My Blog List

Wednesday, May 27, 2020

ಚೀನೀ ಘರ್ಷಣೆ: ಪ್ರಧಾನಿ ಮೋದಿ ಡೊಕ್ಲಾಮ್ ತಂಡ ಸಕ್ರಿಯ

ಚೀನೀ  ಘರ್ಷಣೆ:  ಪ್ರಧಾನಿ ಮೋದಿ ಡೊಕ್ಲಾಮ್  ತಂಡ ಸಕ್ರಿಯ
ನವದೆಹಲಿ: ದೌಲತ್ ಬೇಗ್ ಓಲ್ಡಿ (ಡಿಬಿಒ) ವಲಯದಲ್ಲಿ ಗಡಿ ಮೂಲಸೌಕರ್ಯ ನಿರ್ಮಿಸುವುದನ್ನು ನಿಲ್ಲಿಸುವಂತೆ ಒತ್ತಡ ಹೇರುವ ಉದ್ದೇಶದಿಂದ ಲಡಾಖ್ ಪೂರ್ವಭಾಗದಲ್ಲಿ ಅಕ್ರಮಣಕಾರಿ ಸಂಜ್ಞೆಗಳನ್ನು  ತೋರಿಸುತ್ತಿರುವ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಗೆ (ಪಿಎಲ್) ಉತ್ತರವಾಗಿ ಭಾರತವು ತನ್ನ ಹೆಚ್ಚುವರಿ ಸೇನಾ ತುಕಡಿಗಳನ್ನು ಪೂರ್ವ ಲಡಾಖ್ ವಿಭಾಗಕ್ಕೆ ರವಾನಿಸಿದೆ.

ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿದ ಉನ್ನತ ಮಟ್ಟದ ಸಮಾಲೋಚನಾ ಸಭೆಯ ಬಳಿಕ ಡೊಕ್ಲಾಮ್ ತಂಡ ಚೀನಾದ ಜೊತೆಗೆ ವ್ಯವಹರಿಸಲು ಇದೀಗ ಸನ್ನದ್ಧವಾಗಿದೆ ಎಂದು ನಂಬಲರ್ಹ ಮೂಲಗಳು 2020 ಮೇ 27ರ ಬುಧವಾರ ತಿಳಿಸಿದವು.

ಎರಡು ಬ್ರಿಗೇಡ್ ಮತ್ತು ಇನ್ನೂ ಹೆಚ್ಚಿನ ತುಕಡಿಗಳನ್ನು ಪಿಎಲ್ ಜಮಾಯಿಸಿರುವುದು, ಅದರ ವರ್ತನೆ ಸ್ಥಳೀಯ ಸೇನಾ ಕಮಾಂಡರುಗಳಿಗೆ ಸೀಮಿತವಾದದ್ದಲ್ಲ, ಇದಕ್ಕೆ ಚೀನಾ ಸರ್ಕಾರದ ಅನುಮೋದನೆ ಇದೆ ಎಂಬುದನ್ನು ಸೂಚಿಸಿದೆ ಎಂದು ರಾಜಕೀಯ ವಲಯ ವಿಶ್ಲೇಷಿಸಿತು.

ಆಸ್ಟ್ರೇಲಿಯಾದಿಂದ ಹಾಂಕಾಂಗ್, ತೈವಾನ್ವರೆಗೆ, ದಕ್ಷಿಣ ಚೀನಾ ಸಮುದ್ರದಿಂದ ಭಾರತದವರೆಗೆ ಮತ್ತು ಅಮೆರಿಕದವರೆಗೆ ಸಾಧ್ಯವಿರುವಲ್ಲೆಲ್ಲ ಎಲ್ಲ ಬೆಲೆ ತೆತ್ತು ತನ್ನ ಪ್ರಾಬಲ್ಯವನ್ನು ಮೆರೆಯಲು ಚೀನಾ ಯತ್ನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆದಿದ್ದ ಪರಿಸ್ಥಿತಿಯ ಪರಿಶೀಲನಾ ಸಭೆಯ ಬಳಿಕ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದರು.

ಮೂರು ವರ್ಷಗಳ ಅವಧಿಯಲ್ಲಿ ಇದೇ ಮಾದರಿಯ ಸನ್ನಿವೇಶದಲ್ಲಿ ಪ್ರಧಾನಿ ಮೋದಿಯವರು ನಡೆಸಿದ ಎರಡನೇ ವ್ಯೂಹಾತ್ಮಕ ಸಭೆ ಇದಾಗಿದ್ದು, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಸಭೆಯಲ್ಲಿ ಪಾಲ್ಗೊಂಡಿದ್ದರು. ೨೦೧೭ರಲ್ಲಿ ೭೩ ದಿನಗಳಷ್ಟು ಕಾಲ ನಡೆದಿದ್ದ ಡೊಕ್ಲಾಮ್ ಬಿಕ್ಕಟ್ಟಿಗೆ ಭಾರತದ ಪ್ರತಿಕ್ರಿಯೆಯನ್ನು ತಂಡವೇ ರೂಪಿಸಿತ್ತು.
೨೦೧೭
gಲ್ಲಿ ಜನರಲ್ ರಾವತ್ ಅವರು ಆಗಿನ ಸೇನಾ ಮುಖ್ಯಸ್ಥರಾಗಿದ್ದರೆ, ಜೈಶಂಕರ್ ಅವರು ಆಗ ಭಾರತದ ವಿದೇಶಂಗ ಕಾರ್ಯದರ್ಶಿಯಾಗಿದ್ದರು.

ಮಂಗಳವಾರದ ಸಭೆಯ ಸಂದೇಶವು ೨೦೧೭ಲ್ಲಿ ಚೀನಾವು ಸೇನೆ ಜಮಾಯಿಸಿ ಅತಿಕ್ರಿಮಿಸಿದ ಸಂದರ್ಭದಲ್ಲಿ ಡೊಕ್ಲಾಮ್ನಲ್ಲಿ ಭಾರತೀಯ ಪಡೆಗಳು ತಮ್ಮ ನೆಲದಲ್ಲೇ ನಿಂತು ಅವುಗಳನ್ನು ತಡೆದ ಸಂದರ್ಭದ ಸಂದೇಶವನ್ನು ಪ್ರತಿಬಿಂಬಿಸಿದೆ. ಸ್ಥಳದಲ್ಲಿ ಶಾಂತಿ ಮತ್ತು ನೆಮ್ಮದಿಯ ಯಾಂತ್ರಿಕ ವ್ಯವಸ್ಥೆಯಲ್ಲಿ ಪರಸ್ಪರ ಗೌರವ ಮತ್ತು ಸಂವಾದದ ಮೂಲಕ ಗಡಿ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಶಮನಗೊಳಿಸಲು ಭಾರತ ಒಲವು ತೋರುತ್ತಿದ್ದರೂ, ಪ್ರಧಾನಿ ಮೋದಿಯವರ ಡೋಕ್ಲಾಮ್ ತಂಡ ಸರ್ವ ಪರಿಸ್ಥಿತಿಗೂ ಸಿದ್ಧವಾಗಿರುವಂತೆ ಸೂಚಿಸಿದೆ.

ಶುದ್ಧ ಸೇನಾ ಭಾಷೆಯ ಪ್ರಕಾರ ಚೀನಾವು ಡಿಬಿಒ ವಿಭಾಗದಲ್ಲಿ ತೋರುತ್ತಿರುವ ವರ್ತನೆಯು ಗಡಿಯಲ್ಲಿ ಮೂಲಸವಲತ್ತು ಹೆಚ್ಚಿಸಿಕೊಳ್ಳುವ ಭಾರತದ ಯೋಜನೆಯನ್ನು ಕಾರ್ಯಗತಗೊಳಿಸದಂತೆ ತಡೆಯುವ ನಿಟ್ಟಿನಲ್ಲಿ ಪಿಎಲ್ ರೂಪಿಸಿದ ಯೋಜನೆಯಾಗಿದೆ ಎಂದು ಮೂಲಗಳು ಹೇಳಿವೆ. ಇಂತಹ ತಡೆ ಹಾಕಲು ಚೀನಾಕ್ಕೆ ಬೇಸಿಗೆ ಕೊನೆಯ ಅವಕಾಶವಾಗಿದೆ.

ಡಾರ್ಬಕ್ -ಶ್ಯೋಕ್- ಡಿಬಿಒ ರಸ್ತೆಯು ವರ್ಷ ಪೂರ್ಣಗೊಳ್ಳಲಿದೆ ಮತ್ತು ಅದು ಪ್ರದೇಶಕ್ಕೆ ತ್ವರಿತವಾಗಿ ಸೇನೆ ನಿಯೋಜಿಸುವ ಭಾರತದ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ರಸ್ತೆ ಯೋಜನೆಯನ್ನು ತಡೆದರೆ, ಭಾರತೀಯ ಸೇನೆಯು ತನ್ನ ಸರಬರಾಜುಗಳಿಗೆ ವೈಮಾನಿಕ ಮಾರ್ಗವನ್ನೇ ಅವಲಂಬಿಸಬೇಕಾಗುತ್ತದೆ ಮತ್ತು ಸನ್ಸೋಮಾ-ಮುರ್ಗೋ-ಡಿಬಿಒ ಮಧ್ಯದ ಕಠಿಣ ಮಾರ್ಗದ ಮೂಲಕ ಸಾಗಲು ಸಜ್ಜಾಗಬೇಕಾಗುತ್ತದೆ ಎಂದು ಸರ್ಕಾರದ ರಾಷ್ಟ್ರೀಯ ಯೋಜಕರು ನುಡಿದರು.

ಕಳೆದ ಎರಡು ವರ್ಷಗಳಲ್ಲಿ ಪ್ಯಾಂಗಾಂಗ್ ತ್ಸೊ, ಗಲ್ವಾನ್ ಮತ್ತು ಡೆಪ್ಸಂಗ್ ಬಯಲಿನಲ್ಲಿ ಭಾರತೀಯ ಸೇನೆ ಮತ್ತು ಪಿಎಲ್ ಮಧ್ಯೆ ಹಲವಾರು ಬಾರಿ ಚಕಮಕಿಗಳು ನಡೆದಿವೆ. ಆದರೆ ಇವುಗಳಲ್ಲಿ ಬಹುತೇಕ ಘರ್ಷಣೆಗಳನ್ನು ಸ್ಥಳೀಯವಾಗಿಯೇ ಇತ್ಯರ್ಥಗೊಳಿಸಲಾಗಿತ್ತು.

ಚೀನಾವು ತನ್ನ ಕಡೆಯಲ್ಲಿ ಭಾರತದ ಯಾವುದೇ ಆಕ್ಷೇಪಗಳಿಲ್ಲದೆ ಮೂಲಸವಲತ್ತುಗಳನ್ನು ನಿರ್ಮಾಣ ಮಾಡಿಕೊಂಡಿದೆ. ಆದರೆ ಭಾರತವು ಯಾವುದೇ ಮೂಲಸವಲತ್ತು ನಿರ್ಮಿಸಿಕೊಳ್ಳುವುದಕ್ಕೂ ಅದು ವಿರೋಧ ವ್ಯಕ್ತ ಪಡಿಸುತ್ತಿದೆ ಮತ್ತು ಭಾರತದ ಕ್ರಮಗಳ ಹಿಂದೆ ಸೇನಾ ಉದ್ದೇಶವಿದೆ ಎಂದು ದೂರುತ್ತದೆ. ಇದೇ ವೇಳೆಗೆ ಚೀನಾ ಮೂಲಸವಲತ್ತು ಮಾಡಿಕೊಂಡದ್ದು ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಎಂಬುದಾಗಿ ಹೇಳಿಕೊಂಡಿದೆ ಎಂದು ಮಾಜಿ ಸೇನಾ ಮುಖ್ಯಸ್ಥರು ನುಡಿದರು. ಚೀನಾದ ಕಡೆಯಲ್ಲಿ ಎಲ್ಲ ಸೇನಾ ಹೊರಠಾಣೆ, ಮೂಲ ಶಿಬಿರಗಳಿಗೆ ತಾರುರಸ್ತೆಯ ಸಂಪರ್ಕ ಕಲ್ಪಿಸಿರುವುದನ್ನು ಅವರು ಉಲ್ಲೇಖಿಸಿದರು.

ಚೀನಾವು ತನ್ನ ಸರ್ವಋತು ಮಿತ್ರ ಪಾಕಿಸ್ತಾನದ ಜೊತೆ ಸೇರಿಕೊಂಡು ಭಾರತವನ್ನು ಕುಗ್ಗಿಸಲು ನೆರೆಯ ಗಿಲ್ಗಿಟ್ -ಬಾಲ್ಟಿಸ್ಥಾನ ಪ್ರದೇಶದಲ್ಲಿ ಉದ್ದೇಶಪೂರ್ವಕವಾಗಿ ಸೇನಾ ಚಲನವಲನ ನಡೆಸುತ್ತಿದ್ದರೂ, ಭಾರತವು ತನ್ನ ಸ್ಥ ಬಿಟ್ಟು ಆಚೆ ಬರುವಂತಿಲ್ಲ,  ಏಕೆಂದರೆ ಹೀಗೆ ಮಾಡಿದರೆ ಪ್ರದೇಶದಲ್ಲಿ ಸೇನಾ ಬಲದ ಮೂಲಕ ಪ್ರದೇಶ ವಿಸ್ತರಣೆ ಮಾಡುವ ಕ್ಷಿ ಜಿನ್ ಪಿಂಗ್ ಯೋಜನೆಗೆ ಅವಕಾಶ ಸಿಗುತ್ತದೆ. ಇಂತಹ ಸನ್ನಿವೇಶದಲ್ಲಿ ಬಿಕ್ಕಟ್ಟಿಗೆ ಇತ್ಯರ್ಥ ಸುದೀರ್ಘವಾಗಬಹುದು ಎಂಬ ಕಾರಣಕ್ಕಾಗಿ ಭಾರತೀಯ ಸೇನೆಯು ಪ್ರದೇಶದಲ್ಲಿ ತನ್ನ ತುಕಡಿಗಳನ್ನು ಹೆಚ್ಚಿಸಿಕೊಂಡಿದೆ.

ಚೀನಾವು ಈಗಾಗಲೇ ಇದೇ ಪ್ರದೇಶದಲ್ಲಿ ಸಂಭವಿಸಿದ ೧೯೬೨ರ ಗಡಿ ಘರ್ಷಣೆಯನ್ನು ಭಾರತಕ್ಕೆ ನೆನಪಿಸುವ ಮೂಲಕ ಭಾರತವನ್ನು ಮಾನಸಿಕವಾಗಿ ಕುಗ್ಗಿಸುವ ಕವಾಯತುಗಳನ್ನು ಆರಂಭಿಸಿದೆ. ಆದರೆ, ಇದು ೨೦೨೦ ಮತ್ತು ಭಾರತದ ನಾಯಕ ನರೇಂದ್ರ ಮೋದಿ ಎಂದು ಹಿರಿಯ ಸಂಪುಟ ಸಚಿವರೊಬ್ಬರು ನುಡಿದರು.

ಸೂಕ್ಷ್ಮ ರೂಪದಲ್ಲಿ ಬಿಕ್ಕಟ್ಟಿನ ಚಿತ್ರ
* ಪೂರ್ವ ಲಡಾಖ್ ವಿಭಾಗಕ್ಕೆ ಚೀನಾ ಎರಡು ಬ್ರಿಗೇಡ್ನಷ್ಟು ಸೈನಿಕರನ್ನು ರವಾನಿಸಿದೆ.
* ಲಡಾಖ್ ದೌಲತ್ ಬೇಗ್ ಓಲ್ಡೀ ವಿಭಾಗದಲ್ಲಿ ರಸ್ತೆ ನಿರ್ಮಿಸುವುದನ್ನು ಭಾರತ ಸ್ಥಗಿತಗೊಳಿಸಬೇಕು ಎಂಬುದು ಚೀನಾದ ಬಯಕೆ.
* ದೌಲತ್ ಬೇಗ್ ಓಲ್ಡೀಯು ಕಾರಾಕೋರಂ ಕಣಿವೆ ಮಾರ್ಗದ ದಕ್ಷಿಣಕ್ಕಿರುವ ಕೊನೆಯ ಸೇನಾ ಠಾಣೆಯಾಗಿದೆ.
* ಪಾಕಿಸ್ತಾನವು ತನ್ನ ಸರ್ವಋತು ಗೆಳೆಯ ಚೀನಾದ ಬೆಂಬಲಕ್ಕಾಗಿ ನೆರೆಯ ಗಿಲ್ಗಿಟ್- ಬಾಲ್ಟಿಸ್ತಾನದಲ್ಲಿ ಸೇನಾ ಚಲನವಲನ ಆರಂಭಿಸಿದೆ.
* ಚೀನಾ ಜೊತೆಗಿನ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ನವದೆಹಲಿಯು ತನ್ನ ನಿಲುವಿನಿಂದ ಹಿಂದೆ ಸರಿಯುವುದಿಲ್ಲ ಎಂದು ಭಾರತ ಸ್ಪಷ್ಟ ಪಡಿಸಿದೆ.
* ಸೇನಾಪಡೆಗಳು, ಸಾಮರ್ಥ್ಯ ಮತ್ತು ಸಂಪನ್ಮೂಲಗಳಲ್ಲಿ ಭಾರತವು ಚೀನಾಕ್ಕೆ ಸರಿಸಮವಾಗಿದೆ.
* ಅಜಿತ್ ದೋವಲ್, ಎಸ್. ಜೈಶಂಕರ್ ಮತ್ತು ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರು ಭಾರತದ ಪ್ರತಿಕ್ರಿಯೆಯ ಶಿಲ್ಪಿಗಳಾಗಿದ್ದಾರೆ.

No comments:

Advertisement