My Blog List

Wednesday, May 27, 2020

ನೇಪಾಳ: ವಿವಾದಿತ ಭೂಪಟಕ್ಕಾಗಿ ಸಂವಿಧಾನ ತಿದ್ದುಪಡಿಗೆ ತಡೆ

ನೇಪಾಳ: ವಿವಾದಿತ ಭೂಪಟಕ್ಕಾಗಿ ಸಂವಿಧಾನ ತಿದ್ದುಪಡಿಗೆ ತಡೆ
ನವದೆಹಲಿ: ನೇಪಾಳದ ಭೌಗೋಳಿಕ ನಕ್ಷೆಯ ವಿವಾದಾಸ್ಪದ ಬದಲಾವಣೆ ಸಲುವಾಗಿ ತರಲು ಉದ್ದೇಶಿಸಲಾದ ಸಂವಿಧಾನ ತಿದ್ದುಪಡಿಯನ್ನು ತಡೆ ಹಿಡಿಯಲಾಗಿದೆ ಎಂದು ನಂಬಲರ್ಹ ಮೂಲಗಳು  2020 ಮೇ 27ರ ಬುಧವಾರ ವರದಿ ಮಾಡಿದವು.
ನಕ್ಷೆಯನ್ನು ಬದಲಾಯಿಸುವ ಸಲುವಾಗಿ ಪ್ರಧಾನಿ ಕೆ.ಪಿ.ಶರ್ಮ ಒಲಿ ಅವರು ಮುಂದಿಟ್ಟಿರುವ ಸಾಂವಿಧಾನಿಕ ತಿದ್ದುಪಡಿಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ತಡೆ ತಡೆಹಿಡಿಯಲಾಗಿದೆ ಮೂಲಗಳು ಹೇಳಿದವು.
ನೇಪಾಳವು ಹೊರತಂದಿರುವ ಹೊಸ ಭೌಗೋಳಿಕ ನಕ್ಷೆಯು ಭಾರತದ ಉತ್ತರಾಖಂಡಕ್ಕೆ ಸೇರಿದ ಭೂಪ್ರದೇಶಗಳಾದ ಕಾಲಾಪಾನಿ, ಲಿಂಪಿಯಧುರಾ ಮತ್ತು ಲಿಪುಲೇಖ ಪ್ರದೇಶ ನೇಪಾಳದ ಭೌಗೋಳಿಕ ವ್ಯಾಪ್ತಿಯಲ್ಲಿ ಇರುವಂತೆ ತೋರಿಸಿತ್ತು.

ಭಾರತದ ವಿರುದ್ಧ ಉಗ್ರ ರಾಷ್ಟ್ರೀಯವಾದ ಭಾವನೆಗಳನ್ನು ಹುಟ್ಟುಹಾಕುವ ಮೂಲಕ ನೇಪಾಳೀ ಕಮ್ಯುನಿಸ್ಟ್ ಪಕ್ಷದ ಸರ್ಕಾರದಲ್ಲಿ ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳುವ ಹಂಚಿಕೆಯಾಗಿ ಪ್ರಧಾನ ಮಂತ್ರಿ ಒಲಿ ಪ್ರಯತ್ನ ನಡೆಸಿದ್ದಾರೆ ಎಂದು ರಾಜಕೀಯ ವಲಯಗಳಲ್ಲಿ ವಿಶ್ಲೇಷಿಸಲಾಗಿತ್ತು.

ಆದರೆ ನೇಪಾಳದ ರಾಜಕೀಯ ಪಕ್ಷಗಳಲ್ಲಿ ಹೊಸ ನಕ್ಷೆಯ ಬಗ್ಗೆ ಒಮ್ಮತವನ್ನು ನಿರ್ಮಿಸಲು ಒಲಿ ಅವರಿಗೆ ಸಾಧ್ಯವಾಗಲಿಲ್ಲ ಎಂದು ಹೇಳಲಾಗಿದೆ. ಒಲಿ ಅವರು ವೈಯಕ್ತಿಕ ಲಾಭಕ್ಕಾಗಿ ಗೂರ್ಖಾ ರಾಷ್ಟ್ರೀಯತೆಯನ್ನು ಬಡಿದೆಬ್ಬಿಸುವ ಪ್ರಯತ್ನಕ್ಕೆ ಒಲಿ ಕೈಹಾಕಿದ್ದಾರೆ ಎಂದು ಅನೇಕರು ಭಾವಿಸಿದ್ದಾರೆ ಎಂದು ನವದೆಹಲಿ ಮತ್ತು ಕಠ್ಮಂಡುವಿನ ಮೂಲಗಳು ತಿಳಿಸಿದವು.
ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದೊಳಗೆ ಸಮಸ್ಯೆಗಳನ್ನು ಎದುರಿಸುತ್ತಿರುವ ಪ್ರಧಾನಿ ಒಲಿ, ತಿಂಗಳು ಕಠ್ಮಂಡುವಿನಲ್ಲಿ ಉತ್ತರಾಖಂಡದ ಧಾರ್ಚುಲಾದಿಂದ ಲಿಪುಲೇಖವರೆಗೆ ಭಾರತವು ನಿರ್ಮಿಸಿ ಮುಕ್ತ ಗೊಳಿಸಲಾಗಿರುವ  ೮೦ ಕಿ.ಮೀ ಉದ್ದದ ರಸ್ತೆ ವಿಚಾರದಲ್ಲಿ ನಡೆದಿದ್ದ ಪ್ರತಿಭಟನೆಯ ಲಾಭವನ್ನು ಪಡೆಯಲು ಯತ್ನಿಸಿದ್ದರು ಎಂದು ಹೇಳಲಾಗಿದೆ.

ಪ್ರತಿಭಟನೆಯ ಕೆಲವೇ ವಾರಗಳಲ್ಲಿ ಒಲಿ ಅವರು ಲಿಪುಲೇಖ ಮತ್ತು ಕಾಲಾಪಾನಿ ಪ್ರದೇಶವನ್ನು ನೇಪಾಳದ ಭಾಗವಾಗಿ ತೋರಿಸುವ ಭೌಗೋಳಿಕ ಭೂಪಟವನ್ನು ಬಿಡುಗಡೆ ಮಾಡಿದ್ದರು.

ಸಚಿವ ಸಂಪುಟದ ಅನುಮೋದನೆಯ ಬಳಿಕ ಒಂದೇ ದಿನದಲ್ಲಿ ಪ್ರಕಟವಾದ ವಿವಾದಾತ್ಮಕ ಭೂಪಟವು ನೇಪಾಳದ ಸುದುರ್ಪಶ್ಚಿಮ್ ಪ್ರಾಂತ್ಯದ ಬೈಯಾಸ್ ಗ್ರಾಮೀಣ ಪುರಸಭೆಯ ಭಾಗವಾಗಿ ಲಿಪುಲೇಖ, ಕಾಲಾಪಾನಿ ಮತ್ತು ಲಿಂಪಿಯಾಧುರಾವನ್ನು ತೋರಿಸಿತ್ತು.

ನೇಪಾಳದ ಹೊಸ ಭೌಗೋಳಿಕ ನಕ್ಷೆಗೆ ಭಾರತ ಸರ್ಕಾರ ತನ್ನ ತೀವ್ರ ಪ್ರತಿಭಟನೆಯನ್ನು ವ್ಯಕ್ತಪಡಿಸಿತ್ತು. ಇದು ಯಾವುದೇ ಚಾರಿತ್ರಿಕ ಸತ್ಯ, ಸಾಕ್ಷ್ಯವಿಲ್ಲದ ಏಕಪಕ್ಷೀಯ ನಿಲುವು ಎಂಬುದಾಗಿ ಭಾರತ ಖಂಡಿಸಿತ್ತು.

ವಾಸ್ತವವಾಗಿ ದಾರ್ಚುಲಾದಿಂದ ಲಿಪುಲೇಖ ಕಣಿವೆ ಮಾರ್ಗಕ್ಕೆ sಸಂಪರ್ಕ ಕಲ್ಪಿಸುವ ಹೊಸ ರಸ್ತೆಯನ್ನು ಭಾರತ ಇತ್ತೀಚೆಗೆ ಉದ್ಘಾಟಿಸಿತ್ತು. ಇದನ್ನು ನೇಪಾಳ ವಿರೋಧಿಸಿತ್ತು. ಭಾರತದ ಜೊತೆಗೆ ಎಂದಿಗೂ ಕಾಲುಕೆರೆಯದ ನೇಪಾಳದಿಂದ ಅಚ್ಚರಿಯ ವಿರೋಧ ಬಂದಾಗ ಭಾರತದ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಾನೆ ಅವರು ಇದರ ಹಿಂದೆ ಬೇರೆ ಯಾರದ್ದೋ ಕೈವಾಡ ಇದೆ ಎಂದು ಶಂಕಿಸಿದ್ದರು.

ಭಾರತ ಮತ್ತು ನೇಪಾಳ ಸುಮಾರು ,೮೦೦ ಕಿಮೀ ಗಡಿಯನ್ನು ಹಂಚಿಕೊಂಡಿವೆ. ಕಳೆದ ವರ್ಷ ಭಾರತವು ಜಮ್ಮು ಮತ್ತು ಕಾಶ್ಮೀರವನ್ನು ವಿಭಜಿಸಿ ಅದನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದಾಗ ನೇಪಾಳದ ಜೊತೆ ಗಡಿ ಹಂಚಿಕೊಂಡಿರುವ ಕಾಲಾಪಾನಿ ಮತ್ತು ಲಿಪುಲೇಖ ಪ್ರದೇಶಗಳನ್ನೂ ಸೇರ್ಪಡೆ ಮಾಡಿದ ನಕ್ಷೆಯನ್ನು ಬಿಡುಗಡೆ ಮಾಡಿತ್ತು. ಆದರೆ ತನ್ನ ಗಡಿಯನ್ನು ನೇಪಾಳದ ಜೊತೆಗೆ ಪರಿಷ್ಕರಿಸಿಲ್ಲ ಎಂದು ಆಗ ಭಾರತ ಸ್ಪಷ್ಟ ಪಡಿಸಿತ್ತು.

ಕೈಲಾಸ ಮಾನಸ ಸರೋವರ ಮಾರ್ಗ ಮತ್ತು ಲಿಪುಲೇಖ ಕಣಿವೆಮಾರ್ಗವನ್ನು ಸಂಪರ್ಕಿಸುವ ರಸ್ತೆಯನ್ನು ಭಾರತ ಉದ್ಘಾಟಿಸಿದ ಬಳಿಕ ಭಾರತದ ಜೊತೆಗೆ ನೇಪಾಳ ಕಾಲು ಕೆರೆಯತೊಡಗಿತ್ತು.
ಚಾರಿತ್ರಿಕವಾಗಿ ನೋಡಿದರೆ ಕಾಲಾಪಾನಿಯು ಚೀನಾ, ನೇಪಾಳ ಮತ್ತು ಭಾರತವನ್ನು ಒಳಗೊಂಡಿರುವ ೩೭೨ ಕಿಮೀ ವ್ಯಾಪ್ತಿಯ ಜಂಕ್ಷನ್.

೧೮೧೬ರಲ್ಲಿ ನೇಪಾಳ ಮತ್ತು ಬ್ರಿಟಿಷ್ ಇಂಡಿಯಾ ಮಾಡಿಕೊಂಡಿದ್ದ ಭೌಗೋಳಿಕ ಒಪ್ಪಂದದ ಪ್ರಕಾರ ಕಾಲಾಪಾನಿ ಪ್ರದೇಶದ ಮೂಲಕ ಹರಿಯುವ ಮಹಾಕಾಳಿ ನದಿಯೇ ಉಭಯ ರಾಷ್ಟ್ರಗಳ ನಡುವಣ ಗಡಿ ಎಂದು ಹೇಳಲಾಗಿತ್ತು.

ಅನೇಕ ಉಪನದಿಗಳನ್ನು ಹೊಂದಿರುವ ಮಹಾಕಾಳಿ ನದಿಯ ಉಗಮಸ್ಥಾನವನ್ನು ಹಲವಡೆಗಳಲ್ಲಿ ಬ್ರಿಟಿಷ್ ಸರ್ವೇಯರುಗಳು ಗುರುತಿಸಿದ್ದರು. ಆದರೆ ವಿವಾದಿತ ಪ್ರದೇಶದ ಪಶ್ಚಿಮಕ್ಕೆ ನದಿಯ ಮೂಲ ಇದ್ದು ಅದು ನೇಪಾಳ ವ್ಯಾಪ್ತಿಯಲ್ಲಿ ಇರುವುದರಿಂದ ಕಾಲಾಪಾನಿ ತನ್ನದು ಎಂಬುದಾಗಿ ನೇಪಾಳ ವಾದಿಸಿತ್ತು.

ಭಾಗ ತನ್ನದು ಎಂದು ಸಮರ್ಥಿಸಲು ಭಾರತ ಕೂಡಾ ಹಲವೆಡೆಗಳಲ್ಲಿ ನದಿಯ ಉಗಮಸ್ಥಾನವನ್ನು ಗುರುತಿಸಿದೆ. ಲಿಪುಲೇಖ ಕಣವೆಮಾರ್ಗ ಮತ್ತು ಕಾಲಾಪಾನಿ ಆಯಕಟ್ಟಿನ ಪ್ರದೇಶವಾಗಿದ್ದು ಚೀನಾದ ಸೇನೆಯ ಮೇಲೆ ಕಣ್ಣಿಡಲು ಭಾರತಕ್ಕೆ ಇವು ಅತ್ಯಂತ ಮಹತ್ವದ ತಾಣಗಳಾಗಿವೆ.

೧೯೬೨ರ ಭಾರತ-ಚೀನಾ ಯುದ್ದದ ಬಳಿಕ ಪ್ರದೇಶಗಳನ್ನು ಇಂಡೋ ಟಿಬೆಟಿಯನ್ ಗಡಿ ಪೊಲೀಸ್ ನಿರ್ವಹಿಸುತ್ತಿದೆ.

No comments:

Advertisement