Saturday, July 26, 2008

ಇಂದಿನ ಇತಿಹಾಸ History Today ಜುಲೈ 26

ಇಂದಿನ ಇತಿಹಾಸ

ಜುಲೈ 26

ಕ್ಷಯರೋಗ ತಗುಲಿದ ಶಂಕೆಯಿಂದ ನೈಋತ್ಯ ವೇಲ್ಸಿನಲ್ಲಿರುವ ಸ್ಕಂದ ವೇಲ್ ದೇವಾಲಯದ ಹೋರಿ `ಶಂಬೊ'ವನ್ನು ಕೊಲ್ಲಲು ಆಗಮಿಸಿದ ಸರ್ಕಾರಿ ಅಧಿಕಾರಿಗಳನ್ನು ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಹಿಂದೂ ಸಮುದಾಯದವರು ಪ್ರತಿಭಟಿಸಿ ವಾಪಸ್ ಕಳುಹಿಸಿದರು.

2007: ವಿದ್ಯಾರ್ಥಿಗಳು ಹಾಗೂ ಅಭಿಮಾನಿಗಳ ಜತೆ ಸಂವಾದ ನಡೆಸಲು ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ www.abdulkalam.com ಎಂಬ ಹೊಸ ವೆಬ್ ಸೈಟ್ ಈದಿನ ಆರಂಭಗೊಂಡಿತು. ಚೆನ್ನೈಯ ಅಣ್ಣಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಅಲ್ಲಿನ ಶಿಕ್ಷಕರ ಜತೆಗೆ ಕಲಾಂ ಸಂವಾದ ನಡೆಸಿದ ಸಂದರ್ಭದಲ್ಲಿ ಈ ವೆಬ್ ಸೈಟನ್ನು ಪ್ರಾರಂಭಿಸಲಾಗಿತ್ತು. ರಾಷ್ಟ್ರಪತಿ ಕಚೇರಿಯಲ್ಲಿದ್ದ ಹಿಂದಿನ ವೆಬ್ ಸೈಟಿನ ಎಲ್ಲ ವಿಷಯಗಳು ಈ ವೆಬ್ ಸೈಟಿನಲ್ಲಿ ಲಭಿಸುತ್ತವೆ.

2007: ಸುಮಾರು 700 ಕಿಲೋ ಮೀಟರ್ ದೂರದ ಭೂಪ್ರದೇಶಕ್ಕೆ ಅಪ್ಪಳಿಸುವ ಸಾಮರ್ಥ್ಯವುಳ್ಳ `ಬಾಬರ್' ನೌಕಾ ಕ್ಷಿಪಣಿಯ ಪರೀಕ್ಷೆಯನ್ನು ಪಾಕಿಸ್ತಾನ ಸರ್ಕಾರ ಯಶಸ್ವಿಯಾಗಿ ನಡೆಸಿತು. ಈ ವ್ಯಾಪ್ತಿಯೊಳಗೆ ಬರುವ ಭಾರತದ ಪ್ರಮುಖ ನಗರಗಳ ಮೇಲೆ ದಾಳಿ ಮಾಡುವ ಸಾಮರ್ಥ್ಯ ಇದಕ್ಕಿದೆ. ಭಾರತ-ರಷ್ಯಾ ಜಂಟಿ ಕಾರ್ಯಾಚರಣೆಯ ಅನ್ವಯ ಭಾರತ ನಿರ್ಮಿಸಿದ ಬ್ರಹ್ಮೋಸ್ ಕ್ಷಿಪಣಿಗೆ ಪ್ರತಿಯಾಗಿ ಬಾಬರ್ ಕ್ಷಿಪಣಿಯನ್ನು ಪಾಕ್ ನಿರ್ಮಿಸಿದೆ. 2005ರಲ್ಲಿ 500 ಕಿಲೋ ಮೀಟರ್ ವರೆಗೆ ಕ್ರಮಿಸುವ ಸಾಮರ್ಥ್ಯ ಇದ್ದ ಬ್ರಹ್ಮೋಸ್ ಕ್ಷಿಪಣಿ ಸಾಮರ್ಥ್ಯವನ್ನು 700 ಕಿಲೋ ಮೀಟರ್ಗೆ ಹೆಚ್ಚಿಸಿ ಕಳೆದ ಮಾರ್ಚ್ 22ರಂದು ಭಾರತ ಪರೀಕ್ಷೆ ನಡೆಸಿತ್ತು.

2007: ಉಗ್ರರ ಸಂಘಟನೆ ಲಷ್ಕರ್-ಎ-ತೊಯ್ಬಾಗೆ ಸಹಾಯ ಮಾಡ್ದಿದಕ್ಕಾಗಿ ಅಮೆರಿಕ ಪ್ರಜೆ ಮಹಮದ್ ಫಾರೂಕ್ ಬ್ರೆಂಟ್ ಎಂಬಾತನಿಗೆ ನ್ಯೂಯಾರ್ಕಿನ ಸ್ಥಳೀಯ ನ್ಯಾಯಾಲಯ 15 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿತು. ಬ್ರೆಂಟ್ ನಂತಹ ವ್ಯಕ್ತಿಗಳ ಸಹಾಯದಿಂದಲೇ ಉಗ್ರರ ಸಂಘಟನೆಗಳು ಈ ದೇಶದಲ್ಲಿ ದುಷ್ಕೃತ್ಯ ನಡೆಸಲು ಸಾಧ್ಯವಾಗುತ್ತದೆ ಎಂದು ಶಿಕ್ಷೆಯನ್ನು ಪ್ರಕಟಿಸಿದ ಸಂದರ್ಭದಲ್ಲಿ ಜಿಲ್ಲಾ ನ್ಯಾಯಾಧೀಶ ಲೊರೆಟ್ಟಾ ಹೇಳಿದರು. ಬ್ರೆಂಟ್ 2002ರಲ್ಲಿ ಪಾಕಿಸ್ಥಾನದಲ್ಲಿ ಉಗ್ರರ ತರಬೇತಿ ಪಡೆದುಕೊಂಡು ಅಮೆರಿಕಕ್ಕೆ ವಾಪಸ್ಸಾದ ನಂತರ ಮಹಮದ್ ಅಲ್ ಮುತಜ್ಜಮ್ ಎಂಬ ಹೆಸರಿನಲ್ಲಿ ದುಷ್ಕೃತ್ಯ ನಡೆಸಲು ಆರಂಭಿಸಿದನು. 2005ರಲ್ಲಿ ಬಾಲ್ಟಿಮೋರ್, ಮೇರಿಲ್ಯಾಂಡ್ ಪ್ರದೇಶದಲ್ಲಿ ಚಟುವಟಿಕೆ ನಡೆಸುತ್ತಿದ್ದಾಗ ಈತ ಸೆರೆ ಸಿಕ್ಕಿದ.

2007: ಕ್ಷಯರೋಗ ತಗುಲಿದ ಶಂಕೆಯಿಂದ ನೈಋತ್ಯ ವೇಲ್ಸಿನಲ್ಲಿರುವ ಸ್ಕಂದ ವೇಲ್ ದೇವಾಲಯದ ಹೋರಿ `ಶಂಬೊ'ವನ್ನು ಕೊಲ್ಲಲು ಆಗಮಿಸಿದ ಸರ್ಕಾರಿ ಅಧಿಕಾರಿಗಳನ್ನು ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಹಿಂದೂ ಸಮುದಾಯದವರು ಪ್ರತಿಭಟಿಸಿ ವಾಪಸ್ ಕಳುಹಿಸಿದರು.`ಶಂಬೊ'ವನ್ನು ಕೊಲ್ಲದಂತೆ ದೇವಾಲಯದ ಹಿಂದೂ ಭಕ್ತರು ಸಲ್ಲಿಸಿದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿ, ಹತ್ಯೆಗೆ ಆದೇಶಿಸಿದ ಹಿನ್ನೆಲೆಯಲ್ಲಿ ಪಶುವೈದ್ಯರು ಮತ್ತು ಪೊಲೀಸ್ ಅಧಿಕಾರಿಗಳು ಆಗಮಿಸಿದ್ದರು. ತಮ್ಮನ್ನು ಈಗ ವಾಪಸ್ ಕಳುಹಿಸಿದರೂ ನ್ಯಾಯಾಲಯದಿಂದ ವಾರಂಟ್ ಪಡೆದುಕೊಂಡು ಬಂದು ಹೋರಿಯನ್ನು ವಧಿಸುವುದಾಗಿ ಅಧಿಕಾರಿಗಳು ಪ್ರತಿಭಟನಾಕಾರರಿಗೆ ಹೇಳಿದರು.

2007: ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಅವರು 2007ರ 28 ರಿಂದ ನವೆಂಬರ್ 18 ರವರೆಗೆ ಬೆಂಗಳೂರಿನ ಗಿರಿನಗರದಲ್ಲಿ ಇರುವ ಶಾಖಾ ಮಠದಲ್ಲಿ ಚಾತುರ್ಮಾಸ್ಯ ಕುಳಿತುಕೊಳ್ಳುವರು. 28 ರ ಸಂಜೆ 5 ಗಂಟೆಗೆ ಯಶವಂತಪುರದ ಗಾಯತ್ರಿ ದೇವಸ್ಥಾನದ ಬಳಿ ಚಿದಂಬರ ದೀಕ್ಷಿತ ಸ್ವಾಮೀಜಿ ಅವರ ನೇತೃತ್ವದ್ಲಲಿ ಸ್ವಾಮೀಜಿಗಳು ಪುರ ಪ್ರವೇಶ ಮಾಡುವರು ಎಂದು ಚಾತುರ್ಮಾಸ್ಯ ಸಮಿತಿ ಗೌರವಾಧ್ಯಕ್ಷ ಬಿ.ಕೃಷ್ಣ ಭಟ್ ಹಾಗೂ ಸಂಚಾಲಕ ಕೆ.ಲಕ್ಷ್ಮಿನಾರಾಯಣ ಪ್ರಕಟಿಸಿದರು. ಚಾತುರ್ಮಾಸ್ಯ ಕಾಲದಲ್ಲಿ ಇತರ ಕಾರ್ಯಕ್ರಮಗಳ ಜೊತೆಗೆ ವಿಶೇಷವಾಗಿ ವಾರದ ಎಲ್ಲ ದಿನಗಳಲ್ಲೂ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಗೋ ಯಾತ್ರೆ ನಡೆಯುವುದು. ಈ ಸಂದರ್ಭದಲ್ಲಿ ಭಾರತೀಯ ಗೋವಿನ ಮಹತ್ವ ಸಾರುವ ಪುರ ಸಂಚಲನ ಮತ್ತು ಮನೆ ಬಾಗಿಲಿಗೆ ಗೋ ಸಂದೇಶ ಸಾರಲಾಗುವುದು. ಪ್ರತಿ ಭಾನುವಾರ ನಗರದ ವಿವಿಧ ವಲಯ ಕೇಂದ್ರಗಳಲ್ಲಿ ಗೋ ವಿಚಾರ ಪ್ರಬೋಧಕ, ಗಾನ. ನೃತ್ಯ ಸಮೇತ ಬೃಹತ್ ಸಾರ್ವಜನಿಕ ಸಭೆ ನಡೆಯುವುದು. ವಾರದ ದಿನದಲ್ಲಿ ಭಾರತೀಯ ಗೋ ತಳಿಗಳ ಸಂರಕ್ಷಣೆ, ಸಂವರ್ಧನೆ ಬಗ್ಗೆ ಅರಿವು ಮೂಡಿಸಲು ವಿವಿಧ ಶಾಲಾ ಕಾಲೇಜುಗಳಲ್ಲಿ ವೈಜ್ಞಾನಿಕ ಸಂವಾದ ನಡೆಸಲಾಗುವುದು. ಸೆಪ್ಟೆಂಬರ್ 26 ರಂದು ಸೀಮೋಲ್ಲಂಘನ, ನವೆಂಬರ್ 18 ರಂದು ಕೋಟಿ ನೀರಾಜನ - ಲಕ್ಷ ಮಹಿಳೆಯರು ಗೋಮಾತೆಗೆ ಕೋಟಿ ಸಂಖ್ಯೆಯ ದೀಪ ಬೆಳಗುವರು ಎಂದು ಅವರು ಹೇಳಿದರು.

2007: ಬೆಂಗಳೂರು ಮಹಾತ್ಮ ಗಾಂಧಿ ರಸ್ತೆಯ ಪಬ್ಲಿಕ್ ಯುಟಿಲಿಟಿ ಕಟ್ಟಡದ ಮೊದಲ ಮಹಡಿಯಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಎರಡು ಬಟ್ಟೆ ಮಳಿಗೆಗಳು ಸಂಪೂರ್ಣ ಸುಟ್ಟು ಭಸ್ಮವಾದವು.

2006: ಬೆಂಗಳೂರಿನ ಫ್ರೇಜರ್ ಟೌನ್ ನಿವಾಸಿ, ವೈಟ್ಫೀಲ್ಡ್ ಕುಂದಲ ಹಳ್ಳಿಯ ಅವಿವಾ ಕಸ್ಟಮರ್ ಆಪರೇಷನಲ್ ಸರ್ವೀಸ್ ಉದ್ಯೋಗಿ ತಾನಿಯಾ ಬ್ಯಾನರ್ಜಿ ಅವರನ್ನು ಅಪಹರಿಸಿ ಕೊಲೆ ಮಾಡಿ ಮೃತದೇಹವನ್ನು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಮಾರನಹಳ್ಳಿ ಸಮೀಪ ಹೆದ್ದಾರಿಯಲ್ಲಿ ಎಸೆಯಲಾಯಿತು. ಬೆಂಗಳೂರಿನ ಕಾಲ್ ಸೆಂಟರ್ ಉದ್ಯೋಗಿ ಪ್ರತಿಭಾ ಕೊಲೆ ಪ್ರಕರಣ ಇನ್ನೂ ಹಸಿರಾಗಿರುವಾಗಲೇ ಇನ್ನೊಬ್ಬ ಕಾಲ್ ಸೆಂಟರ್ ಉದ್ಯೋಗಿಯ ಈ ಹತ್ಯೆ ಜನರನ್ನು ಕಂಗೆಡಿಸಿತು.

2006: ಇಂಗ್ಲೆಂಡಿನ ಉತ್ತರ ಯಾರ್ಕ್ ಷೈರ ತಂಡ ಕೌಂಟಿಯಲ್ಲಿ 5 ರನ್ನುಗಳಿಗೆ ಆಲೌಟ್ ಆಯಿತು. ಡಿಶ್ ಫೋರ್ತ್ ತಂಡದ ವಿರುದ್ಧ ಉತ್ತರ ಯಾರ್ಕ್ ಷೈರ್ ತಂಡದ ಎಲ್ಲ ಬ್ಯಾಟ್ಸ್ ಮನ್ ಗಳೂ ಶೂನ್ಯ ಸಂಪಾದನೆ ಮಾಡಿದರು. ಇವರಿಗೆ ಬಂದ ಐದು ರನ್ನುಗಳು ಇತರ ರನ್ನುಗಳಿಂದ ಕೊಡುಗೆಯಾಗಿ ಬಂದವುಗಳು. ನಿಡ್ಡರ್ ಡೇಲ್ ಮತ್ತು ಅಮೆಚೂರ್ ಕ್ರಿಕೆಟ್ ಲೀಗಿನ 112 ವರ್ಷಗಳ ಇತಿಹಾಸದಲ್ಲಿ ಇದು ಅತ್ಯಂತ ಕಡಿಮೆ ಮೊತ್ತವಾಗಿದ್ದು ವಿಸ್ಡನ್ ಅಲ್ಮನಾಕ್ ಪ್ರಕಾರ ಇದು ಅತ್ಯಂತ ಅಪೂರ್ವ ಘಟನೆ. 1931ರರಲ್ಲಿ ಮಿಡ್ ಲ್ಯಾಂಡ್ಸಿನಲ್ಲಿ ಶೆಪ್ ಸ್ಟೋನ್ ಇಲೆವೆನ್ ತಂಡವು 4 ಇತರೆ ರನ್ ಗಳಿಸಿ ಆಲೌಟ್ ಆಗಿತ್ತು.

2006: ಒಲಿಂಪಿಕ್ ಮಹಿಳಾ ಡಿಸ್ಕಸ್ ಚಾಂಪಿಯನ್ ರಷ್ಯಾದ ಕ್ರೀಡಾಪಟು ನತಾಲ್ಯಾ ಸಡೋವಾಗೆ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸದಂತೆ ಎರಡು ವರ್ಷಗಳ ಅವಧಿಯ ನಿಷೇಧ ಹೇರಲಾಯಿತು. ಕಳೆದ ಮೇ 21ರಂದು ಹಾಲೆಂಡಿನ ಹೆಂಗೆಲೋದಲ್ಲಿ ನಡೆದ ಕೂಟ ಒಂದರಲ್ಲಿ ಸಡೋವಾ ನಿಷೇಧಿತ ಸ್ಟೆರಾಯ್ಡ್ ಮೆಥಾಂಡೀನನ್ ಸೇವಿಸಿದ್ದು ಪತ್ತೆಯಾಗಿತ್ತು.

2000: 14 ವರ್ಷದೊಳಗಿನ ಮಕ್ಕಳನ್ನು ಸರ್ಕಾರಿ ನೌಕರಿ, ಮನೆಗೆಲಸಕ್ಕೆ ನೇಮಕ ಮಾಡುವುದಕ್ಕೆ ಕೇಂದ್ರ ಸರ್ಕಾರದಿಂದ ನಿಷೇಧ.

1991: ಕಾವೇರಿ ಜಲ ವಿವಾದದ ಹಿನ್ನೆಲೆಯಲ್ಲಿ ತಮಿಳುನಾಡು ಮತ್ತು ಕರ್ನಾಟಕದಲ್ಲಿ ಬಂದ್.

1958: ತೇಜಸ್ವಿನಿ ನಿರಂಜನ ಜನನ.

1956: ಖ್ಯಾತ ಒರಿಯಾ ಕವಿ, ನಾಟಕಕಾರ, ಪ್ರಬಂಧಕಾರ ಗೋಧಾವರೀಶ್ ಮಿಶ್ರಾ ನಿಧನ.

1945: ಬ್ರಿಟನ್ ಪ್ರಧಾನಿ ಹುದ್ದೆಗೆ ವಿನ್ ಸ್ಟನ್ ಚರ್ಚಿಲ್ ರಾಜೀನಾಮೆ.

1938: ಜಿ.ಜೆ. ಹರಿಜಿತ್ ಜನನ.

1935: ಶೈಲಜಾ ಉಡಚಣ ಜನನ.

1934: ಖ್ಯಾತ ಕಾದಂಬರಿಕಾರ ಎಲ್.ಎಲ್. ಭೈರಪ್ಪ ಅವರು ಲಿಂಗಣ್ಣಯ್ಯ- ಗೌರಮ್ಮ ದಂಪತಿಯ ಮಗನಾಗಿ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಸಂತೆಶಿವರ ಗ್ರಾಮದಲ್ಲಿ ಜನಿಸಿದರು. ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ಬರವಣಿಗೆ ಆರಂಭಿಸಿದ ಭೈರಪ್ಪ ಈವರೆಗೆ 22 ಕಾದಂಬರಿಗಳನ್ನು ಬರೆದಿದ್ದಾರೆ. ನೀಳ್ಗತೆ, ವಿಮರ್ಶಾಕೃತಿ, ಆತ್ಮವೃತ್ತಾಂತವನ್ನೂ ಬರೆದ್ದಿದಾರೆ. ಅವರ ಮೊದಲ ಕಾದಂಬರಿ `ಜಟ್ಟಿ ಮತ್ತು ಮಟ್ಟಿ'ಯಾದರೆ ಇತ್ತೀಚಿನ ಜನಪ್ರಿಯ ಕಾದಂಬರಿ `ಆವರಣ'.

1926: ವಾಗೀಶ್ವರಿ ಶಾಸ್ತ್ರಿ ಜನನ.

1923: ಖ್ಯಾತ ಹಿನ್ನೆಲೆ ಗಾಯಕ ಮುಖೇಶ್ಚಂದ್ರ ಮಾಥುರ್ ಜನನ.

1891: ಖ್ಯಾತ ಬಂಗಾಳಿ ಪ್ರಾಚ್ಯವಸ್ತು ಸಂಶೋಧಕ ರಾಜೇಂದ್ರಲಾಲ್ ಮಿತ್ರ (ರಾಜಾ) ನಿಧನ.

1775: ಮೊದಲ ಪೋಸ್ಟ್ ಮಾಸ್ಟರ್ ಜನರಲ್ ಆಗಿ ಬೆಂಜಮಿನ್ ಫ್ರಾಂಕ್ಲಿನ್ ನೇಮಕ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement