Saturday, May 22, 2010

ಇಂದಿನ ಇತಿಹಾಸ History Today ಮೇ 22

ಇಂದಿನ ಇತಿಹಾಸ

ಮೇ 22

ನ್ಯೂಯಾರ್ಕಿನ ಮೇಡಂ ಟುಸ್ಯಾಡ್ ವಸ್ತು ಸಂಗ್ರಹಾಲಯದಲ್ಲಿ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ಮೇಣದಿಂದ ನಿರ್ಮಿಸಿದ ಪ್ರತಿಮೆಯನ್ನು ಅನಾವರಣ ಗೊಳಿಸಲಾಯಿತು. ವಿಶ್ವವಿಖ್ಯಾತರ 'ಮೇಣ-ಪ್ರತಿಮೆ'ಗಳ ಸ್ಥಾಪನೆಯ ಹೆಗ್ಗಳಿಕೆಗೆ ಪಾತ್ರವಾದ ಇಲ್ಲಿನ 'ಟೈಮ್ಸ್ ಸ್ಕ್ವೇರ್'ನಲ್ಲಿರುವ ಈ ವಸ್ತು ಸಂಗ್ರಹಾಲಯ ಇದೇ ಪ್ರಥಮ ಬಾರಿಗೆ ಬಾಲಿವುಡ್ ಸಾಧಕರಿಗಾಗಿ ಪ್ರತ್ಯೇಕ ವಿಭಾಗ ತೆರೆಯಿತು.

2009: ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ ಮತ್ತು ಎಂ.ವೀರಪ್ಪ ಮೊಯಿಲಿ ಸೇರಿದಂತೆ 19 ಸಚಿವ ಬಲದೊಂದಿಗೆ ಡಾ.ಮನಮೋಹನ್‌ಸಿಂಗ್ ಎರಡನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಸಚಿವಸ್ಥಾನದ ಹಂಚಿಕೆಯನ್ನು ಒಪ್ಪಿಕೊಳ್ಳದೆ ಮುನಿದು ಕೂತ ಡಿಎಂಕೆಯಿಂದಾಗಿ ಪೂರ್ಣಪ್ರಮಾಣದ ಸಂಪುಟವನ್ನು ನೀಡಲಾಗದ ಪ್ರಧಾನಿಯವರು ಮೊದಲ ಕಂತಿನಲ್ಲಿ ಆಯ್ದ ಹಿರಿಯ ನಾಯಕರನ್ನಷ್ಟೇ ಸಂಪುಟಕ್ಕೆ ಸೇರಿಸಿಕೊಂಡರು. ಅವರಲ್ಲಿ ಕಾಂಗ್ರೆಸ್‌ ಪಕ್ಷದ ಪ್ರಣವ್‌ ಮುಖರ್ಜಿ, ಎ.ಕೆ.ಆಂಟನಿ ಮತ್ತು ಪಿ.ಚಿದಂಬರಂ, ನ್ಯಾಷನಲ್ ಕಾಂಗ್ರೆಸ್‌ ಪಕ್ಷದ ಶರದ್‌ಪವಾರ್ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷದ ಮಮತಾ ಬ್ಯಾನರ್ಜಿ ಪ್ರಮುಖರು. ರಾಹುಲ್‌ ಗಾಂಧಿಯವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಅಪೇಕ್ಷೆಯನ್ನು ಮನಮೋಹನ್‌ಸಿಂಗ್ ಅವರೇ ವ್ಯಕ್ತಪಡಿಸಿದ್ದರೂ ಭಾವೀ ಪ್ರಧಾನಿಯೆಂದೇ ಬಿಂಬಿಸಲಾದ ಯುವನಾಯಕ ಸಂಪುಟದಿಂದ ಹೊರಗೆ ಉಳಿದರು.

2009:'ತಮಿಳು ಬಂಡುಕೋರರ (ಎಲ್‌ಟಿಟಿಇ) ವಿರುದ್ಧ 2006ರ ಆಗಸ್ಟ್ ತಿಂಗಳಿನಲ್ಲಿ ಆರಂಭವಾಗಿ ಈವಾರ ಮುಕ್ತಾಯಗೊಂಡ ಅಂತಿಮ ಹಂತದ ಸೇನಾ ಕಾರ್ಯಾಚರಣೆಯಲ್ಲಿ 6261ಕ್ಕೂ ಹೆಚ್ಚು ಭದ್ರತಾ ಯೋಧರು, ಪೊಲೀಸರು, ಅರೆಸೇನಾ ಪಡೆ ಸಿಬ್ಬಂದಿ ಹತರಾಗಿ ಸುಮಾರು 30 ಸಾವಿರ ಸೈನಿಕರು ಗಾಯಗೊಂಡರು' ಎಂದು ಶ್ರೀಲಂಕಾ ಸರ್ಕಾರ ಬಹಿರಂಗ ಪಡಿಸಿತು. ಬಂಡುಕೋರರ ಕಡೆಯಿಂದ ಸೇನೆಗೆ ಆಗಿರುವ ಹಾನಿಯ ಬಗ್ಗೆ ರಕ್ಷಣಾ ಕಾರ್ಯದರ್ಶಿ ಗೊಟಬಾಯ ರಾಜಪಕ್ಸೆ ಇದೇ ಮೊದಲ ಬಾರಿಗೆ ವಿವರ ಪ್ರಕಟಿಸಿದರು.

2009: ನ್ಯೂಯಾರ್ಕಿನ ಮೇಡಂ ಟುಸ್ಯಾಡ್ ವಸ್ತು ಸಂಗ್ರಹಾಲಯದಲ್ಲಿ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ಮೇಣದಿಂದ ನಿರ್ಮಿಸಿದ ಪ್ರತಿಮೆಯನ್ನು ಅನಾವರಣ ಗೊಳಿಸಲಾಯಿತು. ವಿಶ್ವವಿಖ್ಯಾತರ 'ಮೇಣ-ಪ್ರತಿಮೆ'ಗಳ ಸ್ಥಾಪನೆಯ ಹೆಗ್ಗಳಿಕೆಗೆ ಪಾತ್ರವಾದ ಇಲ್ಲಿನ 'ಟೈಮ್ಸ್ ಸ್ಕ್ವೇರ್'ನಲ್ಲಿರುವ ಈ ವಸ್ತು ಸಂಗ್ರಹಾಲಯ ಇದೇ ಪ್ರಥಮ ಬಾರಿಗೆ ಬಾಲಿವುಡ್ ಸಾಧಕರಿಗಾಗಿ ಪ್ರತ್ಯೇಕ ವಿಭಾಗ ತೆರೆಯಿತು.

2009: ಒರಿಸ್ಸಾದ ಮುಖ್ಯಮಂತ್ರಿಯಾಗಿ ಮೂರನೇ ಬಾರಿಗೆ ಅಧಿಕಾರ ವಹಿಸಿಕೊಂಡ ನವೀನ್ ಪಟ್ನಾಯಕ್ ಪ್ರಮುಖ ಖಾತೆಗಳನ್ನು ತಮ್ಮಲ್ಲಿಯೇ ಇಟ್ಟುಕೊಂಡರು.

2009: ಬಡಕುಂದ್ರಿ (ಯಮಕನಮರಡಿ) ಸಮೀಪದ ಯರನಾಳ ಗ್ರಾಮದ ಶ್ರೀ ಶಾಂತಿಸಾಗರರ ದೀಕ್ಷಾಸ್ಥಾನ ಶ್ರೀ ಚಂದ್ರ ಪ್ರಭು ಜಿನಮಂದಿರದಲ್ಲಿ ಆತ್ಮಧ್ಯಾನ ಯೋಗಿ ಶ್ರೀ 108 ಧರ್ಮಭೂಷಣ ಮಹಾರಾಜರು ಈದಿನ ಮುಂಜಾನೆ 9.48ಕ್ಕೆ ಸಲ್ಲೇಖನಾ ಸಮಾಧಿ ಮರಣ ಹೊಂದಿದರು. ಅವರ ಏಕೈಕ ಶಿಷ್ಯರಾದ ಬಾಲಯೋಗಿ ನಿರ್ಯಾಪಕಾಚಾರ್ಯ ಕ್ರಾಂತಿಶಾಂತಿ ಸಂತ ಶ್ರೀ 108 ಕುಲರತ್ನಭೂಷಣ ಮುನಿಮಹಾರಾಜರ ಸಾನ್ನಿಧ್ಯದಲ್ಲಿ ಶಾಸ್ತ್ರೋಕ್ತ ವಿಧಿವಿಧಾನಗಳು ಜರುಗಿದವು. ಆಚಾರ್ಯರತ್ನ ಶ್ರೀ 108 ದೇಶಭೂಷಣ ಮುನಿಮಹಾಜರ ಅಂತಿಮ ಶಿಷ್ಯರಾದ ಶ್ರೀ ಧರ್ಮ ಭೂಷಣ ಮಹಾರಾಜರು 84 ವರ್ಷ ವಯಸ್ಸಿನಲ್ಲಿ ವಿಧಿವಶರಾದರು.

2008: ಕಳ್ಳಬಟ್ಟಿ ದುರಂತದ ಪ್ರಮುಖ ಆರೋಪಿ ಸೌಂದರ್ ರಾಜನ್ ಸೇರಿದಂತೆ ಮೂವರನ್ನು ರಾಜ್ಯ ಪೊಲೀಸರು ತಮಿಳುನಾಡಿನ ಸೇಲಂ ಜಿಲ್ಲೆಯ ನಾಮಕಲ್ನಲ್ಲಿ ಬಂಧಿಸಿದರು. ನಗರದ ಹೊರ ವಲಯದಲ್ಲಿ ಒಬ್ಬ ಮಹಿಳೆಯನ್ನು ವಶಕ್ಕೆ ತೆಗೆದುಕೊಂಡರು. ಬೆಂಗಳೂರು, ಕೋಲಾರ, ಆನೇಕಲ್, ಹೊಸಕೋಟೆಯಲ್ಲಿ ಈದಿನ ಕಳ್ಳಬಟ್ಟಿ ಸೇವನೆ ಪರಿಣಾಮವಾಗಿ ಒಟ್ಟು ಇನ್ನೂ 10 ಮಂದಿ ಮೃತರಾದರು. ಇದರೊಂದಿಗೆ ದುರಂತದಲ್ಲಿ ಸತ್ತವರ ಒಟ್ಟು ಸಂಖ್ಯೆ 199ಕ್ಕೆ ಏರಿತು.

2008: ಶೃಂಗೇರಿ ತಾಲ್ಲೂಕಿನ ಕಿಗ್ಗದಲ್ಲಿ ಲೇವಾದೇವಿ ವ್ಯವಹಾರ ನಡೆಸುತ್ತಿದ್ದ ಕಿರಣ್ ಶೆಟ್ಟಿ ಎಂಬುವವರ ಮನೆಗೆ ಹಿಂದಿನ ದಿನ ಮಧ್ಯರಾತ್ರಿ ದಿಢೀರನೆ ಭೇಟಿ ನೀಡಿದ ನಕ್ಸಲೀಯರ ತಂಡ ಮನೆಯ ಆವರಣದಲ್ಲಿ ನಿಲ್ಲಿಸಿದ್ದ ಬೈಕಿಗೆ ಬೆಂಕಿ ಹಚ್ಚಿ ಪರಾರಿಯಾಯಿತು.

2008: ಜಗತ್ತಿನ ಅತಿ ಸಣ್ಣ ಕಾಡು ಬೆಕ್ಕುಗಳಲ್ಲಿ ಒಂದಾಗಿರುವ ಹಾಗೂ ಭಾರತದ ಅತಿ ಸಣ್ಣ ಬೆಕ್ಕು ಎಂದು ಪರಿಗಣಿತವಾಗಿರುವ `ರಸ್ಟಿ ಸ್ಪಾಟೆಡ್ ಕ್ಯಾಟ್' ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಪತ್ತೆಯಾಗಿರುವುದು ಬೆಳಕಿಗೆ ಬಂತು. ಪಕ್ಕಾ ನಿಶಾಚರಿಯಾದ ಈ ವಾಮನ ಬೆಕ್ಕು ಹೆಚ್ಚೆಂದರೆ ಒಂದರಿಂದ ಒಂದೂವರೆ ಕೆ.ಜಿ. ತೂಕ ಇದೆ. ಬಾಲ ಸೇರಿದಂತೆ ದೇಹದ ಒಟ್ಟು ಉದ್ದ ಸುಮಾರು 35ರಿಂದ 48 ಸೆ.ಮೀ. (14ರಿಂದ 17 ಅಂಗುಲ). ಗಾತ್ರ ನಮ್ಮ ಮನೆಯ ಬೆಕ್ಕಿನ ಸುಮಾರು ಅರ್ಧದಷ್ಟು. ಹವ್ಯಾಸಿ ಛಾಯಾಚಿತ್ರಗ್ರಾಹಕ ಸುಭರ್ಘ್ಯ ದಾಸ್ ಅವರು ಚಾಮುಂಡಿ ಬೆಟ್ಟದಲ್ಲಿ ರಾತ್ರಿ ಸುಮಾರು 7.30ರ ಹೊತ್ತಿಗೆ ಕ್ಯಾಮರಾದಲ್ಲಿ ಇದನ್ನು ಸೆರೆ ಹಿಡಿದರು. ನಸು ಹಳದಿ ಬಣ್ಣದ ಈ ಪುಟಾಣಿ ಬೆಕ್ಕು ಭಾರತ ಪರ್ಯಾಯ ದ್ವೀಪದಲ್ಲಿ ರಾಜಸ್ಥಾನದವರೆಗೆ ವಾಸವಾಗಿರುವುದು ದಾಖಲಾಗಿದ್ದರೂ ಮನುಷ್ಯರ ಕಣ್ಣಿಗೆ ಬೀಳುವುದು ತೀರ ಅಪರೂಪ. ಮಾಂಸ ಹಾಗೂ ತುಪ್ಪಳಕ್ಕಾಗಿಯೂ ಅವುಗಳನ್ನು ಬೇಟೆಯಾಡಲಾಗುತ್ತಿದೆ. ವಿವಿಧ ಕಾರಣಗಳಿಂದ 'ರಸ್ಟಿ ಸ್ಪಾಟೆಡ್ ಕ್ಯಾಟ್' ಅಳಿವಿನ ಅಂಚಿನೆಡೆಗೆ ಸಾಗಿದೆ. 1972ರ ವನ್ಯಜೀವಿ ಸಂರಕ್ಷಣಾ ಕಾಯಿದೆಯ ಶೆಡ್ಯೂಲ್ ಒಂದರಲ್ಲಿ ಈ ಬೆಕ್ಕನ್ನು ಸೇರಿಸಲಾಗಿದೆ.

2008: ಮುಂಬೈ ಚಿನಿವಾರ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ತಲಾ 10 ಗ್ರಾಂಗಳಿಗೆ ಮತ್ತೆ ರೂ 85ರಷ್ಟು ಹೆಚ್ಚಳಗೊಂಡು ರೂ 13 ಸಾವಿರ ಗಡಿ ಹತ್ತಿರ ಸಾಗಿತು.

2008: ಹತ್ತು ದಿನಗಳ ಹಿಂದೆ ನೈಋತ್ಯ ಚೀನಾದಲ್ಲಿ ಸಂಭವಿಸಿದ ಭಾರಿ ಭೂಕಂಪದಲ್ಲಿ 80 ಸಾವಿರಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ ಅಥವಾ ಕಾಣೆಯಾಗಿದ್ದಾರೆ ಎಂದು ಚೀನಾ ಸರ್ಕಾರ ಅಧಿಕೃತವಾಗಿ ಘೋಷಿಸಿತು. ಈ ಭೂಕಂಪದಲ್ಲಿ 2,88,000ಕ್ಕೂ ಹೆಚ್ಚು ಮಂದಿ ಗಾಯಗೊಂಡರು.

2008: ಗುಜರಾತಿನ ಗೋಧ್ರಾದಲ್ಲಿ ಆರು ವರ್ಷಗಳ ಹಿಂದೆ ನಡೆದ ಗಲಭೆಗೆ ತುತ್ತಾದ ಕುಟುಂಬಗಳಿಗೆ ಹೆಚ್ಚುವರಿ ಪರಿಹಾರ ಕಾರ್ಯ ಕೈಗೊಳ್ಳಲು 330 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ನೀಡುವ ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿತು. ಪ್ರಧಾನಿ ಮನಮೋಹನ್ ಸಿಂಗ್ ತಮ್ಮ ಸಚಿವ ಸಂಪುಟ ಸಭೆಯಲ್ಲಿ ಗಲಭೆ ಸಂತ್ರಸ್ಥರಿಗೆ ಹೆಚ್ಚುವರಿ ಪರಿಹಾರ ನೀಡುವ ಪ್ರಸ್ತಾವನೆಗೆ ಅನುಮೋದನೆ ಪಡೆದ ನಂತರ ಪ್ಯಾಕೆಜ್ ಘೋಷಿಸಿದರು ಎಂದು ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ತಿಳಿಸಿದರು. 2002ರ ಫೆಬ್ರುವರಿಯಲ್ಲಿ ಗೋಧ್ರಾದಲ್ಲಿ ರೈಲ್ವೆ ಬೋಗಿಗೆ ಬೆಂಕಿ ಹಚ್ಚಿದ ಪರಿಣಾಮ ರಾಜ್ಯದಾದ್ಯಂತ ಕೋಮುಗಲಭೆ ಭುಗಿಲೆದ್ದಿತ್ತು.

2008: ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ಗ್ರಾಮವೊಂದರಲ್ಲಿ ಮದವೇರಿದ ಸಲಗದ ತುಳಿತಕ್ಕೆ ಮತ್ತೆ ಇಬ್ಬರು ಬಲಿಯಾದರು. ಇದರೊಂದಿಗೆ ಎರಡು ದಿನಗಳಲ್ಲಿ ಮಡಿದವರ ಸಂಖ್ಯೆ ಆರಕ್ಕೆ ಏರಿತು.

2008: ಅಕ್ರಮ ಬಂಧನದಲ್ಲಿ ಇಟ್ಟುಕೊಂಡು ಮಗಳನ್ನು ಲೈಂಗಿಕವಾಗಿ ಬಳಸಿಕೊಂಡು ಇಬ್ಬರು ಮಕ್ಕಳನ್ನು ಹುಟ್ಟಿಸಿದ ಅರ್ಜೆಂಟೀನಾದ ಪ್ರಜೆಯೊಬ್ಬನಿಗೆ 16 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. 1992ರಲ್ಲಿ ಸೋರಿಯಾ ತನ್ನ ತಂದೆಯಿಂದ ಮೊದಲು ಅತ್ಯಾಚಾರಕ್ಕೆ ಒಳಗಾದಾಗ 12 ವರ್ಷದವಳಾಗಿದ್ದಳು. ಆಗ ಮೊದಲ ಮಗುವಿಗೆ ಜನ್ಮ ನೀಡಿದಳು. ನಂತರ 1997ರಲ್ಲಿ ಎರಡನೇ ಮಗುವಿಗೆ ಜನ್ಮ ನೀಡಿದಳು.

2008: ಮಾನವ ಹಕ್ಕುಗಳ ಸಂಘಟನೆಗಳ ಭಾರಿ ವಿರೋಧದ ಮಧ್ಯೆಯೂ ಪಾಕಿಸ್ಥಾನವುವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಸದಸ್ಯತ್ವ ಪಡೆಯುವಲ್ಲಿ ಯಶಸ್ವಿಯಾಯಿತು.
47 ರಾಷ್ಟ್ರಗಳ ಸದಸ್ಯತ್ವದ ಈ ಮಂಡಳಿಗೆ ಪಾಕಿಸ್ಥಾನದ ಜತೆಗೆ ಜಪಾನ್, ದಕ್ಷಿಣ ಕೊರಿಯಾ, ಬಹ್ರೇನ್ ಸೇರಿದಂತೆ ಒಟ್ಟು 15 ರಾಷ್ಟ್ರಗಳು ಸದಸ್ಯತ್ವ ಪಡೆದವು.

2007: ತಮ್ಮ ನಿವಾಸದಲ್ಲಿ ಕೊಕೇನ್ ಹೊಂದಿದ್ದ ಆರೋಪದ ಮೇರೆಗೆ ಮಾಜಿ ಟೆಸ್ಟ್ ಕ್ರಿಕೆಟ್ ಆಟಗಾರ ಹಾಗೂ ವೀಕ್ಷಕ ವಿವರಣೆಗಾರ ಮಣಿಂದರ್ ಸಿಂಗ್ ಅವರನ್ನು ಬಂಧಿಸಲಾಯಿತು. ದೆಹಲಿಯ ಅವರ `ಪ್ರೀತ್ ವಿಹಾರ್' ನಿವಾಸದಿಂದ 1.5 ಗ್ರಾಂನಷ್ಟು ಕೊಕೇನ್ ವಶಪಡಿಸಿಕೊಳ್ಳಲಾಯಿತು. ಎಡಗೈ ಸ್ಪಿನ್ನರ್ ಮಣಿಂದರ್ 35 ಟೆಸ್ಟ್ ಹಾಗೂ 59 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

2007: ಅವ್ಯವಹಾರಗಳಿಗಾಗಿ ತಮಗೆ ವಿಧಿಸಲಾಗಿರುವ ಸೆರೆವಾಸದ ವಿರುದ್ಧ ಮೇಲ್ಮನವಿ ಸಲ್ಲಿಸುವುದರ ಜೊತೆಗೆ ತಮ್ಮ ವಚನದಂತೆ 100 ಕೋಟಿ ಅಮೆರಿಕನ್ ಡಾಲರುಗಳನ್ನು ಧಾರ್ಮಿಕ ದತ್ತಿ ಸಂಸ್ಥೆಗಳಿಗೆ ದಾನ ನೀಡುವುದಾಗಿ ದಕ್ಷಿಣ ಕೊರಿಯಾದ ಪ್ರಮುಖ ಆಟೋಮೊಬೈಲ್ ಸಂಸ್ಥೆ ಹುಂಡೈ ಮೋಟಾರ್ಸ್ ಮುಖ್ಯಸ್ಥ ಚುಂಗ್ ಮೊಂಗ್ -ಕೂ ಪ್ರಕಟಿಸಿದರು.

2007: ಲಿಕ್ವಿಡ್ ಕ್ರಿಸ್ಟಲ್ ಡಿಸ್ ಪ್ಲೇ (ಎಲ್ ಸಿ ಡಿ) ಜನಕ, ನೊಬೆಲ್ ಪ್ರಶಸ್ತಿ ಪುರಸ್ಕೃತ ಫ್ರಾನ್ಸಿನ ಪಿಯರೆ ಗಿಲಸ್ ಡೆ ಜನಸ್ (74) ಪ್ಯಾರಿಸ್ಸಿನಲ್ಲಿ ನಿಧನರಾದರು. 1991ರ ಭೌತಶಾಸ್ತ್ರ ನೊಬೆಲ್ ಪ್ರಶಸ್ತಿ ಪುರಸ್ಕೃತ ಡೆ ಜನಸ್ ಅವರು ಲಿಕ್ವಿಡ್ ಕ್ರಿಸ್ಟಲ್ ಮತ್ತು ಪಾಲಿಮಾರ್ಸ್ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿದವರು. ಎಲ್ ಸಿ ಡಿ ತಂತ್ರಜ್ಞಾನ ಇಂದಿನ ಎಲೆಕ್ಟ್ರಾನಿಕ್ ಯುಗದಲ್ಲಿ ಪ್ರಮುಖ ಪಾತ್ರ ವಹಿಸಿದೆ. 1932ರಲ್ಲಿ ಜನಿಸಿದ ಡೆ ಜನಸ್ 1974ರಲ್ಲಿ ಪ್ರಕಟಿಸಿದ `ದಿ ಫಿಸಿಕ್ಸ್ ಆಫ್ ಲಿಕ್ವಿಡ್ ಕ್ರಿಸ್ಟಲ್ಸ್' ಈ ಕ್ಷೇತ್ರದ ಮಹತ್ವದ ಕೃತಿ ಎಂಬುದಾಗಿ ಹೆಸರು ಪಡೆದಿದೆ.

2007: ಹತ್ತು ಕೋಟಿ ರೂಪಾಯಿ ಮೌಲ್ಯದ ವಿದೇಶೀ ಕರೆನ್ಸಿ ಒಯ್ಯುವ ವೇಳೆ ಸಿಕ್ಕಿಬಿದ್ದ ನೈಜೀರಿಯಾ ರಾಜತಾಂತ್ರಿಕನನ್ನು ಆದಾಯ ತೆರಿಗೆ ಇಲಾಖೆ ಬಿಡುಗಡೆ ಮಾಡಿತು. ಆದರೆ ಹಣವನ್ನು ವಶಪಡಿಸಿಕೊಳ್ಳಲಾಯಿತು.

2006: ಬುಧಿಯಾಸಿಂಗ್ ಮ್ಯಾರಥಾನ್ ಓಟದಿಂದ ಪ್ರೇರಿತನಾದ ಒರಿಸ್ಸಾದ ಮತ್ತೊಬ್ಬ ಪೋರ, ಭುವನೇಶ್ವರದಿಂದ 15 ಕಿ.ಮೀ. ದೂರದ ಪಿಪ್ಲಿಯ 12 ವರ್ಷದ ಬಾಲಕ ದಿಲೀಪ ರಾಣಾ 45 ಕಿ.ಮೀ. ದೂರವನ್ನು ಐದೂವರೆ ತಾಸಿನಲ್ಲಿ ಕ್ರಮಿಸಿ ದಾಖಲೆ ನಿರ್ಮಿಸಿದ.

2006: ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಅನುಷ್ಠಾನಗೊಳಿಸುವುದನ್ನು ಪ್ರತಿಭಟಿಸಿ ರಾಷ್ಟ್ರೀಯ ಜ್ಞಾನ ಆಯೋಗದ ಇಬ್ಬರು ಪ್ರಮುಖ ಸದಸ್ಯರಾದ ಪ್ರತಾಪ್ ಭಾನು ಮೆಹ್ತಾ ಮತ್ತು ಆಂಡ್ರೆ ಬೆಟೀಲಿ ರಾಜೀನಾಮೆ ನೀಡಿದರು. ಬೆಂಗಳೂರಿನಲ್ಲಿ ಕೆಲ ದಿನಗಳ ಹಿಂದೆ ನಡೆದ ರಾಷ್ಟ್ರೀಯ ಜ್ಞಾನ ಆಯೋಗದ ಸಭೆಯಲ್ಲಿ ಮೀಸಲಾತಿ ಪ್ರಸ್ತಾವಗಳನ್ನು ವಿರೋಧಿಸಿದ ಆರು ಮಂದಿ ಸದಸ್ಯರಲ್ಲಿ ಮೆಹ್ತಾ ಮತ್ತು ಬೆಟೀಲಿ ಸೇರಿದ್ದು, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಆಯೋಗದ ಅಭಿಪ್ರಾಯಗಳನ್ನು ತೀವ್ರವಾಗಿ ಟೀಕಿಸಿದ್ದರು.

2006: ಪಾಕಿಸ್ಥಾನಿ ಪ್ರಧಾನಿ ಶೌಕತ್ ಅಜೀಜ್ ಅವರ ಮೇಲೆ ವಿಫಲ ಆತ್ಮಹತ್ಯಾ ದಾಳಿ ನಡೆಸಿದ್ದಕ್ಕಾಗಿ ಪಾಕಿಸ್ಥಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವೊಂದು ನಾಲ್ಕು ಮಂದಿ ಉಗ್ರಗಾಮಿಗಳಿಗೆ ಮರಣದಂಡನೆ ಮತ್ತು ಇತರ ಮೂರು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಸಾಕ್ಷ್ಯದ ಅಭಾವ ಕಾರಣ ಇನ್ನೊಬ್ಬ ಆರೋಪಿಯನ್ನು ಆರೋಪಮುಕ್ತ ಗೊಳಿಸಿತು. ರಾವಲ್ಪಿಂಡಿಯಲ್ಲಿನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದ ನ್ಯಾಯಾಧೀಶ ಸಫ್ದರ್ ಮಲಿಕ್ ಅವರು ಈ ತೀರ್ಪು ನೀಡಿದರು. 2004ರ ಜುಲೈ 30ರಂದು ಅಟೋಕ್ ಜಿಲ್ಲೆಯ ಫತೇ ಜಂಗ್ ಸಮೀಪದ ಜಾಫ್ರ್ ಮೋರ್ನಲ್ಲಿ ಶೌಕತ್ ಅಜೀಜ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ನಡೆದ ಈ ದಾಳಿಯಲ್ಲಿ 6 ಜನ ಸತ್ತು 48 ಮಂದಿ ಗಾಯಗೊಂಡಿದ್ದರು.

1989: ಭಾರತವು ಒರಿಸ್ಸಾದ ಚಂಡೀಪುರದಲ್ಲಿ `ಅಗ್ನಿ' ಕ್ಷಿಪಣಿಯನ್ನು ಹಾರಿಸಿತು. ಇದರೊಂದಿಗೆ ಭಾರತವು ಜಗತ್ತಿನಲ್ಲಿ ಮಧ್ಯಂತರಗಾಮೀ ಯುದ್ಧ ಕ್ಷಿಪಣಿ ಸಾಮರ್ಥ್ಯ ಹೊಂದಿದ 6ನೇ ರಾಷ್ಟ್ರವಾಯಿತು.

1969: ಕಲಾವಿದ ಪ್ರಕಾಶ ಪಿ. ಶೆಟ್ಟಿ ಜನನ.

1967: ಕಲಾವಿದ ಸೋಮಶೇಖರ ಬಿಸಲ್ವಾಡಿ ಜನನ.

1961: ಭಾರತದ (ಸಂವಿಧಾನದ 7ನೇ ಶೆಡ್ಯೂಲಿನಲ್ಲಿ ಸೇರ್ಪಡೆಯಾಗಿರುವ) ಯಾವುದೇ ಭಾಷೆಯ ಸೃಜನಾತ್ಮಕ ಸಾಹಿತ್ಯ ಕೃತಿಯನ್ನು ಗೌರವಿಸುವ ಸಲುವಾಗಿ ಜ್ಞಾನಪೀಠ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. 1965ರಲ್ಲಿ ಮೊದಲ ಪ್ರಶಸ್ತಿಯನ್ನು ಜಿ. ಶಂಕರ ಕುರುಪ್ ಅವರಿಗೆ ಮಲಯಾಳಂ ಕವನಗಳಿಗಾಗಿ ನೀಡಲಾಯಿತು.

1961: ಕಲಾವಿದ ವಿಶ್ವನಾಥ ನಾಕೋಡ್ ಜನನ.

1960: `ಗಾಮಾ ಪೆಹಲ್ವಾನ್' ಎಂದೇ ಜನಪ್ರಿಯರಾಗಿದ್ದ ಭಾರತೀಯ ಕುಸ್ತಿಪಟು ಗುಲಾಂ ಮಹಮ್ಮದ್ ತಮ್ಮ 80ನೇ ವಯಸ್ಸಿನಲ್ಲಿ ಲಾಹೋರಿನಲ್ಲಿ ಮೃತರಾದರು. ಭಾರತೀಯ ಕುಸ್ತಿಯನ್ನು ಜನಪ್ರಿಯಗೊಳಿಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದರು.

1949: ಕಲಾವಿದ ಎಸ್. ಕೆ. ರುದ್ರಮೂರ್ತಿ ಜನನ.

1940: ಭಾರತದ ಖ್ಯಾತ ಬೌಲರುಗಳಲ್ಲಿ ಒಬ್ಬರಾದ ಎರಪಲ್ಲಿ ಪ್ರಸನ್ನ ಹುಟ್ಟಿದ ದಿನ. 1970ರ ದಶಕದಲ್ಲಿ ಸ್ಪಿನ್ ಬೌಲರುಗಳಾದ ಬೇಡಿ, ಚಂದ್ರಶೇಖರ್ ಮತ್ತು ವೆಂಕಟರಾಘವನ್ ಜೊತೆಗೆ ಪ್ರಸನ್ನ ಕೂಡಾ ಮಿಂಚಿದ್ದರು.

1917: ಕಲಾವಿದ ಟಿ.ಎಸ್. ತಾತಾಚಾರ್ ಜನನ.

1916: ಕೀರ್ತನರತ್ನ, ಕೀರ್ತನ ಕೇಸರಿ ಇತ್ಯಾದಿ ಬಿರುದುಗಳಿಗೆ ಪಾತ್ರರಾಗಿದ್ದ ಖ್ಯಾತ ಕೀರ್ತನಕಾರ ಕೊಣನೂರು ಸೀತಾರಾಮ ಶಾಸ್ತ್ರಿ (22-5-1916ರಿಂದ 28-5-1970) ಅವರು ಶ್ರೀಕಂಠ ಶಾಸ್ತ್ರಿ ಅವರ ಮಗನಾಗಿ ಕೊಣನೂರಿನಲ್ಲಿ ಜನಿಸಿದರು.

1772: ಭಾರತದ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸುಧಾರಕ ರಾಮಮೋಹನ್ ರಾಯ್ (1772-1833) ಜನ್ಮದಿನ. ಸಾಂಪ್ರದಾಯಿಕ ಹಿಂದೂ ಸಂಸ್ಕೃತಿಯನ್ನು ಪ್ರಶ್ನಿಸಿದ ಇವರನ್ನು `ಆಧುನಿಕ ಭಾರತದ ಪಿತಾಮಹ' ಎಂದು ಕರೆಯಲಾಗಿದೆ.

1545: ಕಾಲಿಂಜರಿನಲ್ಲಿ ಸಂಭವಿಸಿದ ಸ್ಫೋಟವೊಂದರಲ್ಲಿ ಆಫ್ಘನ್ ದೊರೆ ಶೇರ್ ಶಹ ಸೂರಿ ಅಸು ನೀಗಿದ.

No comments:

Advertisement