My Blog List

Sunday, April 4, 2010

ಇಂದಿನ ಇತಿಹಾಸ History Today ಏಪ್ರಿಲ್ 04

ಇಂದಿನ ಇತಿಹಾಸ

ಏಪ್ರಿಲ್ 04

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಲೋಕ ಶಿಕ್ಷಣ ಟ್ರಸ್ಟ್ ಅಧ್ಯಕ್ಷರಾದ ಮಾಜಿ ಸಚಿವ ಹಾರನಹಳ್ಳಿ ರಾಮಸ್ವಾಮಿ (86) ಬೆಂಗಳೂರು ನಗರದ ಖಾಸಗಿ ನರ್ಸಿಂಗ್ ಹೋಮ್ನಲ್ಲಿ ಹೃದಯಾಘಾತದಿಂದ ನಿಧನರಾದರು. ಅವರು ಪತ್ನಿ ಸುಶೀಲಮ್ಮ, ಪುತ್ರರಾದ ಅಮೆರಿಕದಲ್ಲಿ ವೈದ್ಯರಾಗಿರುವ ಡಾ. ಅರವಿಂದ್, ರಾಜ್ಯದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಡಾ. ಅಶೋಕ್ ಹಾರನಹಳ್ಳಿ ಅವರನ್ನು ಅಗಲಿದರು.

2009: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಲೋಕ ಶಿಕ್ಷಣ ಟ್ರಸ್ಟ್ ಅಧ್ಯಕ್ಷರಾದ ಮಾಜಿ ಸಚಿವ ಹಾರನಹಳ್ಳಿ ರಾಮಸ್ವಾಮಿ (86) ಬೆಂಗಳೂರು ನಗರದ ಖಾಸಗಿ ನರ್ಸಿಂಗ್ ಹೋಮ್ನಲ್ಲಿ ಹೃದಯಾಘಾತದಿಂದ ನಿಧನರಾದರು. ಅವರು ಪತ್ನಿ ಸುಶೀಲಮ್ಮ, ಪುತ್ರರಾದ ಅಮೆರಿಕದಲ್ಲಿ ವೈದ್ಯರಾಗಿರುವ ಡಾ. ಅರವಿಂದ್, ರಾಜ್ಯದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಡಾ. ಅಶೋಕ್ ಹಾರನಹಳ್ಳಿ ಅವರನ್ನು ಅಗಲಿದರು. ಅನಾರೋಗ್ಯದ ನಿಮಿತ್ತ ಅವರು ಚಿಕಿತ್ಸೆಗಾಗಿ ಮಲ್ಲಿಗೆ ನರ್ಸಿಂಗ್ ಹೋಂಗೆ ದಾಖಲಾಗಿದ್ದರು. ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಹಾರನಹಳ್ಳಿಯಲ್ಲಿ 1923ರಲ್ಲಿ ಜನಿಸಿದ್ದ ರಾಮಸ್ವಾಮಿ, 1942ರಲ್ಲಿ ತುಮಕೂರಿನಲ್ಲಿ ಇಂಟರ್ ಮೀಡಿಯೆಟ್ ವಿದ್ಯಾರ್ಥಿಯಾಗಿದ್ದಾಗಲೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿ ಜೈಲುವಾಸ ಅನುಭವಿಸಿದ್ದರು. ಬಳಿಕ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಪೂರೈಸಿದ್ದ ಅವರು, 1946ರಲ್ಲಿ ಬೆಳಗಾವಿಯ ರಾಜಾ ಲಖಮನಗೌಡ ಕಾಲೇಜಿನಲ್ಲಿ ಕಾನೂನು ಪದವಿ ಪೂರ್ಣಗೊಳಿಸಿದ್ದರು. ಆರಂಭದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸದಸ್ಯರಾಗಿ ನಂತರ ಪ್ರಾದೇಶಿಕ ವಿದ್ಯಾರ್ಥಿ ಕಾಂಗ್ರೆಸ್ ಸಮಿತಿ ಸ್ಥಾಪಿಸುವ ಮೂಲಕ ಕಾಂಗ್ರೆಸ್‌ನತ್ತ ಹೆಜ್ಜೆ ಹಾಕಿದರು. ಕರ್ನಾಟಕ ಸೇವಾ ದಳದ ಮುಖ್ಯಸ್ಥರಾಗಿದ್ದಾಗ ಮಹಾತ್ಮ ಗಾಂಧಿ ಅವರನ್ನು 1947ರಲ್ಲೇ ಭೇಟಿ ಮಾಡಿದ್ದರು. ಕರ್ನಾಟಕ ಏಕೀಕರಣ ಚಳವಳಿ ಮುಖಂಡರಲ್ಲಿ ಒಬ್ಬರಾಗಿದ್ದ ಅವರು, 'ಕರ್ನಾಟಕ ಏಕೀಕರಣ ಮಸೂದೆ'ಗೆ ಸರ್ವಪಕ್ಷ ಸಭೆಯ ಅನುಮೋದನೆ ದೊರಕಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. 1991ರಲ್ಲಿ ಕೆಪಿಸಿಸಿಯ ತಾತ್ಕಾಲಿಕ ಅಧ್ಯಕ್ಷರಾಗಿದ್ದ ಅವರು 14 ವರ್ಷ ಕಾಲ ವಿಧಾನ ಪರಿಷತ್ ಸದಸ್ಯರಾಗಿ ಹಾಗೂ ಒಂದು ಅವಧಿಗೆ ವಿಧಾನಸಭಾ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು. ವೀರಪ್ಪ ಮೊಯಿಲಿ ಸಂಪುಟದಲ್ಲಿ ಸಂಸದೀಯ ವ್ಯವಹಾರ ಹಾಗೂ ಮುಜರಾಯಿ ಸಚಿವರಾಗಿದ್ದರು. 2000-2001ರಲ್ಲಿ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

2009: ಹೃದಯ ಚಿಕಿತ್ಸೆಯಲ್ಲಿ ಇತ್ತೀಚಿನ ಬೆಳವಣಿಗೆಯಾದ 'ಕೀಹೋಲ್' ಶಸ್ತ್ರಚಿಕಿತ್ಸೆಯನ್ನು ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಪ್ರಥಮ ಬಾರಿಗೆ ಬಳಸಿ, ಗುಲ್ಬರ್ಗದ ಯುವಕನ ಹೃದಯ ಕವಾಟವನ್ನು ಸರಿಪಡಿಸಲಾಯಿತು. ಸಾಮಾನ್ಯವಾಗಿ ತೆರೆದ ಹೃದಯ ಶಸ್ತ್ರಚಿಕಿತ್ಸೆಯಲ್ಲಿ ಹೃದಯವನ್ನು ತಲುಪಲು ಎದೆಯ ಮೂಳೆಯನ್ನು ಗರಗಸದಂತಹ ಉಪಕರಣದಿಂದ ಕತ್ತರಿಸಲಾಗುತ್ತದೆ. ಸುಮಾರು 14 ಇಂಚಿನಷ್ಟು ಗುರುತು ಶಸ್ತ್ರಚಿಕಿತ್ಸೆಯ ನಂತರ ಉಳಿಯುತ್ತದೆ. ಇದರಿಂದ ಶಾಶ್ವತವಾದ ಕಲೆಯೂ ಉಳಿಯುತ್ತದೆ. ಇದರಿಂದ ಮಹಿಳೆಯರು ರವಿಕೆ ಧರಿಸಲು ಮುಜುಗರ ಪಡುವ ಸನ್ನಿವೇಶ ನಿರ್ಮಾಣವಾಗುತ್ತದೆ. ಇದಕ್ಕೆ ಪರಿಹಾರವಾಗಿ ಮೂಳೆಯನ್ನು ಕತ್ತರಿಸದೆ ಹೃದಯ ಶಸ್ತ್ರಚಿಕಿತ್ಸೆ ಮಾಡುವ ವಿಧಾನವನ್ನು ತಜ್ಞರು ಅಭಿವೃದ್ಧಿಪಡಿಸಿದ್ದು., ಇದಕ್ಕೆ 'ಕೀ ಹೋಲ್' ಎಂದು ಹೆಸರಿಸಲಾಗಿದೆ.

2009: ಎಲ್‌ಟಿಟಿಇಗೆ ಸೇರಿದ್ದ ಇನ್ನಷ್ಟು ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಸೇನೆ ಮುಂದಾದ ಸಂದರ್ಭ ಭದ್ರತಾ ಪಡೆಗಳು ಪ್ರಭಾಕರನ್ ಅವರ ಗುಂಡು ನಿರೋಧಕ ಲಿಮೋಸಿನ್ ಕಾರನ್ನು ವಶಪಡಿಸಿಕೊಂಡವು. ಅವರು ಸೇನೆಯ ಕಾರ್ಯಾಚರಣೆಯ ಪ್ರದೇಶದ ಸಮೀಪದಲ್ಲೇ ಇರುವರೆಂದು ಶಂಕಿಸಲಾಯಿತು. ಎಲ್‌ಟಿಟಿಇ ಮುಖ್ಯಸ್ಥ ವಿ.ಪ್ರಭಾಕರನ್ ಮತ್ತು ಅವರ ಹಿರಿಯ ಕಮಾಂಡರ್ ಪೊಟ್ಟು ಅಮ್ಮಾನ್ ಪುದುಕುಡಿಯಿರಿಪ್ಪು ಪ್ರದೇಶದಲ್ಲಿ ಅಡಗಿಕೊಂಡಿದ್ದರೂ ಶ್ರೀಲಂಕಾ ಸೇನೆ ಸುತ್ತುವರಿಯುವ ಸ್ವಲ್ಪ ಮುನ್ನ ಸ್ಥಳದಿಂದ ತಪ್ಪಿಸಿಕೊಂಡರು ಎಂದು ಸೇನೆಯ ಹಿರಿಯ ಅಧಿಕಾರಿಗಳು ಹೇಳಿದರು.

2009: ಪ್ರಸಕ್ತ ಸಾಲಿನ ಬಿ.ಎಚ್. ಶ್ರೀಧರ ಸಾಹಿತ್ಯ ಪ್ರಶಸ್ತಿಗೆ ಕಥೆಗಾರ ಅಶೋಕ ಹೆಗಡೆ ಆಯ್ಕೆಯಾದರು. ಸಾಹಿತ್ಯ ಕ್ಷೇತ್ರದ ಮಹತ್ವದ ಪ್ರಶಸ್ತಿಗಳಲ್ಲೊಂದಾದ ಬಿ.ಎಚ್.ಶ್ರೀ ಪ್ರಶಸ್ತಿಗೆ ಅಶೋಕ ಅವರ 'ವಾಸನೆ ಶಬ್ಧ ಬಣ್ಣ ಇತ್ಯಾದಿ..' ಕಥಾ ಸಂಕಲನ ಆಯ್ಕೆಯಾಯಿತು. ಅಶೋಕ ಸಿದ್ದಾಪುರ ತಾಲ್ಲೂಕಿನ ಗುಂಜಗೋಡಿನವರು. 'ಒಂದು ತಗಡಿನ ಚೂರು', 'ಒಳ್ಳೆಯವನು' ಕಥಾ ಸಂಕಲನ. 'ಅಶ್ವಮೇಧ' ಕಾದಂಬರಿ ಅವರ ಪ್ರಕಟಿತ ಕೃತಿಗಳು. 60ಕ್ಕೂ ಹೆಚ್ಚು ಸಣ್ಣ ಕಥಾ ಸಂಕಲನಗಳು ಸ್ಪರ್ಧೆಗೆ ಬಂದಿದ್ದವು. ಎಂ.ಜಿ.ಹೆಗಡೆ, ಶ್ರೀಪಾದ ಭಟ್ಟ, ಪ್ರಾ.ಎಂ.ರಮೇಶ, ರಾಜಶೇಖರ ಹೆಬ್ಬಾರ ಅವರನ್ನೊಳಗೊಂಡ ಸಮಿತಿ ಅಶೋಕ ಅವರ ಕೃತಿಯನ್ನು ಆಯ್ಕೆ ಮಾಡಿದೆ ಎಂದು ಪ್ರಶಸ್ತಿ ಸಮಿತಿಯ ಅಧ್ಯಕ್ಷ ಟಿ.ನಾರಾಯಣ ಭಟ್ಟ ಸಿರಸಿಯಲ್ಲಿ ತಿಳಿಸಿದರು.

2008: ಸುಮಾರು ನಾಲ್ಕು ದಶಕಗಳ ನಂತರ ಭಾರತದಲ್ಲಿ ಪಾಕಿಸ್ಥಾನದ ಸಿನಿಮಾ ತೆರೆಕಾಣುವ ಮೂಲಕ ಉಭಯ ದೇಶಗಳ ಚಿತ್ರೋದ್ಯಮಗಳಿಗೆ ಹೊಸ ಭರವಸೆ ಮೂಡಿಸಿತು. ಅದೇ ರೀತಿ ಮೂರು ದಶಕಗಳ ಬಳಿಕ ಬಾಲಿವುಡ್ ಚಿತ್ರಗಳೆರಡು ಪಾಕಿಸ್ಥಾನದಲ್ಲಿ ಪ್ರದರ್ಶನಗೊಂಡವು. ನಿರ್ದೇಶಕ ಶೋಯೇಬ್ ಮನ್ಸೂರ್ ಅವರ ಪ್ರಥಮ ಚಿತ್ರ `ಖುದಾ ಕೆ ಲಿ ಯೆ' ಈದಿನ ಭಾರತದಾದ್ಯಂತ ಸುಮಾರು 20 ನಗರಗಳಲ್ಲಿ ತೆರೆ ಕಂಡಿತು. ಇದೇ ವೇಳೆ ಬಾಲಿವುಡ್ ಚಿತ್ರಗಳಾದ `ಮುಘಲ್-ಎ-ಅಝಂ' ಹಾಗೂ ` ತಾಜ್ ಮಹಲ್-ಎ ಲವ್ ಸ್ಟೋರಿ' ಮೂರು ದಶಕಗಳ ಬಳಿಕ ಪಾಕಿಸ್ಥಾನದಲ್ಲಿ ತೆರೆಕಂಡವು. ಪಾಕಿಸ್ಥಾನವು ತನ್ನ ದೇಶದಲ್ಲಿ ಬಾಲಿವುಡ್ ಚಿತ್ರ ಪ್ರದರ್ಶನಕ್ಕೆ ವಿಧಿಸಿದ್ದ ನಿರ್ಬಂಧವನ್ನು ಇತ್ತೀಚೆಗೆ ತೆರವುಗೊಳಿಸಿದ್ದು ಈ ಬೆಳವಣಿಗೆಗೆ ಕಾರಣವಾಯಿತು.

2008: ಎರಡು ವರ್ಷಗಳ ಹಿಂದೆ ಬಿಜೆಪಿ ನಾಯಕ ಎಲ್. ಕೆ. ಅಡ್ವಾಣಿಯವನ್ನು ಬಹಿರಂಗವಾಗಿ ಟೀಕಿಸಿದ್ದಕ್ಕೇ ಪಕ್ಷ ತ್ಯಜಿಸಿದ್ದ ಹಿರಿಯ ನಾಯಕ, ದೆಹಲಿ ಮಾಜಿ ಮುಖ್ಯಮಂತ್ರಿ ಮದನ್ ಲಾಲ್ ಖುರಾನಾ ಅವರು ಮತ್ತೆ ಬಿಜೆಪಿ ಸೇರಿದರು. ಅಡ್ವಾಣಿ ವಿರುದ್ಧ ನೀಡಿದ್ದ ಹೇಳಿಕೆಗೆ ಖುರಾನಾ ಅವರು ವಿಷಾದ ವ್ಯಕ್ತಪಡಿಸಿದ ಬಳಿಕ ಅವರನ್ನು ಪಕ್ಷಕ್ಕೆ ಮತ್ತೆ ಬರಮಾಡಿಕೊಳ್ಳಲಾಯಿತು. ಈ ಹಿಂದೆಯೂ ಅಡ್ವಾಣಿ ವಿರುದ್ಧ ಟೀಕೆ ಮಾಡಿದ್ದಕ್ಕಾಗಿ ಪಕ್ಷದಿಂದ ಉಚ್ಚಾಟನೆಗೊಂಡಿದ್ದ ಖುರಾನಾ 2005 ರ ಡಿಸೆಂಬರಿನಲ್ಲಿ ಮರಳಿ ಬಿಜೆಪಿ ಸೇರಿದ್ದರು. 2006 ರಲ್ಲಿ ಮತ್ತೆ ಪಕ್ಷ ತ್ಯಜಿಸಿದ ಬಳಿಕ ಖುರಾನಾ ಉಮಾ ಭಾರತಿ ನೇತೃತ್ವದ ಭಾರತೀಯ ಜನಶಕ್ತಿ ಪಕ್ಷ ಸೇರಿದ್ದರು. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಉಮಾ ಅವರು ಬಿಜೆಪಿಯನ್ನು ಬೆಂಬಲಿಸಿದ ಕಾರಣಕ್ಕೆ ಖುರಾನಾ ಕಳೆದ ವರ್ಷ ಭಾರತೀಯ ಜನಶಕ್ತಿ ಪಕ್ಷ ತೊರೆದಿದ್ದರು.

2008: ಚಿ. ಉದಯಶಂಕರ್ ಸ್ಮಾರಕ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಿತಿಯು 2005-06ನೇ ಸಾಲಿನ `ಉದಯಶಂಕರ್ ಪ್ರಶಸ್ತಿ'ಗೆ ಚಿತ್ರ ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್, ನಿರ್ದೇಶಕ ಕೆ. ಎಸ್. ಎಲ್. ಸ್ವಾಮಿ, ಗಾಯಕ ಡಾ. ಕೆ.ಜೆ. ಜೇಸುದಾಸ್ ಅವರನ್ನು ಆಯ್ಕೆ ಮಾಡಿತು. 2006-07ನೇ ಸಾಲಿಗೆ ಹಿರಿಯ ನಿರ್ಮಾಪಕ ಕೆ.ಸಿ.ಎನ್. ಗೌಡ, ನಿರ್ದೇಶಕ ಎಸ್. ಕೆ. ಭಗವಾನ್, ಗೀತ ರಚನೆಕಾರರಾದ ಆರ್. ಎನ್. ಜಯಗೋಪಾಲ್, ಗೀತಪ್ರಿಯ, ಗಾಯಕಿ ವಾಣಿ ಜಯರಾಮ್ ಅವರನ್ನು ಆಯ್ಕೆ ಮಾಡಲಾಗಿದೆ' ಎಂದು ಸಮಿತಿ ಕಾರ್ಯಾಧ್ಯಕ್ಷ ಡಾ. ಸಿ.ಸೋಮಶೇಖರ್ ತಿಳಿಸಿದರು.

2008: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿನ ತಜ್ಞ ವೈದ್ಯರ ಸೇವೆಯನ್ನು ಗ್ರಾಮೀಣ ಜನತೆಗೆ ತಲುಪಿಸುವ ಮಹತ್ವಾಕಾಂಕ್ಷೆಯ ಟೆಲಿ ಮೆಡಿಸಿನ್ ಯೋಜನೆಯ ಎರಡನೇ ಹಂತಕ್ಕೆ ಚಾಲನೆ ದೊರಕಿತು. ಇದರಿಂದಾಗಿ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಿಗೆ ಈ ಸೌಲಭ್ಯ ವಿಸ್ತರಣೆಗೊಂಡಂತಾಯಿತು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತು ರಾಜ್ಯ ಸರ್ಕಾರದ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಧಾಕರರಾವ್ ಅವರು ಎರಡನೇ ಹಂತದ ಯೋಜನೆಯನ್ನು ಉದ್ಘಾಟಿಸಿದರು. ಕರ್ನಾಟಕದಲ್ಲಿ 2001ರಲ್ಲಿ ಆರಂಭವಾದ ಈ ಯೋಜನೆ ಇದುವರೆಗೆ ಕೇವಲ 11 ಜಿಲ್ಲೆಗಳಲ್ಲಿ ಮಾತ್ರ ಜಾರಿಯಲ್ಲಿತ್ತು. ಎರಡನೇ ಹಂತದಲ್ಲಿ ಈಗ ಇನ್ನೂ 14 ಜಿಲ್ಲೆಗಳಿಗೆ ವಿಸ್ತರಿಸಲಾಯಿತು. ಉತ್ತರ ಕನ್ನಡ, ಬೆಂಗಳೂರು ಗ್ರಾಮಾಂತರ, ರಾಮನಗರ ಹಾಗೂ ಕೋಲಾರ ಜಿಲ್ಲೆಯನ್ನು ಹೊರತುಪಡಿಸಿ ಉಳಿದ ಎಲ್ಲ ಜಿಲ್ಲೆಗಳಲ್ಲೂ ಈಗ ಈ ಯೋಜನೆ ಜಾರಿಗೆ ಬಂದಂತಾಯಿತು.

2008: ವಿವಾದಿತ ವೇಗದ ಬೌಲರ್ ಪಾಕಿಸ್ಥಾನದ ಶೋಯಬ್ ಅಖ್ತರ್ ಅವರು ತಮ್ಮ ಮೇಲೆ ಹೇರಿರುವ ಐದು ವರ್ಷಗಳ ನಿಷೇಧದ ವಿರುದ್ಧ ಮೇಲ್ಮನವಿ ಸಲ್ಲಿಸಿದರು.

2008: ಅಹಮದಾಬಾದಿನ ಮೊಟೇರಾದ ಸರದಾರ ಪಟೇಲ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾದ ಬಲಗೈ ಬ್ಯಾಟ್ಸ್ಮನ್ ಅಬ್ರಹಾಮ್ ಬೆಂಜಮಿನ್ ಡಿ ವಿಲೀಯರ್ಸ್ ಫ್ಯೂಚರ್ ಕಪ್ ಸರಣಿಯ ಎರಡನೇ ಟೆಸ್ಟಿನಲ್ಲಿ ತಮ್ಮ ಜೀವನದ ಪ್ರಥಮ ದ್ವಿ ್ವಶತಕ ದಾಖಲಿಸಿದರು. ಇನ್ನಿಂಗ್ಸಿನಲ್ಲಿ 217 ರನ್ ಗಳಿಸಿ ಕ್ರೀಸಿನಲ್ಲಿ ಇರುವ ಅವರು ಅವರು ತಮ್ಮ ದ್ವಿಶತಕಕ್ಕೆ ತೆಗೆದುಕೊಂಡ ಸಮಯ 481 ನಿ. ಮತ್ತು 333 ಎಸೆತಗಳು. ಭಾರತದ ಆರು ಬೌಲರುಗಳನ್ನು ಮುಲಾಜಿಲ್ಲದೇ ದಂಡಿಸಿದ 24 ವರ್ಷದ ಬಲಗೈ ಬ್ಯಾಟ್ಸ್ಮನ್ ತಮ್ಮ ದ್ವಿಶತಕದ ಹಾದಿಯಲ್ಲಿ ತಮ್ಮದೇ ತಂಡದ ಹರ್ಷಲ್ ಗಿಬ್ಸ್ ಭಾರತದ ವಿರುದ್ಧ ಮಾಡಿದ್ದ 196 ರನ್ನುಗಳ ದಾಖಲೆಯನ್ನು ದಾಟಿ ನಡೆದರು. ಡಿವಿಲೀಯರ್ಸ್ 2005 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಗಳಿಸಿದ್ದ 178 ರನ್ನುಗಳು ಇದುವರೆಗಿನ ಸಾಧನೆಯಾಗಿತ್ತು.

2008: ಹೊಗೇನಕಲ್ ವಿವಾದಕ್ಕೆ ಸಂಬಂಧಿಸಿದಂತೆ ತಮಿಳು ಚಲನಚಿತ್ರಗಳನ್ನು ಪ್ರದರ್ಶಿಸುತ್ತಿದ್ದ ಬೆಂಗಳೂರಿನ ಚಿತ್ರಮಂದಿರಗಳ ಮೇಲೆ ದಾಳಿ ನಡೆದದ್ದನ್ನು ಪ್ರತಿಭಟಿಸಿ ತಮಿಳು ಚಿತ್ರೋದ್ಯಮದ ಗಣ್ಯರು ಚೆನ್ನೈಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದರು. ಕರ್ನಾಟಕ ಮೂಲದ ನಟ ರಜನಿಕಾಂತ್ ಸಹ ಪ್ರತಿಭಟನೆಯಲ್ಲಿ ಭಾಗವಹಿಸಿ ಕುತೂಹಲಕ್ಕೆ ತೆರೆ ಎಳೆದರು. ಹೊಗೇನಕಲ್ ವಿವಾದವನ್ನು ರಾಜಕೀಯಗೊಳಿಸುತ್ತಿರುವುದಕ್ಕೆ ಕರ್ನಾಟಕದ ಹಿರಿಯ ನಾಯಕರಾದ ಬಿ.ಎಸ್. ಯಡಿಯೂರಪ್ಪ ಹಾಗೂ ಎಸ್.ಎಂ. ಕೃಷ್ಣ ಅವರಿಗೆ ರಜನಿಕಾಂತ್ ಛೀಮಾರಿ ಹಾಕಿದರು.

2008: ಸುರಿನಾಮೆಯ ಗಣಿ ಪ್ರಾಂತ್ಯಕ್ಕೆ ತೆರಳುತ್ತಿದ್ದ ವಿಮಾನವೊಂದು ಹಿಂದಿನ ದಿನ ದಟ್ಟ ಅರಣ್ಯದಲ್ಲಿ ಕೆಳಗೆ ಬಿದ್ದು ಅಪಘಾತಕ್ಕೀಡಾದ ಪರಿಣಾಮ ಕನಿಷ್ಠ 19 ಪ್ರಯಾಣಿಕರು ಮೃತರಾದರು. ಸುರಿನಾಮೆಯ ಬ್ಲೂವಿಂಗ್ ಏರ್ ಲೈನ್ಸಿಗೆ ಸೇರಿದ ಈ ಅವಳಿ ಎಂಜಿನ್ ಹೊಂದಿದ ಅಂತೊನಾವ್-ಎ28 ವಿಮಾನದಲ್ಲಿ ಇಬ್ಬರು ಸಿಬ್ಬಂದಿ ಒಳಗೊಂಡಂತೆ ಸುಮಾರು 19 ಮಂದಿ ಪ್ರಯಾಣಿಸುತ್ತಿದ್ದರು.

2007: ಅಡಿಕೆ ಜಗಿಯುವುದು ಆರೋಗ್ಯಕ್ಕೆ ಹಾನಿಕರ ಅಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿತು. ಅಡಿಕೆಯ ಉತ್ಪನ್ನಗಳಾದ ಗುಟ್ಕಾ, ಪಾನ್ ಮಸಾಲಾಗಳ ಸೇವನೆ ಆರೋಗ್ಯಕ್ಕೆ ಹಾನಿಕರ ನಿಜ. ಆದರೆ ವೈಜ್ಞಾನಿಕವಾಗಿ ಪರೀಕ್ಷೆ ನಡೆಸದೇ ಅಡಿಕೆ ಪ್ಯಾಕೆಟ್ಟುಗಳ ಮೇಲೆ `ಹಾನಿಕಾರಕ ಎಚ್ಚರಿಕೆ' ಎಂದು ಲೇಬಲ್ ಅಂಟಿಸುವುದು ಸರಿಯಲ್ಲ ಎಂದು ನ್ಯಾಯಮೂರ್ತಿ ಹುಲುವಾಡಿ ಜಿ. ರಮೇಶ್ ಅಭಿಪ್ರಾಯಪಟ್ಟರು. ಅಡಿಕೆ ಜಗಿಯುವುದು ಆರೋಗ್ಯಕ್ಕೆ ಹಾನಿಕರ ಎಂದು ಪ್ಯಾಕೇಟಿನ ಮೇಲೆ ಲೇಬಲ್ ಅಂಟಿಸುವಂತೆ ಸೂಚಿಸಿರುವ ಕೇಂದ್ರ ಸರ್ಕಾರದ ಆಹಾರ ಕಲಬೆರಕೆ ಕಾಯ್ದೆ ಅಡಿಯ ನಿಯಮ ರದ್ದು ಪಡಿಸುವಂತೆ ಕೋರಿ ವಿಧಾನ ಪರಿಷತ್ ಮಾಜಿ ಸಭಾಪತಿ ಬಿ.ಎಲ್. ಶಂಕರ ಮತ್ತಿತರರು ಸಲ್ಲಿಸಿದ ಅರ್ಜಿಯ ವಿಚಾರಣೆ ಕಾಲದಲ್ಲಿ ನ್ಯಾಯಮೂರ್ತಿಗಳು ಈ ಆದೇಶ ಹೊರಡಿಸಿದರು.

2007: ಲೀಗ್ ಹಂತದಲ್ಲಿಯೇ ವಿಶ್ವಕಪ್ ಕ್ರಿಕೆಟಿನಿಂದ ಭಾರತವು ನಿರ್ಗಮಿಸಿದ ನಂತರ ಎದ್ದ ವಿವಾದಗಳ ಹಿನ್ನೆಲೆಯಲ್ಲಿ ಕೋಚ್ ಗ್ರೆಗ್ ಚಾಪೆಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.

2007: ಮಾಜಿ ಶಿಕ್ಷಣ ಸಚಿವ, ಕಾಂಗ್ರೆಸ್ಸಿನ ಹಿರಿಯ ಸದಸ್ಯ ಪ್ರೊ.ಬಿ.ಕೆ. ಚಂದ್ರಶೇಖರ್ ಅವರು ವಿಧಾನ ಪರಿಷತ್ ಸಭಾಪತಿಯಾಗಿ ಅವಿರೋಧವಾಗಿ ಆಯ್ಕೆಯಾದರು.

2007: `ಆಕರ ಜೀವಕೋಶ' (ಸ್ಟೆಮ್ ಸೆಲ್ ಥೆರೆಪಿ) ಚಿಕಿತ್ಸೆಯ ಮೂಲಕ ಪಾರ್ಕಿನ್ ಸನ್ ಕಾಯಿಲೆಯನ್ನು ಶಾಶ್ವತವಾಗಿ ಗುಣಪಡಿಸುವ ಪ್ರಯೋಗವನ್ನು ಮಣಿಪಾಲ್ ಆಸ್ಪತ್ರೆ ಯಶಸ್ವಿಯಾಗಿ ಮಾಡಿದೆ ಎಂದು ಆಸ್ಪತ್ರೆಯ ನರರೋಗ ವಿಭಾಗದ ನಿರ್ದೇಶಕ ಡಾ. ಕೆ. ವೆಂಕಟರಮಣ ನೀಲಂ ಬೆಂಗಳೂರಿನಲ್ಲಿ ಪ್ರಕಟಿಸಿದರು.

2007: ಕುಂಭಕೋಣಂನ ಸಿವಪುರಂ ಜಿಲ್ಲೆಯ ಮೆಕ್ಯಾನಿಕ್ ನಾರಾಯಣಸ್ವಾಮಿ (66) ಅವರ ಅಂತ್ಯಕ್ರಿಯೆಯನ್ನು ಅವರ ಪಾರ್ಥಿವ ಶರೀರದ ಜೊತೆಗೆ ಅವರ ಒಲವಿನ ಮೋರ್ರಿಸ್ ಮೈನರ್ ಕಾರನ್ನೂ ಸಮಾಧಿ ಮಾಡುವ ಮೂಲಕ ನೆರವೇರಿಸಲಾಯಿತು. ತಮಗೆ ಆಪ್ತವಾದ ಕಾರನ್ನು ತಮ್ಮ ಜೊತೆಗೇ ಸಮಾಧಿ ಮಾಡಬೇಕು ಎಂದು ನಾರಾಯಣ ಸ್ವಾಮಿ ಅಪೇಕ್ಷಿಸಿದ್ದರು. ಮೂರು ವಾರಗಳ ಅಸ್ವಸ್ಥತೆಯ ಬಳಿಕ ನಾರಾಯಣಸ್ವಾಮಿ ಮಾರ್ಚ್ 31ರಂದು ನಿಧನರಾಗಿದ್ದರು.

2007: ವೃತ್ತಿ ರಂಗಭೂಮಿಯ ಹಿರಿಯ ನಟಿ ಜಿ.ವಿ. ಮಾಲತಮ್ಮ ಅವರು ಕರ್ನಾಟಕ ರಾಜ್ಯ ಸರ್ಕಾರವು ನೀಡುವ `ಗುಬ್ಬಿ ವೀರಣ್ಣ' ಪ್ರಶಸ್ತೆಗೆ ಆಯ್ಕೆಯಾದರು.

2007: ಪ್ರತ್ಯೇಕ ಖಾಲಿಸ್ಥಾನ ರಾಷ್ಟ್ರದ ಮೂಲ ಪ್ರತಿಪಾದಕ ಜಗಜಿತ್ ಸಿಂಗ್ ಚೌಹಾಣ್ (80) ಅವರು ಹೊಷಿಯಾರ್ ಜಿಲ್ಲೆಯ ಟಂಡಾದಲ್ಲಿನ ಸ್ವಗೃಹದಲ್ಲಿ ನಿಧನರಾದರು.

2007: ಬೆಂಗಳೂರಿನ ಪ್ರತಿಷ್ಠಿತ ಗಂಗಾರಾಮ್ಸ್ ಪುಸ್ತಕ ಮಳಿಗೆಯ ಮಾಲೀಕ ಎನ್. ಗಂಗಾರಾಮ್ (79) ಹೃದಯಾಘಾತದಿಂದ ನಿಧನರಾದರು.

2006: ಕರ್ನಾಟಕದ ಹಿರಿಯ ಚಿತ್ರಕಲಾವಿದ ಮೈಸೂರಿನ ಕಾವೇರಿ ಕಲಾಕುಟೀರದ ತಪಸ್ವಿ ರಘೋತ್ತಮ ಪುಟ್ಟಿ (92) ಮೈಸೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾಚ್ಯವಸ್ತು ಸಂಶೋಧನಾಲಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ಕುಂಚ ಹಿಡಿದ ಅವರು ಬದುಕಿನ ಸಂಜೆಯಲ್ಲಿ ಬಿಡಿಸಿದ ಕಲಾಕೃತಿಗಳ ಸಂಖ್ಯೆ 200ಕ್ಕೂ ಹೆಚ್ಚು.

2006: ವಿಚ್ಛೇದನದ ನಂತರ ಜೀವನಾಂಶಕ್ಕೆ ಆಗ್ರಹಿಸಿ ನ್ಯಾಯಾಲಯದ ಮೆಟ್ಟಲೇರಿದ್ದ ದಿವಂಗತ ಶಾ ಬಾನು ಅವರ ಪತಿ ಹಿರಿಯ ವಕೀಲ ಮೊಹಮ್ಮದ್ ಖಾನ್ (94) ಮೃತರಾದರು. 1978ರಲ್ಲಿ ವಿಚ್ಛೇದನ ಪಡೆದಿದ್ದ 62 ವರ್ಷ ವಯಸ್ಸಿನ ಶಾಬಾನು ತಮಗೆ ಹಾಗೂ ತಮ್ಮ 5 ಜನ ಮಕ್ಕಳನ್ನು ನೋಡಿಕೊಳ್ಳಲು ಜೀವನಾಂಶ ಕೊಡಿಸಬೇಕು ಎಂದು ನ್ಯಾಯಾಲಯಕ್ಕೆ ಮೊರೆ ಹೋಗಿ ಯಶಸ್ವಿಯಾಗಿದ್ದರು.

2006: ಬೆಂಗಳೂರಿನ ಚಿತ್ರಾ ಮಾಗಿಮೈರಾಜ್ (32) ಅವರು ಇಂಗ್ಲೆಂಡಿನ ಕೇಂಬ್ರಿಜ್ನಲ್ಲಿ ನಡೆದ ವಿಶ್ವ ಮಹಿಳೆಯರ ಬಿಲಿಯರ್ಡ್ಸ್ ಪಂದ್ಯದಲ್ಲಿ ಇಂಗ್ಲೆಂಡಿನ ಎಮ್ಮಾ ಬಾನ್ನಿ ಅವರನ್ನು 193-164 ಅಂತರದಲ್ಲಿ ಪರಾಭವಗೊಳಿಸುವ ಮೂಲಕ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್ ಕಿರೀಟ ಗೆದ್ದುಕೊಂಡರು.

1979: ಪಾಕಿಸ್ಥಾನದ ಮಾಜಿ ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೋ ಅವರನ್ನು ರಾವಲ್ಪಿಂಡಿಯಲ್ಲಿ ಗಲ್ಲಿಗೇರಿಸಲಾಯಿತು. ಜಾಗತಿಕ ನಾಯಕರು ಕ್ಷಮಿಸುವಂತೆ ಕೋರಿದರೂ ಅದನ್ನು ಒಪ್ಪದೆ ರಾಜಕೀಯ ವಿರೋಧಿಯ ಕೊಲೆಗೆ ಸಂಚು ರೂಪಿಸಿದ ಆರೋಪವನ್ನು ಅವರ ಮೇಲೆ ಹೊರಿಸಲಾಗಿತ್ತು.

1968: ಅಮೆರಿಕದ ನಾಗರಿಕ ಹಕ್ಕುಗಳ ನಾಯಕ ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಅವರನ್ನು ಜೇಮ್ಸ್ ಅರ್ಲ್ ರೇ ಟೆನ್ನೆಸ್ಸೀಯ ಮೆಂಫಿಸ್ ನಲ್ಲಿ ಹತ್ಯೆ ಮಾಡಿದ.

1957: ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿಯನ್ನು ರಾಷ್ಟ್ರೀಕರಣ ಮಾಡಬೇಕು ಎಂದು ಮೈಸೂರು ಸರ್ಕಾರವು ತೀರ್ಮಾನಿಸಿತು.

1949: ಅಮೆರಿಕ ಸೇರಿದಂತೆ 12 ರಾಷ್ಟ್ರಗಳು ಉತ್ತರ ಅಟ್ಲಾಂಟಿಕ್ ಒಪ್ಪಂದಕ್ಕೆ ಸಹಿ ಹಾಕಿದವು. ದ್ವಿತೀಯ ಜಾಗತಿಕ ಸಮರದ ಬಳಿಕ ಪೂರ್ವ ಯುರೋಪಿನಲ್ಲಿ ಬಲಗೊಂಡ ಸೋವಿಯತ್ ಸೇನೆಗೆ ಪ್ರತಿಯಾಗಿ ಸೇನಾಶಕ್ತಿಯೊಂದನ್ನು ಸ್ಥಾಪಿಸುವುದು ಈ ಒಪ್ಪಂದದ ಉದ್ದೇಶವಾಗಿತ್ತು.

1938: ಆನಂದ ಮೋಹನ್ ಚಕ್ರವರ್ತಿ ಹುಟ್ಟಿದ ದಿನ. ಭಾರತೀಯ ಸಂಜಾತ ಅಮೆರಿಕನ್ ವಿಜ್ಞಾನಿಯಾದ ಇವರು ನೀರಿನ ಮೇಲೆ ತೇಲುವ ತೈಲ ಪದರವನ್ನು ಜೀರ್ಣಿಸಿಕೊಳ್ಳುವ ಕೃತಕ ಸೂಕ್ಷ್ಮ ಜೀವಿಯನ್ನು ಅಭಿವೃದ್ಧಿ ಪಡಿಸಿದರು.

1884: ಇಸೊರೊಕು ಯಮಾಂಟೊ (1884-1943) ಹುಟ್ಟಿದ ದಿನ. ಜಪಾನಿನ ನೌಕಾ ಅಧಿಕಾರಿಯಾಗಿದ್ದ ಈತ 1940ರಲ್ಲಿ ಅಮೆರಿಕಾದ ಪರ್ಲ್ ಬಂದರಿನ ನೌಕಾನೆಲೆ ಮೇಲೆ ನಡೆದ ಹಠಾತ್ ದಾಳಿಯ ರೂವಾರಿಯಾಗಿದ್ದ.

1818: ಅಮೆರಿಕದ ಧ್ವಜವು 13 ಕೆಂಪು ಮತ್ತು ಬಿಳಿ ಪಟ್ಟಿಗಳನ್ನು ಹಾಗೂ 20 ನಕ್ಷತ್ರಗಳನ್ನು ಒಳಗೊಂಡಿರಬೇಕು ಹಾಗೂ ಪ್ರತಿ ಹೊಸ ರಾಜ್ಯಕ್ಕೆ ಒಂದು ನಕ್ಷತ್ರವನ್ನು ಸೇರಿಸಬೇಕು ಎಂದು ಅಮೆರಿಕ ಕಾಂಗ್ರೆಸ್ ನಿರ್ಧರಿಸಿತು.

No comments:

Advertisement