Thursday, July 17, 2008

ಇಂದಿನ ಇತಿಹಾಸ History Today ಜುಲೈ 17

ಇಂದಿನ ಇತಿಹಾಸ

ಜುಲೈ 17


ವಿಧಾನಸೌಧದ ಎರಡನೇ ಮಹಡಿಯಲ್ಲಿನ ಕೊಠಡಿ ಸಂಖ್ಯೆ 203ರಲ್ಲಿ ಶಾರ್ಟ್ ಸರ್ಕೀಟಿನಿಂದಾಗಿ ಬೆಂಕಿ ಹೊತ್ತಿಕೊಂಡು ಕಂಪ್ಯೂಟರ್ ಹಾಗೂ ಸರ್ವರುಗಳು ಸುಟ್ಟು ಭಸ್ಮವಾದವು.

2007: ಆಗುಂಬೆ ಸಮೀಪದ ತಲ್ಲೂರು ಬಳಿಯ ಹುಲಗಾರಿನ ಗೌರಿಗುತ್ತಲ ದುರ್ಗಮ ಅರಣ್ಯದೊಳಗೆ ನಕ್ಸಲೀಯರು ಇರುವ ಸುಳಿವು ಅನುಸರಿಸಿ ನಿಖರ ಮಾಹಿತಿ ಸಂಗ್ರಹಿಸಲು ಮಫ್ತಿಯಲ್ಲಿ ಹೋಗಿದ್ದ ಮಾಳೂರು ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ ಸ್ಪೆಕ್ಟರ್ ವೆಂಕಟೇಶ್ ಅವರನ್ನು ನಕ್ಸಲೀಯರು ಗುಂಡು ಹಾರಿಸಿ ಕೊಲೆಗೈದರು.

2007: ವಿಧಾನಸೌಧದ ಎರಡನೇ ಮಹಡಿಯಲ್ಲಿನ ಕೊಠಡಿ ಸಂಖ್ಯೆ 203ರಲ್ಲಿ ಶಾರ್ಟ್ ಸರ್ಕೀಟಿನಿಂದಾಗಿ ಬೆಂಕಿ ಹೊತ್ತಿಕೊಂಡು ಕಂಪ್ಯೂಟರ್ ಹಾಗೂ ಸರ್ವರುಗಳು ಸುಟ್ಟು ಭಸ್ಮವಾದವು.

2007: ಪರಮಾಣು ಇಂಧನ ಪೂರೈಕೆ ಗುಂಪಿನಲ್ಲಿ (ಎನ್ ಎಸ್ ಜಿ) ಪ್ರಮುಖ ಸದಸ್ಯರಾದ ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾ ದೇಶಗಳು ಭವಿಷ್ಯದ ಯೋಜನೆಗಳನ್ನು ಒಪ್ಪಿಕೊಳ್ಳುವ ಮೂಲಕ ಭಾರತದೊಂದಿಗೆ ನಾಗರಿಕ ಪರಮಾಣು ಕ್ಷೇತ್ರದಲ್ಲಿ ಸಹಕರಿಸಲು ನಿರ್ಧರಿಸಿದವು. ಸುರಕ್ಷತಾ ಕ್ರಮಗಳ ಅಡಿಯಲ್ಲಿ ಸಾಧನ - ಸಲಕರಣೆ ಹಾಗೂ ಸೂಕ್ತ ತಂತ್ರಜ್ಞಾನ ಪೂರೈಕೆ ಮಾಡಿ, ಶಾಂತಿಯುತ ಕಾರಣಕ್ಕಾಗಿ ಬಳಸಲು ಅಣುಶಕ್ತಿ ಅಭಿವೃದ್ಧಿಪಡಿಸಲು ಈ ಮೂರು ದೇಶಗಳು ಸಮ್ಮತಿಸಿದವು.

2007: ಜಪಾನಿನ ವಾಯವ್ಯ ಕರಾವಳಿ ಪ್ರದೇಶದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಕಶಿವಜಕಿಯಲ್ಲಿರುವ ಪರಮಾಣು ವಿದ್ಯುತ್ ಸ್ಥಾವರದಿಂದ ಸುಮಾರು 1200 ಲೀಟರಿನಷ್ಟು ಅಪಾಯಕಾರಿ ರೇಡಿಯೋ ವಿಕಿರಣಯುಕ್ತ ನೀರು ಸಮುದ್ರ ಸೇರಿದೆ ಎಂದು ಟೋಕಿಯೋ ಎಲೆಕ್ಟ್ರಿಕ್ ಕಂಪೆನಿ ಬಹಿರಂಗ ಪಡಿಸಿತು. ಈ ಭೂಕಂಪದಿಂದ ಸತ್ತವರ ಸಂಖ್ಯೆ 9ಕ್ಕೆ ಏರಿತು.

2006: ಇಂಡೋನೇಷ್ಯಾದ ಜಾವಾ ದ್ವೀಪ ಮತ್ತು ಆಸ್ಟ್ರೇಲಿಯಾದ ಕ್ರಿಸ್ಮಸ್ ದ್ವೀಪದಲ್ಲಿ ಶಕ್ತಿಶಾಲಿ ಭೂಕಂಪ ಸಂಭವಿಸಿ, ಸಮುದ್ರದಲ್ಲಿ ಎದ್ದ ಸುನಾಮಿ ಅಲೆಗಳಿಗೆ ಸಿಲುಕಿ 327 ಮಂದಿ ಮೃತರಾಗಿ ಇತರ 40 ಜನ ಕಣ್ಮರೆಯಾದರು.

2006: ಕೃಷಿ ಸಬ್ಸಿಡಿ ಕಡಿತಕ್ಕೆ ಸಂಬಂಧಿಸಿದಂತೆ ತಮ್ಮ ಬಿಗಿ ನಿಲುವನ್ನು ಸಡಿಲಿಸಲು ಸೇಂಟ್ ಪೀಟರ್ಸ್ ಬರ್ಗಿನಲ್ಲಿ ನಡೆದ ಶೃಂಗಸಭೆಯಲ್ಲಿ ಜಿ-8 ರಾಷ್ಟ್ರಗಳು ಸಮ್ಮತಿಸಿದವು. ಇದರಿಂದಾಗಿ ನನೆಗುದಿಗೆ ಬಿದ್ದಿದ್ದ ಡಬ್ಲ್ಯೂಟಿಓ ಮಾತುಕತೆಗೆ ಮರುಜೀವ ದೊರೆಯಿತು.

2006: ಅಮೆರಿಕದ ಬಾಹ್ಯಾಕಾಶ ನೌಕೆ `ಡಿಸ್ಕವರಿ' ಹದಿಮೂರು ದಿನಗಳ ಯಾತ್ರೆಯನ್ನು ಯಶಸ್ವಿಗೊಳಿಸಿ ಫ್ಲೋರಿಡಾದಲ್ಲಿ ಸುರಕ್ಷಿತವಾಗಿ ಧರೆಗಿಳಿಯಿತು.

2006: ಛತ್ತೀಸ್ ಗಢದ ದಂಟೆವಾಡ ಜಿಲ್ಲೆಯಲ್ಲಿ ಎರ್ರಾಬೋರ್ ಸರ್ಕಾರಿ ನಿರಾಶ್ರಿತರ ಶಿಬಿರ ಒಂದರ ಮೇಲೆ ದಾಳಿ ನಡೆಸಿದ ಮಾವೋವಾದಿ ನಕ್ಸಲೀಯರು ಕನಿಷ್ಠ 33 ಮಂದಿ ಗುಡ್ಡಗಾಡು ಜನರನ್ನು ಕೊಂದು, 80ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿದರು. 250ಕ್ಕೂ ಹೆಚ್ಚು ಗ್ರಾಮಸ್ಥರು ಕಣ್ಮರೆಯಾದರು.

1925: ಪ್ರಹ್ಲಾದಕುಮಾರ ಭಾಗೋಜಿ ಜನನ.

1910: ಸಾಹಿತಿ ಕೌಸಲ್ಯಾದೇವಿ ಜನನ.

1837: ಕನ್ನಡಕ್ಕಾಗಿ ದುಡಿದ ವಿದೇಶೀಯರಲ್ಲಿ ಒಬ್ಬ ಪ್ರಮುಖ ವ್ಯಕ್ತಿಯಾಗಿದ್ದ ಬೆಂಜಮಿನ್ ಲೂಯಿ ರೈಸ್ (17-7-1837ರಿಂದ 10-7-1927) ಈ ದಿನ ಬೆಂಗಳೂರಿನಲ್ಲಿ ಬೆಂಜಮಿನ್ ಹೋಲ್ಡ್ ರೈಸ್ ಅವರ ಮಗನಾಗಿ ಜನಿಸಿದರು. ವಿದ್ಯಾ ಇಲಾಖೆಯ ಕಾರ್ಯದರ್ಶಿಯಾಗಿ ಕೊಡಗಿನ ಶಾಸನಗಳನ್ನು ಸಂಗ್ರಹಿಸಿ 1886ರಲ್ಲಿ `ಎಪಿಗ್ರಾಫಿಯ ಕರ್ನಾಟಕ' ಪ್ರಕಟಿಸಿ ಶಿಲಾ ಶಾಸನಗಳ ಪ್ರಕಟಣೆಗೆ ಇವರು ನಾಂದಿ ಹಾಡಿದ್ದರು. ಆ ಬಳಿಕ ಕನ್ನಡ ನಾಡಿನಲ್ಲೆಲ್ಲ ಸಂಚರಿಸಿ ಶಾಸನಗಳನ್ನು ಸಂಗ್ರಹಿಸಿ 12 ಸಂಪುಟಗಳನ್ನು ಪ್ರಕಟಿಸಿದರು. ಅವರು ಪ್ರಕಟಿಸಿದ ಒಟ್ಟು ಶಾಸನಗಳ ಸಂಖ್ಯೆ 8869. ಶಾಸನಗಳಲ್ಲದೆ ಪ್ರಾಚೀನ ಕನ್ನಡ ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ ಅವರು ತಾಳೆಗರಿ ಗ್ರಂಥಗಳನ್ನು ಸಂಗ್ರಹಿಸಿ ಅವುಗಳನ್ನು ಕಾಪಾಡಿ ಇಡಲು `ಓರಿಯಂಟಲ್ ಲೈಬ್ರರಿ' ಎಂಬ ಗ್ರಂಥಭಂಡಾರವನ್ನೂ ಸ್ಥಾಪಿಸಿದ್ದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement