Sunday, June 2, 2024

ಅರುಣಾಚಲ ಪ್ರದೇಶ: ಬಿಜೆಪಿ ಹ್ಯಾಟ್ರಿಕ್, ಸಿಕ್ಕಿಂನಲ್ಲಿ ಎಸ್‌ಕೆಎಂ ಜಯಭೇರಿ

 ಅರುಣಾಚಲ ಪ್ರದೇಶ: ಬಿಜೆಪಿ ಹ್ಯಾಟ್ರಿಕ್, ಸಿಕ್ಕಿಂನಲ್ಲಿ  ಎಸ್‌ಕೆಎಂ ಜಯಭೇರಿ

ವದೆಹಲಿ: ಅರುಣಾಚಲ ಪ್ರದೇಶದಲ್ಲಿ ಬಿಜೆಪಿ 2024 ಜೂನ್‌ 2ರ ಭಾನುವಾರ ಮತ್ತೆ ಅಧಿಕಾರಕ್ಕೆ ಬರುವ ಮೂಲಕ ಹ್ಯಾಟ್ರಿಕ್‌ ಸಾಧಿಸಿತು. ಇದೇ ವೇಳೆಗೆ ಸಿಕ್ಕಿಂನಲ್ಲಿ ಆಡಳಿತಾರೂಢ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್‌ಕೆಎಂ) ಎರಡನೇ ಅವಧಿಗೆ ಅಧಿಕಾರವನ್ನು ಪಡೆದುಕೊಂಡಿತು.

2024 ರ ಏಪ್ರಿಲ್ 19 ರಂದು ಅರುಣಾಚಲ ಪ್ರದೇಶದ 60 ವಿಧಾನಸಭಾ ಸ್ಥಾನಗಳಿಗೆ ಮತ್ತು ಸಿಕ್ಕಿಂನ 32 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆದಿತ್ತು.

ಚುನಾವಣಾ ಆಯೋಗದ ಪ್ರಕಾರ, ಅರುಣಾಚಲ ಪ್ರದೇಶದಲ್ಲಿ ಬಿಜೆಪಿ 46 ಸ್ಥಾನಗಳನ್ನು ಗೆದ್ದು, ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಮರಳಿದೆ. 60 ವಿಧಾನಸಭಾ ಸ್ಥಾನಗಳ ಪೈಕಿ 50 ಸ್ಥಾನಗಳಿಗೆ ಭಾನುವಾರ ಫಲಿತಾಂಶ ಪ್ರಕಟವಾಗಿದ್ದು, ಆಡಳಿತ ಪಕ್ಷ ಈಗಾಗಲೇ ಹತ್ತು ಸ್ಥಾನಗಳನ್ನು ಅವಿರೋಧವಾಗಿ ಗೆದ್ದುಕೊಂಡಿದೆ. ಈ ಹಿಂದೆ ಅವಿರೋಧವಾಗಿ ಗೆದ್ದಿದ್ದ ಹತ್ತು ಪಕ್ಷದ ಅಭ್ಯರ್ಥಿಗಳಲ್ಲಿ ಮುಖ್ಯಮಂತ್ರಿ ಪೆಮಾ ಖಂಡು ಕೂಡ ಒಬ್ಬರು.

ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಐದು ಸ್ಥಾನಗಳನ್ನು ಗೆದ್ದರೆ, ಅರುಣಾಚಲದ ಪೀಪಲ್ಸ್ ಪಾರ್ಟಿ ಎರಡು ಸ್ಥಾನಗಳನ್ನು ಮತ್ತು ಎನ್‌ಸಿಪಿ ಮೂರು ಸ್ಥಾನಗಳನ್ನು ಪಡೆದುಕೊಂಡಿವೆ. ಕಾಂಗ್ರೆಸ್ ಕೇವಲ ಒಂದು ಸ್ಥಾನವನ್ನು ಮಾತ್ರ ಪಡೆದಿದೆ. ಮೂರು ಕ್ಷೇತ್ರಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ವಿಜಯಶಾಲಿಗಳಾಗಿದ್ದಾರೆ.

ಸಿಕ್ಕಿಂನಲ್ಲಿ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ನೇತೃತ್ವದ ಎಸ್‌ಕೆಎಂ 31 ಸ್ಥಾನಗಳನ್ನು ಗೆದ್ದರೆ, ಎಸ್‌ಡಿಎಫ್ ಒಂದು ಸ್ಥಾನವನ್ನು ಗೆದ್ದಿದೆ.

ಪವನ್ ಚಾಮ್ಲಿಂಗ್ ಸೋಲು

ಐದು ಬಾರಿ ಗೆದ್ದಿದ್ದ ಸಿಕ್ಕಿಂನ ಮಾಜಿ ಮುಖ್ಯಮಂತ್ರಿ ಮತ್ತು ಎಸ್‌ಡಿಎಫ್ ಮುಖ್ಯಸ್ಥ ಪವನ್ ಕುಮಾರ್ ಚಾಮ್ಲಿಂಗ್ ಅವರು ಪೊಕ್ಲೋಕ್ ಕಮ್ರಾಂಗ್ ಮತ್ತು ನಾಮ್‌ಚೆಯ್‌ಬಂಗ್ ವಿಧಾನಸಭಾ ಕ್ಷೇತ್ರಗಳಲ್ಲಿ ಸೋತಿದ್ದಾರೆ.

ಎಂಟು ಬಾರಿ ಶಾಸಕರಾಗಿರುವ ಚಾಮ್ಲಿಂಗ್ ಅವರು ತಮ್ಮ ಹುಟ್ಟೂರು ನಾಮ್ಚಿ ಜಿಲ್ಲೆಯ ಪೊಕ್ಲೋಕ್ ಕಮ್ರಾಂಗ್ ಕ್ಷೇತ್ರದಲ್ಲಿ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾದ ಭೋಜ್ ರಾಜ್ ರೈ ವಿರುದ್ಧ 3,063 ಮತಗಳಿಂದ ಸೋತರು.

ಪ್ರಧಾನಿ ಮೋದಿ ಧನ್ಯವಾದ

ಈಶಾನ್ಯ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲೇ ಅರುಣಾಚಲ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ಹೇಳಿದರು.

ಎಕ್ಸ್‌ (ಹಿಂದಿನ ಟ್ವಿಟ್ಟರ್)‌ ಮೂಲಕ ಸಂದೇಶ ನೀಡಿದ ಮೋದಿ, "ಧನ್ಯವಾದಗಳು ಅರುಣಾಚಲ ಪ್ರದೇಶ! ಈ ಅದ್ಭುತ ರಾಜ್ಯದ ಜನರು ಅಭಿವೃದ್ಧಿಯ ರಾಜಕೀಯಕ್ಕೆ ನಿಸ್ಸಂದಿಗ್ಧವಾದ ಜನಾದೇಶವನ್ನು ನೀಡಿದ್ದಾರೆ. @BJP4Arunachal ನಲ್ಲಿ ಮತ್ತೊಮ್ಮೆ ತಮ್ಮ ನಂಬಿಕೆಯನ್ನು ವ್ಯಕ್ತ ಪಡಿಸಿದ್ದಕ್ಕಾಗಿ ನನ್ನ ಕೃತಜ್ಞತೆಗಳು. ರಾಜ್ಯದ ಬೆಳವಣಿಗೆಗೆ ಹೆಚ್ಚಿನ ಶಕ್ತಿಯೊಂದಿಗೆ ನಮ್ಮ ಪಕ್ಷವು ಕೆಲಸ ಮಾಡುತ್ತದೆ” ಎಂದು ಹೇಳಿದ್ದಾರೆ.

ಸಿಕ್ಕಿಂ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಕ್ಕಾಗಿ ಎಸ್‌ಕೆಎಂ ಮತ್ತು ಅದರ ಮುಖ್ಯಸ್ಥ ಪ್ರೇಮ್ ಸಿಂಗ್ ತಮಾಂಗ್ ಅವರನ್ನು ಕೂಡಾ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದರು.

"ಮುಂಬರುವ ದಿನಗಳಲ್ಲಿ ಸಿಕ್ಕಿಂನ ಪ್ರಗತಿಯನ್ನು ಮತ್ತಷ್ಟು ಹೆಚ್ಚಿಸಲು ರಾಜ್ಯ ಸರ್ಕಾರದೊಂದಿಗೆ ಕೆಲಸ ಮಾಡುವುದನ್ನು ನಾನು ಎದುರು ನೋಡುತ್ತಿದ್ದೇನೆ" ಎಂದು ಅವರು X ನಲ್ಲಿ ಸಂದೇಶ ಪೋಸ್ಟ್ ಮಾಡಿದರು.

ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ಮತ ಹಾಕಿದ ಎಲ್ಲರಿಗೂ ಪ್ರಧಾನಿ ಧನ್ಯವಾದ ಸಲ್ಲಿಸಿದರು.

ಶನಿವಾರ ಪ್ರಕಟವಾದ ಲೋಕ ಸಭಾ ಚುನಾವಣೆ ಸಂಬಂಧಿತ ಮತದಾನೋತ್ತರ ಸಮೀಕ್ಷೆಗಳು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ ಡಿಎ ಮೂರನೇ ಭಾರಿಗೆ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದಾಗಿ ಭವಿಷ್ಯ ನುಡಿದಿರುವುದನ್ನು ಇಲ್ಲಿ ಸ್ಮರಿಸಬಹುದು.



No comments:

Advertisement