My Blog List

Sunday, November 28, 2010

ಬೀದಿಗಿಳಿದ ಅರಣ್ಯ ವಿದ್ಯಾರ್ಥಿಗಳು..! ಧುರೀಣರೇ ಕಣ್ತೆರೆಯುತ್ತೀರಾ...?

ಬೀದಿಗಿಳಿದ ಅರಣ್ಯ ವಿದ್ಯಾರ್ಥಿಗಳು..!

ಧುರೀಣರೇ ಕಣ್ತೆರೆಯುತ್ತೀರಾ...?



ಕಡೆಗೂ ರಸ್ತೆಗಿಳಿಯುವುದು ಅವರಿಗೆ ಅನಿವಾರ್ಯವಾಯಿತು. ಮುಷ್ಕರ ಆರಂಭಿಸಿದ 63ನೇ ದಿನ, 27 ನವೆಂಬರ್ 2010ರ ಶನಿವಾರ ಶಿರಸಿ ಹಳೆ ಬಸ್ ನಿಲ್ದಾಣ ವೃತ್ತಕ್ಕೆ ಬಂದ ಅವರು ರಸ್ತೆಯ ಮಧ್ಯದಲ್ಲೇ ಕುಳಿತು ಪ್ರತಿಭಟಿಸಿದರು. ಭ್ಯಾನರ್, ಫಲಕಗಳನ್ನು ಪ್ರದರ್ಶಿಸಿದರು. ನ್ಯಾಯಕೊಡಿ ಎಂದು ಮೊರೆ ಇಟ್ಟರು. ಕಡೆಗೂ ಅಲ್ಲಿಂದ ತೆರವುಗೊಳಿಸಲು ಪೊಲೀಸರು ಅವರನ್ನು ಬಂಧಿಸಿ ಕರೆದೊಯ್ಯಬೇಕಾಯಿತು.

ಶಾಂತಿಯುತವಾಗಿ ತಮ್ಮ ಸ್ವಭೂತ ದಹನ, ಮುಖ್ಯಮಂತ್ರಿ, ಮಂತ್ರಿಗಳಿಗೆ ಸ್ವಂತ ನೆತ್ತರ ಪತ್ರ ಬರೆಯುವುದರ ಜೊತೆಗೆ ತಮ್ಮ ತಮ್ಮ ಕಾಲೇಜುಗಳ ಆವರಣದ ಸಮೀಪ ಕುಳಿತು ದಿನಗಟ್ಟಲೆ ನಡೆಸಿದ ಧರಣಿ ಸರ್ಕಾರದ, ಮಂತ್ರಿಗಳ ಕಣ್ಣು ತೆರೆಸಲಿಲ್ಲ.


ದೂರದ ವಿಧಾನಸೌಧದಲ್ಲಿ ತಮ್ಮ ಕುರ್ಚಿಗಳ ಭದ್ರತೆಯನ್ನೇ ಚಿಂತಿಸುತ್ತಾ ಕಾಲ ಕಳೆಯುತ್ತಿದ್ದ ಆಳುವ ಪಕ್ಷದ ಮಂತ್ರಿ- ಶಾಸಕರಿಗಾಗಲೀ, ಸರ್ಕಾರವನ್ನು ಬೀಳಿಸುವುದೊಂದೇ ತಮ್ಮ ಪರಮ ಕರ್ತವ್ಯ ಎಂದು ಭಾವಿಸಿಕೊಂಡು ಅದಕ್ಕಾಗಿಯೇ ಹಗಲಿರುಳು 'ಕಾರಸ್ತಾನ' ಹೆಣೆಯುತ್ತಾ ಶಾಸಕರನ್ನು ರೆಸಾರ್ಟುಗಳಿಗೆ ಒಯ್ಯುತ್ತಾ ಕಾಲ ಕಳೆದ ವಿರೋಧ ಪಕ್ಷಗಳ ಧುರೀಣರಿಗಾಗಲೇ ರಾಜಧಾನಿಗೆ ದೂರದಲ್ಲಿರುವ ಶಿರಸಿ, ಪೊನ್ನಂಪೇಟೆ ಎಂಬ ಪುಟ್ಟ ಪೇಟೆಗಳಲ್ಲಿ 60ಕ್ಕೂ ಹೆಚ್ಚು ದಿನಗಳಿಂದ ತಾವು ಕಲಿತ ವಿದ್ಯೆಗೆ ಮನ್ನಣೆ ಕೊಡಿ ಎಂಬುದಾಗಿ ಈ ಮಕ್ಕಳು ಇಟ್ಟ ಮೊರೆ ಕೇಳಿಸಲಿಲ್ಲ.


ವಲಯ ಅರಣ್ಯ ಅಧಿಕಾರಿ (ಆರ್ ಎಫ್ ಓ) ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಹುದ್ದೆಗಳಿಗೆ ಅರಣ್ಯಶಾಸ್ತ್ರ ಪದವಿಯಾದ ಬಿಎಸ್ಸಿ (ಫಾರೆಸ್ಟ್ರಿ) ಇದನ್ನು ಕನಿಷ್ಠ ವಿದ್ಯಾರ್ಹತೆಯನ್ನಾಗಿ ಮಾಡಬೇಕು ಎಂಬುದಷ್ಟೇ ಈ ವಿದ್ಯಾರ್ಥಿಗಳ ಬೇಡಿಕೆ.

ಇದನ್ನು ಈಡೇರಿಸುವಂತೆ ಆಗ್ರಹಿಸಿ 63 ದಿನಗಳಿಂದ ಧರಣಿ ನಡೆಸುತ್ತಿದ್ದ ಶಿರಸಿ ಅರಣ್ಯ ಕಾಲೇಜಿನ ವಿದ್ಯಾರ್ಥಿಗಳು 27ರಂದು ಶಿರಸಿ ಹಳೆ ಬಸ್‌ನಿಲ್ದಾಣ ವೃತ್ತದಲ್ಲಿ ರಸ್ತೆ ತಡೆ ನಡೆಸಿದರು. ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆಗೊಳಿಸಿದರು.

ಅರಣ್ಯ ಕಾಲೇಜಿನಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿದ ವಿದ್ಯಾರ್ಥಿಗಳು ಹಳೆ ಬಸ್ ನಿಲ್ದಾಣ ವೃತ್ತದಲ್ಲಿ ಮಾನವ ಸರಪಣಿ ನಿರ್ಮಿಸಿ ಬಸ್ ತಡೆದರು. ಬಸ್ ನಿಲ್ದಾಣದಿಂದ ಹೊರ ಬರುತ್ತಿದ್ದ ಬಸ್ಸಿಗೆ ಮುತ್ತಿಗೆ ಹಾಕಿದರು. ರಸ್ತೆಯ ಮೇಲೆ ಕುಳಿತು ನ್ಯಾಯಕ್ಕೆ ಆಗ್ರಹಿಸಿ ಘೋಷಣೆ ಕೂಗಿದರು. ಎಲ್ಲ ನಾಲ್ಕು ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಮಾಡಿದ ಸುಮಾರು ನೂರಕ್ಕೂ ಹೆಚ್ಚಿನ ವಿದ್ಯಾರ್ಥಿ- ವಿದ್ಯಾರ್ಥಿನಿಯರನ್ನು ಪೊಲೀಸರು ಬಂಧಿಸಿ, ಪ್ರತ್ಯೇಕ ಖಾಸಗಿ ವಾಹನದಲ್ಲಿ ಕರೆದೊಯ್ದರು.


ಅರಣ್ಯ ಇಲಾಖೆಯ ವಲಯ ಅರಣ್ಯ ಅಧಿಕಾರಿ ಮತ್ತು ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಹುದ್ದೆಗಳಿಗೆ ಅರಣ್ಯ ಪದವಿಯನ್ನು ಕನಿಷ್ಠ ವಿದ್ಯಾರ್ಹತೆಯಾಗಿ ನಿಗದಿಪಡಿಸಬೇಕು ಎಂದು ಒತ್ತಾಯಿಸಿ ರಾಜ್ಯದ ಶಿರಸಿ ಮತ್ತು ಪೊನ್ನಂಪೇಟೆ ಎರಡೂ ಅರಣ್ಯ ಕಾಲೇಜಿನ ವಿದ್ಯಾರ್ಥಿಗಳು ಧರಣಿ ನಡೆಸುತ್ತಿದ್ದಾರೆ.

ತೋಟಗಾರಿಕೆ, ಕೃಷಿ, ರೇಷ್ಮೆ ಪದವೀಧರರಿಗೆ ಸಂಬಂಧಿಸಿದ ಇಲಾಖೆಯ ತಾಂತ್ರಿಕ ಹುದ್ದೆಗಳಿಗೆ ತತ್ಸಮ ಪದವಿ ನಿಗದಿಪಡಿಸಿದಂತೆ ಅರಣ್ಯ ಪದವೀಧರರಿಗೂ ಅವಕಾಶ ಕಲ್ಪಿಸಬೇಕು. ಜಾರ್ಖಂಡ್, ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಒರಿಸ್ಸಾ ರಾಜ್ಯಗಳಂತೆ ಕರ್ನಾಟಕದಲ್ಲೂ ಅರಣ್ಯ ಇಲಾಖೆಯ ತಾಂತ್ರಿಕ ಹುದ್ದೆಗಳಿಗೆ ಅರಣ್ಯ ಪದವಿಯನ್ನು ಕನಿಷ್ಠ ಮಾನದಂಡವಾಗಿ ಪರಿಗಣಿಸಬೇಕು ಎಂಬುದು ಈ ವಿದ್ಯಾರ್ಥಿಗಳ ಬಹು ವರ್ಷಗಳ ಬೇಡಿಕೆ.

ವಿದ್ಯಾರ್ಥಿಗಳ ಧರಣಿ ಹಿನ್ನೆಲೆಯಲ್ಲಿ ಅರಣ್ಯ ಸಚಿವ ವಿಜಯಶಂಕರ, ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳು, ಕೃಷಿ ವಿಶ್ವವಿದ್ಯಾಲಯಗಳ ಪ್ರಮುಖರು, ವಿದ್ಯಾರ್ಥಿ ಪ್ರತಿನಿಧಿಗಳ ಸಭೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು. ಸಭೆಯಲ್ಲಿ ವಿದ್ಯಾರ್ಥಿಗಳ ಪರ ನಿರ್ಣಯ ದೊರಕದ ಕಾರಣದ ವಿದ್ಯಾರ್ಥಿಗಳು ಧರಣಿ ಮುಂದುವರಿಸಿದ್ದಾರೆ.


ಆಶ್ವಾಸನೆ ಬೇಡ, ಸರ್ಕಾರ ಆದೇಶ ಹೊರಡಿಸಬೇಕು. ಅಲ್ಲಿಯ ತನಕ ಧರಣಿ ಹಿಂಪಡೆಯುವದಿಲ್ಲ ಎಂದು ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ಶಿವಾನಂದ ಇಂಚಲ ಹೇಳಿದರು. ಅರಣ್ಯ ಕಾಲೇಜಿನ ವಿದ್ಯಾರ್ಥಿಗಳ ಧರಣಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸ್ಥಳೀಯ ಘಟಕ ಬೆಂಬಲ ಸೂಚಿಸಿದೆ.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಷ್ಟ್ರೀಯ ಕಾರ್ಯದರ್ಶಿ ರವಿಕುಮಾರ್ ಅವರೂ ಅರಣ್ಯ ವಿದ್ಯಾರ್ಥಿಗಳನ್ನು ನ್ಯಾಯಯುತ ಬೇಡಿಕೆಯಾಗಿದ್ದು, ಅದನ್ನು ಪರಿಷತ್ ಬೆಂಬಲಿಸುವುದಾಗಿ ಹೇಳಿದ್ದಾರೆ.
ಸಮಿತಿಯ ವರದಿ ವಿದ್ಯಾರ್ಥಿಗಳಿಗೆ ವಿರುದ್ಧವಾಗಿ ಬಂದಲ್ಲಿ ವಿದ್ಯಾರ್ಥಿ ಪರಿಷತ್ ರಾಜ್ಯವ್ಯಾಪಿ ಚಳವಳಿ ನಡೆಸಬೇಕಾಗುತ್ತದೆ ಎಂದೂ ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.


ನೆತ್ರಕೆರೆ ಉದಯಶಂಕರ

(ಫೊಟೋಕೃಪೆ: ಅರಣ್ಯ ಕಾಲೇಜು ವಿದ್ಯಾರ್ಥಿಗಳು ಹಾಗೂ ಪ್ರಜಾವಾಣಿ)

No comments:

Advertisement