My Blog List

Tuesday, November 12, 2019

ಶಿವಸೇನಾ ನಾಯಕ ಸಂಜಯ್ ರಾವತ್ ಆಸ್ಪತ್ರೆಗೆ, ಕೇಂದ್ರ ಸಂಪುಟಕ್ಕೆ ಸಾವಂತ್ ರಾಜೀನಾಮೆ

ಶಿವಸೇನಾ ನಾಯಕ ಸಂಜಯ್ ರಾವತ್ ಆಸ್ಪತ್ರೆಗೆ, ಕೇಂದ್ರ ಸಂಪುಟಕ್ಕೆ ಸಾವಂತ್ ರಾಜೀನಾಮೆ
ಮುಂಬೈ: ಶಿವಸೇನೆಯ ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಅವರನ್ನು ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುಂಬೈಯ ಬಾಂದ್ರಾದಲ್ಲಿ ಇರುವ ಲೀಲಾವತಿ ಆಸ್ಪತೆಗೆ ದಾಖಲಿಸಲಾಯಿತು. ಇದೇ ವೇಳೆಗೆ 2019 ನವೆಂಬರ್ 11ರ ಸೋಮವಾರ ಬೆಳಗ್ಗೆ ಕೇಂದ್ರ ಸಚಿವ ಸಂಪುಟದಲ್ಲಿನ ಏಕೈಕ ಶಿವಸೇನಾ ಸಚಿವ ಅರವಿಂದ ಸಾವಂತ್ ಪ್ರಧಾನಿ ನರೇಂದ್ರ ಮೋದಿ ಕಚೇರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದರು.

ಅಕ್ಟೋಬರ್ ೨೪ರಂದು ಮಹಾರಾಷ್ಟ್ರ ವಿಧಾನಸಭೆಯ ಚುನಾವಣಾ ಫಲಿತಾಂಶ ಪ್ರಕಟವಾದಂದಿನಿಂದ ಶಿವಸೇನೆಯ ಬಿಜೆಪಿ ವಿರೋಧಿ ದಾಳಿಯಲ್ಲಿ ಮುಂಚೂಣಿಯಲ್ಲಿದ್ದ ಸಂಜಯ್ ರಾವತ್ ಅವರಿಗೆ ವೈದ್ಯರು ವಿಶ್ರಾಂತಿ ತೆಗೆದುಕೊಳ್ಳುವಂತೆ ಸಲಹೆ ಮಾಡಿದ್ದಾರೆ ಎಂದು ಅವರ ಕುಟುಂಬ ಮೂಲಗಳು ಹೇಳಿದವು.

ಕಳೆದ ಕೆಲವು ದಿನಗಳಿಂದ ಎದೆ ನೋವು ಕಾಣಿಸುತ್ತಿರುವುದಾಗಿ ರಾವತ್ ಅವರು ಹೇಳಿಕೊಂಡಿದ್ದರು. ಅವರು ಸೋಮವಾರ ವೈದ್ಯಕೀಯ ತಪಾಸಣೆಗಾಗಿ ಹೋಗಿದ್ದರು. ವೈದ್ಯರು ಅವರಿಗೆ ಒಂದು ಅಥವಾ ಎರಡು ದಿನಗಳ ವಿಶ್ರಾಂತಿಗೆ ಸಲಹೆ ಮಾಡಿದ್ದಾರೆ. ನಾಳೆ (ಮಂಗಳವಾರ) ಅವರು ಆಸ್ಪತ್ರೆಯಿಂದ ಬಿಡುಗಡೆ ಆಗಬಹುದು. ಗಂಭೀರವಾದ್ದೇನೂ ಇಲ್ಲಎಂದು ಸಂಜಯ್ ಅವರ ಸಹೋದರ ಸುನಿಲ್ ರಾವತ್ ಹೇಳಿದರು. ಸುನಿಲ್ ರಾವತ್ ಅವರು ಕೂಡಾ ವಿಖ್ರೋಲಿಯಿಂದ  ಶಾಸಕರಾಗಿದ್ದಾರೆ.

ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು 2019 ನವೆಂಬರ್ 10ರ ಭಾನುವಾರ ೨೮೮ ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ೫೬ ಶಾಸಕರೊಂದಿಗೆ ಎರಡನೇ ದೊಡ್ಡ ಪಕ್ಷವಾಗಿರುವ ಶಿವಸೇನೆಯನ್ನು ಸರ್ಕಾರ ರಚಿಸುವಂತೆ ಆಹ್ವಾನಿಸಿ ಪ್ರತಿಕ್ರಿಯಿಸಲು ೨೪ ಗಂಟೆಗಳ ಕಾಲಾವಕಾಶ ನೀಡಿದ ಬಳಿಕ ಬೆಳವಣಿಗೆಯಾಯಿತು. ಸರ್ಕಾರ ರಚನೆಯ ಆಹ್ವಾನಕ್ಕೆ ಪ್ರತಿಕ್ರಿಯಿಸಲು 2019 ನವೆಂಬರ್ 11ರ ಸೋಮವಾರ ಸಂಜೆ .೩೦ರವರೆಗಿನ ಗಡುವನ್ನು ರಾಜ್ಯಪಾಲರು ನೀಡಿದ್ದರು.

ವಿಧಾನಸಭೆಯಲ್ಲಿ ೧೦೫ ಸದಸ್ಯ ಬಲದೊಂದಿಗೆ ದೊಡ್ಡ ಪಕ್ಷವಾಗಿರುವ  ಭಾರತೀಯ ಜನತಾ ಪಕ್ಷವು ಸಂಖ್ಯಾ ಬಲ ಇಲ್ಲದೆ ಕಾರಣಕ್ಕಾಗಿ ಸರ್ಕಾರ ರಚನೆಗೆ ನಿರಾಕರಿಸಿದ ಬಳಿಕ ರಾಜ್ಯಪಾಲರು ಶಿವಸೇನೆಗೆ ಸರ್ಕಾರ ರಚಿಸಲು ಆಹ್ವಾನ ನೀಡಿದ್ದರು.

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ನಿಟ್ಟಿನಲ್ಲಿ ತಿಳುವಳಿಕೆಯೊಂದಕ್ಕೆ ಬರಲು ಶಿವಸೇನೆ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ ತೀವ್ರ ಮಾತುಕತೆ ನಡೆಸಿದ್ದವು. ಕಾಂಗ್ರೆಸ್ ಪಕ್ಷವು ಮೈತ್ರಿಕೂಟ ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ನೀಡಬಹುದು ಎಂಬ ವರದಿಗಳಿದ್ದವು.

ಶಿವಸೇನಾ ಸಚಿವ ಅರವಿಂದ ಸಾವಂತ್ ರಾಜೀನಾಮೆ: ಇದಕ್ಕೆ ಮುನ್ನ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ ಸಚಿವರಾಗಿದ್ದ ಶಿವಸೇನೆಯ ಏಕೈಕ ಸದಸ್ಯ ಅರವಿಂದ ಸಾವಂತ್ ಅವರು ಬಿಜೆಪಿಯು ನಮ್ಮ ವಿಶ್ವಾಸವನ್ನು ಭಗ್ನಗೊಳಿಸಿದೆ ಎಂದು ಹೇಳಿ, ಕೇಂದ್ರ ಸಂಪುಟಕ್ಕೆ ಸೋಮವಾರ ಬೆಳಗ್ಗೆ ರಾಜೀನಾಮೆ ಸಲ್ಲಿಸಿದರು.

ಕೇಂದ್ರ ಸಂಪುಟದಲ್ಲಿ ತಾವು ಮುಂದುವರೆಯುವುದು ನೈತಿಕವಾಗಿ ಸರಿಯಲ್ಲ ಎಂದು ರಾಜೀನಾಮೆ ಸಲ್ಲಿಸಿದ ಬಳಿಕ ಸಾವಂತ್ ಪತ್ರಕರ್ತರೊಂದಿಗೆ ಮಾತನಾಡುತ್ತಾ ಹೇಳಿದರು.

ಕೈಯಲ್ಲಿ ತಮ್ಮ ರಾಜೀನಾಮೆ ಪತ್ರವನ್ನು ಪ್ರದರ್ಶಿಸುತ್ತಾ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಾವಂತ್  ಮಹಾರಾಷ್ಟ್ರದಲ್ಲಿ ಸೇನೆಯ ಜೊತೆಗೆ ಮಾಡಿಕೊಂಡಿದ್ದ ಚುನಾವಣಾ ಪೂರ್ವ ಭರವಸೆಗಳಿಂದ ಬಿಜೆಪಿ ಹಿಂದೆ ಸರಿದಿದೆ ಎಂದು ಆಪಾದಿಸಿದರು.

ಬಿಜೆಪಿ- ಶಿವಸೇನೆ ನಡುವಣ ಬಾಂಧವ್ಯ ಮುರಿದಿದೆ ಎಂಬದನ್ನು ತಮ್ಮ ರಾಜೀನಾಮೆಯ ಮೂಲಕ ಸೂಚಿಸಿದ ಸಾವಂತ್ನಾನು ಪ್ರಧಾನಮಂತ್ರಿಯವರ ಕಚೇರಿಗೆ ಸೋಮವಾರ ರಾಜೀನಾಮೆ ಸಲ್ಲಿಸಿದ್ದೇನೆ. ನಾನು ಪ್ರಧಾನಿಯವರ ಭೇಟಿಗೆ ಕಾಲಾವಕಾಶ ಕೋರಿದ್ದೆ. ಆದರೆ ನನಗೆ ಅದಕ್ಕೆ ಅವಕಾಶ ನೀಡಲಿಲ್ಲ. ಮೈತ್ರಿಯ ಗತಿ ಏನಾಗಿದೆ ಎಂಬುದನ್ನು ನೀವೇ ಕಲ್ಪಿಸಿಕೊಳ್ಳಬಹುದುಎಂದು ಸಾವಂತ್ ಹೇಳಿದರು.

ಸೇನಾ ನಾಯಕ ಉದ್ಧವ್ ಠಾಕ್ರೆ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಮಧ್ಯೆ ಅಧಿಕಾರವನ್ನು ೫೦:೫೦ಸೂತ್ರದ ಅಡಿಯಲ್ಲಿ ಹಂಚಿಕೆ ಮಾಡಿಕೊಳ್ಳುವ ಒಪ್ಪಂದವಾಗಿತ್ತು ಎಂದು ಸಾವಂತ್ ನುಡಿದರು.

ಶಿವಸೇನೆಯು ಬಿಜೆಪಿ ಜೊತೆಗಿನ ಬಾಂಧವ್ಯವನ್ನು ಕಡಿದುಕೊಂಡು, ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಬೇಕೆಂಬ  ಷರತ್ತಿನೊಂದಿಗೆ ಶಿವಸೇನೆಗೆ ಬೆಂಬಲ ನೀಡುವ ಇಂಗಿತವನ್ನು ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷವು (ಎನ್ಸಿಪಿ) ವ್ಯಕ್ತ ಪಡಿಸಿತ್ತು.

ಕಾಂಗ್ರೆಸ್ ನಾಯಕತ್ವವು ಶಿವಸೇನೆಗೆ ಬೆಂಬಲ ನೀಡುವ ವಿಚಾರವನ್ನು ಚರ್ಚಿಸಲು ಬೆಳಗ್ಗೆ ದೆಹಲಿಯಲ್ಲಿ ಸಭೆ ನಡೆಸಿತ್ತು. ಆದರೆ ತೀರ್ಮಾನಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷವು ಸೋಮವಾರ ಮಧ್ಯಾಹ್ನ ಗಂಟೆಗೆ ಹಿರಿಯ ನಾಯಕರ ಎರಡನೇ ಸುತ್ತಿನ ಸಭೆ ನಡೆಸಿತ್ತು.
ಉನ್ನತ ನಾಯಕರ ಸಭೆ ನಡೆಸಿದ ಎನ್ಸಿಪಿ, ಕಾಂಗ್ರೆಸ್ ತನ್ನ ನಿರ್ಧಾರ ಕೈಗೊಂಡ ಬಳಿಕ ಭವಿಷ್ಯಕ ಕ್ರಮವನ್ನು ತಾನು ನಿರ್ಧರಿಸುವುದಾಗಿ ಹೇಳಿತ್ತು.

ಅಕ್ಟೋಬರ್ ೨೪ರಂದು ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬಳಿಕ ಚುನಾವಣಾ ಪೂರ್ವ ಮಿತ್ರ ಪಕ್ಷಗಳಾಗಿದ್ದ ಬಿಜೆಪಿ ಮತ್ತು ಶಿವಸೇನೆ ಮುಖ್ಯಮಂತ್ರಿ ಹುದ್ದೆಯನ್ನು ಸಮಾನವಾಗಿ ಹಂಚಿಕೊಳ್ಳುವ ವಿಷಯದಲ್ಲಿ ಪರಸ್ಪರ ಘರ್ಷಿಸಿದ್ದವು.

ಅಮಿತ್ ಶಾ ಮತ್ತು ಉದ್ಧವ್ ಠಾಕ್ರೆ ಅವರು ಭೇಟಿಯಾಗಿ ನಡೆಸಿದ್ದ ಮಾತುಕತೆಯಲ್ಲಿ ಮುಖ್ಯಮಂತ್ರಿ ಸ್ಥಾನ ಸೇರಿದಂತೆ ಪ್ರತಿಯೊಂದು ಹುದ್ದೆ ವಿಚಾರದಲ್ಲೂ ೫೦:೫೦ ಸೂತ್ರಕ್ಕೆ ಶಿವಸೇನೆ ಮತ್ತು ಬಿಜೆಪಿ ಮೈತ್ರಿಕೂಟ ಒಪ್ಪಿಕೊಂಡಿತ್ತು. ಅವರು ವಿಶ್ವಾಸವನ್ನು ಭಗ್ನಗೊಳಿಸಿದರು. ಇದಕ್ಕಿಂತಲೂ ಶೋಚನೀಯ ವಿಚಾರ ಏನೆಂದರೆ ಅಂತಹ ಒಪ್ಪಂದವೇ ಇರಲಿಲ್ಲ ಎಂಬುದಾಗಿ ಅವರು ಹೇಳಿದ್ದುಎಂದು ಸಾವಂತ್ ನುಡಿದರು.

ಠಾಕ್ರೆ ಕುಟುಂಬದಲ್ಲಿ ವಿಶ್ವಾಸಕ್ಕೆ ಅಪಾರ ಗೌರವ ಇದೆ. ಒಮ್ಮೆ ಮಾತುಕೊಟ್ಟರೆ ಅವರು ಯಾವಾಗಲೂ ಅದನ್ನು ಗೌರವಿಸುತ್ತಾರೆಎಂದೂ ಸಾವಂತ್ ಹೇಳಿದರು.

No comments:

Advertisement