ಮತ್ತು ಪರಮಾಧಿಕಾರ..!

ತಹಶೀಲ್ದಾರರನ್ನು 'ತಾಲೂಕು ಮ್ಯಾಜಿಸ್ಟ್ರೇಟ್' ಎಂಬುದಾಗಿ ಕರೆದು ಅವರಿಗೆ ಕೊಟ್ಟಿರುವ ಅಧಿಕಾರ ಎಂತಹುದು? ಜಿಲ್ಲಾಧಿಕಾರಿಗಳಿಗೆ 'ಜಿಲ್ಲಾ ಮ್ಯಾಜಿಸ್ಟ್ರೇಟ್' ಎಂಬುದಾಗಿ ಕರೆದು ಅವರಿಗೆ ಕೊಟ್ಟಿರುವ ಅಧಿಕಾರ ಪರಮಾಧಿಕಾರ ಅಲ್ಲವೇ?
-ನೆತ್ರಕೆರೆ ಉದಯಶಂಕರ
ಕೆಲವೇ ದಿನಗಳ ಹಿಂದೆ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅವರನ್ನು ಭೇಟಿ ಮಾಡಿದ್ದಾಗ ಅವರ ಬಾಯಿಯಿಂದ ಹೊರಬಂದಿದ್ದ ಮಾತುಗಳಿವು.
ಮೊನ್ನೆ 23 ಜೂನ್ 2010ರ ಬುಧವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಸಂದರ್ಭದಲ್ಲಿ ಹೆಗ್ಡೆಯವರು ಈ ಮಾತನ್ನು ಸ್ವಲ್ಪ ಬದಲಾಯಿಸಿ 'ರಾಜಕಾರಣಿಗಳೆಲ್ಲ ಒಂದೇ ಪಾಠಶಾಲೆಯ ಮಕ್ಕಳು' ಎಂದು ಹೇಳಿದರು.
ಲೋಕಾಯುಕ್ತರಿಗೆ ಪರಮಾಧಿಕಾರ ನೀಡುತ್ತೇವೆ ಎಂಬುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದ್ದ ರಾಜ್ಯದ ಬಿಜೆಪಿ ಧುರೀಣರು ಈಗ ಹಠಾತ್ತನೆ ರಾಗ ಬದಲಾಯಿಸಿದ್ದು ನೋಡುವಾಗ ಲೋಕಾಯುಕ್ತರ ಮಾತುಗಳು ಮತ್ತೆ ಮತ್ತೆ ಮನಸ್ಸಿನಲ್ಲಿ ಹಾದು ಹೋಗುತ್ತದೆ.
ಮುಖ್ಯಮಂತ್ರಿಗಳು ಪ್ರೆಸ್ ಕ್ಲಬ್ಬಿನಲ್ಲಿ ಪತ್ರಕರ್ತರ ಸಂವಾದದಲ್ಲಿ ಪಾಲ್ಗೊಂಡು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದಾಗ ಅಪ್ಪಿತಪ್ಪಿಯೂ ರಾಜೀನಾಮೆ ಹಿಂತೆಗೆದುಕೊಳ್ಳುವಂತೆ ಮನವಿ ಮಾಡುವ ಬಗ್ಗೆ ತುಟಿ ಬಿಚ್ಚಲಿಲ್ಲ.
ಅದೇ ಹೊತ್ತಿನಲ್ಲಿ ಕೆಲವು ಪತ್ರಕರ್ತ ಮಿತ್ರರ ಜೊತೆಗೆ ಲೋಕಾಭಿರಾಮವಾಗಿ ಮಾತನಾಡುತ್ತಿದ್ದ ಮಾಜಿ ಕೇಂದ್ರ ಸಚಿವ ಧನಂಜಯ ಕುಮಾರ್ 'ಪರಮಾಧಿಕಾರ ಅಂದರೆ ಏನು? ಸ್ವತಃ ನೋಟಿಸ್ ನೀಡಿ, ವಿಚಾರಣೆ ನಡೆಸಿ, ಸ್ವತಃ ತೀರ್ಪು ನೀಡುವ ಅಧಿಕಾರವೇ? ಇಂತಹ ಅಧಿಕಾರದಿಂದ ಸಹಜ ನ್ಯಾಯಕ್ಕೆ ಧಕ್ಕೆ ಆಗುವುದಿಲ್ಲವೇ?' ಎಂದು ಪ್ರಶ್ನಿಸಿದ್ದರು.
ಈಗ ಸಚಿವ ರಾಮಚಂದ್ರ ಗೌಡ ಅವರು ಇದೇ ಧಾಟಿಯಲ್ಲಿ ಮಾತನಾಡಿದ್ದು ಪತ್ರಿಕೆಗಳಲ್ಲಿ ವರದಿಯಾಗಿದೆ. ಒಟ್ಟಾರೆಯಾಗಿ ಪರಮಾಧಿಕಾರ ನೀಡುವುದು ಇವರೆಲ್ಲರಿಗೆ ಈಗ ಅಲರ್ಜಿಯ ವಿಚಾರ..!
ಬಿಜೆಪಿಯ ಕಥೆ ಹೀಗಾದರೆ ಇತರ ಪಕ್ಷಗಳು ಸಾಚಾಗಳೇನೂ ಅಲ್ಲ. ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ಲೋಕಾಯುಕ್ತರಿಗೆ ಒಮ್ಮೆ ಇಂತಹ ಅಧಿಕಾರ ಕೊಟ್ಟಿದ್ದರು. ಆದರೆ ನಂತರ ಬಂದ ಸರ್ಕಾರ ಅದನ್ನು ಹಿಂತೆಗೆದುಕೊಂಡಿತು. ಆ ಬಳಿಕ ರಾಜ್ಯವನ್ನು ಎರಡು ದಶಕಗಳ ಕಾಲ ಆಳಿದ ಕಾಂಗ್ರೆಸ್ಸು, ಜನತಾದಳ ಸರ್ಕಾರಗಳಾದರೂ ಲೋಕಾಯುಕ್ತರಿಗೆ ಪರಮಾಧಿಕಾರ ನೀಡಬಹುದಾಗಿತ್ತಲ್ಲ?
ಅಧಿಕಾರದಲ್ಲಿ ಇದ್ದಾಗ ತೆಪ್ಪಗೆ ಇದ್ದು, ವಿರೋಧ ಪಕ್ಷಗಳ ಸ್ಥಾನಕ್ಕೆ ಬಂದು ಕೂತೊಡನೆ ಎಲ್ಲ ರಾಜಕೀಯ ಪಕ್ಷಗಳಿಗೂ ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರ ಕೊಡಬೇಕು ಎಂಬುದು ನೆನಪಾಗುತ್ತದೆ. ಮತ್ತೆ ಅಧಿಕಾರಕ್ಕೆ ಬಂದೊಡನೆ ಈ ವಿಚಾರದಲ್ಲಿ 'ಜಾಣ ಮರೆವು' ಆವರಿಸಿ ಬಿಡುತ್ತದೆ.ಈಗ ಅಧಿಕಾರ ಪೀಠದಲ್ಲಿ ಕುಳಿತಿರುವ ಬಿಜೆಪಿಗೆ ಆಗಿರುವುದೂ ಇದೇ. ಏಕೆ ಎಂದರೆ....
ಅಧಿಕಾರಿಗಳನ್ನು ಹಾಗೂ ಸರ್ಕಾರಿ ಯಂತ್ರದ ಸಿಬ್ಬಂದಿಯನ್ನು ಬಿಟ್ಟು ಇವರಾರಿಗೂ ಆಡಳಿತ ನಡೆಸಲು ಬರುವುದಿಲ್ಲ. ಹಾಗಾಗಿ ಸದಾಕಾಲ ಅಧಿಕಾರಿಗಳು, ಆಡಳಿತ ಯಂತ್ರದ ಸಿಬ್ಬಂದಿಯೊಂದಿಗೆ ರಾಜಕಾರಣಿಗಳದ್ದು 'ನೀ ನನಗಿದ್ದರೆ ನಾ ನಿನಗೆ' ಎಂಬ ಹಾಡು..!
ಅದಕ್ಕಾಗಿಯೇ ಹೆಗ್ಡೆಯವರು ಹೇಳಿದ್ದು 'ಇವರು ಕನ್ ಜಾಯಿನ್ಡ್ ಟ್ವಿನ್ಸ್' ಅಂತ.
ಪ್ರಜಾಪ್ರಭುತ್ವದಲ್ಲಿ ಆಡಳಿತಾಂಗ, ಕಾರ್ಯಾಂಗ, ನ್ಯಾಯಾಂಗ ಎಂಬ ಮೂರು ಅಂಗಗಳು ಇರುವುದು ಸುಗಮ ಆಡಳಿತಕ್ಕಾಗಿ ಅಷ್ಟೇ ಅಲ್ಲ, ಒಬ್ಬರು ತಪ್ಪು ಮಾಡಿದರೆ ಇನ್ನೊಬ್ಬರು ಅವರ ಜುಟ್ಟು ಹಿಡಿಯುವಂತಿರಬೇಕು ಎಂಬ ಕಾರಣಕ್ಕಾಗಿ. ಆದರೆ ಈ ಮೂಲಭೂತ ತತ್ವ ನಮಗೆ ಮರೆತೇ ಹೋಗಿದೆ ಎಂದರೆ ತಪ್ಪಿಲ್ಲವೇನೋ!
'ಪರಮಾಧಿಕಾರ'ದ ಪ್ರಶ್ನೆ ಬಂದಾಗ ರಾಜಕಾರಣಿಗಳು ಲೋಕಾಯುಕ್ತರಿಗೆ ಅದನ್ನು ಕೊಡಲು ಏಕೆ ಹಿಂದೇಟು ಹೊಡೆಯುತ್ತಾರೆ ಗೊತ್ತೆ? ಬೇರೆ ಯಾವುದಕ್ಕೂ ಅಲ್ಲ, ಲೋಕಾಯುಕ್ತರ ಚಾಟಿ ಬೀಸುವುದು ಅಧಿಕಾರಿಗಳ, ರಾಜಕಾರಣಿಗಳ ದುರಾಡಳಿತ, ಭ್ರಷ್ಟತೆಯ ವಿರುದ್ಧ ಎಂಬ ಕಾರಣಕ್ಕಾಗಿ.
ಅಂದರೆ ಲೋಕಾಯುಕ್ತರಿಗೆ ಪರಮಾಧಿಕಾರ ಇದ್ದರೆ ದುರಾಡಳಿತ ನಡೆಸುವ ಆಡಳಿತಾಂಗದ ಭ್ರಷ್ಟ ಅಧಿಕಾರಿ, ಸಿಬ್ಬಂದಿ ಮಾತ್ರವೇ ಅಲ್ಲ ಅವರಿಗೆ ರಕ್ಷಕರಾಗಿ ನಿಲ್ಲುವ ರಾಜಕಾರಣಿಗಳ ಆಟಗಳಿಗೂ 'ಅಂಕೆ' ಬೀಳುತ್ತದೆ.
ಲೋಕಾಯುಕ್ತರ ನೇರ ಪ್ರಹಾರ ಭ್ರಷ್ಟ ಅಧಿಕಾರಿ - ಸಿಬ್ಬಂದಿ ಮತ್ತು ರಾಜಕಾರಣಿಗಳ ಮೇಲೆಯೇ ಹೊರತು ಸಾರ್ವಜನಿಕರ ಮೇಲೆ ಅಲ್ಲ. ಈ ಮೂಲಕ ಸಾರ್ವಜನಿಕರಿಗೆ ನ್ಯಾಯ ಒದಗಿಸಿಕೊಡುವ ಕೆಲಸವನ್ನು ಲೋಕಾಯುಕ್ತ ವ್ಯವಸ್ಥೆ ಮಾಡಿಕೊಡುತ್ತದೆ.
ಗಮನಿಸಬೇಕಾದ ಮಹತ್ವದ ವಿಷಯ ಏನೆಂದರೆ ಒಬ್ಬರಿಗೇ ನೋಟಿಸ್ ನೀಡುವ, ವಿಚಾರಣೆ ನಡೆಸುವ ಮತ್ತು ಶಿಕ್ಷೆ ವಿಧಿಸುವ ಅಧಿಕಾರ ಕೊಟ್ಟು ಬಿಟ್ಟರೆ ಸಹಜ ನ್ಯಾಯಕ್ಕೆ ಧಕ್ಕೆ ಆಗುವುದಿಲ್ಲವೇ ಎಂಬ ಪ್ರಶ್ನೆ ಈ ರಾಜಕಾರಣಿಗಳಿಗೆ ಅಧಿಕಾರಿಗಳಿಗೆ ಬರುವುದು ಅವರ ವಿರುದ್ಧ ಚಾಟಿ ಬೀಡುವ ಲೋಕಾಯುಕ್ತರಿಗೆ ಈ 'ಅಧಿಕಾರ' ನೀಡಬೇಕು ಎಂಬ ಆಗ್ರಹ ಬಂದಾಗ ಮಾತ್ರ.
ಆದರೆ ಇದೇ ನಮ್ಮ ಆಡಳಿತ ವ್ಯವಸ್ಥೆಯಲ್ಲಿ 'ಇಂತಹ ಪರಮ ಅಧಿಕಾರವನ್ನು' ಅಧಿಕಾರಿಗಳೇ ಹೊಂದಿರುವ ನಿದರ್ಶನ ಇಲ್ಲವೇ?

No comments:
Post a Comment