My Blog List

Saturday, May 30, 2009

ಇಂದಿನ ಇತಿಹಾಸ History Today ಮೇ 26

ಇಂದಿನ ಇತಿಹಾಸ

ಮೇ 26

ಹಿಂದೂಗಳ ಪವಿತ್ರ ನಗರ ವಾರಣಾಸಿಯಲ್ಲಿ ಸದಾ ಮೈತುಂಬಿಕೊಂಡು ಜುಳುಜುಳು ಎಂದು ಹರಿಯುತ್ತಿದ್ದ ಗಂಗಾ ನದಿ ಈಗ ಬಡಕಲಾಗಿರುವುದು ಬೆಳಕಿಗೆ ಬಂತು. ಈ ವರ್ಷದ ಬೇಸಿಗೆಯಲ್ಲಿ ಹಿಂದೆಂದೂ ಕಡಿಮೆಯಾಗದಷ್ಟು ನೀರು ಕಡಿಮೆಯಾಗಿ ಮರಳ ದಂಡೆಗಳು ಎದ್ದು ಕಾಣಿಸತೊಡಗಿದವು. ನದಿಯಲ್ಲಿ ನೀರು ಕಡಿಮೆಯಾಗಲು ಅನೇಕ ಅಂಶಗಳು ಕಾರಣ ಎಂಬುದು ತಜ್ಞರು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಅಭಿಪ್ರಾಯ. ಕಳೆದ ಎರಡು ದಶಕಗಳಲ್ಲಿ ವಾರಣಾಸಿಯಲ್ಲಿ ಗಂಗಾನದಿಯ ನೀರಿನ ಪ್ರಮಾಣ 1.5 ಮೀಟರಿನಿಂದ 2 ಮೀಟರಿನವರೆಗೆ ಕಡಿಮೆಯಾಗಿದೆ ಎಂಬುದು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಗಂಗಾ ಸಂಶೋಧನಾ ಪ್ರಯೋಗಾಲಯದ ಪ್ರೊ. ಉದಯಕಾಂತ್ ಚೌಧರಿ ಹೇಳಿಕೆ.

2008: ಹಿಂದೂಗಳ ಪವಿತ್ರ ನಗರ ವಾರಣಾಸಿಯಲ್ಲಿ ಸದಾ ಮೈತುಂಬಿಕೊಂಡು ಜುಳುಜುಳು ಎಂದು ಹರಿಯುತ್ತಿದ್ದ ಗಂಗಾ ನದಿ ಈಗ ಬಡಕಲಾಗಿರುವುದು ಬೆಳಕಿಗೆ ಬಂತು. ಈ ವರ್ಷದ ಬೇಸಿಗೆಯಲ್ಲಿ ಹಿಂದೆಂದೂ ಕಡಿಮೆಯಾಗದಷ್ಟು ನೀರು ಕಡಿಮೆಯಾಗಿ ಮರಳ ದಂಡೆಗಳು ಎದ್ದು ಕಾಣಿಸತೊಡಗಿದವು. ನದಿಯಲ್ಲಿ ನೀರು ಕಡಿಮೆಯಾಗಲು ಅನೇಕ ಅಂಶಗಳು ಕಾರಣ ಎಂಬುದು ತಜ್ಞರು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಅಭಿಪ್ರಾಯ. ಕಳೆದ ಎರಡು ದಶಕಗಳಲ್ಲಿ ವಾರಣಾಸಿಯಲ್ಲಿ ಗಂಗಾನದಿಯ ನೀರಿನ ಪ್ರಮಾಣ 1.5 ಮೀಟರಿನಿಂದ 2 ಮೀಟರಿನವರೆಗೆ ಕಡಿಮೆಯಾಗಿದೆ ಎಂಬುದು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಗಂಗಾ ಸಂಶೋಧನಾ ಪ್ರಯೋಗಾಲಯದ ಪ್ರೊ. ಉದಯಕಾಂತ್ ಚೌಧರಿ ಹೇಳಿಕೆ. 1988ರಲ್ಲಿ 340ರಿಂದ 355 ಮೀಟರ್ ಅಗಲದಲ್ಲಿ ಹರಿಯುತ್ತಿದ್ದ ಗಂಗೆ ಈ ವರ್ಷ 250 ಮೀಟರಿಗೆ ಇಳಿದಳು. ಇದೊಂದು ಆತಂಕಕಾರಿ ಬೆಳವಣಿಗೆಯಾದ್ದರಿಂದ ಸಾರ್ವಜನಿಕರು ಮತ್ತು ಸರ್ಕಾರ ಪವಿತ್ರವಾದ ಗಂಗಾ ನದಿಯನ್ನು ಉಳಿಸಿಕೊಳ್ಳಲು ಶೀಘ್ರ ಕ್ರಮ ತೆಗೆದುಕೊಳ್ಳಬೇಕು ಎಂಬುದು ಚೌಧರಿ ಸಲಹೆ. 1988ರಲ್ಲಿ ವಾರಣಾಸಿಯಲ್ಲಿ ಗಂಗಾ ನದಿಯಲ್ಲಿ ಎಂಟು ಸಾವಿರದಿಂದ ಒಂಭತ್ತು ಸಾವಿರ ಕ್ಯೂಸೆಕ್ ನೀರು ಹರಿಯುತ್ತಿತ್ತು. ಈಗ ಈ ಪ್ರಮಾಣ ಐದರಿಂದ ಆರು ಸಾವಿರಕ್ಕೆ ಇಳಿದಿದೆ. ಒಳಚರಂಡಿ ಮತ್ತು ಕೈಗಾರಿಕಾ ತ್ಯಾಜ್ಯಗಳು ಗಂಗಾ ನದಿಗೆ ಸೇರುತ್ತಿರುವುದರಿಂದ ನೀರಿನ ಮಾಲಿನ್ಯ ಪ್ರಮಾಣವೂ ಹೆಚ್ಚಳವಾಗಿದೆ. ತೆಹರಿ ಅಣೆಕಟ್ಟು ಸೇರಿದಂತೆ ಅನೇಕ ಅಣೆಕಟ್ಟುಗಳ ನಿರ್ಮಾಣ, ನೀರಾವರಿ ಕಾಲುವೆಗಳ ನಿರ್ಮಾಣದಿಂದಾಗಿ ಗಂಗಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ ಹಾಗೂ ವಾರಣಾಸಿಯಲ್ಲಿ ಅಂತರ್ಜಲ ಮಟ್ಟವೂ ಗಣನೀಯವಾಗಿ ಕುಸಿದಿದೆ ಎಂಬುದು ತಜ್ಞರ ಅಭಿಪ್ರಾಯ.

2008: ಪಕ್ಷೇತರ ಶಾಸಕರ ಒಲವು ಸಂಪಾದಿಸುವ ಪ್ರಯತ್ನದಲ್ಲಿ ಸಫಲವಾದ ಭಾರತೀಯ ಜನತಾ ಪಕ್ಷವು, ನೂತನ ಸರ್ಕಾರ ರಚನೆಗೆ ಈದಿನ ರಾತ್ರಿ ರಾಜ್ಯಪಾಲರ ಮುಂದೆ ಹಕ್ಕು ಮಂಡಿಸಿತು. ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಜೇಟ್ಲಿ, ಅನಂತಕುಮಾರ್, ಜಗದೀಶ್ ಶೆಟ್ಟರ್, ಶ್ರೀರಾಮುಲು ಮೊದಲಾದವರು ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರನ್ನು ಭೇಟಿ ಮಾಡಿ 115 ಶಾಸಕರ ಪಟ್ಟಿಯನ್ನು ಸಲ್ಲಿಸಿ, ಸರ್ಕಾರ ರಚಿಸಲು ಆಹ್ವಾನ ನೀಡುವಂತೆ ಮನವಿ ಮಾಡಿದರು. ಪಕ್ಷೇತರ ಶಾಸಕರಾದ ನರೇಂದ್ರಸ್ವಾಮಿ, ಶಿವರಾಜ್ ತಂಗಡಗಿ, ಗೂಳಿಹಟ್ಟಿ ಶೇಖರ್, ವೆಂಕಟರವಣಪ್ಪ, ಡಿ.ಸುಧಾಕರ್ ಅವರು ರಾಜ್ಯಪಾಲರ ಮುಂದೆ ಹಾಜರಾಗಿ ಬಿಜೆಪಿಗೆ ಬೆಂಬಲ ಘೋಷಿಸಿದರು. ಇದರೊಂದಿಗೆ ಬಹುಮತಕ್ಕೆ ಬೇಕಾದ ಸಂಖ್ಯೆಗಿಂತ (113) ಎರಡು ಹೆಚ್ಚು ಸ್ಥಾನಗಳನ್ನು ಬಿಜೆಪಿ ಹೊಂದಿದಂತಾಯಿತು.

2008: ಅಮೆರಿಕದ ಪುಟ್ಟ ಬಾಹ್ಯಾಕಾಶ ನೌಕೆ `ಫೀನಿಕ್ಸ್' ಮಂಗಳ ಗ್ರಹವನ್ನು ತಲುಪಿ, ಉತ್ತರ ಧ್ರುವದಲ್ಲಿ ಇಳಿದ ಎರಡೇ ತಾಸುಗಳಲ್ಲಿ ಅಲ್ಲಿನ ಮಂಜುಗಟ್ಟಿದ ಪರಿಸರದ ಚಿತ್ರಗಳನ್ನು ಕಳುಹಿಸಿತು. ಮೂರು ತಿಂಗಳ ಕಾಲ ಮಂಗಳ ಗ್ರಹದಲ್ಲಿ ಇರಲಿರುವ `ಫೀನಿಕ್ಸ್' ನೌಕೆ, ಅಲ್ಲಿ ನೀರಿನ ಲಭ್ಯತೆ ಮತ್ತು ಜೀವೋತ್ಪತಿಗೆ ಕಾರಣವಾಗುವ ಅಂಶಗಳ ಬಗ್ಗೆ ಹುಡುಕಾಟ ನಡೆಸುವುದು. ಕಳೆದ 10 ತಿಂಗಳ ಅವಧಿಯಲ್ಲಿ 423 ದಶಲಕ್ಷ ಮೈಲು ದೂರ ಕ್ರಮಿಸಿದ ಬಳಿಕ ಈ ನೌಕೆ ಹಿಂದಿನ ದಿನ ರಾತ್ರಿ ಮಂಗಳ ಗ್ರಹವನ್ನು ತಲುಪಿದ್ದು ಅದು ಈಗ ಕಳುಹಿಸಿದ ಚಿತ್ರಗಳಿಂದ ದೃಢಪಟ್ಟದ್ದು ನಾಸಾ ವಿಜ್ಞಾನಿಗಳಿಗೆ ಸಂತಸ ತಂದಿತು. ಸೌರ ಶಕ್ತಿಯನ್ನು ಬಳಸಿ ಮಂಗಳನ ಅಂಗಳಕ್ಕೆ ಇಳಿಯುವ ನೌಕೆಯನ್ನು ನಾಲ್ಕು ವರ್ಷಗಳಲ್ಲಿ ಅಭಿವೃದ್ಧಿಪಡಿಸಿದ ಭಾರತ ಮೂಲದ ಎಂಜಿನಿಯರ್ ಪ್ರಸನ್ನ ದೇಸಾಯಿ, `ಎಲ್ಲವೂ ಅದ್ಭುತವಾಗಿ ನಡೆಯುತ್ತಿದೆ` ಎಂದರು. ಮಂಗಳನ ಅಂಗಳದಲ್ಲಿ ನೌಕೆಯನ್ನು ಇಳಿಸುವುದು ಸವಾಲಿನ ಕಾರ್ಯವಾಗಿತ್ತು. ಗಂಟೆಗೆ 12 ಸಾವಿರ ಮೈಲು ವೇಗದಲ್ಲಿ ಸಂಚರಿಸುತ್ತಿದ್ದ `ಫೀನಿಕ್ಸ್'ನ್ನು ಮೆತ್ತನೆಯ ಹಾಸಿಗೆಯ ಮೇಲೆ ಬೀಳಿಸುವ ಬದಲು ಮೂರು ಕಾಲುಗಳ ಮೇಲೆಯೇ ನಿಲ್ಲಿಸುವ ತಂತ್ರ ಹೆಣೆಯಲಾಗಿತ್ತು. ಮಂಗಳನ ವಾತಾವರಣವನ್ನು ನೌಕೆ ಪ್ರವೇಶಿಸುತ್ತಿದ್ದಂತೆಯೇ ನೌಕೆಯ ಪ್ಯಾರಾಚೂಟ್ ಬಿಚ್ಚಿಕೊಂಡು ಅದರ ವೇಗವನ್ನು ತಗ್ಗಿಸಿತು. ನೌಕೆಯ ಉಷ್ಣ ತಡೆ ಗುರಾಣಿಯೂ ಚಾಚಿಕೊಂಡಿತು. ಜೆಟ್ ರಾಕೆಟ್ ಎಂಜಿನ್ ಉರಿಸಿ ವೇಗವನ್ನು ಕಡಿತಗೊಳಿಸಲಾಯಿತು. ಕೊನೆಗೆ ಮಂಗಳನ ಅಂಗಳಕ್ಕೆ ಇಳಿಯುವ ಹೊತ್ತಿಗೆ `ಫೀನಿಕ್ಸ್'ನ ವೇಗ ಗಂಟೆಗೆ 5 ಮೈಲುಗಳಿಗೆ ಇಳಿಯಿತು. ನೌಕೆ ನೆಲದಲ್ಲಿ ತಳ ಊರುತ್ತಿದ್ದಂತೆಯೇ ದೂಳು ಎದ್ದಿತು. ವಿಜ್ಞಾನಿಗಳ ಪಾಲಿಗೆ ಇದು `ಏಳು ನಿಮಿಷಗಳ ಆತಂಕದ ಕ್ಷಣ'ವಾಗಿತ್ತು. ದೂಳು ಚದುರಿದ ತತ್ ಕ್ಷಣ ನೌಕೆ ತನ್ನ ಸೌರ ಫಲಕವನ್ನು ಬಿಚ್ಚಿಕೊಂಡಿತು. ಕಳೆದ ವರ್ಷ ಆಗಸ್ಟ್ 4ರಂದು `ಫೀನಿಕ್ಸ್'ನ್ನು ಉಡಾಯಿಸಲಾಗಿತ್ತು. 420 ದಶಲಕ್ಷ ಡಾಲರ್ ವೆಚ್ಚದಲ್ಲಿ ಲಾಕ್ ಹೀಡ್ ಮಾರ್ಟಿನ್ ಕಂಪೆನಿಯು ಈ ನೌಕೆಯನ್ನು ನಿರ್ಮಿಸಿತ್ತು. ಮಂಗಳನ ಅಂಗಳಕ್ಕೆ ಇಳಿದು ಸಂಶೋಧನೆ ನಡೆಸುವ ಈ ಮೊದಲಿನ ಹಲವು ಯತ್ನಗಳು ವಿಫಲವಾಗಿದ್ದವು.

2008: ಮಣಿಪುರದ ಕೇಂದ್ರ ಸ್ಥಳ ರಾಜಧಾನಿ ಇಂಫಾಲದ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ(ರಿಮ್ಷ್) ಉಗ್ರರು ಶಕ್ತಿಶಾಲಿ ಬಾಂಬ್ ಸ್ಫೋಟಿಸಿದರು.

2008: 66 ಜನರನ್ನು ಬಲಿ ತೆಗೆದುಕೊಂಡಿದ್ದ ಜೈಪುರ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಭರತ್ ಪುರ ಜಾಮಾ ಮಸೀದಿಯ ಇಮಾಮ್ ಮೊಹಮ್ಮದ್ ಇಲಯಾಸ್ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು.

2008: ವಿವಿಧ ರಾಜ್ಯಗಳಲ್ಲಿ ಲೋಕಸಭೆ ಹಾಗೂ ವಿಧಾನಸಭೆಗೆ ನಡೆದ ಉಪಚುನಾವಣೆಯಲ್ಲಿ ಬಹುತೇಕ ಆ ಕ್ಷೇತ್ರವನ್ನು ಪ್ರತಿನಿಧಿಸಿದ್ದ ರಾಜಕೀಯ ಪಕ್ಷಗಳ ಅಭ್ಯರ್ಥಿಗಳೇ ಗೆಲುವು ಸಾಧಿಸಿದರು. ಕಾಂಗ್ರೆಸ್ ಪಕ್ಷ ನೆಲ ಕಚ್ಚಿತು. ಥಾಣೆ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಶಿವಸೇನೆ ಜಯಭೇರಿ ಭಾರಿಸಿತು. ಹಿಮಾಚಲ ಪ್ರದೇಶದ ಹಮಿರ್ ಪುರ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅಲ್ಲಿನ ಮುಖ್ಯಮಂತ್ರಿ ಪ್ರೇಮ್ ಕುಮಾರ್ ಧುಮಾಲ್ ಅವರ ಪುತ್ರ ಅನುರಾಗ್ ಠಾಕೂರ್, ಮೇಘಾಲಯದ ಟುರಾ ಲೋಕಸಭಾ ಕ್ಷೇತ್ರದಲ್ಲಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ ಸಿ ಪಿ) ಅಭ್ಯರ್ಥಿ ಲೋಕಸಭೆಯ ಮಾಜಿ ಸ್ಪೀಕರ್ ಪಿ.ಎ. ಸಂಗ್ಮಾ ಅವರ ಪುತ್ರಿ ಅಗಾಥಾ ಸಂಗ್ಮಾ, ಹರಿಯಾಣದ ಗೊಹಾನಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಜಗಬೀರ್ ಸಿಂಗ್ ಮಲಿಕ್, ಆದಂಪುರ ಕ್ಷೇತ್ರದಲ್ಲಿ ಹರಿಯಾಣ ಜನಹಿತ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಭಜನ್ ಲಾಲ್, ಅಮೃತಸರ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಶಿರೋಮಣಿ ಅಕಾಲಿ ದಳ- ಬಿಜೆಪಿ ಅಭ್ಯರ್ಥಿ ಇಂದೇರ್ಬಿರ್ ಸಿಂಗ್ ಬೊಲಾರಿಯಾ ಜಯಗಳಿಸಿದರು.

2008: ಚಂಡಮಾರುತದಿಂದ ತತ್ತರಿಸಿದ ಮ್ಯಾನ್ಮಾರಿನ ಜನರು ಸೇನೆ ರೂಪಿಸಿರುವ ನೂತನ ಸಂವಿಧಾನವನ್ನು ಸ್ವಾಗತಿಸಿದ್ದು, ಜನಮತಗಣನೆಯಲ್ಲಿ ಶೇ 93 ಮಂದಿ ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ ಎಂದು ಸರ್ಕಾರಿ ಮಾಧ್ಯಮ ವರದಿ ಮಾಡಿತು. ನರ್ಗಿಸ್ ಚಂಡಮಾರುತದಿಂದ ತತ್ತರಿಸಿದ ಪ್ರದೇಶದಲ್ಲಿ ಜನಮತಗಣೆ ನಡೆದಿತ್ತು.

2008: ಪತ್ರಿಕೋದ್ಯಮ, ಕಲೆ, ಶಿಕ್ಷಣ ಹಾಗೂ ಹಣಕಾಸು ಕ್ಷೇತ್ರದಲ್ಲಿ ಸಾಧನೆ ಮಾಡಿದ ಭಾರತೀಯ ಮೂಲದ ಮಹಿಳೆಯರಿಗೆ ಈ ಸಾಲಿನ `ಏಷ್ಯನ್ ವುಮೆನ್ ಆಫ್ ಅಚೀವ್ಮೆಂಟ್' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಿಲ್ಟನ್ನಿನಲ್ಲಿ ನಡೆದ 9 ನೇ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಐಟಿಎನ್ ಸುದ್ದಿ ಸಂಪಾದಕಿ ಆರತಿ ಲುಖಾ, ನೃತ್ಯ ನಿರ್ದೇಶಕಿ ಶೋಭನಾ ಜಯಸಿಂಗ್ ಹಾಗೂ ವೆಸ್ಟ್ ನಟ್ಟಿಂಗ್ ಹ್ಯಾಮ್ ಶೈರ್ ಕಾಲೇಜಿನ ಆಶಾ ಖೇಮ್ಕಾ ಮತ್ತು ಬಾಲಾ ಠಾಕ್ರಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಂತಾರಾಷ್ಟ್ರೀಯ ಹಾಗೂ ಸಮುದಾಯ ಮಟ್ಟದ ಅನೇಕ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿದ ಭಾರತೀಯ ಮೂಲದ ಸ್ವಯಂಸೇವಕ ಗೋಪಾಲ್ ದಾಸ್ ಪೋಪಟ್ (85) ಅವರಿಗೆ ಅಂತಾರಾಷ್ಟ್ರೀಯ ಸ್ವಯಂಸೇವಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

2008: ಬಹ್ರೇನ್ ಏರ್ ಸಂಸ್ಥೆಯು ಕೊಚ್ಚಿಗೆ ನೇರ ವಿಮಾನಯಾನ ಸೇವೆ ಆರಂಭಿಸಿತು.

2008: ಇರಾಕ್ ಫುಟ್ಬಾಲ್ ತಂಡ ಒಂದು ವರ್ಷದ ಅವಧಿಗೆ ಯಾವುದೇ ರೀತಿಯ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಪಾಲ್ಗೊಳ್ಳುವುದರ ಮೇಲೆ ಫಿಫಾ ನಿಷೇಧ ಹೇರಿತು.
ಇರಾಕ್ ತಂಡವನ್ನು 12 ತಿಂಗಳುಗಳ ಅವಧಿಗೆ ಅಮಾನತು ಮಾಡಿರುವ ನಿರ್ಧಾರವನ್ನು ಫಿಫಾ ಆಡಳಿತ ಮಂಡಳಿ ಈದಿನ ಪ್ರಕಟಿಸಿತು.

2008: ಕೊಯಮತ್ತೂರಿನ ಉದುಮಲ್ಪೇಟೆ ಸಮೀಪದ ತಿರುಮೂರ್ತಿ ಅಣೆಕಟ್ಟಿನ ಪಂಚಲಿಂಗ ಜಲಪಾತದ ಕ್ಷಿಪ್ರ ಪ್ರವಾಹಕ್ಕೆ ಸಿಲುಕಿ 13 ಮಂದಿ ಪ್ರವಾಸಿಗರು ಅಸು ನೀಗಿದ ಘಟನೆ ಹಿಂದಿನ ದಿನ ನಡೆಯಿತು. ಕೇರಳದ ಮರೈಯೂರಿನಲ್ಲಿ ಬಿದ್ದ ಭಾರಿ ಮಳೆಯೇ ಈ ಪ್ರವಾಹಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದರು.

2008: ಚನ್ನರಾಯಪಟ್ಟಣ ತಾಲ್ಲೂಕಿನ ಗಡಿಭಾಗದಲ್ಲಿರುವ ಇತಿಹಾಸ ಪ್ರಸಿದ್ಧ ಗಿರಿಕ್ಷೇತ್ರದಲ್ಲಿ 18 ಲಕ್ಷ ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡ ಶ್ರೀ ಲಕ್ಷ್ಮಿವೆಂಕಟೇಶ್ವರ ಸ್ವಾಮಿ ದೇಗುಲದ ಉದ್ಘಾಟನೆ ವಿಜೃಂಭಣೆಯಿಂದ ನೆರವೇರಿತು.

2007: ಕೇಂದ್ರದ ಮಾಜಿ ಸಚಿವ, ರಾಷ್ಟ್ರೀಯ ನ್ಯಾಯಮಂಡಳಿಯ ಅಧ್ಯಕ್ಷ ಚಂದ್ರಜಿತ್ ಯಾದವ್ ನವದೆಹಲಿಯಲ್ಲಿ ನಿಧನರಾದರು. ಅವರು ಇಂದಿರಾಗಾಂಧಿ ಸಂಪುಟದಲ್ಲಿ ಉಕ್ಕು ಮತ್ತು ಗಣಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

2007: ರಾಷ್ಟ್ರದ ಭದ್ರತಾ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸುವ ಸಲುವಾಗಿ ಕೇಂದ್ರ ಸರ್ಕಾರವು ವಿವಿಧೋದ್ದೇಶ ರಾಷ್ಟ್ರೀಯ ಗುರುತು ಚೀಟಿ ಯೋಜನೆಗೆ ಚಾಲನೆ ನೀಡಿತು. ರಾಜಧಾನಿಯ ನರೇಲಾದಲ್ಲಿ ಭಾರತದ ರಿಜಿಸ್ಟ್ರಾರ್ ಜನರಲ್ ದೇವೇಂದರ್ ಕುಮಾರ್ ಸಿಕ್ರಿ ಅವರು ವಾಯವ್ಯ ದೆಹಲಿಯ ನರೇಲಾದ ಮಹಿಳೆಯೊಬ್ಬರಿಗೆ ಮೊತ್ತ ಮೊದಲ ರಾಷ್ಟ್ರೀಯ ಗುರುತು ಚೀಟಿ ವಿತರಿಸಿದರು.

2007: ಪಕ್ಷದ ನಿಯಮ ಉಲ್ಲಂಘಿಸಿ ಪರಸ್ಪರ ಆರೋಪ- ಪ್ರತ್ಯಾರೋಪದಲ್ಲಿ ತೊಡಗಿದ್ದ ಕೇರಳದ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ಮತ್ತು ಸಿಪಿ ಎಂ ರಾಜ್ಯ ಕಾರ್ಯದರ್ಶಿ ಪಿನರಾಯಿ ವಿಜಯನ್ ಅವರನ್ನು ಸಿಪಿಎಂನ ಉನ್ನತ ನೀತಿ ನಿರೂಪಕ ಸಮಿತಿಯಾದ ಪಾಲಿಟ್ ಬ್ಯೂರೋದಿಂದ ಅಮಾನತುಗೊಳಿಸಲಾಯಿತು.

2007: ಭಾರತೀಯ ಕ್ರಿಕೆಟ್ ತಂಡದ ಅಗ್ರಶ್ರೇಯಾಂಕದ ನಾಲ್ವರು ಆಟಗಾರರು ಢಾಕಾದ ಮೀರ್ ಪುರ ಬೆಂಗಾಲ್ ಜೈತಿಯಾ ಕ್ರೀಡಾಂಗಣದಲ್ಲಿ ಮೊತ್ತ ಮೊದಲ ಬಾರಿಗೆ ಶತಕ ಗಳಿಸುವುದರೊಂದಿಗೆ ವಿಶ್ವದಾಖಲೆ ನಿರ್ಮಿಸಿದರು. ವಾಸಿಂ ಜಾಫರ್ (ಗಾಯಗೊಂಡು ನಿವೃತ್ತಿ 138), ದಿನೇಶ್ ಕಾರ್ತಿಕ್ (129), ರಾಹುಲ್ ದ್ರಾವಿಡ್ (129) ಹಾಗೂ ಸಚಿನ್ ತೆಂಡೂಲ್ಕರ್ (ಔಟಾಗದೇ 122) ಅವರು ಇತಿಹಾಸ ನಿರ್ಮಿಸಿದ ಆಟಗಾರರು.

2007: ಜರ್ಮನಿಯಿಂದ ಅಟ್ಲಾಂಟಾಕ್ಕೆ ಹೊರಟಿದ್ದ ಡೆಲ್ಟಾ ಏರ್ ಲೈನ್ಸ್ ವಿಮಾನದಲ್ಲಿ ಡಾ. ರಾಬರ್ಟ್ ವಿನ್ಸೆಂಟ್ ಮತ್ತು ಡಾ. ಡಿಯೇಟರ್ ಕೆ. ಗುಣ್ ಕಲ್ ಅವರು ಹಾರುತ್ತಿದ್ದ ವಿಮಾನದಲ್ಲೇ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಸೂಕ್ತ ವೈದ್ಯೋಪಚಾರ ಮಾಡಿ ಹೆರಿಗೆ ಮಾಡಿಸಿದರು. ಹುಟ್ಟಿದ ಗಂಡು ಮಗು ಉಸಿರಾಡದೇ ಇದ್ದಾಗ ಬಾಯಿಯ ಮೂಲಕ ಉಸಿರೆಳೆದು ಕೃತಕ ಉಸಿರಾಟ ನಡೆಸಿ ಮಗುವನ್ನು ಬದುಕಿಸಿದರು.

2006: ರಷ್ಯದ ಸೆವೆರ್ ಸ್ಟಾಲ್ ಉಕ್ಕು ಕಂಪೆನಿಯನ್ನು ಖರೀದಿಸಲು ಆರ್ಸೆಲರ್ ಸಂಸ್ಥೆ ನಿರ್ಧರಿಸಿತು. ಇದರಿಂದ ಆರ್ಸೆಲರ್ ಸಂಸ್ಥೆಯನ್ನು ಖರೀದಿಸುವ ಮಿತ್ತಲ್ ಉಕ್ಕು ಸಂಸ್ಥೆಯ ಯತ್ನಕ್ಕೆ ಅಡ್ಡಗಾಲು ಬಿದ್ದಂತಾಯಿತು.

2006: ಮಾವೋವಾದಿ ಹಿಂಸಾಚಾರವನ್ನು ಕೊನೆಗಾಣಿಸಲು ಮುಂದಡಿ ಇಟ್ಟ ನೇಪಾಳ ಸರ್ಕಾರವು ಶಾಂತಿ ಮಾತುಕತೆ ಆರಂಭಿಸುವ ದ್ಯೋತಕವಾಗಿ 467 ಮಾವೋವಾದಿ ಉಗ್ರಗಾಮಿಗಳನ್ನು ಬಿಡುಗಡೆ ಮಾಡಿತು.

2002: `ಒಡಿಸ್ಸಿ' ಹೆಸರಿನ ನೌಕೆಯು ಮಂಗಳ ಗ್ರಹದಲ್ಲಿ ಹೆಪ್ಪುಗಟ್ಟಿದ ನೀರಿನ ನಿಕ್ಷೇಪವನ್ನು ಪತ್ತೆ ಮಾಡಿತು.

1999: ಬಟಾಲಿಕ್ನಿಂದ ಲಡಾಖ್ ನ ಡ್ರಾಸ್ ವರೆಗಿನ ಗಡಿ ನಿಯಂತ್ರಣ ರೇಖೆಯನ್ನು ಅತಿಕ್ರಮಿಸಿದ್ದ ಪಾಕಿಸ್ಥಾನಿ ಬೆಂಬಲಿತ ಉಗ್ರಗಾಮಿಗಳ ವಿರುದ್ಧ ಭಾರತ `ಆಪರೇಷನ್ ವಿಜಯ್' ಆರಂಭಿಸಿತು. ಅತಿಕ್ರಮಿಗಳನ್ನು ತೆರವುಗೊಳಿಸುವ ಈ ಕಾರ್ಯಾಚರಣೆ ಯಶಸ್ವಿಯಾಯಿತು ಎಂದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜುಲೈ 14ರಂದು ಘೋಷಿಸಿದರು.

1976: ಕಲಾವಿದ ವೇಣುಗೋಪಾಲ್ ವಿ.ಜಿ. ಜನನ.

1972: ಯುದ್ಧ ಕ್ಷಿಪಣಿಗಳನ್ನು ನಿಯಂತ್ರಿಸುವ `ಆಯಕಟ್ಟಿನ ಶಸ್ತ್ರಾಸ್ತ್ರ ಮಿತಿ ಒಪ್ಪಂದ'ಕ್ಕೆ (ಸಾಲ್ಟ್ 1) ಅಮೆರಿಕ ಮತ್ತು ಯುಎಸ್ಸೆಸ್ಸಾರ್ ಸಹಿ ಹಾಕಿದವು.

1966: ಬ್ರಿಟಿಷ್ ಗಯಾನಾಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಅದು ಈ ದಿನದಿಂದ `ಗಯಾನಾ' ಅಷ್ಟೆ.

1951: ಅಮೆರಿಕದ ಮಹಿಳಾ ಗಗನಯಾನಿ ಸ್ಯಾಲ್ಲಿ ರೈಡ್ ಜನ್ಮದಿನ. ಈಕೆ 1983ರಲ್ಲಿ ಬಾಹ್ಯಾಕಾಶ ಷಟ್ಲ್ ನೌಕೆ ಚಾಲೆಂಜರ್ ಮೂಲಕ ಭೂಮಿಗೆ ಪ್ರದಕ್ಷಿಣೆ ಹಾಕಿದ ಮೊತ್ತ ಮೊದಲ ಮಹಿಳೆ.

1948: ಜಾನಪದ ಕಲಾವಿದರ ಕುಟುಂಬದಿಂದ ಬಂದ ಕಲಾವಿದ ಗುರುರಾಜ ಹೊಸಕೋಟೆ ಅವರು ರುದ್ರಪ್ಪ ಹೊಸಕೋಟೆ ಹಾಗೂ ಹಾಡುಗಾರ್ತಿ ಗೌರಮ್ಮ ದಂಪತಿಯ ಮಗನಾಗಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಮಹಾಲಿಂಗಪುರದಲ್ಲಿ ಜನಿಸಿದರು.

1940: ಕಲಾವಿದ ಚನ್ನವೀರೇಶ ಸಂಪಗಿ ಜನನ.

1926: ಉಜ್ವಲ ರಾಷ್ಟ್ರಪ್ರೇಮಿ, ಚಿಂತಕ, ಬಹುಭಾಷಾ ಕೋವಿದ ಖ್ಯಾತ ಲೇಖಕ ಹೊ.ವೆ. ಶೇಷಾದ್ರಿ (26-5-1926ರಿಂದ 14-8-2005) ಅವರು ಹೊಂಗಸಂದ್ರದಲ್ಲಿ ವೆಂಕಟರಾಮಯ್ಯ- ಪಾರ್ವತಮ್ಮ ದಂಪತಿಯ ಪುತ್ರನಾಗಿ ಈ ದಿನ ಜನಿಸಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಧಾನ ಕಾರ್ಯದರ್ಶಿ 9 ವರ್ಷ ಸೇವೆ ಸಲ್ಲಿಸಿದ ಇವರ ಲೇಖನಿಯಿಂದ ಬಂದ ಗ್ರಂಥಗಳು ಅಸಂಖ್ಯಾತ. ಇವರ ಲಲಿತ ಪ್ರಬಂಧಗಳ ಸಂಕಲನ ತೋರ್ ಬೆರಳುಗೆ 1982ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement