಲ್ಲಿ ಅಂಗೀಕರಿಸಲಾಯಿತು. ಒಳ್ಳೆಯ ಕೆಲಸಗಳಿಗೆ ಸಹಕಾರ ಮನೋಭಾವದಿಂದ ಕೆಲಸ ಮಾಡಬೇಕೆ ವಿನಾ ಪಾಪ ಕೃತ್ಯಗಳಿಗೆ ಮತ್ತು ದಮನಕಾರಿ ಕೃತ್ಯಗಳಿಗಲ್ಲ ಎಂದು ನಿರ್ಣಯದಲ್ಲಿ ತಿಳಿಸಲಾಯಿತು.

2008: ಟಿಪ್ಪರ್ ಒಂದಕ್ಕೆ ವೇಗವಾಗಿ ಬಂದ ಬೈಕ್ ಒಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಬೈಕ್ ಸವಾರ ಚಲನಚಿತ್ರ ನಟ, ನಿರ್ಮಾಪಕ ದೇವದತ್ತ (37) ಮೃತರಾದ ಘಟನೆ ಮೈಸೂರಿನ ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿ ನಡೆಯಿತು. ಮೈಸೂರಿನವರೇ ಆದ ದೇವದತ್ತ ಇತ್ತೀಚೆಗೆ ನಾಲ್ಕೈದು ಮಂದಿಯ ಜೊತೆ ಸೇರಿ `ಟೀಂ'ಎನ್ನುವ ಚಲನ ಚಿತ್ರವನ್ನು ನಿರ್ಮಿಸುತ್ತಿದ್ದರು.

2008: ಇರಾಕಿನ ಸುನ್ನಿ ಜನಾಂಗದ ಪ್ರಾಬಲ್ಯವಿರುವ ಜಿಲ್ಲೆಯೊಂದರ ಮಾರುಕಟ್ಟೆ ಪ್ರದೇಶದಲ್ಲಿ ಎರಡು ಬಾಂಬುಗಳು ಸ್ಫೋಟಿಸಿದ ಪರಿಣಾಮ ಕನಿಷ್ಠ 25 ಜನರು ಮೃತರಾಗಿ, ಸುಮಾರು 50 ಮಂದಿ ಗಾಯಗೊಂಡರು. ದಾಳಿಕೋರರು ಮೊದಲಿಗೆ ಅಧಾಮಿಯಾ ಪ್ರದೇಶದಲ್ಲಿ ಕಾರು ಬಾಂಬ್ ಸ್ಫೋಟಿಸಿ, ನಂತರ ಆತ್ಮಹತ್ಯಾ ದಾಳಿ ನಡೆಸಿದರು.

2008: ಅಮೆರಿಕ ನೇತೃತ್ವದ ಸಮ್ಮಿಶ್ರ ಪಡೆಯು ಉಗ್ರರನ್ನು ಗುರಿಯಾಗಿಸಿ ಪೂರ್ವ ಆಫ್ಘನಿನ ಖೋಸ್ಟ್ ಪ್ರಾಂತ್ಯದಲ್ಲಿ ವಾಯು ದಾಳಿ ನಡೆಸಿದ ಪರಿಣಾಮ ಖಾಸಗಿ ರಸ್ತೆ ನಿರ್ಮಾಣ ಕಂಪೆನಿಯೊಂದರ ಕನಿಷ್ಠ 14 ಭದ್ರತಾ ಸಿಬ್ಬಂದಿ ಮೃತರಾದರು.

2008: ವಾಯವ್ಯ ಪಾಕಿಸ್ಥಾನದಲ್ಲಿ ಇಸ್ಲಾಮಿಕ್ ಉಗ್ರರು ಮತ್ತು ಸರ್ಕಾರಿ ಪಡೆಗಳ ನಡುವೆ ನಡೆದ ವಾಯುದಾಳಿ ಮತ್ತು ಕಾಳಗದಲ್ಲಿ ಮೂವರು ಯೋಧರು ಸೇರಿದಂತೆ ಕನಿಷ್ಠ 54 ಮಂದಿ ಮೃತರಾದರು. ಆಫ್ಘನ್ ಗಡಿಯಲ್ಲಿನ ಮೋರ್ಗಾ ಪ್ರದೇಶದಲ್ಲಿ ಈ ಸಂಘರ್ಷ ನಡೆಯಿತು.

2008: ನ್ಯೂಯಾರ್ಕಿನ ವಾಲ್ ಸ್ಟ್ರೀಟ್ ಜರ್ನಲಿನ 50 ಜನರ ಜಾಗತಿಕ ಪಟ್ಟಿಯಲ್ಲಿ ಇಂದ್ರಾ ನೂಯಿ ಮೊದಲುಗೊಂಡು ಒಟ್ಟು ಮೂವರು ಭಾರತೀಯ ಮಹಿಳೆಯರು ಸ್ಥಾನ ಗಿಟ್ಟಿಸಿದರು. ಪೆಪ್ಸಿ ಕಂಪೆನಿಯ ಮುಖ್ಯಸ್ಥರಾದ ಇಂದ್ರಾ ನೂಯಿ ಎರಡನೇ ಸ್ಥಾನ ಪಡೆಯುವುದರೊಂದಿಗೆ ಮೊದಲ ಹತ್ತು ಜನರಲ್ಲಿ ಒಬ್ಬರು ಎನಿಸಿದರೆ; ಸಿಸ್ಕೊದ ಮುಖ್ಯ ತಾಂತ್ರಿಕ ಅಧಿಕಾರಿ ಪದ್ಮಶ್ರೀ ವಾರಿಯರ್ (31ನೇ ಸ್ಥಾನ) ಹಾಗೂ ಐ ಎನ್ ಎಕ್ಸ್ ಮೀಡಿಯಾದ ಮುಖ್ಯ ಕಾರ್ಯನಿರ್ವಾಹಕರಾದ ಇಂದ್ರಾಣಿ ಮುಖರ್ಜಿ 41ನೇ ಸ್ಥಾನ) ಈ ಪಟ್ಟಿಗೆ ಸೇರಿದ ಇತರ ಇಬ್ಬರು ಭಾರತೀಯ ಮಹಿಳೆಯರು. ಫೆಡರಲ್ ಡಿಪಾಸಿಟ್ ಇನ್ಶೂರೆನ್ಸ್ ಕಾರ್ಪೊರೇಷನ್ನಿನ ಅಧ್ಯಕ್ಷರಾದ ಶೀಲಾ ಬಯರ್ ಎಲ್ಲಕ್ಕಿಂತ ಮೇಲಿನ ಸ್ಥಾನ ಪಡೆದರು.

2007: ವಿಶೇಷ ಆರ್ಥಿಕ ವಲಯ ಸ್ಥಾಪನೆಗೆ ಸರ್ಕಾರ ಫಲವತ್ತಾದ ಕೃಷಿ ಭೂಮಿ ಸ್ವಾಧೀನಪಡಿಸಿಕೊಳ್ಳುವಂತಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು. ರಾಜ್ಯ ಸರ್ಕಾರದ ಭೂಸ್ವಾಧೀನ ಪ್ರಕ್ರಿಯೆ ಪ್ರಶ್ನಿಸಿ ಪಂಜಾಬಿನ ಹೋಶಿಯಾರ್ ಪುರ ಜಿಲ್ಲೆಯ ರೈತರಾದ ದೇವಿಂದರ್ ಸಿಂಗ್ ಮತ್ತಿತರರ ಮನವಿ ಪುರಸ್ಕರಿಸಿದ ನ್ಯಾಯಮೂರ್ತಿ ಎಸ್.ಪಿ.ಸಿನ್ಹಾ ಹಾಗೂ ಹರ್ಜೀತ್ ಸಿಂಗ್ ಬೇಡಿ ಅವರನ್ನೊಳಗೊಂಡ ಪೀಠವು ಈ ತೀರ್ಪು ನೀಡಿತು. ಜೊತೆಗೆ ಈ ಸಂಬಂಧ ರಾಜ್ಯ ಸರ್ಕಾರಕ್ಕೆ 25,000 ರೂ ದಂಡವನ್ನೂ ನ್ಯಾಯಾಲಯ ವಿಧಿಸಿತು. ವಿಶೇಷ ಆರ್ಥಿಕ ವಲಯ ಸ್ಥಾಪಿಸಲು ಯಾವುದೇ ಕಂಪೆನಿಗೆ ಭೂಮಿ ನೀಡುವಾಗ ಅದು ಫಲವತ್ತಾದ ಕೃಷಿ ಭೂಮಿಯೇ ಅಲ್ಲವೇ ಎಂಬುದನ್ನು ಸರ್ಕಾರ ಖಾತರಿ ಮಾಡಿಕೊಳ್ಳಬೇಕು. ಫಲವತ್ತಾದ ಭೂಮಿ ಅಲ್ಲ ಎಂದು ದೃಢಪಡಿಸಿಕೊಂಡೇ ಮುಂದಿನ ಹೆಜ್ಜೆ ಇಡಬೇಕು ಎಂದು ಸುಪ್ರೀಂಕೋರ್ಟ್ ತಿಳಿಸಿತು. ಈ ಸಂಬಂಧ ನಿಯಮಗಳು ಇರುವುದರಿಂದ ಸರ್ಕಾರ ಅವುಗಳನ್ನು ಕಡೆಗಣಿಸುವ ಪ್ರಶ್ನೆಯೇ ಉದ್ಭವಿಸಬಾರದು ಎಂದು ಹೇಳಿದ ಪೀಠವು, ರೈತರ ಜಮೀನು ಸ್ವಾಧೀನ ಪ್ರಕ್ರಿಯೆ ಎತ್ತಿಹಿಡಿದು ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ ನೀಡಿದ ಆದೇಶ ಸರಿಯಾದುದಲ್ಲ ಎಂದು ಹೇಳಿತು.

2007: ಸರ್ಕಾರಿ ವೈದ್ಯರ ನೇಮಕಾತಿ ನಡೆಯುತ್ತಿದ್ದ ಸಂದರ್ಭದಲ್ಲಿ ಬ್ರಿಟಿಷ್ ಹಾಗೂ ಯೂರೋಪಿಯನ್ ವೈದ್ಯರಿಗೆ ಸರ್ಕಾರ ನೀಡುತ್ತಿದ್ದ ಪ್ರಾಶಸ್ತ್ಯದ ಕ್ರಮ `ಕಾನೂನು ಬಾಹಿರ' ಎಂದು ಲಂಡನ್ ಹೈಕೋರ್ಟ್ ಹೇಳಿತು. ಉನ್ನತ ಮಟ್ಟದ ಪರಿಣಿತ ವಲಸೆ ಕಾರ್ಯಕ್ರಮದಡಿಯಲ್ಲಿ (ಎಚ್ಎಸ್ಎಂಪಿ) ವೈದ್ಯರನ್ನು ನೇಮಕ ಮಾಡಿಕೊಳ್ಳುವಾಗ ತಾರತಮ್ಯ ನೀತಿ ಅನುಸರಿಸುತ್ತಿದ್ದ ಆರೋಗ್ಯ ಇಲಾಖೆಯ ಕ್ರಮ ಕಾನೂನು ಬಾಹಿರ ಎಂದು ಮೂವರು ನ್ಯಾಯಾಧೀಶರನ್ನು ಒಳಗೊಂಡ ಪೀಠ ತೀರ್ಪು ನೀಡಿತು. ಸರ್ಕಾದ ಕ್ರಮದ ವಿರುದ್ಧ ಭಾರತೀಯ ವೈದ್ಯರು ಅರ್ಜಿ ಸಲ್ಲಿಸಿದ್ದರು. ಭಾರತೀಯ ವೈದ್ಯರ ಸಂಘಟನೆ `ಬ್ರಿಟಿಷ್ ಅಸೋಸಿಯೇಷನ್ ಆಫ್ ಫಿಜಿಸಿಯನ್ ಆಫ್ ಇಂಡಿಯನ್ ಒರಿಜಿನ್ (ಬಿಎಪಿಐಒ)' ಸುಮಾರು 16 ತಿಂಗಳು ಕಾಲ ಕಾನೂನು ಹೋರಾಟ ನಡೆಸಿತು. ಕಳೆದ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಅಂತಾರಾಷ್ಟ್ರೀಯ ವೈದ್ಯರನ್ನು ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ಸರ್ಕಾರ ಎರಡು ರೀತಿಯ ಪಟ್ಟಿಯನ್ನು ತಯಾರಿಸಿತ್ತು. ಮೊದಲನೇ ಪಟ್ಟಿ ಬ್ರಿಟಿಷ್ ಹಾಗೂ ಯೂರೋಪಿಯನ್ ವೈದ್ಯರದ್ದಾದರೆ, ಇನ್ನೊಂದು ಭಾರತೀಯರು ಸೇರಿದಂತೆ ಇತರ ರಾಷ್ಟ್ರಗಳ ವೈದ್ಯರ ಪಟ್ಟಿ. ಮೊದಲನೇ ಪಟ್ಟಿಯಲ್ಲಿರುವ ವೈದ್ಯರಿಂದ ಸ್ಥಾನ ಭರ್ತಿಯಾಗದಿದ್ದಾಗ ಮಾತ್ರ ಎರಡನೇ ಪಟ್ಟಿಯನ್ನು ಪರಿಶೀಲಿಸಲಾಗುತ್ತಿತ್ತು. ಇದರಿಂದ 16 ಸಾವಿರ ಸಾಗರೋತ್ತರ ವೈದ್ಯರಿಗೆ ತೊಂದರೆ ಉಂಟಾಯಿತು. ಸರ್ಕಾರದ ಈ ಆದೇಶವನ್ನು ಪ್ರಶ್ನಿಸಿ ಭಾರತೀಯ ವೈದ್ಯರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

2006: ಹದಿನಾರು ವರ್ಷದ ಬಾಲೆ ಅಕಾಂಷ ಜಾಚಕ್ ನಿರಂತರವಾಗಿ 61 ಗಂಟೆಗಳ ಕಾಲ ಹಾಡುವ ಮೂಲಕ ಇಂದೋರಿನಲ್ಲಿ ಗಿನ್ನೆಸ್ ದಾಖಲೆ ಸೃಷ್ಟಿಸಿದಳು. ನವೆಂಬರ್ 7ರಿಂದ ನವೆಂಬರ್ 9ರ ಮಧ್ಯರಾತ್ರಿಯವರೆಗೆ ಆಕೆ ನಿರಂತರವಾಗಿ 725 ಹಾಡುಗಳನ್ನು ಹಾಡಿ ಜನರನ್ನು ರಂಜಿಸಿದಳು.

2006: ಆಧುನಿಕ ವಚನಕಾರ ಶಿವಕವಿ ಸಂಗಮೇಶ ಹೊಸಮನಿ (90) ರಾಣೆಬೆನ್ನೂರಿನಲ್ಲಿ ನಿಧನರಾದರು. ಮೂಲತಃ ಹುನಗುಂದ ತಾಲ್ಲೂಕಿನ ರಾಮವಾಡಗಿ ಗ್ರಾಮದವರಾದ ಸಂಗಮೇಶ ರಾಣೆಬೆನ್ನೂರಿನಲ್ಲಿ ಹತ್ತು ವರ್ಷಗಳಿಂದ ವಾಸವಾಗಿದ್ದರು.

2006: `ಶೇನ್' ಚಿತ್ರದಲ್ಲಿ ಬಾಡಿಗೆ ಹಂತಕನಾಗಿ ನಟಿಸಿ ಖ್ಯಾತಿಯ ಶಿಖರ ತಲುಪಿದ್ದ ಹಾಲಿವುಡ್ ನಟ ಜಾಕ್ ಪಲಾನ್ಸ್ (87) ಲಾಸ್ ಏಂಜೆಲಿಸ್ನಲ್ಲಿ ನಿಧನರಾದರು.

2006: ಮದುವೆಯಾದ 11 ವರ್ಷಗಳ ಬಳಿಕ ಬಾಲಿವುಡ್ ನಟಿ ಶ್ರೀದೇವಿ ತನ್ನನ್ನು ತ್ಯಜಿಸಿರುವುದಾಗಿ ಪ್ರತಿಪಾದಿಸಿ ಆಂಧ್ರಪ್ರದೇಶದ ಗುಂಟೂರು ನಿವಾಸಿ ವಿಚರಪು ರಾಮಕೃಷ್ಣ ಗೌಡ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿತು. ತಾನು ಕಾನೂನು ಬದ್ಧವಾಗಿ ಶ್ರೇದೇವಿಯನ್ನು 15-3-1992ರಲ್ಲಿ ಮದುವೆಯಾಗಿದ್ದು ಆಕೆ 2003ರಲ್ಲಿ ತನ್ನನ್ನು ತ್ಯಜಿಸಿದ್ದಾಳೆ ಎಂದು ರಾಮಕೃಷ್ಣ ಗೌಡ ಚೆನ್ನೈ ಕೌಟುಂಬಿಕ ನ್ಯಾಯಾಲಯಕ್ಕೆ ದೂರು ನೀಡಿದ್ದ. 2004ರ ಮಾರ್ಚ್ 26ರಂದು ಕೌಟುಂಬಿಕ ನ್ಯಾಯಾಲಯ ಶ್ರೀದೇವಿಗೆ ನೋಟಿಸ್ ನೀಡಿತ್ತು. ಶ್ರೀದೇವಿ ಉತ್ತರಿಸುವ ಬದಲು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದರು. ಹೈಕೋರ್ಟ್ ಆಕೆಯ ಅರ್ಜಿಯನ್ನು ಪುರಸ್ಕರಿಸಿತು. ಗೌಡ ಈ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದ.

2006: ಭಾರತದ ಪ್ರಮುಖ ಕಂಪೆನಿ ಟಾಟಾ ಸಮೂಹವು ಪ್ರಸಿದ್ಧ ಬೋಸ್ಟನ್ ರಿಜ್ ಕಾರ್ಲಟನ್ ಹೋಟೆಲನ್ನು 17 ಕೋಟಿ ಡಾಲರ್ಗೆ ಖರೀದಿಸಲು ಮತ್ತು ಅದಕ್ಕೆ `ತಾಜ್ ಬೋಸ್ಟನ್' ಹೆಸರು ಇಡಲು ನಿರ್ಧರಿಸಿತು.

2001: ಬ್ಯೂನೋಸ್ ಐರಿಸ್ಸಿನ ಬೊಂಬೊನೇರಾ ಕ್ರೀಡಾಂಗಣದಲ್ಲಿ ಅರ್ಜೆಂಟೀನಾದ ಅತ್ಯುತ್ತಮ ಫುಟ್ಬಾಲ್ ಆಟಗಾರ ಡೀಗೋ ಮರಡೋನಾ ಅವರು ತಮ್ಮ `ವಿದಾಯ ಆಟ'ವನ್ನು ಆಡಿದರು.

2000: ಭಾರತ ಮತ್ತು ಬಾಂಗ್ಲಾದೇಶ ಡಾಕ್ಕಾದಲ್ಲಿ ತಮ್ಮ ಮೊತ್ತ ಮೊದಲ ಕ್ರಿಕೆಟ್ ಟೆಸ್ಟ್ ಆಡಿದವು.

1998: ಲಾಹೋರಿನಲ್ಲಿ ಪಾಕಿಸ್ಥಾನ ಮತ್ತು ಆಸ್ಟ್ರೇಲಿಯಾ ನಡುವಣ ಒಂದು ದಿನದ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಮೊತ್ತ ಮೊದಲ ಬಾರಿಗೆ ನಾಲ್ಕು ಸೆಂಚುರಿಗಳು ಸಿಡಿದವು. ಪಾಕಿಸ್ಥಾನದ ಇಯಾಜ್ ಅಹಮದ್ ಮತ್ತು ಯೂಸುಫ್ ಯೌಹಾನ ಅವರು ಶತಕಗಳನ್ನು ಬಾರಿಸಿದರೆ, ಆಸ್ಟ್ರೇಲಿಯಾದ ಆಡಮ್ ಗಿಲ್ ಕ್ರಿಸ್ಟ್ ಮತ್ತು ರಿಕಿ ಪಾಂಟಿಂಗ್ ಶತಕಗಳನ್ನು ಬಾರಿಸಿದರು. ಆಸ್ಟ್ರೇಲಿಯಾ 6 ವಿಕೆಟುಗಳ ಜಯ ಗಳಿಸಿತು.

1994: ಕನ್ನಡದ ಮೊದಲ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಕೆ.ವಿ. ಪುಟ್ಟಪ್ಪ (ಕುವೆಂಪು) ನಿಧನರಾದರು.

1990: ಚಂದ್ರಶೇಖರ್ ಅವರು ಭಾರತದ ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

1989: ಅಯೋಧ್ಯೆಯ ರಾಮಜನ್ಮಭೂಮಿಯ್ಲಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಶಂಕುಸ್ಥಾಪನೆ ನೆರವೇರಿತು.

1983: ಮೈಕ್ರೋಸಾಫ್ಟ್ ಕಾರ್ಪೊರೇಷನ್ ನ್ಯೂಯಾರ್ಕ್ ನಗರದಲ್ಲಿ `ವಿಂಡೋಸ್'ನ್ನು ಔಪಚಾರಿಕವಾಗಿ ಪ್ರಕಟಿಸಿತು.

1982: ಸೋವಿಯತ್ ನಾಯಕ ಲಿಯೋನಿದ್ ಬ್ರೆಜ್ನೇವ್ ತಮ್ಮ 75ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಮೃತರಾದರು.

1970: ಪ್ರವಾಸೋದ್ಯಮಕ್ಕಾಗಿ ಚೀನಾದ ಮಹಾಗೋಡೆಯನ್ನು ತೆರೆಯಲಾಯಿತು.

1948: ಸಾಹಿತಿ ವೇಣುಗೋಪಾಲ ಕಾಸರಗೋಡು ಜನನ.

1948: ಸಾಹಿತಿ ಬಿ.ವಿ. ಸತ್ಯನಾರಾಯಣರಾವ್ ಜನನ.

1933: ಸಾಹಿತಿ ಕೆ.ಎಸ್. ಕರುಣಾಕರನ್ ಜನನ.

1931: ಸಾಹಿತಿ ಬಿ.ಆರ್. ನಾಗೇಶ್ ಜನನ.

1926: ಸಾಹಿತಿ ಆದ್ಯ ರಾಮಾಚಾರ್ಯ ಜನನ.

1925: ಬ್ರಿಟಿಷ್ ಚಿತ್ರನಟ ರಿಚರ್ಡ್ ಬರ್ಟನ್ (1925-1984) ಹುಟ್ಟಿದ ದಿನ. ಇವರು ಚಿತ್ರನಟಿ ಎಲಿಜಬೆತ್ ಟೇಲರ್ ಅವರನ್ನು ಮದುವೆಯಾಗಿದ್ದರು.

1924: ಸಾಹಿತಿ ಕ.ವೆಂ. ರಾಜಗೋಪಾಲ ಜನನ.

1905: ಸಹೃದಯ, ಸುಸಂಸ್ಕೃತ ಹಾಸ್ಯದ `ರಾಶಿ' ಕಾವ್ಯನಾಮದ ಸಾಹಿತಿ ಡಾ. ಎಂ. ಶಿವರಾಂ (10-11-1905ರಿಂದ 13-1-1984) ಅವರು ರಾಮಸ್ವಾಮಯ್ಯ- ಸೀತಮ್ಮ ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಹುಟ್ಟಿದರು.

1848: ಆಧುನಿಕ ಭಾರತದ ಸ್ಥಾಪಕರಲ್ಲಿ ಒಬ್ಬರಾದ ಸುರೇಂದ್ರನಾಥ ಬ್ಯಾನರ್ಜಿ (1848-1925) ಹುಟ್ಟಿದ ದಿನ. ಬ್ರಿಟಿಷ್ ಕಾಮನ್ವೆಲ್ಥ್ ಅಡಿಯಲ್ಲೇ ಹೆಚ್ಚಿನ ಸ್ವಾಯತ್ತತೆ ನೀಡಬೇಕು ಎಂದು ಇವರು ಪ್ರಬಲವಾಗಿ ಪ್ರತಿಪಾದಿಸಿದ್ದರು.

No comments:

Advertisement