ಗ್ರಾಹಕರ ಸುಖ-ದುಃಖ

My Blog List

Friday, February 14, 2020

ಗೆಲ್ಲುವುದೊಂದೇ ಸಮರ್ಥನೆಯಲ್ಲ: ರಾಜಕೀಯ ಪಕ್ಷಗಳಿಗೆ ಸುಪ್ರೀಂ ಕಟ್ಟಪ್ಪಣೆ

ಗೆಲ್ಲುವುದೊಂದೇ ಸಮರ್ಥನೆಯಲ್ಲ:  ರಾಜಕೀಯ ಪಕ್ಷಗಳಿಗೆ ಸುಪ್ರೀಂ ಕಟ್ಟಪ್ಪಣೆ
ಕಳಂಕಿತ ಅಭ್ಯರ್ಥಿಗೆ ಟಿಕೆಟ್ ಏಕೆ? ಕಾರಣ ಪ್ರಕಟಿಸಲು ಆದೇಶ
ನವದೆಹಲಿ: ತನ್ನ ಸಾಂವಿಧಾನಿಕ ವಿಶೇಷ ಅಧಿಕಾರಗಳನ್ನು ಚಲಾಯಿಸಿದ ಸುಪ್ರೀಂಕೋರ್ಟ್ ಕ್ರಿಮಿನಲ್ ಹಿನೆಲ್ನೆಗಳಿರುವ ಕಳಂಕಿತರಿಗೆ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಲು ಕಾರಣಗಳು ಏನು ಎಂಬುದನ್ನು ಪಟ್ಟಿ ಮಾಡಿ ಪ್ರಕಟಿಸುವುದನ್ನು 2020 ಫೆಬ್ರುವರಿ 13ರ ಗುರುವಾರ ಎಲ್ಲ ರಾಜಕೀಯ ಪಕ್ಷಗಳಿಗೆ ಕಡ್ಡಾಯಗೊಳಿಸಿತು.

ತನ್ನ ಲೋಕಸಭೆ ಮತ್ತು ವಿಧಾನಸಭಾ ಚುನಾವಣಾ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ ೪೮ ಗಂಟೆಗಳ ಒಳಗಾಗಿ ಅವರ ಕ್ರಿಮಿನಲ್ ಇತಿಹಾಸವನ್ನು ಮತ್ತು ಅವರಿಗೆ ಟಿಕೆಟ್ ನೀಡಲು ಕಾರಣಗಳೇನು ಎಂಬ ಪಟ್ಟಿಯನ್ನು ಸ್ಥಳೀಯ ಮತ್ತು ರಾಷ್ಟ್ರೀಯ ಪತ್ರಿಕೆಗಳಲ್ಲಿ ಹಾಗೂ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಬೇಕು ಎಂದು ಎಲ್ಲ ರಾಜಕೀಯ ಪಕ್ಷಗಳಿಗೆ ನ್ಯಾಯಮೂರ್ತಿ ರೊಹಿಂಟನ್ ಎಫ್. ನಾರಿಮನ್ ನೇತೃತ್ವದ ಪೀಠವು ಆಜ್ಞಾಪಿಸಿತು.

ಜೊತೆಗೇ ರಾಜಕೀಯ ಪಕ್ಷಗಳು ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸಿದ ಬಗೆಗಿನ ವರದಿಯನ್ನು ಭಾರತದ ಚುನಾವಣಾ ಆಯೋಗಕ್ಕೆ (ಇಸಿಐ) ಸಲ್ಲಿಸಬೇಕು ಇಲ್ಲವೇ ನ್ಯಾಯಾಲಯ ನಿಂದನೆ ಕ್ರಮವನ್ನು ಎದುರಿಸಬೇಕು ಎಂದೂ ಪೀಠವು ಆದೇಶ ನೀಡಿತು.
ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಂತಹ ಹೀನ ಅಪರಾಧಗಳ ಆಪಾದನೆ ಹೊತ್ತವರಿಗೂ ರಾಜಕೀಯ ಕ್ಷೇತ್ರದಲ್ಲಿ ಸ್ಥಾನ ಕಲ್ಪಿಸುವ ಪ್ರವೃತ್ತಿ ರಾಜಕೀಯ ಪಕ್ಷಗಳಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟಿನ ತೀರ್ಪು ಅತ್ಯಂತ ಮಹತ್ವ ಪಡೆದಿದೆ. ರಾಜಕೀಯ ಪಕ್ಷಗಳು ಕ್ರಿಮಿನಲ್ ಹಿನ್ನೆಲೆ ಹೊಂದಿದವರಿಗೆ ಚುನಾವಣೆಗಳಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಬಾರದು ಎಂಬುದಾಗಿ ಭಾರತದ ಚುನಾವಣಾ ಆಯೋಗವು ನೀಡಿದ ಸಲಹೆಯನ್ನು ಅನುಸರಿಸಿ ಸುಪ್ರೀಂಕೋರ್ಟ್ ಆದೇಶವನ್ನು ನೀಡಿತು..

ಸಂಸತ್ತಿನ ಶೇಕಡಾ ೪೬ರಷ್ಟು ಸದಸ್ಯರು ಕ್ರಿಮಿನಲ್ ದಾಖಲೆಗಳನ್ನು ಹೊಂದಿದ್ದಾರೆ ಎಂದು ಭಾರತದ ಚುನಾವಣಾ ಆಯೋಗವು ನ್ಯಾಯಾಲಯಕ್ಕೆ ತಿಳಿಸಿತ್ತು. ರಾಜಕೀಯವನ್ನು ಅಪರಾಧೀಕರಣಗೊಳಿಸುವುದರ ವಿರುದ್ಧ ಸುಪ್ರೀಂಕೋರ್ಟ್ ಹಿಂದೆ ನೀಡಿದ್ದ ತೀರ್ಪುಗಳು ರಾಜಕೀಯ ಪಕ್ಷಗಳನ್ನು ತಟ್ಟಿರಲಿಲ್ಲ.

ಪೀಠದ ಪರವಾಗಿ ತೀರ್ಪನ್ನು ಓದಿ ಹೇಳಿದ ನ್ಯಾಯಮೂರ್ತಿ ನಾರಿಮನ್ ಅವರು ರಾಜಕೀಯವನ್ನು ಕ್ರಿಮಿನಲ್ ಜಗತ್ತಿನಿಂದ ದೂರ ತರುವ ಕ್ರಮವು ಖಂಡಿತವಾಗಿ ರಾಷ್ಟ್ರೀಯ ಮತ್ತು ಸಾರ್ವಜನಿಕ ಹಿತಕ್ಕೆ ಅನುಕೂಲಕರವಾಗಲಿದೆ ಎಂದು ಹೇಳಿದರು.

ಕ್ರಿಮಿನಲ್ ಅಪರಾಧಗಳಲ್ಲಿ ಶಾಮೀಲಾದ ಅಭ್ಯರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ರೊಹಿಂಟನ್ ನಾರಿಮನ್ ನೇತೃತ್ವದ ಪೀಠವು,  ನಾಗರಿಕರ ಹಿತದ ಸಲುವಾಗಿ ಸುಪ್ರೀಂಕೋರ್ಟ್ ತನ್ನ ವಿಶೇಷಾಧಿಕಾರ ಬಳಸುವುದಕ್ಕೆ ಸೂಕ್ತವಾದ ಕಾಲ ಇದಾಗಿದೆ ಎಂದು ಹೇಳಿತು.

ಪೀಠದ ಮುಂದೆ ಸಲ್ಲಿಸಲಾಗಿರುವ ವಿವಿಧ ನ್ಯಾಯಾಂಗ ನಿಂದನೆ ಪ್ರಕರಣಗಳಲ್ಲಿ ಹುರುಳಿರುವುದನ್ನು ಗಮನಿಸಿದ ಪೀಠ, ರಾಜಕೀಯದಲ್ಲಿನ ಕ್ರಿಮಿನಲ್ಗಳ ಅಸ್ತಿತ್ವದ ವಿಚಾರವು ಗಂಭೀರ ವಿಷಯವಾಗಿದ್ದು, ನ್ಯಾಯಾಲಯ ಗಮನ ಹರಿಸಲೇಬೇಕಾದ ಸ್ಥಿತಿ ಬಂದಿದೆ. ಆದ್ದರಿಂದ ಇನ್ನುಮುಂದೆ ಎಲ್ಲ ರಾಜಕೀಯ ಪಕ್ಷಗಳೂ ತಮ್ಮ ವೆಬ್ಸೈಟ್ಗಳಲ್ಲಿ ಎಲ್ಲ ಅಭ್ಯರ್ಥಿಗಳ ವಿವರಗಳನ್ನು ಕ್ರಿಮಿನಲ್ ಹಿನ್ನೆಲೆ ಸಹಿತವಾಗಿ ಕಡ್ಡಾಯವಾಗಿ ಪ್ರಕಟಿಸಲೇಬೇಕು ಎಂದು ನಿರ್ದೇಶನ ನೀಡಿತು.

ನ್ಯಾಯಾಲಯಗಳು ಅಭ್ಯರ್ಥಿಗಳ ವಿರುದ್ಧ ದೋಷಾರೋಪ ಹೊರಿಸಿದ ಪ್ರಕರಣಗಳನ್ನು ನಿರ್ದಿಷ್ಟವಾಗಿ ಗುರುತಿಸಬೇಕು, ವಿವರಗಳನ್ನು ಕೂಡಾ ಅವರ ಶೈಕ್ಷಣಿಕ ಅರ್ಹತೆ ಮತ್ತು ಇತರ ಹಿನ್ನೆಲೆ ಮಾಹಿತಿಗಳ ಜೊತೆಗೆ ಸೇರಿಸಬೇಕು ಎಂದಟ್ಪೀಠ ಹೇಳಿತು.

ಇನ್ನೂ ಒಂದು ಹೆಜ್ಜೆ ಮುಂದಿಟ್ಟ ಸುಪ್ರೀಂಕೋರ್ಟ್ ಪೀಠವು, ಇಂತಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು ಏಕೆ ಮತ್ತು ಕ್ರಿಮಿನಲ್ ಹಿನ್ನೆಲೆಗಳು ಇಲ್ಲದ ವ್ಯಕ್ತಿಗಳನ್ನು ಏಕೆ ಆಯ್ಕೆ ಮಾಡಲಾಗಿಲ್ಲ ಎಂಬ ಕಾರಣಗಳನ್ನು ಕೂಡಾ ಪಟ್ಟಿ ಮಾಡಿ ಮೇಲೆ ತಿಳಿಸಿದ ವಿವರಗಳ ಜೊತೆಗೆ ಪ್ರಕಟಿಸಬೇಕು ಎಂದೂ ಹೇಳಿತು.

ಪಕ್ಷಗಳು ಅಭ್ಯರ್ಥಿಗಳ ಗೆಲ್ಲುವ ಸಾಮರ್ಥ್ಯವನ್ನು ಮಾತ್ರವೇ ಆವರ ಆಯ್ಕೆಗೆ ಸಮರ್ಥನೆಯಾಗಿ ನೀಡುವಂತಿಲ್ಲ ಎಂದು ಸ್ಪಷ್ಟ ಪಡಿಸಿದ ಪೀಠ, ವಿವರಗಳನ್ನು ರಾಜಕೀಯ ಪಕ್ಷಗಳು ಬಳಸುವ ಸಾಮಾಜಿಕ ಮಾಧ್ಯಮಗಳಲ್ಲೂ ಬಿಡುಗಡೆ ಮಾಡಬೇಕು ಎಂದು ಸೂಚಿಸಿತು.

ಇಂತಹ ಎಲ್ಲ ಮಾಹಿತಿಗಳನ್ನು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ ೪೮ ಗಂಟೆಗಳ ಒಳಗಾಗಿ ಅಥವಾ ನಾಮಪತ್ರ ಸಲ್ಲಿಕೆಗೆ ಮುನ್ನ ಸಮಂಜಸವಾದ ಸಮಯದಲ್ಲಿ ಬಹಿರಂಗಪಡಿಸಬೇಕು. ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ ೭೨ ಗಂಟೆಗಳ ಒಳಗಾಗಿ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಇಂತಹ ವಿವರಗಳನ್ನು ಚುನಾವಣಾ ಆಯೋಗಕ್ಕೂ ಸಲ್ಲಿಸಬೇಕು ಎಂದು ಪೀಠ ಹೇಳಿತು.

ನಿರ್ದೇಶನಗಳು ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಿಗೆ ಅನ್ವಯವಾಗುತ್ತದೆ ಎಂದು ಪೀಠ ಹೇಳಿತು. ಆದೇಶ ಪಾಲನೆಯಲ್ಲಿನ ಯಾವುದೇ ವೈಫಲ್ಯವು ನ್ಯಾಯಾಲಯ ನಿಂದನೆ ಕ್ರಮಕ್ಕೆ ಗುರಿಯಾಗುತ್ತದೆ ಮತ್ತು ಆದೇಶ ಪಾಲನೆ ಮಾಡದ ಬಗ್ಗೆ ಚುನಾವಣಾ ಆಯೋಗವು ನ್ಯಾಯಾಲಯವನ್ನು ಸಂಪರ್ಕಿಸಬೇಕು ಎಂದೂ ಪೀಠ ಸ್ಪಷ್ಟ ಪಡಿಸಿತು.

ನ್ಯಾಯಾಂಗ ನಿಂದನೆ ಅರ್ಜಿ: ಬಿಜೆಪಿ ಸದಸ್ಯರು ಮತ್ತು ವಕೀಲರಾದ ಆಶ್ವಿನಿ ಉಪಾಧ್ಯಾಯ ಸೇರಿದಂತೆ ಹಲವರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಗಳ ವಿಚಾರಣೆ ಬಳಿಕ ಪೀಠವು ಕಟು ತೀರ್ಪು ನೀಡಿದೆ.

ಸುಪ್ರೀಂಕೋರ್ಟಿನ ಸಾಂವಿಧಾನಿಕ ಪೀಠವು ೨೦೧೮ರ ಸೆಪ್ಟೆಂಬರ್ನಲಿ ನೀಡಿದ ತೀರ್ಪನ್ನು ಅಧಿಕಾರಿಗಳು ಮತ್ತು ಪಕ್ಷಗಳು ಪೂರ್ತಿಯಾಗಿ ಪಾಲಿಸದೇ ಇರುವ ಬಗ್ಗೆ ಗಮನ ಸೆಳೆದು ನ್ಯಾಯಾಂಗ ನಿಂದನೆ ಅರ್ಜಿಗಳನ್ನು ಸಲ್ಲಿಸಲಾಗಿತ್ತು.

ಪಕ್ಷಗಳು ತಮ್ಮ ಚುನಾವಣಾ ಅಭ್ಯರ್ಥಿಗಳ ವಿರುದ್ಧ ಇರುವ ಇತ್ಯರ್ಥವಾಗದ ಕ್ರಿಮಿನಲ್ ಪ್ರಕರಣಗಳನ್ನು ಅಂತರ್ಜಾಲದಲ್ಲಿ (ಆನ್ಲೈನ್) ಪ್ರಕಟಿಸುವಂತೆ ಮಾಡಿದ್ದ ನಿರ್ದೇಶನವನ್ನು ಪಕ್ಷಗಳು ಮತ್ತು ಅಧಿಕಾರಿಗಳು ಪಾಲಿಸಿಲ್ಲ ಎಂದು ಉಪಾಧ್ಯಾಯ ಮತ್ತಿತರರು ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.

ಗಂಭೀರ ಅಪರಾಧಗಳನ್ನು ಎದುರಿಸುತ್ತಿರುವ ನಾಯಕರನ್ನು ನಿವಾರಿಸಿ ಸಂಸತ್ತನ್ನು ಸ್ವಚ್ಛಗೊಳಿಸಲುಪ್ರಬಲ ಕಾನೂನುಜಾರಿಗೊಳಿಸುವಂತೆ ಸಂಸತ್ತನ್ನು ೨೦೧೮ರ ಸುಪ್ರೀಂಕೋರ್ಟ್ ತೀರ್ಪು ಆಗ್ರಹಿಸಿತ್ತು. ಎರಡು ವರ್ಷಗಳ ಹಿಂದೆ ಆಗಿನ ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ಪಂಚ ಸದಸ್ಯ ಸುಪ್ರೀಂಕೋರ್ಟ್ ಪೀಠವು ಕಳಂಕಿತ ಶಾಸಕರನ್ನು ಕೇವಲ ಅನರ್ಹಗೊಳಿಸುವ ಕ್ರಮದಿಂದ ರಾಜಕೀಯದ ತ್ವರಿತ ಅಪರಾಧೀಕರಣವನ್ನು ನಿಲ್ಲಿಸಲು ಸಾಧ್ಯವಿಲ್ಲ, ಬದಲಿಗೆ ರಾಜಕೀಯು ಪಕ್ಷಗಳನ್ನು ಸ್ವಚ್ಛಗೊಳಿಸುವ ಮೂಲಕವೇ ಇದು ಆರಂಭವಾಗಬೇಕು ಎಂದು ಹೇಳಿತ್ತು.

ಅಭ್ಯರ್ಥಿ ಮತ್ತು ಪಕ್ಷವು ತನ್ನ ಕ್ರಿಮಿನಲ್ ಹಿನ್ನೆಲೆಗಳನ್ನು ವ್ಯಾಪಕ ಪ್ರಸಾರವುಳ್ಳ ಪತ್ರಿಕಗಳಲ್ಲಿ ಘೋಷಿಸಬೇಕು ಎಂದು ಪೀಠವು ಆಗ ಕೂಡಾ ಮಾರ್ಗದರ್ಶಿ ಸೂತ್ರಗಳಲ್ಲಿ ತಿಳಿಸಿತ್ತು.

No comments:

Advertisement