Friday, June 19, 2020

ಗಲ್ವಾನ್: ಘರ್ಷಣೆಯ ಮಧ್ಯೆಯೂ ನದಿ ಸೇತುವೆ ಪೂರ್ಣ

ಗಲ್ವಾನ್: ಘರ್ಷಣೆಯ ಮಧ್ಯೆಯೂ ನದಿ ಸೇತುವೆ ಪೂರ್ಣ

ಭಾರತೀಯ ಸೇನಾ ಎಂಜಿನಿಯರ್‌ಗಳ ಸಾಹಸ

ನವದೆಹಲಿ: ಲಡಾಖ್‌ನಲ್ಲಿ ಚೀನಾವು ತಡೆಯಲು ಯತ್ನಿಸಿದ್ದ ಗಲ್ವಾನ್ ನದಿ ಸೇತುವೆಯನ್ನು ಭಾರತವು ಚೀನೀ ಪಡೆಗಳ ಜೊತೆಗಿನ ಘರ್ಷಣೆಯ ನಡುವೆಯೇ ಪೂರ್ಣಗೊಳಿಸಿದೆ ಎಂದು ಅಧಿಕಾರಿಗಳು 2020 ಜೂನ್ 19ರ ಶುಕ್ರವಾರ ತಿಳಿಸಿದರು.

ಭಾರತದ ಸೇನಾ ಎಂಜಿನಿಯರ್‌ಗಳು ಪೂರ್ವ ಲಡಾಖ್‌ನ ಗಲ್ವಾನ್ ನದಿಯ ಮೇಲೆ ೬೦ ಮೀಟರ್ ಸೇತುವೆಯನ್ನು ಪೂರ್ಣಗೊಳಿಸಿದ್ದಾರೆ, ಇದು ಭಾರತೀಯ ಕಾಲಾಳುಪಡೆಗೆ ಶೀತ ಪರ್ವತ ನದಿಗೆ ಅಡ್ಡಲಾಗಿ ಚಲಿಸಲು ಅವಕಾಶ ನೀಡುವ ಮೂಲಕ ಸೂಕ್ಷ್ಮ ವಲಯದಲ್ಲಿ ಭಾರತದ ಹಿಡಿತವನ್ನು ಬಲಪಡಿಸುತ್ತದೆ ಮತ್ತು ದಾರ್ಬುಕ್‌ನಿಂದ ಕಾರಾಕೋರಂ ಕಣಿವೆ ಮಾರ್ಗದ ದಕ್ಷಿಣಕ್ಕಿರುವ ಕೊನೆಯ ಸೇನಾ ಠಾಣೆಯಾಗಿರುವ ದೌಲತ್ ಬೇಗ್ ಓಲ್ಡಿವರೆಗಿನ ೨೫೫ ಕಿ.ಮೀ ಉದ್ದದ ಆಯಕಟ್ಟಿನ ರಸ್ತೆಯನ್ನು ರಕ್ಷಿಸುತ್ತದೆ ಎಂದು ಉನ್ನತ ಅಧಿಕಾರಿಗಳು ಹೇಳಿದರು.

ಯೋಜನೆಯನ್ನು ಕೈಬಿಡುವಂತೆ ಭಾರತೀಯ ಸೇನೆಯನ್ನು ಒತ್ತಾಯಿಸುವ ಪ್ರಯತ್ನದಲ್ಲಿ ಪಿಎಲ್‌ಎ ಪ್ರದೇಶದಲ್ಲಿ ಪ್ರತಿಕೂಲ ಚಲನೆಗಳನ್ನು ತೋರಿಸುತಿದ್ದುದರ ನಡುವೆಯೇ ಸೇನಾ ಎಂಜಿನಿಯರ್‌ಗಳು ಸೇತುವೆಯನ್ನು ನಿರ್ಮಿಸಿದ್ದಾರೆ.

ಪೂರ್ವ ಲಡಾಕ್‌ನಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ನಡೆಸಿದ್ದ ಆಕ್ರಮಣಕಾರಿ ಪ್ರಚೋದನೆಗಳ ಮಧ್ಯೆಯೇ ಸೇತುವೆಯ ನಿರ್ಮಾಣವನ್ನು  ಪೂರ್ಣಗೊಳಿಸಲಾಯಿತು.

ಪೂರ್ವ ಲಡಾಖ್‌ನಲ್ಲಿ ಸೇತುವೆ ನಿರ್ಮಾಣ ಚಟುವಟಿಕೆಗೆ ಚೀನಾ ಆಕ್ಷೇಪ ವ್ಯಕ್ತ ಪಡಿಸಿದ್ದು, ಅಂತಿಮವಾಗಿ ಉಭಯ ದೇಶಗಳ ಮಧ್ಯೆ ಗಡಿ ಬಿಕ್ಕಟ್ಟಿಗೆ ಕಾರಣವಾಗಿತ್ತು. ಇಡೀ ಗಲ್ವಾನ್ ಕಣಿವೆ ತನ್ನದು ಎಂಬುದಾಗಿ ಚೀನಾ ಹೇಳಿಕೊಂಡಿತ್ತು.

ಭಾರತದ ಗಡಿ ಮೂಲಸೌಕರ್ಯ ನವೀಕರಣ ಯೋಜನೆಗಳನ್ನು ಸೇನಾ ಎಂಜಿನಿಯರ್‌ಗಳು ಪೀಪಲ್ಸ್ ಲಿಬರೇಷನ್ ಆರ್ಮಿಯ (ಪಿಎಲ್‌ಎ) ವಿರೋಧವಿದ್ದರೂ ಪೂರ್ಣಗೊಳಿಸುತ್ತಾರೆ ಎಂಬುದರ ಸಂಕೇತವಾಗಿ ಸೇತುವೆಯನ್ನು ಗುರುವಾರ ಪೂರ್ಣಗೊಳಿಸಲಾಗಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದರು.

ನಾಲ್ಕು ಸ್ತಂಭಗಳ ಸೇತುವೆ ಶಿಯೋಕ್ ನದಿ ಮತ್ತು ಗಲ್ವಾನ್ ನದಿಯ ಸಂಗಮದಿಂದ ಮೂರು ಕಿಲೋಮೀಟರ್ ಪೂರ್ವದಲ್ಲಿ, ಗಸ್ತು ಪಾಯಿಂಟ್ ೧೪ ರೊಂದಿಗೆ ಬೈಲಿ ಸೇತುವೆಯಿಂದ ಕಿಮೀ ಪೂರ್ವಕ್ಕೆ ಇದೆ. ಗಸ್ತುಪಾಯಿಂಟ್ ೧೪ ಜೂನ್ ೧೫ ಘರ್ಷಣೆ ಸಂಭವಿಸಿದ ಸ್ಥಳವಾಗಿದ್ದು, ಇದು ವೈ-ಜಂಕ್ಷನ್‌ಗೆ ಹತ್ತಿರದಲ್ಲಿದೆ, ಅಲ್ಲಿ ಗಲ್ವಾನ್ ತೊರೆಯು ಮುಖ್ಯ ನದಿಯನ್ನು ಸೇರುತ್ತದೆ.

೧೨೦ ಕಿ.ಮೀ ಕ್ಯಾಂಪ್ ಎಂದು ಕರೆಯಲ್ಪಡುವ ಭಾರತೀಯ ಸೇನಾ ನೆಲೆ ಶಿಬಿರವು ಎರಡು ನದಿಗಳ ಸಂಗಮದಲ್ಲಿದೆ ಮತ್ತು ಡಿಎಸ್‌ಡಿಬಿಒ ರಸ್ತೆಯ ಪಕ್ಕದಲ್ಲಿದೆ.

"ನಾವು ಸೇತುವೆಯ ಕೆಲಸಕ್ಕೆ ವಿರಾಮ ನೀಡಲಿಲ್ಲ. ಜೂನ್ ೧೫   ಹಿಂಸಾತ್ಮಕ ಘರ್ಷಣೆಯ ಮಧ್ಯದಲ್ಲಿಯೂ ಕೆಲಸ ಮಾಡಿದ್ದೇವೆ ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಇಡೀ ಗಲ್ವಾನ್ ನದಿ ಕಣಿವೆಯನ್ನು ಹಿಡಿತದಲ್ಲಿ ಇಟ್ಟುಕೊಳ್ಳುವ ಚೀನಾದ ಎತ್ತರದ ಹಕ್ಕು ಪ್ರತಿಪಾದನೆಯು ಮೂಲತಃ ಭಾರತೀಯ ಹಕ್ಕು ರೇಖೆಯನ್ನು ಶ್ಯೋಕ್ ನದಿಗೆ ತಗ್ಗಿಸುವ ಪ್ರಯತ್ನವಾಗಿದೆ. ಇದು ಸಂಭವಿಸಿದಲ್ಲಿ, ಚೀನೀಯರು ಹಗೆತನದ ಸಮಯದಲ್ಲಿ ಡಿಎಸ್‌ಡಿಬಿಒ ರಸ್ತೆಯನ್ನು ಅತಿಕ್ರಮಿಸಬಹುದು ಮತ್ತು ಡಾಲ್ಟ್ ಬೇಗ್ ಓಲ್ಡಿಗೆ ಹೋಗುವ ರಸ್ತೆಯನ್ನು ತುಂಡರಿಸಬಹುದು. ಇದು ದೌಲತ್ ಬೇಗ್ ಓಲ್ಡೀಗೆ (ಡಿಬಿಒ) ಮುಂಚಿನ ಕೊನೆಯ ಭಾರತೀಯ ಗ್ರಾಮವಾದ ಮುರ್ಗೊ ಮೂಲಕ ಪಾಕಿಸ್ತಾನಕ್ಕೆ ಮತ್ತೊಂದು ರಸ್ತೆಯನ್ನು ತೆರೆಯಲು ಅನುವು ಮಾಡಿಕೊಡುತ್ತದೆ.

ಕಾಂಕ್ರೀಟ್ ಕಂಬಗಳ ಮೇಲೆ ನಿರ್ಮಿಸಲಾದ ಬೈಲಿ ಸೇತುವೆ ಪ್ರವೇಶವು ಮಿಲಿಟರಿ ಕ್ರೋಡೀಕರಣದ ವಿಷಯದಲ್ಲಿ ಭಾರತಕ್ಕೆ ಪ್ರಮುಖ ಪ್ರಯೋಜನವನ್ನು ನೀಡುತ್ತದೆ ಮತ್ತು ಇದು ಭಾರತೀಯ ಕಾರ್ಯತಂತ್ರದ ಹಿತಾಸಕ್ತಿಗಳ ರಕ್ಷಣೆಗೆ ಪ್ರಮುಖವೆಂದು ಪರಿಗಣಿಸಲಾಗಿದೆ. ಭಾರತೀಯ ಸೇನೆಯ ವಾಹನಗಳು ಈಗ ಗಲ್ವಾನ್ ನದಿಯನ್ನು ದಾಟಲು ಸಮರ್ಥವಾಗಿರುವುದರಿಂದ, ಕೆಟ್ಟ ಸನ್ನಿವೇಶದಲ್ಲಿ ಆಕ್ರಮಣಕಾರಿ ಪಿಎಲ್‌ಎ ವಿರುದ್ಧ ಸೈನಿಕರು ಈಗ ಇತರ ಸೇನಾ ಆಯ್ಕೆಗಳನ್ನು ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಗಲ್ವಾನ್ ನದಿ ಮೇಲಿನ ಕಾಲ್ಸೇತುವೆಗೆ ಬದಲಾಗಿ ಸೇತುವೆಯನ್ನು ನಿರ್ಮಿಸಲಾಗಿದೆ.

No comments:

Advertisement