My Blog List

Monday, May 26, 2008

ಇಂದಿನ ಇತಿಹಾಸ History Today ಮೇ 26

ಇಂದಿನ ಇತಿಹಾಸ

ಮೇ 26

ಅಮೆರಿಕದ ಮಹಿಳಾ ಗಗನಯಾನಿ ಸ್ಯ್ಲಾಲಿ ರೈಡ್ ಜನ್ಮದಿನ. ಈಕೆ 1983ರಲ್ಲಿ ಬಾಹ್ಯಾಕಾಶ ಷಟ್ಲ್ ನೌಕೆ ಚಾಲೆಂಜರ್ ಮೂಲಕ ಭೂಮಿಗೆ ಪ್ರದಕ್ಷಿಣೆ ಹಾಕಿದ ಮೊತ್ತ ಮೊದಲ ಮಹಿಳೆ.


2007: ಕೇಂದ್ರದ ಮಾಜಿ ಸಚಿವ, ರಾಷ್ಟ್ರೀಯ ನ್ಯಾಯಮಂಡಳಿಯ ಅಧ್ಯಕ್ಷ ಚಂದ್ರಜಿತ್ ಯಾದವ್ ನವದೆಹಲಿಯಲ್ಲಿ ನಿಧನರಾದರು. ಅವರು ಇಂದಿರಾಗಾಂಧಿ ಸಂಪುಟದಲ್ಲಿ ಉಕ್ಕು ಮತ್ತು ಗಣಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

2007: ರಾಷ್ಟ್ರದ ಭದ್ರತಾ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸುವ ಸಲುವಾಗಿ ಕೇಂದ್ರ ಸರ್ಕಾರವು ವಿವಿಧ್ದೋದೇಶ ರಾಷ್ಟ್ರೀಯ ಗುರುತು ಚೀಟಿ ಯೋಜನೆಗೆ ಚಾಲನೆ ನೀಡಿತು. ರಾಜಧಾನಿಯ ನರೇಲಾದಲ್ಲಿ ಭಾರತದ ರಿಜಿಸ್ಟ್ರಾರ್ ಜನರಲ್ ದೇವೇಂದರ್ ಕುಮಾರ್ ಸಿಕ್ರಿ ಅವರು ವಾಯವ್ಯ ದೆಹಲಿಯ ನರೇಲಾದ ಮಹಿಳೆಯೊಬ್ಬರಿಗೆ ಮೊತ್ತ ಮೊದಲ ರಾಷ್ಟ್ರೀಯ ಗುರುತು ಚೀಟಿ ವಿತರಿಸಿದರು.

2007: ಪಕ್ಷದ ನಿಯಮ ಉಲ್ಲಂಘಿಸಿ ಪರಸ್ಪರ ಆರೋಪ- ಪ್ರತ್ಯಾರೋಪದಲ್ಲಿ ತೊಡಗಿದ್ದ ಕೇರಳದ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ಮತ್ತು ಸಿಪಿ ಎಂ ರಾಜ್ಯ ಕಾರ್ಯದರ್ಶಿ ಪಿನರಾಯಿ ವಿಜಯನ್ ಅವರನ್ನು ಸಿಪಿಎಂನ ಉನ್ನತ ನೀತಿ ನಿರೂಪಕ ಸಮಿತಿಯಾದ ಪಾಲಿಟ್ ಬ್ಯೂರೋದಿಂದ ಅಮಾನತುಗೊಳಿಸಲಾಯಿತು.

2007: ಭಾರತೀಯ ಕ್ರಿಕೆಟ್ ತಂಡದ ಅಗ್ರಶ್ರೇಯಾಂಕದ ನಾಲ್ವರು ಆಟಗಾರರು ಢಾಕಾದ ಮೀರ್ ಪುರ ಬೆಂಗಾಲ್ ಜೈತಿಯಾ ಕ್ರೀಡಾಂಗಣದಲ್ಲಿ ಮೊತ್ತ ಮೊದಲ ಬಾರಿಗೆ ಶತಕ ಗಳಿಸುವುದರೊಂದಿಗೆ ವಿಶ್ವದಾಖಲೆ ನಿರ್ಮಿಸಿದರು. ವಾಸಿಂ ಜಾಫರ್ (ಗಾಯಗೊಂಡು ನಿವೃತ್ತಿ 138), ದಿನೇಶ್ ಕಾರ್ತಿಕ್ (129), ರಾಹುಲ್ ದ್ರಾವಿಡ್ (129) ಹಾಗೂ ಸಚಿನ್ ತೆಂಡೂಲ್ಕರ್ (ಔಟಾಗದೇ 122) ಅವರು ಇತಿಹಾಸ ನಿರ್ಮಿಸಿದ ಆಟಗಾರರು.

2007: ಜರ್ಮನಿಯಿಂದ ಅಟ್ಲಾಂಟಾಕ್ಕೆ ಹೊರಟಿದ್ದ ಡೆಲ್ಟಾ ಏರ್ ಲೈನ್ಸ್ ವಿಮಾನದಲ್ಲಿ ಡಾ. ರಾಬರ್ಟ್ ವಿನ್ಸೆಂಟ್ ಮತ್ತು ಡಾ. ಡಿಯೇಟರ್ ಕೆ. ಗುಣ್ ಕಲ್ ಅವರು ಹಾರುತ್ತಿದ್ದ ವಿಮಾನದಲ್ಲೇ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಸೂಕ್ತ ವೈದ್ಯೋಪಚಾರ ಮಾಡಿ ಹೆರಿಗೆ ಮಾಡಿಸಿದರು. ಹುಟ್ಟಿದ ಗಂಡು ಮಗು ಉಸಿರಾಡದೇ ಇದ್ದಾಗ ಬಾಯಿಯ ಮೂಲಕ ಉಸಿರೆಳೆದು ಕೃತಕ ಉಸಿರಾಟ ನಡೆಸಿ ಮಗುವನ್ನು ಬದುಕಿಸಿದರು.

2006: ರಷ್ಯದ ಸೆವೆರ್ ಸ್ಟಾಲ್ ಉಕ್ಕು ಕಂಪೆನಿಯನ್ನು ಖರೀದಿಸಲು ಆರ್ಸೆಲರ್ ಸಂಸ್ಥೆ ನಿರ್ಧರಿಸಿತು. ಇದರಿಂದ ಆರ್ಸೆಲರ್ ಸಂಸ್ಥೆಯನ್ನು ಖರೀದಿಸುವ ಮಿತ್ತಲ್ ಉಕ್ಕು ಸಂಸ್ಥೆಯ ಯತ್ನಕ್ಕೆ ಅಡ್ಡಗಾಲು ಬಿದ್ದಂತಾಯಿತು.

2006: ಮಾವೋವಾದಿ ಹಿಂಸಾಚಾರವನ್ನು ಕೊನೆಗಾಣಿಸಲು ಮುಂದಡಿ ಇಟ್ಟಿರುವ ನೇಪಾಳ ಸರ್ಕಾರವು ಶಾಂತಿ ಮಾತುಕತೆ ಆರಂಭಿಸುವ ದ್ಯೋತಕವಾಗಿ 467 ಮಾವೋವಾದಿ ಉಗ್ರಗಾಮಿಗಳನ್ನು ಬಿಡುಗಡೆ ಮಾಡಿತು.

2002: `ಒಡಿಸ್ಸಿ' ಹೆಸರಿನ ನೌಕೆಯು ಮಂಗಳ ಗ್ರಹದಲ್ಲಿ ಹೆಪ್ಪುಗಟ್ಟಿದ ನೀರಿನ ನಿಕ್ಷೇಪವನ್ನು ಪತ್ತೆ ಮಾಡಿತು.

1999: ಬಟಾಲಿಕ್ ನಿಂದ ಲಡಾಖ್ ನ ಡ್ರಾಸ್ ವರೆಗಿನ ಗಡಿ ನಿಯಂತ್ರಣ ರೇಖೆಯನ್ನು ಅತಿಕ್ರಮಿಸಿದ್ದ ಪಾಕಿಸ್ತಾನಿ ಬೆಂಬಲಿತ ಉಗ್ರಗಾಮಿಗಳ ವಿರುದ್ಧ ಭಾರತ `ಆಪರೇಷನ್ ವಿಜಯ್' ಆರಂಭಿಸಿತು. ಅತಿಕ್ರಮಿಗಳನ್ನು ತೆರವುಗೊಳಿಸುವ ಈ ಕಾರ್ಯಾಚರಣೆ ಯಶಸ್ವಿಯಾಯಿತು ಎಂದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜುಲೈ 14ರಂದು ಘೋಷಿಸಿದರು.

1976: ಕಲಾವಿದ ವೇಣುಗೋಪಾಲ್ ವಿ.ಜಿ. ಜನನ.

1972: ಯುದ್ಧ ಕ್ಷಿಪಣಿಗಳನ್ನು ನಿಯಂತ್ರಿಸುವ `ಆಯಕಟ್ಟಿನ ಶಸ್ತ್ರಾಸ್ತ್ರ ಮಿತಿ ಒಪ್ಪಂದಕ್ಕೆ (ಸಾಲ್ಟ್ 1) ಅಮೆರಿಕ ಮತ್ತು ಯುಎಸ್ಸೆಸ್ಸಾರ್ ಸಹಿ ಹಾಕಿದವು.

1966: ಬ್ರಿಟಿಷ್ ಗಯಾನಾಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಅದು ಈ ದಿನದಿಂದ `ಗಯಾನಾ' ಅಷ್ಟೆ.

1951: ಅಮೆರಿಕದ ಮಹಿಳಾ ಗಗನಯಾನಿ ಸ್ಯ್ಲಾಲಿ ರೈಡ್ ಜನ್ಮದಿನ. ಈಕೆ 1983ರಲ್ಲಿ ಬಾಹ್ಯಾಕಾಶ ಷಟ್ಲ್ ನೌಕೆ ಚಾಲೆಂಜರ್ ಮೂಲಕ ಭೂಮಿಗೆ ಪ್ರದಕ್ಷಿಣೆ ಹಾಕಿದ ಮೊತ್ತ ಮೊದಲ ಮಹಿಳೆ.

1948: ಜಾನಪದ ಕಲಾವಿದರ ಕುಟುಂಬದಿಂದ ಬಂದ ಕಲಾವಿದ ಗುರುರಾಜ ಹೊಸಕೋಟೆ ಅವರು ರುದ್ರಪ್ಪ ಹೊಸಕೋಟೆ ಹಾಗೂ ಹಾಡುಗಾರ್ತಿ ಗೌರಮ್ಮ ದಂಪತಿಯ ಮಗನಾಗಿ ಬಾಗಲಕೋಟೆ ಜಿಲ್ಲೆಯಯ ಮುಧೋಳ ತಾಲ್ಲೂಕಿನ ಮಹಾಲಿಂಗಪುರದಲ್ಲಿ ಜನಿಸಿದರು.

1940: ಕಲಾವಿದ ಚನ್ನವೀರೇಶ ಸಂಪಗಿ ಜನನ.

1926: ಉಜ್ವಲ ರಾಷ್ಟ್ರಪ್ರೇಮಿ, ಚಿಂತಕ, ಬಹುಭಾಷಾ ಕೋವಿದ ಖ್ಯಾತ ಲೇಖಕ ಹೊ.ವೆ. ಶೇಷಾದ್ರಿ (26-5-1926ರಿಂದ 14-8-2005) ಅವರು ಹೊಂಗಸಂದ್ರದಲ್ಲಿ ವೆಂಕಟರಾಮಯ್ಯ- ಪಾರ್ವತಮ್ಮ ದಂಪತಿಯ ಪುತ್ರನಾಗಿ ಈ ದಿನ ಜನಿಸಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಧಾನ ಕಾರ್ಯದರ್ಶಿ 9 ವರ್ಷ ಸೇವೆ ಸಲ್ಲಿಸಿದ ಇವರ ಲೇಖನಿಯಿಂದ ಬಂದ ಗ್ರಂಥಗಳು ಅಸಂಖ್ಯಾತ. ಇವರ ಲಲಿತ ಪ್ರಬಂಧಗಳ ಸಂಕಲನ ತೋರ್ ಬೆರಳುಗೆ 1982ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement