My Blog List

Thursday, September 24, 2009

ಇಂದಿನ ಇತಿಹಾಸ History Today ಸೆಪ್ಟೆಂಬರ್ 23

ಇಂದಿನ ಇತಿಹಾಸ

ಸೆಪ್ಟೆಂಬರ್ 23


ಭಾರತ ಅಂಚೆ ಇಲಾಖೆಯು `ಹಾರುತ್ತಿರುವ ಪಕ್ಷಿ'ಯ ಹೊಸ ಲಾಂಛನವನ್ನು (ಲೋಗೊ) ಪಡೆದುಕೊಂಡಿತು. ಲಾಂಛನದಲ್ಲಿನ ದಟ್ಟ ಗೆರೆಗಳು ಸ್ವತಂತ್ರ  ಹಾರಾಟವನ್ನು ಬಿಂಬಿಸುತ್ತವೆ.  ಬಣ್ಣಗಳು- ಕೆಂಪು, ಹಳದಿ. ಕೆಂಪು  - ಅಂಚೆ ಸೇವೆಯೊಂದಿಗಿನ  ಪಾರಂಪರಿಕ  ಬಾಂಧವ್ಯವನ್ನು ಮತ್ತೆ ಬೆಸೆಯುತ್ತದೆ. ಸೇವೆ, ಶಕ್ತಿ ಹಾಗೂ ಬದ್ಧತೆಗಳನ್ನು ಇದು ಧ್ವನಿಸುತ್ತದೆ. ಹಳದಿ ಬಣ್ಣ ಭರವಸೆ, ಖುಷಿ, ಸಂತೋಷವನ್ನು ಬಿಂಬಿಸುತ್ತದೆ.


2014: ಇಂಚೋನ್: ಭಾರತದ ಜನಪ್ರಿಯ ಶೂಟರ್, ಒಲಿಂಪಿಕ್ ಸ್ವರ್ಣ ವಿಜೇತ ಅಭಿನವ್ ಬಿಂದ್ರಾ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡರು. ಇದು ಅಭಿನವ್ ಬಿಂದ್ರಾ ಅವರಿಗೆ ವೃತ್ತಿಜೀವನದ ಏಷ್ಯನ್ ಗೇಮ್ಸ್​ನಲ್ಲಿ ಸಂಪಾದಿಸಿದ ಚೊಚ್ಚಲ ವೈಯಕ್ತಿಕ ಪದಕ’ ಈಗಾಗಲೇ ಶೂಟಿಂಗ್ ವಿದಾಯ ಪ್ರಕಟಿಸಿರುವ ಅಭಿನವ್ ಬಿಂದ್ರಾಗೆ ಇದೇ ಕಡೆಯ ಕ್ರೀಡಾಕೂಟ. ಒನ್ಗೆಯಾನ್ ಅಂತಾರಾಷ್ಟ್ರೀಯ ಶೂಟಿಂಗ್ ರೇಂಜ್​ನಲ್ಲಿ ಈದಿನ ಬೆಳಗ್ಗೆ ನಡೆದ ಸ್ಪರ್ಧೆಯಲ್ಲಿ ಅಭಿನವ್ 187.1 ಅಂಕಗಳನ್ನು ಗಳಿಸಿ ಕಂಚು ಸಂಪಾದಿಸಿದರೆ, ಚೀನಾದ ಹೌರಾನ್ ಯಾಂಗ್ 209.6 ಅಂಕಗಳೊಂದಿಗೆ ಸ್ವರ್ಣ ಪದಕವನ್ನು, ರಿಫೀ ಕಾವೊ 208.9 ಅಂಕಗಳೊಂದಿಗೆ ಬೆಳ್ಳಿ ಪದಕವನ್ನೂ ಸಂಪಾದಿಸಿದರು.

2014:  ಮುಂಬೈ: ಭೂಗತ ಪಾತಕಿ ರವಿ ಪೂಜಾರಿ ಮೂರು ಕೋಟಿ ರೂಪಾಯಿ ಹಣಕ್ಕಾಗಿ ಉದ್ಯಮಿ ರಾಜ್ ಕುಂದ್ರಾ ಅವರಿಗೆ ಬೆದರಿಕೆ ಹಾಕಿದ ಘಟನೆ ಬೆಳಕಿಗೆ ಬಂದಿತು. ಈ ಹಿನ್ನೆಲೆಯಲ್ಲಿ ಅವರ ಜುಹುನಲ್ಲಿರುವ ನಿವಾಸಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಯಿತು. ಈ ಸಂಬಂಧ ಮುಂಬೈ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ಹಣಕ್ಕಾಗಿ ಎರಡು ಬಾರಿ ಕುಂದ್ರಾ ಮೊಬೈಲ್​ಗೆ ಕರೆ ಬಂದಿತ್ತು ಎನ್ನಲಾಯಿತು. ಮೊದಲ ಕರೆಯಲ್ಲೆ 3 ಕೋಟಿ ರೂ. ಬೇಡಿಕೆ ಇಟ್ಟಿದ್ದ ಎಂದು ದೂರಿನಲ್ಲಿ ಹೇಳಲಾಯಿತು. ಬಾಲಿವುಡ್​ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಅವರ ಪತಿಯಾಗಿರುವ ರಾಜ್ ಕುಂದ್ರಾ ಖ್ಯಾತ ಉದ್ಯಮಿಗಳಲ್ಲಿ ಒಬ್ಬರು. ಐಪಿಎಲ್​ನಲ್ಲಿ ಆಡುವ ರಾಜಸ್ಥಾನ ರಾಯಲ್ಸ್ ತಂಡದ ಸಹ ಮಾಲೀಕರೂ ಹೌದು. ಪ್ರಕರಣ ದಾಖಲಿಸಿಕೊಂಡ ಮುಂಬೈ ಪೋಲಿಸರು ತನಿಖೆ ಮುಂದುವರಿಸಿದರು.

2014: ನವದೆಹಲಿ: ಗೀತು ಮೋಹನ್​ದಾಸ್ ನಿರ್ದೇಶನದ ಚೊಚ್ಚಲ ಹಿಂದಿ ಚಿತ್ರ 'ಲಯರ್ಸ್ ಡೈಸ್' ವಿಶ್ವದ ಪ್ರತಿಷ್ಠಿತ ಚಲನಚಿತ್ರ ಪ್ರಶಸ್ತಿಗಳಲ್ಲಿ ಒಂದಾದ ಆಸ್ಕರ್ ಅಂಗಣ ಪ್ರವೇಶಿಸಿತು. ಮಲೆಯಾಳಂ ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿಕೊಂಡಿರುವ ಗೀತು ಮೋಹನ್ ದಾಸ್ ಅವರ 'ಲಯರ್ಸ್ ಡೈಸ್' ಆಯ್ಕೆ ಮಾಡಲಾಗಿದೆ ಎಂದು ಎಫ್​ಎಫ್​ಐನ ಪ್ರಧಾನ ಕಾರ್ಯದರ್ಶಿ ಸುಪ್ರಾಣ್ ಸೇನ್ ಹೇಳಿದರು. ಆಸ್ಕರ್​ಗಾಗಿ ನಡೆದ ಅಂತಿನ ಸುತ್ತಿನಲ್ಲಿ 30ಕ್ಕೂ ಹೆಚ್ಚು ಚಿತ್ರಗಳನ್ನು ವೀಕ್ಷಿಸಿದ ಫೆಡರೇಷನ್ ಆಫ್ ಇಂಡಿಯಾದ 12 ಸದಸ್ಯರ ತಂಡ 'ಲಯರ್ಸ್ ಡೈಸ್' ಚಿತ್ರವನ್ನು ಆಯ್ಕೆ ಮಾಡಿಕೊಂಡಿದೆ. ಹಿಮಾಚಲ ಪ್ರದೇಶದ ಬುಡಕಟ್ಟು ಜನಾಂಗದ ಮಹಿಳೆ ತನ್ನ 3 ವರ್ಷದ ಮಗಳ ಜೊತೆ ಕಾಣೆಯಾದ ಪತಿಗಾಗಿ ಅರಸುವ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನವಾಜುದ್ದೀನ್ ಸಿದ್ಧಿಕಿ ಮತ್ತು ಗೀತಾಂಜಲಿ ಥಾಪಾ ನಟಿಸಿದ್ದು, ಈ ಮೊದಲೇ 2 ಬಾರಿ ರಾಷ್ಟ್ರೀಯ ಪ್ರಶಸ್ತಿಯನ್ನೂ ಸಂಪಾದಿಸಿತ್ತು.

2013: ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಿದರು. ಎಚ್​ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಪಾಲ ವಜೂಬಾಯಿ ವಾಲಾ ಭವ್ಯ ಸ್ವಾಗತ ಕೋರಿದರು. ಮೋದಿ ಆಗಮನ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಕ್ಕೆ ಬಿಗಿ ಭದ್ರತೆ ಒದಗಿಸಲಾಗಿತ್ತು. ಪ್ರಧಾನಿ ಆದ ಬಳಿಕ ಮೋದಿ ಅವರ ಕರ್ನಾಟಕಕ್ಕೆ ಇದೇ ಮೊದಲ ಬಾರಿಗೆ ಆಗಮಿಸಿದರು. ಬಿಜೆಪಿಯ ಪ್ರಮುಖ ನಾಯಕರು ಉಪಸ್ಥಿತರಿದ್ದರು.

2014:  ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ನಡುವಿನ ಸೀಟು ಹಂಚಿಕೆ ಬಿಕಟ್ಟು ಶಮನವಾಗಿದ್ದು, ಶಿವಸೇನೆ 151 ಕ್ಷೇತ್ರಗಳಲ್ಲಿ ಮತ್ತು ಬಿಜೆಪಿ 130 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ನಿರ್ಧಾರಕ್ಕೆ ಬರಲಾಯಿತು. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ನಡೆಸಿದ ಸಂಧಾನ ಕೊನೆಗೂ ಸಫಲವಾಗಿದ್ದು, ಶಿವಸೇನೆ ಮತ್ತು ಬಿಜೆಪಿಯ ಎರಡೂವರೆ ದಶಕದ ಮೈತ್ರಿ ಪ್ರಸಕ್ತ ಚುನಾವಣೆಯಲ್ಲಿಯೂ ಮುಂದುವರೆಯಲಿದೆ. ನಾಮಪತ್ರ ಸಲ್ಲಿಕೆಗೆ ಕೇವಲ ನಾಲ್ಕು ದಿನಗಳು ಮಾತ್ರ ಬಾಕಿ ಇದ್ದು, ಈ ಹಂತದಲ್ಲಿ ಯಾವುದೇ ಗೊಂದಲಗಳು ಸೃಷ್ಟಿಯಾಗುವುದು ಬೇಡ ಎನ್ನುವ ನಿರ್ಧಾರಕ್ಕೆ ಉಭಯ ನಾಯಕರು ಬಂದರು. ಹೀಗಾಗಿ ಸೀಟು ಹಂಚಿಕೆ ಸಂಬಂಧ ಈದಿನ ಮುಂಬೈನಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು ಉಭಯ ನಾಯಕರು ಚರ್ಚಿಸಿದರು. ಬಿಜೆಪಿಗೆ 130 ಸ್ಥಾನಗಳನ್ನು ಬಿಟ್ಟು ಕೊಡಲು ಶಿವಸೇನೆ ಸಿದ್ಧವಿದೆ. ಅಂತೆಯೇ ತಾನು 151 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಶಿವಸೇನೆ ಸ್ಪಷ್ಟಪಡಿಸಿದ್ದು, ಉಳಿದ 7 ಸ್ಥಾನಗಳಲ್ಲಿ ಮೈತ್ರಿಕೂಟದ ಸಣ್ಣ ಪಕ್ಷಗಳ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಲಾಯಿತು. ಇದಕ್ಕೂ ಮೊದಲು 2009ರ ಸೀಟು ಹಂಚಿಕೆಯನ್ನೇ ಮುಂದುವರೆಸಬೇಕು ಎಂದು ಪಟ್ಟು ಹಿಡಿದಿದ್ದ ಶಿವಸೇನೆ ನಾಯಕರು, ಬಿಜೆಪಿಗೆ 119 ಸ್ಥಾನ, ಮೈತ್ರಿಕೂಟದಲ್ಲಿರುವ ಇತರೆ ಪಕ್ಷಗಳಿಗೆ 18 ಸ್ಥಾನ ಮತ್ತು ತನಗೆ 151 ಸ್ಥಾನ ಬೇಕು ಎಂದು ಒತ್ತಡ ಹೇರಿದ್ದರು. ಈ ಸೂತ್ರಕ್ಕೆ ಒಪ್ಪದೇ ಇದ್ದರೆ ತಾನು ಸ್ವತಂತ್ರವಾಗಿ ಸ್ಪರ್ಧಿಸಲು ಸಿದ್ಧ ಎಂದು ಶಿವಸೇನೆ ಖಾರವಾಗಿ ಪ್ರತಿಕ್ರಿಯಿಸಿತ್ತು. ಕೊನೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರ ಸಲಹೆಯ ಮೇರೆಗೆ ನೂತನ ಸೂತ್ರಕ್ಕೆ ಶಿವಸೇನೆ ಒಪ್ಪಿಗೆ ಸೂಚಿಸಿತು.

2014: ನವದೆಹಲಿ: ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ಆರೋಪಿಯಾಗಿ ಅಮಾನತಿನಲ್ಲಿದ್ದ ಸಿಂಡಿಕೇಟ್ ಬ್ಯಾಂಕಿನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಸ್. ಕೆ. ಜೈನ್ ಅವರನ್ನು ಸೇವೆಯಿಂದ ವಜಾಗೊಳಿಸಲಾಯಿತು. ಜೈನ್ ಅವರನ್ನು ಹಿಂದಿನ ದಿನ ನ್ಯಾಯಾಲಯ ಸಿಬಿಐ ಕಸ್ಟಡಿಗೊಪ್ಪಿಸಿದ ಬಳಿಕ ಸೇವೆಯಿಂದ ವಜಾಗೊಳಿಸಲಾಯಿತು. ಲಂಚ ವ್ಯವಹಾರದ ದಲ್ಲಾಳಿ ಪುರುಷೋತ್ತಮ್ ತೋತ್ಲಾನಿಗೆ ಜೈನ್ರನ್ನು ಮುಖಾಮುಖೀಯಾಗಿಸಿ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿತು. ಎಸ್ .ಕೆ. ಜೈನ್, ಪ್ರಕಾಶ್ ಇಂಡಸ್ಟ್ರೀಸ್ನ ಸಿಎಂಡಿ ವೇದ್ ಪ್ರಕಾಶ್ ಅಗರ್ವಾಲ್, ಭೂಷಣ್ ಸ್ಟೀಲ್ ಲಿಮಿಟೆಡ್ನ ಉಪಾಧrಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ನೀರಜ್ ಸಿಂಘಲ್, ದಲ್ಲಾಳಿ ವಿನೀತ್ ಗೋಧ ಸಹಿತ ಕೆಲವು ಮಂದಿಯನ್ನು ಸಿಬಿಐ ಸಾಲ ಮಂಜೂರು ಮಾಡಲು ಲಂಚ ಸ್ವೀಕರಿಸಿದ ಆರೋಪದಲ್ಲಿ ಬಂಧಿಸಿತ್ತು.

2014; ದುಬೈ: ಧ್ವನಿ ಪ್ರತಿಷ್ಠಾನದಿಂದ ಪ್ರತಿ ವರ್ಷ ನೀಡುವ ಧ್ವನಿ ಶ್ರೀರಂಗ ಅಂತಾರಾಷ್ಟ್ರೀಯ ರಂಗ ಪ್ರಶಸ್ತಿಗೆ ಖ್ಯಾತ ಸಾಹಿತಿ ಪ್ರೊ.ಎಚ್.ಎಸ್.ಶಿವಪ್ರಕಾಶ್ ಆಯ್ಕೆಯಾದರು. ಸೆ.26ರಂದು ದುಬೈನ ಸರ್ಕಾರಿ ಸ್ವಾಮ್ಯದ ಆಲ್ ನಾಸರ್ ಲೀಜರ್ ಲ್ಯಾಂಡ್​ನ ಅಲ್ ನಶ್ವನ್ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯರ್ ತಿಳಿಸಿದರು.

2014: ನವದೆಹಲಿ: ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಜೋಧಪುರದಲ್ಲಿ ಜೈಲಿನಲ್ಲಿ ಇರುವ ಸ್ವಯಂ ಘೋಷಿತ ದೇವಮಾನವ ಅಸರಾಮ್​ ಬಾಪುಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿತು. ಅನಾರೋಗ್ಯದ ಕಾರಣ ನೀಡಿ 72 ವರ್ಷ ವಯಸ್ಸಿನ ಅಸರಾಮ್​ಬಾಪು ಜಾಮೀನು ನೀಡುವಂತೆ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಪೀಠ ಜಾಮೀನು ಅರ್ಜಿಯನ್ನು ವಜಾಗೊಳಿಸಿತು. 2013ರಲ್ಲಿ ಜೋಧಪುರದ ಆಶ್ರಮದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಅಸರಾಮ್​ ಬಂಧನಕ್ಕೊಳಗಾಗಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಜಾಮೀನು ಮಂಜೂರು ಮಾಡುವ ತುರ್ತ ಏನಿಲ್ಲ ಎಂದಿದೆ.

2014: ನವದೆಹಲಿ: ಜನಪ್ರಿಯ ಕ್ರಿಕೆಟ್ ಇತಿಹಾಸಕಾರ ಮತ್ತು ಅಂಕಿ-ಅಂಶ ತಜ್ಞ ಆನಂದಜೀ ದೊಸ್ಸಾ ಹಿಂದಿನ ದಿನ (ಸೆಪ್ಟೆಂಬರ್ 22) ನಿಧನರಾದರು. ಮೃತರಿಗೆ 98 ವರ್ಷ ವಯಸ್ಸಾಗಿತ್ತು. ಆನಂದಜೀ ಮತ್ತು ಅವರ ಪತ್ನಿ ಕಳೆದೊಂದು ವರ್ಷದಿಂದ ತಮ್ಮ ಮಗಳ ಜತೆ ನ್ಯೂಯಾರ್ಕ್​ನಲ್ಲೇ ವಾಸವಿದ್ದರು. ಆನಂದಜೀ ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿತ್ತು. ಆನಂದಜೀ ಸ್ವತಃ ಕ್ರಿಕೆಟಿಗರಾಗಿದ್ದು, ಶಾಲಾ, ಕಾಲೇಜು ಜೀವನದಲ್ಲಿ ಸಾಕಷ್ಟು ಪಂದ್ಯಗಳನ್ನು ಆಡಿದ ಅನುಭವ ಕೂಡ ಹೊಂದಿದ್ದರು. ಬ್ಯಾಟ್ಸ್​ಮನ್ ಆಗಿದ್ದ ಆನಂದಜೀ ಹಿಂದೂ ಜಮಖಾನ ಪರ ಕೂಡ ಆಡಿದ್ದರು. ಕ್ರಿಕೆಟ್ ಕುರಿತ ಪತ್ರಿಕೆಗಳಿಗೆ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದ ಹೆಗ್ಗಳಿಕೆ ಅವರದ್ದಾಗಿತ್ತು.

2008: ದೆಹಲಿಯಲ್ಲಿ ನಡೆದ ಸರಣಿ ಸ್ಫೋಟ ಸಂಚಿನಲ್ಲಿ ಭಾಗಿಯಾಗಿದ್ದ ಶಂಕಿತ ಉಗ್ರಗಾಮಿಯೊಬ್ಬನ ಬ್ಯಾಂಕ್ ಖಾತೆ ಮೂಲಕ ಕೇವಲ ಆರು ತಿಂಗಳ ಅವಧಿಯಲ್ಲಿ 3 ಕೋಟಿ ರೂಪಾಯಿಯ ಭಾರಿ ಮೊತ್ತದ ವ್ಯವಹಾರ ನಡೆದಿರುವುದು ಪತ್ತೆಯಾಯಿತು. ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಇದನ್ನು ಪತ್ತೆಹಚ್ಚಿತು..ದೆಹಲಿ ಪೊಲೀಸ್ ಹಾಗೂ ಎಟಿಎಸ್ ಜಂಟಿ ತಂಡವು ಖ್ಯಾತ ವೈದ್ಯರೊಬ್ಬರನ್ನೂ ಈ ಸಂಬಂಧ ಪ್ರಶ್ನಿಸಿದ್ದಲ್ಲದೆ, ದೆಹಲಿ ಗುಂಡಿನ ಚಕಮಕಿಯಲ್ಲಿ ಹತರಾದ ಇಬ್ಬರು ಉಗ್ರರ ಸ್ವಂತ ಊರಾದ ಸಂಜಾರ್ ಪುರಕ್ಕೆ ತೆರಳಿ ಕೆಲವು ಸಿ.ಡಿ.ಗಳು ಹಾಗೂ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿತು..

2008: ಭಾರತ ಅಂಚೆ ಇಲಾಖೆಯು `ಹಾರುತ್ತಿರುವ ಪಕ್ಷಿ'ಯ ಹೊಸ ಲಾಂಛನವನ್ನು (ಲೋಗೊ) ಪಡೆದುಕೊಂಡಿತು. ಲಾಂಛನದಲ್ಲಿನ ದಟ್ಟ ಗೆರೆಗಳು ಸ್ವತಂತ್ರ  ಹಾರಾಟವನ್ನು ಬಿಂಬಿಸುತ್ತವೆ.  ಬಣ್ಣಗಳು- ಕೆಂಪು, ಹಳದಿ. ಕೆಂಪು  - ಅಂಚೆ ಸೇವೆಯೊಂದಿಗಿನ  ಪಾರಂಪರಿಕ  ಬಾಂಧವ್ಯವನ್ನು ಮತ್ತೆ ಬೆಸೆಯುತ್ತದೆ. ಸೇವೆ, ಶಕ್ತಿ ಹಾಗೂ ಬದ್ಧತೆಗಳನ್ನು ಇದು ಧ್ವನಿಸುತ್ತದೆ. ಹಳದಿ ಬಣ್ಣ ಭರವಸೆ, ಖುಷಿ, ಸಂತೋಷವನ್ನು ಬಿಂಬಿಸುತ್ತದೆ. ಈ ಲಾಂಛನವನ್ನು ಅಂಚೆ ಸಿಬ್ಬಂದಿ ಸಹಕಾರದೊಂದಿಗೆ ಆಗ್ಲಿವಿ ಅಂಡ್ ಮಾಥರ್ ವಿನ್ಯಾಸಗೊಳಿಸಿದೆ. ಮೊದಲ ನೋಟಕ್ಕೆ ಇದೊಂದು ಲಕೋಟೆ. ಅಲ್ಲಿ `ಹಾರುತ್ತಿರುವ ಪಕ್ಷಿ' ಅಂಚೆ ಸೇವೆಗೆ ಕಾಪರ್ೊರೆಟ್ ರೂಪ ಹಾಗೂ ಬಿಸಿನೆಸ್ ಬಗ್ಗೆ ಹೊಂದಿರುವಂತಹ ಹೊಸ ದೃಷ್ಟಿಕೋನವನ್ನು ಧ್ವನಿಸಲಿದೆ ಎಂಬುದು ಕೇಂದ್ರ ಸಂಪರ್ಕ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಎ.ರಾಜ ಅವರ ಅಭಿಪ್ರಾಯ..

2008: ಬಣ್ಣ, ಬಣ್ಣದ ಬಲೂನುಗಳೆಂದರೆ ಮಕ್ಕಳಿಗೆ ಪಂಚಪ್ರಾಣ. ದೊಡ್ಡವರಿಗೂ ಇಷ್ಟ. ಹತ್ತಾರು ಜನರನ್ನು ಆಕಾಶದಲ್ಲಿ ತೇಲಾಡಿಸುವ ಗಾಳಿ ಬುಗ್ಗೆ ಸಹ ಬಲೂನಿನ ದೈತ್ಯ ರೂಪ. ಈಗ ವಿಜ್ಞಾನಿಗಳು ವಿಶ್ವದಲ್ಲೇ ಅತಿ ಚಿಕ್ಕದಾದ ಬಲೂನ್ ಕಂಡುಹಿಡಿದಿರುವುದನ್ನು ಪ್ರಕಟಿಸಿದರು. ಈ ಬಲೂನು ಎಷ್ಟು ಚಿಕ್ಕದು ಅಂದರೆ ಇದರ ಪದರಗಳ ದಪ್ಪ  ಕೇವಲ ಒಂದು ಪರಮಾಣುವಿನಷ್ಟು...! ಗ್ರಾಫೈಟ್ ಹಾಗೂ ಸಿಲಿಕಾನ್ ಬಳಸಿ ಅಮೆರಿಕದ ಕಾರ್ನೆಲ್ ವಿವಿ ವಿಜ್ಞಾನಿಗಳು ವಿಶ್ವದಲ್ಲೇ ಅತಿ ಚಿಕ್ಕದಾದ ಈ ಬಲೂನ್ ರೂಪಿಸಿದ್ದು, ಇದು ಭಾರಿ ಒತ್ತಡವನ್ನು ತಡೆದುಕೊಳ್ಳಬಲ್ಲುದು. ಈ ಅತಿ ಚಿಕ್ಕ ಬಲೂನ್ ಸಂಶೋಧನೆಯಿಂದ ಹತ್ತು ಹಲವು ತಂತ್ರಜ್ಞಾನ ರೂಪಿಸಬಹುದಾಗಿದೆ ಎಂದು ವಿಜ್ಞಾನಿಗಳು ನ್ಯೂಯಾರ್ಕಿನಲ್ಲಿ ಪ್ರಕಟಿಸಿದರು.

 2008: ಬೆಂಗಳೂರು ನಗರದಲ್ಲಿ ಹೊಸದಾಗಿ ಸ್ಥಾಪಿಸಿದ `ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ'ಕ್ಕೆ ವಿಶೇಷ ಅಧಿಕಾರಿಯಾಗಿ ಹಂಪಿ ಕನ್ನಡ ವಿ.ವಿ. ಪ್ರಾಧ್ಯಾಪಕ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ್ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿತು. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ವಿಶ್ವೇಶ್ವರಪುರದವರಾದ ಮಲ್ಲೇಪುರಂ, ಸಿದ್ದಲಿಂಗೇಶ್ವರ ಸಂಸ್ಕೃತ ಪಾಠಶಾಲಯಲ್ಲಿ ಕನ್ನಡ ಪಂಡಿತ, ಹಂಪಿ ವಿ.ವಿ.ಯಲ್ಲಿ ಕುಲಸಚಿವ, ಭಾಷಾ ನಿಕಾಯ ಡೀನ್, ಪ್ರಸಾರಾಂಗ, ಅಧ್ಯಯನಾಂಗ ನಿರ್ದೇಶಕರು, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು.

2007: ಶ್ರೀರಾಮನನ್ನು ನಿಂದಿಸಿದ್ದಕ್ಕಾಗಿ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ತಲೆ ತೆಗೆಯಬೇಕು ಎಂದು ಬಿಜೆಪಿಯ ಮಾಜಿ ಸಂಸದರೊಬ್ಬರು ಹೊರಡಿಸಿದ್ದ `ಫತ್ವಾ'ದಿಂದ ಕುಪಿತಗೊಂಡ ಆಡಳಿತ ಡಿಎಂಕೆ ಪಕ್ಷದ 300ಕ್ಕೂ ಹೆಚ್ಚು ಕಾರ್ಯಕರ್ತರು ಚೆನ್ನೈಯಲ್ಲಿ ವೈದ್ಯರಾಮನ್ ಬೀದಿಯಲ್ಲಿನ ಬಿಜೆಪಿ, ವಿಎಚ್ಪಿ ಮತ್ತು ಹಿಂದೂ ಮುನ್ನಣಿ ಕಚೇರಿಗಳ ಮೇಲೆ ದಾಳಿ ನಡೆಸಿದರು. ಈ ದಾಳಿಯಲ್ಲಿ ಪಕ್ಷದ ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ತಮಿಳಿಸೈ ಸೌಂದರ್ ರಾಜನ್ ಸೇರಿ 8 ಮಂದಿ ಗಾಯಗೊಂಡರು. ಕೆಲ ಪೊಲೀಸರಿಗೂ ಪೆಟ್ಟಾಯಿತು. ಕಾರೈಕುಡಿಯಲ್ಲಿ ಮಾಜಿ ಸಂಸದ, ಬಿಜೆಪಿಯ ಎಚ್.ರಾಜಾ ಅವರ ಮನೆ ಕೂಡ ದಾಳಿಗೆ ತುತ್ತಾಯಿತು. ಟಿವಿ ಕ್ಯಾಮರಾಗಳ ಸಮ್ಮುಖದಲ್ಲಿಯೇ ಇಡಿ ದಾಳಿ ನಡೆಯಿತು. ಆದರೆ ಪೊಲೀಸರು ಮಾತ್ರ ಅಕ್ಷರಶಃ ಮೂಕಪ್ರೇಕ್ಷರಾಗಿದ್ದರು. ಬಿಜೆಪಿ ಕಚೇರಿ ಮೇಲಿನ ದಾಳಿಯ ನೇತೃತ್ವವನ್ನು ದಕ್ಷಿಣ ಚೆನ್ನೈನ ಡಿಎಂಕೆ ಘಟಕದ ಕಾರ್ಯದರ್ಶಿ ಅನ್ಬಳಗನ್ ವಹಿಸಿದ್ದರು. ರಾಮ ನಿಂದನೆ ಮಾಡಿದ ಕರುಣಾನಿಧಿ ಅವರ ತಲೆ ತೆಗೆಯುವವರಿಗೆ ಅಷ್ಟೇ ತೂಕದ ಚಿನ್ನ ಕೊಡುವುದಾಗಿ ಬಿಜೆಪಿ ಮಾಜಿ ಸಂಸದ ಹಾಗೂ ವಿಎಚ್ಪಿ ನಾಯಕ ರಾಮ್ ವಿಲಾಸ್ ವೇದಾಂತಿ ಅಯೋಧ್ಯೆಯಲ್ಲಿ ನೀಡಿದ ಪ್ರಚೋದನಕಾರಿ ಫತ್ವಾ ಈ ಎಲ್ಲ ರಾದ್ಧಾಂತಕ್ಕೆ ಕಾರಣವಾಯಿತು. ಇದನ್ನು ಹಿಂತೆಗೆದುಕೊಳ್ಳದಿದ್ದರೆ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಡಿಎಂಕೆ ಧುರೀಣ ಹಾಗೂ ರಾಜ್ಯದ ವಿದ್ಯುತ್ ಖಾತೆ ಸಚಿವ ಅರ್ಕಾಟ್ ಎನ್.ವೀರಾಸ್ವಾಮಿ ಎಚ್ಚರಿಸಿದ ಬೆನ್ನಲ್ಲೇ ಈ ದಾಳಿ ನಡೆಯಿತು.

2007: ರಾಮಸೇತು ವಿಚಾರದಲ್ಲಿ ಹಿಂದುಗಳ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎಂದು ಆರೋಪಿಸಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಮತ್ತು ಮೂವರು ಕೇಂದ್ರ ಸಚಿವರ ವಿರುದ್ಧ ಭಾರತೀಯ ಜನಶಕ್ತಿ ಪಕ್ಷದ ನಾಯಕಿ ಉಮಾ ಭಾರತಿ ಅವರು ನವದೆಹಲಿಯ ಸಂಸತ್ ಭವನ ರಸ್ತೆಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ರಾಮಸೇತು ವಿಚಾರದಲ್ಲಿ ಹಿಂದುಗಳ ಭಾವನೆಗಳಿಗೆ ನೋವುಂಟು ಮಾಡಿರುವ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ವಿರುದ್ಧ ವಿಎಚ್ ಪಿ ಕಾರ್ಯಕರ್ತರು ಮತ್ತು ಸಮಾನಮನಸ್ಕರು ದೂರು ದಾಖಲಿಸಬೇಕು ಎಂದು ವಿಶ್ವ ಹಿಂದು ಪರಿಷತ್ ಕರೆ ನೀಡಿತು.

2007: ಭಾರತೀಯ ಸಂಗೀತ ಲೋಕಕ್ಕೆ ಮೊಟ್ಟ ಮೊದಲ ಸಲ ಲತಾ ಮಂಗೇಶ್ಕರ್ ಅವರ ಮಧುರ ಧ್ವನಿಯನ್ನು ಪರಿಚಯಿಸಿದ್ದ ಮರಾಠಿಯ ಹೆಸರಾಂತ ಸಂಗೀತ ನಿರ್ದೇಶಕ ದತ್ತಾ ದವಜೇಕರ್ (90)ಅವರು ಮುಂಬೈಯಲ್ಲಿ ನಿಧನರಾದರು.

2007: ಉದಾರವಾದಿ ಮುಖಂಡ ಯಸುವೊ ಫುಕುಡಾ (71) ಅವರು ಜಪಾನಿನ ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷರಾಗಿ ಭಾರಿ ಬಹುಮತದಿಂದ ಆಯ್ಕೆಯಾದರು. ಹೀಗಾಗಿ ಇತ್ತೀಚೆಗೆ ರಾಜೀನಾಮೆ ನೀಡಿದ ಶಿಂಜೊ ಅಬೆ ಸ್ಥಾನದಲ್ಲಿ ಅವರು ಪ್ರಧಾನಿ ಹುದ್ದೆಗೆ ಏರಲು ಹಾದಿ ಸುಗಮಗೊಂಡಿತು.

2007: ಬಂಗಾಳ ಕೊಲ್ಲಿಯಲ್ಲಿ ಎದ್ದ ಚಂಡಮಾರುತಕ್ಕೆ ಸಿಲುಕಿ ಬಾಂಗ್ಲಾದೇಶದ ಸುಮಾರು 1 ಸಾವಿರಕ್ಕೂ ಹೆಚ್ಚು ಮೀನುಗಾರರು ನಾಪತ್ತೆಯಾದರು. ಬರಿಸಾಲ್, ಬರ್ಗುನ, ಪತುಖೊಲಿ, ಬಗೇರ್ ಹತ್ ಹಾಗೂ ಕಾಕ್ಸ್ ಬಜಾರ್ ಕರಾವಳಿಯಲ್ಲಿ ಸುಮಾರು 91 ಮಂದಿಯನ್ನು ರಕ್ಷಿಸಲಾಯಿತು.

2007: ಭಾರತೀಯ ಗೋರಕ್ಷೆಯ ಆಂದೋಲನ ಭಾರತದ ಎರಡನೇ ಸ್ವಾತಂತ್ರ್ಯ ಸಂಗ್ರಾಮ. ಗೋವಿನ ಹಾಲುಂಡ ಎಲ್ಲರೂ ಜಾತಿಭೇದ, ಪಕ್ಷ ಭೇದವಿಲ್ಲದೆ ಈ ಸಂಗ್ರಾಮದಲ್ಲಿ ಪಾಲ್ಗೊಳ್ಳಬೇಕು ಎಂದು ಶ್ರೀ  ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಅವರು ಎಚ್.ಬಿ.ಆರ್. ಬಡಾವಣೆಯ ಕಾಚರಕನಹಳ್ಳಿ ಕೋದಂಡರಾಮ ದೇವಸ್ಥಾನದ ಸಮೀಪ ನಡೆದ ಯಲಹಂಕ ವಲಯ ಗೋಸಂಧ್ಯಾ ಕಾರ್ಯಕ್ರಮದಲ್ಲಿ ಕರೆ ನೀಡಿದರು. ಸ್ವಾತಂತ್ರ್ಯ ಲಭಿಸಿದ್ದರೂ ನಾವು ಇಂದಿಗೂ ಉಡುಗೆ, ತೊಡುಗೆ, ಶಿಕ್ಷಣ, ವ್ಯವಹಾರ, ಹಾಲಿನ ವಿಚಾರದಲ್ಲಿ ಕೂಡಾ ಬ್ರಿಟಿಷರ ದಾಸರಾಗಿ ಉಳಿದಿದ್ದೇವೆ. ಹಾಲು-ತುಪ್ಪದ ಹೊಳೆ ಹರಿಸಿ, `ಗೋರಾಷ್ಟ್ರ' ಎಂಬ ಹೆಸರಿಗೆ ಪಾತ್ರವಾಗಿದ್ದ ಈ ಭಾರತದಲ್ಲಿ ಗೋವಿಗೆ ಅಪಚಾರ, ಗೋವಧೆ ಮಾಡುತ್ತಿದ್ದೇವೆ ಎಂದು ಅವರು ವಿಷಾದಿಸಿದರು. ನಮ್ಮ ದೇಹದ ಬಿಂದು ಬಿಂದು ರಕ್ತದ ಹಿಂದೆ ಹಂಡೆ ಹಂಡೆ ಗೋವಿನ ಹಾಲು ಇದೆ. ಗೋಮೂತ್ರ, ಗೋಮಯದಿಂದ ಬೆಳೆದ ಅನ್ನ ಉಂಡು ನಮ್ಮ ದೇಹ ಬೆಳೆದಿದೆ. ಗೋವಿನಿಂದ ಬಂದ ಈ ದೇಹವನ್ನು ಗೋವಿಗಾಗಿ ತೆರಲೂ ಸಿದ್ಧವಿರಬೇಕು. ಮುಂದಿನ ಪೀಳಿಗೆಗಾಗಿ ಗೋರಕ್ಷೆಯ ಮಹಾ ಸಂಕಲ್ಪ ತೊಡಬೇಕು ಎಂದು ಅವರು ಹೇಳಿದರು. ಕೃಷ್ಣರಾಜಪುರ ಭಾರತಮಾತಾ ಆಶ್ರಮದ ಸಾಧು ರಂಗರಾಜನ್, ಮಾರತ್ ಹಳ್ಳಿ ವಿಭೂತಿಪುರ ಮಠದ ಮಹಂತಲಿಂಗ ಶಿವಾಚಾರ್ಯ ಸ್ವಾಮೀಜಿ,  ಪಾರ್ವತಮ್ಮ ರಾಜಕುಮಾರ್ ಮಾತನಾಡಿ ಭಾರತೀಯ ಗೋತಳಿ ರಕ್ಷಣೆಯ ಕಾರ್ಯ ಎಲ್ಲೆಡೆಗೆ ಹರಡಲಿ ಎಂದು ಹಾರೈಸಿದರು. ಖ್ಯಾತ ಕಲಾವಿದ ಬಿ.ಕೆ.ಎಸ್. ವರ್ಮ ಅವರು ಸಾಕ್ಷಾತ್ಕಾರ ಶಾಲೆಯ ಮಕ್ಕಳು ಗೋವಿನ ಹಾಡು ಹಾಡುತ್ತಿದ್ದಂತೆಯೇ ಗೋವಿನ ಸುಂದರ ಚಿತ್ರ ರಚಿಸಿದರು.

2006: ಕೇಂದ್ರದ ಯುಪಿಎ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ತೆಲಂಗಾಣ ರಾಷ್ಟ್ರೀಯ ಸಮಿತಿಯು (ಟಿಆರ್ ಎಸ್) ಹಿಂತೆಗೆದುಕೊಂಡಿತು.

2001: ಗೀತ್ ಸೇಥಿ ಅವರು ನ್ಯೂಜಿಲೆಂಡಿನ ಕ್ರೈಸ್ಟ್ ಚರ್ಚಿನಲ್ಲಿ ನಡೆದ ಸ್ಪರ್ಧೆಯಲ್ಲಿ ಅಶೋಕ ಶಾಂಡಿಲ್ಯ ಅವರನ್ನು 3484-1289 ಅಂತರದಲ್ಲಿ ಪರಾಭವಗೊಳಿಸಿ ವಿಶ್ವ ಪ್ರೊಫೆಷನಲ್ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್ ಗೆದ್ದುಕೊಂಡರು. ಇದರೊಂದಿಗೆ ಈ ಜಾಗತಿಕ ಪ್ರಶಸ್ತಿಯನ್ನು ಏಳನೇ ಬಾರಿಗೆ ಗೆದ್ದ ಹೆಗ್ಗಳಿಕೆ ಅವರದಾಯಿತು.

2000: ರೋವರ್ ಸ್ಟೀವನ್ ರೆಡ್ ಗ್ರೇವ್ ಅವರು  ಸಿಡ್ನಿ ಒಲಿಂಪಿಕ್ಸಿನ ಕಾಕ್ಸ್ ಲೆಸ್ ಪೇರ್ಸಿನಲ್ಲಿಸ್ವರ್ಣಪದಕ ಗೆಲ್ಲುವುದರೊಂದಿಗೆ ಒಲಿಂಪಿಕ್ಸಿನಲ್ಲಿ ನಿರಂತರವಾಗಿ ಐದು ಬಾರಿ ಸ್ವರ್ಣ ಪದಕ ಗೆದ್ದ ಪ್ರಥಮ ಬ್ರಿಟಿಷ್ ಅಥ್ಲೆಟ್ ಎಂಬ ಕೀರ್ತಿಗೆ ಭಾಜನರಾದರು. ಎಂಡ್ಯೂರೆನ್ಸ್ ಕ್ರೀಡೆಯಲ್ಲಿ ಸತತವಾಗಿ ಐದು ಬಾರಿ ಪದಕ ಗೆದ್ದ ವಿಶ್ವದ ಮೊದಲ ಅಥ್ಲೆಟ್ ಎಂಬ ಹೆಗ್ಗಳಿಕೆ ಕೂಡಾ ಇವರದೇ.

1997: ವೇಲ್ಸಿನ ರಾಜಕುಮಾರಿ ಡಯಾನಾಳ ಅಂತ್ಯಸಂಸ್ಕಾರ ಕಾಲದಲ್ಲಿ ಎಲ್ಟನ್ ಜಾನ್ ಅವರು ಸ್ವತಃ ಬರೆದು ಹಾಡಿದ  `ಕ್ಯಾಂಡಲ್ ಇನ್ ದಿ ವಿಂಡ್ 1997' ಹಾಡಿನ ರೆಕಾರ್ಡ್  ನ್ಯೂಯಾರ್ಕ್   ನಗರದಲ್ಲಿ ಮಾರಾಟಕ್ಕೆ ಬಿಡುಗಡೆಯಾಯಿತು. 37 ದಿನಗಳ ನಂತರ ಈ ಹಾಡಿನ ಸಿಡಿ ಮಾರಾಟದಲ್ಲಿ ದಾಖಲೆ ಸ್ಥಾಪಿಸಿತು. ಅದರ ಸುಮಾರು 3.20 ಕೋಟಿ ಪ್ರತಿಗಳು ಮಾರಾಟವಾದವು.

1952: ಭಾರತದ ಮಾಜಿ ಕ್ರಿಕೆಟ್ ಆಟಗಾರ ಮತ್ತು ಕೋಚ್ ಅಂಶುಮಾನ್ ಗಾಯಕವಾಡ್ ಜನ್ಮದಿನ.

1939: `ಮನೋವಿಶ್ಲೇಷಣೆ'ಯ ಸ್ಥಾಪಕ ಸಿಗ್ಮಂಡ್ ಫ್ರಾಯ್ಡ್ ಅವರು ಲಂಡನ್ನಿನಲ್ಲಿ ತಮ್ಮ 83ನೇ ವಯಸ್ಸಿನಲ್ಲಿ ನಿಧನರಾದರು. `ಕೊಪರ್ನಿಕಸ್ ಆಫ್ ಮೈಂಡ್' ಎಂದೇ ಅವರು ಖ್ಯಾತಿ ಪಡೆದಿದ್ದರು.

1934: ಪ್ರಕಾಶಕಿ, ಲೇಖಕಿ, ಅಧ್ಯಾಪಕಿ ಬಿ.ಎಸ್. ರುಕ್ಕಮ್ಮ ಅವರು ಬಿ.ಟಿ. ಶ್ರೀನಿವಾಸ ಅಯ್ಯಂಗಾರ್- ಸೀತಮ್ಮ ದಂಪತಿಯ ಮಗಳಾಗಿ ಜನಿಸಿದರು.

1862: ಚಂದಮ ದೇಶಭಕ್ತ ಶ್ರೀನಿವಾಸ ಶಾಸ್ತ್ರಿ ಜನನ.

1848: ಜಾನ್ ಕರ್ಟಿಸ್ ಅವರು `ಚ್ಯೂಯಿಂಗ್ ಗಮ್'ನ್ನು ಮೊತ್ತ ಮೊದಲ ಬಾರಿಗೆ ಮಾರಾಟದ ಸಲುವಾಗಿ ಉತ್ಪಾದಿಸಿದರು. ಮೈನ್ ನ  ಬ್ಯಾಂಗೋರಿನ ತಮ್ಮ ಮನೆಯಲ್ಲಿ ಸ್ಟೌವಿನಲ್ಲಿ ಇದನ್ನು ಉತ್ಪಾದಿಸಿದ ಅವರು `ಸ್ಟೇಟ್ ಆಫ್ ಮೈನ್ ಪ್ಯೂರ್ ಸ್ಪ್ರೂಸ್ ಗಮ್' ಎಂಬ ಹೆಸರಿನಲ್ಲಿ ಮಾರಾಟ ಮಾಡಿದರು.

1846: ಜರ್ಮನ್ ಖಗೋಳ ತಜ್ಞ ಜೊಹಾನ್ ಗೊಟ್ ಫ್ರೈಡ್ ಗ್ಯಾಲ್ ಅವರು ನೆಪ್ಚೂನ್ ಗ್ರಹವನ್ನು ಕಂಡು ಹಿಡಿದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement