My Blog List

Monday, May 17, 2010

ಇಂದಿನ ಇತಿಹಾಸ History Today ಮೇ 17

ಇಂದಿನ ಇತಿಹಾಸ

ಮೇ 17

ಐದನೇ ತರಗತಿ ಓದುತ್ತಿದ್ದಾಗಲೇ ಶಾಲೆ ತೊರೆದು ಹೋದ ಬಾಲಕನೊಬ್ಬ ಮುಂದೆ ರಾಜ್ಯದ ಮುಖ್ಯಮಂತ್ರಿ ಯಾಗುತ್ತಾನೆಂದು ಯಾರೂ ಎಣಿಸಿರಲಿಲ್ಲ. ಆದರೆ ಪವನ್‌ಕುಮಾರ್ ಚಾಮ್ಲಿಂಗ್ ಅದನ್ನೆಲ್ಲ ಸುಳ್ಳಾಗಿಸಿ ನಾಲ್ಕನೇ ಬಾರಿಗೆ ಸಿಕ್ಕಿಂ ಮುಖ್ಯಮಂತ್ರಿಯಾಗಿ ವಿಜೃಂಭಿಸಿದರು. ಚಾಮ್ಲಿಂಗ್ ನೇತೃತ್ವದಲ್ಲಿ ಎಲ್ಲ 32 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ (ಎಸ್‌ಡಿಎಫ್) ಸಿಕ್ಕಿಂನ ಏಕೈಕ ಲೋಕಸಭಾ ಕ್ಷೇತ್ರವನ್ನು ಕೂಡ ತನ್ನ ತೆಕ್ಕೆಗೆ ಎಳೆದುಕೊಂಡಿತು.

2009: ಎಲ್‌ಟಿಟಿಇಯ ಸುಮಾರು 300 ಉಗ್ರರು ಆತ್ಮಹತ್ಯೆ ಮಾಡಿಕೊಂಡರು. ಅವರಲ್ಲಿ ಪ್ರಭಾಕರನ್ ಸೇರಿರಬಹುದೆಂದು ಶಂಕಿಸಲಾಯಿತು. ಆದರೆ ಇದರ ಬಗ್ಗೆ ಖಚಿತ ಮಾಹಿತಿ ಬರಲಿಲ್ಲ. ಶ್ರೀಲಂಕಾ ಸೇನೆಯು ಎಲ್‌ಟಿಟಿಇ ವಿರುದ್ಧ ನಡೆಸಿದ ಅಂತಿಮ ಹಂತದ ದಾಳಿಯಲ್ಲಿ ಎಲ್‌ಟಿಟಿಇಯ ಇಬ್ಬರು ಅಗ್ರ ನಾಯಕರು ಸೇರಿದಂತೆ 70 ಉಗ್ರಗಾಮಿಗಳನ್ನು ಹತ್ಯೆ ಮಾಡಿತು. ಸಶಸ್ತ್ರ ಹೋರಾಟವನ್ನು ನಿಲ್ಲಿಸಲಾಗಿದೆ ಎಂದು ಎಲ್‌ಟಿಟಿಇ ಘೋಷಿಸಿದರೂ, ಅದರ ಮುಖ್ಯಸ್ಥ ವಿ. ಪ್ರಭಾಕರನ್ ಪತ್ತೆಯಾಗಲಿಲ್ಲ.

2009: ಶ್ರೀಲಂಕಾದ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರು ತಮ್ಮ ಜೊರ್ಡಾನ್ ಪ್ರವಾಸವನ್ನು ಮೊಟಕುಗೊಳಿಸಿ ಸ್ವದೇಶಕ್ಕೆ ವಾಪಸಾದರು. ರಾಜಪಕ್ಸೆ ಅವರು ವಿಮಾನದಿಂದ ಕೆಳಗಿಳಿದ ಕೂಡಲೇ ನೆಲ ಮುಟ್ಟಿ ನಮಸ್ಕರಿಸಿದರು. 'ಸೇನೆಯು ದೇಶವನ್ನು ಎಲ್‌ಟಿಟಿಇ ಭಯೋತ್ಪಾದಕರಿಂದ ಮುಕ್ತಗೊಳಿಸಿದೆ' ಎಂದು ಅವರು ಈ ಸಂದರ್ಭದಲ್ಲಿ ಘೋಷಿಸಿದರು. ಯುದ್ಧ ವಲಯದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಸುಮಾರು 50 ಸಾವಿರ ನಾಗರಿಕರು ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿದವು. ಸೇನೆಯ ಅಂತಿಮ ಕಾರ್ಯಾಚರಣೆಯಲ್ಲಿ ಎಲ್‌ಟಿಟಿಯ ಅಗ್ರ ನಾಯಕರಾದ ಸ್ವರನಮ್ ಮತ್ತು ಶಶಿ ಮಾಸ್ಟರ್ ಅವರನ್ನು ಹತ್ಯೆ ಮಾಡಲಾಯಿತು.. ಕೊನೆಗೂ ಮಣಿದ ಎಲ್‌ಟಿಟಿಇ ಸಶಸ್ತ್ರ ಹೋರಾಟಕ್ಕೆ ಪೂರ್ಣವಿರಾಮ ಘೋಷಿಸಿತು. 'ಕದನ ಕೆಟ್ಟ ಅಂತ್ಯವನ್ನು ಕಂಡಿದೆ, ಆದ್ದರಿಂದ ನಾವು ನಮ್ಮ ಜನರನ್ನು ಕೊಲ್ಲುತ್ತಿರುವ ವೈರಿಗಳನ್ನು ಕ್ಷಮಿಸಿ ಬಂದೂಕನ್ನು ಸ್ಥಗಿತಗೊಳಿಸುತ್ತೇವೆ' ಎಂದು ಎಲ್‌ಟಿಟಿಇ ಪರ ಇರುವ ತಮಿಳ್‌ನೆಟ್ ವೆಬ್‌ಸೈಟ್‌ನಲ್ಲಿ ಪ್ರಸಾರ ಮಾಡಲಾಯಿತು. ಎಲ್‌ಟಿಟಿಇಯ ಅಂತಾರಾಷ್ಟ್ರೀಯ ಸಂಬಂಧಗಳ ಮುಖ್ಯಸ್ಥ ಸೆಲ್ವೆರಸ ಪದ್ಮನಾಥಮ್ ಅವರು ನೀಡಿದ ಈ ಹೇಳಿಕೆಯನ್ನು ವೆಬ್‌ಸೈಟ್ ಪ್ರಸಾರ ಮಾಡಿತು.

2009: ಕಡಲಾಳದಲ್ಲಿ ಹೆಚ್ಚುತ್ತಿರುವ ಉಷ್ಣತೆ, ಏರುತ್ತಿರುವ ಸಮುದ್ರ ಮಟ್ಟ, ಎಲ್ಲೆ ಮೀರಿದ ಆಮ್ಲತೆ, ಮಿತಿ ಮೀರಿದ ಮೀನುಗಾರಿಕೆ ಮತ್ತು ಮಾಲಿನ್ಯದಿಂದಾಗಿ ಹವಳದ ದಂಡೆಗಳು ವಿನಾಶದ ಅಂಚಿಗೆ ತಲುಪಿದೆ ಎಂದು 'ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್' ಸಂಸ್ಥೆ ಸಿದ್ಧಪಡಿಸಿದ ವರದಿ ಹೇಳಿತು. ಈ ವರದಿಯ ಪ್ರಕಾರ ಕಡಲಿನಲ್ಲಿರುವ ಹವಳದ ತ್ರಿಭುಜಗಳು ನಾಶವಾದರೆ ಕಡಲ ತೀರದ ಶೇ 80ರಷ್ಟು ಜನ ಆಹಾರ ಕಳೆದುಕೊಳ್ಳಬಹುದು, ಸುಮಾರು 10 ಕೋಟಿ ಜನರ ಜೀವಕ್ಕೇ ಅಪಾಯ ಕಾದಿದೆ. ಮಲೇಷ್ಯಾ, ಇಂಡೋನೇಷ್ಯಾ, ಪಪುವಾ ನ್ಯುಗಿನಿಯಾ,ಪೂರ್ವ ತೈಮೋರ್, ಸಾಲೊಮನ್ ದ್ವೀಪ ಹಾಗು ಫಿಲಿಪ್ಪೀನ್ಸ್ ದೇಶಗಳ ಸಮುದ್ರ ತೀರಗಳು ಹವಳದ ತ್ರಿಭುಜವನ್ನು ಸುತ್ತುವರೆದಿದ್ದು, ಇದು ಅತ್ಯಂತ ಸಂಪದ್ಭರಿತ ಹವಳದ ದಂಡೆ ಎಂದು ಗುರುತಿಸಲಾಗಿದೆ. ವಿಶ್ವದ ಶೇ 30ರಷ್ಟು ಹವಳ ಸಂಪತ್ತು ಈ ತ್ರಿಭುಜದಲ್ಲಿಯೇ ಇದೆ. ಹವಳದ ದಂಡೆಯನ್ನೇ ಆಶ್ರಯಿಸಿ 10 ಕೋಟಿಗೂ ಹೆಚ್ಚು ಜನ ಬದುಕು ಸಾಗಿಸುತ್ತಿದ್ದಾರೆ.

2009: ಐದನೇ ತರಗತಿ ಓದುತ್ತಿದ್ದಾಗಲೇ ಶಾಲೆ ತೊರೆದು ಹೋದ ಬಾಲಕನೊಬ್ಬ ಮುಂದೆ ರಾಜ್ಯದ ಮುಖ್ಯಮಂತ್ರಿಯಾಗುತ್ತಾನೆಂದು ಯಾರೂ ಎಣಿಸಿರಲಿಲ್ಲ. ಆದರೆ ಪವನ್‌ಕುಮಾರ್ ಚಾಮ್ಲಿಂಗ್ ಅದನ್ನೆಲ್ಲ ಸುಳ್ಳಾಗಿಸಿ ನಾಲ್ಕನೇ ಬಾರಿಗೆ ಸಿಕ್ಕಿಂ ಮುಖ್ಯಮಂತ್ರಿಯಾಗಿ ವಿಜೃಂಭಿಸಿದರು. ಚಾಮ್ಲಿಂಗ್ ನೇತೃತ್ವದಲ್ಲಿ ಎಲ್ಲ 32 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ (ಎಸ್‌ಡಿಎಫ್) ಸಿಕ್ಕಿಂನ ಏಕೈಕ ಲೋಕಸಭಾ ಕ್ಷೇತ್ರವನ್ನು ಕೂಡ ತನ್ನ ತೆಕ್ಕೆಗೆ ಎಳೆದುಕೊಂಡಿತು. ಚಾಮ್ಲಿಂಗ್ ತಾವು ಸ್ಪರ್ಧಿಸಿದ್ದ ಎರಡೂ ವಿಧಾನಸಭಾ ಕ್ಷೇತ್ರಗಳಿಂದ ಚುನಾಯಿತರಾದರು. 1956ರಲ್ಲಿ ಬಹದೂರ್ ರಾಯ್ ಮತ್ತು ಮಾಯಾರಾಯ್ ದಂಪತಿಗೆ ಜನಿಸಿದ ಚಾಮ್ಲಿಂಗ್ ಐದನೇ ತರಗತಿಗೇ ಶಾಲೆಗೆ ಹೋಗುವ ಅವಕಾಶದಿಂದ ವಂಚಿತರಾಗಿದ್ದರು.

2009: 15ನೇ ಲೋಕಸಭೆಯು ಇದೇ ಪ್ರಥಮ ಬಾರಿಗೆ ನಾಲ್ವರು 'ಗಾಂಧಿ'ಗಳನ್ನು ಪಡೆದು ಅಚ್ಚರಿ ಮೂಡಿಸಿತು. ಪ್ರತಿಷ್ಠಿತ ನೆಹರು-ಗಾಂಧಿ ಕುಟುಂಬಕ್ಕೆ ಸೇರಿದ ವರುಣ್ ಗಾಂಧಿ ಉತ್ತರ ಪ್ರದೇಶದ ಫಿಲಿಬಿಟ್ ಕ್ಷೇತ್ರದಿಂದ ಸಂಸತ್‌ಗೆ ಆಯ್ಕೆಯಾಗುವುದರೊಂದಿಗೆ ನಾಲ್ಕನೇ 'ಗಾಂಧಿ' ಸಂಸತ್ ಒಳಗೆ ಒಟ್ಟಿಗೆ ಕುಳಿತುಕೊಳ್ಳುವಂತಾಯಿತು. ಅದರಲ್ಲೂ ಮುಖ್ಯವಾಗಿ ಇಬ್ಬರು ಅಮ್ಮ-ಮಗ ಜೋಡಿ ಒಟ್ಟಾಗಿ ಕಾಣಿಸಿಕೊಳ್ಳುವಂತಾಯಿತು. ಸೋನಿಯಾ ಮತ್ತು ರಾಹುಲ್ ಗಾಂಧಿ ಆಡಳಿರೂಢ ಗುಂಪಿನಲ್ಲಿದ್ದರೆ, ಬಿಜೆಪಿ ನಾಯಕರಾದ ಮೇನಕಾ ಮತ್ತು ವರುಣ್ ಗಾಂಧಿ ವಿರೋಧಿ ಗುಂಪಿನಲ್ಲಿ ಗೆದ್ದು ಬಂದರು. ಪ್ರಥಮ ಲೋಕಸಭೆಯಿಂದ ಹಿಡಿದು ಇಲ್ಲಿಯ ತನಕ ನೆಹರು- ಗಾಂಧಿ ಕುಟುಂಬದ ಒಬ್ಬರು ಸದಸ್ಯರಾದರೂ ಸಂಸತ್‌ನಲ್ಲಿ ಬಹುತೇಕ ಇದ್ದರೆಂದೇ ಹೇಳಬಹುದು. ಆದರೆ ಈ ಬಾರಿ ಅವರ ಸಂಖ್ಯೆ ಇದೇ ಪ್ರಥಮ ಬಾರಿಗೆ 4ಕ್ಕೆ ಏರಿತು.

2009: 'ಸಾಮಾಜಿಕ ಸಂಶೋಧನೆ' ವಿಷಯ ಕುರಿತು 51 ಗಂಟೆ ಕಾಲ ನಿರಂತರ ಉಪನ್ಯಾಸ ನೀಡಿ ಲಿಮ್ಕಾ ಮತ್ತು ಗಿನ್ನೆಸ್ ದಾಖಲೆ ಮಾಡಲು ನಿರ್ಧರಿಸಿದ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನ ಅಂಚೆ ತೆರಪಿನ ಶಿಕ್ಷಣ ಸಂಸ್ಥೆಯ ಸಮಾಲೋಚಕಿ ಎಚ್.ಕೆ. ಕೋಮಲ ಈದಿನ ತಮ್ಮ ಉಪನ್ಯಾಸ ಆರಂಭಿಸಿದರು. ಚನ್ನರಾಯಪಟ್ಟಣದ ಹೇಮಾವತಿ ಒಕ್ಕಲಿಗರ ಮಹಿಳಾ ಸಂಘದ ಆವರಣದಲ್ಲಿ ವಿದ್ಯಾರ್ಥಿಗಳು, ಅನೇಕ ಬಂಧುಗಳ ಸಮ್ಮುಖದಲ್ಲಿ ಅವರು ಉತ್ಸಾಹದಿಂದ ಉಪನ್ಯಾಸ ಆರಂಭಿಸಿದರು.

2008: ಬೆಂಗಳೂರಿನ ಎಚ್ ಎ ಎಲ್ ವಿಮಾನ ನಿಲ್ದಾಣವನ್ನು ಸ್ಥಗಿತಗೊಳಿಸದಂತೆ ಒತ್ತಾಯಿಸಿ ಐಟಿ, ಬಿಟಿ ಕ್ಷೇತ್ರದ ಪ್ರಮುಖರು ಹಾಗೂ ವಿಮಾನ ನಿಲ್ದಾಣದ ನೌಕರರು ಎಚ್ ಎ ಎಲ್ ವಿಮಾನ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಷಾ, ಇನ್ಫೋಸಿಸ್ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಮೋಹನ್ ದಾಸ್ ಪೈ ಮತ್ತು ವಿಮಾನ ನಿಲ್ದಾಣ ನೌಕರರು, `ಎಚ್ ಎ ಎಲ್ ವಿಮಾನ ನಿಲ್ದಾಣವನ್ನು ಮುಂದುವರೆಸುವ ಬಗ್ಗೆ ಸರ್ಕಾರ ಬಿಐಎಎಲ್ನೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು' ಎಂದು ಒತ್ತಾಯಿಸಿದರು.

2008: ಭೂಕಂಪ ಪೀಡಿತ ಪ್ರದೇಶ ಬೈಚುವಾನ್ ಕೌಂಟಿಯಲ್ಲಿನ `ಚೈನಾ ಸರೋವರ' ಉಕ್ಕುವ ಭೀತಿಯಿಂದ ಸರೋವರ ದಡದಲ್ಲಿನ ನಿವಾಸಿಗಳು ಬೆಟ್ಟ ಪ್ರದೇಶಕ್ಕೆ ಸ್ಥಳಾಂತರಗೊಂಡರು. ಸರೋವರ ಉಕ್ಕುತ್ತಿರುವುದನ್ನು ಪ್ರತ್ಯಕ್ಷದರ್ಶಿಯೊಬ್ಬ ದೂರವಾಣಿ ಮುಖಾಂತರ ಸೇನಾಪಡೆಗೆ ತಿಳಿಸಿದ. ಕೂಡಲೇ ಸೇನೆ ಇಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸುವ ಕಾರ್ಯಕ್ಕೆ ಮುಂದಾಯಿತು. ಸಿಚುವಾನ್ ಪ್ರಾಂತ್ಯದಲ್ಲಿ ಭೂಕಂಪದಿಂದ ಮಡಿದವರ ಸಂಖ್ಯೆ ಈಗ 28,881 ಎಂದು ಚೀನಾ ಹೇಳಿತು. ಆದರೆ ಮೃತರ ಸಂಖ್ಯೆ 50 ಸಾವಿರ ದಾಟುವ ನಿರೀಕ್ಷೆ ವ್ಯಕ್ತವಾಗಿದೆ.

2008: ಎಂಟು ವರ್ಷಗಳ ಹಿಂದಿನ ಆಫ್ಘನ್ ವಿಮಾನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಲಂಡನ್ನಿನ ಅಂತಾರಾಷ್ಟ್ರೀಯ ಹೀಥ್ರೂ ವಿಮಾನ ನಿಲ್ದಾಣದ ಸ್ವಚ್ಛತಾ ವಿಭಾಗದ ಪರಿಚಾರಕ ನಿಜಾಮುದ್ದೀನ್ ಮೊಹಮ್ಮದಿ (34) ಎಂಬಾತನನ್ನು ಬಂಧಿಸಲಾಯಿತು. ಈತ ಆಫ್ಘಾನಿಸ್ಥಾನದ ಪ್ರಜೆ. ಒಂಬತ್ತು ಜನ ಅಪಹರಣಕಾರರಲ್ಲಿ ಇವನೂ ಒಬ್ಬನೆಂದು ಗುರುತಿಸಲಾಗಿದೆ.

2008: ಮೂರು ತಿಂಗಳ ಹಿಂದೆ ತಾಲಿಬಾನ್ ಉಗ್ರರಿಂದ ಅಪಹೃತರಾಗಿದ್ದ ಅಫ್ಘಾನಿಸ್ಥಾನದಲ್ಲಿರುವ ಪಾಕಿಸ್ಥಾನದ ರಾಯಭಾರಿ ತಾರಿಖ್ ಅಜೀಜ್ ಅವರನ್ನು ಉಗ್ರರು ಬಿಡುಗಡೆ ಮಾಡಿದರು. ತಾಲಿಬಾನ್ ಮತ್ತು ಸರ್ಕಾರದ ನಡುವೆ ಶಾಂತಿ ಮಾತುಕತೆಯಲ್ಲಿ ಪ್ರಗತಿ ಕಂಡುಬಂದ ಹಿನ್ನೆಲೆಯಲ್ಲಿ ರಾಯಭಾರಿಯ ಬಿಡುಗಡೆ ನಡೆಯಿತು.

2008: ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯ ಐದು ಗ್ರಾಮಗಳಲ್ಲಿ ಹಕ್ಕಿ ಜ್ವರ ಮತ್ತೆ ಪತ್ತೆಯಾದ ಹಿನ್ನೆಲೆಯಲ್ಲಿ ಸಾವಿರಾರು ಕೋಳಿಗಳನ್ನು ನಾಶಮಾಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿದವು. ರೋಗ ಕಾಣಿಸಿಕೊಂಡಿರುವ ಬಿಜನ್ ಬರಿಯಿಂದ ಮೇ 11ರಂದು ಭೋಪಾಲ ಮೂಲದ ಬಿಗಿ ಭದ್ರತೆಯ ಪಶುರೋಗ ಪತ್ತೆ ಪ್ರಯೋಗಾಯಲಕ್ಕೆ ಸೋಂಕುಪೀಡಿತ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿತ್ತು. ಪ್ರಯೋಗಾಲಯವು ರೋಗ ಪತ್ತೆಯಾಗಿರುವುದನ್ನು ದೃಢಪಡಿಸಿತು.

2008: ಜೈಪುರದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೆ ಮೂವರು ಶಂಕಿತರ ರೇಖಾಚಿತ್ರ ಬಿಡುಗಡೆ ಮಾಡಿದರು. ಉಗ್ರರು ಸೈಕಲುಗಳನ್ನು ಖರೀದಿಸಿದ್ದ ಅಂಗಡಿಯವರು, ಸ್ಫೋಟದಲ್ಲಿ ಗಾಯಗೊಂಡವರನ್ನು ಮಾತನಾಡಿಸಿ ಇನ್ನೂ ಕೆಲವು ಶಂಕಿತರ ರೇಖಾಚಿತ್ರ ರಚಿಸಲಾಯಿತು ಎಂದು ಪೊಲೀಸರು ತಿಳಿಸಿದರು.

2008: ತೀವ್ರ ಉಸಿರಾಟದ ತೊಂದರೆಯಿಂದ ಬಳಲಿದ ಹಿರಿಯ ಮಾರ್ಕ್ಸ್ವಾದಿ ಹರಿಕಿಷನ್ ಸಿಂಗ್ ಸುರ್ಜಿತ್ ಅವರ ದೇಹಸ್ಥಿತಿ ವಿಷಮಿಸಿದ್ದು, ಅವರು ಕೋಮಾ ಸ್ಥಿತಿಗೆ ಜಾರಿದರು.

2008: ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಬಿಹಾರದ ಸಾರಿಗೆ ಸಚಿವ ರಮಾನಂದ ಪ್ರಸಾದ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಭ್ರಷ್ಟಾಚಾರ ನಡೆಸಿದ ಬಗ್ಗೆ ಸಿಂಗ್ ಅವರ ವಿರುದ್ಧ ರಾಜ್ಯ ಗುಪ್ತದಳವು 1990ರ ಮೇ 24ರಂದು ಪ್ರಕರಣ ದಾಖಲಿಸಿಕೊಂಡಿತ್ತು. ಅದು ಬಹಿರಂಗಗೊಂಡ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಿದರು.

2007: ಕ್ಯಾಲಿಫೋರ್ನಿಯಾದ 18ರ ಹರೆಯದ ತರುಣಿ ಸಮಂಥಾ ಲಾರ್ಸನ್ ಅವರು ವಿಶ್ವದ ಅತ್ಯುನ್ನತವಾದ ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ಮೊತ್ತ ಮೊದಲ ಅತಿ ಕಿರಿಯ ವಿದೇಶಿ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರಳಾದಳು. ನೇಪಾಳದ 15 ವರ್ಷದ ಶೆರ್ಪಾ ಬಾಲಕಿಯೊಬ್ಬಳು ಎವರೆಸ್ಟ್ ಶಿಖರ ಏರಿದ ಕಿರಿಯ ಹುಡುಗಿ ಎಂಬ ಹೆಗ್ಗಳಿಕೆಗೆ ಈಗಾಗಲೇ ಪಾತ್ರಳಾಗಿದ್ದಾಳೆ.

2007: ಬಜಾಜ್ ಆಟೋ ಸಂಸ್ಥೆಯನ್ನು ಬಜಾಜ್ ಹೋಲ್ಡಿಂಗ್ಸ್ ಅಂಡ್ ಇನ್ ವೆಸ್ಟ್ ಮೆಂಟ್ಸ್ ಲಿಮಿಟೆಡ್ (ಬಿಎಚ್ ಐಎಲ್) ಮತ್ತು ಬಜಾಜ್ ಫೈನಾನ್ಸರ್ಸ್ ಲಿಮಿಟೆಡ್ (ಬಿಎಫ್ ಎಲ್) ಎಂಬ ಹೆಸರಿನೊಂದಿಗೆ ಎರಡು ಸಂಸ್ಥೆಗಳಾಗಿ ವಿಭಜಿಸುವ ಯೋಜನೆಗೆ ಬಜಾಜ್ ಆಟೋ ಲಿಮಿಟೆಡ್ ಬೋರ್ಡ್ ಒಪ್ಪಿಗೆ ನೀಡಿತು.

2007: ಮೈಸೂರು, ಮಂಡ್ಯ ಜಿಲ್ಲೆಗೆ ನೀರು ಒದಗಿಸುವ ಕೃಷ್ಣರಾಜ ಸಾಗರ ಜಲಾಶಯದ ನೀರಿನ ಮಟ್ಟ ತಗ್ಗುತ್ತಿದ್ದಂತೆಯೇ ಮೈಸೂರು ತಾಲ್ಲೂಕಿಗೆ ಸೇರಿದ ಆನಂದೂರು ಗ್ರಾಮದ ಬಳಿ ಜಲಾಶಯದ ಕೆಳಗಿದ್ದ ನಾರಾಯಣಸ್ವಾಮಿ ದೇವಾಲಯ ಪ್ರತ್ಯಕ್ಷವಾಯಿತು. ಕಳೆದ ಬಾರಿ ಜಲಾಶಯದಲ್ಲಿ ಕನ್ನಂಬಾಡಿ ಗ್ರಾಮದ ಬಳಿ ವೇಣುಗೋಪಾಲ ಸ್ವಾಮಿ ದೇವಸ್ಥಾನ ಗೋಚರಿಸಿತ್ತು.

2007: ಉನ್ನತ ಶಿಕ್ಷಣಸಂಸ್ಥೆಗಳಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ (ಓಬಿಸಿ) ಶೇಕಡಾ 27ರಷ್ಟು ಮೀಸಲಾತಿ ನೀಡುವ ವಿವಾದಾತ್ಮಕ ವಿಷಯದ ವಿಚಾರಣೆಯನ್ನು ಸುಪ್ರೀಂಕೋರ್ಟಿನ ದ್ವಿಸದಸ್ಯ ಪೀಠವು ಉನ್ನತ ಪೀಠಕ್ಕೆ ವಹಿಸಿತು.

2007: ಬ್ರಿಟನ್ನಿನ ಚಾನ್ಸೆಲರ್ ಗಾರ್ಡನ್ ಬ್ರೌನ್ ಅವರು ಸಂಸತ್ತಿನಲ್ಲಿ ನಡೆದ ನಾಮ ನಿರ್ದೇಶನದಲ್ಲಿ ್ಲತಮ್ಮ ವಿರೋಧಿ ಎಡಪಂಥೀಯ ಜಾನ್ ಮೆಕ್ ಡೊನೆಲ್ ಅವರನ್ನು ಸೋಲಿಸಿದರು. ಇದರೊಂದಿಗೆ ಟೋನಿ ಬ್ಲೇರ್ ನಂತರ ಬ್ರೌನ್ ಪ್ರಧಾನ ಮಂತ್ರಿಯಾಗುವುದು ಖಚಿತಗೊಂಡಿತು.

2007: ಹಿಂದೂಗಳ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಬ್ರಿಟನ್ನಿನ ಹಿಂದೂ ದೇವಾಲಯದಲ್ಲಿ ಬಿಡಲಾಗಿದ್ದ ಬಸವನ (ಶಂಭು) ಹತ್ಯೆಯ ನಿರ್ಧಾರವನ್ನು ಸರ್ಕಾರ ಮುಂದೂಡಿತು.

2007: ಐವತ್ತಾರು ವರ್ಷಗಳ ಬಳಿಕ ಉತ್ತರ ಮತ್ತು ದಕ್ಷಿಣ ಕೊರಿಯಾಗಳ ಎರಡು ರೈಲುಗಾಡಿಗಳು ಪರಸ್ಪರ ಗಡಿ ದಾಟಿ ಏಕತೆಯೆಡೆಗೆ ಮತ್ತೆ ಹೆಜ್ಜೆ ಹಾಕಿದವು.

2007: ದೇಶದ ಪ್ರಪ್ರಥಮ ಕೃಷಿ ಸಮುದಾಯ ಬಾನುಲಿ ಕೇಂದವು ಧಾರವಾಡದ ಕೃಷಿ ವಿಶ್ವ ವಿದ್ಯಾಲಯದಲ್ಲಿ ಚಾಲನೆಗೊಂಡಿತು. ಕೃಷಿ ಸಚಿವ ಬಂಡೆಪ್ಪ ಕಾಶೆಂಪೂರ ಬಾನುಲಿ ಕೇಂದ್ರವನ್ನು ಉದ್ಘಾಟಿಸಿದರು.

2007: ಡೆಕ್ಕನ್ ಹೆರಾಲ್ಡ್ ಹಿರಿಯ ವರದಿಗಾರ್ತಿ ಸಂಗೀತಾ ಚೆಂಗಪ್ಪ ಅವರಿಗೆ 9ನೇ ವರ್ಷದ `ಪೋಲ್ಸ್ಟಾರ್' ಪ್ರಶಸ್ತಿ ಲಭಿಸಿತು.

2006: ಸ್ವಾತಂತ್ರ್ಯ ಹೋರಾಟಗಾರ, ಇಂಡಿಯನ್ ನ್ಯಾಷನಲ್ ಆರ್ಮಿ ಸಂಸ್ಥಾಪಕ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರು ವಿಮಾನ ಅಪಘಾತದಲ್ಲಿ ಮೃತಪಟ್ಟಿಲ್ಲ ಎಂಬುದಾಗಿ ಹೇಳಿರುವ ನ್ಯಾಯಮೂರ್ತಿ ಎಂ.ಕೆ. ಮುಖರ್ಜಿ ಆಯೋಗದ ವರದಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿತು. ನ್ಯಾಯಮೂರ್ತಿ ಮುಖರ್ಜಿ ಆಯೋಗವು 2005 ನವೆಂಬರ್ 8ರಂದು ಸಲ್ಲಿಸಿದ್ದ ವರದಿಯನ್ನು ಸರ್ಕಾರವು ಪರಿಶೀಲಿಸಿದೆ, ಆದರೆ ನೇತಾಜಿ ವಿಮಾನ ಅಪಘಾತದಲ್ಲಿ ಸತ್ತಿಲ್ಲ, ಜಪಾನ್ ದೇವಾಲಯದಲ್ಲಿ ಇರುವ ಚಿತಾಭಸ್ಮ ಅವರದ್ದಲ್ಲ ಎಂಬ ಆಯೋಗದ ವರದಿಗೆ ಸರ್ಕಾರದ ಸಹಮತ ಇಲ್ಲ ಎಂದು ಸದನದಲ್ಲಿ ವರದಿಯ ಜೊತೆಗೆ ಮಂಡಿಸಲಾದ ಕ್ರಮಾನುಷ್ಠಾನ ವರದಿಯಲ್ಲಿ (ಕ್ರಮ ಕೈಗೊಂಡ ವರದಿ) ಸರ್ಕಾರ ತಿಳಿಸಿತು.

2006: ಇತರ ಹಿಂದುಳಿದ ವರ್ಗಗಳಿಗೆ ಶೇಕಡಾ 27 ಮೀಸಲಾತಿ ಕಲ್ಪಿಸುವ ಪ್ರಸ್ತಾವದ ವಿರುದ್ಧ ದೇಶದ ವಿವಿಧ ಪ್ರದೇಶಗಳಿಗೆ ಚಳವಳಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸೀಟು ಹೆಚ್ಚಳ ಪರಿಶೀಲಿಸಿ ಬಿಕ್ಕಟ್ಟು ಬಗೆಹರಿಸುವ ಸಲುವಾಗಿ ಪ್ರಧಾನಿ ಮನಮೋಹನ್ ಸಿಂಗ್ ಅವರು ರಕ್ಷಣಾ ಸಚಿವ ಪ್ರಣವ್ ಮುಖರ್ಜಿ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಅರ್ಜುನ್ ಸಿಂಗ್, ಕಾನೂನು ಸಚಿವ ಎಚ್. ಆರ್. ಭಾರದ್ವಾಜ್ ಮತ್ತು ಹಣಕಾಸು ಸಚಿವ ಪಿ. ಚಿದಂಬರಂ ಅವರನ್ನು ಒಳಗೊಂಡ ನಾಲ್ಕು ಮಂದಿ ಸಚಿವರ `ಅನೌಪಚಾರಿಕ ಸಲಹಾ ಸಮಿತಿ' ಒಂದನ್ನು ರಚಿಸಿದರು.

1965: ಕಲಾವಿದ ರಾಜಗೋಪಾಲ ಕಲ್ಲೂರಕರ ಜನನ.

1954: ಕರಿಯರು ಮತ್ತು ಬಿಳಿಯರಿಗಾಗಿ `ಪ್ರತ್ಯೇಕ ಮತ್ತು ಸಮಾನ' ಪಬ್ಲಿಕ್ ಶಾಲೆಗಳನ್ನು ನಡೆಸುವುದು ಸಂವಿಧಾನದ ಉಲ್ಲಂಘನೆಯಾಗುತ್ತದೆ ಎಂಬ ಚಾರಿತ್ರಿಕ ತೀರ್ಪನ್ನು ಅಮೆರಿಕದ ಸುಪ್ರೀಂ ಕೋರ್ಟ್ ನೀಡಿತು.

1946: ಕಲಾವಿದೆ ಕಾವೇರಿ ಶ್ರೀಧರ್ ಜನನ.

1935: ಕಲಾವಿದ ಉತ್ತರಾಚಾರ್ಯ ಜನನ.

1934: ಕಲಾವಿದ ರಾಮಮೂರ್ತಿ ಜನನ.

1934: ಕಲಾವಿದ ಜಂಬೂಕಣ್ಣನ್ ಜನನ.

1897: ಕರ್ನಾಟಕ ಸಂಗೀತದ ವಾಗ್ಗೇಯಕಾರ ಎಚ್. ಯೋಗಾ ನರಸಿಂಹಂ (17-5-1897ರಿಂದ 14-5-1971) ಅವರು ಹೊಳೆನರಸೀಪುರದ ನಾರಣಪ್ಪ- ಲಕ್ಷ್ಮೀದೇವಮ್ಮ ದಂಪತಿಯ ಮಗನಾಗಿ ಕೋಲಾರದಲ್ಲಿ ಜನಿಸಿದರು.

1861: ಲಂಡನ್ನಿನಿಂದ ಪ್ಯಾರಿಸ್ಸಿಗೆ 6 ದಿನಗಳ ಪ್ರವಾಸ ಏರ್ಪಡಿಸುವ ಮೂಲಕ ಥಾಮಸ್ ಕುಕ್ ಮೊತ್ತ ಮೊದಲ `ಪ್ಯಾಕೇಜ್ ಹಾಲಿಡೇ' ಆರಂಭಿಸಿದ.

1792: `ನ್ಯೂಯಾರ್ಕ್ ಸ್ಟಾಕ್ ಎಕ್ಸ್ ಚೇಂಜ್' ಆರಂಭಗೊಂಡಿತು. ಈಗ ವಾಲ್ ಸ್ಟ್ರೀಟ್ ಎಂಬುದಾಗಿ ಕರೆಯಲಾಗುವ ಸ್ಥಳದಲ್ಲಿ ಸೆಕ್ಯುರಿಟಿಗಳ ಖರೀದಿ ಹಾಗೂ ಮಾರಾಟ ಮಾಡುತ್ತಿದ್ದ ಸ್ಥಳೀಯ ಬ್ರೋಕರುಗಳು ತಮ್ಮ ವಹಿವಾಟನ್ನು ಈ ಕೇಂದ್ರದ ಮೂಲಕ ಅಧಿಕೃತಗೊಳಿಸಲು ಒಪ್ಪಿದರು. ಈಗ ಎಲ್ಲರಿಂದ ಮಾನ್ಯತೆ ಪಡೆದಿರುವ ದಿ ನ್ಯೂಯಾರ್ಕ್ ಸ್ಟಾಕ್ ಎಕ್ಸ್ ಚೇಂಜ್ 1825ರಲ್ಲಿ ನ್ಯೂಯಾರ್ಕ್ ನಗರದ ವಾಲ್ ಸ್ಟ್ರೀಟಿನ 11ನೇ ನಂಬರ್ ಕಟ್ಟಡದಲ್ಲಿ ಸ್ಥಾಪನೆಗೊಂಡಿತು.

1540: ಕನೋಜಿನಲ್ಲಿ ನಡೆದ ಕದನದಲ್ಲಿ ಹುಮಾಯೂನನನ್ನು ಶೇರ್ ಶಹ ಸೂರಿ ಸೋಲಿಸಿದ. ಸೋತ ಹುಮಾಯೂನ್ ಸಿಂಧ್ ಹಾಗೂ ನಂತರ ಮಾರವಾಡದಲ್ಲಿ ನಿರಾಶ್ರಿತನಾಗಿ ನೆಲೆಸಬೇಕಾಯಿತು. ಆತನ ಮಗ ಅಕ್ಬರ್ ಇಂತಹ ಪರಿಸ್ಥಿತಿಯಲ್ಲೇ 1542ರಲ್ಲಿ ಜನಿಸಿ ಮುಂದೆ ಮೊಘಲ್ ಸಾಮ್ರಾಟರಲ್ಲೇ ಅತ್ಯಂತ ಶ್ರೇಷ್ಠ ಸಾಮ್ರಾಟನೆಂಬ ಹೆಸರು ಪಡೆದ.

No comments:

Advertisement