Saturday, May 2, 2020

ಕಾಂಕ್ರೀಟ್ ಮಿಕ್ಸರಿನೊಳಗೆ ಕಾರ್ಮಿಕರ ಪಯಣ!

ಕಾಂಕ್ರೀಟ್ ಮಿಕ್ಸರಿನೊಳಗೆ ಕಾರ್ಮಿಕರ ಪಯಣ!
ನವದೆಹಲಿ: ದಿಗ್ಬಂಧನದಿಂದಾಗಿ (ಲಾಕ್ ಡೌನ್) ದೇಶದ ಹಲವು ಭಾಗಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರು ತಮ್ಮ ಮನೆಗಳಿಗೆ ಹಿಂದಿರುಗಲು ಕೇಂದ್ರ ಹಾಗೂ ರಾಜ್ಯ ಸರ್ಕಾರವು ಅವಕಾಶ ಕಲ್ಪಿಸಿದ್ದರೂ, ಅದಕ್ಕೂ ಮುನ್ನ ಕೆಲವರು ಕಾಂಕ್ರೀಟ್ ಮಿಕ್ಸರಿನೊಳಗೆ ಕುಳಿತು ಪಯಣಿಸುವ ಮಾರ್ಗ ಕಂಡು ಕೊಂಡಿದ್ದುದು ಬೆಳಕಿಗೆ 2020 ಮೇ 02ರ ಶನಿವಾರ ಬಂದಿತು.

ಮಧ್ಯಪ್ರದೇಶದ
ಇಂದೋರ್ ನಗರದಲ್ಲಿ ಕಾಂಕ್ರೀಟ್ ಮಿಕ್ಸರ್ ವಾಹನದೊಳಗೆ ಕುಳಿತು ೧೮ ಕಾರ್ಮಿಕರು ಪ್ರಯಾಣಿಸುತ್ತಿದ್ದ ವಿಚಾರ ಇದೀಗ ಬಹಿರಂಗಗೊಂಡಿದೆ ಎಂದು ಸ್ಥಳೀಯ ಅಧಿಕಾರಿಗಳನ್ನು ಉಲ್ಲೇಖಿಸಿದ ವರದಿಯೊಂದು ತಿಳಿಸಿತು.
ಪೊಲೀಸರು ವಾಹನವನ್ನು ತಡೆದ ಬಳಿಕ ಕಾಂಕ್ರೀಟ್ ಮಿಕ್ಸರ್ ಟ್ಯಾಂಕರಿನಿಂದ ಕಾರ್ಮಿಕರು ಒಬ್ಬೊಬ್ಬರೇ ಹೊರ ಬರುತ್ತಿರುವ ದೃಶ್ಯ ಸುಮಾರು ೪೧ ಸೆಕೆಂಡ್ಗಳ ವಿಡಿಯೋದಲ್ಲಿ ಸೆರೆಯಾಗಿದೆ.

ಕಾರ್ಮಿಕರು ಮಹಾರಾಷ್ಟ್ರದಿಂದ ಲಖನೌಗೆ ಪ್ರಯಾಣ ಹೊರಟಿದ್ದರು. ಟ್ರಕ್ಕನ್ನು ಪೊಲೀಸ್ ಠಾಣೆಗೆ ಕಳುಹಿಸಲಾಗಿದ್ದು, ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಉಮಾಕಾಂತ್ ಚೌಧರಿ ಹೇಳಿದರು.

ದಿಗ್ಬಂಧನದಿಂದಾಗಿ ತಾವಿದ್ದ ಸ್ಥಳಗಳಲ್ಲಿಯೇ ಸಿಕ್ಕಿಹಾಕಿಕೊಂಡಿರುವ ಕಾರ್ಮಿಕರು, ಪ್ರವಾಸಿಗರು ಮತ್ತು ವಿದ್ಯಾರ್ಥಿಗಳಿಗೆ ತಮ್ಮ ಮನೆಗಳಿಗೆ ಮರಳಲು ಅನುಮತಿ ನೀಡಿದ್ದ ಕೇಂದ್ರ ಗೃಹ ಸಚಿವಾಲಯವು ನಿಟ್ಟಿನಲ್ಲಿ ಏಪ್ರಿಲ್ ೨೯ರಂದು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿತ್ತು.

ಏನಿದ್ದರೂ, ವಲಸಿಗರು, ಪ್ರವಾಸಿಗರು ಮತ್ತು ವಿದ್ಯಾರ್ಥಿಗಳ ಸಂಚಾರವನ್ನು ಕಂಟೈನ್ಮೆಂಟ್ ಅಲ್ಲದ ವಲಯಗಳಿಗೆ ಸೀಮಿತಗೊಳಿಸಲಾಗಿದೆ.

ಹೊಸ ಮಾರ್ಗಸೂಚಿಗಳು ಮೇ ರಿಂದ ಜಾರಿಗೆ ಬರಲಿವೆ. ಇದರಿಂದ ಅನೇಕ ಜಿಲ್ಲೆಗಳಿಗೆ ದಿಗ್ಬಂಧನದಿಂದ ಸಡಿಲಿಕೆ ಸಿಗುತ್ತಿದೆ. ಸಿಕ್ಕಿಹಾಕಿಕೊಂಡಿದ್ದ ಎಲ್ಲ ಜನರು ನಗರಗಳಲ್ಲಿ ಕಠಿಣ ವೈದ್ಯಕೀಯ ತಪಾಸಣೆಗೆ ಒಳಪಟ್ಟ ನಂತರವೇ ಮನೆಗೆ ಹಿಂತಿರುಗಬಹುದು ಎಂದು ಮಾರ್ಗಸೂಚಿ ತಿಳಿಸಿದೆ.

ಮನೆಗೆ ವಾಪಸ್ ಕಳುಹಿಸುವ ಮೊದಲು, ಇತರೆಡೆಯಿಂದ ಬಂದ ಎಲ್ಲರಿಗೂ ಕಡ್ಡಾಯವಾಗಿ ಥರ್ಮಲ್ ಟೆಸ್ಟಿಂಗ್ ಕೇಂದ್ರಗಳು ಮತ್ತು ಕ್ವಾರಂಟೈನ್ ಸೌಲಭ್ಯಗಳನ್ನು ಎಲ್ಲ ರಾಜ್ಯ ಸರ್ಕಾರಗಳು ಒದಗಿಸಬೇಕು. ಸಾರಿಗೆಗಾಗಿ ಸ್ವಚ್ಛಗೊಳಿಸಿದ ಬಸ್ಸುಗಳ ವ್ಯವಸ್ಥೆಯನ್ನು ಕೂಡ ಮಾಡಬೇಕು ಎಂದು ಮಾರ್ಗಸೂಚಿ ಹೇಳಿದೆ.

No comments:

Advertisement