My Blog List

Monday, November 30, 2020

ಕೊರೋನಾ ಸ್ಥಿತಿಗತಿ: ಡಿ. ೪ರಂದು ಪ್ರಧಾನಿಯಿಂದ ಸರ್ವ ಪಕ್ಷ ಸಭೆ

ಕೊರೋನಾ ಸ್ಥಿತಿಗತಿ: ಡಿ. ೪ರಂದು ಪ್ರಧಾನಿಯಿಂದ ಸರ್ವ ಪಕ್ಷ ಸಭೆ

ದೇಶದ ಕೋವಿಡ್ -೧೯ ಪರಿಸ್ಥಿತಿ ಕುರಿತು ಚರ್ಚಿಸಲು ಲೋಕಸಭೆ ಮತ್ತು ರಾಜ್ಯಸಭೆಯ sಸದನ ನಾಯಕರ ನಿರ್ಣಾಯಕ ಸರ್ವಪಕ್ಷ ವರ್ಚುವಲ್ ಸಭೆಯನ್ನು 2020 ಡಿಸೆಂಬರ್ ೪ರ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ಕರೆದಿದ್ದಾರೆ.

ಪ್ರಧಾನಿಯವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ಆರೋಗ್ಯ ಸಚಿವ ಹರ್ಷ ವರ್ಧನ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಅರ್ಜುನ್ ರಾಮ್ ಮೇಘವಾಲ್ ಮತ್ತು ವಿ ಮುರಳೀಧgನ್ ಸೇರಿದಂತೆ ಸರ್ಕಾರದ ಉನ್ನತ ಸಚಿವರು, ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಮತ್ತು ಇತರ ಅಧಿಕಾರಿಗಳು ಹಾಜರಿರುತ್ತಾರೆ.

ವರ್ಚುವಲ್ ಸಭೆ ಬೆಳಿಗ್ಗೆ ೧೦.೩೦ ಕ್ಕೆ ಪ್ರಾರಂಭವಾಗಲಿದೆ ಮತ್ತು ಸಭೆಯಲ್ಲಿ ಪಾಲ್ಗೊಂಡು ಮಾಹಿತಿ ಒದಗಿಸುವಂತೆ ವಿವಿಧ ಪಕ್ಷಗಳ ಸದನ ನಾಯಕರನ್ನು ಆಹ್ವಾನಿಸಲಾಗುವುದು, ಕೊನೆಯಲ್ಲಿ ಪ್ರಧಾನಿ ಮೋದಿ ಅವರು ಉತ್ತರ ನೀಡಲಿದ್ದಾರೆ.

ಸಭೆಗೆ ಹಾಜರಾಗುವಂತೆ ಎಲ್ಲ ಪಕ್ಷಗಳ ಸದನ ನಾಯಕರಿಗೆ ಈಗಾಗಲೇ ಆಹ್ವಾನ ನೀಡಲಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವಾಲಯದ ಮೂಲಗಳು ತಿಳಿಸಿವೆ.

ಹಿಂದಿನ ಸಮಯಕ್ಕಿಂತ ಭಿನ್ನವಾಗಿ, ಬಾರಿ ಐದು ಸಂಸದರಿಗಿಂತ ಕಡಿಮೆ ಇರುವವರನ್ನೂ ಒಳಗೊಂಡಂತೆ ಎಲ್ಲ ಪಕ್ಷಗಳ ಸದನ ನಾಯಕರನ್ನು ಸಭೆಗೆ ಆಹ್ವಾನಿಸಲಾಗಿದೆ, ಆದರೆ ಅವರೆಲ್ಲರಿಗೂ ಮಾತನಾಡಲು ಅವಕಾಶ ಸಿಗದಿರಬಹುದು ಎಂದು ಮೂಲಗಳು ತಿಳಿಸಿವೆ.

ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ -೧೯ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದ್ದು, ಇದೇ ವೇಳೆಯಲ್ಲಿ ಸರ್ವ ಪಕ್ಷ ನಾಯಕರ ಸಭೆ ನಡೆಯುತ್ತಿದೆ. ಚಳಿಗಾಲದ ಅಧಿವೇಶನದೊಂದಿಗೆ ಬಜೆಟ್ ಅಧಿವೇಶನವನ್ನು ವಿಲೀನಗೊಳಿಸುವ ಸಾಧ್ಯತೆಯಿದ್ದು, ಸಂಸತ್ತಿನ ಮುಂದಿನ ಅಧಿವೇಶನವು ಜನವರಿ ಅಂತ್ಯzಲ್ಲಿ ನಡೆಯುವ ಸಾಧ್ಯತೆಯಿದೆ.

ಭಾರತವು ತನ್ನ ಕೋವಿಡ್ -೧೯ ಲಸಿಕೆಯನ್ನು ಯಾವಾಗ ಪಡೆಯುತ್ತದೆ ಎಂಬ ಬಗ್ಗೆ ಸಾಕಷ್ಟು ಊಹಾಪೋಹಗಳಿವೆ. ಹಿನ್ನೆಲೆಯಲ್ಲಿ ರಾಷ್ಟ್ರಕ್ಕಾಗಿ ವಿಶ್ವಾಸವರ್ಧನೆಯ ಕ್ರಮವಾಗಿ ಎಲ್ಲರನ್ನೂ ಜೊತೆಗೆ ಒಯ್ಯಲು ಸರ್ಕಾರ ಉಪಕ್ರಮವನ್ನು ಕೈಗೊಂಡಿದೆ ಎನ್ನಲಾಗಿದೆ.

ಕೋವಿಡ್ ಸಾಂಕ್ರಾಮಿಕಕ್ಕೆ ಸಂಬಂಧಿಸಿದಂತೆ ಬುಡಮಟ್ಟದ ಪರಿಸ್ಥಿತಿಯನ್ನು ಅವಲೋಕಿಸಲು ಪ್ರಧಾನಿ ಎಲ್ಲ  ಪಕ್ಷಗಳ ಸದನ ನಾಯಕರನ್ನು ಭೇಟಿ ಮಾಡಲಿದ್ದಾರೆ.

ನವೆಂಬರ್ ೨೪ ರಂದು ನಡೆದ ಮುಖ್ಯಮಂತ್ರಿಗಳ ಜೊತೆಗಿನ  ಪ್ರಧಾನ ಮಂತ್ರಿಯವರ ಸಮಾಲೋಚನಾ ಸಭೆಯ ಬೆನ್ನಲ್ಲೇ ಸಭೆ ನಡೆಯಲಿದೆ. ಮುಖ್ಯಮಂತ್ರಿಗಳ ಜೊತೆಗಿನ ಸಭೆಯಲ್ಲಿ, ಕೋವಿಡ್ -೧೯ ವೈರಸ್ ಹರಡುವುದನ್ನು ಒಟ್ಟಾಗಿ ತಡೆಯುವ ಮತ್ತು ಕೋವಿಡ್ ಧನಾತ್ಮಕತೆಯ ಪ್ರಮಾಣವನ್ನು ಶೇಕಡಾ ೫ಕ್ಕಿಂತ ಕೆಳಕ್ಕೆ ತರಬೇಕಾದ ಅಗತ್ಯವನ್ನು ಪ್ರಧಾನಿ ಒತ್ತಿಹೇಳಿದ್ದರು.

ವೈರಸ್ ಹರಡದಂತೆ ಎಚ್ಚರ ವಹಿಸುವ ಅಗತ್ಯವನ್ನು ಪ್ರಧಾನಿ ಪುನರುಚ್ಚರಿಸಿದ್ದು, ಲಸಿಕೆ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಲು ಜಿಲ್ಲಾ ಮತ್ತು ಬ್ಲಾಕ್ ಮಟ್ಟಗಳಲ್ಲಿ ಕಾರ್ಯಪಡೆ ಅಥವಾ ಚಾಲನಾ ಸಮಿತಿಗಳನ್ನು ಸ್ಥಾಪಿಸುವಂತೆ ರಾಜ್ಯಗಳಿಗೆ ಸೂಚಿಸಿದ್ದರು.

ಇನ್ನೊಂದು ಸುದ್ದಿ ಮೂಲದ ಪ್ರಕಾರ, ಸರ್ವಪಕ್ಷ ಸಭೆಯಲ್ಲಿ, ಕೋವಿಡ್ -೧೯ ಲಸಿಕೆ ವಿತರಣೆಗೆ ಸರ್ಕಾರದ ಸಿದ್ಧತೆಯ ವಿಷಯವನ್ನು ಪ್ರಧಾನಿ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ. ಕಳೆದ ವಾರ ಕೋವಿಡ್ -೧೯ ಲಸಿಕೆ ಅಭಿವೃದ್ಧಿಯಲ್ಲಿ ತೊಡಗಿರುವ ಮೂರು ಲಸಿಕಾ ತಯಾರಿ ಸಂಸ್ಥೆಗಳ ತಂಡಗಳನ್ನು ಪ್ರಧಾನಿ ಈಗಾಗಲೇ ಭೇಟಿ ಮಾಡಿದ್ದಾರೆ. ಸೋಮವಾರ, ಅವರು ಇತರ ಮೂರು ಲಸಿಕೆ ತಯಾರಿಕಾ ಕಂಪೆನಿಗಳಾದ ಜೆನ್ನೋವಾ ಬಯೋಫಾರ್ಮಾ, ಜೈವಿಕ ಮತ್ತು ಡಾ. ರೆಡ್ಡೀಸ್   ಮೂರು ತಂಡಗಳ ಜೊತೆಗೂ ಸಂವಹನ ನಡೆಸಿದರು.

ಕಳೆದ ವಾರ, ಕೇಂದ್ರ ಗೃಹ ಸಚಿವಾಲಯವು ವೈರಸ್ ಹರಡುವಿಕೆಯ ವಿರುದ್ಧ ಸಾಧಿಸಿದ ಲಾಭಗಳನ್ನು ಕ್ರೋಢೀಕರಿಸುವ ಸಲುವಾಗಿ ಸಾಂಕ್ರಾಮಿಕ ಸಮಯದಲ್ಲಿ ಕಣ್ಗಾವಲು ಮತ್ತು ನಿಯಂತ್ರಣಕ್ಕಾಗಿ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತು. ಡಿಸೆಂಬರ್ ರಿಂದ ಜಾರಿಗೆ ಬರಲಿರುವ ಹೊಸ ಮಾರ್ಗಸೂಚಿಗಳು, ವೈರಸ್ ಹರಡುವುದನ್ನು ಪರೀಕ್ಷಿಸಲು ರಾತ್ರಿ ಕರ್ಫ್ಯೂ ಸೇರಿದಂತೆ ಸ್ಥಳೀಯ ನಿರ್ಬಂಧಗಳನ್ನು ವಿಧಿಸಲು ರಾಜ್ಯಗಳಿಗೆ ಅಧಿಕಾರ ನೀಡುತ್ತವೆ.

ಏಪ್ರಿಲ್ ತಿಂಗಳಲ್ಲಿ ಪ್ರಧಾನಿ ಎಲ್ಲಾ ಪಕ್ಷಗಳ ಸದನ ನಾಯಕರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಹನ ನಡೆಸಿದ್ದರು. ಸಭೆಯಲ್ಲಿ, ಮಾರ್ಚ್ನಲ್ಲಿ ವಿಧಿಸಲಾಗಿದ್ದ ೨೧ ದಿನಗಳ ದಿಗ್ಬಂಧನವನ್ನು (ಲಾಕ್ಡೌನ್) ವಿಸ್ತರಿಸುವ ಅವಶ್ಯಕತೆಯಿದೆ ಎಂದು ಅವರು ಸೂಚಿಸಿದ್ದರು ಮತ್ತು ಜನರ ಜೀವ ಉಳಿಸಲು ಸರ್ಕಾರದ ಆದ್ಯತೆಯ ಬಗ್ಗೆ ಮಾತನಾಡಿದ್ದರು.

No comments:

Advertisement