My Blog List

Monday, April 6, 2009

ಇಂದಿನ ಇತಿಹಾಸ History Today ಏಪ್ರಿಲ್ 02

ಇಂದಿನ ಇತಿಹಾಸ

ಏಪ್ರಿಲ್ 2

ಸಾಲೊಮನ್ ದ್ವೀಪದಲ್ಲಿ ಸಂಭವಿಸಿದ ಸುನಾಮಿ ಹಾಗೂ ಜಲಪ್ರಳಯದಲ್ಲಿ ಹಲವು ಪಟ್ಟಣಗಳು ನಾಮಾವಶೇಷವಾಗಿ 15 ಮಂದಿ ಮೃತರಾದರು. ಬೆಳಗ್ಗೆ 7.40ಕ್ಕೆ (ಭಾರತೀಯ ಕಾಲಮಾನ ನಸುಕಿನ 2.10) ಸಾಗರಗರ್ಭದಲ್ಲಿ ರಿಕ್ಟರ್ ಮಾಪಕದಲ್ಲಿ 8 ಪಾಯಿಂಟ್ ತೀವ್ರತೆಯ ಭೂಕಂಪ ದೈತ್ಯ ಸುನಾಮಿ ಅಲೆಗಳನ್ನು ಸೃಷ್ಟಿಸಿತು. ಐದು ಮೀಟರ್ ಎತ್ತರದ ರಕ್ಕಸ ಅಲೆಗಳು ಪೂವ ತೀರಕ್ಕೆ ಅಪ್ಪಳಿಸಿ ಹಲವು ಹಳ್ಳಿ, ಪಟ್ಟಣಗಳನ್ನು ಹೇಳಹೆಸರಿಲ್ಲದಂತೆ ಕೊಚ್ಚಿ ಹಾಕಿದವು.


2008: ಕರ್ನಾಟಕ ವಿಧಾನಸಭೆಗೆ ಚುನಾವಣೆ ಘೋಷಣೆಯಾಯಿತು. ಇದರೊಂದಿಗೆ ಕ್ಷೇತ್ರ ಮರುವಿಂಗಡಣೆ ಅಡಿಯಲ್ಲಿ ವಿಧಾನಸಭಾ ಚುನಾವಣೆ ನಡೆಯುವ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಯಿತು. ಮೇ ತಿಂಗಳ 10, 16 ಮತ್ತು 22ರಂದು ಮೂರು ಹಂತಗಳಲ್ಲಿ ಮತದಾನ ನಡೆಯಲಿದ್ದು, ಮೇ 25ಕ್ಕೆ ಫಲಿತಾಂಶ ಪ್ರಕಟಣೆಯಾಗುವುದು. 28ಕ್ಕೆ ಹೊಸ ವಿಧಾನಸಭೆ ಅಸ್ತಿತ್ವಕ್ಕೆ ಬರುವುದು ಮತ್ತು ಆರು ತಿಂಗಳ ಅವಧಿಯ ರಾಷ್ಟ್ರಪತಿ ಆಳ್ವಿಕೆ ಕೊನೆಗೊಳ್ಳುವುದು ಎಂದು ಮುಖ್ಯ ಚುನಾವಣಾ ಆಯುಕ್ತ ಎನ್.ಗೋಪಾಲಸ್ವಾಮಿ ಪ್ರಕಟಿಸಿದರು. 
2008: ರಾಜ್ಯ ಸರ್ಕಾರಿ ನೌಕರರಿಗೆ ಶೇಕಡಾ 5.25ರಷ್ಟು ತುಟ್ಟಿ ಭತ್ಯೆಯನ್ನು ಹೆಚ್ಚಿಸಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿತು. ಕೇಂದ್ರ ಸರ್ಕಾರ ಇತ್ತೀಚೆಗೆ ತನ್ನ ನೌಕರರಿಗೆ ಶೇ 6ರಷ್ಟು ಹೆಚ್ಚಿಸಿದ ಹಿನ್ನೆಲೆಯಲ್ಲಿ ಈ ಹೆಚ್ಚಳ ಮಾಡಲಾಯಿತು.

2008:  ತಮ್ಮ ಹೆಸರಿನ ಜೊತೆಗೆ ಅಂಟಿಕೊಂಡ `ಮಖ್ದೂಮ್' ಎಂಬ ಪದವನ್ನು ತೆಗೆದುಹಾಕಲು ಪಾಕಿಸ್ಥಾನದ ಪ್ರಧಾನಿ ಯೂಸಫ್ ರಾಜಾ ಜಿಲಾನಿ ನಿರ್ಧರಿಸಿದರು. ಹಿಂದಿನ ದಿನ ಝುಲ್ಫೀಕರ್ ಆಲಿ ಭುಟ್ಟೊ ಅವರ ಸಾಕ್ಷ್ಯಚಿತ್ರ ಬಿಡುಗಡೆಯ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, `ಮಖ್ದೂಮ್' ಎಂಬ ಪದ ಜನರಿಂದ ಸೇವೆ ಪಡೆಯವವನು ಎಂಬ ಗೌರವ ಹೊಂದಿರುವಂತದ್ದು. ಆದರೆ ತಾನು ಈಗ ಜನ ಸೇವಕನಾಗಿರುವುದರಿಂದ ನನ್ನ ಹೆಸರಿನ ಮುಂದೆ ಈ ಪದ ಅನ್ವರ್ಥಕ ಎನಿಸುವುದಿಲ್ಲ. ನಾನೀಗ `ಖದೀಮ್' (ಸೇವಕ) ಎಂದು ಹೇಳಿದರು. ಯಾರು ಧಾರ್ಮಿಕ ಮುಖಂಡರಿರುತ್ತಾರೊ ಅಂಥವರನ್ನು `ಮಖ್ದೂಮ್' ಎಂಬ ವಿಶೇಷಣದೊಂದಿಗೆ ಗೌರವಪೂರ್ವಕವಾಗಿ ಕರೆಯಲಾಗುತ್ತದೆ. ಸೈಯ್ಯದ್ ರಾಜಾ ಜಿಲಾನಿ ಖ್ಯಾತ ಸೂಫಿ ಸಂತ ಮುಲ್ತಾನ್ ಪರಂಪರೆಯ ಅನುವಂಶೀಯರಾಗಿದ್ದರಿಂದ ಅವರ ಹೆಸರಿಗೆ ಈ ವಿಶೇಷಣ ಅಂಟಿಕೊಂಡಿತ್ತು.

2008: ವಿವಾಹಿತ ಮಹಿಳೆಯೊಬ್ಬಳು ಪರಪುರುಷನೊಂದಿಗೆ ವ್ಯಭಿಚಾರ ನಡೆಸಿದ್ದಾಳೆ ಎಂಬ ಆರೋಪದ ಮೇರೆಗೆ ಮಹಿಳೆ ಹಾಗೂ ಆಕೆಯ ಪ್ರಿಯಕರನನ್ನು ಕಲ್ಲಿನಿಂದ ಹೊಡೆದು ಸಾಯಿಸಿದ ಅಮಾನವೀಯ ಘಟನೆ ಪಾಕಿಸ್ಥಾನದಿಂದ ವರದಿಯಾಯಿತು. ತಾಲಿಬಾನ್ ಗಳ ಭದ್ರಕೋಟೆ ಎನಿಸಿದ ಅಘ್ಘಾನಿಸ್ಥಾನ ಗಡಿ ಭಾಗದ ಮೊಹಮಂದ್ ಬುಡಕಟ್ಟು ಪ್ರದೇಶದಲ್ಲಿ ಇಂತಹದೊಂದು ಖಾಜಿ ನ್ಯಾಯ ನೀಡಲಾಯಿತು. ತಾಲಿಬಾನ್ ಉಗ್ರವಾದಿಗಳು ಈ ಕ್ರೂರ ಕೃತ್ಯ ಎಸಗಿದರು. ಒಕ್ಕೂಟ ಆಡಳಿತ ವ್ಯವಸ್ಥೆಯಡಿ ನಿಯಂತ್ರಣದಲ್ಲಿದ್ದ ಈ ಗಡಿ ಭಾಗದಲ್ಲಿ ನಡೆದ ಮೊದಲ ಘಟನೆ ಇದು. ಮಹಿಳೆಯನ್ನು ಶಾನೊ ಎಂದು ಗುರುತಿಸಲಾಗಿದ್ದು ಈಕೆ ಮೊಹಮಂದ್ ಪ್ರದೇಶಕ್ಕೆ ಸೇರಿದವಳು. ಅನ್ಯ ಪುರುಷನ ಮೋಹಪಾಶಕ್ಕೆ ಸಿಲುಕಿದ್ದ ಈಕೆ ಬಾರಾ ಪ್ರದೇಶದ ಮಾಲಿಕ್ ದೀನ್ ಖೇಲ್ ನ ದೌಲತ್ ಖಾನ್ ಎಂಬುವನೊಂದಿಗೆ ಮಾರ್ಚ್ 15ರಂದು ಮನೆ ಬಿಟ್ಟು ಓಡಿ ಹೋಗಿದ್ದಳು. ಕಲ್ಲು ಹೊಡೆದು ಸಾಯಿಸಿದ ಪ್ರದೇಶದಲ್ಲೇ ಶಾನೊಳ ಅಂತ್ಯ ಸಂಸ್ಕಾರ ನಡೆಸಲಾಯಿತು. 

2008: ಮಲೇಷ್ಯಾದ ರೊಸ್ಲಾನ್ ನಗಾಹ್ (44)  ಎಂಬ ವ್ಯಾಪಾರಿಯೊಬ್ಬ ಕೇವಲ ಮೂರು ನಿಮಿಷದಲ್ಲಿ ತನ್ನ ಇಬ್ಬರು ಪತ್ನಿಯರಾದ ನಾರ್ಹಾಯತಿ ಇಸ್ಮಾಯಿಲ್ (46) ಮತ್ತು ಮಸ್ಟುರಾ ಅಹ್ಮದ್ (35) ಎಂಬವರಿಗೆ ವಿವಾಹ ವಿಚ್ಛೇದನ ನೀಡಿದ ಘಟನೆ ಕ್ವಾಲಾಲಂಪುರದ ಇಸ್ಲಾಮಿಕ್ ನ್ಯಾಯಾಲಯದಲ್ಲಿ ಹಿಂದಿನ ದಿನ ಘಟಿಸಿತು. ತನ್ನ ಪತ್ನಿಯರಿಗೆ ಪ್ರತ್ಯೇಕವಾಗಿ `ತಲಾಖ್' ಕೊಡುವ ಮೂಲಕ ಈತ ವಿಚ್ಛೇದನ ನೀಡಿದ ಎಂದು ಮಾಧ್ಯಮಗಳು ಈದಿನ ವರದಿ ಮಾಡಿದವು. ಪತಿಯಾಗಿ ಹಣಕಾಸಿನ ನೆರವು ಸೇರಿದಂತೆ ಯಾವುದೇ ಕರ್ತವ್ಯವನ್ನು ಸರಿಯಾಗಿ ಪಾಲಿಸದ ಕಾರಣಕ್ಕಾಗಿ ಈ ವ್ಯಾಪಾರಿಗೆ ಇಬ್ಬರೂ ಪತ್ನಿಯರು ವಿಚ್ಛೇದನದ ನೋಟಿಸ್ ಜಾರಿ ಮಾಡಿದ್ದರು.

2008: ಆರು ಜನರ ಸಾವಿಗೆ ಕಾರಣವಾದ ಅನಿಲ ಸ್ಫೋಟ ಘಟನೆಯೊಂದರ ಬಗ್ಗೆ ವರದಿ ಮಾಡದಿರಲು ಕಂಪೆನಿಯೊಂದರಿಂದ ಲಂಚ ಪಡೆದ ಆರೋಪಕ್ಕಾಗಿ ಇಬ್ಬರು ಚೀನಿ ಪತ್ರಕರ್ತರಿಗೆ ಸ್ಥಳೀಯ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿತು. ಈ ಪತ್ರಕರ್ತರಿಗೆ ಕ್ರಮವಾಗಿ ಆರು ಮತ್ತು ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಎರಡು ವರ್ಷಗಳ ಹಿಂದೆ ಮಂಗೋಲಿಯಾ ಸ್ವಾಯತ್ತಾಧಿಕಾರ ಪ್ರಾಂತ್ಯದಲ್ಲಿ ಈ ಸ್ಫೋಟ ಸಂಭವಿಸಿತ್ತು.

2008: ಹೊಗೇನಕಲ್ ಯೋಜನೆಯನ್ನು ಮುಂದುವರೆಸದಂತೆ ತಮಿಳುನಾಡು ಸರ್ಕಾರಕ್ಕೆ ಆದೇಶಿಸಲು ಕೋರಿ ಹೈಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಯಿತು. ಹೊಗೇನಕಲ್ ಬಳಿ ಗಡಿ ರೇಖೆ ಕುರಿತು ತಮಿಳುನಾಡು ಹಾಗೂ ಕರ್ನಾಟಕ ರಾಜ್ಯಗಳು ನಡೆಸಬೇಕಾಗಿದ್ದ ಜಂಟಿ ಸಮೀಕ್ಷೆಯನ್ನು ಕಳೆದ ಎರಡು ವರ್ಷಗಳಿಂದ ತಮಿಳುನಾಡು ಸರ್ಕಾರ ಒಂದಿಲ್ಲೊಂದು ಕಾರಣ ನೀಡಿ ಮುಂದೂಡುತ್ತಿದೆ. ಈ ಹಿನ್ನೆಲೆಯಲ್ಲಿ ಜಂಟಿ ಸಮೀಕ್ಷೆ ನಡೆಸುವವರೆಗೆ ಈ ಯೋಜನೆಯ ಯಥಾಸ್ಥಿತಿ ಕಾಪಾಡುವಂತೆ ಆದೇಶಿಸಬೇಕು ಎಂದು ಚಾಮರಾಜನಗರದ ಸಿ.ಎಸ್. ಗೋವಿಂದರಾಜು ಹಾಗೂ ಇತರರು ನ್ಯಾಯಾಲಯವನ್ನು ಕೋರಿದರು.

2007: ಸಾಲೊಮನ್ ದ್ವೀಪದಲ್ಲಿ ಸಂಭವಿಸಿದ ಸುನಾಮಿ ಹಾಗೂ ಜಲಪ್ರಳಯದಲ್ಲಿ ಹಲವು ಪಟ್ಟಣಗಳು ನಾಮಾವಶೇಷವಾಗಿ 15 ಮಂದಿ ಮೃತರಾದರು. ಬೆಳಗ್ಗೆ 7.40ಕ್ಕೆ (ಭಾರತೀಯ ಕಾಲಮಾನ ನಸುಕಿನ 2.10) ಸಾಗರಗರ್ಭದಲ್ಲಿ ರಿಕ್ಟರ್ ಮಾಪಕದಲ್ಲಿ 8 ಪಾಯಿಂಟ್ ತೀವ್ರತೆಯ ಭೂಕಂಪ ದೈತ್ಯ ಸುನಾಮಿ ಅಲೆಗಳನ್ನು ಸೃಷ್ಟಿಸಿತು. ಐದು ಮೀಟರ್ ಎತ್ತರದ ರಕ್ಕಸ ಅಲೆಗಳು ಪೂವ ತೀರಕ್ಕೆ ಅಪ್ಪಳಿಸಿ ಹಲವು ಹಳ್ಳಿ, ಪಟ್ಟಣಗಳನ್ನು ಹೇಳಹೆಸರಿಲ್ಲದಂತೆ ಕೊಚ್ಚಿ ಹಾಕಿದವು.

2007: ಆಂಧ್ರಪ್ರದೇಶದಲ್ಲಿ ಎರಡು ದಶಕಗಳ ಹಿಂದೆ ರದ್ದಾಗಿದ್ದ ವಿಧಾನ ಪರಿಷತ್ತಿಗೆ ಮತ್ತೆ ಚಾಲನೆ ನೀಡಲಾಯಿತು. ಬಿಗಿ ಭದ್ರತೆ ನಡುವೆ ನಡೆದ ಸಮಾರಂಭದಲ್ಲಿ 12 ಮಂದಿ ನಾಮಕರಣ ಸದಸ್ಯರೂ ಸೇರಿ 64 ಹೊಸ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು.

2007: ಧಾರ್ಮಿಕ ವಲಯದಲ್ಲಿ ವಿವಾದದ ಅಲೆ ಎಬ್ಬಿಸಿದ್ದ ಕರ್ನಾಟಕ ಧಾರ್ಮಿಕ ದತ್ತಿ ಕಾಯಿದೆಯನ್ನು (1997) ರದ್ದುಗೊಳಿಸಿದ್ದ ಹೈಕೋರ್ಟ್ ವಿಭಾಗೀಯ ಪೀಠದ ತೀರ್ಪಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿತು.

2007: ರಾಜ್ಯ ಪ್ರವಾಸೋದ್ಯಮ ಸಚಿವ ಶ್ರೀರಾಮುಲು ಅವರು ಹಠಾತ್ ರಾಜೀನಾಮೆ ನೀಡುವುದರೊಂದಿಗೆ ಬಳ್ಳಾರಿ ನಗರಸಭೆಯ ಮಾಜಿ ಉಪಾಧ್ಯಕ್ಷ ಸೈಯದ್ ಮುಜೀಬ್ (40) ಹತ್ಯೆ ಪ್ರಕರಣವು ರಾಜಕೀಯ ತಿರುವು ತೆಗೆದುಕೊಂಡಿತು. ತಮ್ಮ ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ತೀರಾ ಹದಗೆಟ್ಟಿದೆ ಎಂದು ಆರೋಪಿಸಿ ಶ್ರೀರಾಮುಲು ಅವರು ಉಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಪಕ್ಷದ ರಾಜ್ಯಾಧ್ಯಕ್ಷರಿಗೆ ರಾಜೀನಾಮೆ ಪತ್ರ ರವಾನಿಸಿದರು.

2007: ಸುಪ್ರೀಂಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕನ್ನಡಿಗೆ ಎಸ. ರಾಜೇಂದ್ರ ಬಾಬು ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.

2006: ಭಾರತದ ನ್ಯಾಯಾಂಗ ಇತಿಹಾಸದಲ್ಲಿಯೇ ಮೊದಲ ಬಾರಿಗೆ 173 ವರ್ಷಗಳಷ್ಟು ಹಳೆಯ ಪ್ರಕರಣವೊಂದು ಪಶ್ಚಿಮ ಬಂಗಾಳದ ಕೋಲ್ಕತ್ತಾ (ಹಿಂದಿ ಕಲ್ಕತ್ತ) ನ್ಯಾಯಾಲಯದಲ್ಲಿ ಮರು ವಿಚಾರಣೆಗೆ ಬಂತು. 18ನೇ ಶತಮಾನದ ಅಂತ್ಯದಲ್ಲಿ ಆಡಳಿತ ನಡೆಸುತ್ತಿದ್ದ ಬ್ರಿಟಿಷ್ ಗವರ್ನರ್ ಜನರಲ್ ರಾಬರ್ಟ್ ಕ್ಲೈವ್ ಕೋಲ್ಕತ್ತಾ ನಗರದ ಉತ್ತರ ಭಾಗದ 1000ಕ್ಕೂ ಹೆಚ್ಚು ಎಕರೆ ಪ್ರದೇಶ ಬಂಗಾಳದ ರಾಜವಂಶಕ್ಕೆ ಸೇರಿದ್ದ ರಾಜ ನಭಕೃಷ್ಣ ದೇವ್ ಅವರ ಸ್ವಾಧೀನಕ್ಕೆ ಸೇರಿದೆ ಎಂದು ತೀರ್ಪು ನೀಡಿದ್ದ. ತೀರ್ಪಿನ ಜೊತೆಗೇ ಈ ಆಸ್ತಿಯ ಮೇಲೆ ರಾಜ ಒಂದು ರೂಪಾಯಿ ತೆರಿಗೆ ಕೊಡಬೇಕು ಎಂದು ಒಂದು ಕೊಕ್ಕೆಯನ್ನೂ ಇಟ್ಟಿದ್ದ. ದೇವ್ ಮತ್ತು ಅವರ ಮಗ ಜೀವಂತ ಇರುವವರೆಗೂ ಈ ತೆರಿಗೆ ಪಾವತಿಸಲಾಗಿತ್ತು. ಅವರು ಮೃತರಾದ ನಂತರ ಈ ಆಸ್ತಿ ಕುಟುಂಬ ಸದಸ್ಯರ ನಡುವೆ ಹಂಚಿಕೆಯಾಗಿ ನಂತರದ ದಿನಗಳಲ್ಲಿ ಅವರೆಎಲ್ಲರೂ ಐಷಾರಾಮೀ ಜೀವನಕ್ಕಾಗಿ ಮಾರಿಕೊಂಡಿದ್ದರು. ಆಗ ನ್ಯಾಯಾಲಯದ ಮೆಟ್ಟಲೇರಿದ್ದ ಈ ಆಸ್ತಿ ಸಂಬಂಧಿ ವಿವಾದ ಈದಿನವಿಚಾರಣೆಗೆ ಬಂದಿತು.!

2006: ಕನ್ನಡದಲ್ಲಿ ವಿವಿಧ ಮಾಹಿತಿಗಳು ಲಭ್ಯ ಇರುವ ಕನ್ನಡ ವಿಶ್ವಕೋಶ ಅಂತರ್ಜಾಲ ತಾಣ http://kn.wikipedia.org 
 ಇಲ್ಲಿ ಈಗ ಲಭಿಸುತ್ತದೆ ಎಂದು ಕನ್ನಡ ವಿಕಿಪೀಡಿಯಾ ಸದಸ್ಯ ಹರಿಪ್ರಸಾದ್ ನಾಡಿಗ್ ಬೆಂಗಳೂರಿನಲ್ಲಿ ನಡೆದ ಕನ್ನಡ ವಿಕಿಪೀಡಿಯಾ ಕುರಿತು ನಡೆದ ಚರ್ಚಾ ಕಾರ್ಯಕ್ರಮದಲ್ಲಿ ಪ್ರಕಟಿಸಿದರು.

2006: ದೇಶದಲ್ಲೇ ಮೊದಲ ಬಾರಿಗೆ ನಗರವಾಸಿಗಳ ಮನೆ ಬಾಗಿಲಿಗೆ ವಾಹನಗಳ ಮೂಲಕ ನರ್ಸರಿ ಗಿಡ ತಲುಪಿಸುವ ಪರಿಸರ ಮೈತ್ರಿ ಎಂಬ ವಿನೂತನ ಕಾರ್ಯಕ್ರಮಕ್ಕೆ ಬೆಂಗಳೂರಿನಲ್ಲಿ ಚಾಲನೆ ನೀಡಲಾಯಿತು.  ಕರ್ನಾಟಕ ತಿಗಳರ ನರ್ಸರಿ ಅಸೋಸಿಯೇಷನ್ ಈ ಗಿಡಗಳ ಮಾರಾಟ ಜಾಲವನ್ನು ಆರಂಭಿಸಿತು.

2006: ಇಥಿಯೋಪಿಯಾದ ಮಧ್ಯಮ ದೂರದ ಓಟಗಾರ ಕೆನೆನಿಸಾ ಬೆಕೆಲೆ (23) ಜಪಾನಿನ ಫುಕುವೋಕದಲ್ಲಿ ನಡೆದ ಐಎಎಎಫ್ ವಿಶ್ವ ಕ್ರಾಸ್ ಕಂಟ್ರಿ ಚಾಂಪಿಯನ್ ಶಿಪ್ ಪುರುಷರ ವಿಭಾಗದ 12 ಕಿ.ಮೀ. ದೂರದ ಓಟದಲ್ಲಿಯೂ ಬಂಗಾರದ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸ್ವರ್ಣ ಡಬಲ್ ಪಡೆದ ಹೆಗ್ಗಳಿಕೆಗೆ ಪಾತ್ರರಾದರು. ಒಲಿಂಪಿಕ್ ಹಾಗೂ ವಿಶ್ವಚಾಂಪಿಯನ್ ಶಿಪ್ ನಲ್ಲಿ ಪುರುಷರ 10 ಹಾಗೂ 5 ಸಾವಿರ ಮೀಟರ್ ಓಟದ ವಿಭಾಗದಲ್ಲಿ ವಿಶ್ವದಾಖಲೆಯೊಂದಿಗೆ ಅವರು ಬಂಗಾರದ ಪದಕ ಗೆದ್ದಿದ್ದರು.

2006: ತಮಿಳುನಾಡಿನ ಚೆನ್ನೈಯಲ್ಲಿ ಕ್ರೈಸ್ತ ಧರ್ಮಗುರು ಎರಡನೇ ಪೋಪ್ ಜಾನ್ ಪಾಲ್ ಅವರ 22 ಅಡಿ ಎತ್ತರದ ಪುತ್ಥಳಿಯನ್ನು ಅವರ ಪ್ರಥಮ ಪುಣ್ಯತಿಥಿ ಆಚರಣೆ ಅಂಗವಾಗಿ ಅನಾವರಣಗೊಳಿಸಲಾಯಿತು.

2006: ಕರ್ನಾಟಕ ಲೇಖಕಿಯರ ಸಂಘ ನೀಡುವ `ಅನುಪಮಾ ಪ್ರಶಸ್ತಿ'ಗೆ 2006ನೇ ಸಾಲಿನಲ್ಲಿ ಹಿರಿಯ ಲೇಖಕಿ ಮತ್ತು ಕಾದಂಬರಿಗಾರ್ತಿ ನುಗ್ಗೇನಹಳ್ಳಿ ಪಂಕಜಾ ಆಯ್ಕೆಯಾದರು. ಸುಮಾರು ಐದು ದಶಕಗಳಿಂದ ಸಾಹಿತ್ಯ ಸೇವೆಯಲ್ಲಿ ತೊಡಗಿರುವ ಇವರು, ಇಂಗ್ಲಿಷಿನ ಹಲವು ನಾಟಕ ಹಾಗೂ ಪ್ರಬಂಧಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಕವಿತೆ, ಕತೆ, ಕಾದಂಬರಿ ಇತ್ಯಾದಿ ಪ್ರಕಾರಗಳಲ್ಲಿ ಕೆಲಸ ಮಾಡಿರುವ ಅವರ `ಬರಲೆ ಇನ್ನು ಯಮುನೆ' ಕಾದಂಬರಿ- `ಸಿಪಾಯಿ ರಾಮು' ಚಿತ್ರವಾಗಿ ಯಶಸ್ಸು ಕಂಡಿದೆ. 

1982: ದಕ್ಷಿಣ ಅಟ್ಲಾಂಟಿಕ್ ನಲ್ಲಿ ಬ್ರಿಟಿಷರ ವಶದಲ್ಲಿದ್ದ ಫಾಕ್ಲೆಂಡ್ ದ್ವೀಪಗಳನ್ನು ಅರ್ಜೆಂಟೀನಾ ಪಡೆಗಳು ವಶಪಡಿಸಿಕೊಂಡವು.

 1975: ರಷ್ಯದ ಅನಾತೊಲಿ ಕಾರ್ಪೊವ್ ಅವರನ್ನು ಜಾಗತಿಕ ಚೆಸ್ ಚಾಂಪಿಯನ್ ಎಂಬುದಾಗಿ ಘೋಷಿಸಲಾಯಿತು. ರಾಬರ್ಟ್ `ಬಾಬ್ಬಿ' ಫಿಶರ್ ತನ್ನ ಸಾಧನೆ ಉಳಿಸಿಕೊಳ್ಳದೇ ಹೋದ್ದರಿಂದ ಅದು ಅನಾತೊಲಿ ಅವರ ಪಾಲಾಯಿತು.

1957: ಖ್ಯಾತ ಪಿಟೀಲುವಾದಕಿ ಸಿ.ಎಸ್. ಉಷಾ ಅವರು ಸಿ.ಎಸ್. ಸುಂದರಂ- ಸೀತಾ ದಂಪತಿಯ ಮಗಳಾಗಿ ಬೆಂಗಳೂರಿನಲ್ಲಿ ಜನಿಸಿದರು.

1933: ಭಾರತದ ಶ್ರೇಷ್ಠ ಕ್ರಿಕೆಟ್ ಪಟುಗಳಲ್ಲಿ ಒಬ್ಬರಾದ ನವನಗರದ ಮಹಾರಾಜ ಜಾಮ್ ಸಾಹಿಬ್ ರಣಜಿತ್ ಸಿನ್ಹಜಿ ವಿಭಾಜಿ ತಮ್ಮ 60ನೇ ವಯಸ್ಸಿನಲ್ಲಿ ಮೃತರಾದರು. 1899ರಲ್ಲಿ ಇವರು ಒಂದೇ ಋತುವಿನಲ್ಲಿ 3000 ಮತ್ತು ಅದಕ್ಕೂ ಹೆಚ್ಚು ರನ್ನುಗಳನ್ನು ಸ್ಕೋರ್ ಮಾಡಿದ ಪ್ರಥಮ ವ್ಯಕ್ತಿ ಎಂಬ ಹೆಗ್ಗಳಿಕೆ ಗಳಿಸಿದ್ದರು. ಇವರ ನೆನಪಿಗಾಗಿಯೇ 1934ರಲ್ಲಿ ರಣಜಿ ಟ್ರೋಫಿಯನ್ನು ಆರಂಭಿಸಲಾಯಿತು.

1805: ಹ್ಯಾನ್ಸ್ ಕ್ರಿಸ್ಟಿಯನ್ ಆಂಡರ್ಸನ್ (1805-1875) ಹುಟ್ಟಿದ ದಿನ. ಡ್ಯಾನಿಷ್ ಭಾಷೆಯ ಕಟ್ಟು ಕಥೆಗಳ ಖ್ಯಾತ ಸೃಷ್ಟಿಕರ್ತನಾದ ಈತನ ಹಲವಾರು ಕೃತಿಗಳು ಇತರ ಭಾಷೆಗಳಿಗೂ ತರ್ಜುಮೆಗೊಂಡಿವೆ.

1679: ಮೊಘಲ್ ದೊರೆ ಔರಂಗಜೇಬ ಮುಸ್ಲಿಮೇತರರ ಮೇಲೆ `ಜೆಜಿಯಾ' ತೆರಿಗೆಯನ್ನು ಮತ್ತೆ ಜಾರಿಗೊಳಿಸಿದ. ಸುಮಾರು ನೂರು ವರ್ಷಕ್ಕೆ ಮೊದಲು ಈ ತೆರಿಗೆಯನ್ನು ಅಕ್ಬರ್ ರದ್ದುಗೊಳಿಸಿದ್ದ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement