My Blog List

Wednesday, March 24, 2010

ಇಂದಿನ ಇತಿಹಾಸ History Today ಮಾರ್ಚ್ 24

ಇಂದಿನ ಇತಿಹಾಸ

ಮಾರ್ಚ್ 24

ವಿಶ್ವವಿಖ್ಯಾತ ಕಾಶ್ಮೀರದ ದಲ್ ಸರೋವರಕ್ಕೆ ಮುಖಮಾಡಿ ತಲೆ ಎತ್ತಿರುವ ಐದು ಎಕರೆ ಪ್ರದೇಶದಲ್ಲಿ ಹರಡಿಕೊಂಡ ಏಷ್ಯಾದ ಅತಿ ದೊಡ್ಡ ಟ್ಯುಲಿಪ್ ಹೂವಿನ ಉದ್ಯಾನ 2008ರ ಏಪ್ರಿಲ್ ತಿಂಗಳಿನಿಂದ ಸಾರ್ವಜನಿಕರ ವೀಕ್ಷಣೆಗೆ ತೆರೆಯಲಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪುಷ್ಪೋದ್ಯಮ ಇಲಾಖೆಯ ನಿರ್ದೇಶಕ ಸರ್ವರ್ ನಾಗೇಶ್ ತಿಳಿಸಿದರು.

2009: ಒಂಟಿ ಮಹಿಳೆಯರಿಗೆ ಸೈನೈಡ್ ನೀಡಿ ಕೊಲೆ ಮಾಡುತ್ತಿದ್ದ 'ಲೇಡಿ ಕಿಲ್ಲರ್' ಮಲ್ಲಿಕಾಗೆ ತುಮಕೂರಿನ ಒಂದನೇ ತ್ವರಿತ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸುವ ಮೂಲಕ ಮಹತ್ವದ ತೀರ್ಪು ನೀಡಿತು. ಬೆಂಗಳೂರಿನ ಮಲ್ಲಿಕಾ (45) ಮರಣ ದಂಡನೆಗೆ ಗುರಿಯಾದ ಆರೋಪಿ. ಬೆಂಗಳೂರು, ದೊಡ್ಡಬಳ್ಳಾಪುರ ಮತ್ತು ತುಮಕೂರು ಜಿಲ್ಲೆಯಲ್ಲಿ ಒಟ್ಟು ಐದು ಮಂದಿ ಮಹಿಳೆಯರನ್ನು ಕೊಲೆ ಮಾಡಿದ ಆರೋಪ ಈಕೆ ಮೇಲಿತ್ತು. 2007ರ ಡಿಸೆಂಬರ 15ರಂದು ಕುಣಿಗಲ್ ತಾಲ್ಲೂಕಿನ ಯಡಿಯೂರು ಸಿದ್ದಲಿಂಗೇಶ್ವರ ದೇವಸ್ಥಾನದ ಯಾತ್ರಿ ನಿವಾಸದ ಕೊಠಡಿಯಲ್ಲಿ ಬೆಂಗಳೂರಿನ ಚಿಕ್ಕಬೊಮ್ಮಸಂದ್ರದ ಮುನಿಯಮ್ಮ ಎಂಬ ಮಹಿಳೆಗೆ ಸೈನೈಡ್ ನೀಡಿ ಕೊಲೆ ಮಾಡಿದ್ದ ಆರೋಪದಲ್ಲಿ ಈಕೆಗೆ ಗಲ್ಲು ಶಿಕ್ಷೆಯನ್ನು ಒಂದನೇ ತ್ವರಿತ ನ್ಯಾಯಾಲಯದ ನ್ಯಾಯಾಧೀಶ ಎಸ್.ಎನ್. ಕೆಂಪಗೌಡರ್ ವಿಧಿಸಿದರು. ವಿಚಾರಣೆ ಶುರುವಾಗಿ ಕೇವಲ 6 ತಿಂಗಳ ಅವಧಿಯೊಳಗೆ ಈ ತೀರ್ಪು ಹೊರಬಿದ್ದಿತು. ಅಮಾಯಕ ಮಹಿಳೆಯರ ಸ್ನೇಹ ಸಂಪಾದಿಸುತ್ತಿದ್ದ ಆರೋಪಿ, ವಿಶೇಷ ಮಂಡಲ ಪೂಜೆ ಮಾಡಿಸುವುದಾಗಿ ನಂಬಿಸಿ ದೇವಸ್ಥಾನಗಳಿಗೆ ಕರೆದೊಯ್ಯುತ್ತಿದ್ದಳು. ಅಲ್ಲಿ ಕೊಠಡಿಗಳನ್ನು ಬಾಡಿಗೆ ಪಡೆದು ಮಹಿಳೆಯೊಂದಿಗೆ ಉಳಿದುಕೊಳ್ಳುತ್ತಿದ್ದ ಆರೋಪಿ, ಮಹಿಳೆಯನ್ನು ಕೊಂದು, ಆಭರಣ ದೋಚಿಕೊಂಡು ಪರಾರಿಯಾಗುತ್ತಿದ್ದಳು. ಮಹಿಳೆಯರಿಗೆ ದುಃಸ್ವಪ್ನವಾಗಿದ್ದ ಹಂತಕಿ ಮಲ್ಲಿಕಾ ಮೊದಲ ಬಾರಿಗೆ ಪೊಲೀಸರಿಗೆ ಸೆರೆ ಸಿಕ್ಕಿದ್ದು ಕಳವು ಮಾಡಿದ ಮೊಬೈಲ್‌ಗಳನ್ನು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದಾಗ, ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಆಗ ನಿಗೂಢವಾಗಿದ್ದ ಒಂಟಿ ಮಹಿಳೆಯರ ಕೊಲೆ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಮುನಿಯಮ್ಮನ ಕೊಲೆ ಪ್ರಕರಣದ ವಾದ- ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರು, ಇಂತಹ ಘೋರ ಅಪರಾಧಕ್ಕೆ ಏನು ಶಿಕ್ಷೆ ನೀಡಲಿ ಎಂದು ಅಪರಾಧಿಯನ್ನೇ ಕೇಳಿದರು. ಅಪರಾಧಿ ಮಲ್ಲಿಕಾ ಏನೂ ಪ್ರತಿಕ್ರಿಯಿಸದೆ ತಲೆ ತಗ್ಗಿಸಿಕೊಂಡಳು. ಮರಣದಂಡನೆ ಶಿಕ್ಷೆಯ ತೀರ್ಪನ್ನು ನ್ಯಾಯಾಧೀಶರು ಪ್ರಕಟಿಸಿದಾಗ ಕಣ್ಣೀರು ಹಾಕಿದಳು.

2009: ಪದಚ್ಯುತಗೊಂಡಿದ್ದ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಚೌಧರಿ ಮತ್ತೆ ಸುಪ್ರೀಂ ಕೋರ್ಟ್‌ನಲ್ಲಿ ಕೆಲಸ ಆರಂಭಿಸಿದಂತೆಯೇ, ಪಾಕಿಸ್ಥಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರಿಂದ ನಡೆದ ರಾಜದ್ರೋಹದ ಬಗ್ಗೆ ತನಿಖೆ ನಡೆಸಬೇಕೆಂದು ಕೋರಿ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಲಾಯಿತು. ಜಾಹಿದ್ ಹುಸೇನ್ ಎಂಬವರು ಸುಪ್ರೀಂ ಕೋರ್ಟಿನ ಲಾಹೋರ್ ನೋಂದಣಿ ಕಚೇರಿಯಲ್ಲಿ ಈ ಅರ್ಜಿ ಸಲ್ಲಿಸಿದರು. ಮುಷರಫ್ ಅವರು 1999-2008 ನಡುವಿನ ತಮ್ಮ ಅಧ್ಯಕ್ಷ ಅಧಿಕಾರ ಅವಧಿಯಲ್ಲಿ 'ಸಂವಿಧಾನವನ್ನು ಉಲ್ಲಂಘಿಸಿದ್ದಾರೆ' ಎಂದು ಅವರು ದೂರಿದರು.

2009: ಶಬ್ದಗ್ರಹಣಕ್ಕೆ ಅಗತ್ಯವಾದ ಒಳಧ್ವನಿಗೆ ಕಾರಣವಾಗುವ ಆಕರ ಕೋಶ (ಸ್ಟೆಮ್ ಸೆಲ್) ಪ್ರತ್ಯೇಕಿಸುವಲ್ಲಿ ಸಂಶೋಧಕರು ಸಫಲರಾಗಿದ್ದು, ಭ್ರೂಣದಿಂದ ಇಂತಹ ಕೋಶಗಳನ್ನು ಕಸಿ ಮಾಡುವುದರಿಂದ ಕೋಟ್ಯಂತರ ಕಿವುಡರನ್ನು ಶಬ್ದಲೋಕಕ್ಕೆ ಮರಳಿ ತರಿಸುವ ಸಾಧ್ಯತೆಗೆ ರೆಕ್ಕೆ ಪುಕ್ಕ ಮೂಡಿತು. ಮನುಷ್ಯನ ಶ್ರವಣೇಂದ್ರಿಯದಿಂದ ಪಡೆಯಲಾದ ವಿಟ್ರೊ ರಿನಿವೆಬಲ್ ಆಕರ ಕೋಶ ಪದ್ಧತಿಯಂತೆ ನಡೆಸಿದ ಪ್ರಯೋಗದಲ್ಲಿ ಕಂಡುಬಂದ ಪ್ರಥಮ ಫಲಿತಾಂಶ ಇದು. ಇದರಿಂದ ಭವಿಷ್ಯದಲ್ಲಿ ಕಿವುಡುತನ ನಿವಾರಣೆಗಾಗಿ ಆಕರ ಕೋಶ ಆಧಾರಿತ ವಿವಿಧ ಬಗೆಯ ಚಿಕಿತ್ಸೆ ನೀಡುವುದು ಸಾಧ್ಯವಿದೆ ಎಂದು ಸಂಶೋಧನೆಯ ನೇತೃತ್ವ ವಹಿಸಿದ ಶಫೀಲ್ಡ್ ವಿಶ್ವವಿದ್ಯಾಲಯದ ಮಾರ್ಸೆಲೊ ಎನ್. ರಿವೋಲ್ಟಾ ಪ್ರಕಟಿಸಿದರು. ಜಗತ್ತಿನಲ್ಲಿ ಇಂದು 25 ಕೋಟಿಗೂ ಅಧಿಕ ಕಿವುಡರಿದ್ದಾರೆ. ಅವರಿಗೆ ಇದು ವರದಾನವಾಗಬಲ್ಲುದು.

2008: ಫ್ರಾನ್ಸಿನ ಅಧ್ಯಕ್ಷ ನಿಕೊಲಸ್ ಸರ್ಕೋಜಿ ಮಾಜಿ ಪತ್ನಿ ಸಿಸಿಲಿಯಾ ಸಿಗ್ನರ್ - ಅಲ್ ಬೆನಿಝ್ ಅವರು ಮೊರಾಕ್ಕೊ ಮೂಲದ ತಮ್ಮ ಪ್ರಿಯಕರ ರಿಚರ್ಡ್ ಅತ್ತಿಯಾಸ್ ಅವರನ್ನು ನ್ಯೂಯಾರ್ಕಿನ ಹೆಸರಾಂತ `ರೇನ್ ಬೊ ರೂಂ'ನಲ್ಲಿ ವರಿಸಿದರು. ಸುಮಾರು 150 ಅತಿಥಿಗಳು ಇವರಿಬ್ಬರ ವಿವಾಹಕ್ಕೆ ಸಾಕ್ಷಿಯಾದರು. ಈ ಮದುವೆ ಅದೆಷ್ಟು ಗೌಪ್ಯವಾಗಿ ನಡೆಯಿತೆಂದರೆ ಆಹ್ವಾನಿತ ಅತಿಥಿಗಳು ಈ ಬಗ್ಗೆ ತುಟಿಪಿಟಿಕ್ ಎನ್ನಲಿಲ್ಲ.

2008: 2005ರಲ್ಲಿ ಕಾರ್ಯಾರಂಭ ಮಾಡಿದ ತುಮಕೂರು ವಿಶ್ವವಿದ್ಯಾಲಯದ ಚೊಚ್ಚಲ ಘಟಿಕೋತ್ಸವ ಈದಿನ ನಡೆಯಿತು. ಮಂಗಳೂರು ಮತ್ತು ಗೋವಾ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಬಿ. ಶೇಖ್ ಅಲಿ, ಕನ್ನಡದ ಹೆಸರಾಂತ ಹಿರಿಯ ಚಿತ್ರನಟ ಕೆ.ಎಸ್. ಅಶ್ವಥ್ ಅವರಿಗೆ ಗೌರವ ಡಾಕ್ಟರೇಟ್ ಮತ್ತು ಶಿಕ್ಷಣ ಪ್ರೇಮಿಗಳಾದ ಎಚ್.ಎಂ. ಗಂಗಾಧರಯ್ಯ ಮತ್ತು ಎಂ.ಎಸ್. ರಾಮಯ್ಯ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ನೀಡಲಾಯಿತು. 21 ಮಂದಿ ಪದವಿ ಮತ್ತು ಸ್ನಾತಕೋತ್ತರ ಪದವೀಧರರು ಚಿನ್ನದ ಪದಕ ಪಡೆದರು. ತುಮಕೂರು ವಿವಿಯ ಮೊದಲ ಗೌರವ ಡಾಕ್ಟರೇಟ್ ಪದವಿಗೆ ಪಾತ್ರರಾಗಿದ್ದ ಸಿದ್ಧಗಂಗಾ ಮಠಾಧೀಶ ಡಾ. ಶಿವಕುಮಾರ ಸ್ವಾಮೀಜಿ ಅವರು ಘಟಿಕೋತ್ಸವಕ್ಕೆ ಗೈರು ಹಾಜರಾಗಿದ್ದರು. ಮೊದಲೇ ಡಾಕ್ಟರೇಟ್ ಸಿಕ್ಕಿರುವುದರಿಂದ ಮತ್ತೊಮ್ಮೆ ಅದರ ಅಗತ್ಯವಿಲ್ಲ, ಆದ್ದರಿಂದ ಕಾರ್ಯಕ್ರಮಕ್ಕೆ ಬರುತ್ತಿಲ್ಲ ಎಂದು ಶ್ರೀಗಳು ಮೊದಲೇ ವಿವಿ ಆಡಳಿತದ ಗಮನಕ್ಕೆ ತಂದಿದ್ದರು.

2008: ದೇಶಾದ್ಯಂತ ಕುತೂಹಲ ಕೆರಳಿಸಿದ್ದ ಪತ್ರಕರ್ತೆ ಶಿವಾನಿ ಭಟ್ನಾಗರ್ ಕೊಲೆ ಪ್ರಕರಣದ ಆರೋಪಿಗಳಾದ ಅಮಾನತುಗೊಂಡ ಐಪಿಎಸ್ ಅಧಿಕಾರಿ ಆರ್. ಕೆ. ಶರ್ಮಾ ಮತ್ತು ಇತರ ಮೂವರಿಗೆ ನಗರದ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿತು. ಶರ್ಮಾ ಮತ್ತು ಇತರರು ಕೊಲೆ ಹಾಗೂ ಕ್ರಿಮಿನಲ್ ಒಳಸಂಚಿಗಾಗಿ ಶಿಕ್ಷೆಗೆ ಒಳಗಾದರು. ಶಿವಾನಿ ಬಳಿ ಶರ್ಮಾಗೆ ವಿರುದ್ಧವಾದ ಕೆಲವು `ದಾಖಲೆಗಳು' ಇದ್ದ ಕಾರಣಕ್ಕಾಗಿ ಶಿವಾನಿಯನ್ನು ಕೊಲೆಗೈಯಲಾಯಿತು ಎಂದು ಪ್ರಾಸೆಕ್ಯೂಷನ್ ಆಪಾದಿಸಿತ್ತು.

2008: ಬೀಜಿಂಗ್ ಒಲಿಂಪಿಕ್ ಕೂಟದ ಕ್ರೀಡಾಜ್ಯೋತಿಯನ್ನು ಗ್ರೀಕಿನ ಪ್ರಾಚೀನ ನಗರಿ ಒಲಿಂಪಿಯಾದಲ್ಲಿ ಬೆಳಗಿಸಲಾಯಿತು. ಇದರೊಂದಿಗೆ 2008ರ ಒಲಿಂಪಿಕ್ ಕ್ಷಣಗಣನೆ ಆರಂಭವಾಯಿತು.

2008: ಮೊಟ್ಟಮೊದಲ ಸಂಸದೀಯ ಚುನಾವಣೆಯನ್ನು ಕಾಣುತ್ತಿರುವ ಭೂತಾನಿನಲ್ಲಿ ಜನರು ಈದಿನ ತಮ್ಮ ಮತದಾನದ ಹಕ್ಕನ್ನು ಸಂಭ್ರಮೋತ್ಸಾಹದೊಂದಿಗೆ ಚಲಾಯಿಸಿದರು. ವಿಶ್ವದ ವಿವಿಧ ಕಡೆಗಳಲ್ಲಿ ಅಧಿಕಾರದಿಂದ ಕೆಳಗಿಳಿಯದೇ ಪ್ರಜಾಪ್ರಭುತ್ವದ ಕಗ್ಗೊಲೆ ನಡೆದರೆ, ಭೂತಾನಿನಲ್ಲಿ ಮಾತ್ರ ಇದಕ್ಕೆ ವಿರುದ್ಧ. ಭೂತಾನ್ ದೊರೆ ಜಿಗ್ಮೆ ವಾಂಗ್ಚುಕ್ ಅವರೇ ಪ್ರಜಾಪ್ರಭುತ್ವ ಸ್ಥಾಪನೆಗೆ ಮುಂದಾದದ್ದು ಒಂದು ವಿಶೇಷ.

2008: 65 ವರ್ಷದ ಭೂತಾನೀ ಮಹಿಳೆಯೊಬ್ಬರು (ಅಜ್ಜಿ) ತನ್ನ ಮತ ಚಲಾಯಿಸಲು ರಬ್ಬರ್ ಚಪ್ಪಲಿಗಳನ್ನು ಧರಿಸಿ, ಕೈಯಲ್ಲಿ ಊರುಗೋಲು ಹಿಡಿದುಕೊಂಡು 600 ಕಿ.ಮೀ. ದೂರ ಪಾದಯಾತ್ರೆ ಮಾಡಿದರು. ಈಕೆಯ ಹೆಸರು ತ್ಸೆವಾಂಗ್ ಡೇಮಾ. ಪೂರ್ವದ ಟ್ರಶಿಯಾಂಗ್ ಸ್ತೆ ಜಿಲ್ಲೆಯಲ್ಲಿನ ಮತಗಟ್ಟೆ ತಲುಪಲು ಈಕೆ ಥಿಂಪುವಿನಿಂದ 14 ದಿನಗಳ ಪಾದಯಾತ್ರೆ ಮಾಡಿದರು. ಚಳಿಯಲ್ಲಿ ಗಢಗಢ ನಡುಗುತ್ತಾ, ಬೆಟ್ಟಗುಡ್ಡಗಳ ಕಡಿದಾದ ದಾರಿಯನ್ನು ಹತ್ತಿ ಇಳಿದರು.

2008: ಪ್ರಧಾನಿ ಮನಮೋಹನ್ ಸಿಂಗ್ ಅವರು 5000 ಕೋಟಿ ರೂಪಾಯಿ ವೆಚ್ಚದ ಅನಿಲ ಆಧಾರಿತ ವಿದ್ಯುತ್ ಯೋಜನೆಗೆ ನವದೆಹಲಿಯಲ್ಲಿ ಶಂಕುಸ್ಥಾಪನೆ ನೆರವೇರಿಸಿದರು.

2008: ಕೇಂದ್ರ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ನೇಮಿಸಲಾಗಿದ್ದ ನ್ಯಾಯಮೂರ್ತಿ ಬಿ. ಎನ್. ಶ್ರೀಕೃಷ್ಣ ನೇತೃತ್ವದ ಆರನೇ ವೇತನ ಆಯೋಗವು ಸರ್ಕಾರಕ್ಕೆ ತನ್ನ ಶಿಫಾರಸು ಸಲ್ಲಿಸಿತು. ಕೇಂದ್ರ ಸರ್ಕಾರಿ ನೌಕರರಿಗೆ ನೀಡುವ ವಿವಿಧ ಭತ್ಯೆಗಳನ್ನು ದುಪ್ಪಟ್ಟುಗೊಳಿಸಲು ಆಯೋಗ ಶಿಫಾರಸು ಮಾಡಿತು. ವೇತನ ಆಯೋಗ ಮಾಡಿದ ಶಿಫಾರಸಿನಿಂದ ಸರ್ಕಾರದ ಬೊಕ್ಕಸಕ್ಕೆ 2008-2009ನೇ ಸಾಲಿನಲ್ಲಿ 12,561 ಕೋಟಿ ರೂಪಾಯಿಗಳಷ್ಟು ಹೊರೆಯಾಗುವುದು.

2008: ಕೆಲವು ಯುವಕರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ವಿಫಲರಾದರೆಂಬ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ಜನರ ಗುಂಪೊಂದು ಆಗ್ರಾ ಜಿಲ್ಲೆಯ ಖೇರಗಢ ಪಟ್ಟಣದ ಪೊಲೀಸ್ ಠಾಣೆಗೆ ಕಿಚ್ಚಿಟ್ಟು ಆವರಣದಲ್ಲಿದ್ದ ಕೆಲವು ವಾಹನಗಳಿಗೂ ಬೆಂಕಿ ಹಚ್ಚಿದ ಘಟನೆ ನಡೆಯಿತು. ನಗರ ಪಂಚಾಯತ್ ಅಧ್ಯಕ್ಷ ಅನಿಲ್ ಗಾರ್ಗ್ ಅವರು ಕುಡಿದ ಮತ್ತಿನಲ್ಲಿ ಹಿಂಸಾಚಾರ ನಿರತರಾಗಿದ್ದ ನಾಲ್ವರು ಯುವಕರನ್ನು ಪೊಲೀಸರಿಗೆ ಒಪ್ಪಿಸಿದ್ದ ಘಟನೆ ಇದಕ್ಕೆ ಕಾರಣವಾಯಿತು. ಪೊಲೀಸರು ಈ ಯುವಕರನ್ನು ಹಾಗೆಯೇ ಬಿಟ್ಟು ಬಿಟ್ಟಾಗ ಸಿಟ್ಟಿಗೆದ್ದ ಗಾರ್ಗ್ ಬೆಂಬಲಿಗರು ಗಲಭೆಯಲ್ಲಿ ತೊಡಗಿದರು ಎಂಬುದು ಪೊಲೀಸರ ಹೇಳಿಕೆ.

2008: ವಿಶ್ವವಿಖ್ಯಾತ ಕಾಶ್ಮೀರದ ದಲ್ ಸರೋವರಕ್ಕೆ ಮುಖಮಾಡಿ ತಲೆ ಎತ್ತಿರುವ ಐದು ಎಕರೆ ಪ್ರದೇಶದಲ್ಲಿ ಹರಡಿಕೊಂಡ ಏಷ್ಯಾದ ಅತಿ ದೊಡ್ಡ ಟ್ಯುಲಿಪ್ ಹೂವಿನ ಉದ್ಯಾನ 2008ರ ಏಪ್ರಿಲ್ ತಿಂಗಳಿನಿಂದ ಸಾರ್ವಜನಿಕರ ವೀಕ್ಷಣೆಗೆ ತೆರೆಯಲಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪುಷ್ಪೋದ್ಯಮ ಇಲಾಖೆಯ ನಿರ್ದೇಶಕ ಸರ್ವರ್ ನಾಗೇಶ್ ತಿಳಿಸಿದರು.

2007: ಪಾಕಿಸ್ಥಾನದ ಮುಖ್ಯ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ರಾಣಾ ಭಗವಾನ್ ದಾಸ್ ಪ್ರಮಾಣ ವಚನ ಸ್ವೀಕರಿಸಿದರು ಪಾಕಿಸ್ಥಾನದ ನ್ಯಾಯಾಂಗ ವ್ಯವಸ್ಥೆಯಲ್ಲಿ ಅತ್ಯುನ್ನತ ಸ್ಥಾನಕ್ಕೆ ಏರಿದ ಪ್ರಥಮ ಹಿಂದೂ ಎಂಬ ಹೆಗ್ಗಳಿಕೆ ಅವರದಾಯಿತು.

2007: ಭಾರತೀಯ ಸಂಜಾತರಿಗೆ ನೀಡುವ ಇಂಡಿಯನ್ ಅಬ್ರಾಡ್ ಪ್ರಶಸ್ತಿಯನ್ನು ಪೆಪ್ಸಿಕೊ ಕಂಪೆನಿಯ ಅಧ್ಯಕ್ಷೆ ಇಂದಿರಾ ನೂಯಿ, ಗಗನಯಾತ್ರಿ ಸುನೀತಾ ವಿಲಿಯಮ್ಸ್, ಸಾಹಿತಿ ಸಲ್ಮಾನ್ ರಷ್ದಿ ಹಾಗೂ ಸಮುದಾಯ ನಾಯಕ ಸ್ವದೇಶ್ ಚಟರ್ಜಿ ಅವರಿಗೆ ನ್ಯೂಯಾರ್ಕಿನಲ್ಲಿ ನೀಡಲಾಯಿತು.

2007: ಸೋಮಾಲಿಯಾದ ಮೊಗದಿಶು ವಿಮಾನ ನಿಲ್ದಾಣದ ಸಮೀಪ ಸಂಭವಿಸಿದ ವಿಮಾನ ಅಪಘಾತದಲ್ಲಿ ಹನ್ನೊಂದು ಮಂದಿ ಮೃತರಾದರು. ಕ್ಷಿಪಣಿ ದಾಳಿಯಿಂದಾಗಿ ಅಪಘಾತ ಸಂಭವಿಸಿದೆ ಎಂದು ಬೈಲೋರಷ್ಯ ಪ್ರಕಟಿಸಿತು.

2007: ಬಹುಕೋಟಿ ನಕಲಿ ಛಾಪಾಕಾಗದ ಹಗರಣಕ್ಕೆ ಸಂಬಂಧಿಸಿದಂತೆ ಪೀಣ್ಯ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ವಿಚಾರಣೆ ಪೂರೈಸಿದ ಬೆಂಗಳೂರು ನಗರದ ವಿಶೇಷ ಸಿಬಿಐ ನ್ಯಾಯಾಲಯ ಪ್ರಮುಖ ಆರೋಪಿ ಅಬ್ದುಲ್ ಕರೀಂ ಲಾಲಾ ತೆಲಗಿ ಹಾಗೂ ಆತನ ನಾಲ್ವರು ಸಹಚರರಿಗೆ 10 ವರ್ಷಗಳ ಕಠಿಣ ಸಜೆ ಹಾಗೂ ತಲಾ 6.75 ಲಕ್ಷ ರೂಪಾಯಿಗಳ ದಂಡ ವಿಧಿಸಿತು. ತೆಲಗಿಗೆ ರಾಜ್ಯದಲ್ಲಿ ವಿಧಿಸಲಾದ ಮೊದಲ ಶಿಕ್ಷೆ ಇದಾಯಿತು.

2007: ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಎಂಟು ಮಂದಿ ಕ್ರಿಯಾಶೀಲರಿಗೆ `ನಾಡಚೇತನ' ಪ್ರಶಸ್ತಿ ಸೇರಿದಂತೆ ಹೆಸರಾಂತ ನಿರ್ದೇಶಕರಾಗಿದ್ದ ದಿವಂಗತ ಸಿ.ಜಿ. ಕೃಷ್ಣಸ್ವಾಮಿ ಅವರ ಹೆಸರಿನ ಸಿಜಿಕೆ ಪ್ರಶಸ್ತಿಯನ್ನು ಸಾಹಿತಿ ಕೋಟಗಾನಹಳ್ಳ ರಾಮಯ್ಯ ಅವರಿಗೆ ರಂಗಚೇತನ ಸಂಸ್ಥೆ ಬೆಂಗಳೂರಿನಲ್ಲಿ ಪ್ರಕಟಿಸಿತು.

2007: ಆವಶ್ಯಕತೆಗೆ ತಕ್ಕಂತೆ ನಗರ ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯ ಮಟ್ಟದ ನಗರ ಭೂ ಸಾರಿಗೆ ನಿರ್ದೇಶನಾಲಯ ಹಾಗೂ ಬೆಂಗಳೂರು ಭೂ ಸಾರಿಗೆ ಪ್ರಾಧಿಕಾರವನ್ನು ರಚಿಸಿ ಆದೇಶ ಹೊರಡಿಸಿತು.

2006: ಮೆಲ್ಬೋರ್ನ್ ಕಾಮನ್ವೆಲ್ತ್ ಕ್ರೀಡಾಕೂಟದ ಪುರುಷರ 50 ಮೀ. ರೈಫಲ್ ಮೂರು ಭಂಗಿ ಸ್ಪರ್ಧೆಯಲ್ಲಿ ಗಗನ್ ನಾರಂಗ್ ಮತ್ತು ಅಭಿನವ್ ಬಿಂದ್ರಾಗೆ ಮೊದಲ ಎರಡು ಸ್ಥಾನಗಳು ಲಭಿಸಿದವು.

2006: ದಕ್ಷಿಣ ಕೊರಿಯಾದ ಮೊದಲ ಮಹಿಳಾ ಪ್ರಧಾನಿಯಾಗಿ ಹ್ಯಾನ್ ಮೈಂಗ್ ಸೂಕ್ ಆಯ್ಕೆಯಾದರು.

2006: ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿ ಸೇರಿದಂತೆ ಲಾಭದ ಹುದ್ದೆ ಹೊಂದಿದ ಲೋಕಸಭೆ ಮತ್ತು ರಾಜ್ಯಸಭೆಯ ಒಟ್ಟು 18 ಸದಸ್ಯರ ವಿರುದ್ಧ ಬಂದ ದೂರುಗಳನ್ನು ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಪರಿಶೀಲನೆಗಾಗಿ ಚುನಾವಣಾ ಆಯೋಗಕ್ಕೆ ಕಳುಹಿಸಿದರು. ಲಾಭದ ಹುದ್ದೆ ಹಿನ್ನೆಲೆಯಲ್ಲಿ ರಾಜ್ಯಸಭೆಗೆ ನಾಮಕರಣಗೊಂಡಿದ್ದ ಕಪಿಲಾ ವಾತ್ಸಾಯನ ತಮ್ಮ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು.

2006: ಲಾಭದ ಹುದ್ದೆ ಹೊಂದಿರುವ ಜಾರ್ಖಂಡಿನ ನಾಲ್ವರು ಶಾಸಕರನ್ನು ಅನರ್ಹಗೊಳಿಸುವಂತೆ ರಾಜ್ಯಪಾಲ ಸೈಯದ್ ಸಿಬ್ತೆ ರಜಿ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಿದರು. ಇದರಿಂದಾಗಿ ಬಿಜೆಪಿ ನೇತೃತ್ವದ ಅರ್ಜುನ್ ಮುಂಡಾ ಅವರ ಎನ್ ಡಿ ಎ ಸರ್ಕಾರ ಪತನದ ಅಂಚಿಗೆ ಬಂದು ನಿಂತಿತು.

1983: ಕಲಾವಿದೆ ಶ್ವೇತಾ ರತ್ನಾಕರ ಭಟ್ಟ ಜನನ.

1977: ಮೊರಾರ್ಜಿ ದೇಸಾಯಿ ಅವರು ಭಾರತದ ನಾಲ್ಕನೆಯ ಪ್ರಧಾನ ಮಂತ್ರಿಯಾದರು. ಕೇಂದ್ರದಲ್ಲಿ ಪ್ರಪ್ರಥಮ ಕಾಂಗ್ರೆಸ್ಸೇತರ ಸರ್ಕಾರವನ್ನು ಅವರು ಸ್ಥಾಪಿಸಿದರು. 81 ವರ್ಷ ವಯಸ್ಸಾಗಿದ್ದ ಅವರು ಅತ್ಯಂತ ಹಿರಿಯ ಪ್ರಧಾನಿ ಎನ್ನಿಸಿಕೊಂಡರು.

1943: ಸುಳಾದಿ ನೃತ್ಯ ಪ್ರಕಾರದಲ್ಲಿ ಪರಿಣತಿ ಪಡೆದ ನರ್ತಕಿ ಲಲಿತಾ ಶ್ರೀನಿವಾಸನ್ ಅವರು ಶಿವನ ಸಮುದ್ರದಲ್ಲಿ ಜನಿಸಿದರು. ಕೇಂದ್ರ ಸಂಸ್ಕೃತಿ ಇಲಾಖೆಯ ನೆರವಿನೊಂದಿಗೆ ಸುಲಲಿತ ನೃತ್ಯ ಸಂಶೋಧನೆಗಾಗಿ ಶ್ರಮಿಸಿದ ಅವರು ಅನೇಕ ಪ್ರಾತ್ಯಕ್ಷಿಕೆ, ನೃತ್ಯ ಕಾರ್ಯಾಗಾರಗಳನ್ನು ಸಂಘಟಿಸಿದರು. ದೇಶ- ವಿದೇಶಗಳಲ್ಲಿ ಪ್ರಾತ್ಯಕ್ಷಿಕೆ, ಕಾರ್ಯಾಗಾರಗಳನ್ನು ನಡೆಸಿದರು.

1932: ಜಗತ್ತಿನ ಮುಂಚೂಣಿಯ ಕ್ರಿಕೆಟ್ ಪ್ರಚಾರಕ ಲಾರ್ಡ್ ಹ್ಯಾರಿಸ್ ತಮ್ಮ 81ನೇ ವಯಸ್ಸಿನಲ್ಲಿ ಮೃತರಾದರು. ಮುಂಬೈಯ ಗವರ್ನರ್ ಆಗಿದ್ದ ಕಾಲದಲ್ಲಿ ಅವರು ಭಾರತದಲ್ಲಿ ಕ್ರಿಕೆಟನ್ನು ಬೆಳೆಸಲು ಪ್ರೋತ್ಸಾಹ ನೀಡಿದರು. ಐರೋಪ್ಯರು ಮತ್ತು ಪಾರ್ಸಿಗಳ ನಡುವೆ ವಾರ್ಷಿಕ ದೇಶೀ ಕ್ರಿಕೆಟ್ ಪಂದ್ಯಗಳನ್ನು ಅವರು ಆರಂಭಿಸಿದರು.

1882: ಜರ್ಮನ್ ವಿಜ್ಞಾನಿ ರಾಬರ್ಟ್ ಕೋಚ್ ಅವರು ಬರ್ಲಿನ್ನಿನ ಫಿಸಿಯೊಲಾಜಿಕಲ್ ಸೊಸೈಟಿಯಲ್ಲಿ ಎಲ್ಲ ರೂಪದ ಕ್ಷಯ (ಟ್ಯೂಬರ್ ಕ್ಯುಲೋಸಿಸ್) ರೋಗಕ್ಕೆ ಕಾರಣವಾದ ಟ್ಯೂಬರ್ ಕುಲ್ ಬ್ಯಾಸಿಲಸ್ಸನ್ನು ತಾನು ಪ್ರತ್ಯೇಕಿಸಿ ಅಭಿವೃದ್ಧಿ ಪಡಿಸಿರುವುದಾಗಿ ಪ್ರಕಟಿಸಿದ. (ಈತ ಸೊಳ್ಳೆಗಳಿಂದ ಮಲೇರಿಯಾ ಹರಡುತ್ತದೆ ಎಂಬುದನ್ನೂ ಹೆಚ್ಚು ಕಡಿಮೆ ಕಂಡುಕೊಂಡಿದ್ದ, ಆದರೆ ಬ್ರಿಟಿಷ್ ಬ್ಯಾಕ್ಟೀರಿಯಾ ತಜ್ಞ ರೊನಾಲ್ಡ್ ರಾಸ್ ತಾನು ಕಂಡುಕೊಂಡ ಇದೇ ನಿರ್ಣಯವನ್ನು ಕೋಚ್ ಗಿಂತ ಮೊದಲೇ ಪ್ರಕಟಿಸಿ ಈತನನ್ನು ಹಿಂದೆ ಹಾಕಿದ ಎಂಬುದು ಬಹುಜನಕ್ಕೆ ಗೊತ್ತಿಲ್ಲದ ಸಂಗತಿ).

1874: `ಹ್ಯಾರಿ ಹೌಡಿನಿ' ಎಂದೇ ಖ್ಯಾತನಾಗಿದ್ದ ಅಮೆರಿಕದ ಖ್ಯಾತ ಐಂದ್ರಜಾಲಿಕ ಎರಿಕ್ ವೀಸ್ (1874-1926) ಹುಟ್ಟಿದ ದಿನ.

1834: ಇಂಗ್ಲಿಷ್ ವಿನ್ಯಾಸಕಾರ, ಕುಶಲಕರ್ಮಿ ವಿಲಿಯಂ ಮೋರಿಸ್ ಜನ್ಮದಿನ. ಈತ ನಿರ್ಮಿಸಿದ ಪೀಠೋಪಕರಣ, ಬಟ್ಟೆಗಳು, ವಾಲ್ ಪೇಪರ್ ಇನ್ನಿತರ ಅಲಂಕಾರಿಕ ವಸ್ತುಗಳು ಇಂಗ್ಲೆಂಡಿನಲ್ಲಿ ಕಲೆ ಮತ್ತು ಕುಶಲಕಲೆಗಳ ಚಳವಳಿಯನ್ನೇ ಹುಟ್ಟುಹಾಕಿತು.

No comments:

Advertisement