ಆರೋಗ್ಯಕ್ಕಾಗಿ ಸೂರ್ಯ ನಮಸ್ಕಾರ
![](https://blogger.googleusercontent.com/img/b/R29vZ2xl/AVvXsEj3vgkRfTkb3gIAzp5mZj4_U77FsXIbhhJgUgzFZnbRJETq58mYBTz5rL5SgByK6JtT-n8DVUsn7tNgxen9W7XIRadeA1RvVGg4hQsP8mq7leUkDvah_niYu6rf1e4pHAUdpbeGC4bDFNbL/s400/surya-Namaskar-1.jpg)
ಮಂತ್ರ ಸಹಿತವಾಗಿ ಸೂರ್ಯನುದಯಿಸುವ ಹೊತ್ತಿನಲ್ಲಿ 108 ಬಾರಿ ಸಹಸ್ರಾರು ಮಂದಿ ಒಟ್ಟಿಗೆ ಸಾಮೂಹಿಕವಾಗಿ ಮಾಡುವ ಈ 'ಭಾಸ್ಕರ ನಮನ' ನೋಡುಗರ ಕಣ್ಣಿಗೂ ಒಂದು ಹಬ್ಬ.
ನೆತ್ರಕೆರೆ ಉದಯಶಂಕರ
ಒಂದು ವರ್ಷದ ಹಿಂದೆ ನವದೆಹಲಿಯ ವೈದ್ಯರ ತಂಡವೊಂದು ಚಳಿಗಾಲದಲ್ಲಿ ಹೃದಯಾಘಾತದ ಪ್ರಮಾಣ ಹೆಚ್ಚು ಎಂಬ ಸಂಗತಿಯನ್ನು ಬಹಿರಂಗಪಡಿಸಿತು. ಈ ವೈದ್ಯರ ತಂಡದ ಅಧ್ಯಯನದ ಪ್ರಕಾರ ಡಿಸೆಂಬರ್ - ಜನವರಿ ತಿಂಗಳ ಚಳಿ
ಗಾಲ ಹೃದ್ರೋಗಿಗಳಿಗೆ ತುಂಬಾ ಅಪಾಯಕಾರಿಯಂತೆ. ರಕ್ತನಾಳಗಳು ದೇಹದ ಬಿಸಿ ಕಾಯ್ದುಕೊಳ್ಳಲು ಅಸಮರ್ಥವಾಗುವುದರಿಂದ ಈ ಅವಧಿಯಲ್ಲಿ ಹೃದ್ರೋಗ ಪ್ರಮಾಣ ಹೆಚ್ಚು. ದೇಹದ ಬಿಸಿ ಕಾಯ್ದುಕೊಳ್ಳಲು ರಕ್ತನಾಳಗಳು ಸಂಕುಚಿತಗೊಳ್ಳುವುದರಿಂದ ಹೃದಯದ ಮೇಲಿನ ಹೊರೆ ಹೆಚ್ಚಿ ಅಸ್ತಮಾ, ಫ್ಲೂನಂತಹ ಕಾಯ್ದೆಗಳು ಹೆಚ್ಚುತ್ತವೆ ಎಂಬುದು ಅವರ ವಿಶ್ಲೇಷಣೆ.
ಈ ಋತುವಿನಲ್ಲಿನ ಸದಾ ಮೋಡ ಕವಿದ ವಾತಾವರಣ ಹಾಗೂ ಸೂರ್ಯನ ಬಿಸಿಲು ದೇಹಕ್ಕೆ ಬೀಳದೇ ಇರುವುದು ಕೂಡಾ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ ಈ ಸಮಯದಲ್ಲಿ ಮಧ್ಯಾಹ್ನದ ವೇಳೆಗಾದರೂ ಬಿಸಿಲಿಗೆ ಮೈ ಒಡ್ಡುವುದರಿಂದ ಖಿನ್ನತೆಯಂತಹ ಸಮಸ್ಯೆಯಿಂದ ಪಾರಾಗಬಹುದು ಎಂಬುದು ಅವರ ಸಲಹೆ.
![](https://blogger.googleusercontent.com/img/b/R29vZ2xl/AVvXsEglDc4moBeP1SEz5uGqbIbP4igCFcTEshvQQNYtn5NduNCiAu79NtoaHJvt01tnC5gMoXzeRe8wZCg1PG9lKEhwn7hphukppHBjZoJJc-nT-5NG6sMZFu7ThpBV6AzGJrxD3QPEK_KSFbOC/s320/Surya-Namaskar-2.jpg)
ಇದು ಹೊಸ ಸಂಶೋಧನೆ ಏನಲ್ಲ. 19ನೆಯ ಶತಮಾನದಲ್ಲೇ ಡಾ. ನೀಲ್ಸ್ ಫಿನ್ಸನ್ ಎಂಬ ವ್ಯಕ್ತಿ ತನ್ನ ವಿದ್ಯಾರ್ಥಿದೆಸೆಯಿಂದಲೇ ಸೂರ್ಯನ ಬೆಳಕಿನಲ್ಲಿ ಇರುವ ಶಕ್ತಿ ಕ್ಷಯರೋಗದ ಕ್ರಿಮಿಗಳನ್ನು ನಾಶಮಾಡಬಲ್ಲುದು ಎಂದು ಪ್ರಾಯೋಗಿಕವಾಗಿ ತೋರಿಸಿ ನೊಬೆಲ್ ಪ್ರಶಸ್ತಿಯನ್ನೇ ಪಡೆದಿದ್ದರು.
ವಿಜ್ಞಾನಿಗಳು ವಿವಿಧ ಅಧ್ಯಯನಗಳನ್ನು ಮಾಡಿ ಸೂರ್ಯನ ಬಿಸಿಲಿಗೆ ಎಂತೆಂತಹ ಶಕ್ತಿ ಉಂಟು ಎಂಬ ದೊಡ್ಡ ಪಟ್ಟಿಯನ್ನೇ ಮಾಡಿಟ್ಟಿದ್ದಾರೆ. ಅದರ ಪ್ರಕಾರ ದೇಹಕ್ಕೆ ಅತ್ಯಗತ್ಯವಾದ ವಿಟಮಿನ್ 'ಡಿ'ಯನ್ನು ಚರ್ಮದಲ್ಲಿ ತಯಾ
ರಿಸುವ ಕೆಲಸವನ್ನು ಮಾಡುವುದು ಸೂರ್ಯನ ಬೆಳಕೇ ಹೊರತು ಬೇರಾವುದೂ ಅಲ್ಲ.
ಎಲುಬಿನ ಕಾಯಿಲೆಗಳಾದ ರಿಕೆಟ್ಸ್, ಎಲುಬಿನ ನಿತ್ರಾಣ, ಸಕ್ಕರೆ ಸಮಸ್ಯೆಗಳನ್ನು ಸೂರ್ಯನ ಬಿಸಿಲು ನಿವಾರಿಸುತ್ತದೆ. ದೂಳಿನಲ್ಲಿರುವ ರೋಗಾಣುಗಳನ್ನು ಕೊಲ್ಲುತ್ತದೆ. ದೇಹದಲ್ಲಿ ಬಿಳಿ ಹಾಗೂ ಕೆಂಪು
ರಕ್ತ ಕಣಗಳು ಹುಟ್ಟುವಂತೆ ಮಾಡಿ ಹಲವು ಬಗೆಯ ಕ್ಯಾನ್ಸರ್ ನಿವಾರಣೆಗೆ ಸಹಕರಿಸುತ್ತದೆ, ರಕ್ತದ ಒತ್ತಡ ನಿವಾರಿಸುತ್ತದೆ,
ಗಾಯಗಳನ್ನು ಬೇಗನೆ ಗುಣಗೊಳಿಸುತ್ತದೆ...
ಹೀಗೆ ಸೂರ್ಯನ ಬೆಳಕಿನ ಉಪಯೋಗದ ಪಟ್ಟಿ ಒಂದೆರಡಲ್ಲ, ಬೇಗನೆ ಮುಗಿಯಲಾಗದಂತಹುದು. ಸೂರ್ಯ ಉದಯಿಸದೇ ಇದ್ದರೆ ಜಗತ್ತಿನ ಯಾವ ಜೀವಿಯಾಗಲೀ, ಗಿಡಮರಗಳಾಗಲೀ ತಮ್ಮ ಚಟುವಟಿಕೆಗಳನ್ನು ಮಾಡುವಂತೆಯೇ ಇಲ್ಲ. ಭೂಮಿಯ ಸಕಲ ಚೈತನ್ಯಕ್ಕೆ ಈ ಸೂರ್ಯನೇ ಮೂಲ.
![](https://blogger.googleusercontent.com/img/b/R29vZ2xl/AVvXsEguKdmIGS_8VpADCG5sPYb4B8Cy_LBH_jd-8nxWwKvEv6sUG2G9cBgQwgL8EnYMEPaDCCGnfxyts5mkze15Md3O-7Gnmh2Mgrq-IbAVZ-32oy7V2kfqj1SIkThN-Vt_R1KMbyzQHUipjvIN/s320/surya-Namaskar-3.jpg)
ಇದನ್ನು ಕಂಡುಕೊಂಡೇ ನಮ್ಮ ಹಿರಿಯರು ಮುಂಜಾನೆಯ ವೇಳೆಯಲ್ಲಿ ಸೂರ್ಯನಿಗೆ ಅಭಿಮುಖವಾಗಿ ನಿಂತು ಅರ್ಘ್ಯ ಕೊಡುವ ಹಾಗೂ ಸುಮಾರು 13 ಬಗೆಯ ಯೋಗಾಸನಗಳನ್ನು ಒಳಗೊಂಡ ಸೂರ್ಯ ನಮಸ್ಕಾರವನ್ನು ಮುಂಜಾನೆ ಹಾಗೂ ಸಂಜೆ ಸೂರ್ಯೋದಯ, ಸೂರ್ಯಾಸ್ತದ ವೇಳೆಯಲ್ಲಿ ಮಾಡುವುದನ್ನು ರೂಢಿ ಮಾಡಿಕೊಂಡರು.
ಇದರಿಂದ ದೇಹ- ಮನಸ್ಸುಗಳಿಗೂ ಉಲ್ಲಾಸ, ಬಡವರ ಆರೋಗ್ಯಕ್ಕೂ ಒಂದು ರಕ್ಷಾ ಕವಚ! ಈ ವೇಳೆಯ ಎಳೆ ಬಿಸಿಲಂತೂ ಅತ್ಯಂತ ಅದ್ಭುತವಾದ ಶಕ್ತಿಯನ್ನು ಪಡೆದಿದೆ ಎಂಬುದನ್ನು ಅವರು ಅರ್ಥ ಮಾಡಿಕೊಂಡಿದ್ದರು.
ಬೆಂಗಳೂರಿನ ಕಲ್ಯಾಣನಗರದ ಎಚ್.ಬಿ.ಆರ್. ಬಡಾವಣೆಯ ಸತ್ಸಂಗ ಫೌಂಡೇಷನ್ ಆರೋಗ್ಯ ರಕ್ಷಣೆ ಹಾಗೂ ಲೋಕಶಾಂತಿಗಾಗಿ ಸೂರ್ಯ ನಮಸ್ಕಾರವನ್ನು ಜನಪ್ರಿಯಗೊಳಿಸುವ ಕೆಲಸವನ್ನು ಹಲವಾರು ವರ್ಷಗಳಿಂದ ಮಾಡುತ್ತಿದ್ದು, ಸಾಮೂಹಿಕ ಸೂರ್ಯ ನಮಸ್ಕಾರ ಮತ್ತು ಸೂರ್ಯ ಯಜ್ಞ ಅವುಗಳಲ್ಲಿ ಒಂದು.
ಪ್ರತಿವರ್ಷ ರಥ ಸಪ್ತಮಿಯ ಸಂದರ್ಭದಲ್ಲಿ ಈ ಸೂರ್ಯ ನಮಸ್ಕಾರ- ಸೂರ್ಯ ಯಜ್ಞವನ್ನು ಸತ್ಸಂಗ ಫೌಂಡೇಷನ್ ಸಂಘಟಿಸುತ್ತದೆ. ಮಂತ್ರ ಸಹಿತವಾಗಿ ಸೂರ್ಯನುದಯಿಸುವ ಹೊತ್ತಿನ
ಲ್ಲಿ 108 ಬಾರಿ ಸಹಸ್ರಾರು ಮಂದಿ ಒಟ್ಟಿಗೆ ಸಾಮೂಹಿಕವಾಗಿ ಮಾಡುವ ಈ 'ಭಾಸ್ಕರ ನಮನ' ನೋಡುಗರ ಕಣ್ಣಿಗೂ ಒಂದು ಹಬ್ಬ. ಹತ್ತು ವರ್ಷ ಮೇಲ್ಪಟ್ಟ ಎಲ್ಲ ಪುರುಷರು, ಮಹಿಳೆಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು.
ಈ ವರ್ಷ ಫೆಬ್ರುವರಿ 1ರ ಭಾನುವಾರ ಮುಂಜಾನೆ 6.30 ಗಂಟೆಗೆ ಕಲ್ಯಾಣ ನಗರ ಎಚ್.ಬಿ.ಆರ್. ಬಡಾವಣೆಯ ಸಿ.ಎಂ.ಆರ್. ನ್ಯಾಷನಲ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಸೂರ್ಯ ನಮಸ್ಕಾರ- ಸೂರ್ಯ ಯಜ್ಞ ನಡೆಯುತ್ತದೆ.
ಆಸಕ್ತರು ಡಾ. ಶ್ಯಾಮ್ ಪ್ರಸಾದ್ (ಫೋನ್: 25443636), ನಾಗಮಣಿ (9449853341), ಸೀತಾರಾಮ (9945188081), ಸೌಮ್ಯ (9902326728) ಅವರನ್ನು ಸಂಪರ್ಕಿಸಬಹುದು
![](https://blogger.googleusercontent.com/img/b/R29vZ2xl/AVvXsEimagEpOdlGin6Uy9H9rHd_CkCXTCVrr0cmJRTgp2CHKBvPiDZKUMyXKxwORoB6n33FyXGlhtAE-QusPi1FMD4FQTa3lcwg1ZEpbBw2rRXmNy1uw94SyB6l0hpBel93K-T8s5i_fFuaKId_/s400/surya-namaskar-4.jpg)
No comments:
Post a Comment