My Blog List

Monday, December 2, 2019

ಪಶುವೈದ್ಯೆ ಮೇಲೆ ಅತ್ಯಾಚಾರ: ವಿಚಾರಣೆಗೆ ತ್ವರಿತ ನ್ಯಾಯಾಲಯ

ಪಶುವೈದ್ಯೆ ಮೇಲೆ ಅತ್ಯಾಚಾರ: ವಿಚಾರಣೆಗೆ ತ್ವರಿತ ನ್ಯಾಯಾಲಯ
ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಆದೇಶ
ಹೈದರಾಬಾದ್: ದೇಶದ ಜನರನ್ನೇ ದಿಗ್ಮೂಢಗೊಳಿಸಿ,  ತೀವ್ರ ಜನಾಕ್ರೋಶಕ್ಕೆ ಕಾರಣವಾಗಿರುವ ಪಶುವೈದ್ಯೆಯ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಘಟನೆಯ ಕ್ಷಿಪ್ರ ವಿಚಾರಣೆಗಾಗಿ ತ್ವರಿತ ನ್ಯಾಯಾಲಯವನ್ನು (ಫಾಸ್ಟ್ ಟ್ರ್ಯಾಕ್ ಕೋರ್ಟ್) ರಚಿಸುವಂತೆ ಅಪರಾಧ ಘಟಿಸಿದ ಎರಡುದಿನಗಳ ಬಳಿಕ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ 2019 ಡಿಸೆಂಬರ್ 01ರ ಭಾನುವಾರ ಆಜ್ಞಾಪಿಸಿದರು. ಮೃತ ವೈದ್ಯೆಯ ಕುಟುಂಬಕ್ಕೆ ಸಕಲ ನೆರವಿನ ಭರವಸೆಯನ್ನೂ ಮುಖ್ಯಮಂತ್ರಿ ನೀಡಿದರು.

ಘಟನೆಯ ಬಗ್ಗೆ ತಮ್ಮ ಮೊತ್ತ ಮೊದಲ ಬಹಿರಂಗ ಹೇಳಿಕೆ ನೀಡಿದ ರಾವ್, ’೨೫ರ ಹರೆಯದ ಮಹಿಳೆಯ ಮೇಲೆ ನಾಲ್ವರು ನಡೆಸಿದ  ಅತ್ಯಾಚಾರ ಮತ್ತು ಆಕೆಯ ಕೊಲೆ ಪ್ರಕರಣವುಭಯಾನಕಎಂದು ಹೇಳಿ, ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದರು.

ತ್ವರಿತ ನ್ಯಾಯಾಲಯ ರಚನೆಗೆ ತತ್ ಕ್ಷಣ ಉಪಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಮುಖ್ಯಮಂತ್ರಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಆಜ್ಞಾಪಿಸಿದರು ಎಂದು ಮುಖ್ಯಮಂತ್ರಿ ಕಚೇರಿಯ ಪ್ರಕಟಣೆ ತಿಳಿಸಿತು.

ಪಶುವೈದ್ಯೆಯ ಕುಟುಂಬಕ್ಕೆ ಎಲ್ಲ ನೆರವು ನೀಡಲೂ ಸರ್ಕಾರ ಸಿದ್ಧವಿದೆ ಎಂದೂ ಹೇಳಿಕೆ ತಿಳಿಸಿತು.
ಯುವ ವೈದ್ಯೆಯ ಮೇಲಿನ ಸಾಮೂಹಿಕ ಅತ್ಯಾಚಾರ, ಹತ್ಯೆ ಘಟನೆಗೆ ಸಂಬಂಧಿಸಿದಂತೆ ಈವರೆಗೆ ನಾಲ್ವರು ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ. ಶಾದ್ನಗರ ಪಟ್ಟಣದ ಬಳಿ  2019 ನವೆಂಬರ್ 29ರ ಶುಕ್ರವಾರ ಸಾಮೂಹಕ ಅತ್ಯಾಚಾರಕ್ಕೆ ಗುರಿಯಾಗಿ ಸಾವನ್ನಪಿದ ಮಹಿಳೆಯ ಸುಟ್ಟು ಕರಕಲಾದ ದೇಹ ಪತ್ತೆಯಾಗಿತ್ತು.

ಭೀಕರ ಪ್ರಕರಣದ ಬಗ್ಗೆ ಕ್ಷಿಪ್ರ ತನಿಖೆಯಾಗಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಆರೋಪಿಗಳಿಗೆ ಗರಿಷ್ಠ ಶಿಕ್ಷೆಯಾಗಬೇಕುಎಂದು ಮುಖ್ಯಮಂತ್ರಿ ಚಂದ್ರಶೇಖರ ರಾವ್ ಹೇಳಿದರು.

ರಾಜ್ಯದ ಐಟಿ ಸಚಿವ ಕೆ.ಟಿ. ರಾಮರಾವ್ ಅವರೂ ಹೇಳಿಕೆಯೊಂದನ್ನು ನೀಡಿಅತ್ಯಾಚಾರ ಪ್ರಕರಣಗಳಲ್ಲಿ ಕಾಯ್ದೆಗೆ ಇನ್ನಷ್ಟು ಶಕ್ತಿ ತುಂಬಲು ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಅಪರಾಧ ದಂಡ ಸಂಹಿತೆಗೆ (ಸಿಆರ್ಪಿಸಿ) ತಿದ್ದುಪಡಿ ತರಬೇಕುಎಂದು ಆಗ್ರಹಿಸಿದರು.

ನ್ಯಾಯದ ವಿಳಂಬವು, ನ್ಯಾಯದ ನಿರಾಕರಣೆಯೇ ಸರಿ. ಸ್ವಾಮೀ.. ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಅಪರಾಧ ದಂಡ ಸಂಹಿತೆಗೆ (ಸಿಆರ್ಪಿಸಿ) ತಿದ್ದುಪಡಿ  ತನ್ನಿ ಮತ್ತು ನಮ್ಮ ಮಹಿಳೆಯರು ಮತ್ತು ಮಕ್ಕಳ ವಿರುದ್ಧ ಇಂತಹ ಹೇಯ ಹಿಂಸೆ ಎಸಗುವವರಿಗೆ ಯಾವುದೇ ವಿಳಂಬವಿಲ್ಲದೆ ಮರಣದಂಡನೆ ನೀಡಲು ಸಾಧ್ಯವಾಗುವಂತೆ ಮತ್ತು ಪುನರ್ ಪರಿಶೀಲನೆಯ ಅವಕಾಶ ಇಲ್ಲದಂತೆ ಮಾಡಲು ಕ್ರಮ ಕೈಗೊಳ್ಳಿಎಂದು ಕೆಟಿ ರಾಮರಾವ್ ಸರಣಿ ಟ್ವೀಟ್ಗಳಲ್ಲಿ ಆಗ್ರಹಿಸಿದರು.

ಅಪರಾಧವು ಪೂರ್ವಯೋಜಿತವಾಗಿತ್ತು ಎಂಬುದನ್ನು ಪೊಲೀಸರು ಬಹಿರಂಗ ಪಡಿಸಿದ್ದು, ಕ್ರೂರ ಘಟನೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಅಧಿಕಾರಿಗಳ ಪ್ರಕಾರ, ತೊಂಡುಪಲ್ಲಿ ಟೋಲ್ ಪ್ಲಾಜಾ ಸಮೀಪ ನಿಲ್ಲಿಸಲಾಗಿದ್ದ ಸಾವನ್ನಪ್ಪಿದ ಮಹಿಳೆಯ ವಾಹನದ ಚಕ್ರವನ್ನು ಉದ್ದೇಶಪೂರ್ವಕವಾಗಿಯೇ ಪಂಕ್ಚರ್ ಮಾಡಲಾಗಿತ್ತು. ಮತ್ತು ಆಕೆ  ಅರಿವೇ ಇಲ್ಲದಂತೆ ಅವರ ಬಲೆಗೆ ಬೀಳುವಂತೆ ಮಾಡಲಾಗಿತ್ತು.

ಮಹಿಳೆ ತನ್ನ ಸಹೋದರಿಯನ್ನು ಕರೆಯುವ ಬದಲಿಗೆ ಪೊಲೀಸರನ್ನು ಕರೆಯಬೇಕಾಗಿತ್ತು ಎಂದು ಹೇಳುವ ಮೂಲಕ ಜನರ ತೀವ್ರ ಆಕ್ರೋಶಕ್ಕೆ ತುತಾಗಿದ್ದ ರಾಜ್ಯ ಗೃಹ ಸಚಿವ ಅಲಿ ಅವರು ಕೂಡಾ ಪ್ರಕರಣದ ವಿಚಾರಣೆಯನ್ನು ತ್ವರಿತ ನ್ಯಾಯಾಲಯದಲ್ಲಿ ನಡೆಸಲಾಗುವುದು ಎಂದು ಹೇಳಿದ್ದಾರೆ.

No comments:

Advertisement