Thursday, November 6, 2008

ಇಂದಿನ ಇತಿಹಾಸ History Today ನವೆಂಬರ್ 06

ಇಂದಿನ ಇತಿಹಾಸ 

ನವೆಂಬರ್ 6

ಬಂಗಾಳ ರಾಜ್ಯದಲ್ಲಿ ದೀರ್ಘಕಾಲ ಆಳ್ವಿಕೆ ನಡೆಸಿದ ಮುಖ್ಯಮಂತ್ರಿ ಜ್ಯೋತಿ ಬಸು ಅವರು 23 ವರ್ಷಗಳ ಆಳ್ವಿಕೆಯ ಬಳಿಕ ತಮ್ಮ ಹುದ್ದೆಯಿಂದ ಕೆಳಗಿಳಿದರು. ಬುದ್ಧದೇವ ಭಟ್ಟಾಚಾರ್ಯ ಅವರು ಬಸು ಉತ್ತರಾಧಿಕಾರಿಯಾದರು.

2007: ಎಂಟು ಕೈಕಾಲುಗಳನ್ನು ಹೊಂದಿದ್ದ ಬಿಹಾರದ ಬಾಲಕಿ ಲಕ್ಷ್ಮಿಯ ದೇಹದ ಅನಗತ್ಯ ಭಾಗಗಳನ್ನು ಬೇರ್ಪಡಿಸುವ ಅತ್ಯಂತ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಈದಿನ ಬೆಳಿಗ್ಗೆ 7 ಗಂಟೆಗೆ ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ ಆರಂಭವಾಗಿ ರಾತ್ರಿಯ ವೇಳೆಗೆ ಬೆನ್ನಹುರಿಯಿಂದ ಅವಳಿ ದೇಹ ಬೇರ್ಪಡಿಸುವ ಕಾರ್ಯ ಯಶಸ್ವಿಯಾಯಿತು. ಬೆನ್ನುಹುರಿಯಲ್ಲಿನ ಹಲವು ನರಮಂಡಲಗಳಿಗೆ ಯಾವುದೇ ಧಕ್ಕೆಯಾಗದಂತೆ ಅವಳಿ ಭಾಗವನ್ನು ಬೇರ್ಪಡಿಸಲಾಯಿತು. ಸುಮಾರು 30 ತಜ್ಞ ವೈದ್ಯರು ಡಾ. ಶರಣ್ ಪಾಟೀಲ ನೇತೃತ್ವದಲ್ಲಿ ಈ ಶಸ್ತ್ರಚಿಕಿತ್ಸೆಯಲ್ಲಿ ಪಾಲ್ಗೊಂಡರು.

2007: ಆಫ್ಘಾನಿಸ್ಥಾನದ ಬಘಲನ್ ನಗರಕ್ಕೆ ಭೇಟಿ ನೀಡಿದ್ದ ಸಂಸತ್ ಸದಸ್ಯರ ನಿಯೋಗದ ಮೇಲೆ  ಆತ್ಮಾಹುತಿ ದಳದ ವ್ಯಕ್ತಿಯೊಬ್ಬ ನಡೆಸಿದ ದಾಳಿಗೆ 90 ಮಂದಿ ಬಲಿಯಾಗಿ, 50 ಜನ ಗಾಯಗೊಂಡರು.  ವಿರೋಧಪಕ್ಷದ ವಕ್ತಾರ ಮುಸ್ತಫಾ ಕಸೆಮಿ
ಸೇರಿದಂತೆ ಐವರು ಸಂಸದರು ಘಟನೆಯಲ್ಲಿ ಮೃತರಾದರು.

2007: ಪಾಕಿಸ್ಥಾನದಲ್ಲಿ ಬರುವ ಜನವರಿಯೊಳಗೆ ರಾಷ್ಟ್ರೀಯ ಚುನಾವಣೆ ನಡೆಯಲಿದ್ದು ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಅವರು ಅಮೆರಿಕದ ಒತ್ತಡಕ್ಕೆ ಮಣಿದು ಶೀಘ್ರವೇ ಸೇನಾ ಸಮವಸ್ತ್ರ ತ್ಯಜಿಸಲು ನಿರ್ಧರಿಸಿದರು.

2007: ಬಹುಮತದ ಬಗ್ಗೆ ತೃಪ್ತಿ, ಸುಭದ್ರತೆ ಬಗ್ಗೆ ಅನುಮಾನ ವ್ಯಕ್ತಪಡಿಸುವ ಅಂತಿಮ ವರದಿಯನ್ನು ಕರ್ನಾಟಕದ ರಾಜ್ಯಪಾಲ ರಾಮೇಶ್ವರ ಠಾಕೂರ್ ರಾಷ್ಟ್ರಪತಿಯವರಿಗೆ ಸಲ್ಲಿಸಿದರು. ಈ ಮಧ್ಯೆ ಬಿಜೆಪಿ ಮತ್ತು ಜೆಡಿ (ಎಸ್) ಪಕ್ಷಗಳಿಗೆ ಸೇರಿದ 125 ಶಾಸಕರು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಸಮ್ಮುಖದಲ್ಲಿ ಪೆರೇಡ್ ನಡೆಸಿ ತಮಗಿರುವ ಬಹುಮತ ಪ್ರದರ್ಶಿಸಿದರು.

2007: ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕತ್ವದ ಜವಾಬ್ದಾರಿ ಹೊತ್ತುಕೊಳ್ಳಲು ಸಚಿನ್ ತೆಂಡೂಲ್ಕರ್ ನಿರಾಕರಿಸಿದರು. ಸಚಿನ್ ಅವರು ಭಾರತ ಟೆಸ್ಟ್ ತಂಡದ ನಾಯಕ ಎಂಬ ಅಧಿಕೃತ ಪ್ರಕಟಣೆ ಹೊರಬೀಳುವ ಎರಡು ದಿನಗಳ ಮೊದಲು ಈ ನಿರ್ಧಾರ ಹೊರಬಿದ್ದಿತು. ರಾಹುಲ್ ದ್ರಾವಿಡ್ ಅವರು ರಾಜೀನಾಮೆ ನೀಡಿದ ಕಾರಣ ಭಾರತ ಏಕದಿನ ಮತ್ತು ಟೆಸ್ಟ್ ತಂಡಗಳ ನಾಯಕ ಸ್ಥಾನ ತೆರವಾಗಿತ್ತು.

2007: ಎಂಟು ವಾರಗಳ ಯೋಗದಿಂದ ಹೃದ್ರೋಗ ತಹಬಂದಿಗೆ ಬರುವುದು ಮಾತ್ರವಲ್ಲ ಮೃತ್ಯುಮುಖಿ ಲಕ್ಷಣಗಳೂ ಕಡಿಮೆಯಾಗುತ್ತವೆ ಎಂದು ಅಧ್ಯಯನದ ವರದಿಯೊಂದು ತಿಳಿಸಿತು. ಅಟ್ಲಾಂಟಾದ ಎಮೊರಿ ವೈದ್ಯಕೀಯ ವಿಶ್ವವಿದ್ಯಾಲಯದ ಸಂಶೋಧಕರು ಎಂಟು ವಾರಗಳ ನಿಯಮಿತ ಯೋಗಾಸನ ನಡೆಸಿ ಅಧ್ಯಯನ ಮಾಡಿದ ಬಳಿಕ ಈ ವಿಚಾರವನ್ನು ಬಹಿರಂಗಪಡಿಸಿದರು. ಸುಮಾರು 50 ಲಕ್ಷ ಅಮೆರಿಕನ್ನರು ಹೃದ್ರೋಗದಿಂದ ಬಳಲುತ್ತಿದ್ದರು. ಪರಿಣಾಮಕಾರಿ ಔಷಧಿಗಳು ಮತ್ತು ಶಸ್ತ್ರಚಿಕಿತ್ಸೆಯಿಂದಲೂ ಸಂಪೂರ್ಣ ಗುಣ ಸಾಧ್ಯವಾಗಿರಲಿಲ್ಲ. ಅವರಲ್ಲಿ 19 ಹೈದ್ರೋಗಿಗಳಿಗೆ ಅಟ್ಲಾಂಟಾದ ಎಮೊರಿ ವೈದ್ಯಕೀಯ ವಿಶ್ವವಿದ್ಯಾಲಯದ ಸಂಶೋಧಕರು ಎಂಟು ವಾರಗಳ ನಿಯಮಿತ ಯೋಗಾಸನ ನೀಡಿ ಫಲಿತಾಂಶ ಪರಿಶೀಲಿಸಿದಾಗ ಅವರಲ್ಲಿ ರೋಗದ ತೀವ್ರತೆ ಕಡಿಮೆಯಾಗಿದ್ದುದು ಕಾಣಿಸಿತು.

2006: ಮೈಸೂರಿನ ಚಾಮುಂಡಿಬೆಟ್ಟದಲ್ಲಿ ವಿರಾಜಮಾನವಾಗಿರುವ 342 ವರ್ಷಗಳ ಇತಿಹಾಸ ಹೊಂದಿರುವ 16 ಅಡಿ ಎತ್ತರ, 25 ಅಡಿ ಉದ್ದದ ಮಹಾನಂದಿಗೆ ಇದೇ ಮೊದಲ ಬಾರಿಗೆ ಭಕ್ತರ ಜೈಕಾರ, ಪುರೋಹಿತರ ಮಂತ್ರಘೋಷಗಳ ಮಧ್ಯೆ ಮಹಾಮಜ್ಜನ ನೆರವೇರಿಸಲಾಯಿತು. ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಬೆಳಗ್ಗೆ 10.45ಕ್ಕೆ ಹಾಲಿನ ಅಭಿಷೇಕ ಮಾಡುವ ಮೂಲಕ ಮಹಾಭಿಷೇಕಕ್ಕೆ ಚಾಲನೆ ನೀಡಿದರು.

2006: ಭಾರತದ ಜೊತೆ ಬಾಹ್ಯಾಕಾಶ ಒಪ್ಪಂದಕ್ಕೆ ರಷ್ಯಾ ಸಹಿ ಹಾಕಿತು. ಇದರೊಂದಿಗೆ ಬಾಹ್ಯಾಕಾಶ ತಂತ್ರಜ್ಞಾನ ವರ್ಗಾವಣೆ ಮತ್ತು ಜಂಟಿ ಬಾಹ್ಯಾಕಾಶ ಅನ್ವೇಷಣೆಗೆ ಹಾದಿ ಸುಗಮಗೊಂಡಿತು.

2005: ವೋಲ್ಕರ್ ವರದಿಯಲ್ಲಿ ಭಾರತದ ವಿದೇಶಾಂಗ ಸಚಿವ ನಟವರ್ ಸಿಂಗ್ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ಮಾಡಲಾದ ಆರೋಪಗಳ ಸತ್ಯಾಸತ್ಯತೆ ಬಯಲಿಗೆ ಎಳೆಯಲು ವಿಶ್ವಸಂಸ್ಥೆಯ ಮಾಜಿ ಉಪ ಕಾರ್ಯದರ್ಶಿ ವೀರೇಂದ್ರ ದಯಾಳ್ ನೇತೃತ್ವದಲ್ಲಿ ತನಿಖೆ ನಡೆಸಲು ಕೇಂದ್ರದ ಯುಪಿಎ ಸರ್ಕಾರ ನಿರ್ಧರಿಸಿತು.

2005: ಭಾರತೀಯ ಗೋ ತಳಿಗಳ ಸಂರಕ್ಷಣೆಗಾಗಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ನೇತೃತ್ವದ 68 ದಿನಗಳ ಕರ್ನಾಟಕ ವ್ಯಾಪಿ `ಭಾರತೀಯ ಗೋ ಯಾತ್ರೆ'ಗೆ ಬೆಂಗಳೂರು ನ್ಯಾಷನಲ್ ಕಾಲೇಜು ಮೈದಾನದಲ್ಲಿ ಚಾಲನೆ ನೀಡಲಾಯಿತು.

2000: ಬಂಗಾಳ ರಾಜ್ಯದಲ್ಲಿ ದೀರ್ಘಕಾಲ ಆಳ್ವಿಕೆ ನಡೆಸಿದ ಮುಖ್ಯಮಂತ್ರಿ ಜ್ಯೋತಿ ಬಸು ಅವರು 23 ವರ್ಷಗಳ ಆಳ್ವಿಕೆಯ ಬಳಿಕ ತಮ್ಮ ಹುದ್ದೆಯಿಂದ ಕೆಳಗಿಳಿದರು. ಬುದ್ಧದೇವ ಭಟ್ಟಾಚಾರ್ಯ ಅವರು ಬಸು ಉತ್ತರಾಧಿಕಾರಿಯಾದರು.

1967: ಓಹಾಯೋದ ಡೇಟನ್ನಿನಲ್ಲಿ `ಫಿಲ್ ಡೊನಾಹ್ಯೂ ಟಿ.ವಿ. ಟಾಕ್ ಶೋ' ಆರಂಭವಾಯಿತು. ಈ ಶೋ 29 ವರ್ಷಗಳ ಕಾಲ ಪ್ರಸಾರಗೊಂಡಿತು.

1955: ಸಾಹಿತಿ ವೆಂಕಟಸ್ವಾಮಿ ಎಂ. ಜನನ.

1951: ಸಾಹಿತಿ ಮಧು ವೆಂಕಾರೆಡ್ಡಿ ಜನನ.

1945: ಸಾಹಿತಿ ಶ್ರೀನಿವಾಸ ಉಡುಪ ಜನನ.

1936: `ದೇಶಾಂಶ ಹುಡಗಿ' ಕಾವ್ಯನಾಮದ ಸಾಹಿತಿ ಶಾಂತಪ್ಪ ದೇವರಾಯ ಅವರು ಶರಣಪ್ಪ ದೇವರಾಯ- ಭೀಮಾಬಾಯಿ ದಂಪತಿಯ ಮಗನಾಗಿ ಬೀದರ್ ಜಿಲ್ಲೆಯ ಹುಮನಾಬಾದ ತಾಲ್ಲೂಕಿನ ಹುಡಗಿ ಗ್ರಾಮದಲ್ಲಿ ಜನಿಸಿದರು.

1931: ಸಾಹಿತಿ ಟೇಕಲ್ ಗೋಪಾಲಕೃಷ್ಣ ಜನನ.

1888: ಮಹಾತ್ಮಾ ಗಾಂಧಿ ಅವರನ್ನು ಲಂಡನ್ನಿನಲ್ಲಿ ಕಾನೂನು ವಿದ್ಯಾರ್ಥಿಯಾಗಿ ದಾಖಲು ಮಾಡಿಕೊಳ್ಳಲಾಯಿತು. ಅವರು `ಇನ್ನರ್ ಟೆಂಪಲ್' ನ ಸದಸ್ಯರೂ ಆದರು. ಆದರೆ 1922ರಲ್ಲಿ ಅವರನ್ನು ಬ್ರಿಟಿಷ್ ರಾಜ್ ವಿರುದ್ಧ ಅತೃಪ್ತಿ ಪ್ರಚೋದಿಸಿದ್ದಕ್ಕಾಗಿ ಡಿಬಾರ್ ಮಾಡಲಾಯಿತು. 100 ವರ್ಷಗಳ ನಂತರ ಕಾನೂನು ವಿದ್ಯಾರ್ಥಿಯಾಗಿ ದಾಖಲು ಮಾಡಿಕೊಂಡ ಶತಮಾನೋತ್ಸವ ಸಂದರ್ಭದಲ್ಲಿ ಅವರನ್ನು `ಬಾರ್ - ಅಟ್- ಲಾ' ಆಗಿ ಮರು ದಾಖಲು ಮಾಡಿಕೊಳ್ಳಲಾಯಿತು.

1854: ಅಮೆರಿಕನ್ ಬ್ರ್ಯಾಂಡ್ ಮಾಸ್ಟರ್ ಹಾಗೂ ಸೇನಾ ಕವಾಯತುಗಳ ಸಂಗೀತ ರಚನೆಕಾರ ಜಾನ್ ಫಿಲಿಪ್ ಸೌಸಾ (1854-1932) ಹುಟ್ಟಿದ ದಿನ. ತನ್ನ ವಾದ್ಯವೊಂದಕ್ಕೆ ಈತ `ಸೌಸಾಫೋನ್' ಎಂದೇ ಹೆಸರಿಟ್ಟ.

1814: ಸ್ಯಾಕ್ಸೋಫೋನ್ ಸಂಶೋಧಕ ಬೆಲ್ಜಿಯನ್- ಫ್ರೆಂಚ್ನ ಆಂಟೋನಿ- ಜೋಸೆಫ್ ಸ್ಯಾಕ್ಸ್ (1814-1994) ಹುಟ್ಟಿದ ದಿನ. `ಸ್ಯಾಕ್ಸೋಫೋನ್' ವಾದ್ಯೋಪಕರಣಕ್ಕೆ ಈತನ ಹೆಸರನ್ನೇ ಇಡಲಾಗಿದೆ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement