Thursday, December 17, 2009

ಇಂದಿನ ಇತಿಹಾಸ History Today ನವೆಂಬರ್ 24

ಇಂದಿನ ಇತಿಹಾಸ
ನವೆಂಬರ್ 24





ಅಮೆರಿಕದ ನ್ಯೂಜೆರ್ಸಿಯಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ನಿಕ್ಕಿತಾಶಾ ಮರ್ವಾಹಾ ಅವರು 'ಮಿಸ್ ಇಂಡಿಯಾ ಯು ಎಸ್‌ಎ' ಪ್ರಶಸ್ತಿ ಗೆದ್ದರು. ಕಳೆದ ಬಾರಿಯ ಸುಂದರಿ  ರಿಚಾ ಗಂಗೋಪಾಧ್ಯಾಯ ಅವರು ನಿಕ್ಕಿತಾಶಾಗೆ ಕಿರೀಟ ತೊಡಿಸಿದರು.

2008: ಅಮೆರಿಕದ ನ್ಯೂಜೆರ್ಸಿಯಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ನಿಕ್ಕಿತಾಶಾ ಮರ್ವಾಹಾ ಅವರು 'ಮಿಸ್ ಇಂಡಿಯಾ ಯು ಎಸ್‌ಎ' ಪ್ರಶಸ್ತಿ ಗೆದ್ದರು. ಕಳೆದ ಬಾರಿಯ ಸುಂದರಿ  ರಿಚಾ ಗಂಗೋಪಾಧ್ಯಾಯ ಅವರು ನಿಕ್ಕಿತಾಶಾಗೆ ಕಿರೀಟ ತೊಡಿಸಿದರು.

2014: ಮುಂಬೈ: ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಮುರಳಿ ದೇವ್ರಾ ಅವರು ಸೋಮವಾರ ನಸುಕಿನ 3.25ರ ವೇಳೆಯಲ್ಲಿ ನಿಧನರಾದರು. 77 ರ ಹರೆಯದ ದೇವ್ರಾ ಪತ್ನಿ, ಮಾಜಿ ಸಂಸದ ಮಿಲಿಂದ್ ದೇವ್ರಾ ಸೇರಿದಂತೆ ಇಬ್ಬರು ಪುತ್ರರನ್ನು ಅಗಲಿದರು. ದೀರ್ಘಕಾಲದಿಂದ ಅಸ್ವಸ್ಥರಾಗಿದ್ದ ದೇವ್ರಾ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಎರಡು ದಿನಗಳ ಹಿಂದಷ್ಟೇ ಅವರನ್ನು ಮನೆಗೆ ಕರೆತರಲಾಗಿತ್ತು. ಮುರಳಿ ಬಾಯಿ ಎಂಬುದಾಗಿಯೇ ಪರಿಚಿತರಾಗಿದ್ದ ದೇವ್ರಾ 1975ರಲ್ಲಿ ಮೊತ್ತ ಮೊದಲ ಬಾರಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸುವುದರೊಂದಿಗೆ ರಾಜಕೀಯ ಕ್ಷೇತ್ರಕ್ಕೆ ಕಾಲಿರಿಸಿದ್ದರು. ಆ ಬಳಿಕದ ತಮ್ಮ ಸುದೀರ್ಘ ರಾಜಕೀಯ ಬದುಕಿನಲ್ಲಿ ಹಲವಾರು ಮಹತ್ವದ ಹುದ್ದೆಗಳನ್ನು ಅವರು ನಿಭಾಯಿಸಿದ್ದರು. ಆರ್ಥಿಕ ವಿಷಯದ ಪದವೀಧರರಾಗಿದ್ದ ದೇವ್ರಾ 1977-78ರಲ್ಲಿ ಮುಂಬೈಯ ಮೇಯರ್ ಆಗಿದ್ದರು. ಬಳಿಕ ನಾಲ್ಕು ಬಾರಿ ಮುಂಬೈ ದಕ್ಷಿಣ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಬಳಿಕ ದೇವ್ರಾ ಪುತ್ರ ಮಿಲಿಂದ್ ಈ ಕ್ಷೇತ್ರವನ್ನು ಪ್ರತಿನಿಧಿಸಿದರು. ಯುಪಿಎ-1 ಆಡಳಿತಾವಧಿಯಲ್ಲಿ ಪೆಟ್ರೋಲಿಯಂ ಮತ್ತು ಅನಿಲ ಖಾತೆ ಸಚಿವರಾಗಿದ್ದ ದೇವ್ರಾ 22 ವರ್ಷಗಳ ಕಾಲ ಮುಂಬೈ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 2006ರಲ್ಲಿ 70ರ ಹರೆಯಕ್ಕೆ ಕಾಲಿರಿಸುವುದಕ್ಕೆ ಸ್ವಲ್ಪ ಮೊದಲು ಕೇಂದ್ರ ಸಂಪುಟಕ್ಕೆ ಸೇರ್ಪಡೆಯಾಗಿದ್ದ ದೇವ್ರಾ ಮ್ಯಾನ್ಮಾರ್, ಅಲ್ಜೀರಿಯಾ ಮತ್ತು ಈಜಿಪ್ಟ್​ನಲ್ಲಿ ತೈಲರಾಜತಂತ್ರ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಸುಡಾನ್, ಚಡ್, ಇಥಿಯೋಪಿಯಾ ಮತ್ತು ಕೋಮ್ರೋಸ್ ಸಚಿವರ ಜೊತೆಗೆ ಅವರು ಮಾತುಕತೆ ನಡೆಸಿದ್ದರು. 2007ರ ನವೆಂಬರಿನಲ್ಲಿ ದೇವ್ರಾ ಅವರು ಮೊತ್ತ ಮೊದಲ ಭಾರತ-ಆಫ್ರಿಕಾ ಹೈಡ್ರೋಕಾರ್ಬನ್ ಸಮ್ಮೇಳನ ಮತ್ತು ವಸ್ತು ಪ್ರದರ್ಶನವನ್ನು ಸಂಘಟಿಸಿದ್ದರು. 2011ರ ಜುಲೈಯಲ್ಲಿ ಅವರು ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಖಾತೆಯ ರಾಜ್ಯ ಸಚಿವರಾಗಿದ್ದರು. 2006ರಿಂದ 2011ರ ಜುಲೈವರೆಗೆ ಪೆಟ್ರೋಲಿಯಂ, ನೈಸರ್ಗಿಕ ತೈಲ ಹಾಗೂ ಕಾರ್ಪೋರೇಟ್ ವ್ಯವಹಾರಗಳ ಸಚಿವರಾಗಿದ್ದ ಮುರಳಿ ದೇವ್ರಾ ನಾಲ್ಕುಬಾರಿ ಲೋಕಸಭಾ ಸದಸ್ಯರಾಗಿದ್ದರು. ಮೂರು ಬಾರಿ ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. 2002ರ ಏಪ್ರಿಲ್​ನಿಂದ ಈದಿನ ನಸುಕಿನಲ್ಲಿ ನಿಧನರಾಗುವವರೆಗೂ ಅವರು ಮೇಲ್ಮನೆಯಲ್ಲಿ ಮಹಾರಾಷ್ಟ್ರವನ್ನು ಪ್ರತಿನಿಧಿಸಿದ್ದರು.

2014: ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ ಮುರಳಿ ದೇವ್ರಾ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಶೋಕ ವ್ಯಕ್ತ ಪಡಿಸಿದರು. ದೇವ್ರಾ ಅವರ ಸನ್ನಡೆಯ ಸ್ವಭಾವ ಅವರನ್ನು ಪಕ್ಷಾತೀತರಾಗಿ ಜನಪ್ರಿಯರನ್ನಾಗಿ ಮಾಡಿತ್ತು ಎಂದು ಮೋದಿ ಕೊಂಡಾಡಿದರು.  'ನಿನ್ನೆಯಷ್ಟೇ ನಾನು ಶ್ರೀ ಮುರಳಿ ದೇವ್ರಾ ಅವರ ಕುಟುಂಬದ ಜೊತೆಗೆ ಮಾತನಾಡಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದೆ. ಇಂದು ಅವರ ಸಾವಿನ ಸುದ್ದಿ ಕೇಳಬೇಕಾಗಿ ಬಂದದ್ದು ಅತ್ಯಂತ ದುರದೃಷ್ಟಕರ' ಎಂದು ಪ್ರಧಾನಿ ಟ್ವಿಟ್ಟರ್ ಸಂದೇಶದಲ್ಲಿ ತಿಳಿಸಿದರು. ಹಿರಿಯ ಕಾಂಗ್ರೆಸ್ ನಾಯಕ ಮುರಳಿ ದೇವ್ರಾ ಎಂಬುದಾಗಿ ಟ್ವಿಟ್ಟರ್​ನಲ್ಲಿ ಉಲ್ಲೇಖಿಸಿದ ಪ್ರಧಾನಿ 'ಶ್ರೀ ಮುರಳಿ ದೇವ್ರಾ ಅವರ ನಿಧನದ ಸಂದರ್ಭದಲ್ಲಿ ದೇವ್ರಾ ಕುಟುಂಬಕ್ಕೆ ನನ್ನ ಅತೀವ ಶೋಕ ವ್ಯಕ್ತ ಪಡಿಸುತ್ತಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಕೋರಿದರು. 'ಸಮಾಜಸೇವೆಗೆ ತಮ್ಮನ್ನು ಮುಡಿಪಾಗಿಟ್ಟ ನಾಯಕ, ಮುರಳಿ ದೇವ್ರಾ ಅವರ ಸನ್ನಡೆಯ ಸ್ವಭಾವ ಅವರನ್ನು ಪಕ್ಷಾತೀತವಾಗಿ ಜನಪ್ರಿಯರನ್ನಾಗಿ ಮಾಡಿತ್ತು. ಅವರ ಸಾವಿನ ಸುದ್ದಿ ಬೇಸರ ಉಂಟು ಮಾಡಿದೆ' ಎಂದು ಮೋದಿ ಸರಣಿ ಟ್ವೀಟ್​ಗಳಲ್ಲಿ ಬರೆದರು.

2014: ನವದೆಹಲಿ: ಮಾಜಿ ಕೇಂದ್ರ ಸಚಿವ ಮುರಳಿ ದೇವ್ರಾ ಸೇರಿದಂತೆ ಮೂವರು ಹಾಲಿ ಸಂಸತ್ ಸದಸ್ಯರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಸಂಸತ್ತಿನ ಉಭಯ ಸದನಗಳ ಕಲಾಪಗಳನ್ನು ಮುಂದೂಡಲಾಯಿತು. ರಾಜ್ಯಸಭೆಯಲ್ಲಿ ಸದನ ಸಮಾವೇಶಗೊಳ್ಳುತ್ತಿದ್ದಂತೆಯೇ ಸಭಾಪತಿ ಹಮೀದ್ ಅನ್ಸಾರಿ ಅವರು ಮುಂಬೈಯಲ್ಲಿ ತಮ್ಮ 77 ನೇ ವಯಸ್ಸಿನಲ್ಲಿ ದೇವ್ರಾ ಅವರು ನಿಧನರಾದ ವಿಚಾರವನ್ನು ಪ್ರಸ್ತಾಪಿಸಿದರು. ಲೋಕಸಭೆಯಲ್ಲಿ ಹಾಲಿ ಸದಸ್ಯರಾದ ಹೇಮೇಂದ್ರ ಚಂದ್ರ ಸಿಂಗ್ (ಬಿಜೆಡಿ) ಮತ್ತು ಕಪಿಲ್ ಕೃಷ್ಣ ಥಾಕೂರ್ (ತೃಣಮೂಲ ಕಾಂಗ್ರೆಸ್) ಅವರ ನಿಧನಕ್ಕೆ ಸದಸ್ಯರು ಶೋಕ ವ್ಯಕ್ತ ಪಡಿಸಿದರು. ಹೇಮೇಂದ್ರ ಚಂದ್ರ ಸಿಂಗ್ ಅವರ ಪತ್ನಿ ಪ್ರತ್ಯೂಷಾ ರಾಜೇಶ್ವರಿ ಸಿಂಗ್ (ಬಿಜೆಡಿ) ಅವರು ಕಂಧಮಲ್​ನಲ್ಲಿ ನಡೆದ ಲೋಕಸಭಾ ಉಪಚುನಾವಣೆಯಲ್ಲಿ ಜಯಗಳಿಸಿದ್ದಾರೆ. ಲೋಕಸಭೆಯು ಮಾಜಿ ಸದಸ್ಯರಾದ ಅಮಿತವ ನಂದಿ, ಎಂ.ಎಸ್. ಸಂಜೀವಿ ರಾವ್, ಅವೈದ್ಯನಾಥ್, ಸೈಫುದ್ದೀನ್ ಚೌಧರಿ ಮತ್ತು ಸಂಜಯ್ ಸಿಂಗ್ ಅವರ ನಿಧನಕ್ಕೂ ಸಂತಾಪ ವ್ಯಕ್ತ ಪಡಿಸಿತು. ಇತ್ತೀಚಿನ ಉಪ ಚುನಾವಣೆಗಳಲ್ಲಿ ಜಯಗಳಿಸಿದ ಐವರ ಸದಸ್ಯರ ಪೈಕಿ ಮೂವರು ಈದಿನ ಸದನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ತೆರವುಗೊಳಿಸಿದ್ದ ವಡೋದರಾ ಕ್ಷೇತ್ರವನ್ನು ಗೆದ್ದ ರಂಜನಾಬೆನ್ ಭಟ್ (ಬಿಜೆಪಿ), ಮಹಾರಾಷ್ಟ್ರದ ಬೀಡ್ ಕ್ಷೇತ್ರದಲ್ಲಿ ಗೆದ್ದ ಪ್ರೀತಮ್​ಗೋಪಿನಾಥ ಮುಂಡೆ (ಬಿಜೆಪಿ) (ತಂದೆ ಗೋಪಿನಾಥ ಮುಂಡೆ ಸಾವಿನಿಂದ ತೆರವಾಗಿದ್ದ ಕ್ಷೇತ್ರ), ಮುಲಯಂ ಸಿಂಗ್ ಯಾದವ್ ತೆರವುಗೊಳಿಸಿದ್ದ ಮೈನಪುರಿ ಕ್ಷೇತ್ರದಲ್ಲಿ ಗೆದ್ದ ತೇಜ್ ಪ್ರತಾಪ್ ಯಾದವ್ (ಎಸ್​ಪಿ) ಈದಿನ ಪ್ರಮಾಣ ವಚನ ಸ್ವೀಕರಿಸಿದರು. ಬಳಿಕ ಮೋದಿ ಅವರು ನವೆಂಬರ್ 9ರಂದು ಸಂಪುಟಕ್ಕೆ ಸೇರ್ಪಡೆಯಾದ ನೂತನ ಸಚಿವರನ್ನು ಸದನಕ್ಕೆ ಪರಿಚಯಿಸಿದರು. ರಾಜ್ಯಸಭೆಯಲ್ಲಿ ಸಭಾಪತಿ ಹಮೀದ್ ಅನ್ಸಾರಿ ಅವರು 'ಮುರಳಿ ದೇವ್ರಾ ನಿಧನದಿಂದ ರಾಷ್ಟ್ರವು ವಿಶಿಷ್ಟ ಸಂಸತ್ ಪಟು, ದಕ್ಷ ಆಡಳಿತಗಾರ ಹಾಗೂ ಸಮರ್ಪಿತ ಮನೋಭಾವದ ಸಾಮಾಜಿಕ ಕಾರ್ಯಕರ್ತನನ್ನು ಕಳೆದುಕೊಂಡಿದೆ' ಎಂದು ಕೊಂಡಾಡಿದರು.

2014: ಪಟ್ನಾ: ಹಿರಿಯ ಬಿಜೆಪಿ ರಾಜ್ಯ ನಾಯಕ ಶ್ರೀಕಾಂತ ಭಾರ್ತಿ ಅವರನ್ನು ಈದಿನ ನಸುಕಿನ ವೇಳೆಯಲ್ಲಿ ಬಿಹಾರಿನ ಸಿವಾನ್ ಜಿಲ್ಲೆಯಲ್ಲಿ ಗುಂಡೇಟಿನಿಂದ ಕೊಲೆ ಗೈಯಲಾಯಿತು. ಈ ಘಟನೆಗೆ ಅವರ ಬೆಂಬಲಿಗರಿಂದ ಹಿಂಸಾತ್ಮಕ ಪ್ರತಿಭಟನೆ ವ್ಯಕ್ತವಾಯಿತು. ಭಾರ್ತಿ ಅವರನ್ನು ಅಪರಿಚಿತ ವ್ಯಕ್ತಿಗಳು ಈದಿನ ನಸುಕಿನ ವೇಳೆಯಲ್ಲಿ ಮದುವೆ ಸಮಾರಂಭ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಗುಂಡು ಹಾರಿಸಿ ಕೊಲೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದರು. ಭಾರ್ತಿ ಹತ್ಯೆಯ ಸುದ್ದಿ ಹರಡುತ್ತಿದ್ದಂತೆಯೇ ಅವರ ಬೆಂಬಲಿಗರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿ ರಸ್ತೆಗಳನ್ನು ಅಡ್ಡಗಟ್ಟಿ, ಟೈರುಗಳನ್ನು ಸುಟ್ಟು ಹಾಕಿ, ರಾಜ್ಯ ಸರ್ಕಾರದ ವಿರುದ್ಧ ಘೊಷಣೆಗಳನ್ನು ಕೂಗಿದರು. ಭಾರ್ತಿ ಅವರು ಸಿವಾನ್​ನ ಬಿಜೆಪಿ ಸಂಸತ್ ಸದಸ್ಯ ಓಂ ಪ್ರಕಾಶ್ ಯಾದವ್ ಅವರ ನಿಕಟವರ್ತಿಯಾಗಿದ್ದು, 2010ರಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. 'ಇದು ಪ್ರತಿಸ್ಪರ್ಧಿಗಳು ಹೆಣೆಗೆ ವ್ಯವಸ್ಥಿತ ರಾಜಕೀಯ ಸಂಚಿನ ಕೊಲೆ' ಎಂದು ಭಾರ್ತಿ ಕುಟುಂಬ ಸದಸ್ಯರು ಹಾಗೂ ಬೆಂಬಲಿಗರು ಆಪಾದಿಸಿದರು.

2014: ರಾಯಪುರ: ಛತ್ತೀಸ್ಗಢದ ನಕ್ಸಲೀಯ ಪೀಡಿತ ಸುಕ್ಮಾ ಜಿಲ್ಲೆಯ ಎರಡು ಪ್ರತ್ಯೇಕ ಘಟನೆಗಳಲ್ಲಿ ಪೊಲೀಸರು ಇಬ್ಬರು ಮಾವೋವಾದಿ ನಕ್ಸಲೀಯರನ್ನು ಬಂಧಿಸಿದ್ದು, ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿ ಇಟ್ಟಿದ್ದ ಸುಧಾರಿತ ಶಕ್ತಿಶಾಲಿ ಸ್ಪೋಟಕ ಸಾಧನಗಳನ್ನು (ಐಇಡಿ) ವಶ ಪಡಿಸಿಕೊಂಡರು.  ಭದ್ರತಾ ಪಡೆಗಳ ಜಂಟಿ ದಳವೊಂದು ಚಿಂಟಗುಫಾ ಪೊಲೀಸ್ ಠಾಣೆ ವ್ಯಾಪ್ತಿಯ ಚಿಂಟಗುಫಾ-ದೋರ್ನಪಾಲ್ ಮಾರ್ಗದಲ್ಲಿ ಪ್ರತ್ಯೇಕವಾಗಿ ಅವಿತಿಡಲಾಗಿದ್ದ 20 ಕಿ.ಗ್ರಾಂ. ಮತ್ತು 2.5 ಕಿ.ಗ್ರಾಂ. ತೂಕದ ಸುಧಾರಿತ ಶಕ್ತಿಶಾಲಿ ಸ್ಪೋಟಕ ಸಾಧನಗಳನ್ನು ಪತ್ತೆ ಹಚ್ಚಿದೆ ಎಂದು ಬಸ್ತಾರ್ ವಲಯದ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ಎಸ್ಆರ್ಪಿ ಕಲ್ಲೂರಿ ತಿಳಿಸಿದರು. ಸಿಆರ್ಪಿಎಫ್ ಜಂಟಿ ತುಕಡಿಯೊಂದು ಕೊಬ್ರಾ ಬೆಟಾಲಿಯನ್ ಜೊತೆಗೆ ಜಿಲ್ಲಾ ಪೊಲೀಸ್ ಪಡೆಯೊಂದಿಗೆ ಪ್ರದೇಶದಲ್ಲಿ ಕೆಲವು ದಿನಗಳಿಂದ ನಕ್ಸಲ್ ನಿಗ್ರಹ ಕಾರ್ಯಾಚರಣೆ ನಿರತವಾಗಿತ್ತು. ತಂಡವು ದೋರ್ನಪಾಲ್, ಜಗರಗುಂಡ ರಸ್ತೆಯಲ್ಲಿ ಚಿಂಟಗುಫಾದಿಂದ 1 ಕಿ.ಮೀ. ದೂರಕ್ಕೆ ಈದಿನ ಬೆಳಗ್ಗೆ ತಲುಪಿದಾಗ 20 ಕಿ.ಗ್ರಾಂ. ತೂಕದ ಸುಧಾರಿತ ಶಕ್ತಿಶಾಲಿ ಸ್ಪೋಟಕ ಸಾಧನವನ್ನು ಕಂಟೇನರ್ ಒಂದರಲ್ಲಿ ರಸ್ತೆಯ ಕೆಳಗೆ ಅವಿತಿಟ್ಟಿದ್ದುದು ಪತ್ತೆಯಾಯಿತು. ನಂತರ ಸಮೀಪದಲ್ಲೇ ಇನ್ನೊಂದು ಕಡೆ 2.5 ಕಿ.ಗ್ರಾಂ. ತೂಕದ ಇನ್ನೊಂದು ಸ್ಪೋಟಕ ಸಾಧನಗಳನ್ನು ಅವಿತಿಟ್ಟಿದ್ದುದೂ ಪತ್ತೆಯಾಯಿತು ಎಂದು ಐಜಿ ನುಡಿದರು. ಬಾಂಬ್ ನಿಷ್ಕ್ರಿಯ ದಳವು ಸ್ಪೋಟಕ ಸಾಧನಗಳನ್ನು ತತ್ ಕ್ಷಣವೇ ನಿಷ್ಕ್ರಿಯಗೊಳಿಸಿತು ಎಂದು ಅವರು ಹೇಳಿದರು. ಜಿಲ್ಲೆಯಲ್ಲೇ ಇನ್ನೊಂದು ಘಟನೆಯಲ್ಲಿ ಇಬ್ಬರು ನಕ್ಸಲೀಯರನ್ನು ಗಡಿರಾಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಧಿಸಲಾಯಿತು. ಬಂಧಿತ ಉಗ್ರಗಾಮಿಗಳನ್ನು ಮಿಡಿಯಾಮಿ ಜೋಗ ಮತ್ತು ಜೈಸಿಂಗ್ ಎಂಬುದಾಗಿ ಗುರುತಿಸಲಾಗಿದ್ದು, ಇವರಿಬ್ಬರೂ ಹಲವಾರು ಅಪರಾಧ ಪ್ರಕರಣಗಳಲ್ಲಿ ಷಾಮೀಲಾಗಿದ್ದರು ಎಂದು ಐಜಿ ತಿಳಿಸಿದರು.

2014:  ಢಾಕಾ: ಆಡಳಿತಾರೂಢ ಅವಾಮೀ ಲೀಗ್ ಉಚ್ಚಾಟಿತ ನಾಯಕ ಮೊಬಾರಕ್ ಹೊಸೈನ್ ಅವರಿಗೆ 1971ರಲ್ಲಿ ನಡೆದ ಪಾಕಿಸ್ತಾನ ವಿರೋಧಿ ಸ್ವಾತಂತ್ರ್ಯಸಮರ ಕಾಲದಲ್ಲಿ ಮಾನವತೆ ವಿರುದ್ಧ ಎಸಗಿದ ಅಪರಾಧಗಳಿಗಾಗಿ ಬಾಂಗ್ಲಾದೇಶದ ವಿಶೇಷ ಟ್ರಿಬ್ಯೂನಲ್ ಮರಣದಂಡನೆ ವಿಧಿಸಿತು. 'ಆತನನ್ನು ಸಾಯುವವರೆಗೆ ನೇಣಿಗೆ ಏರಿಸಬೇಕು' ಎಂದು ನ್ಯಾಯಮೂರ್ತಿ ಎಂ. ಎನಾಯೆತುರ್ ರಹೀಮ್ನೇತೃತ್ವದ ಅಂತಾರಾಷ್ಟ್ರೀಯ ಅಪರಾಧಗಳ ಟ್ರಿಬ್ಯೂನಲ್ ತ್ರಿಸದಸ್ಯ ಪೀಠವು ತೀರ್ಪು ನೀಡಿತು. ಮಾಜಿ ಸೇನಾ ಕಮಾಂಡರ್ ವಿರುದ್ಧ ಹೊರಿಸಲಾಗಿದ್ದ ಐದು ಆರೋಪಗಳ ಪೈಕಿ ಎರಡಲ್ಲಿ ತಪ್ಪಿತಸ್ಥರಾಗಿರುವುದು ಸಾಬೀತಾಗಿದೆ ಎಂದು ಟ್ರಿಬ್ಯೂನಲ್ ಹೇಳಿತು. 1971 ಆಗಸ್ಟ್ 22ರಂದು ತನ್ನ ತಾಯ್ನಾಡಾದ ಕೇಂದ್ರ ಬ್ರಾಹ್ಮಣಬಾರಿಯಾ ಜಿಲ್ಲೆಯಲ್ಲಿ 33 ಮಂದಿ ನಾಗರಿಕರನ್ನು ಕೊಂದುದಕ್ಕಾಗಿ 64 ಹರೆಯದ ಹೊಸೈನ್ಗೆ ಮರಣದಂಡನೆ ವಿಧಿಸಲಾಯಿತು. ಕೊಲೆ, ಅಪಹರಣ, ಅಕ್ರಮ ಬಂಧನ, ಚಿತ್ರಹಿಂಸೆ ಮತ್ತು ಅವರ ಮನೆಗಳಿಂದ ಬೆಲೆಬಾಳುವ ವಸ್ತುಗಳ ಲೂಟಿ ಮಾಡಿದ ಆರೋಪಕ್ಕೆ ಸಂಬಂಧಿಸಿದ ಇನ್ನೊಂದು ಪ್ರಕರಣದಲ್ಲಿ ಹೊಸೈನ್ಗೆ ಟ್ರಿಬ್ಯೂನಲ್ ಜೀವಾವಧಿ ಶಿಕ್ಷೆ ವಿಧಿಸಿತು.

2014: ಕಾಬೂಲ್: ಆತ್ಮಾಹುತಿ ಬಾಂಬ್ ದಾಳಿಗೆ 57 ಜನರು ಬಲಿಯಾಗಿ 60ಕ್ಕೂ ಹೆಚ್ಚು ಜನರು ಗಾಯಗೊಂಡರು. ಪೂರ್ವ ಅಫ್ಘಾನಿಸ್ತಾನದ ಪಾಟ್ಕಿಕ ಪ್ರಾಂತ್ಯದಲ್ಲಿ ನಡೆಯುತ್ತಿದ್ದ ವಾಲಿಬಾಲ್ ಪಂದ್ಯಾವಳಿಯನ್ನು ಗುರಿಯಾಗಿಸಿಕೊಂಡು ಆತ್ಮಹತ್ಯಾ ಬಾಂಬ್ ದಾಳಿ ನಡೆಸಲಾಯಿತು. ಪಾಟ್ಕಿಕ ಪ್ರಾಂತ್ಯ ಪಾಕಿಸ್ತಾನಕ್ಕೆ ಹೊಂದಿಕೊಂಡಂತೆ ಇದ್ದು ಪ್ರಕ್ಷುಬ್ಧ ಪ್ರದೇಶ ಎಂದು ಗುರುತಿಸಲ್ಪಟ್ಟಿದೆ. ಇಲ್ಲಿನ ಸ್ಥಳೀಯ ತಂಡಗಳ ನಡುವೆ ನಡೆಯುತ್ತಿದ್ದ ವಾಲಿಬಾಲ್ ಪಂದ್ಯಾವಳಿಯನ್ನು ವೀಕ್ಷಿಸುತ್ತಿದ್ದ ಜನರ ಗುಂಪಿನ ಮಧ್ಯೆ ಆತ್ಮಾಹುತಿ ಬಾಂಬರ್ ಬಾಂಬ್ ಸ್ಪೋಟಿಸಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

2014: ಚೆನ್ನೈ: ಚೀನಾ ಮತ್ತು ದಕ್ಷಿಣ ಕೊರಿಯಾದಲ್ಲಿ ಪರಮಾಣು ಶಕ್ತಿ ಉಪಯೋಗಕ್ಕೆ ಹೆಚ್ಚಿನ ಒಲವಿದ್ದು, ನೂತನ ಅಣು ವಿದ್ಯುತ್ ಸ್ಥಾವರ ಸ್ಥಾಪಿಸಲು ಉತ್ಸುಕವಾಗಿವೆ ಎಂದು ಜಾಗತಿಕ ವಿಶ್ವಾಸಾರ್ಹತೆ ವಿಶ್ಲೇಷಣಾ ಸಂಸ್ಥೆಯಾದ ಮೂಡಿಸ್ ಇನ್ವೆಸ್ಟರ್ಸ್ ಸರ್ವಿಸ್ (ಎಂಐಎಸ್) ತಿಳಿಸಿತು. ಅಮೆರಿಕದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಕಡಿಮೆ ಇರುವುದು ಮತ್ತು ಯೂರೋಪ್ ಒಕ್ಕೂಟ ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆಗೆ ಒತ್ತು ಕೊಡುತ್ತಿರುವುದರಿಂದ ಅಲ್ಲಿ ಅಣು ವಿದ್ಯುತ್ ಉತ್ಪಾದನೆ ತನ್ನ ಅಸ್ಥಿತ್ವ ಕಳೆದುಕೊಳ್ಳುತ್ತಿದೆ ಎಂದು ಎಂಐಎಸ್ ಹೇಳಿತು. ಜೊತೆಗೆ ಜಪಾನ್ನಲ್ಲಿ 2011ರಲ್ಲಿ ಫುಕುಷಿಮಾ ಅಣು ವಿದ್ಯುತ್ ಸ್ಥಾವರ ದುರಂತ ಸಂಭವಿಸಿದ್ದರೂ ಸಹ ವಿವಿಧ ದೇಶಗಳಲ್ಲಿ ಅಣು ವಿದ್ಯುತ್ ಉತ್ಪಾದನೆಗೆ ಸಹಕಾರ ಒದಗಿಸುತ್ತಿದೆ. ಅಣು ವಿದ್ಯುತ್ ಉತ್ಪಾದನೆಗೆ ಚೀನಾ ಮತ್ತು ದಕ್ಷಿಣ ಕೊರಿಯಾದಲ್ಲಿ ಒತ್ತು ಸಿಗುತ್ತಿದೆ. ಜತೆಗೆ ಏಷ್ಯಾದ ಇತರ ದೇಶಗಳಲ್ಲೂ ಸಹ ಅಣು ವಿದ್ಯುತ್ ಉತ್ಪಾದನೆಗೆ ಒಲವು ವ್ಯಕ್ತವಾಗುತ್ತಿದೆ. ಒಟ್ಟಾರೆಯಾಗಿ ನೋಡುವುದಾದರೆ ಜಾಗತಿಕ ಮಟ್ಟದಲ್ಲಿ ಏಷ್ಯಾದಲ್ಲಿ ಅಣು ವಿದ್ಯುತ್ ಕಡೆಗೆ ಒಲವು ಹೆಚ್ಚಿದೆ, ಬೇರೆ ಪ್ರದೇಶದಲ್ಲಿ ಇಲ್ಲ ಎಂದು ಎಂಐಎಸ್ ಹೇಳಿತು.

2014: ಬಾಗ್ದಾದ್: ಇರಾಕಿನ ರಕ್ಷಣಾ ಪಡೆಗಳು ಐಎಸ್ ಉಗ್ರ ವಶದಲ್ಲಿದ್ದ ಪೂರ್ವ ಇರಾಕಿನ ದಿಯಾಲ ಪ್ರಾಂತ್ಯದ 2 ನಗರಗಳನ್ನು ವಶ ಪಡಿಸಿಕೊಂಡವು. ಇರಾಕ್ ಸೇನೆ, ಪೊಲೀಸ್, ಶಿಯಾ ಸೈನಿಕರು ಮತ್ತು ಕುರ್ದಿಶ್ ರಕ್ಷಣಾ ಪಡೆಗಳು ಒಟ್ಟಿಗೆ ಕಾರ್ಯಾಚರಣೆ ನಡೆಸಿ ಬಾಗ್ದಾದ್ನಿಂದ ಪೂರ್ವಕ್ಕೆ 120 ಕಿ.ಮೀ. ದೂರದಲ್ಲಿರುವ ಸದಿಯಾ ಮತ್ತು ಜಲವಾಲ ಎಂಬ 2 ನಗರಗಳನ್ನು ವಶಪಡಿಸಿಕೊಂಡವು ಎಂದು ಸೇನಾ ಮೂಲಗಳು ತಿಳಿಸಿದವು. ಹಿಂದಿನ ದಿನ ನಗರಗಳನ್ನು ವಶಪಡಿಸಿಕೊಳ್ಳುವ ಕಾರ್ಯಾಚರಣೆ ಆರಂಭಿಸಿದ್ದ ಪಡೆಗಳು  ಈದಿನ ಐಎಸ್ ಉಗ್ರರನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದವು. ಉಗ್ರರು ನಗರದ ರಸ್ತೆ ಬದಿಗಳಲ್ಲಿ, ಕಟ್ಟಡಗಳಲ್ಲಿ ಬಾಂಬ್ಗಳನ್ನು ಅಡಗಿಸಿಟ್ಟಿದ್ದು, ರಕ್ಷಣಾ ಪಡೆಗಳು ಅವುಗಳನ್ನು ನಾಶಪಡಿಸಿದ ನಂತರ ನಗರವಾಸಿಗಳು ವಾಪಸ್ ಬರಬಹುದು ಎಂದು ಸೇನಾ ಮೂಲಗಳು ತಿಳಿಸಿದವು.
  
2008: ಎಲ್‌ಟಿಟಿಇಗಳ ಭದ್ರಕೋಟೆ ಕಿಲಿನೋಚ್ಚಿ ಪ್ರದೇಶದಲ್ಲಿ ನಡೆದ ಶ್ರೀಲಂಕಾ ಸೇನೆ ಹಾಗೂ ಎಲ್‌ಟಿಟಿಇ ನಡುವಿನ ಕಾಳಗದಲ್ಲಿ ಸುಮಾರು 120 ಎಲ್‌ಟಿಟಿಇ ಬಂಡುಕೋರರು ಹಾಗೂ 27 ಸೈನಿಕರು ಸಾವನ್ನಪ್ಪಿದರು. ಬಂಡುಕೋರರ ರಾಜಧಾನಿ ಎಂದೇ ಪರಿಗಣಿಸಲಾದ ಕಿಲಿನೋಚ್ಚಿ ಪ್ರದೇಶವನ್ನು ಕೈವಶ ಮಾಡಿಕೊಳ್ಳಲು ಶ್ರೀಲಂಕಾ ಸೇನೆ ತೀವ್ರ ಸೆಣಸಾಟ ನಡೆಸಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿದವು.

2008: ಪ್ರಪಂಚದಲ್ಲೇ ಅತ್ಯಂತ ಅನ್ವೇಷಣಾ ಪ್ರವೃತ್ತಿ ಹೊಂದಿದ ಭಯೋತ್ಪಾದನಾ ಸಂಘಟನೆ ಎಂಬ ಹೆಸರು ಪಡೆದ ಎಲ್‌ಟಿಟಿಇ ತನ್ನ ಗೆರಿಲ್ಲಾ ಯುದ್ಧ ತಂತ್ರಜ್ಞಾನದಲ್ಲಿ ಮತ್ತೊಂದು ಹೊಸ ಹೆಜ್ಜೆ ಇರಿಸಿತು. ಅತ್ಯಂತ ಆಧುನಿಕ ತಂತ್ರಜ್ಞಾನಗಳಿಂದ ಒಡಗೂಡಿದ ಅತ್ಯುನ್ನತ ಮಟ್ಟದ ಆತ್ಮಹತ್ಯಾ ಮೇಲು ಹೊದಿಕೆಗಳನ್ನು  (ಜಾಕೆಟ್) ಎಲ್‌ಟಿಟಿಇ ಕಂಡು ಹಿಡಿದಿದೆ ಎಂದು ಶ್ರೀಲಂಕಾ ಸರ್ಕಾರ ಹೇಳಿತು. ಈ ಆತ್ಮಹತ್ಯಾ ಮೇಲು ಹೊದಿಕೆಗಳನ್ನು ಎಲ್‌ಟಿಟಿಇ ಮಧ್ಯಪ್ರಾಚ್ಯದ ಆತ್ಮಹತ್ಯಾ ದಳಗಳಿಗೆ ಪೂರೈಕೆ ಮಾಡುತ್ತಿದೆ ಎಂಬ ಅಂಶವನ್ನೂ ಸರ್ಕಾರ ಬಯಲು ಮಾಡಿತು. ಈ ಮೇಲು ಹೊದಿಕೆಗಳು ಪಾಸ್ಲ್ಟಿಕ್ಕಿನ ಪದಾರ್ಥಗಳಿಂದ ಕೂಡಿದ ಸ್ಫೋಟಕಗಳನ್ನು ಹೊಂದಿರುತ್ತವೆ. ಈಗ ಎಲ್‌ಟಿಟಿಇ ಇವುಗಳನ್ನು ಬಹುಶಃ ಹಣಕ್ಕಾಗಿ ಮಧ್ಯಪ್ರಾಚ್ಯದ ಆತ್ಮಹತ್ಯಾ ದಳಗಳಿಗೆ ಮಾರಾಟ ಮಾಡುತ್ತಿದೆ ಎಂದು ಶ್ರೀಲಂಕಾ ರಕ್ಷಣಾ ಪಡೆಯ ವೆಬ್‌ಸೈಟಿನ ಲೇಖನವೊಂದು ವಿವರಿಸಿತು.

2008: ಕಾಡುಗಳ್ಳತನಕ್ಕೆ ಬಳಸಿದ ವಾಹನಗಳನ್ನು ಮತ್ತು ಇತರ ಸಲಕರಣೆಗಳನ್ನು ವಶಕ್ಕೆ ತೆಗೆದುಕೊಳ್ಳುವ ಮತ್ತು ಅವುಗಳನ್ನು ಹರಾಜು ಹಾಕುವ ಹಕ್ಕು ಸರ್ಕಾರಕ್ಕೆ ಇದೆ ಎಂಬ ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿತು. ಅರಣ್ಯ ಎಂಬುದು ಒಂದು ರಾಷ್ಟ್ರೀಯ ಸಂಪತ್ತು. ಅರಣ್ಯ ನಾಶದಿಂದ ಪರಿಸರ ಅಸಮತೋಲನ ತಲೆದೋರುತ್ತದೆ. ಹೀಗಾಗಿ ಅರಣ್ಯ  ಸಂರಕ್ಷಿಸುವುದಕ್ಕೆ ಮತ್ತು ಅರಣ್ಯಗಳ್ಳರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಸರ್ಕಾರಕ್ಕೆ ಹಕ್ಕಿದೆ ಎಂದು ನ್ಯಾಯಮೂರ್ತಿ ಅರಿಜಿತ್ ಪಸಾಯತ್ ಮತ್ತು ಮುಕುಂದಕಂ ಶರ್ಮಾ ಅವರನ್ನು  ಒಳಗೊಂಡ ಪೀಠ ಹೇಳಿತು. ಮಹಾರಾಷ್ಟ್ರದಲ್ಲಿ 1999ರಲ್ಲಿ ಅಕ್ರಮ ಮರ ಸಾಗಾಣಿಕೆ ವೇಳೆ ಸಿಕ್ಕಿಬಿದ್ದ. ಟ್ರಕ್ ವಿಷಯದಲ್ಲಿ  ಮಹಮ್ಮದ್ ಅಶೀಖ್ ಎಂಬವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಪೀಠ ಈ ತೀರ್ಪು ನೀಡಿತು.

2008: ಮಾಂಟೆಕಾರ್ಲೊ: ಜಮೈಕಾದ ಸ್ಪ್ರಿಂಟರ್ ಉಸೇನ್ ಬೋಲ್ಟ್ ಮತ್ತು ರಷ್ಯಾದ ಮಹಿಳಾ ಪೋಲ್‌ವಾಲ್ಟ್ ಸ್ಪರ್ಧಿ ಎಲೆನಾ ಇಸಿನ್ಬಯೇವಾ ಅವರು ಅಂತರರಾಷ್ಟ್ರೀಯ ಅಥ್ಲೆಟಿಕ್ ಫೆಡರೇಷನ್ (ಐಎಎಎಫ್) 'ವರ್ಷದ ಶ್ರೇಷ್ಠ ಅಥ್ಲೀಟ್' ಗೌರವ ತಮ್ಮದಾಗಿಸಿಕೊಂಡರು. ಬೋಲ್ಟ್ ಮತ್ತು ಇಸಿನ್ಬಯೇವಾ ಅವರು ತಲಾ ಒಂದು ಲಕ್ಷ ಡಾಲರ್ ನಗದು ಬಹುಮಾನ ಪಡೆದರು. ಈದಿನ ಮಾಂಟೆಕಾರ್ಲೊದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಇಬ್ಬರಿಗೂ ಪ್ರಶಸ್ತಿ ವಿತರಿಸಲಾಯಿತು. ಪ್ರಸಕ್ತ ವರ್ಷ ಟ್ರ್ಯಾಕಿನಲ್ಲಿ ಮಿಂಚಿನ ಸಂಚಲನ ಮೂಡಿಸಿದ 22ರ ಹರೆಯದ ಬೋಲ್ಟ್ ಅವರು ಬೀಜಿಂಗ್ ಒಲಿಂಪಿಕ್ ಕೂಟದಲ್ಲಿ ಮೂರು ಚಿನ್ನ ಗೆದ್ದುಕೊಂಡಿದ್ದರು. ಅವು ಮೂರನ್ನು ಕೂಡಾ ವಿಶ್ವದಾಖಲೆಯ ಸಮಯದೊಂದಿಗೆ ತಮ್ಮದಾಗಿಸಿದ್ದು ವಿಶೇಷವಾಗಿತ್ತು. 100 ಮೀ. ಓಟವನ್ನು 9.69 ಸೆಕೆಂಡುಗಳಲ್ಲಿ ಪೂರೈಸಿದ್ದ ಅವರು 200 ಮೀ. ಓಟ ಪೂರೈಸಲು 19.30 ಸೆಕೆಂಡ್ ಮಾತ್ರ ತೆಗೆದುಕೊಂಡಿದ್ದರು. ಅದೇ ರೀತಿ ಇವರನ್ನೊಳಗೊಂಡ ಜಮೈಕಾ ತಂಡ 4x100 ಮೀ. ರಿಲೇಯಲ್ಲಿ ವಿಶ್ವದಾಖಲೆಯ ಸಮಯದೊಂದಿಗೆ ಸ್ವರ್ಣ ಜಯಿಸಿತ್ತು.

2007: ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಬಿ. ಶ್ರೀನಿವಾಸರೆಡ್ಡಿ ಅವರ ಬೆಂಗಳೂರು, ಆನೆಕಲ್ಲಿನ ಮನೆ ಮತ್ತು ಕಚೇರಿ ಮೇಲೆ ಈದಿನ ಬೆಳಗ್ಗೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು 20 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಿದರು. ಖಚಿತ ಮಾಹಿತಿಯನ್ನು ಆಧರಿಸಿ ರೆಡ್ಡಿ ಅವರ ಸದಾಶಿವನಗರದ ನಿವಾಸ, ಅವರ ಅತ್ತೆ (ಪತ್ನಿಯ ತಾಯಿ) ಚೌಡಮ್ಮ ಅವರ ಇಂದಿರಾನಗರದ ನಿವಾಸ ಮತ್ತು ಬೆಂಗಳೂರು ಉತ್ತರ ತಾಲ್ಲೂಕಿನ ತಿರುಮಗೊಂಡನಹಳ್ಳಿಯ ರಮಣ ಮಹರ್ಷಿ ಸೇವಾ ಟ್ರಸ್ಟ್ ಕಚೇರಿಯ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ನಗದು, ಬ್ಯಾಂಕ್ ಖಾತೆಗಳು ಮತ್ತು ಸ್ಥಿರಾಸ್ತಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ವಶಪಡಿಸಿಕೊಂಡರು. ಆದಾಯಕ್ಕಿಂತ 57 ಪಟ್ಟು ಅಧಿಕ ಆಸ್ತಿಪಾಸ್ತಿ ಶ್ರೀನಿವಾರ ರೆಡ್ಡಿ ಅವರ ಬಳಿ ದೊರಕಿತು. ಅವರ ಒಟ್ಟು ಸೇವಾ ಅವಧಿಯಲ್ಲಿ ಸರ್ಕಾರದಿಂದ ಪಡೆದ ಸಂಬಳ ಮತ್ತು ಇತರೆ ಸೌಲಭ್ಯಗಳ ಮೊತ್ತ ಕೇವಲ ರೂ 35 ಲಕ್ಷ! ಅದರೆ ದಾಳಿ ಕಾಲದಲ್ಲಿ ಪತ್ತೆಯಾದದ್ದು 20 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಮೌಲ್ಯದ ಆಸ್ತಿಪಾಸ್ತಿ ಎಂದು ಲೋಕಾಯುಕ್ತ ಸಂತೋಷ ಹೆಗ್ಡೆ ಹೇಳಿದರು.

2007: ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಆದಿವಾಸಿ ವಿದ್ಯಾರ್ಥಿಗಳ ಸಂಘಟನೆ ಅಸ್ಸಾಮಿನ ಗುವಾಹಟಿಯಲ್ಲಿ ನಡೆಸಿದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ, ಅದನ್ನು ನಿಯಂತ್ರಿಸಲು ಪೊಲೀಸರು ನಡೆಸಿದ ಗೋಲಿಬಾರಿಗೆ ಐವರು ಬಲಿಯಾದರು. ರಾಜ್ಯದ 2.6 ಕೋಟಿ ಜನ ಸಂಖ್ಯೆಯಲ್ಲಿ ಶೇ 6 ರಷ್ಟಿರುವ ಸಂತಲ್ ಆದಿವಾಸಿಗಳು ಬಹುತೇಕ ಚಹಾ ತೋಟಗಳಲ್ಲಿ ಕೆಲಸ ಮಾಡುವವರು. ತಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಕಳೆದ ಹಲವಾರು ವರ್ಷಗಳಿಂದ  ಹೋರಾಟ ನಡೆಸಿದ್ದು, ಇದೇ ಆಗ್ರಹ ಮುಂದಿಟ್ಟು ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದ್ದರು.

2007: ಜೈಪುರದಿಂದ ನವದೆಹಲಿಗೆ ಕರೆತರಲಾದ ಬಾಂಗ್ಲಾದೇಶದ ವಿವಾದಿತ ಲೇಖಕಿ ತಸ್ಲಿಮಾ ನಸ್ರೀನ್ ಅವರನ್ನು ರಾಜಸ್ಥಾನ ಹೌಸಿನಲ್ಲಿ ಇರಿಸಿ ದೆಹಲಿ ಹಾಗೂ ರಾಜಸ್ಥಾನೀ ಪೊಲೀಸರು ಬಿಗಿ ಭದ್ರತೆ ಒದಗಿಸಿದರು. ಅತಿಥಿ ಗೃಹಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಯಿತು. `ಲಜ್ಜಾ' ಪುಸ್ತಕ ಬರೆದು ತಸ್ಲಿಮಾ  ಮುಸ್ಲಿಂ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾದರು.

2007: ಪಾಕಿಸ್ಥಾನದ ರಾವಲ್ಪಿಂಡಿ ಹಾಗೂ ಆಪ್ಘಾನಿಸ್ಥಾನದ ಕಾಬೂಲಿನಲ್ಲಿ ಸಂಭವಿಸಿದ ಪ್ರತ್ಯೇಕ  ಆತ್ಮಹತ್ಯಾ ದಾಳಿಗಳಲ್ಲಿ ಒಟ್ಟು 39ಮಂದಿ ಮೃತರಾದರು. ರಾವಲ್ಪಿಂಡಿಯಲ್ಲಿ 30 ಜನ, ಕಾಬೂಲಿನಲ್ಲಿ 9 ಮಂದಿ ಸಾವನ್ನಪ್ಪಿದರು.

2007: ಹುಬ್ಬಳ್ಳಿ - ಧಾರವಾಡ ಅವಳಿ ನಗರದ ಕೆಲವೆಡೆ ಈದಿನ ಸಂಜೆ ಲಘು ಭೂಕಂಪದ ಅನುಭವವಾಯಿತು. ಸಂಜೆ 5ರ ಸುಮಾರಿಗೆ ಮನೆಗಳಲ್ಲಿ ಮೇಜು, ಕುರ್ಚಿ, ಪಾತ್ರೆಗಳು ಅಲುಗಾಡಿದ ಅನುಭವವಾಯಿತು.

2007: ವಿಚಾರವಾದಿ ದಿವಂಗತ ಕೆ.ರಾಮದಾಸ್ ಅವರ ಪತ್ನಿ ಆರ್. ನಿರ್ಮಲ (59) ದೀರ್ಘಕಾಲದ ಅನಾರೋಗ್ಯದಿಂದಾಗಿ ಮೈಸೂರಿನ ನಿವಾಸದಲ್ಲಿ ನಿಧನರಾದರು. ಕೆಲವು ತಿಂಗಳ ಹಿಂದೆಯಷ್ಟೆ ಪತಿ ಕೆ.ರಾಮದಾಸ್ ತೀರಿಕೊಂಡಿದ್ದರು. ಮೂರು ದಶಕಗಳ ಕಾಲ ಕನ್ನಡ ಅಧ್ಯಾಪಕಿಯಾಗಿ ಕೆಲಸ  ಮಾಡಿ ನಿವೃತ್ತಿಹೊಂದಿದ್ದ ನಿರ್ಮಲ ತಮ್ಮ ಪತಿಯೊಂದಿಗೆ ಸೇರಿ ನಾಡಿನ ಹಲವಾರು ಪ್ರಗತಿಪರ ಹೋರಾಟಗಳಲ್ಲಿ ಪಾಲ್ಗೊಂಡಿದ್ದರು. ನಿರ್ಮಲ ಅವರ  `ಚಲ್ ಮೇರಿ ಲೂನಾ' ಎಂಬ ಲಲಿತ ಪ್ರಬಂಧ ಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು. ಪಚ್ಚೆಪೈರು (ಮಕ್ಕಳ  ಸಾಹಿತ್ಯ), ಉರಿವ ಒಲೆಗಳ ಮುಂದೆ (ಕವನ ಸಂಕಲನ) ಪ್ರಕಟವಾಗಿವೆ. 

2007: ಇಂಗ್ಲೆಂಡಿನಲ್ಲಿ ಭಾರತೀಯ ರಾಯಭಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಕಮಲೇಶ್ ಶರ್ಮಾ ಅವರು ಕಾಮನ್ವೆಲ್ತ್ ಒಕ್ಕೂಟದ ನೂತನ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಉಗಾಂಡದ ಕಂಪಾಲಾದಲ್ಲಿ ನಡೆದ ಕಾಮನ್ವೆಲ್ತ್ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳ ಸಭೆಯಲ್ಲಿ 66 ವರ್ಷದ ಐ ಎಫ್ ಎಸ್ ಅಧಿಕಾರಿ ಕಮಲೇಶ್ ಅವರನ್ನು ಈ ಮಹತ್ವದ ಹುದ್ದೆಗೆ ಬಹುಮತದಿಂದ ಆಯ್ಕೆ ಮಾಡಲಾಯಿತು.

2007: ಅಂಟಾರ್ಟಿಕ್ ಸಾಗರದಲ್ಲಿ ಮುಳುಗುತ್ತಿದ್ದ ಹಡಗಿನಿಂದ ಬಹುತೇಕ ಎಲ್ಲ 154 ಪ್ರಯಾಣಿಕರು ಹಾಗೂ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾದರು ಎಂದು ಬ್ರಿಟಿಷ್ ಕರಾವಳಿ ರಕ್ಷಣಾ ಪಡೆ ವಕ್ತಾರ ಆ್ಯಂಡಿ ಕಟ್ರೆಲ್ ತಿಳಿಸಿದರು. 154 ಮಂದಿಯನ್ನು ರಕ್ಷಿಸಲು ಅರ್ಜೆಂಟೀನಾ ಹಾಗೂ ಅಮೆರಿಕಾ ಕರಾವಳಿ ರಕ್ಷಣಾ ಪಡೆ ಸಿಬ್ಬಂದಿ ನೆರವು ನೀಡಿದರು.

2006: ಕೆನ್ ಶಾಲೆಯ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘವು ಖ್ಯಾತ ಕಲಾವಿದ ಆರ್. ಎಂ. ಹಡಪದ್ ಹೆಸರಿನಲ್ಲಿ ನೀಡುವ ಪ್ರಶಸ್ತಿಯು ಕೆನ್ ಕಲಾ ಶಾಲೆಯ ಪ್ರಾಚಾರ್ಯ ಹಾಗೂ ಕಲಾವಿದ ಜಿ.ಎಂ.ಎನ್. ಮಣಿ ಅವರಿಗೆ ಲಭಿಸಿತು.

2006: ಭೋಪಾಲಿನಿಂದ 30 ಕಿ.ಮೀ. ದೂರದ ಭೋಜಪುರದಲ್ಲಿ ಪರ್ಮಾರ್ ರಾಜಮನೆತನದ ರಾಜಾ ಭೋಜಪಾಲ್ ನಿರ್ಮಿಸಿ ಕಾರಣಾಂತರಗಳಿಂದ ಅಪೂರ್ಣವಾಗಿ ಬಿಟ್ಟಿದ್ದ ಒಂದು ಸಹಸ್ರ ವರ್ಷಗಳ ಹಿಂದಿನ ಶಿವ ದೇವಸ್ಥಾನವನ್ನು ಭಾರತೀಯ ಸರ್ವೇಕ್ಷಣಾಲಯ ಇಲಾಖೆಯು ಪೂರ್ಣಗೊಳಿಸಿತು. ರಾಷ್ಟ್ರದಲ್ಲೇ ಅತ್ಯಂತ ದೊಡ್ಡದಾದ ಈ ದೇವಸ್ಥಾನವು ಕಳೆದ 1000 ವರ್ಷಗಳಿಂದ ಛಾವಣಿ ಇಲ್ಲದೆ ನಿಂತಿತ್ತು. ಸ್ಥಂಭಗಳ ಕೆಲಸವೂ ಅಪೂರ್ಣವಾಗಿತ್ತು. ಶಿವಲಿಂಗ ಬಿಸಿಲಿಗೆ ಒಣಗಿ ಮಳೆಗೆ ನೆನೆಯುತ್ತಿತ್ತು.

2006: ಭಾರತೀಯ ಏರೋನಾಟಿಕಲ್ ಎಂಜಿನಿಯರ್ ಬೆಂಗಳೂರಿನ ಜೋಸೆಫ್ ಪಿಚಮುತ್ತು ಅವರು ವಿಮಾನಗಳ ಸುರಕ್ಷಿತ ಭೂಸ್ಪರ್ಶಕ್ಕೆ ಅನುವು ಮಾಡುವ ಉಪಕರಣವೊಂದನ್ನು ಸಂಶೋಧಿಸಿರುವುದಾಗಿ ಪ್ರಕಟಿಸಿದರು. ಹವಾಮಾನ ವೈಪರೀತ್ಯಗಳ ನಡುವೆಯೂ ವಿಮಾನ ಭೂಸ್ಪರ್ಶ ಮಾಡಬೇಕಿರುವ ರನ್ ವೇ ನಡುವಿನ ಅಂತರವನ್ನು ಈ ಉಪಕರಣದ ಮೂಲಕ ನಿಖರವಾಗಿ ತಿಳಿಯಬಹುದು. ಇದರಿಂದ ಸುರಕ್ಷಿತ ಭೂಸ್ಪರ್ಶ ಮಾಡಲು ಪೈಲಟ್ ಗೆ ಅನುಕೂಲವಾಗುತ್ತದೆ.

2005: ಎನ್ ಡಿ ಎ ನಾಯಕ ನಿತೀಶ್ ಕುಮಾರ್ ಅವರು ಪಟ್ನಾದ ಚಾರಿತ್ರಿಕ ಗಾಂಧಿ ಮೈದಾನದಲ್ಲಿ ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಇದರೊಂದಿಗೆ ಎಂಟೂವರೆ ತಿಂಗಳ ರಾಷ್ಟ್ರಪತಿ ಆಡಳಿತ ಕೊನೆಗೊಂಡು ಜೆಡಿ (ಯು)-ಬಿಜೆಪಿ ಮೈತ್ರಿಕೂಟದ ಆಡಳಿತ ಆರಂಭಗೊಂಡಿತು.

2005: ಸರ್ಕಾರಿ ಸ್ವಾಮ್ಯದ ಎನ್ ಜಿ ಇ ಎಫ್ ಕಾರ್ಖಾನೆಗೆ ಬೀಗಮುದ್ರೆ ಘೋಷಿಸಿ ಆಸ್ತಿ ಮಾರಾಟ ಮಾಡುವ ನಿರ್ಧಾರವನ್ನು ಕೈಬಿಡಲು ಕರ್ನಾಟಕ ಸಚಿವ ಸಂಪುಟ ನಿರ್ಧರಿಸಿತು.

1992: ಲೋಕಸಭೆ ಅಧಿವೇಶನವು ವಂದೇ ಮಾತರಂನಿಂದ ಆರಂಭಗೊಂಡು ಜನಗಣಮನದೊಂದಿಗೆ ಅಂತ್ಯಗೊಳ್ಳುವಂತೆ ನಿರ್ಣಯ ಕೈಗೊಳ್ಳಲಾಯಿತು.

1991: ಬ್ರಿಟಿಷ್ ರಾಕ್ ಗ್ರೂಪಿನ ಸಂಗೀತ ರಾಣಿ ಫ್ರೆಡ್ಡೀ ಮರ್ಕ್ಯೂರಿ ಲಂಡನ್ನಿನಲ್ಲಿ ಏಡ್ಸ್ ಪರಿಣಾಮವಾಗಿ ತನ್ನ 45ನೇ ವಯಸ್ಸಿನಲ್ಲಿ ಮೃತರಾದರು.

1969: ಚಂದ್ರ ಗ್ರಹಕ್ಕೆ ಎರಡನೇ ಯಾತ್ರೆಯನ್ನು ಮುಗಿಸಿದ ಅಪೋಲೊ 12 ಗಗನನೌಕೆ ಕ್ಷೇಮವಾಗಿ ಪೆಸಿಫಿಕ್ ಸಾಗರಕ್ಕೆ ಬಂದಿಳಿಯಿತು.

1961: ಖ್ಯಾತ ಲೇಖಕಿ, ಪರಿಸರ ಚಿಂತಕಿ ಅರುಂಧತಿ ರಾಯ್ ಹುಟ್ಟಿದ ದಿನ. ಅವರ ಕಾದಂಬರಿ `ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್' (ಕ್ಷುದ್ರದೇವತೆ) ಪುಸ್ತಕಕ್ಕೆ ಬೂಕರ್ ಪ್ರಶಸ್ತಿ ಲಭಿಸಿದೆ.

1952: ಮಾಜಿ ಕ್ರಿಕೆಟ್ ಆಟಗಾರ ಬ್ರಿಜೇಶ್ ಪಟೇಲ್ ಹುಟ್ಟಿದ ದಿನ.

1926: ಶ್ರೀ ಅರಬಿಂದೊ ಘೋಷ್ ಅವರು ಪಾಂಡಿಚೇರಿಯಲ್ಲಿ `ಪೂರ್ಣಸಿದ್ಧಿ' ಪಡೆದರು. ಈ ದಿನವನ್ನು ಶ್ರೀ ಅರಬಿಂದೋ ಆಶ್ರಮ ಸ್ಥಾಪನಾ ದಿನ ಎಂಬುದಾಗಿ  ಪರಿಗಣಿಸಲಾಗಿದೆ.

1924: ಖ್ಯಾತ ವ್ಯಂಗ್ಯಚಿತ್ರಕಾರ ರಾಸಿಪುರಂ ಕೃಷ್ಣಸ್ವಾಮಿ ಲಕ್ಷ್ಮಣ್ (ಆರ್. ಕೆ. ಲಕ್ಷ್ಮಣ್) ಹುಟ್ಟಿದ ದಿನ. ಇವರು ಖ್ಯಾತ ಕಾದಂಬರಿಕಾರ ಆರ್. ಕೆ. ನಾರಾಯಣ್ ಅವರ ಸಹೋದರ. ಲಕ್ಷ್ಮಣ್ ಅವರ ಸೃಷ್ಟಿ `ಕಾಮನ್ ಮ್ಯಾನ್' ತುಂಬ ಜನಪ್ರಿಯ.

1917: ಐತಿಹಾಸಿಕ ಕಾದಂಬರಿಕಾರರೆಂದೇ ಖ್ಯಾತರಾಗಿದ್ದ ಸಮೇತನಹಳ್ಳಿ ರಾಮರಾಯರು (24-11-1917ರಿಂದ 5-1-1999) ಶ್ರೀನಿವಾಸರಾವ್- ರುಕ್ಮಿಣಿಯಮ್ಮ ದಂಪತಿಯ ಮಗನಾಗಿ ಬೆಂಗಳೂರು ಜಿಲ್ಲೆ ಹೊಸಕೋಟೆಯ ಸಮೇತನಹಳ್ಳಿಯಲ್ಲಿ ಜನಿಸಿದರು.

1896: ಸಂಸ್ಕೃತ ವಿದ್ವಾಂಸ ಕ್ಷಿತಿಶ್ ಚಂದ್ರ ಚಟರ್ಜಿ (1896-1961) ಹುಟ್ಟಿದ ದಿನ.

1859: ಚಾರ್ಲ್ಸ್ ಡಾರ್ವಿನ್ ಅವರ `ಆನ್ ದಿ ಒರಿಜಿನ್ ಆಫ್ ಸ್ಪೀಸೀಸ್' ಪುಸ್ತಕ ಪ್ರಕಟಗೊಂಡಿತು. ಈ ಪುಸ್ತಕ ಡಾರ್ವಿನ್ ಅವರ ವಿಕಾಸವಾದವನ್ನು ವಿವರಿಸುತ್ತದೆ. ಮೊದಲ ಆವೃತ್ತಿಯ ಎಲ್ಲ 1250 ಪ್ರತಿಗಳು ಪ್ರಕಟವಾದ ದಿನವೇ ಮಾರಾಟವಾಗಿ ಹೋದವು.

1642: ಟಾಸ್ಮಾನಿಯಾವನ್ನು ಡಚ್ ಸಂಶೋಧಕ ಅಬೆಲ್ ಟಾಸ್ಮನ್ ಪತ್ತೆ ಹಚ್ಚಿದ. ಈ ಭೂಪ್ರದೇಶಕ್ಕೆ ಆತ ವ್ಯಾನ್ ಡೇಮಿನ್ಸ್ ಲ್ಯಾಂಡ್ ಎಂಬುದಾಗಿ ಡಚ್ ಈಸ್ಟ್ ಇಂಡೀಸ್ ನ ಗವರ್ನರ್ ಜನರಲನ ಹೆಸರನ್ನು ಇಟ್ಟ. ವ್ಯಾನ್ ಡೇಮಿನ್ಸ್ ಆತನ ಸಂಶೋಧನೆಗೆ ನೆರವು ನೀಡಿದ ವ್ಯಕ್ತಿ. 1853ರಲ್ಲಿ ಇದಕ್ಕೆ `ಟಾಸ್ಮಾನಿಯಾ' ಎಂಬುದಾಗಿ ಮರುನಾಮಕರಣ ಮಾಡಲಾಯಿತು.


(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement