My Blog List

Monday, June 28, 2010

ಇಂದಿನ ಇತಿಹಾಸ History Today ಜೂನ್ 19

ಇಂದಿನ ಇತಿಹಾಸ

ಜೂನ್ 19

ಸರೋದ್ ಮಾಂತ್ರಿಕ ಉಸ್ತಾದ್ ಅಲಿ ಅಕ್ಬರ್ ಖಾನ್ (88) ಅವರು ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋದ ತಮ್ಮ ಸಂಗೀತ ಶಾಲೆಯಲ್ಲಿ ಈದಿನ ಬೆಳಗ್ಗೆ ನಿಧನರಾದರು. ಅವರು ಪತ್ನಿ ಮೇರಿ, ಮೂವರು ಪುತ್ರರು, ಒಬ್ಬ ಪುತ್ರಿ ಹಾಗೂ ಲಕ್ಷಾಂತರ ಅಭಿಮಾನಿಗಳನ್ನು ಅಗಲಿದರು.

2009: ಐವರು ಪ್ರಯಾಣಿಕರು ಮತ್ತು ಯುದ್ಧ ಸಾಮಗ್ರಿ ಇದ್ದ ರಷ್ಯಾದ ಸೇನಾ ಕಾರ್ಗೊ ಎಎನ್-124 ವಿಮಾನವೊಂದು ಈದಿನ ರಾತ್ರಿ ಪಾಕಿಸ್ಥಾನದ ಮೂಲಕ ಭಾರತದ ವಾಯುಗಡಿಯನ್ನು ಉಲ್ಲಂಘಿಸಿ ಒಳಪ್ರವೇಶಿಸಿತು. ಸೂಕ್ತ ಮುನ್ಸೂಚನೆ ಇಲ್ಲದೆ ವಾಯು ಗಡಿ ಉಲ್ಲಂಘಿಸಿದ್ದರಿಂದ ಭಾರತದ ವಾಯುಪಡೆ ವಿಮಾನಗಳು ರಷ್ಯಾ ವಿಮಾನವನ್ನು ಸುತ್ತುವರಿದು ಅದನ್ನು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸಿದವು.

2009: 'ಶಸ್ತ್ರಾಸ್ತ್ರ ತ್ಯಜಿಸಿ ಮಾತುಕತೆಗೆ ಬನ್ನಿ' ಎಂಬ ಕೇಂದ್ರ ಸರ್ಕಾರದ ಕರೆಯನ್ನು ಧಿಕ್ಕರಿಸಿ, ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಲಾಲ್‌ಗಡ ಪ್ರದೇಶವನ್ನು ನಕ್ಸಲೀಯರು ನಿಯಂತ್ರಣಕ್ಕೆ ತೆಗೆದುಕೊಂಡು, ಅದನ್ನು 'ವಿಮೋಚನಾ ವಲಯ' ಎಂದು ಘೋಷಿಸಿದರು. ಸ್ಥಳೀಯ ಬುಡಕಟ್ಟು ಜನರ ಪ್ರಬಲ ಬೆಂಬಲದೊಂದಿಗೆ ಹೋರಾಟಕ್ಕೆ ಇಳಿದ ನಕ್ಸಲೀಯರು ಹಾಗೂ ಅವರನ್ನು ಹಿಮ್ಮೆಟ್ಟಿಸಲು ಹೊರಟ ಅರೆಸೇನಾ ಪಡೆಗಳಿಂದಾಗಿ ಲಾಲ್‌ಗಢದಲ್ಲಿ ಹಿಂಸಾಚಾರ ಭುಗಿಲೆದ್ದಿತು. ಬಂಡುಕೋರರ ಪ್ರಾಬಲ್ಯವನ್ನು ಶತಾಯಗತಾಯ ಬಗ್ಗುಬಡಿಯಲು ನಿರ್ಧರಿಸಿದ ಪಡೆಗಳು, ರಾಜ್ಯ ಪೊಲೀಸರ ನೆರವಿನೊಂದಿಗೆ ಕಾರ್ಯಾಚರಣೆಯನ್ನು ತೀವ್ರಗೊಳಿಸಿದವು.

2009: ತ್ವರಿತ ಹಾಗೂ ಪಾರದರ್ಶಕ ತನಿಖೆಗಾಗಿ ದೇಶದ ಎಲ್ಲಾ ಪೊಲೀಸ್ ಠಾಣೆಗಳ ಮಧ್ಯೆ ಸಂಪರ್ಕ ಏರ್ಪಡಿಸುವ 2000 ಕೋಟಿ ರೂಪಾಯಿಗಳ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತು. ಅಪರಾಧ ಮತ್ತು ಅಪರಾಧಿಗಳ ಜಾಡಿನ ಜಾಲ ಮತ್ತು ವ್ಯವಸ್ಥೆಯನ್ನು ಮಾಹಿತಿ ತಂತ್ರಜ್ಞಾನದ ಮೂಲಕ ಜಾರಿ ಮಾಡಲಾಗುತ್ತಿದೆ. 11ನೇ ಪಂಚವಾರ್ಷಿಕ ಯೋಜನೆಯಲ್ಲಿ ಈ ಹೊಸ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಇದರ ಜಾರಿಗೆ ಪ್ರಧಾನಿ ಅವರ ಅಧ್ಯಕ್ಷತೆಯ ಕೇಂದ್ರ ಸಚಿವ ಸಂಪುಟದ ಆರ್ಥಿಕ ವ್ಯವಹಾರಗಳ ಸಮಿತಿ ಒಪ್ಪಿಗೆ ನೀಡಿದೆ. ಇ-ಆಡಳಿತದ ಮೂಲಕ ಎಲ್ಲಾ ಪೊಲೀಸ್ ಠಾಣೆಗಳ ಮಧ್ಯೆ ಸಂಪರ್ಕ ಏರ್ಪಡಿಸುವುದೇ ಈ ಯೋಜನೆಯ ಉದ್ದೇಶ ಎಂದು ಗೃಹ ಸಚಿವ ಪಿ. ಚಿದಂಬರಂ ತಿಳಿಸಿದರು.

2009: ಸರೋದ್ ಮಾಂತ್ರಿಕ ಉಸ್ತಾದ್ ಅಲಿ ಅಕ್ಬರ್ ಖಾನ್ (88) ಅವರು ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋದ ತಮ್ಮ ಸಂಗೀತ ಶಾಲೆಯಲ್ಲಿ ಈದಿನ ಬೆಳಗ್ಗೆ ನಿಧನರಾದರು. ಅವರು ಪತ್ನಿ ಮೇರಿ, ಮೂವರು ಪುತ್ರರು, ಒಬ್ಬ ಪುತ್ರಿ ಹಾಗೂ ಲಕ್ಷಾಂತರ ಅಭಿಮಾನಿಗಳನ್ನು ಅಗಲಿದರು. ಕಳೆದ ನಾಲ್ಕು ವರ್ಷಗಳಿಂದ ಮೂತ್ರಪಿಂಡ ತೊಂದರೆಯಿಂದ ಬಳಲುತ್ತಿದ್ದ ಅವರು ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದರು. ನಾಲ್ಕು ತಿಂಗಳಿಂದ ತೀವ್ರ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ಭಾರತದಲ್ಲಿ ಹಾಗೂ ವಿದೇಶಗಳಲ್ಲಿ ಭಾರತೀಯ ಸಂಗೀತದ ಪ್ರಚಾರಕ್ಕೆ ಬಹುದೊಡ್ಡ ಕೊಡುಗೆ ನೀಡಿರುವ ಅವರಿಗೆ ಪದ್ಮಭೂಷಣ, ಪದ್ಮವಿಭೂಷಣ ಮುಂತಾಗಿ ಹಲವಾರು ಪ್ರಶಸ್ತಿಗಳು ಲಭಿಸಿದ್ದವು. ಅವರ ತಂದೆ ಪದ್ಮ ವಿಭೂಷಣ, ಆಚಾರ್ಯ ಡಾ.ಅಲ್ಲಾವುದ್ದೀನ್ ಖಾನ್ ಅವರೂ 'ಉತ್ತರ ಭಾರತದ ಈ ಶತಮಾನದ ಶ್ರೇಷ್ಠ ಸಂಗೀತ ತಜ್ಞ' ಎಂಬ ಹೆಸರು ಗಳಿಸಿದ್ದರು. ಕಳೆದ ಐದು ದಶಕಗಳಿಂದ ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಬಹುದೊಡ್ಡ ಹೆಸರಾಗಿದ್ದ ಅಲಿ ಅಕ್ಬರ್ ಖಾನ್, ಕರ್ನಾಟಕದ ರಾಜೀವ್ ತಾರಾನಾಥ್ ಸೇರಿದಂತೆ ಅನೇಕ ಶಿಷ್ಯಂದಿರನ್ನು ಹೊಂದಿದ್ದರು. 1922ರಲ್ಲಿ ಪೂರ್ವ ಬಂಗಾಳದ ಕೊಮಿಲಾ ಜಿಲ್ಲೆಯ ಶಿವಪುರದಲ್ಲಿ (ಈಗಿನ ಬಾಂಗ್ಲಾದೇಶ) ಹುಟ್ಟಿದ ಅವರು ಮೂರರ ಎಳೆ ವಯಸ್ಸಿನಲ್ಲೇ ತಂದೆಯಿಂದ ಹಿಂದುಸ್ಥಾನಿ ಗಾಯನ ಮತ್ತು  ಚಿಕ್ಕಪ್ಪ ಫಕೀರ್ ಅಫ್ತಾಬುದ್ದಿನರಿಂದ ಡ್ರಂ ಬಾರಿಸುವುದನ್ನು ಕಲಿತರು. ತಂದೆಯಿಂದಲೇ ಇತರ ವಾದ್ಯಗಳನ್ನು ನುಡಿಸುವುದನ್ನೂ ಅಭ್ಯಾಸ ಮಾಡಿದರು. ಆದರೆ ಬಳಿಕ ಅವರ ಒಲವು ಸಿತಾರ್‌ನತ್ತ ಹೆಚ್ಚು ಕೇಂದ್ರೀಕೃತವಾಯಿತು. 25 ತಂತಿಗಳ ಸರೋದ್ ನುಡಿಸುವುದರಲ್ಲಿ ಹೊಂದಿದ ಪರಿಣತಿಯಿಂದಾಗಿ ಜಗತ್ತಿನಾದ್ಯಂತ ಸಂಗೀತ ವಲಯದಲ್ಲಿ ಅವರ ಖ್ಯಾತಿ ಹಬ್ಬಿತ್ತು. ಕ್ಯಾಲಿಫೋರ್ನಿಯಾದಲ್ಲಿಯೇ ನೆಲೆಸಿದ ಬಳಿಕ ಅಮೆರಿಕ ಸಹಿತ ಪಾಶ್ಚಿಮಾತ್ಯ ದೇಶಗಳಲ್ಲಿ ಅವರ ಕಛೇರಿಗಳು ತುಂಬ ಜನಪ್ರಿಯವಾಗಿದ್ದವು. ಅಲ್ಲಿಯೇ ಸಂಗೀತ ಶಾಲೆಯನ್ನು ನಡೆಸಿ ಸಾವಿರಾರು ವಿದ್ಯಾರ್ಥಿಗಳಿಗೆ ಅವರು ಗುರುಗಳಾಗಿದ್ದರು. ಜಗದ್ವಿಖ್ಯಾತ ವಯಲಿನ್ ವಾದಕ ಯೆಹುದಿ ಮೆನುಹಿನ್ ಇವರ ಸಿತಾರ್ ವಾದನದಿಂದ ಪ್ರಭಾವಿತರಾಗಿ 'ಜಗತ್ತಿನ ಅತಿ ಶ್ರೇಷ್ಠ ಸಂಗೀತಗಾರ' ಎಂದು ಕರೆದಿದ್ದರು. 1991ರಲ್ಲಿ ಮೆಕಾರ್ಥರ್ ಫೌಂಡೇಷನ್ನಿನ ಫೆಲೊಶಿಪ್ ಪಡೆದ ಮೊದಲ ಭಾರತೀಯ ಅವರು. 1970ರಿಂದ 1998ರ ಮಧ್ಯೆ ಐದು ಸಲ ಅವರು ಗ್ರಾಮಿ ಪ್ರಶಸ್ತಿಗೆ ನಾಮಕರಣ ಹೊಂದಿದ್ದರು. 13ರ ಹರೆಯದಲ್ಲಿ ಅಲಹಾಬಾದಿನಲ್ಲಿ ಮೊದಲ ಕಛೇರಿ ನೀಡುವ ಮೂಲಕ ಸುದ್ದಿ ಮಾಡಿದ ಅವರು, 20ರ ಹರೆಯದಲ್ಲಿ ಮೊದಲ ಗ್ರಾಮಾಫೋನ್ ರೆಕಾರ್ಡಿಂಗ್ (ಎಚ್‌ಎಂವಿ) ಮಾಡಿದ್ದರು. ಮರುವರ್ಷ ಜೋಧ್‌ಪುರದ ಮಹಾರಾಜರ ಆಸ್ಥಾನ ಸಂಗೀತಗಾರರಾಗಿಯೂ ನೇಮಕಗೊಂಡಿದ್ದರು. ಏಳು ವರ್ಷ ಕಾಲ ಅಲ್ಲಿದ್ದಾಗ  ಅವರಿಗೆ ಉಸ್ತಾದ್ ಸಹಿತ ಹಲವು ಬಿರುದುಗಳು ಲಭಿಸಿದವು. ಸುಮಾರು 20 ವರ್ಷಗಳ ಕಾಲ ಪ್ರತಿದಿನ 18 ಗಂಟೆಗಳ ಅಭ್ಯಾಸ ಮಾಡಿದ ಅವರು, 1972ರಲ್ಲಿ ತಂದೆಯವರು ತೀರಿಕೊಂಡ ಬಳಿಕ ಅವರ ಘರಾಣಾ ಪರಂಪರೆಯನ್ನೇ ಮುಂದುವರಿಸಿದರು. ಅವರ ತಂದೆ ರಾಂಪುರ ಮತ್ತು ಮೈಹರ್‌ನ ಬಾಬಾ ಅಲ್ಲಾವುದ್ದೀನ್ ಸೇನಿ ಘರಾಣಾಕ್ಕೆ ಸೇರಿದವರು. 1955ರಲ್ಲಿ ಜಾಗತಿಕ ವಯೋಲಿನ್ ಮಾಂತ್ರಿಕ ಯೆಹುದಿ ಮೆನುಹಿನ್ ಮನವಿಯ ಮೇರೆಗೆ ಅಮೆರಿಕಕ್ಕೆ ಭೇಟಿ ನೀಡಿದ ಖಾನ್, ನ್ಯೂಯಾರ್ಕಿನ ಮಾಡರ್ನ್ ಆರ್ಟ್ ಮ್ಯೂಸಿಯಂನಲ್ಲಿ  ಕಛೇರಿ  ನೀಡಿ ಜಗದ್ವಿಖ್ಯಾತರಾದರು. ಭಾರತೀಯ ಶಾಸ್ತ್ರೀಯ ಸಂಗೀತದ ಮೊದಲ ಪಾಶ್ಚಿಮಾತ್ಯ ಎಲ್‌ಪಿ ರೆಕಾರ್ಡಿಂಗ್ ಮಾಡಿದ ದಾಖಲೆಯೂ ಅವರ  ಹೆಸರಲ್ಲಿದೆ. ಅಲ್ಲಿನ ಟೆಲಿವಿಷನ್‌ಗಳಲ್ಲೂ ಕಾರ್ಯಕ್ರಮ ನೀಡಿದ ಮೊದಲ ಭಾರತೀಯರು. 1956ರಲ್ಲಿ  ಕೋಲ್ಕತದಲ್ಲಿ ಅಲಿ ಅಕ್ಬರ್ ಕಾಲೇಜ್ ಆಫ್ ಮ್ಯೂಸಿಯಂ ಸ್ಥಾಪಿಸಿದ ಅವರು,  1967ರಲ್ಲಿ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಸಂಗೀತ ಶಾಲೆ ಸ್ಥಾಪಿಸಿದರು. ಅಲ್ಲಿನ  ಸಂಗೀತ ಶಾಲೆಯಲ್ಲಿ ಪಾಶ್ಚಿಮಾತ್ಯ ದೇಶಗಳ ನೂರಾರು ವಿದ್ಯಾರ್ಥಿಗಳಿದ್ದರು. ಸ್ವಿಜರ್ಲೆಂಡಿನಲ್ಲೂ ಅವರ ಶಾಲೆಯ ಶಾಖೆ ಆರಂಭವಾಗಿತ್ತು. ಆಸ್ಟ್ರೇಲಿಯಾ, ಲಂಡನ್‌ಗಳಲ್ಲೂ ಅವರು ಜನಪ್ರಿಯರಾಗಿ ಜನಪ್ರಿಯರಾಗಿದ್ದರು.

2009: ಉಪ್ಪಿನಂಗಡಿಯ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಡೆಂಗೆ ಜ್ವರ ಕಾಣಿಸಿಕೊಂಡು, ನೆಕ್ಕಿಲಾಡಿ ಗ್ರಾಮದ ಬೋಳಂತಿಲ ನಿವಾಸಿ ಜೆಸಿಂತಾ ರೆಬೆಲ್ಲೋ (38) ಮೃತರಾದರು.

2009: ಆಂಗ್ಲಮಾಧ್ಯಮ ಶಾಲೆಗಳಿಗೆ ಅನುಮತಿ ನೀಡುವಂತೆ ಕಳೆದ ಏಪ್ರಿಲ್ 6ರಂದು ಏಕ ಸದಸ್ಯ ಪೀಠ ನೀಡಿರುವ ತೀರ್ಪಿಗೆ ತಡೆಯಾಜ್ಞೆ ನೀಡಬೇಕು ಎಂಬ ರಾಜ್ಯ ಸರ್ಕಾರದ ಮನವಿಯನ್ನು ಹೈಕೋರ್ಟಿನ ವಿಭಾಗೀಯ ಪೀಠ ತಿರಸ್ಕರಿಸಿತು. ಮುಖ್ಯನ್ಯಾಯಮೂರ್ತಿ ಪಿ.ಡಿ. ದಿನಕರನ್ ಮತ್ತು ನ್ಯಾಯಮೂರ್ತಿ ವಿ.ಜಿ.ಸಭಾಹಿತ ಅವರನ್ನು ಒಳಗೊಂಡ ವಿಭಾಗೀಯ ಪೀಠ ನೀಡಿರುವ ಆದೇಶದಿಂದಾಗಿ ಸರ್ಕಾರಕ್ಕೆ ಹಿನ್ನಡೆಯಾಯಿತು.

2009: ಶಿಕ್ಷಣದ ಸುಧಾರಣೆಗಾಗಿ ರಾಷ್ಟ್ರೀಯ ಜ್ಞಾನ ಆಯೋಗ ಮಾಡಿರುವ ಶಿಫಾರಸುಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ನೀಲನಕ್ಷೆಯನ್ನು ಮೊದಲು ಬಿಡುಗಡೆ ಮಾಡಿರುವ ಹೆಗ್ಗಳಿಕೆಗೆ ದೆಹಲಿ ರಾಜ್ಯ ಪಾತ್ರವಾಯಿತು. ರಾಷ್ಟ್ರೀಯ ಜ್ಞಾನ ಆಯೋಗದ ಅಧ್ಯಕ್ಷ ಸ್ಯಾಮ್ ಪಿತ್ರೋಡಾ, ದೆಹಲಿ ವಿಧಾನಸಭೆಯಲ್ಲಿ  ದಾಖಲೆಯನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿ ಈ ವಿಚಾರವನ್ನು ಬಹಿರಂಗ ಪಡಿಸಿದರು.

2009: ವಿಶ್ವದ ಅತ್ಯಂತ ಹಿರಿಯ ತೊಮೊಜಿ ತನಬೆ ಹೃದಯ ವೈಫಲ್ಯದಿಂದ ದಕ್ಷಿಣ ಜಪಾನಿನಲ್ಲಿ ನಿಧನ ಹೊಂದಿದರು. ಅವರಿಗೆ 113ವರ್ಷ ವಯಸ್ಸಾಗಿತ್ತು. ಜನವರಿ 2007ರಲ್ಲಿ ಗಿನ್ನೆಸ್ ವಿಶ್ವ ದಾಖಲೆ ಪುಸ್ತಕದಲ್ಲಿ ತನಬೆಯನ್ನು ವಿಶ್ವದ ಅತ್ಯಂತ ಹಿರಿಯ ಎಂದು ದಾಖಲಿಸಲಾಗಿತ್ತು. ಮೇ ತಿಂಗಳಲ್ಲಿ ಅಸ್ವಸ್ಥರಾಗಿದ್ದ ಅವರು ಆನಂತರ ಚೇತರಿಸಿಕೊಂಡಿರಲಿಲ್ಲ. ತನಬೆ ಬೆಳಿಗ್ಗೆ 5.30ಕ್ಕೆ ಎದ್ದು ಉಪಹಾರ ಸೇವಿಸುವ ಮುನ್ನ ಪತ್ರಿಕೆ  ಓದುತ್ತಿದ್ದರು. ದಿನಕ್ಕೆ ಮೂರು ಸಲ ಊಟ ಸೇವಿಸುತ್ತಿದ್ದ ಅವರು ಮಧ್ಯಾಹ್ನದ ಒಂದು ಲೋಟ ಹಾಲು ಕುಡಿಯುತ್ತಿದ್ದರು. ತಮ್ಮ ದೀರ್ಘ ಆಯಸ್ಸಿನ ಗುಟ್ಟು 'ಕುಡಿತದಿಂದ ಹಾಗೂ ಧೂಮಪಾನದಿಂದ ದೂರವಿರುವುದು' ಎಂದು ಹೇಳುತ್ತಿದ್ದರು. ಸಾವಿಗೆ ಮುಂಚೆ ಅವರು ತಮ್ಮ ಎಂಟು ಮಕ್ಕಳ ಪೈಕಿ ಒಬ್ಬ ಮಗ ಹಾಗೂ ಸೊಸೆಯೊಂದಿಗೆ ಇದ್ದರು. ಈಗಿನ ಹೊಸ ಅತ್ಯಂತ ಹಿರಿಯ ಜಪಾನಿನ ವ್ಯಕ್ತಿ ಪಶ್ವಿಮ ಕ್ಯೊಟೊ ಪ್ರಾಂತ್ಯದಲ್ಲಿ ಇದ್ದು ಆತನ ವಯಸ್ಸು 112. ಅತ್ಯಂತ ಹಿರಿಯ ಮಹಿಳೆ ದಕ್ಷಿಣ ಓಕಿನಾವಾದಲ್ಲಿದ್ದು ಆಕೆಗೆ 114 ವರ್ಷ. ಸರ್ಕಾರ ನೀಡಿರುವ ಅಂಕಿಅಂಶದ ಪ್ರಕಾರ  ಜಪಾನಿನಲ್ಲಿ ನೂರು ವರ್ಷ ತುಂಬಿದವರ ಸಂಖ್ಯೆ ಅಕ್ಟೋಬರಿನಲ್ಲಿ 41,000ಕ್ಕೆ ತಲುಪಿದೆ. ಜಪಾನಿನಲ್ಲಿ ಜನರ ಸರಾಸರಿ ಆಯಸ್ಸು 85 ವರ್ಷವಾಗಿದ್ದು ಇದು ವಿಶ್ವದಲ್ಲೇ ಅತಿಹೆಚ್ಚು ಎನ್ನಲಾಯಿತು.

2009: ಪಕ್ಷದೊಳಗಿನ ಭಿನ್ನಮತೀಯರ ಒತ್ತಡಕ್ಕೆ ಮಣಿದು ತೆಲಂಗಾಣ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಕೆ.ಚಂದ್ರಶೇಖರ ರಾವ್ ರಾಜೀನಾಮೆ ನೀಡಿದರು. ಮಾಜಿ ಕೇಂದ್ರ ಸಚಿವರೂ ಆದ ಅವರು ತಮ್ಮ ರಾಜೀನಾಮೆ ಪತ್ರವನ್ನು ಈದಿನ ಸಂಜೆ ಪಕ್ಷದ ಕೇಂದ್ರ ಕಚೇರಿ ತೆಲಂಗಾಣ ಭವನಕ್ಕೆ ಕಳುಹಿಸಿಕೊಟ್ಟರು. ಇತ್ತೀಚೆಗೆ ನಡೆದ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷವು ತೀವ್ರ ಹಿನ್ನಡೆ ಅನುಭವಿಸಿದ ಕಾರಣ ಅವರ ರಾಜೀನಾಮೆಗೆ ಪಕ್ಷದಲ್ಲಿ ಒತ್ತಡ ಹೆಚ್ಚಾಗಿತ್ತು.

2008: ಕನ್ನಡದ ಹೆಸರಾಂತ ಹಿರಿಯ ನಟಿ ಬಿ.ಸರೋಜಾದೇವಿ, ಗಾನಕೋಗಿಲೆ ಲತಾ ಮಂಗೇಶ್ಕರ್, ನಟ ದಿಲೀಪ್ ಕುಮಾರ್ ಹಾಗೂ ನಿರ್ದೇಶಕ ತಪನ್ ಸಿನ್ಹಾ ಅವರನ್ನು ಕೇಂದ್ರ ಸರ್ಕಾರವು ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆ ಮಾಡಿತು. 60ನೇ ಸ್ವಾತಂತ್ರ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ಇವರನ್ನು ಈ ಪ್ರಶಸ್ತಿಗೆ  ಆಯ್ಕೆ ಮಾಡಲಾಯಿತು.

2007: ತನ್ನ ಅತ್ಯುನ್ನತ ಪ್ರಶಸ್ತಿ `ಆಫೀಸರ್ ಆಫ್ ದಿ ಆರ್ಡರ್ ಆಫ್ ಆರ್ಟ್ಸ್ ಅಂಡ್ ಲೆಟರ್ಸ್' ಗೆ ಹಿಂದಿ ನಟ ಶಾರುಖ್ ಖಾನ್ ಅವರನ್ನು ಫ್ರಾನ್ಸ್ ಆಯ್ಕೆ ಮಾಡಿತು. ಹಿಂದಿ ಸಿನಿಮಾ ರಂಗಕ್ಕೆ ಮತ್ತು ಭಾರತ- ಫ್ರಾನ್ಸ್ ಸಹಕಾರ ವರ್ಧನೆಗೆ ಶಾರುಖ್ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಯಿತು.

2007: ಅಟ್ಲಾಂಟಿಸ್ ಗಗನನೌಕೆಯು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ (ಐಎಸ್ಎಸ್) ಧಕ್ಕೆಯಿಂದ ಕಳಚಿಕೊಂಡು ಭೂಮಿಯತ್ತ ಪ್ರಯಾಣ ಬೆಳೆಸಿತು. `ಐಎಸ್ಎಸ್' ನಲ್ಲಿ ಆರು ತಿಂಗಳು ತಂಗಿದ್ದ ಭಾರತೀಯ ಸಂಜಾತೆ ಸುನೀತಾ ವಿಲಿಯಮ್ಸ್ ಸೇರಿದಂತೆ 7 ಗಗನ ಯಾತ್ರಿಗಳು ಅಟ್ಲಾಂಟಿಸ್ ನೌಕೆಯಲ್ಲಿ ಭೂಮಿಯತ್ತ ಹೊರಟರು. ಏಳು ಗಗನಯಾತ್ರಿಗಳನ್ನು ಹೊತ್ತು ಜೂನ್ 8ರಂದು ಅಂತರಿಕ್ಷದತ್ತ ಪ್ರಯಾಣ ಬೆಳೆಸಿದ್ದ ಅಟ್ಲಾಂಟಿಸ್ ಜೂನ್ 10ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿತ್ತು. `ಐಎಸ್ಎಸ್' ನಲ್ಲಿ ಸುನೀತಾ ಬದಲಿಗೆ ಕಾರ್ಯನಿರ್ವಹಿಸಲು ನಿಯೋಜಿತರಾಗಿದ್ದ ಕ್ಲೆಟನ್ ಅಂಡರ್ ಸನ್ ಸಹ ಇದರಲ್ಲಿ ಪಯಣಿಸಿದ್ದರು.

2007: ಯುದ್ಧಾ ನಂತರ ಇರಾಕಿನ `ಸುರಕ್ಷಿತ ವಲಯ'ದಲ್ಲಿ ಕಂಡು ಬರುತ್ತಿರುವ ದಿನ ನಿತ್ಯದ ಜನಜೀವನದ ಬಗ್ಗೆ ಅನಿವಾಸಿ ಭಾರತೀಯ ರಾಜೀವ್ ಚಂದ್ರಶೇಖರ್ ರಚಿಸಿರುವ `ಇಂಪೀರಿಯಲ್ ಲೈಫ್ ಇನ್ ದ ಎಮೆರಾಲ್ಡ್ ಸಿಟಿ' (ಹವಳದ ನಗರದಲ್ಲಿನ ಭವ್ಯ ಬದುಕು) ಕೃತಿ, ಕಥೆಯೇತರ ವಿಭಾಗದಲ್ಲಿ ಬ್ರಿಟನ್ನಿನ ಅತ್ಯುನ್ನತ ಪ್ರಶಸ್ತಿಯಾದ `ಬಿಬಿಸಿ ಫೋರ್ ಸ್ಯಾಮ್ಯುಯೆಲ್ ಜಾನ್ಸನ್ ಪ್ರಶಸ್ತಿಗೆ ಆಯ್ಕೆಯಾಯಿತು. `ವಾಷಿಂಗ್ಟನ್ ಪೋಸ್ಟ್' ಪತ್ರಿಕೆಯ ಬಾಗ್ದಾದ್ ಬ್ಯೂರೊದ ಮಾಜಿ ಮುಖ್ಯಸ್ಥ ಚಂದ್ರಶೇಖರ್, ರಕ್ಷಿತ ವಲಯದಲ್ಲಿ ಅಮೆರಿಕನ್ನರ ಗೂಡಿನೊಳಗಿನ ಬದುಕು ಮತ್ತು ರಕ್ಷಿತ ವಲಯದ ಆಚೆ ಇರಾಕ್ ಜನತೆಯ ಗೊಂದಲ, ಅರಾಜಕತೆಯ ಬದುಕನ್ನು ಇಲ್ಲಿ ಚಿತ್ರಿಸಿದ್ದಾರೆ. ಸದ್ದಾಂ ಹುಸೇನ್ ಅವರನ್ನು 2003ರಲ್ಲಿ ಅಧಿಕಾರದಿಂದ ಪದಚ್ಯುತಗೊಳಿಸಿದ ನಂತರ ಇರಾಕಿನಲ್ಲಿ ಆಡಳಿತ ನಡೆಸಿದ  ಸರ್ಕಾರದ ವೈಫಲ್ಯಗಳನ್ನೂ ಈ ಕೃತಿಯಲ್ಲಿ ಪಟ್ಟಿ ಮಾಡಲಾಗಿದೆ. 18ನೇ ಶತಮಾನದ ನಿಘಂಟು ರಚನೆಕಾರ ಮತ್ತು ಪ್ರಬಂಧ ರಚನೆಕಾರ ಸ್ಯಾಮುಯೆಲ್ ಜಾನ್ಸನ್ ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿಯನ್ನು ಪ್ರಚಲಿತ ವಿದ್ಯಮಾನ, ಇತಿಹಾಸ, ರಾಜಕೀಯ, ವಿಜ್ಞಾನ, ಕ್ರೀಡೆ, ಪ್ರವಾಸ, ಜೀವನಚರಿತ್ರೆ ವಿಭಾಗದಲ್ಲಿನ ಅತ್ಯುತ್ತಮ ಸಾಹಿತ್ಯ ಕೃತಿಗಳಿಗೆ ನೀಡಲಾಗುತ್ತಿದೆ. ಪ್ರಶಸ್ತಿ 30 ಸಾವಿರ ಪೌಂಡ್ ನಗದು ಹೊಂದಿದೆ.

 2007: ಸಿಂಗೂರು ಯೋಜನೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಆರ್ಥಿಕ ಪುನರ್ ವಸತಿ ಕಲ್ಪಿಸುವುದಾಗಿ ಪಶ್ಚಿಮ ಬಂಗಾಳ ಸರ್ಕಾರ ಘೋಷಿಸಿತು. ಇದೇ ವೇಳೆ, ಭೂಮಿ ನೀಡಲು ಇಚ್ಛಿಸದ ರೈತರ ಜಮೀನನ್ನು ಮರಳಿ ನೀಡಬೇಕೆನ್ನುವ ತೃಣಮೂಲ ಕಾಂಗ್ರೆಸ್ ಬೇಡಿಕೆಯನ್ನು ಸರ್ಕಾರ ತಿರಸ್ಕರಿಸಿತು. ಈಗ ನೀಡಲಾಗುವ ಆರ್ಥಿಕ ಪುನರ್ ವಸತಿ ಪ್ಯಾಕೇಜ್ನಡಿ ಯೋಜನೆಯ ನಿರಾಶ್ರಿತರಿಗೆ ಕೆಲವು ತರಬೇತಿಗಳನ್ನು ಆರಂಭಿಸಲಾಗುವುದು ಮತ್ತು ಟಾಟಾ ಮೋಟಾರ್ಸ್ ಯೋಜನೆಯಲ್ಲಿ ಉದ್ಯೋಗ ಕಲ್ಪಿಸಲಾಗುವುದು ಎಂದು ರಾಜ್ಯದ ಕೈಗಾರಿಕಾ ಸಚಿವ ನಿರುಪಮ್ ಸೇನ್ ವಿವರಿಸಿದರು.

 2007: ವಿಚಾರವಾದಿ, ಪ್ರಗತಿಪರ ಚಿಂತಕ ಪ್ರೊ.ಕೆ.ರಾಮದಾಸ್ (66) ಈದಿನ ಬೆಳಿಗ್ಗೆ ಸುಮಾರು 5 ಗಂಟೆಗೆ ಮೈಸೂರಿನಲ್ಲಿ ನಿಧನರಾದರು. ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ಇರುವುದು 20 ದಿನಗಳ ಹಿಂದಷ್ಟೇ ಪತ್ತೆಯಾಗಿತ್ತು. ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಂದಿದ್ದ ಅವರು, ಈದಿನ ಬೆಳಗಿನ ಜಾವ ತೀವ್ರ ಸುಸ್ತಿನ ಬಳಿಕ ಕೊನೆಯುಸಿರೆಳೆದರು. ಲೇಖಕಿಯೂ ಆಗಿರುವ ಆರ್. ನಿರ್ಮಲಾ ಇವರು ಪ್ರೊ.ಕೆ. ರಾಮದಾಸ್ ಅವರ ಪತ್ನಿ. 1941ರ ಮಾರ್ಚ್ 26ರಂದು ಕಳಸದಲ್ಲಿ ಹುಟ್ಟಿದ್ದ ರಾಮದಾಸ್ ಬಾಲ್ಯದಲ್ಲೇ ತಂದೆ ಶಿವಯ್ಯ ಅವರನ್ನು ಕಳೆದುಕೊಂಡವರು. ತಾಯಿ ಮಂಜಮ್ಮ ದುಡಿದು ಅವರನ್ನು ಬೆಳೆಸಿ, ಓದಿಸಿದರು. ಹೊಸನಗರದಲ್ಲಿದ್ದ ರಾಮದಾಸ್ ಕಾಲೇಜು ಓದಲು ಮೈಸೂರಿಗೆ ಬಂದು ಮೈಸೂರಿನವರೇ ಆದರು. ಪ್ರೊ. ರಾಮದಾಸ್ ಅವರ ಅಂತ್ಯಸಂಸ್ಕಾರ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಅನಿಲ ಚಿತಾಗಾರದಲ್ಲಿ ಯಾವುದೇ ಧಾರ್ಮಿಕ ವಿಧಿ-ವಿಧಾನಗಳಿಲ್ಲದೆ ಸಂಜೆ 5.55ಕ್ಕೆ ನೆರವೇರಿತು. ಮೈಸೂರಿನಲ್ಲಿ ಯುವಜನ ಸಮಾಜವಾದಿ ಚಳವಳಿ, ಗೋಕಾಕ್ ಚಳವಳಿ, ಕನ್ನಡದ ಹೋರಾಟ, ದಲಿತ ಚಳವಳಿ ಮತ್ತು ಕಾವೇರಿ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಾಮದಾಸ್, ಲಂಕೇಶ್ ಅವರ ಸಾವಿನ ಬಳಿಕವೂ `ಕರ್ನಾಟಕ ಪ್ರಗತಿರಂಗದ ವಕ್ತಾರ'ರಾಗಿ ಉಳಿದವರು.

 2007: ಖ್ಯಾತ ವಿಜ್ಞಾನಿ ಪ್ರೊ. ಸಿ.ಎನ್. ಆರ್ ರಾವ್ ಅವರಿಗೆ ಆಕ್ಸ್ ಫರ್ಡ್ ವಿಶ್ವ ವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು. ಈ ಗೌರವಕ್ಕೆ ಪಾತ್ರರಾದ ಮೊತ್ತ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ರಾವ್ ಅವರದಾಯಿತು.

2006: ಮುಖ್ಯಮಂತ್ರಿಯಾದ ನಾಲ್ಕು ತಿಂಗಳ ಬಳಿಕ ಎಚ್. ಡಿ. ಕುಮಾರಸ್ವಾಮಿ ಅವರು ಈದಿನ ರಾತ್ರಿ ತಮ್ಮ ಅಧಿಕೃತ ನಿವಾಸ `ಅನುಗ್ರಹ'ಕ್ಕೆ ಪ್ರವೇಶ ಮಾಡಿದರು. ಹೊಸನಗರದ ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಅವರು ನೀಡಿರುವ ಅಪರೂಪದ ದೇಶೀಯ `ಘಿರ್' ತಳಿಗೆ ಸೇರಿದ ಗೋವು ನಂದಿನಿ ಮತ್ತು ಕರು ರಾಮನನ್ನು ಮನೆಯೊಳಗೆ ತುಂಬಿಸಿಕೊಳ್ಳುವ ಮೂಲಕ ಮುಖ್ಯಮಂತ್ರಿ ಔಪಚಾರಿಕವಾಗಿ ಹೊಸ ಮನೆಗೆ ಕಾಲಿಟ್ಟರು. ಸ್ವಾಮೀಜಿ ಅವರು ಈ ಸಂದರ್ಭದಲ್ಲಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.

2006: ನಲ್ವತ್ತನಾಲ್ಕು ವರ್ಷಗಳಿಂದ ಮುಚ್ಚಲ್ಪಟ್ಟಿದ್ದ ಆಯಕಟ್ಟಿನ ನಾಥು ಲಾ ಪಾಸ್ ಮೂಲಕ ಜುಲೈ 6ರಿಂದ ಗಡಿ ವ್ಯಾಪಾರ ಪುನರಾರಂಭಿಸುವ ಐತಿಹಾಸಿಕ ಒಪ್ಪಂದಕ್ಕೆ ಭಾರತ ಮತ್ತು ಚೀನಾ ಬೀಜಿಂಗಿನಲ್ಲಿ ಸಮ್ಮತಿಸಿದವು.

1997: ಕಾರ್ಗೊ ಹಡಗು ಮುಂಬೈ ಬಳಿ ಸಮುದ್ರದಲ್ಲಿ ಮುಳುಗಿ ನಾಲ್ವರು ಮೃತರಾಗಿ 20 ಜನ ಕಣ್ಮರೆಯಾದರು.

1995: ಭಾರತ ಮತ್ತು ಅಮೆರಿಕ ವ್ಯಾಪಾರ ವ್ಯವಹಾರ ಒಪ್ಪಂದಕ್ಕೆ ಸಹಿ ಹಾಕಿದವು.

1981: ಭಾರತದ ಸಂಪರ್ಕ ಉಪಗ್ರಹ `ಆ್ಯಪಲ್' ನ್ನು ಹೊತ್ತ ಯುರೋಪಿನ ಏರಿಯನ್ ರಾಕೆಟನ್ನು ಫ್ರೆಂಚ್ ಗಯಾನಾದ ಅಂತರಿಕ್ಷ ನೆಲೆ ಕೊವುರೋನಿಂದ ಯಶಸ್ವಿಯಾಗಿ ಹಾರಿಸಲಾಯಿತು.

1978: ಲಾರ್ಡ್ಸ್ ಮೈದಾನದಲ್ಲಿ ಪಾಕಿಸ್ಥಾನದ ವಿರುದ್ಧ ನಡೆದ ಪಂದ್ಯದಲ್ಲಿ ಒಂದೇ ಟೆಸ್ಟಿನಲ್ಲಿ ಸೆಂಚುರಿ (108 ರನ್) ಬಾರಿಸುವುದರ ಜೊತೆಗೆ 8 ವಿಕೆಟ್ಗಳನ್ನು ಬೀಳಿಸಿದ (8-34) ಮೊತ್ತ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಇಂಗ್ಲೆಂಡಿನ ಇಯಾನ್ ಬಾಥಮ್ ಪಾತ್ರರಾದರು.

1974: ಕಲಾವಿದ ರೂಪ ಡಿ. ಬಿಜೂರ್ ಜನನ.

 1966: ಶಿವಸೇನೆ ಸ್ಥಾಪನೆ.

1956: ಕಲಾವಿದ ಎಲ್. ಬಸವರಾಜ್ ಜಾನೆ ಜನನ.

1953: ಗೂಢಚರ್ಯೆಗಾಗಿ ಅಮೆರಿಕದ ಇಬ್ಬರು ನಾಗರಿಕರಾದ ಜ್ಯೂಲಿಯಸ್ ಮತ್ತು ಈಥೆಲ್ ರೋಸೆನ್ ಬರ್ಗ್ ಅವರನ್ನು ಸಿಂಗ್ ಸಿಂಗ್ ಸೆರೆಮನೆಯಲ್ಲಿ ಮರಣದಂಡನೆಗೆ ಗುರಿಪಡಿಸಲಾಯಿತು. ಅಮೆರಿಕದಲ್ಲಿ ಗೂಢಚರ್ಯೆಗಾಗಿ ಮರಣದಂಡನೆಗೆ ಗುರಿಯಾದ ಮೊದಲ ಅಮೆರಿಕನ್ ಪ್ರಜೆಗಳು ಇವರು. ತಮ್ಮ ಕೈಗೆ ಬಂದಿದ್ದ ಸೋವಿಯತ್ ಸೇನಾ ರಹಸ್ಯಗಳನ್ನು ಸೋವಿಯತ್ ಒಕ್ಕೂಟಕ್ಕೆ ಹಿಂದಿರುಗಿಸಲು ಯತ್ನಿಸಿದರೆಂಬ ಆಪಾದನೆ ಅವರ ಮೇಲಿತ್ತು.

1953: ಕಲಾವಿದ ಅಶೋಕ ಅಕ್ಕಿ ಟಿ. ಜನನ.

1947: ಸಲ್ಮಾನ್ ರಷ್ದಿ ಜನ್ಮದಿನ. ಆಂಗ್ಲೋ ಇಂಡಿಯನ್ ಕಥೆಗಾರರಾದ ಇವರು ಇಸ್ಲಾಂಗೆ ಸಂಬಂಧಿಸಿದಂತೆ ಬರೆದ `ಸಟಾನಿಕ್ ವರ್ಸಸ್' ಕಥೆ 1989ರಲ್ಲಿ ಇರಾನಿನ ಮುಸ್ಲಿಮರ ಕೋಪಕ್ಕೆ ತುತ್ತಾಯಿತು. ಅವರು ರಷ್ದಿಗೆ `ಮರಣದಂಡನೆ' ವಿಧಿಸಿರುವುದಾಗಿ ಘೋಷಿಸಿದರು. ಇವರ `ಮಿಡ್ನೈಟ್  ಚಿಲ್ಡ್ರನ್ಸ್' ಕೃತಿಗೆ ಬೂಕರ್ ಪ್ರಶಸ್ತಿ ಲಭಿಸಿದೆ.

1940: ಸಂಗೀತಗಾರನ ಮನೆತನದಲ್ಲಿ ಬೆಳೆದ ಖ್ಯಾತ ಸಂಗೀತಗಾರ ಡಿ.ಎನ್. ಗುರುದತ್ ಅವರು ಡಿ.ಕೆ. ನಾಗಣ್ಣ- ಅಶ್ವತ್ಥ ಲಕ್ಷ್ಮಮ್ಮ ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು.

1931: ರಾಜಕಾರಣಿ ನಂದಿನಿ ಸತ್ಪತಿ ಜನನ.

1901: ಖ್ಯಾತ ಗಣಿತ ಶಾಸ್ತ್ರಜ್ಞ ರಾಜ್ ಚಂದ್ರ ಬೋಸ್ ಜನನ.

1867: ಮೆಕ್ಸಿಕೊದ ದೊರೆ ಮ್ಯಾಕ್ಸಿಮಿಲಿಯನ್ ನ್ನು ಬೆನಿಟೋ ಜುವಾರೆಜ್ ನ ಪಡೆಗಳು ಗುಂಡಿಟ್ಟು ಕೊಂದವು. ಆತನ ಪುಟ್ಟ ಸೇನೆ 1867ರ ಮೇ 15ರಂದು ಸೋತ ಬಳಿಕ ಈ ಘಟನೆ ನಡೆಯಿತು. ವಿಕ್ಟರ್ ಹ್ಯೂಗೊ, ಜಿಸೆಪ್ ಗ್ಯಾರಿಬಾಲ್ಡಿ ಮತ್ತು ಯುರೋಪಿನ ಹಲವಾರು ದೊರೆಗಳು ಮ್ಯಾಕ್ಸಿಮಿಲಿಯನ್ ನ್ನು ಕ್ಷಮಿಸುವಂತೆ ಮನವಿ ಮಾಡಿದರೂ ಆತನ ಮರಣದಂಡನೆಗೆ ಆದೇಶ ನೀಡಿದ ಜುವಾರೆಜ್ ಮೇಲೆ ಅವು ಯಾವ ಪರಿಣಾಮವನ್ನೂ ಬೀರಲಿಲ್ಲ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement