My Blog List

Wednesday, May 5, 2010

ಇಂದಿನ ಇತಿಹಾಸ History Today ಮೇ 05

ಇಂದಿನ ಇತಿಹಾಸ

ಮೇ 05

ಹತ್ತು ಕೋಟಿ ರೂಪಾಯಿಗಳ ಚೆಕ್ ಅಮಾನ್ಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರನಟಿ ಶ್ರೀದೇವಿ ಮತ್ತು ಮಹಾರಾಷ್ಟ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿತು. ಮುಂಬೈಯ ಫೋಟೋ ಫಿಲ್ಮ್ ಸರಬರಾಜುದಾರ ಹಾಗೂ ಫೈನಾನ್ಸಿಯರ್ ಜಿ.ಜಿ. ಫೋಟೋ ಲಿಮಿಟೆಡ್, ಫೋಟೋ ಫಿಲ್ಮ್ ಇಂಡಸ್ಟೀಸ್ ಮತ್ತು ಫೋಟೋ ಇಂಡಸ್ಟ್ರೀಸ್ ಸಲ್ಲಿಸಿದ ಅರ್ಜಿ ಸಂಬಂಧವಾಗಿ ಪ್ರತಿಕ್ರಿಯೆ ನೀಡುವಂತೆ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ನೇತೃತ್ವದ ಪೀಠವು ಚಿತ್ರನಟಿ ಮತ್ತು ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸಿತು.

2009: ಪ್ರೀತಿಸಿ ವಿವಾಹವಾದ ಚಿತ್ರನಟರಾದ ಶ್ರುತಿ, ಮಹೇಂದರ್ ಅವರ ದಶಕದ ದಾಂಪತ್ಯದಲ್ಲಿ ಅಪಶ್ರುತಿ ಮೂಡಿತು. ಶ್ರುತಿ ಅವರು ವಿವಾಹ ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದರು. ಮೇ 21ರಂದು 11ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಬೇಕಾಗಿದ್ದ ಈ ದಂಪತಿಯ ವೈವಾಹಿಕ ಜೀವನ, ಕಾನೂನು ಸಮರಕ್ಕೆ ನಾಂದಿ ಹಾಡಿತು. ಶ್ರುತಿ ಅವರದ್ದು ಪ್ರೇಮ ವಿವಾಹ. 1998ರ ಮೇ 21ರಂದು ಒರಿಸ್ಸಾದ ಪುರಿಯ ಜಗನ್ನಾಥ ದೇವಾಲಯದಲ್ಲಿ ಇವರ ವಿವಾಹ ನೆರವೇರಿತ್ತು. 2002ರ ಜೂನ್ 6ರಂದು ಪುತ್ರಿ ಗೌರಿಗೆ ಶ್ರುತಿ ಜನ್ಮ ನೀಡಿದ್ದರು.

2009: ಪುರುಷರಿಗೆ ಯಾವುದೇ ಅಡ್ಡ ಪರಿಣಾಮವಿಲ್ಲದ ಸಂತಾನ ನಿರೋಧಕ ಚುಚ್ಚುಮದ್ದು ಕಂಡುಹಿಡಿಯುವಲ್ಲಿ ತಾವು ಯಶಸ್ವಿಯಾಗಿರುವುದಾಗಿ ಚೀನಾ ಸಂಶೋಧಕರು ಬೀಜಿಂಗ್‌ನಲ್ಲಿ ಪ್ರಕಟಿಸಿದರು. ಈ ಚುಚ್ಚುಮದ್ದು ಮಿದುಳಿನಲ್ಲಿ ಸೃಷ್ಟಿಯಾಗುವ ಎರಡು ಬಗೆಯ ನಿಯಂತ್ರಕ ರಾಸಾಯನಿಕಗಳ ಪ್ರಮಾಣ ಕುಗ್ಗಿಸಿ ವೀರ್ಯಾಣುಗಳ ಉತ್ಪಾದನೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯುತ್ತದೆ ಎಂದು ಹೇಳಲಾಯಿತು. ಈ ಮುಂಚೆ ಪುರುಷರಿಗಾಗಿ ಇದ್ದ ಸಂತಾನ ನಿರೋಧಕಗಳು ಚಂಚಲ ಚಿತ್ತತೆ, ಲೈಂಗಿಕ ವಾಂಛೆಯ ಕ್ಷೀಣಿಸುವಿಕೆ ಸೇರಿದಂತೆ ಹಲವು ಅಡ್ಡ ಪರಿಣಾಮಗಳನ್ನು ಬೀರುತ್ತವೆ ಎಂಬ ದೂರುಗಳು ಕೇಳಿಬಂದಿದ್ದವು. ಟೆಸ್ಟೋಸ್ಟಿರಾನ್ ಆಧರಿಸಿದ ಈ ಚುಚ್ಚುಮದ್ದನ್ನು ಪುರುಷರಿಗೆ ನೀಡಿ ಪರೀಕ್ಷೆಗೆ ಒಳಪಡಿಸಿದಾಗ ಶೇ 99 ಯಶಸ್ಸು ಸಿಕ್ಕಿದೆ ಎಂದು ಸಂಶೋಧಕರು ಪ್ರತಿಪಾದಿಸಿದರು. 1000 ಆರೋಗ್ಯವಂತ ಪುರುಷರ ಮೇಲೆ ಎರಡು ವರ್ಷ ಕಾಲ ಚುಚ್ಚುಮದ್ದು ನೀಡಿ ಇದನ್ನು ಖಚಿತ ಮಾಡಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಕುಟುಂಬ ನಿಯಂತ್ರಣ ಸಂಶೋಧನಾ ಕೇಂದ್ರದ ಮುಖ್ಯ ಸಂಶೋಧಕ ಡಾ.ಯಿ ಕುನ್ ಗು ತಿಳಿಸಿದರು.

2008: ಮ್ಯಾನ್ಮಾರನ್ನು ಬಾಧಿಸಿದ ಭೀಕರ `ನರ್ಗೀಸ್' ಚಂಡಮಾರುತದಿಂದ ಸತ್ತವರ ಸಂಖ್ಯೆ 10 ಸಾವಿರ ದಾಟಿದೆ ಎಂದು ಸರ್ಕಾರಿ ಸ್ವಾಮ್ಯದ ರೇಡಿಯೊ ವರದಿ ಮಾಡಿತು. ಇರವಡ್ಡಿ ನದಿಯ ತಟದಲ್ಲಿರುವ ಬೊಗಾಲೇ ಪಟ್ಟಣವೊಂದರಲ್ಲೇ 3 ಸಾವಿರಕ್ಕೂ ಅಧಿಕ ಮಂದಿ ಸತ್ತರು.

2008: ಲಾಟ್ವಿಯ ಕರಾವಳಿ ಬಳಿ ನೆಲಕಚ್ಚಿದ ಐಷಾರಾಮಿ ವಿಹಾರ ನೌಕೆಯನ್ನು ಮೇಲೆತ್ತುವ ಕಾರ್ಯ ವಿಫಲವಾಯಿತು. ಅದರಲ್ಲಿ ಸಿಕ್ಕಿಹಾಕಿಕೊಂಡ ಸುಮಾರು 650 ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳಿಸಬೇಕಾಗಿದೆ ಎಂದು ಎಂದು ಸ್ಥಳೀಯ ಕರಾವಳಿ ರಕ್ಷಣಾ ಪಡೆ ತಿಳಿಸಿತು. ಬಾಲ್ಟಿಕ್ ಸಮುದ್ರದಿಂದ ರಿಗಾ ಬಂದರಿಗೆ ಹೊರಟಿದ್ದ ಬಹುತೇಕ ಜರ್ಮನ್ನರೇ ಇದ್ದ ಬಹಾಮಾ ನೋಂದಾಯಿತ `ಮೋನಾಲಿಸಾ' ಹೆಸರಿನ ಈ ನೌಕೆ ಇರ್ಬಿ ಕಡಲ್ಗಾಲುವೆಯಲ್ಲಿ ಸಿಕ್ಕಿಹಾಕಿಕೊಂಡಿತು.

2008: 1993ರ ಮುಂಬೈ ಸರಣಿ ಸ್ಫೋಟ ಪ್ರಕರಣದ ವಿಶೇಷ ಟಾಡಾ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸಿದ್ದ ಪ್ರಮೋದ್ ಕೋಡೆ ಅವರನ್ನು ನಾಸಿಕ್ ಜಿಲ್ಲಾ ನ್ಯಾಯಾಲಯಕ್ಕೆ ನ್ಯಾಯಾಧೀಶರನ್ನಾಗಿ ವರ್ಗಾವಣೆ ಮಾಡಲಾಯಿತು. ಬಾಂಬೆ ಹೈಕೋರ್ಟಿನ ಅಧಿಕೃತ ವೆಬ್ ಸೈಟಿನಲ್ಲಿ ಪ್ರಕಟವಾದ ಅಧಿಸೂಚನೆಯಲ್ಲಿ ಈ ವಿಷಯ ಬೆಳಕಿಗೆ ಬಂತು. ಕೋಡೆ ಅವರ ಸ್ಥಾನಕ್ಕೆ ನಾಗಪುರ ಜಿಲ್ಲಾ ನ್ಯಾಯಾಧೀಶ ಟಿ.ವಿ. ನಾಲ್ವಡೆ ಅವರನ್ನು ನೇಮಕ ಮಾಡಲಾಯಿತು. ಕೋಡೆ ಅವರು ದಾವೂದ್ ಇಬ್ರಾಹಿಂ ಶಾಮೀಲಾದ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣವನ್ನು ಒಟ್ಟು 13 ವರ್ಷಗಳ ಕಾಲ ವಿಚಾರಣೆ ನಡೆಸಿ 100 ಜನರಿಗೆ ಶಿಕ್ಷೆ ನೀಡಿದ್ದರು. ಅದರಲ್ಲಿ 12 ಮಂದಿ ಗಲ್ಲು ಶಿಕ್ಷೆ ಮತ್ತು 20 ಮಂದಿಗೆ ಜೀವಾವಧಿ ಶಿಕ್ಷೆಯನ್ನು ಅವರು ಘೋಷಿಸಿದ್ದರು. ಬಾಲಿವುಡ್ ನಟ ಸಂಜಯ್ ದತ್ ಅವರನ್ನು ಕೋಡೆ ಅವರೇ ವಿಚಾರಣೆ ನಡೆಸಿ, ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಏಳು ವರ್ಷಗಳ ಸೆರೆಮನೆ ವಾಸ ಶಿಕ್ಷೆಯನ್ನು ವಿಧಿಸಿದ್ದರು.

2008: ಸಾರ್ವಜನಿಕರ ಅನುಕೂಲದ ದೃಷ್ಟಿಯಿಂದ ಎಚ್ ಎ ಎಲ್ ವಿಮಾನ ನಿಲ್ದಾಣದಲ್ಲಿ ನಾಗರಿಕ ವಿಮಾನಯಾನವನ್ನು ಮುಂದುವರೆಸಿಕೊಂಡು ಹೋಗಬೇಕೆಂಬ ಬೇಡಿಕೆಯನ್ನು ಪರಿಶೀಲಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತು. ಬೆಂಗಳೂರಿನ ಸ್ವಯಂಸೇವಾ ಸಂಸ್ಥೆಯೊಂದು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಮತ್ತು ನ್ಯಾಯಮೂರ್ತಿ ಎಂ.ಕೆ. ಶರ್ಮಾ ` ಈ ವಿಷಯದಲ್ಲಿ ನಾವೂ ಕಳಕಳಿ ಹೊಂದಿದ್ದೇವೆ' ಎಂದರು.

2008: ರಾಷ್ಟ್ರಕವಿ ಡಾ. ಜಿ.ಎಸ್ .ಶಿವರುದ್ರಪ್ಪ ಅವರಿಗೆ ಬಸವ ವೇದಿಕೆಯು ಪ್ರಸಕ್ತ ಸಾಲಿನ `ಬಸವಶ್ರೀ' ಪ್ರಶಸ್ತಿ ನೀಡಿ ಗೌರವಿಸಲು ನಿರ್ಧರಿಸಿತು. ಶರಣ ಸಾಹಿತ್ಯದಲ್ಲಿ ಅಪಾರವಾದ ಕೃಷಿ ಮಾಡಿದ ಗುಲ್ಬರ್ಗ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಜಯಶ್ರೀ ದಂಡೆಯವರನ್ನು 2008ನೇ ಸಾಲಿನ `ವಚನ ಸಾಹಿತ್ಯ ಶ್ರೀ' ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು ಎಂದು ಎಂದು ಆಯ್ಕೆ ಸಮಿತಿಯ ಕಾರ್ಯಾಧ್ಯಕ್ಷ ಡಾ. ಸಿ. ಸೋಮಶೇಖರ್ ತಿಳಿಸಿದರು.

2008: ಕಿರಿಯ ಓಟಗಾರ ಬುಧಿಯಾ ಸಿಂಗ್ ಗೆ ತರಬೇತಿ ನೀಡಿದ್ದ ಬಿರಾಂಚಿ ದಾಸ್ ಅವರನ್ನು ಕೊಲೆ ಮಾಡಿದ್ದ ಆರೋಪಿ ಸಂದೀಪ್ ಆಚಾರ್ಯ ಅಲಿಯಾಸ್ ರಾಜ ಆಚಾರ್ಯನನ್ನು ಗೋವಾದಲ್ಲಿ ಬಂಧಿಸಲಾಯಿತು.

2008: ಹೆಣ್ಣಾಗಿ ಹುಟ್ಟಿತು ಎಂಬ ಕಾರಣಕ್ಕಾಗಿ ಕೇವಲ 5 ದಿನದ ಹಸುಗೂಸನ್ನು ಸ್ವಂತ ತಂದೆ ತಾಯಿಗಳೇ 60 ಅಡಿ ಆಳದ ಬಾವಿಗೆ ಎಸೆದ ಘೋರ ಘಟನೆ ಸೇಲಂ ಬಳಿ ಜರುಗಿದ್ದು ಬೆಳಕಿಗೆ ಬಂತು. ಆಶ್ಚರ್ಯವೆಂದರೆ 60 ಅಡಿ ಬಾವಿಗೆ ಎಸೆದರೂ ಆ ಎಳೆಯ ಕಂದಮ್ಮ ಬದುಕಿತು. ಮೇ 4ರಂದು ಕೊಂಡಲಪಟ್ಟಿ ಹಳ್ಳಿಯಲ್ಲಿನ 60 ಅಡಿ ಆಳದ ಬಾವಿಯೊಳಗಿಂದ ಮಗುವಿನ ಅಳುವಿನ ದನಿ ಕೇಳಿದ ಸಾರ್ವಜನಿಕರು ಕೂಡಲೇ ಅಗ್ನಿಶಾಮಕ ದಳದವರಿಗೆ ಸುದ್ದಿ ಮುಟ್ಟಿಸಿದರು. ತತ್ ಕ್ಷಣವೇ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ 40 ಅಡಿ ಆಳದ ಪೊದೆಯೊಂದರಲ್ಲಿ ಸಿಕ್ಕಿಬಿದ್ದು, ಮೈತುಂಬ ತರಚು ಗಾಯಗಳನ್ನು ಹೊಂದಿದ್ದ ಆ ಮಗುವನ್ನು ಸುರಕ್ಷಿತವಾಗಿ ಮೇಲಕ್ಕೆ ತಂದರು. ನಂತರ ಮಗುವಿಗೆ ಮೋಹನ್ ಕುಮಾರಮಂಗಲಂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಅನಾಥಾಶ್ರಮವೊಂದಕ್ಕೆ ಸೇರಿಸಲಾಯಿತು.

2008: ಕಲಾಪಕ್ಕೆ ಅಡ್ಡಿಯುಂಟುಮಾಡಿದ 32 ಲೋಕಸಭಾ ಸದಸ್ಯರ ದುರ್ವರ್ತನೆಯನ್ನು ಹಕ್ಕು ಚ್ಯುತಿ ಸಮಿತಿ ಮುಂದಿಡುವ ಅಪರೂಪದ ನಿರ್ಧಾರ ಕೈಗೊಂಡಿದ್ದ ಲೋಕಸಭಾ ಅಧ್ಯಕ್ಷ ಸೋಮನಾಥ ಚಟರ್ಜಿ ತಮ್ಮ ನಿರ್ಧಾರ ವಾಪಸು ಪಡೆದರು. ಇದರಿಂದಾಗಿ ಐದು ದಿನಗಳಿಂದ ಉದ್ಭವಿಸಿದ್ದ ಬಿಕ್ಕಟ್ಟು ಕೊನೆಗೊಂಡಿತು. ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಏಪ್ರಿಲ್ 24ರಂದು ಬಿಜೆಪಿ ನೇತೃತ್ವದ ಎನ್ ಡಿ ಎ ಸದಸ್ಯರು ಲೋಕಸಭೆ ಕಲಾಪಕ್ಕೆ ಅಡ್ಡಿ ಮಾಡಿದ್ದರು. ಸದನ ಸುಗಮವಾಗಿ ಸಾಗುವಂತೆ ಸೋಮನಾಥ ಚಟರ್ಜಿ ಪದೇಪದೇ ಮಾಡಿದ ಮನವಿ ವ್ಯರ್ಥವಾಗಿತ್ತು. ಇದರಿಂದ ಕೆರಳಿದ ಚಟರ್ಜಿ ಸದಸ್ಯರ ದುರ್ವರ್ತನೆಯನ್ನು ಹಕ್ಕು ಚ್ಯುತಿ ಸಮಿತಿಗೆ ಒಪ್ಪಿಸಲು ನಿರ್ಧರಿಸಿದ್ದರು.

2008: ಜೂನ್ ಒಂದರಿಂದ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 48ರ ಶಿರಾಡಿ ಘಾಟಿಯಲ್ಲಿ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗುವುದು ಎಂದು ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸುಧೀರ ಕೃಷ್ಣ ಸಕಲೇಶಪುರದಲ್ಲಿ ಪ್ರಕಟಿಸಿದರು. ಹೆದ್ದಾರಿಯ ಕಿ.ಮೀ 226 ರಿಂದ 264 ರ ವರೆಗಿನ 38ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿ ಶೇ. 90 ಭಾಗ ಪೂರ್ಣಗೊಂಡಿದೆ. ಈ ಕಾಮಗಾರಿಯನ್ನು ಮೂರು ಭಾಗಗಳಾಗಿ ವಿಂಗಡಣೆ ಮಾಡಿ, ಮೂರು ಮಂದಿ ಗುತ್ತಿಗೆದಾರರಿಗೆ, ಗುತ್ತಿಗೆ ಆದಾರದ ಮೇಲೆ ನೀಡಲಾಗಿತ್ತು ಎಂದು ಅವರು ನುಡಿದರು.

2008: ವಿಶೇಷ ಒಲಿಂಪಿಕ್ ಜ್ಯೋತಿಯ ಎವರೆಸ್ಟ್ ಯಾತ್ರೆ ಈದಿನವೂ ನಡೆಯಲಿಲ್ಲ. ಹಿಮಪಾತ ಉಂಟಾಗಿದ್ದ ಕಾರಣ ಜ್ಯೋತಿಯ ಯಾತ್ರೆಗೆ ಅಡ್ಡಿಯುಂಟಾಗಿತ್ತು.

2008: ಹತ್ತು ಕೋಟಿ ರೂಪಾಯಿಗಳ ಚೆಕ್ ಅಮಾನ್ಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರನಟಿ ಶ್ರೀದೇವಿ ಮತ್ತು ಮಹಾರಾಷ್ಟ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿತು. ಮುಂಬೈಯ ಫೋಟೋ ಫಿಲ್ಮ್ ಸರಬರಾಜುದಾರ ಹಾಗೂ ಫೈನಾನ್ಸಿಯರ್ ಜಿ.ಜಿ. ಫೋಟೋ ಲಿಮಿಟೆಡ್, ಫೋಟೋ ಫಿಲ್ಮ್ ಇಂಡಸ್ಟೀಸ್ ಮತ್ತು ಫೋಟೋ ಇಂಡಸ್ಟ್ರೀಸ್ ಸಲ್ಲಿಸಿದ ಅರ್ಜಿ ಸಂಬಂಧವಾಗಿ ಪ್ರತಿಕ್ರಿಯೆ ನೀಡುವಂತೆ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ನೇತೃತ್ವದ ಪೀಠವು ಚಿತ್ರನಟಿ ಮತ್ತು ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರನಟಿ ಶ್ರೀದೇವಿ ವಿರುದ್ಧ ಕ್ರಿಮಿನಲ್ ಖಟ್ಲೆ ಹೂಡದಂತೆ ಬಾಂಬೆ ಹೈಕೋರ್ಟ್ ನೀಡಿದ ಆದೇಶವನ್ನು ಅರ್ಜಿದಾರರು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿದ್ದರು. ಚಿತ್ರನಟಿ ಶ್ರೀದೇವಿ ಅವರು ನೀಡಿದ ವಿಜಯಾಬ್ಯಾಂಕಿನ ಸಾಂತಾಕ್ರೂಜ್ ಶಾಖೆಯ ಮೂರು ಚೆಕ್ಕುಗಳು ಖಾತೆಯಲ್ಲಿ ಸಾಕಷ್ಟು ಹಣವಿರದ ಕಾರಣ ಅಮಾನ್ಯಗೊಂಡಿವೆ ಎಂದು ಮೂರು ಸಂಸ್ಥೆಗಳ ಮಾಲೀಕರಾದ ಮಧು ಗುಪ್ತ ಮತ್ತು ಸುಶೀಲ್ ಗುಪ್ತ ತಮ್ಮ ಅರ್ಜಿಯಲ್ಲಿ ಆಪಾದಿಸಿದ್ದರು.

2008: ದಲಾಯಿ ಲಾಮಾ ಪ್ರತಿನಿಧಿಗಳು ಮತ್ತು ಚೀನಾ ನಡುವಣ ಬಹು ನಿರೀಕ್ಷಿತ ಮಾತುಕತೆ ಈದಿನ ಆರಂಭವಾದ ಎರಡು ಗಂಟೆಗಳ ಬಳಿಕ ಹಠಾತ್ತನೆ ಅಂತ್ಯಗೊಂಡಿತು. ಟಿಬೆಟಿನಲ್ಲಿ ಕಳೆದ ಮಾರ್ಚ್ ತಿಂಗಳಲ್ಲಿ ಅಶಾಂತಿ ಭುಗಿಲೆದ್ದ ಬಳಿಕ ಉಭಯ ಕಡೆಗಳು ಇದೇ ಮೊತ್ತ ಮೊದಲ ಬಾರಿಗೆ ಸಭೆ ಸೇರಿದ್ದವು.

2007: ತಮಿಳುನಾಡಿನ ರಣಜಿ ಆಟಗಾರ ಶ್ರೀಧರನ್ ಶರತ್ ಅವರು ಚೆನ್ನೈಯಲ್ಲಿ ಪ್ರಥಮ ದರ್ಜೆ ಕ್ರಿಕೆಟ್ಟಿಗೆ ವಿದಾಯ ಘೋಷಿಸಿದರು. ಕಳೆದ 15 ವರ್ಷಗಳಿಂದ ಅವರು ದೇಸೀ ಕ್ರಿಕೆಟ್ಟಿನಲ್ಲಿ ತಮಿಳುನಾಡು ತಂಡವನ್ನು ಪ್ರತಿನಿಧಿಸಿದ್ದರು.

2007: ಕರ್ನಾಟಕದ ಮಾಜಿ ಶಾಸಕ, ಹಿರಿಯ ವಕೀಲ ಕೆ.ಪಿ. ನಾಡಗೌಡ ಮುಧೋಳದಲ್ಲಿ ನಿಧನರಾದರು. ಮುಧೋಳ ಕ್ಷೇತ್ರದಲ್ಲಿ
1965-1976ರ ನಡುವಣ ಅವಧಿಯಲ್ಲಿ ಅವರು ಎರಡು ಸಲ ಚುನಾಯಿತರಾಗಿದ್ದರು. ಅವರು ಕಡಿದಾಳ್ ಮಂಜಪ್ಪ ಮತ್ತು ದೇವರಾಜ ಅರಸು ಅವರ ನಿಕಟವರ್ತಿಗಳಾಗಿದ್ದರು.

2007: ನಾಸಿಕ್ ಸಮೀಪದ ಸಿನ್ಹಾರಿನಲ್ಲಿ ನಡುರಾತ್ರಿ ವೇಳೆಯಲ್ಲಿ ಸಂಭವಿಸಿದ ರಾಸಾಯನಿಕ ಕಾರ್ಖಾನೆ ಸ್ಫೋಟದಲ್ಲಿ 20 ಮಂದಿ ಮೃತರಾಗಿ ಇತರ 10 ಮಂದಿ ಗಾಯಗೊಂಡರು.

2007: ದೇಶದಾದ್ಯಂತ ಚರ್ಚೆಗೆ ಕಾರಣವಾಗಿದ್ದ ಮುಂಬೈ ಅಪಘಾತ ಪ್ರಕರಣದಲ್ಲಿ ಅಲಿಸ್ಟರ್ ಪೆರೇರಾ ಎಂಬ ಯುವ ಉದ್ಯಮಿಗೆ ಆರು ತಿಂಗಳ ಲಘು ಸಜೆ ವಿಧಿಸಿ ತೀರ್ಪು ನೀಡಿದ್ದ ನ್ಯಾಯಾಧೀಶ ಅಜಿತ್ ಮಿಶ್ರ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು. ಮುಂಬೈಯ ಬಾಂದ್ರಾದ ಫುಟ್ ಪಾತಿನಲ್ಲಿ ಮಲಗಿದ್ದವರ ಮೇಲೆ ಕಾರು ಹತ್ತಿಸಿದ ಅಲಿಸ್ಟರ್ 7 ಜನರ ಸಾವಿಗೆ ಕಾರಣನಾಗಿದ್ದ.

2007: ಸರಳ ಸಾಮೂಹಿಕ ವಿವಾಹ ಜನಪ್ರಿಯಗೊಳಿಸಲು ರಾಜ್ಯ ಸರ್ಕಾರವು ಮುಂಗಡಪತ್ರದಲ್ಲಿ ಪ್ರಕಟಿಸಿದ `ಆದರ್ಶ ವಿವಾಹ' ಯೋಜನೆಯ ಅಧಿಕೃತ ಆದೇಶ ಹೊರಬಿದ್ದಿತು.

2007: ಝೀ ಟಿವಿ ಚಾನೆಲ್ಲಿನ ಸಾಹಸಗಳ ಸರಮಾಲೆ `ಶಹಬ್ಬಾಸ್ ಇಂಡಿಯಾ' ಮಾಲಿಕೆಯ ಬುಕ್ ಆಫ್ ರೆಕಾರ್ಡಿನಲ್ಲಿ ಕುಂದಾಪುರದ ಬಾಲ ಈಜುಪಟು ಹರ್ಷಿತ್ ಎನ್ ಖಾರ್ವಿ (12) ದಾಖಲಾದನು. ಈತ ಗಂಗೊಳ್ಳಿ ಲೈಟ್ಹೌಸ್ ಸಮುದ್ರ ಕಿನಾರೆಯಿಂದ ಪಂಚಗಂಗಾವಳಿ ನದಿಯವರೆಗಿನ ಸುಮಾರು 25 ಕಿ.ಮೀ. ದೂರವನ್ನು ಸಂಕೋಲೆ ತೊಟ್ಟು ಈಜುವ ಮೂಲಕ ದಾಖಲೆ ನಿರ್ಮಿಸಿದ.

2007: ದಕ್ಷಿಣ ಕ್ಯಾಮರೂನಿನಲ್ಲಿ ಕೀನ್ಯಾ ಏರ್ ವೇಸ್ ವಿಮಾನ ಅಪಘಾತಕ್ಕೆ ಈಡಾಗಿ 15 ಭಾರತೀಯರ ಸಹಿತ 115 ಜನ ಮೃತರಾದರು. ಈ ವಿಮಾನ ಹೊರಟ ಕೆಲವೇ ಕ್ಷಣಗಳಲ್ಲಿ ಕಣ್ಮರೆಯಾಗಿ ನಂತರ ಅಪಘಾತಕ್ಕೆ ಈಡಾಗಿರುವುದು ಪತ್ತೆಯಾಯಿತು.

2006: ಭಾರತೀಯ ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ಸಂಗೀತ ನಿರ್ದೇಶಕರಲ್ಲಿ ಒಬ್ಬರಾದ, ಭಾರತೀಯ ಚಿತ್ರ ಸಂಗೀತಕ್ಕೆ ಹೊಸ ಆಯಾಮ ನೀಡಿದ್ದ ಹಿರಿಯ ಸಂಗೀತ ನಿರ್ದೇಶಕ ನೌಷಾದ್ ಅಲಿ (86) ಅವರು ಮುಂಬೈಯ ನಾನಾವತಿ ಆಸ್ಪತ್ರೆಯಲ್ಲಿ ಬೆಳಗ್ಗೆ ಹೃದಯ ಸ್ಥಂಭನದಿಂದ ಅಸು ನೀಗಿದರು.

2006: ಖ್ಯಾತ ಕೊಳಲುವಾದಕ ವಿದ್ವಾನ್ ಎಂ.ಆರ್. ದೊರೆಸ್ವಾಮಿ (84) ಅವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾದರು. ಚಿಕ್ಕಮಗಳೂರಿನವರಾದ ದೊರೆಸ್ವಾಮಿ 10ನೇ ವಯಸ್ಸಿನಲ್ಲೇ ಕೊಳಲುವಾದನ ಆರಂಭಿಸಿದ್ದರು.

2006: ಕಲ್ಪನಾ ಚಾವ್ಲಾ ಅವರ ಬಳಿಕ ಇದೀಗ ಭಾರತೀಯ ಮೂಲದ ಎರಡನೇ ಮಹಿಳಾ ಗಗನಯಾನಿಯಾಗಿ ಅಮೆರಿಕ ಬಾಹ್ಯಾಕಾಶ ಯೋಜನಾ ಇಲಾಖೆಯು ಸುನೀತಾ ವಿಲಿಯಮ್ಸ್ ಅವರನ್ನು ಆಯ್ಕೆ ಮಾಡಿತು. ಮೂಲತಃ ಸುನೀತಾ ಪಾಂಡ್ಯ ಆಗಿದ್ದ ಈಕೆ ಪ್ರಸ್ತುತ ಸುನೀತಾ ವಿಲಿಯಮ್ಸ್ ಎಂದೇ ಖ್ಯಾತಳಾಗಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಗಗನಕ್ಕೆ ಏರಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಒಬ್ಬ ಗಗನಯಾನಿಯನ್ನು ಭೂಮಿಗೆ ಕಳುಹಿಸಿ, ತಾವು ಆರು ತಿಂಗಳ ಕಾಲ ಅಲ್ಲೇ ಉಳಿಯಲಿದ್ದಾರೆ ಎಂದು ಪ್ರಕಟಿಸಲಾಯಿತು.

1992: ಮಹಿಳೆಯರಿಗೆ ಮೀಸಲಾದ ಸಬರ್ಬನ್ ರೈಲ್ವೇಸೇವೆಯನ್ನು ಜಗತ್ತಿನಲ್ಲೇ ಮೊತ್ತ ಮೊದಲ ಬಾರಿಗೆ ಮುಂಬೈಯ ಪಶ್ಚಿಮ ರೈಲ್ವೇ ವಿಭಾಗವು ಆರಂಭಿಸಿತು.

1965: ಕಲಾವಿದ ಗುರುದತ್ ಎಂ.ಎಸ್. ಜನನ.

1957: ಮೈಸೂರು ಸಂಸ್ಥಾನದ ಗೇಣಿಗೆ ಸಂಬಂಧಿಸಿದ ನಾಲ್ಕು ಮಸೂದೆಗಳಿಗೆ ರಾಷ್ಟ್ರಪತಿಗಳು ತಮ್ಮ ಅಂಗೀಕಾರವನ್ನಿತ್ತರು. ಏಕರೀತಿಯ ಶಾಸನ ಜಾರಿಗೆ ಬರುವ ತನಕ, ಮೈಸೂರು ರಾಜ್ಯದ ವಿವಿಧ ಭಾಗಗಳಲ್ಲಿ ಜಾರಿಯಲ್ಲಿರುವ ವಿವಿಧ ಗೇಣಿ ಶಾಸನಗಳನ್ನು ಯಥಾಸ್ಥಿತಿಯಲ್ಲಿ ಇಡುವ ಬಗ್ಗೆ ಮೊದಲೇ ತರಲಾಗಿದ್ದ ತುರ್ತು ಶಾಸನಕ್ಕೆ ಬದಲು ಈ ಮಸೂದೆಗಳನ್ನು ಮಂಡಿಸಲಾಗಿತ್ತು.

1956: ಕೊಣನೂರಿನ ಸಂಗೀತ ಹಾಗೂ ಹರಿಕಥಾ ವಿದ್ವಾಂಸರ ಮನೆತನದಿಂದ ಬಂದ ಕರ್ನಾಟಕ ಸಂಗೀತ ಕಲಾವಿದೆ ಗೀತಾ ಬಾಲಸುಬ್ರಹ್ಮಣ್ಯಂ ಅವರು ಸಂಗೀತ ವಿದ್ವಾಂಸ ರಾಮಕೃಷ್ಣ ಶಾಸ್ತ್ರಿ- ಲೇಖಕಿ ವಾಗೀಶ್ವರಿ ಶಾಸ್ತ್ರಿ ದಂಪತಿಯ ಮಗನಾಗಿ ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಜನಿಸಿದರು.

1948: ಕಲಾವಿದ ಶಿವರಾಜ ಗವಾಯಿ ಜನನ.

1945: ಕಲಾವಿದೆ ಧನಲಕ್ಷ್ಮಿ ಎಸ್. ಜನನ.

1938: ಕಲಾವಿದ ಕೃಷ್ಣರಾವ್ ಇನಾಂದಾರ್ ಜನನ.

1916: ಗಿಯಾನಿ ಜೈಲ್ ಸಿಂಗ್ (1916-94) ಜನ್ಮದಿನ. 1982-1987 ರವರೆಗೆ ಇವರು ಭಾರತದ ರಾಷ್ಟ್ರಪತಿಯಾಗಿದ್ದರು.

1821: ನೆಪೋಲಿಯನ್ ಬೋನಪಾರ್ಟೆ ಸೈಂಟ್ ಹೆಲೆನಾ ದ್ವೀಪದಲ್ಲಿ ಅಸುನೀಗಿದ. ವಿಷಸೇವನೆಯಿಂದ ಆತ ಮೃತನಾದ ಎಂದು ನಂಬಲಾಗಿದೆ. ಆದರೂ ಆತನ ಸಾವಿಗೆ ಕಾರಣ ಏನೆಂಬುದು ಇಂದಿನವರೆಗೂ ಚರ್ಚೆಯ ವಿಷಯವಾಗಿಯೇ ಉಳಿದಿದೆ.
1818: ಜರ್ಮನ್ ತತ್ವಜ್ಞಾನಿ, ಕಮ್ಯೂನಿಸಂ ಸ್ಥಾಪಕ ಕಾರ್ಲ್ ಮಾರ್ಕ್ಸ್ ಜರ್ಮನಿಯ ಟ್ರೈಯರಿನಲ್ಲಿ ಹುಟ್ಟಿದ.

1760: ಅರ್ಲ್ ಫೆರ್ರೆರ್ಸ್ ನಿಗೆ ಮರಣದಂಡನೆ ವಿಧಿಸಲು `ಹ್ಯಾಂಗ್ ಮನ್ಸ್ ಡ್ರಾಪ್'ನ್ನು ಮೊತ್ತ ಮೊದಲ ಬಾರಿಗೆ ಲಂಡನ್ನಿನ ಟೈಬರ್ನಿನಲ್ಲಿ ಬಳಸಲಾಯಿತು.

1766: ಭಾರತದಲ್ಲಿ ಬ್ರಿಟಿಷರೊಡನೆ ನಡೆದ 7 ವರ್ಷಗಳ ಯುದ್ಧದಲ್ಲಿ ಶರಣಾಗತನಾದುದಕ್ಕಾಗಿ ಆಗ ಭಾರತದಲ್ಲಿ ಫ್ರೆಂಚ್ ಪಡೆಗಳ ನಾಯಕನಾಗಿದ್ದ ಜನರಲ್ ಕಾಮ್ಟೆ ಡೆ ಲಾಲ್ಲಿಗೆ ಪ್ಯಾರಿಸ್ಸಿನಲ್ಲಿ ಮರಣದಂಡನೆ ವಿಧಿಸಲಾಯಿತು

No comments:

Advertisement